ಶನಿವಾರ, ನವೆಂಬರ್ 9, 2019




ಪಂಪಭಾರತ ಆಶ್ವಾಸ ೩ ಪದ್ಯಗಳು ೧೨-೨೦

ಎಂದು ನುಡಿಯುತ್ತಿದ್ದಂತೆ ತಾವರೆಯ ಬಂಧುವು ಉದಯಾಚಲ ಪರ್ವತದ ನೆತ್ತಿಯಲ್ಲಿ ಕಾಣಿಸಿಕೊಂಡನು. ಆಗ, ಆ ಕಾಡನ್ನು ಆಳುವ ಹಿಡಿಂಬನೆಂಬುವನು, ಪಾಂಡವರು ಬಂದಿರುವುದನ್ನು ತಿಳಿದು, ತನ್ನ ತಂಗಿ ಹಿಡಿಂಬೆಯನ್ನು ಕರೆದು-
ಕಂ|| ನಿಡಿಯರ್ ಬಲ್ಲಾಯದ ಬ
     ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|
     ತೊಡರ್ದರ್ ನಮ್ಮಯ ಭಕ್ಷದೊ
     ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨||
(ನಿಡಿಯರ್, ಬಲ್ಲಾಯದ ಬಲ್ಡಡಿಗರ್, ವಂದಿರ್ದರ್ ಅಯ್ವರ್ ಆಲದ ಕೆೞಗೆ, ಇಂ ತೊಡರ್ದರ್, ನಮ್ಮಯ ಭಕ್ಷದೊಳ್ ಅಡು, ಪಣ್ಣಿಡು, ಪೋಗು, ನೀನುಂ ಆನುಂ ತಿಂಬಂ)
ಆಲದ ಮರದ ಕೆಳಗೆ ಐದು ಜನ ಉದ್ದುದ್ದದ ಆಳುಗಳು, ಭಾರೀ ಧಾಂಡಿಗರು ಬಂದಿದ್ದಾರೆ. ಅವರಿನ್ನು (ನಮ್ಮ ಕೈಗೆ) ಸಿಕ್ಕಿಬಿದ್ದ ಹಾಗೆಯೇ. ಹೋಗು. ನಮ್ಮ ಇವತ್ತಿನ ಊಟಕ್ಕೆ ಅವರನ್ನು ಬೇಯಿಸಿ ಅಣಿ ಮಾಡು. ನೀನೂ ನಾನೂ ಸೇರಿ ತಿನ್ನೋಣ.
ವ|| ಎಂಬುದುಮಂತೆಗೆಯ್ವೆನೆಂದು-
(ಎಂಬುದುಂ ‘ಅಂತೆ ಗೆಯ್ವೆನ್’ ಎಂದು)
ಎಂದಾಗ ‘ಹಾಗೆಯೇ ಮಾಡುತ್ತೇನೆ’ ಎಂದು,
ಕಂ|| ಆಗಸದೊಳಗೊಂದು ಮಹೀ
     ಭಾಗದೊಳಿನ್ನೊಂದು ದಾಡೆಯಾಗಿರೆ ಮನದಿಂ|
     ಬೇಗಂ ಬರ್ಪಳ ದಿಟ್ಟಿಗ
     ಳಾಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ|| ೧೩ ||
.(ಆಗಸದೊಳಗೆ ಒಂದು, ಮಹೀಭಾಗದೊಳ್ ಇನ್ನೊಂದು ದಾಡೆಯಾಗಿರೆ, ಮನದಿಂ ಬೇಗಂ ಬರ್ಪಳ ದಿಟ್ಟಿಗಳ್ ಆಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ)
ಆಗಸದಲ್ಲಿ ಒಂದು ದವಡೆ, ನೆಲದಲ್ಲೊಂದು ದವಡೆ ಎಂಬಷ್ಟು ಅಗಲವಾಗಿ ಬಾಯಿ ತೆರೆದುಕೊಂಡು, ಮನೋವೇಗದಲ್ಲಿ ಬರುತ್ತಿದ್ದ ಅವಳ ಕಣ್ಣುಗಳು ದೂರದಿಂದಲೇ ಭೀಮನಿಗೆ ಅಂಟಿಕೊಂಡವು!
ವ|| ಅಂತೊಂದಂಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪೆಯಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು ತನ್ನತ್ತ ಮೊಗದೆ ಬರ್ಪಳಂ  ಕಂಡು-
 (ಅಂತು ಒಂದು ಅಂಬುವೀಡಿನ ಎಡೆಯೊಳ್ ಕಾಮನ ಅಂಬುವೀಡಿಂಗೆ ಒಳಗಾಗಿ, ತಾಂ ಕಾಮರೂಪೆ ಅಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು, ತನ್ನತ್ತ ಮೊಗದೆ ಬರ್ಪಳಂ  ಕಂಡು)
ಹಾಗೆ, ಒಂದು ಬಾಣವು ಕ್ರಮಿಸುವ ದೂರದಲ್ಲಿ ಕಾಮಬಾಣದ ಪೆಟ್ಟಿಗೆ ಸಿಕ್ಕಿಬಿದ್ದು, ತಾನು ಬಯಸಿದ ರೂಪವನ್ನು ತಳೆಯುವ ಶಕ್ತಿ ಇದ್ದವಳಾದ್ದರಿಂದ, ದೇವಕನ್ಯೆಯ ರೂಪು ತಳೆದು ತನ್ನತ್ತಲೇ ಬರುತ್ತಿರುವ ಅವಳನ್ನು ಕಂಡು-
ಕಂ|| ಖೇಚರಿಯೋ ಭೂಚರಿಯೊ ನಿ
     ಶಾಚರಿಯೋ ರೂಪು ಬಣ್ಣಿಸಲ್ಕಾರ್ಗಮವಾ|
     ಗ್ಗೋಚರಮೀ ಕಾನನಮುಮ
     ಗೋಚರಮಿವಳಿಲ್ಲಿಗೇಕೆ ಬಂದಳೊ ಪೇೞಿಂ||೧೪||
(ಖೇಚರಿಯೋ? ಭೂಚರಿಯೊ? ನಿಶಾಚರಿಯೋ? ರೂಪು ಬಣ್ಣಿಸಲ್ಕೆ ಆರ್ಗಂ ಅವಾಕ್ ಗೋಚರಂ, ಈ  ಕಾನನಮುಂ ಅಗೋಚರಂ, ಇವಳ್ ಇಲ್ಲಿಗೇಕೆ ಬಂದಳೊ ಪೇೞಿಂ!)
ಆಕಾಶದಲ್ಲಿ ಚಲಿಸುವವಳೋ? ನೆಲದ ಮೇಲೆ ತಿರುಗುವವಳೋ? ಕತ್ತಲಲ್ಲಿ ಓಡಾಡುವವಳೋ? (ಯಾರಾದರೇನಂತೆ?) ಇವಳ ರೂಪವನ್ನು ವರ್ಣಿಸುವುದು ಮಾತ್ರ ಯಾರ ನಾಲಗೆಗೂ ಸಾಧ್ಯವಲ್ಲ! ಈ ಕಾಡೋ? ಇದು ಯಾರಿಗೂ ಕಾಣದ ಸ್ಥಳ! ಹಾಗಿರುವಾಗ ಇವಳು ಇಲ್ಲಿಗೇಕೆ ಬಂದಳೋ? ಹೇಳಿರಿ!
ವ|| ಎಂಬನ್ನೆಗಮಾಕೆ ಮದನನ ಕೆಯ್ಯಿಂ ಬರ್ದುಂಕಿದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗೇನೆಂಬೆಯೇಕೆ ಬಂದೆಯೆಂದೊಡಾಕೆಯೆಂದಳೆರಡಱಿಯದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ ಯೀ ಬನಂ ಹಿಡಿಂಬವನಮೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯೆನೆಂಬೆನಾತನ ಬೆಸದಿಂ ನಿಮ್ಮಿನಿಬರುಮಂ-
(ಎಂಬನ್ನೆಗಂ ಆಕೆ ಮದನನ ಕೆಯ್ಯಿಂ ಬರ್ದುಂಕಿದ ಅರಲಂಬು ಬರ್ಪಂತೆ ಬಂದು, ಭೀಮಸೇನನ ಕೆಲದೊಳ್ ಕುಳ್ಳಿರೆ, ‘ನೀನಾರ್ಗೆ? ಏನೆಂಬೆ? ಏಕೆ ಬಂದೆ?’ ಎಂದೊಡೆ ಆಕೆಯೆಂದಳ್ ‘ಎರಡಱಿಯದೆ ಒಲ್ದು ನಿನ್ನೊಳ್ ಎರಡಂ ನುಡಿಯಲಾಗದು ಎನಗೆ, ಯೀ ಬನಂ ಹಿಡಿಂಬವನಂ ಎಂಬುದು, ಇದನ್ ಆಳ್ವಂ ಹಿಡಿಂಬನೆಂಬ ಅಸುರನ್ ಎಮ್ಮಣ್ಣನ್, ಆನುಂ ಹಿಡಿಂಬೆಯೆನ್ ಎಂಬೆನ್. ಆತನ ಬೆಸದಿಂ ನಿಮ್ಮಿನಿಬರುಮಂ-)
ಎಂದುಕೊಳ್ಳುತ್ತಿರುವಂತೆಯೇ, ಅವಳು ಮನ್ಮಥನ ಕೈಯಿಂದ ತಪ್ಪಿಸಿಕೊಂಡ ಹೂ ಬಾಣದಂತೆ ಬಂದು ಭೀಮನ ಪಕ್ಕದಲ್ಲಿಯೇ ಕೂತುಕೊಂಡಳು! ಭೀಮನು ‘ನೀನು ಯಾರು? ನಿನ್ನ ಹೆಸರೇನು? ಏಕೆ ಬಂದೆ?’ ಎಂದು ಅವಳನ್ನು ಕೇಳಿದಾಗ ಅವಳು ‘ಕಪಟವಿಲ್ಲದೆ ನಿನ್ನನ್ನು ಒಲಿದಿದ್ದೇನೆ. ನಿನ್ನಲ್ಲಿ ಸುಳ್ಳು ಹೇಳಲಾರೆ! ಇದು ಹಿಡಿಂಬವನ. ಇದರ ಒಡೆಯ ಹಿಡಿಂಬನೆಂಬ ರಕ್ಕಸ, ನಮ್ಮಣ್ಣ. ನಾನು ಹಿಡಿಂಬೆ. ಅವನ ಅಪ್ಪಣೆಯಂತೆ ನಿಮ್ಮೆಲ್ಲರನ್ನೂ-
ಕಂ|| ಪಿಡಿದಡಸಿ ತಿನಲ್ ಬಂದಿ
     ರ್ದೆಡೆಯೊಳ್ ನಿನಗಾಗಿ ಮದನನೆನ್ನನೆ ತಿನೆ ಕೇಳ್|
     ಪಡೆ ನೋಡಲ್ ಬಂದವರಂ
     ಗುಡಿವೊಱೆಸಿದರೆಂಬುದಾಯ್ತು ನಿನ್ನೆನ್ನೆಡೆಯೊಳ್|| ೧೫||
(ಪಿಡಿದು ಅಡಸಿ ತಿನಲ್ ಬಂದಿರ್ದ ಎಡೆಯೊಳ್, ನಿನಗಾಗಿ ಮದನನ್ ಎನ್ನನೆ ತಿನೆ, ಕೇಳ್ ಪಡೆ ನೋಡಲ್ ಬಂದವರಂ ಗುಡಿವೊಱೆಸಿದರ್ ಎಂಬುದಾಯ್ತು ನಿನ್ನ ಎನ್ನ ಎಡೆಯೊಳ್’)
ಹಿಡಿದು ಬಾಯೊಳಗೆ ತುರುಕಿಕೊಂಡು ತಿಂದು ಮುಗಿಸಲೆಂದು ನಾನು ಇಲ್ಲಿಗೆ ಬಂದವಳು. ಆದರೆ ಈಗ ನಿನ್ನನ್ನು ಕಂಡಮೇಲೆ, ಮನ್ಮಥನು ನನ್ನನ್ನೇ ತಿಂದಂತಾಗಿದೆ! ‘ದಂಡು ನೋಡಲು ಹೋದವನ ಕೈಯಲ್ಲಿ ಬಾವುಟ ಹೊರಿಸಿದರು’ ಎಂದಂತಾಯಿತು ನೋಡು ನಿನ್ನನ್ನು ಕಂಡ ನನ್ನ  ಕಥೆ!
(ಪಡೆ ನೋಡಲ್ ಬಂದವರಂ ಗುಡಿವೊಱೆಸಿದರ್: ‘ಯುದ್ಧ ನಡೆಯುತ್ತದಂತೆ, ಹೇಗಿದೆಯೋ ನೋಡಿ ಬರೋಣ’ ಎಂದು, ಚೆಂದ ನೋಡಲು ಅಲ್ಲಿಗೆ ಹೋದವನನ್ನು ಅಲ್ಲಿದ್ದವರು ಹಿಡಿದುಕೊಂಡರು! ಅಷ್ಟೇ ಅಲ್ಲ ಅವನ ಕೈಯಲ್ಲೇ ಧ್ವಜವನ್ನು ಕೊಟ್ಟು ಸೈನ್ಯದ ಮುಂಭಾಗದಲ್ಲಿ ನಿಲ್ಲಿಸಿ, ಸೈನ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನೇ ಹೊರಿಸಿದರು. ತನ್ನ ಕಥೆಯೂ ಹೀಗೇ ಆಯಿತಲ್ಲ ಎಂದು ಹಿಡಿಂಬೆಯ ಅಂಬೋಣ.)
ವ|| ಎಂದೀ ಮಱಲುಂದಿದರಾರ್ಗೆಂದೊಡೆನ್ನ ತಾಯ್ವಿರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ಗೆ ನೀನೆನ್ನ ಪೆಗಲನೇಱು ಗಗನತಳಕ್ಕುಯ್ವೆನೆನೆ ಭೀಮಸೇನನಾ ಮಾತಿಂಗೆ ಮುಗುಳ್ನಗೆ ನಕ್ಕು-
(ಎಂದು ‘ಈ ಮಱಲುಂದಿದರ್ ಆರ್ಗೆ? ಎಂದೊಡೆ ‘ಎನ್ನ ತಾಯ್ವಿರುಂ ಒಡವುಟ್ಟಿದರ್’ ಎಂದೊಡೆ ‘ಹಿಡಿಂಬಂ ಬಂದು ಅವರಂ ತಿಂದೊಡಂ ತಿನ್ಗೆ, ನೀನೆನ್ನ ಪೆಗಲನ್ ಏಱು, ಗಗನತಳಕ್ಕೆ ಉಯ್ವೆನ್’ ಎನೆ, ಭೀಮಸೇನನ್ ಆ ಮಾತಿಂಗೆ ಮುಗುಳ್ನಗೆ ನಕ್ಕು)
ಎಂದು ‘ಇದು ಯಾರು? ಇಲ್ಲಿ ಮಲಗಿದವರು?’ ಎಂದು ಕೇಳಿದಳು. ಭೀಮನು ‘ನನ್ನ ತಾಯಿ ಮತ್ತು ಒಡಹುಟ್ಟುಗಳು’ ಎಂದನು. ಹಿಡಿಂಬೆಯು ‘ಹಿಡಿಂಬನು ಬಂದು ಬೇಕಾದರೆ ಅವರನ್ನೆಲ್ಲ ತಿಂದು ಹಾಕಲಿ! ನೀನು ನನ್ನ ಹೆಗಲ ಮೇಲೆ ಕೂತುಕೋ. ಆಕಾಶಕ್ಕೆ ಒಯ್ಯುತ್ತೇನೆ’ ಎಂದಳು. ಭೀಮಸೇನನು ಆ ಮಾತಿಗೆ ಮುಗುಳ್ನಗೆ ನಕ್ಕು
ಚಂ|| ಅೞಿಪಿದೆಯಂತುಮಲ್ಲದೆ ನಿಶಾಚರಿಯೈ ನಿನಗಪ್ಪುದಪ್ಪುದೀ
     ಯೞಿನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಮಾತನೊ |
     ಡ್ಡೞಿಯದ ಗಂಡವಾತನೆನುತಂತಿರೆ ತಂಗೆಯ ಮಾಣ್ದುದರ್ಕವಂ
     ಮೊೞಗಿ ಸಿಡಿಲ್ದದೊಂದು ಸಿಡಿಲೇೞ್ಗೆಯಿನೆಯ್ತರೆ ವಂದು ಭೀಮನಂ|| ೧೬||
(ಅೞಿಪಿದೆ, ಅಂತುಂ ಅಲ್ಲದೆ ನಿಶಾಚರಿಯೈ, ನಿನಗೆ ಅಪ್ಪುದಪ್ಪುದು ಈ ಅೞಿನುಡಿ, ಬರ್ಕೆ, ನಿನ್ನ ಪಿರಿಯಣ್ಣನೆ? ಪಣ್ಣನೆ ನೋೞ್ಪಂ ಆತನ ಒಡ್ಡೞಿಯದ ಗಂಡವಾತನ್ ಎನುತೆ ಅಂತೆ ಇರೆ, ತಂಗೆಯ ಮಾಣ್ದುದರ್ಕೆ ಅವಂ  ಮೊೞಗಿ ಸಿಡಿಲ್ದು ಅದೊಂದು ಸಿಡಿಲೇೞ್ಗೆಯಿನ್ ಎಯ್ತರೆ ವಂದು, ಭೀಮನಂ)
‘ನಿನಗೆ ನನ್ನ ಮೇಲೆ ಕಣ್ಣು ಬಿದ್ದಿದೆ! ಅದೂ ಅಲ್ಲದೆ ನೀನು ಕತ್ತಲನಡೆ. ಇಂಥ ಕೆಟ್ಟಮಾತು ನಿನಗೆ ಒಪ್ಪುವಂಥಾದ್ದೇ! ಬರಲಿ! ಯಾರೆಂದಿ? ನಿನ್ನ ಹಿರಿಯಣ್ಣನೆ? ಅವನ ಮುಗಿಯದ ಬಡಾಯಿಯನ್ನೂ ಕೊಂಚ ಕೇಳೋಣ!’ ಎನ್ನುತ್ತಿರುವಂತೆಯೇ ತಂಗಿಯು ತಡಮಾಡಿದಳೆಂಬ ಸಿಟ್ಟಿನಿಂದ ಹಿಡಿಂಬನು ಗರ್ಜಿಸುತ್ತಾ ಸಿಡಿಲಿನಂತೆ ಭೀಮನ ಸಮೀಪಕ್ಕೆ  ಸಿಡಿದು ಬಂದು-
ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವದೊಳಿಂತೆಂದಂ-
(ಕಂಡು ಕಣ್ಗಳಿಂ ಕೆಂಡದ ತಂಡಂಗಳುಂ ಉರಿಯ ತಂಡಂಗಳುಂ ಸೂಸೆ, ‘ನೀನೊರ್ವ ಎನ್ನೊಳಗೆ ಏಂ ಕಾದುವೆ? ಈ ಮಱಲುಂದಿದರನ್ ಎತ್ತು! ಇನಿಬರುಮನ್ ಒರ್ಮೆಯೆ ಪೊಸೆದು ಮುಕ್ಕುವೆನ್’ ಎನೆ ಸಾಹಸಭೀಮಂ ಮಲ್ಲಂತಿಗೆಯನ್ ಅಪ್ಪೊಡಂ ಸಡಲಿಸದೆ ಅವನನ್ ಅವಯವದೊಳ್ ಇಂತೆಂದಂ)
ಕಂಡು, ಕಣ್ಣುಗಳಿಂದ ಕೆಂಡದ ಉಂಡೆಗಳನ್ನೂ, ಬೆಂಕಿಯ ಜ್ವಾಲೆಗಳನ್ನೂ ಸುರಿಸುತ್ತಾ ‘ನೀನೊಬ್ಬನೇ ನನ್ನ ಜೊತೆ ಏನು ಯುದ್ಧ ಮಾಡೀಯೆ? ಮಲಗಿಕೊಂಡ ಇವರನ್ನೂ ಎಬ್ಬಿಸು! ಎಲ್ಲರನ್ನೂ ಒಟ್ಟಿಗೆ ಮುದ್ದೆ ಮಾಡಿ ಮುಕ್ಕಿಬಿಡುತ್ತೇನೆ’ ಎಂದನು. ಅದನ್ನು ಕೇಳಿದ ಭೀಮನು, ತನ್ನ ಕಾಚವನ್ನು ಸಹ ಬಿಗಿ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಅವನನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಹೀಗೆಂದನು:
ಕಂ|| ಏಂ ಗಾವಿಲನಯೊ ನಿನ್ನಂ
ನುಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕುಮೆ ಮಾ
ತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್|| ೧೭||
(ಏಂ ಗಾವಿಲನಯೊ! ನಿನ್ನಂ ನುಂಗುವುದರ್ಕೆ ಇವರನ್ ಎತ್ತವೇೞ್ಕುಮೆ? ನೆರಮಂ ಸಂಗಳಿಸಲ್ ವೇೞ್ಕುಮೆ? ಮಾತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್?)
‘ಎಂಥ ಗಮಾರನೋ ನೀನು! ನಿನ್ನನ್ನು ನುಂಗಲು ಇವರನ್ನೆಲ್ಲ ಎಬ್ಬಿಸಬೇಕೆ? ಜನ ಸೇರಿಸಬೇಕೆ?  ಸಿಂಹಕ್ಕೆ ಎಂದಾದರೂ ಜಿಂಕೆಯೊಂದಿಗೆ ಯುದ್ಧವೆ?’
ವ|| ಎಂಬುದುಂ ಹಿಡಿಂಬನಾಡಂಬರಂಗೆಯ್ದು ತುಂಬುರುಕೊಳ್ಳಿಯಂತಂಬರಂಬರಂ ಸಿಡಿಲ್ದು-
(ಎಂಬುದುಂ ಹಿಡಿಂಬನ್ ಆಡಂಬರಂಗೆಯ್ದು ತುಂಬುರುಕೊಳ್ಳಿಯಂತೆ ಅಂಬರಂಬರಂ ಸಿಡಿಲ್ದು)
ಎನ್ನಲು ಹಿಡಿಂಬನು ಆಡಂಬರದಿಂದ ತೂಬರೆ ಮರದ ಕೊಳ್ಳಿಯಂತೆ ಆಕಾಶದವರೆಗೂ ಹಾರಾಡುತ್ತಾ-
ಚಂ|| ಕಡುಪಿನೆ ಪೊತ್ತು ಪಾಸರೆಯನೆಯ್ತರೆ ಭೀಮನುಮೊತ್ತಿ ಕಿಱ್ತು ಬೇ
     ರೊಡನೆ ಮಹೀಜಮೊಂದನಿಡೆಯುಂ ಬಿಡೆ ಪೊಯ್ಯೆಯುಮಾ ಬನಂ ಪಡ|
     ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನೆ ಜೋಲ್ದ ದೈತ್ಯನಂ
     ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮೆಯೆ ಸೀಳ್ದು ಬೀಸಿದಂ|| ೧೮||
(ಕಡುಪಿನೆ ಪೊತ್ತು ಪಾಸರೆಯನ್ ಎಯ್ತರೆ, ಭೀಮನುಂ ಒತ್ತಿ ಕಿಱ್ತು ಬೇರೊಡನೆ ಮಹೀಜಂ ಒಂದನ್ ಇಡೆಯುಂ ಬಿಡೆ ಪೊಯ್ಯೆಯುಂ, ಆ ಬನಂ ಪಡಲ್ವಡುತಿರೆ ಕಲ್ಲೊಳಂ ಮರದೊಳಂ, ಬಡಿದು, ಒಯ್ಯನೆ ಜೋಲ್ದ ದೈತ್ಯನಂ ಪಿಡಿದು, ಮೃಣಾಳನಾಳಮನೆ ಸೀಳ್ವವೊಲ್ ಒರ್ಮೆಯೆ ಸೀಳ್ದು ಬೀಸಿದಂ)
ಒಂದು ಹಾಸುಬಂಡೆಯನ್ನು ಎತ್ತಿಕೊಂಡು ರಭಸದಿಂದ ಹತ್ತಿರಕ್ಕೆ ನುಗ್ಗಿ ಬಂದನು. ಭೀಮನೂ ಸಹ ಒಂದು ಮರವನ್ನು ಬೇರು ಸಮೇತ ಕಿತ್ತುಕೊಂಡು ಬೀಸಲು, ಕಲ್ಲು, ಮರಗಳ ಹೊಡೆತದಿಂದ ಆ ಕಾಡು ಚೆಲ್ಲಾಪಿಲ್ಲಿಯಾಯಿತು. ಭೀಮನು ಎಡೆಬಿಡದೆ ಹೊಡೆಯುತ್ತಿದ್ದಂತೆ, ಪೆಟ್ಟು ತಿಂದ ಹಿಡಿಂಬನು ಮೆಲ್ಲನೆ ನೆಲಕ್ಕೆ ಉರುಳಿದನು. ಭೀಮನು ಅವನನ್ನು ಹಿಡಿದು ಕಮಲದ ದಂಟನ್ನು ಸೀಳುವಂತೆ ಸೀಳಿ ಬಿಸಾಡಿದನು.
ವ|| ಆಗಳಾ ಕಳಕಳಕ್ಕೆ ಮಱಲುಂದಿದಯ್ವರುಮೆೞ್ಚತ್ತಿದೇನೆಂದು ಬೆಸಗೊಳೆ ತದ್ವೃತ್ತಾಂತ ಮೆಲ್ಲಮನಱಿಪಿ ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪೊಡಂಬಡಂ ನುಡಿಯೆ ಕೊಂತಿಯುಂ ಧರ್ಮಪುತ್ರನುಮೀಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ಬೇಡೀಕೆಯಂ ಕೆಯ್ಕೊಳ್ವುದೆ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಱಂಗಿ ಕೞ್ತಲಿಸಿದ ಮರದುಱುಗಲ ನಡುವೆ ಸುಧಾ ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಪ್ಟೊಡದು ಹಿಡಿಂಬಪುರಮೆಂಬುದೆಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿಟ್ಟೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊೞಲಂ ಪುಗಿಸಿ ತನ್ನ ಸಂಪತ್ತುಮಂ ಶ್ರೀಯುಮಂ ಮೆರೆದು ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಮೆಲ್ಲಮಂ ಕಳೆದು ಭೀಮಸೇನನುಂ ತಾನುಂ-
(ಆಗಳ್ ಆ ಕಳಕಳಕ್ಕೆ ಮಱಲುಂದಿದ ಅಯ್ವರುಂ ಎೞ್ಚತ್ತು ‘ಇದೇನು?’ ಎಂದು ಬೆಸಗೊಳೆ, ತದ್ವೃತ್ತಾಂತಂ ಎಲ್ಲಮನ್ ಅಱಿಪಿ, ಹಿಡಿಂಬೆ, ಡಂಬಮಿಲ್ಲದೆ ಭೀಮಸೇನನೊಳ್ ಅಪ್ಪ ಒಡಂಬಡಂ ನುಡಿಯೆ, ಕೊಂತಿಯುಂ ಧರ್ಮಪುತ್ರನುಂ, ‘ಈಕೆ ಸಾಮಾನ್ಯವನಿತೆಯಲ್ಲ, ಇವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ ಬೇಡ, ಈಕೆಯಂ ಕೆಯ್ಕೊಳ್ವುದೆ ಕಜ್ಜಂ’ ಎಂದು, ಆಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ, ಹಿಡಿಂಬೆ, ‘ನೀಂ ಇಲ್ಲಿ ಇರಲ್ ವೇಡ, ಪರ್ವತದ ಮೇಲೆ, ಕಱಂಗಿ ಕೞ್ತಲಿಸಿದ ಮರದುಱುಗಲ ನಡುವೆ, ಸುಧಾ ಧವಳಿತ ಉತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಿ ಅಪ್ಟೊಡೆ, ಅದು ಹಿಡಿಂಬಪುರಂ ಎಂಬುದು, ಎಮ್ಮ ಪುರಂ ಮಲ್ಲಿಗೆ ಪೋಪಂ ಬನ್ನಿಂ’ ಎಂದು ಮುಂದಿಟ್ಟು ಒಡಗೊಂಡು ಪೋಗಿ, ಮಹಾವಿಭೂತಿಯಿಂ ಪೊೞಲಂ ಪುಗಿಸಿ, ತನ್ನ ಸಂಪತ್ತುಮಂ ಶ್ರೀಯುಮಂ ಮೆರೆದು, ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಂ ಎಲ್ಲಮಂ ಕಳೆದು, ಭೀಮಸೇನನುಂ ತಾನುಂ-)
ಆಗ ಆ ಗಲಾಟೆಗೆ ಮಲಗಿದ್ದ ಐವರೂ ಎಚ್ಚೆತ್ತು ‘ಇದೇನು?’ ಎಂದು ವಿಚಾರಿಸಿದರು! ಹಿಡಿಂಬೆಯು ನಡೆದ ವೃತ್ತಾಂತವೆಲ್ಲವನ್ನೂ ತಿಳಿಸಿ, ತನಗೆ ಭೀಮನ ಮೇಲುಂಟಾದ ಪ್ರೀತಿಯನ್ನು ನಯವಾಗಿ ಹೇಳಿಕೊಂಡಳು. ಆಗ ಕುಂತಿಯೂ, ಧರ್ಮಪುತ್ರನೂ ‘ಈಕೆ ಸಾಮಾನ್ಯ ಹೆಣ್ಣಲ್ಲ; ಇವಳನ್ನು ರಾಕ್ಷಸ ಸ್ತ್ರೀ ಎಂದು ಭಾವಿಸಬೇಡ. ಇವಳನ್ನು ಸ್ವೀಕರಿಸುವುದೇ ಯೋಗ್ಯವಾದ ಕಾರ್ಯ’ ಎಂದು ಭೀಮನನ್ನು ಒಪ್ಪಿಸಿ, ಹಿಡಿಂಬೆಗೂ ಭೀಮನಿಗೂ ಗಾಂಧರ್ವವಿವಾಹವನ್ನು ಮಾಡಿದರು. ನಂತರ ಹಿಡಿಂಬೆಯು ಅವರೆಲ್ಲರನ್ನೂ ಕುರಿತು ‘ನೀವು ಇಲ್ಲಿರುವುದು ಬೇಡ! ಅದೋ ಅಲ್ಲಿ ಬೆಟ್ಟದ ಮೇಲೆ, ದಟ್ಟವಾಗಿ ಕಪ್ಪಾಗಿ ಬೆಳೆದಿರುವ ಕಾಡಿನ ನಡುವೆ, ಸುಣ್ಣದಿಂದ ಬೆಳ್ಳಗೆ ಹೊಳೆಯುವ
ಭವನಗಳು ಕಾಣುತ್ತಿವೆ! ಅದು ಹಿಡಿಂಬಪುರ! ನಮ್ಮೂರು! ಬನ್ನಿ, ನಾವೆಲ್ಲ ಅಲ್ಲಿಗೆ ಹೋಗೋಣ!’ ಎಂದು ಅವರೆಲ್ಲರನ್ನೂ ಮುಂದಿಟ್ಟುಕೊಂಡು ಕರೆದುಕೊಂಡು ಹೋಗಿ ವೈಭವದಿಂದ ತನ್ನ ಊರನ್ನು ಹೊಗಿಸಿದಳು; ಅಲ್ಲಿ ತನ್ನ ಸಂಪತ್ತು, ಶ್ರೀಮಂತಿಕೆಗಳನ್ನು ಅವರಿಗೆ ಪ್ರದರ್ಶಿಸಿ ಸ್ನಾನ, ಊಟ, ಎಲೆಯಡಿಕೆ, ಸುಗಂಧಗಳಿಂದ ಅವರ ದಾರಿಯ ಆಯಾಸವನ್ನು ಕಳೆದಳು.
ಕಂ|| ಎಲ್ಲಿ ಕೊಳನೆಲ್ಲಿ ತಣ್ಬುೞಿ
     ಲೆಲ್ಲಿ ಲತಾಭವನಮೆಲ್ಲಿ ಧಾರಾಗೃಹಮಂ||
     ತಲ್ಲಿಯೆ ತೊಡರ್ದದಲ್ಲಿಯೆ ನಿಂ
     ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್|| ೧೯||
(ಎಲ್ಲಿ ಕೊಳನ್, ಎಲ್ಲಿ ತಣ್ಬುೞಿಲ್, ಎಲ್ಲಿ ಲತಾಭವನಂ, ಎಲ್ಲಿ ಧಾರಾಗೃಹಂ, ಅಂತು ಅಲ್ಲಿಯೆ ತೊಡರ್ದು, ಅಲ್ಲಿಯೆ ನಿಂದು, ಅಲ್ಲಿಯೆ ರಮಿಯಿಸಿದಳ್ ಆಕೆ ಮರುದಾತ್ಮಜನೊಳ್)
ಕೊಳಗಳಲ್ಲಿ, ತಂಪುತೋಪುಗಳಲ್ಲಿ, ಬಳ್ಳಿಮಾಡಗಳಲ್ಲಿ, ತಣ್ಣೀರ ಸ್ನಾನಗೃಹಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸೇರಿ, ತಂಗಿ, ಹಿಡಿಂಬೆಯು ಭೀಮನೊಂದಿಗೆ ರಮಿಸಿದಳು.
ವ|| ಅಂತು ರಮಿಯಿಸಿ ಪೊೞಲ್ಗೆ ಮಗುೞ್ದು ಬಂದೊಡೆ ಆಕೆಗಂ ಭೀಮಂಗಂ
ಹಾಗೆ ರಮಿಸಿ ಊರಿಗೆ ಹಿಂದಿರುಗಿ ಬಂದ ಮೇಲೆ ಆಕೆಗೂ ಭೀಮನಿಗೂ
ಕಂ|| ಕಾರಿರುಳ ತಿರುಳ ಬಣ್ಣಂ
     ಕೂರಿದುವೆನೆ ತೊಳಪ ದಾಡೆ ಮಿಳಿರ್ವುರಿಗೇಸಂ|
     ಪೇರೊಡಲೆಸೆದಿರೆ ಪುಟ್ಟಿದ
     ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ|| ೨೦||
(ಕಾರಿರುಳ ತಿರುಳ ಬಣ್ಣಂ, ಕೂರಿದುವು ಎನೆ ತೊಳಪ ದಾಡೆ, ಮಿಳಿರ್ವ ಉರಿಗೇಸಂ,  ಪೇರೊಡಲ್ ಎಸೆದಿರೆ, ಪುಟ್ಟಿದನ್ ಆರುಂ ಅಗುರ್ವಿಸೆ ಮಗಂ ಘಟೋತ್ಕಚನ್ ಎಂಬಂ)
ಕಪ್ಪುಗತ್ತಲಿನ ತಿರುಳಿನಂಥ ಬಣ್ಣ, ಹೊಳೆಯುವ ಹರಿತವಾದ ಕೋರೆಹಲ್ಲುಗಳು, ಅಲುಗುವ ಜ್ವಾಲೆಯಂಥ ತಲೆಗೂದಲು, ಭಾರೀ ದೇಹ ಇವುಗಳಿಂದ ಕೂಡಿ, ಕಂಡವರಿಗೆ ಹೆದರಿಕೆ ಹುಟ್ಟಿಸುವಂತಿದ್ದ ಘಟೋತ್ಕಚನೆಂಬ ಮಗನು ಹುಟ್ಟಿದನು.
ವ|| ಅಂತು ಪುಟ್ಟುವುದುಮೀಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯಃಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರೆ ಪಾಂಡಮರುಮಲ್ಲಿ ಮೂಱು ವರುಷಮಿರ್ದು ಕೃಷ್ಣದ್ವೈಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ-
ಹಾಗೆ ಹುಟ್ಟಿದಾಗ ಈಶ್ವರನಿಯಮದಂತೆ ರಾಕ್ಷಸರಿಗೆ ಕೂಡಲೇ ಬಸಿರಾಗಿ, ಕೂಡಲೇ ಹೆತ್ತು, ಕೂಡಲೇ (ಮಗುವಿಗೆ) ಯೌವನವು ಉಂಟಾಗುವುದರಿಂದ, ಘಟೋತ್ಕಚನು ಕೂಡಲೇ ಹದಿನಾರು ವರ್ಷದ ಕುಮಾರನಾದನು. ಪಾಂಡವರು ಅಲ್ಲಿ ಮೂರು ವರ್ಷ ಕಾಲ ಇದ್ದು, ವ್ಯಾಸರ ಉಪದೇಶದಂತೆ, ಏಕಚಕ್ರ ನಗರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿ-

ಗುರುವಾರ, ಅಕ್ಟೋಬರ್ 17, 2019






ಆಶ್ವಾಸ ೩ ಪದ್ಯಗಳು ೧-೧೧


ಕಂ|| ಶ್ರೀಯನರಾತಿಬಳಾಸೃ
     ಕ್ತೋಯಧಿಯೊಳ್ ಪಡೆದ ವೀರನುಱದರಿಗಳನಾ|
     ತ್ಮೀಯಪದಸ್ಫುರಿತ ನಖ
     ಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ ||೧||
(ಶ್ರೀಯನ್ ಅರಾತಿಬಳಾಸೃಕ್ ತೋಯಧಿಯೊಳ್ ಪಡೆದ ವೀರನ್, ಉಱದ ಅರಿಗಳನ್ ಆತ್ಮೀಯ ಪದಸ್ಫುರಿತ ನಖಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ)
ಶತ್ರುಸೈನ್ಯದ ರಕ್ತದ ಕಡಲಿನಲ್ಲಿ ಶ್ರೀಯನ್ನು – ಸಂಪತ್ತನ್ನು – ಪಡೆದವನೂ; ತನ್ನನ್ನು ಒಪ್ಪದ, ತನಗೆ ಬಗ್ಗದ, ತನಗೆ ಸೋಲದ ಶತ್ರುಗಳನ್ನು ತನ್ನ ಕಾಲುಗುರಿನ ಪ್ರಭಾವಳಿಯಲ್ಲಿ ನಿಲ್ಲಿಸಿದ - ಅರ್ಜುನನು - ಅರಿಕೇಸರಿಯು
ವ|| ಆ ಪೊೞಲ ಪೊಱವೊೞಲನೆಯ್ದೆ ವರ್ಪಾಗಳ್-
(ಆ ಪೊೞಲ ಪೊಱವೊೞಲನ್ ಎಯ್ದೆ ವರ್ಪಾಗಳ್)
ಆ ಪುರದ ಹೊರವಲಯದ ಹತ್ತಿರ ಬಂದಾಗ
ಕಂ|| ಕತ್ತುರಿಯ ಸಗಣ ನೀರ್ ಬಿಡು
     ಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂ|
     ಪತ್ತಿನ ಬಿತ್ತರದೆತ್ತಿದ
     ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ || ೨ ||
(ಕತ್ತುರಿಯ ಸಗಣ ನೀರ್, ಬಿಡುಮುತ್ತಿನ ರಂಗವಲಿ, ಮಿಳಿರ್ವ ದುಗುಲದ ಗುಡಿ, ಸಂಪತ್ತಿನ ಬಿತ್ತರದ ಎತ್ತಿದ ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ)
ಕಸ್ತೂರಿಯನ್ನು ಕದರಿ ತಯಾರಿಸಿದ ಸೆಗಣಿನೀರಿನಿಂದ ಸಾರಿಸಿದ ಅಂಗಳ; ಬಿಡಿಮುತ್ತುಗಳಿಂದ ರಚಿಸಿದ ರಂಗೋಲಿ; ಅಲುಗಾಡುವ ರೇಷ್ಮೆಯ ಬಾವುಟಗಳು (ಬಂಟಿಂಗ್ಸ್?); (ಅಲ್ಲಿನ ಪುರಜನರ) ವಿಪುಲ ಸಂಪತ್ತನ್ನು ಸೂಚಿಸುವ ಮಂಟಪಗಳು ಊರಿನ ಎಲ್ಲ ಮನೆಗಳಲ್ಲಿಯೂ ಶೋಭಿಸುತ್ತಿದ್ದವು.
ವ|| ಅಂತಾಗಳೊಂದುತ್ತರಂ ಬಳೆಯೆ ಸೊಗಯಿಸುವ ಪೊೞಲೊಳಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ ಗೋರೋಚನಾ ಸಿದ್ಧಾರ್ಥ ದೂರ್ವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಧ್ರಿಯರುಂ ಬದ್ದವಣದ ಪಱೆಗಳುಂ ಬೆರಸಿದಿರ್ವಂದು ಮೆಯ್ಯಿಕ್ಕಿ ಪೊಡಮಟ್ಟು ಪಾಂಡವರುಮಂ ಮುಂದಿಟ್ಟೊಡಗೊಂಡು ಬಂದು ಪೊೞಲಂ ಪುಗಿಸೆ ಪೊಕ್ಕು ಬೀಡನೆಲ್ಲಿ ಬಿಡುವಮೆನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆನಲ್ಲಿಗೆ ಬಿಜಯಂಗೆಯ್ಯಿಮೆನೆ-
(ಅಂತು ಆಗಳ್ ಒಂದು ಉತ್ತರಂ ಬಳೆಯೆ ಸೊಗಯಿಸುವ ಪೊೞಲೊಳ್, ಅಷ್ಟ ಶೋಭೆಯಂ ಮಾಡಿ, ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ, ಗೋರೋಚನಾ ಸಿದ್ಧಾರ್ಥ ದೂರ್ವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಧ್ರಿಯರುಂ, ಬದ್ದವಣದ ಪಱೆಗಳುಂ ಬೆರಸು ಇದಿರ್ವಂದು, ಮೆಯ್ಯಿಕ್ಕಿ ಪೊಡಮಟ್ಟು, ಪಾಂಡವರುಮಂ ಮುಂದಿಟ್ಟು ಒಡಗೊಂಡು ಬಂದು ಪೊೞಲಂ ಪುಗಿಸೆ, ಪೊಕ್ಕು, ‘ಬೀಡನೆಲ್ಲಿ ಬಿಡುವಂ?’ ಎನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆನ್, ಅಲ್ಲಿಗೆ ಬಿಜಯಂಗೆಯ್ಯಿಂ ಎನೆ-)
ಹಾಗೆ, ಏನೋ ಒಂದು ವಿಶೇಷವನ್ನು ತನ್ನೊಳಗಿಟ್ಟುಕೊಂಡಂತೆ ಶೋಭಿಸುತ್ತಿದ್ದ ಆ ಊರಿನಲ್ಲಿ, ದುರ್ಯೋಧನನ ಸೂಚನೆಯಂತೆ (ಪಾಂಡವರಿಗಾಗಿ) ಮೊದಲೇ ಅಷ್ಟ ಶೋಭೆಯನ್ನು ಮಾಡಿ ಮನೆಯನ್ನು ಕಟ್ಟಿಸಿದ್ದ ಪುರೋಚನನು, ಗೋರೋಚನ, ಅಕ್ಷತೆಕಾಳು, ದೂರ್ವೆಯ ಚಿಗುರು, ಮಾದಲ ಹಣ್ಣು, ಕನ್ನಡಿ, ಪೂರ್ಣಕುಂಭ, ಬತ್ತ ಇವುಗಳನ್ನು ಕೈಯಲ್ಲಿ ಹಿಡಿದ ಸ್ತ್ರೀಯರು ಹಾಗೂ ಮಂಗಳವಾದ್ಯಗಳೊಂದಿಗೆ ಪಾಂಡವರ ಎದುರಿಗೆ ಬಂದು, ಅಡ್ಡಬಿದ್ದು ನಮಸ್ಕರಿಸಿ, ಅವರನ್ನು ಮುಂದಿಟ್ಟು, ಅವರ ಜೊತೆಯಲ್ಲಿಯೇ ಬಂದು ಅವರನ್ನು ಊರೊಳಗೆ ಹೊಗಿಸಿದನು. ಆಗ ‘ಬೀಡನ್ನು ಎಲ್ಲಿ ಬಿಡುವುದು’ ಎಂಬ ಪ್ರಶ್ನೆ ಬಂದಾಗ ‘ನಿಮ್ಮ ತಂದೆ ಧೃತರಾಷ್ಟ್ರನ ಅಪ್ಪಣೆಯಂತೆ ಮೊದಲೇ ಮನೆಯನ್ನು ಕಟ್ಟಿಸಿ ಇಟ್ಟಿದ್ದೇನೆ. ಅಲ್ಲಿಗೆ ದಯಮಾಡಿಸಿ’ ಎಂದು ಪುರೋಚನನು ಹೇಳಿದನು.
ಕಂ|| ಅರಗು ಮೊದಲಾಗೆ ಘೃತ ಸ
     ಜ್ಜರಸಂ ಬೆಲ್ಲಂ ಸಣಂಬಿವೆಂಬಿವಱಿಂ ವಿ|
     ಸ್ತರಿಸಿ ಸಮೆದಿಂದ್ರಭವನಮೆ
     ಧರೆಗವತರಿಸಿರ್ದುದೆನಿಸುವರಗಿನ ಮನೆಯಂ|| ೩ ||
(ಅರಗು ಮೊದಲಾಗೆ ಘೃತ, ಸಜ್ಜರಸಂ, ಬೆಲ್ಲಂ, ಸಣಂಬು ಎಂಬ ಇವಱಿಂ ವಿಸ್ತರಿಸಿ ಸಮೆದ ಇಂದ್ರಭವನಮೆ ಧರೆಗೆ ಅವತರಿಸಿರ್ದುದು ಎನಿಸುವ ಅರಗಿನ ಮನೆಯಂ)
ಅರಗನ್ನು ಮುಖ್ಯವಾಗಿ ಬಳಸಿ ತುಪ್ಪ, ರಾಳ, ಬೆಲ್ಲ, ಸಣಬು ಎಂಬ ವಸ್ತುಗಳನ್ನು ಸೇರಿಸಿ ನಿರ್ಮಿಸಿದ, ನೆಲಕ್ಕಿಳಿದ ಬಂದ ಇಂದ್ರಭವನದಂತಿದ್ದ ಅರಗಿನ ಮನೆಯನ್ನು-
ವ|| ತಾನೆ ಮುಂದಿಟ್ಟೊಡಗೊಂಡು ಬಂದು ಪುಗಿಸೆ ಪಾಂಡವರಯ್ವರುಂ ಕೊಂತಿವೆರಸು ಕಿಱಿದಾನುಂ ಬೇಗಮಿರ್ದು ದಾನ ಸನ್ಮಾನಾದಿಗಳಿಂ ಸಂತಸಂಬಡಿಸಿ ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು ಧರ್ಮಪುತ್ರನಾ ಮನೆಯಂ ಪರೀಕ್ಷಿಸಿ ನೋಡಲೊಡಮಱಿದು ನಿಜಾನುಜ ಸಹಿತಂ ಕೊಂತಿವೆರಸೇಕಾಂತದೊಳಿಂತೆಂದಂ-
(ತಾನೆ ಮುಂದಿಟ್ಟು ಒಡಗೊಂಡು ಬಂದು ಪುಗಿಸೆ, ಪಾಂಡವರ್ ಅಯ್ವರುಂ ಕೊಂತಿವೆರಸು ಕಿಱಿದಾನುಂ ಬೇಗಮಿರ್ದು, ದಾನ ಸನ್ಮಾನಾದಿಗಳಿಂ ಸಂತಸಂಬಡಿಸಿ, ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು, ಧರ್ಮಪುತ್ರನ್ ಆ ಮನೆಯಂ ಪರೀಕ್ಷಿಸಿ ನೋಡಲ್, ಒಡಂ ಅಱಿದು, ನಿಜಾನುಜ ಸಹಿತಂ ಕೊಂತಿವೆರಸು ಏಕಾಂತದೊಳ್ ಇಂತೆಂದಂ-)
ತಾನೇ ಮುಂದೆ ನಿಂತು, ಜೊತೆಗೂಡಿ ಬಂದು ಹೊಗಿಸಲು, ಪಾಂಡವರೈವರೂ ಸಹ, ಸ್ವಲ್ಪ ಹೊತ್ತಾದ ಮೇಲೆ ಪುರೋಚನನನ್ನು ದಾನ ಸನ್ಮಾನಾದಿಗಳಿಂದ ಸಂತಸಪಡಿಸಿ ಮನೆಗೆ ಕಳಿಸಿಕೊಟ್ಟರು. ನಂತರ ಧರ್ಮಪುತ್ರನು ಆ ಮನೆಯನ್ನು ಪರೀಕ್ಷಿಸಿ ನೋಡಿ, ಕೂಡಲೇ (ಅದರ ಮರ್ಮವನ್ನು) ಅರ್ಥ ಮಾಡಿಕೊಂಡು ತನ್ನ ತಮ್ಮಂದಿರಿಗೂ ಕುಂತಿಗೂ ಹೀಗೆ ಹೇಳಿದನು:
ಚಂ|| ಇದು ಮನೆಯಂದಮಲ್ತುರಿವ ದಳ್ಳುರಿಯುಗ್ಗಡದಂದಮಾಗಿ ತೋ
     ಱಿದಪುದು ಕಣ್ಗೆ ಸಜ್ಜರಸದೆಣ್ಣೆಯ ತುಪ್ಪದ ಕಂಪಿದೆಲ್ಲಮೆಂ|
     ಬುದೆ ಬಗೆದಲ್ಲಿ ನೋಡುವೊಡಮಿಟ್ಟಗೆ ಕಲ್ಮರನೆಂಬುದಿಲ್ಲ ಕೂ
     ರದನಿದನೊಡ್ಡಿದಂ ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೇ|| ೪||
 (ಇದು ಮನೆಯಂದಂ ಅಲ್ತು, ಉರಿವ ದಳ್ಳುರಿಯ ಉಗ್ಗಡದ ಅಂದಮಾಗಿ ತೋಱಿದಪುದು ಕಣ್ಗೆ.  ಸಜ್ಜರಸದ, ಎಣ್ಣೆಯ, ತುಪ್ಪದ ಕಂಪು ಇದೆಲ್ಲಂ ಎಂಬುದೆ ಬಗೆದು ಅಲ್ಲಿ ನೋಡುವೊಡಂ ಇಟ್ಟಗೆ ಕಲ್ ಮರನ್ ಎಂಬುದಿಲ್ಲ. ಕೂರದನ್ ಇದನ್ ಒಡ್ಡಿದಂ, ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೇ?)
ಇದು ಮನೆಯ ಹಾಗೆ ಕಾಣುವುದಿಲ್ಲ, ಉರಿಯುವ ಬೆಂಕಿಯ ಭಾರೀ ಜ್ವಾಲೆಗಳಂತೆ ಕಾಣುತ್ತಿದೆ. ಎಲ್ಲಿ ನೋಡಿದರೂ ರಾಳದ, ಎಣ್ಣೆಯ, ತುಪ್ಪದ ಪರಿಮಳವೇ ಮೂಗಿಗೆ ಹೊಡೆಯುತ್ತಿದೆ ಹೊರತು ಇಟ್ಟಿಗೆ, ಕಲ್ಲು, ಮರಗಳು ಕಾಣುತ್ತಿಲ್ಲ. ಇದು ಶತ್ರು ಒಡ್ಡಿರುವ ಬಲೆ. ಶತ್ರುವಿಗೆ ಸಂತೋಷವಾದರೆ ಮಾರಿಗೇಕೆ ದುಃಖ? (ನಾವು ಈ ಮನೆಯಲ್ಲಿ ಉರಿಯುವ ಬೆಂಕಿಗೆ ಸಿಕ್ಕಿ ಸತ್ತರೆ ದುರ್ಯೋಧನನಿಗೆ ಸಂತೋಷವಾಗುತ್ತದೆ. ಮಾರಿಗೇಕೆ ದುಖ? ಅದೂ ನಮ್ಮನ್ನು ಸಂತೋಷದಿಂದಲೇ ತಿನ್ನುತ್ತದೆ).

ವ|| ಅದಲ್ಲದೆಯುಮತ್ಯಾದರಸ್ಸಂಭ್ರಮಮುತ್ಪಾದಯತಿಯೆಂಬುದೀ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗಿನಿತಾದರಂ ಗೆಯ್ವುದೆಲ್ಲಂ ನಮ್ಮಂ ಮೆಳ್ಪಡಿಸಲೆಂದೆ ಮಾಡಿದಂ ನಾಮಿದನಱಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮೆಂದು ನಿಚ್ಚಂ ಬೇಂಟೆವೋಗೆ ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡೇಕಾಂತದೊಳ್ ವಿದುರನಟ್ಟಿದವಿನ್ನಾಣಂಗಳಂ ಪೇೞ್ದು ನಂಬಿಸಿ ನೀಮೆಂತುಂ ಬಲ್ಲಿರಂತೆ ಪೊಱಮಟ್ಟು ಪೋಗಿಮೆಂದು ಜತುಗೃಹ ಕವಾಟ ಪುಟ ಸಂಧಿಗಳೊಳ್ ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು ಪೇೞ್ದು ಪೋಪುದುಂ ಪಾಂಡವರುಂ ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನೆನಲುಂ ಮುನ್ನಿನ ದಿವಸಮೊಳಗಣ ಪರಿಜನಮೆಲ್ಲಮಂ ಪಾರ್ವರನೂಡುವ ನೆವದೊಳೆ ಪೊಱಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನೂಡಿ ನಿಷಾದಿತಿಯೆಂಬ ಬೇಡಿತಿಗಮಯ್ವರ್ ಮಗಂದಿರ್ಗಮುಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಸುಂದಿದರ್ ಪುರೋಚನನುಮಾ ಮನೆಯೊಳೊಂದೋವರಿಯೊಳ್ ಮಱಕೆಂದಿದನಾ ಪ್ರಸ್ತಾವದೊಳರ್ಧ ರಾತ್ರಿಯಾದಾಗಳ್ ಕೊಂತಿವೆರಸಯ್ವರುಮಂ ಮುನ್ನಮೊಯ್ಯನೊಯ್ಯನೆ ಸುರಂಗದಿಂ ಪೊಱಮಡಿಸಿ ಭೀಮಸೇನಂ ಪುರೋಚನಂ ಮಱಕೆಂದಿರ್ದೋವರಿಯೊಳ್ ಕಿಚ್ಚಂ ಕೊಳಿಸಲೊಡಂ-
(ಅದಲ್ಲದೆಯುಂ ‘ಅತ್ಯಾದರಃ ಸಂಭ್ರಮಮ್ ಉತ್ಪಾದಯತಿ’ ಎಂಬುದು. ಈ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗೆ ಇನಿತು ಆದರಂ ಗೆಯ್ವುದೆಲ್ಲಂ ನಮ್ಮಂ ಮೆಳ್ಪಡಿಸಲ್ ಎಂದೆ ಮಾಡಿದಂ. ನಾಮ್ ಇದನ್ ಅಱಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಂ ಎಂದು ನಿಚ್ಚಂ ಬೇಂಟೆವೋಗೆ, ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ, ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡು ಏಕಾಂತದೊಳ್ ವಿದುರನ್ ಅಟ್ಟಿದ ಅವಿನ್ನಾಣಂಗಳಂ ಪೇೞ್ದು, ನಂಬಿಸಿ, ‘ನೀಮೆಂತುಂ ಬಲ್ಲಿರಿ, ಅಂತೆ ಪೊಱಮಟ್ಟು ಪೋಗಿಂ’ ಎಂದು ಜತುಗೃಹ ಕವಾಟ ಪುಟ ಸಂಧಿಗಳೊಳ್ ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು, ಪೇೞ್ದು, ಪೋಪುದುಂ; ಪಾಂಡವರುಂ, ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನ್ ಎನಲುಂ ಮುನ್ನಿನ ದಿವಸಂ ಒಳಗಣ ಪರಿಜನಮೆಲ್ಲಮಂ ಪಾರ್ವರನ್ ಊಡುವ ನೆವದೊಳೆ ಪೊಱಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನ್ ಊಡಿ ನಿಷಾದಿತಿಯೆಂಬ ಬೇಡಿತಿಗಂ ಅಯ್ವರ್ ಮಗಂದಿರ್ಗಂ ಉಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಸುಂದಿದರ್. ಪುರೋಚನನುಂ ಆ ಮನೆಯೊಳ್ ಒಂದು ಓವರಿಯೊಳ್ ಮಱಕೆಂದಿದನ್. ಆ ಪ್ರಸ್ತಾವದೊಳ್ ಅರ್ಧ ರಾತ್ರಿಯಾದಾಗಳ್ ಕೊಂತಿವೆರಸು ಅಯ್ವರುಮಂ ಮುನ್ನಂ ಒಯ್ಯನೊಯ್ಯನೆ ಸುರಂಗದಿಂ ಪೊಱಮಡಿಸಿ, ಭೀಮಸೇನಂ, ಪುರೋಚನಂ ಮಱಕೆಂದಿರ್ದ ಓವರಿಯೊಳ್ ಕಿಚ್ಚಂ ಕೊಳಿಸಲ್ ಒಡಂ-)
‘ಅದೂ ಅಲ್ಲದೆ ‘ಅತಿಯಾದ ಆದರವು ಹೆದರಿಕೆಯನ್ನು ಹುಟ್ಟಿಸುತ್ತದೆ’ ಎಂದು ಹೇಳಲಾಗಿದೆ. ಈ ಪುರೋಚನನೆಂಬ ದುಷ್ಟನು ಮೋಸ ಮಾಡುವ ಉದ್ದೇಶದಿಂದಲೇ ನಮಗೆ ಹೀಗೆ ಅತಿಯಾದ ಗೌರವ ಕೊಡುತ್ತಿದ್ದಾನೆ. ನಾವು ಇದನ್ನೆಲ್ಲ ತಿಳಿಯದವರ ಹಾಗೆ, ಬೇಟೆಯ ನೆವದಲ್ಲಿ (ಇಲ್ಲಿಂದ ತಪ್ಪಿಸಿಕೊಂಡು ಹೋಗಲು) ದಾರಿಗಳನ್ನು ಹುಡುಕೋಣ’ ಎಂದು ಪ್ರತಿದಿನವೂ ಬೇಟೆಗೆ ಹೋಗುತ್ತಿದ್ದರು. ಪುರೋಚನನು ಅವರು ಹೊರಗಡೆ ಎಲ್ಲಿ ಹೋಗುತ್ತಾರೆ ಎಂಬುದರ ಮೇಲೆ ಕಣ್ಗಾವಲು ಇಟ್ಟೇ ಇದ್ದನು. ಅಷ್ಟರಲ್ಲಿ ವಿದುರನ ಕಳಿಸಿದ ನಂಬಿಕೆಯ ಆಳು ಕನಕನೆಂಬುವನು ಬಂದು, ಪಾಂಡವರನ್ನು ಕಂಡು, ಗುಟ್ಟಿನಲ್ಲಿ ವಿದುರನು ಕಳಿಸಿದ ಗುರುತುಗಳನ್ನು ಹೇಳಿ, ನಂಬಿಸಿ, ‘ನೀವು ತಿಳಿದವರೇ ಇದ್ದೀರಿ. ನಿಮಗೆ ಗೊತ್ತಿರುವಂತೆ ಹೊರಗೆ ಹೊರಟು ಹೋಗಿ’ ಎಂದು ಹೇಳಿ, ಅರಗಿನ ಮನೆಯ ಬಾಗಿಲುಗಳ ಸಂದಿಯಲ್ಲಿ ಗಂಗಾನದಿಯನ್ನು ದಾಟಿ ಹೋಗಲು ಆಗುವಂತೆ ಸುರಂಗವನ್ನು ಕೊರೆದು, ಹೇಳಿ, ಹೊರಟುಹೋದನು. ಪಾಂಡವರು ಮರುದಿನ ತಮ್ಮನ್ನು ಪುರೋಚನನು ಕೊಲ್ಲುತ್ತಾನೆ ಎಂದಾದಾಗ, ಮೊದಲಿನ ದಿನವೇ ಒಳಗಿನ ಸೇವಕರೆಲ್ಲರನ್ನೂ ಹಾರುವರಿಗೆ ಊಟ ಹಾಕುವ ನೆವ ಹೇಳಿ ಹೊರಗೆ ಕಳಿಸಿ, ಸಂಜೆ ಸೂರ್ಯ ಮುಳುಗಿದ ನಂತರ ಹಾರುವರಿಗೆಲ್ಲ ಊಟ ಹಾಕಿದರು. ಆಮೇಲೆ ನಿಷಾದಿತಿ ಎಂಬ ಬೇಡಿತಿಗೂ ಅವಳ ಐವರು ಮಕ್ಕಳಿಗೂ ಊಟ ಹಾಕಿದಾಗ, ಅವರೆಲ್ಲ ಹೊಟ್ಟೆಬಿರಿ ಉಂಡು, ಅಲ್ಲಿಯೇ ಮಲಗಿ ಗಾಢವಾದ ನಿದ್ರೆಗೆ ಜಾರಿದರು. ಪುರೋಚನನು ಸಹ ಆ ಮನೆಯ ಒಂದು ಕೋಣೆಯಲ್ಲಿ ಮಲಗಿಕೊಂಡನು. ಆ ಸಂದರ್ಭದಲ್ಲಿ, ಅರ್ಧರಾತ್ರಿಯ ಹೊತ್ತಿಗೆ, ಭೀಮನು ಕುಂತಿಯನ್ನೂ, ಉಳಿದ ನಾಲ್ವರನ್ನೂ ಮೆಲ್ಲನೆ ಸುರಂಗದ ಮೂಲಕ ಹೊರಗೆ ಹೊರಡಿಸಿ, ಪುರೋಚನನು ಮಲಗಿದ್ದ ಕೋಣೆಗೆ ಬೆಂಕಿ ಇಟ್ಟನು. ಕೂಡಲೇ –
(ಬಡಪಾಯಿಗಳಾದ ನಿಷಾದಿತಿ ಮತ್ತು ಅವಳ ಮಕ್ಕಳನ್ನು, ತಮ್ಮ ಸ್ವಾರ್ಥಕ್ಕಾಗಿ, ಪಾಂಡವರು ಬೆಂಕಿ ಇಟ್ಟು ಕೊಂದು ಹಾಕಿದ ಈ ಅಮಾನವೀಯ  ಪ್ರಸಂಗ ಹೆಚ್ಚು ಚರ್ಚೆಯಾದಂತೆ ಕಾಣುವುದಿಲ್ಲ. ಮುಂದೆ ಏಕಚಕ್ರ ನಗರದಲ್ಲಿ ಬಕಾಸುರನ ಹತ್ತಿರಕ್ಕೆ ತಮ್ಮ ಮನೆಯ ಒಬ್ಬರನ್ನು ಕಳಿಸಬೇಕಾದ ಆಪತ್ತಿಗೆ ಸಿಕ್ಕಿಕೊಂಡ ಬ್ರಾಹ್ಮಣ ಕುಟುಂಬದ ಬಗ್ಗೆ ಅಪಾರ ಕರುಣೆಯನ್ನು ತೋರಿಸುವ ಕುಂತಿ ಮತ್ತು ಪಾಂಡವರು, ನಿಷಾದಿತಿ ಮತ್ತು ಅವಳ ಮಕ್ಕಳನ್ನು ಯಾವ ಕರುಣೆಯೂ ಇಲ್ಲದೆ ಬೆಂಕಿ ಕೊಟ್ಟು ಕೊಲ್ಲುವುದು ಪಾಂಡವರ ವ್ಯಕ್ತಿತ್ವಕ್ಕೊಂದು ಕಪ್ಪುಚುಕ್ಕೆಯಾಗಿ ಕಾಣುತ್ತದೆ.)
ಕಂ|| ಅಡಿಯೊತ್ತದೆ ಕಿಱಿಕಿಱಿದನೆ
     ಸುಡದಿನಿಸರೆಪೊರೆಕನಾಗದೆಯೆ ಸಸಿದಂದೊಂ|
     ದೆಡೆಯೊಳಗೊಟ್ಟಿರ್ದರಳೆಯ
     ನೊಡನಳುರ್ವಂತಳುರ್ದನನಲನರಗಿನ ಮನೆಯಂ|| ೫||
(ಅಡಿಯೊತ್ತದೆ, ಕಿಱಿಕಿಱಿದನೆ ಸುಡದೆ, ಇನಿಸು ಅರೆಪೊರೆಕನಾಗದೆಯೆ, ಸಸಿದು ಅಂದು ಒಂದು ಎಡೆಯೊಳಗೆ ಒಟ್ಟಿರ್ದ ಅರಳೆಯನ್ ಒಡನೆ ಅಳುರ್ವಂತೆ ಅಳುರ್ದನ್ ಅನಲನ್ ಅರಗಿನ ಮನೆಯಂ)
ಕೇವಲ ಬುಡದಲ್ಲಿ ಮಾತ್ರ ಹೊತ್ತಿ ಉರಿಯದೆ, ಸ್ವಲ್ಪಸ್ವಲ್ಪವಾಗಿ ಸುಡದೆ, ಅರ್ಧಂಬರ್ಧ ವ್ಯಾಪಿಸದೆ, ಒಂದು ಜಾಗದಲ್ಲಿ ಹತ್ತಿಯನ್ನು ಬಿಡಿಸಿ ರಾಶಿ ಹಾಕಿ ಬೆಂಕಿ ಕೊಟ್ಟರೆ ಹೇಗೋ ಹಾಗೆ, ಬೆಂಕಿಯು ಅರಗಿನ ಮನೆಯನ್ನು ಒಂದೇ ಸಲಕ್ಕೆ ವ್ಯಾಪಿಸಿತು.
ಕಂ|| ಮೇಲಾದ ಪಾಂಡುಸುತರನು
     ಪಾಲಂಭಂಗೆಯ್ಯುತಿರ್ಪ ದುರ್ಯೋಧನನಂ|
     ಲೀಲೆಯೆ ನುಂಗುವ ಮೃತ್ಯುವ
     ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ|| ೬ ||
(ಮೇಲಾದ ಪಾಂಡುಸುತರನ್ ಉಪಾಲಂಭಂಗೆಯ್ಯುತಿರ್ಪ ದುರ್ಯೋಧನನಂ, ಲೀಲೆಯೆ ನುಂಗುವ ಮೃತ್ಯುವ ನಾಲಗೆಯೆನೆ, ನೆಗೆದುವು ಉರಿಯ ನಾಲಗೆ ಪಲವುಂ)
ಉತ್ತಮರಾದ ಪಾಂಡುಪುತ್ರರನ್ನು ದೂಷಿಸುತ್ತಿರುವ ದುರ್ಯೋಧನನನ್ನು - ಅದೊಂದು ಆಟವೋ ಎಂಬಂತೆ - ನುಂಗುತ್ತಿರುವ ಬೆಂಕಿಯ ನಾಲಗೆಯಂತೆ, ಮೇಲೇಳುತ್ತಿರುವ ಉರಿಯ ನಾಲಗೆಗಳು ಕಾಣಿಸಿಕೊಂಡವು.
ವ|| ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವರಗಿನುರಿಯ ಬಂಬಲ್ಗಳಂ ಪೊಸೆದು ಬಿದಿರ್ದು ಕಳೆದು ಸುರಂಗದೊಳಗಣಿಂದಮೆ ತನ್ನೊಡವುಟ್ಟಿದರ್ ಕೂಡೆ ವಂದನನ್ನೆಗಮಿತ್ತಂ-
(ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವ ಅರಗಿನ ಉರಿಯ ಬಂಬಲ್ಗಳಂ ಪೊಸೆದು, ಬಿದಿರ್ದು ಕಳೆದು, ಸುರಂಗದ ಒಳಗಣಿಂದಮೆ ತನ್ನ ಒಡವುಟ್ಟಿದರ್ ಕೂಡೆ ವಂದನ್. ಅನ್ನೆಗಂ ಇತ್ತಂ)
ಆಗ ಭೀಮಸೇನನು ತನ್ನ ತಲೆಯ ಮೇಲೂ, ಮೈಯ್ಯ ಮೇಲೂ ಉದುರುತ್ತಿದ್ದ ಬೆಂಕಿಯ ಉಂಡೆಗಳನ್ನು ತಿಕ್ಕಿ, ಕೊಡವಿ, ಕಳೆದು ಸುರಂಗದ ಒಳಗಿನಿಂದ ತನ್ನ ಒಡಹುಟ್ಟಿದವರ ಜೊತೆಯಲ್ಲಿ (ಹೊರಗೆ) ಬಂದನು. ಅಷ್ಟರಲ್ಲಿ ಇತ್ತ-
ಕಂ|| ಅರಗಿನ ಮನೆಯೊಳ್ ಪಾಂಡವ
     ರುರಿದೞ್ಗಿದರಕ್ಕಟಯ್ಯೊ ದುರ್ಯೋಧನನೆಂ|
     ಬೆರಲೆಯಿನೆಂದೞುತುಂ ತ
     ತ್ಪುರಜನಮೞಲೊದವೆ ಪರಿದು ನೋಡಿತ್ತಾಗಳ್|| ೭||
(ಅರಗಿನ ಮನೆಯೊಳ್ ಪಾಂಡವರ್ ಉರಿದು ಅೞ್ಗಿದರ್, ಅಕ್ಕಟಾ, ಅಯ್ಯೊ, ದುರ್ಯೋಧನನ್ ಎಂಬ      ಎರಲೆಯಿನ್ ಎಂದು ಅೞುತುಂ ತತ್ಪುರಜನಂ ಅೞಲ್ ಒದವೆ ಪರಿದು ನೋಡಿತ್ತಾಗಳ್)
‘ಅಯ್ಯೋ! ಅಯ್ಯೋ! ದುರ್ಯೋಧನನೆಂಬ ವಿಷಜಂತುವಿನಿಂದ ಅರಗಿನಮನೆಯಲ್ಲಿ ಪಾಂಡವರು ಸುಟ್ಟು ನಾಶವಾದರು’ ಎಂದು ಅಳುತ್ತಾ ಪುರಜನರೆಲ್ಲರೂ ಅಲ್ಲಿಗೆ ಬಂದು ನೋಡಿದರು.
ವ|| ನೋಡಿ ರೂಪಱಿಯಲಾಗದಂತು ಕರಿಮುರಿಕನಾಗಿರ್ದ ಬೇಡಿತಿಯುಮನವಳಯ್ವರ್ ಮಕ್ಕಳುಮಂ ಕೊಂತಿಯುಂ ಪಾಂಡವರುಮಪ್ಪರೇನುಂ ತಪ್ಪಲ್ಲೆಂದು ಪುರಪ್ರಧಾನರ್ಕಳ್ ತದ್ವೃ ತ್ತಾಂತಮೆಲ್ಲಮಂ ಪೇೞ್ದು ಧೃತರಾಷ್ಟ್ರಂಗಂ ಪೇೞಲಟ್ಟಿದೊಡೆ-
(ನೋಡಿ, ರೂಪು ಅಱಿಯಲ್ ಆಗದಂತು ಕರಿಮುರಿಕನಾಗಿರ್ದ ಬೇಡಿತಿಯುಮನ್ ಅವಳ ಅಯ್ವರ್ ಮಕ್ಕಳುಮಂ ‘ಕೊಂತಿಯುಂ ಪಾಂಡವರುಂ ಅಪ್ಪರ್, ಏನುಂ ತಪ್ಪಲ್ಲ’ ಎಂದು ಪುರಪ್ರಧಾನರ್ಕಳ್ ತದ್ವೃತ್ತಾಂತಂ ಎಲ್ಲಮಂ ಪೇೞ್ದು, ಧೃತರಾಷ್ಟ್ರಂಗಂ ಪೇೞಲ್ ಅಟ್ಟಿದೊಡೆ)
ನೋಡಿ, ಗುರುತು ಸಿಗದಂತೆ ಕರಕಲಾಗಿದ್ದ ಬೇಡಿತಿ ಮತ್ತು ಅವಳ ಐದು ಮಕ್ಕಳ ಶವಗಳನ್ನು ಕುಂತಿ ಮತ್ತು ಪಾಂಡವರದೆಂದು ಭಾವಿಸಿ, ಪುರಪ್ರಧಾನರು ಆ ವಿಷಯವನ್ನು ಧೃತರಾಷ್ಟ್ರನಿಗೆ ತಿಳಿಸಲು (ದೂತರನ್ನು) ಕಳಿಸಿಕೊಟ್ಟರು.
ಕಂ|| ಮನದೊಳ್ ತ್ರೈಭುವನಮನಾ
     ಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಮಂ|
     ದಿನಿಸಂಧನೃಪಂ ತನ್ನಯ
     ಜನದೊಳ್ ಕೆಲನಱಿಯೆ ಕೃತಕ ಶೋಕಂಗೆಯ್ದಂ|| ೮||
(ಮನದೊಳ್ ತ್ರೈಭುವನಮನ್ ಆಳ್ದ ಅನಿತುವರಂ ತನಗೆ ಸಂತಸಂ ಪೆರ್ಚಿಯುಂ, ಅಂದು ಇನಿಸು ಅಂಧನೃಪಂ, ತನ್ನಯ ಜನದೊಳ್ ಕೆಲನಱಿಯೆ ಕೃತಕ ಶೋಕಂಗೆಯ್ದಂ)
ಮನಸ್ಸಿನ ಒಳಗೆ ಮೂರು ಲೋಕವನ್ನೇ ಆಳಿದಷ್ಟು ಸಂತಸವಾದರೂ ಸಹ, ಕುರುಡದೊರೆಯು, ತನ್ನ ಸುತ್ತಲಿರುವವರಿಗೆ ಗೊತ್ತಾಗುವ ಹಾಗೆ ಕಣ್ಣೀರು ಹಾಕಿ ಕೃತಕಶೋಕವನ್ನು ತೋರಿಸಿದನು.
ವ|| ಆಗಳ್ ನದೀತನೂಜ ಭಾರದ್ವಾಜ ಕೃಪರವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ ವಿದುರಂ ತಾನಱಿದುಮಱಿಯದಂತೆ ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿಕ್ರಿಯೆಗಳಂ ಮಾಡಿ ಮಗುೞೆ ವಂದನನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು ತಾರಾಗಣಂಗಳ್‌ ನಿಂದ ನೆಲೆಯಿಂ ದೆಸೆಯಂ ಪೊೞ್ತುಮನಱಿದು ತೆಂಕಮೊಗದೆ ಪಯಣಂಬೋಗಿ-
(ಆಗಳ್ ನದೀತನೂಜ, ಭಾರದ್ವಾಜ, ಕೃಪರ್ ಅವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ, ವಿದುರಂ ತಾನ್ ಅಱಿದುಂ ಅಱಿಯದಂತೆ ಶೋಕಾಕ್ರಾಂತನಾಗಿ, ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ, ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ, ಜಳದಾನಾದಿಕ್ರಿಯೆಗಳಂ ಮಾಡಿ ಮಗುೞೆ ವಂದನ್. ಅನ್ನೆಗಂ ಇತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು, ತಾರಾಗಣಂಗಳ್‌ ನಿಂದ ನೆಲೆಯಿಂ ದೆಸೆಯಂ, ಪೊೞ್ತುಮನ್ ಅಱಿದು ತೆಂಕಮೊಗದೆ ಪಯಣಂಬೋಗಿ)
ಆಗ ಭೀಷ್ಮ, ದ್ರೋಣ, ಕೃಪರು ಕಣ್ಣೀರು ಸುರಿಸುತ್ತ, ಮೋಡ ಕವಿದ ದಿನದಂತೆ ಬಾಡಿದ ಮುಖ ಹೊತ್ತು ಕೂತರು. ವಿದುರನು ಮಾತ್ರ ತಿಳಿದೂ ತಿಳಿಯದವನಂತೆ, ಶೋಕವನ್ನು ನಟಿಸಿ, ಧೃತರಾಷ್ಟ್ರನ ಅಪ್ಪಣೆಯಂತೆ ವಾರಣಾವತಕ್ಕೆ ಹೋಗಿ, ಆ ಅರ್ಧ ಸುಟ್ಟ ಶವಗಳಿಗೆ ಸಂಸ್ಕಾರ ಮಾಡಿ, ಜಲದಾನವೇ ಮುಂತಾದ ಕ್ರಿಯೆಗಳನ್ನು ಮಾಡಿ ಮರಳಿ ಬಂದನು. ಅಷ್ಟರಲ್ಲಿ ಇತ್ತ ಪಾಂಡವರು ಸುರಂಗದಿಂದ ಹೊರಬಿದ್ದು, ನಕ್ಷತ್ರಗಳು ಇದ್ದ ಸ್ಥಾನದ ಆಧಾರದಿಂದ ದಿಕ್ಕು, ಸಮಯಗಳನ್ನು ತಿಳಿದು ದಕ್ಷಿಣದಿಕ್ಕಿನ ಕಡೆಗೆ ಪಯಣ ಬೆಳೆಸಿ-
ಮ|| ಕಡಕುಂ ಪೆಟ್ಟೆಯುಮೊತ್ತೆ ಮೆಲ್ಲಡಿಗಳಂ ಬಳ್ಕುತ್ತುಮಳ್ಕುತ್ತುಮೋ
     ರಡಿಗೊರ್ಮೊರ್ಮೆ ಕುಳುತ್ತುಮೇೞುತಿರೆ ಕಂಡಿಂತಾಗದಿನ್ನೇೞಿಮೆಂ|
     ದೊಡನಂದಯ್ವರುಮಂ ನಿಜಾಂಸಯುಗದೊಳ್ ಪೊತ್ತೆತ್ತಿ ತಳ್ತೂಳ್ವ ಸೀ
     ಱುಡುವಿಂದದ್ಭುತದಾ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ|| ೯||
(ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ,  ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ  ಕುಳುತ್ತುಂ ಏೞುತಿರೆ ಕಂಡು, ‘ಇಂತಾಗದು, ಇನ್ನೇೞಿಂ’ ಎಂದು, ಒಡನೆ ಅಂದು ಅಯ್ವರುಮಂ ನಿಜಾಂಸಯುಗದೊಳ್ ಪೊತ್ತು ಎತ್ತಿ, ತಳ್ತು ಊಳ್ವ ಸೀಱುಡುವಿಂದ ಅದ್ಭುತದ ಆ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ)
ಕಲ್ಲಿನ ಚೂರುಗಳೂ, ಮಣ್ಣಿನ ಹೆಂಟೆಗಳೂ ಮೆದುವಾದ ಅಂಗಾಲನ್ನು ಚುಚ್ಚುತ್ತಿರಲು, ಪಾಂಡವರು ಬಳುಕುತ್ತ, ಅಳುಕುತ್ತ, ಹೆಜ್ಜೆಗೊಮ್ಮೆ ಕೂತು ಏಳುತ್ತ ನಡೆದು ಬರುತ್ತಿದ್ದರು. ಭೀಮಸೇನನು ಅವರ ಈ ಅವಸ್ಥೆಯನ್ನು ಕಂಡು ‘ಇದು ಸಾಧ್ಯವಿಲ್ಲ, ಇನ್ನು ಏಳಿ’ ಎಂದು ಅವರೆಲ್ಲರನ್ನೂ ಎತ್ತಿ ತನ್ನ ಹೆಗಲ ಮೇಲೆ ಹೊತ್ತುಕೊಂಡು, ಒಟ್ಟಿಗೆ ಏಕಕಾಲಕ್ಕೆ ‘ಜೀರ್’ ಎಂದು ಶಬ್ದ ಹೊರಡಿಸುವ ಜೀರುಂಡೆಗಳಿಂದ ಅದ್ಭುತವೆನಿಸುವ ಹಿಡಿಂಬವನವನ್ನು ಬಂದು ಸೇರಿದನು.
ಚಂ|| ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ
     ಸ್ಪದಮದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕ|
     ಪ್ರದಮದು ನಿರ್ಝರೋಚ್ಚಳಿತ ಶೀಕರ ಶೀತಳ ವಾತ ನರ್ತಿತೋ
     ನ್ಮದ ಶಬರೀ ಜನಾಳಕಮದಾಯತ ವೇತ್ರಲತಾವಿತಾನಕಂ|| ೧೦||
(ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹ ಆಸ್ಪದಂ, ಅದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕಪ್ರದಂ, ಅದು ನಿರ್ಝರ ಉಚ್ಚಳಿತ ಶೀಕರ ಶೀತಳ ವಾತ ನರ್ತಿತ      ಉನ್ಮದ ಶಬರೀ ಜನಾಳಕಂ ಅದು ಆಯತ ವೇತ್ರಲತಾವಿತಾನಕಂ)
(ಆ ಹಿಡಿಂಬವನವು) ಮದಿಸಿದ ಆನೆಗಳ ಒನಕೆಯಂಥ ದಂತಗಳ ಪೆಟ್ಟಿನಿಂದ ಮುರಿದುಬಿದ್ದ ದೊಡ್ಡ ದೊಡ್ಡ ಮರಗಳಿಗೆ ಆಶ್ರಯತಾಣ; ಅಲ್ಲಿ ಸಿಂಹಗಳ ಗರ್ಜನೆಯ ಮಾರ್ದನಿಯು ಹೆದರಿಕೆ ಹುಟ್ಟಿಸುತ್ತದೆ; ಅಲ್ಲಿ ಬೆಟ್ಟದಿಂದ ಧುಮುಕುವ ಜಲಪಾತಗಳಿಂದ ತುಂತುರುಹನಿಗಳು ಮೇಲೆದ್ದು ಬೀಸುವ ಗಾಳಿಯನ್ನು  ತಂಪಾಗಿಸಿ, ಬೇಡ ಹೆಣ್ಣುಗಳ ಗುಂಗುರು ಕೂದಲನ್ನು ಅಲುಗಿಸುತ್ತವೆ; ಬೆತ್ತದ ಬಳ್ಳಿಗಳು ವಿಸ್ತಾರವಾದ ಚಪ್ಪರಗಳನ್ನು ನಿರ್ಮಿಸಿಕೊಂಡು ಆ ಕಾಡನ್ನು ತುಂಬಿಕೊಂಡಿವೆ.
ವ|| ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನೆಯ್ತಂದದಱ ಕೆೞಗಯ್ವರುಮನಿೞಿಪಿದೊಡಧ್ವಾನ ಪದ ಪರಿಶ್ರಮ ಶ್ರಾಂತರ್ ನಿದ್ರಾಭರಪರವಶರಾಗಿರೆ ಭೀಮಂ ಜಾವಮಿರ್ದು ತನ್ನೊಡವುಟ್ಟಿದರ್ಗಾದ ಪ್ರವಾಸಾಯಾಸಂಗಳ್ಗಂ ದೆಸೆಗಂ ಮನ್ಯುಮಿಕ್ಕು ಬರೆ ಕಣ್ಣ ನೀರಂ ತುಂಬಿ-
(ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನ್ ಎಯ್ತಂದು, ಅದಱ ಕೆೞಗೆ ಅಯ್ವರುಮನ್ ಇೞಿಪಿದೊಡೆ, ಅಧ್ವಾನ ಪದ ಪರಿಶ್ರಮ ಶ್ರಾಂತರ್ ನಿದ್ರಾಭರಪರವಶರಾಗಿರೆ, ಭೀಮಂ ಜಾವಂ ಇರ್ದು, ತನ್ನ ಒಡವುಟ್ಟಿದರ್ಗೆ ಆದ ಪ್ರವಾಸಾಯಾಸಂಗಳ್ಗಂ, ದೆಸೆಗಂ, ಮನ್ಯುಮಿಕ್ಕು ಬರೆ ಕಣ್ಣ ನೀರಂ ತುಂಬಿ)
ಆ ಕಾಡಿನ ಅಂತರಾಳದ ನಡುವಿನಲ್ಲಿರುವ ವಿಶಾಲವಾದ ಆಲದ ಮರದ ಸಮೀಪಕ್ಕೆ ಬಂದು, ಅದರ ಕೆಳಗೆ ಐವರನ್ನೂ ಇಳಿಸಿದಾಗ, ಪ್ರಯಾಣದ ಆಯಾಸದಿಂದ ಬಳಲಿದ್ದ ಅವರೆಲ್ಲರೂ ಗಾಢವಾದ ನಿದ್ರೆಗೆ ಜಾರಿದರು! ಭೀಮನು ಅಲ್ಲಿಯೇ ಅವರಿಗೆ ಕಾವಲಿದ್ದು, ತನ್ನ ಒಡಹುಟ್ಟಿದ ಅವರೆಲ್ಲರಿಗೂ ಉಂಟಾದ ಪ್ರಯಾಣದ ಆಯಾಸಕ್ಕೂ, ದೆಸೆಗೂ ಕಂಠ ಬಿಗಿದು ಬಂದು, ಕಣ್ಣುಗಳಲ್ಲಿ ನೀರು ತುಂಬಿಕೊಂಡು-
ಚಂ|| ಭರತನ ವಂಶದೊಳ್ ನೆಗೞ್ದ ಪಾಂಡುಗೆವುಟ್ಟಿಯುಮೀ ಸಮಸ್ತ ಸಾ
     ಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುಮೀ ಮಹೋಗ್ರ ಕೇ|
     ಸರಿ ಕರಿಕಂಠ ಗರ್ಜಿತ ಮಹಾಟವಿಯೊಳ್ ಮಱಕೆಂದಿ ನೀಮುಮೀ
     ಮರದಡಿಯೊಳ್ ಶಿವಾಶಿವ ರವಂಗಳಿನೆೞ್ಚಱುವಂತುಟಾದುದೇ|| ೧೧||
(ಭರತನ ವಂಶದೊಳ್ ನೆಗೞ್ದ ಪಾಂಡುಗೆ ಪುಟ್ಟಿಯುಂ, ಈ ಸಮಸ್ತ ಸಾಗರ ಪರಿವೇಷ್ಟಿತ ಅವನಿಗೆ ವಲ್ಲಭನಾಗಿಯುಂ, ಈ ಮಹೋಗ್ರ ಕೇಸರಿ ಕರಿ ಕಂಠ ಗರ್ಜಿತ ಮಹಾಟವಿಯೊಳ್ ಮಱಕೆಂದಿ, ನೀಮುಂ ಈ ಮರದಡಿಯೊಳ್ ಶಿವಾಶಿವ ರವಂಗಳಿನ್ ಎೞ್ಚಱುವಂತುಟು ಆದುದೇ?)
ಭರತನ ವಂಶದಲ್ಲಿ ಪ್ರಸಿದ್ಧನಾದ ಪಾಂಡುವಿಗೆ ಹುಟ್ಟಿಯೂ, ಕಡಲಿನಿಂದ ಸುತ್ತುವರಿದ ಇಡಿಯ ಭೂಮಿಗೆ ಒಡೆಯನಾಗಿಯೂ ಸಹ, ಸಿಂಹಗಳ ಗರ್ಜನೆ, ಆನೆಗಳ ಘೀಂಕಾರಗಳಿಂದ ತುಂಬಿದ ಕಾಡಿನಲ್ಲಿ ಮರದ ಅಡಿಯಲ್ಲಿ ಮಲಗಿ, ನೀವು ಸಹ ನರಿಗಳ ಅಮಂಗಳಕರವಾದ ಕೂಗಿನಿಂದ ಎಚ್ಚರಗೊಳ್ಳುವಂತಾಯಿತೇ?



ಮಂಗಳವಾರ, ಆಗಸ್ಟ್ 6, 2019




ಪಂಪಭಾರತ ಆಶ್ವಾಸ ೨ ಪದ್ಯಗಳು ೮೭-೯೮

ಚಂ|| ಅವರಿವರನ್ನರಿನ್ನರೆನವೇಡರಿಕೇಸರಿಗಾಂಪನಿಲ್ಲ ಮೀ
     ಱುವ ತಲೆದೋರ್ಪ ಗಂಡರಣಮಿಲ್ಲೆಡೆಯೊಳ್ ಗೆಡೆವಚ್ಚುಗೊಂಡು ಪಾಂ|
     ಡವರನಕಾರಣಂ ಕೆಣಕಿದೀ ಪೊಸ ಪೊೞ್ತಱೊಳಾದ ಕಿರ್ಚು ಕೌ
     ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ|| ೮೭ ||
(ಅವರ್, ಇವರ್, ಅನ್ನರ್, ಇನ್ನರ್ ಎನವೇಡ, ಅರಿಕೇಸರಿಗೆ ಆಂಪನ್ ಇಲ್ಲ, ಮೀಱುವ ತಲೆದೋರ್ಪ ಗಂಡರ್ ಅಣಂ ಇಲ್ಲ,  ಎಡೆಯೊಳ್ ಗೆಡೆವಚ್ಚುಗೊಂಡು ಪಾಂಡವರನ್ ಅಕಾರಣಂ ಕೆಣಕಿದ ಈ ಪೊಸ ಪೊೞ್ತಱೊಳ್ ಆದ ಕಿರ್ಚು, ಕೌರವರ್ಗೆ ಇದು ನಾಡೆಯುಂ ತಿಣುಕನ್ ಆಗಿಸದೆ ಏಂ ಗಳ ಸಯ್ತು ಪೋಕುಮೇ?)
ಅವರು, ಇವರು, ಅಂಥವರು, ಇಂಥವರು ಎಂದೆಲ್ಲ ಹೇಳಬೇಡ! ಅರಿಕೇಸರಿಯನ್ನು ಎದುರಿಸುವವರು ಯಾರೂ ಇಲ್ಲ! ಅವನನ್ನು ಮೀರುವ, ಅವನೆದುರಿಗೆ ತಲೆ ಎತ್ತಿ ನಿಲ್ಲುವ ವೀರರು ಇಲ್ಲವೇ ಇಲ್ಲ. ಈ ನಡುವೆ, ವಿಶ್ವಾಸ ಕಳೆದುಕೊಂಡು, ಪಾಂಡವರನ್ನು ಕಾರಣವೇ ಇಲ್ಲದೆ ಕೆಣಕಿದ ಈ ಹೊಸ ಹೊತ್ತಿನಲ್ಲಿ (ಸಂದರ್ಭದಲ್ಲಿ) ಉಂಟಾದ ಕಿಚ್ಚು, ಕೌರವರಿಗೆ ತೀವ್ರವಾದ ಕಷ್ಟವನ್ನು ಉಂಟುಮಾಡದೆ, ಏನು ಸುಮ್ಮನೆ ಹೋಗಿಬಿಡುತ್ತದೆಯೆ?
ವ|| ಎಂದೊರ್ವರೊರ್ವರೊಂದೊಂದನೆ ನುಡಿಯತ್ತುಂ ಪೋಗೆ ಬೆಳಗುವ ಕೈದೀವಿಗೆಗಳ್ ಕೞ್ತಲೆಯಂ ತಲೆದೋಱಲೀಯದೆ ಪ್ರಚಂಡ ಮಾರ್ತಾಂಡನ ತೇಜೋಂಕುರಂಗಳ್ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರಾಗಳ್-
(ಎಂದು ಒರ್ವರ್ ಒರ್ವರ್ ಒಂದೊಂದನೆ ನುಡಿಯುತ್ತುಂ ಪೋಗೆ, ಬೆಳಗುವ ಕೈದೀವಿಗೆಗಳ್  ಕೞ್ತಲೆಯಂ ತಲೆದೋಱಲ್  ಈಯದೆ ಪ್ರಚಂಡ ಮಾರ್ತಾಂಡನ ತೇಜೋಂಕುರಂಗಳ್ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರ್. ಆಗಳ್)
ಎಂದು ಒಬ್ಬೊಬ್ಬರು ಒಂದೊಂದು ಮಾತನ್ನಾಡುತ್ತ ಹೋಗುತ್ತಿರಲು, ಎಲ್ಲ ಕಡೆಯೂ ಬೆಳಗಿದ ಕೈದೀವಿಗೆಗಳು ಕತ್ತಲೆಗೆ ಅವಕಾಶವನ್ನೇ ಕೊಡದೆ, ಪ್ರಚಂಡ ಮಾರ್ತಾಂಡನ ತೇಜಸ್ಸಿನ ಮೊಳಕೆಗಳಂತೆ ಬೆಳಗಲು, ಪಾಂಡವರು ತಮ್ಮ ಮನೆಗೆ ಹೋದರು. ಆಗ-
ಕಂ|| ಎಸೆವ ನಿಜವಂಶಮಂ ಪೆ
     ರ್ಚಿಸುವ ಗುಣಾರ್ಣವನೊಳುಂತೆ ಸೆಣಸಲ್ಕೆಂದಿ| 
     ರ್ಪ ಸುಯೋಧನಂಗೆ ಮುಳಿಸಿಂ
     ಕಿಸುಗಣ್ಚಿದ ತೆಱದಿನಮೃತಕರನುದಯಿಸಿದಂ|| ೮೮ ||
(ಎಸೆವ ನಿಜವಂಶಮಂ ಪೆರ್ಚಿಸುವ ಗುಣಾರ್ಣವನೊಳ್ ಉಂತೆ ಸೆಣಸಲ್ಕೆಂದಿರ್ಪ ಸುಯೋಧನಂಗೆ ಮುಳಿಸಿಂ ಕಿಸುಗಣ್ಚಿದ ತೆಱದಿನ್ ಅಮೃತಕರನ್ ಉದಯಿಸಿದಂ)
ಪ್ರಕಾಶಿಸುತ್ತಿರುವ ತನ್ನ ವಂಶದ ಪ್ರಭೆಯನ್ನು ಇನ್ನಷ್ಟು ಹೆಚ್ಚಿಸುವ ಅರ್ಜುನನನ್ನು ಸುಮ್ಮನೆ ಜಗಳಕ್ಕೆಳೆಯುವ ದುರ್ಯೋಧನನ ಮೇಲೆ ಕೋಪದಿಂದ ಕಣ್ಣು ಕೆಂಪು ಮಾಡಿಕೊಂಡವನಂತೆ ಚಂದ್ರನು ಉದಯಿಸಿದನು.
ವ|| ಆಗಳ್ ದುರ್ಯೋಧನಂ ಭೀಮಸೇನನ ಬಲ್ಲಾಳ್ತನದಳವುಮಂ ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮಂ ಕಂಡು ತನ್ನೆರ್ದೆಯುಂ ಪೊಳ್ಳುಮರನಂ ಕಿರ್ಚಳುರ್ವಂತೊಳಗೊಳಗುಳುರೆ ಸೈರಿಸಲಾಱದೆ ಕರ್ಣನಂ ಕರೆದಾಳೋಚಿಸಿ ತಮ್ಮಯ್ಯನಲ್ಲಿಗೆ ಪೋಗಿ ಪೊಡಮಟ್ಟು ಕಟ್ಟೇಕಾಂತದೊಳಿಂತೆಂದಂ
(
ಆಗಳ್ ದುರ್ಯೋಧನಂ ಭೀಮಸೇನನ ಬಲ್ಲಾಳ್ತನದ ಅಳವುಮಂ, ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮಂ ಕಂಡು, ತನ್ನ ಎರ್ದೆಯುಂ ಪೊಳ್ಳುಮರನಂ ಕಿರ್ಚು ಅಳುರ್ವಂತೆ ಒಳಗೊಳಗೆ ಅಳುರೆ, ಸೈರಿಸಲಾಱದೆ, ಕರ್ಣನಂ ಕರೆದು ಆಳೋಚಿಸಿ, ತಮ್ಮ ಅಯ್ಯನಲ್ಲಿಗೆ ಪೋಗಿ ಪೊಡಮಟ್ಟು ಕಟ್ಟೇಕಾಂತದೊಳ್ ಇಂತೆಂದಂ)
ಆಗ ದುರ್ಯೋಧನನು ಭೀಮಸೇನನ ಶೌರ್ಯದ ಬಾಹುಳ್ಯವೂ, ವಿಕ್ರಮಾರ್ಜುನನ ದಿವ್ಯಾಸ್ತ್ರಕೌಶಲವೂ - ಪೊಳ್ಳು ಮರವನ್ನು ಒಳಗಿಂದೊಳಗೇ ಬೆಂಕಿ ಸುಡುವಂತೆ - ತನ್ನ ಎದೆಯನ್ನು ಸುಡತೊಡಗಲು, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ, ಕರ್ಣನನ್ನು ಕರೆದು ಅವನೊಂದಿಗೆ ಸಮಾಲೋಚಿಸಿ, ತನ್ನ ತಂದೆಯ ಹತ್ತಿರ ಹೋಗಿ ಕಟ್ಟೇಕಾಂತದಲ್ಲಿ ಹೀಗೆಂದನು:
ಮ|| ಪಿರಿಯರ್ ನೀಮಿರೆ ಪಾಂಡುರಾಜನೆ ವಲಂ ಮುಂ ಪಟ್ಟಮಂ ಕಟ್ಟೆ ಭೂ
     ಭರಮಂ ತಾಳ್ದಿದನೀಗಳಾತನ ಸುತರ್ ತಾಮಾಗಳೇ ಯೋಗ್ಯರಾ|
     ಗರೆ ಪಟ್ಟಕ್ಕೆ ತಗುಳ್ದು ಪಾಲನೆಱೆವಿರ್ ಪಾವಿಂಗೆ ದಾಯಾದ್ಯರಂ
     ಪಿರಿಯರ್ಮಾಡಿದಿರೆಮ್ಮ ಸಾವುಮುೞಿವುಂ ದೈವೇಚ್ಛೆಯಾಯ್ತಾಗದೇ|| ೮೯ || 
(
ಪಿರಿಯರ್ ನೀಂ ಇರೆ, ಪಾಂಡುರಾಜನೆ ವಲಂ ಮುಂ ಪಟ್ಟಮಂ ಕಟ್ಟೆ ಭೂಭರಮಂ ತಾಳ್ದಿದನ್; ಈಗಳ್ ಆತನ ಸುತರ್ ತಾಂ ಆಗಳೇ ಯೋಗ್ಯರಾಗರೆ ಪಟ್ಟಕ್ಕೆ? ತಗುಳ್ದು ಪಾಲನೆಱೆವಿರ್ ಪಾವಿಂಗೆ! ದಾಯಾದ್ಯರಂ ಪಿರಿಯರ್ ಮಾಡಿದಿರಿ! ಎಮ್ಮ ಸಾವುಂ ಉೞಿವುಂ ದೈವೇಚ್ಛೆಯಾಯ್ತಾಗದೇ?)
(ಹಿಂದೆ) ಹಿರಿಯರಾಗಿ ನೀವಿದ್ದರೂ ಸಹ, ಪಾಂಡುರಾಜನಿಗೆ ಪಟ್ಟಾಭಿಷೇಕ ಮಾಡಿದರು, ಅವನೇ ರಾಜ್ಯಭಾರ ಮಾಡಿದನು. ಈಗ ಅವನ ಮಕ್ಕಳು ಬೆಳೆದು ದೊಡ್ಡವರಾಗಿ ಪಟ್ಟಕ್ಕೆ ಅರ್ಹರಾಗಿದ್ದಾರೆ. (ನೀವು) ಮತ್ತೆ ಮತ್ತೆ ಹಾವಿಗೆ ಹಾಲೆರೆಯುತ್ತಿದ್ದೀರಿ! ಸಮಾನರನ್ನು ಹಿರಿಯರಾಗಿ ಮಾಡುತ್ತಿದ್ದೀರಿ! ನಮ್ಮ ಸಾವು ಬದುಕುಗಳು ದೈವೇಚ್ಛೆಯಾಗಿಹೋಯಿತು! ಅಲ್ಲವೆ?
ವ|| ಅದಲ್ಲದೆಯುಂ
ಚಂ|| ಮಲೆ ತಲೆದೋಱದೆಂದುದನೆ ಕೊಟ್ಟುದು ಡಂಗಮಡಂಗಿ ಬಂದುದೊ
     ಕ್ಕಲಿಗವೆಸರ್ಗೆ ಪೂಣ್ದುದು ಕುಱುಂಬು ತಱುಂಬದೆ ಮಿಕ್ಕ ಶತ್ರು ಮಂ
     ಡಳಿಕರೆ ಮಿತ್ರ ಮಂಡಳಿಕರಾದರನಾಕುಳಮಿಂದು ನಾಳೆ ಮಾ
     ರ್ಮಲೆದರನಿಕ್ಕಿ ನಮ್ಮನೆೞೆದಿಕ್ಕುಗುಮೀ ನೆಲೆಯಿಂ ಗುಣಾರ್ಣವಂ|| ೯೦ ||
(ಮಲೆ ತಲೆದೋಱದೆ ಎಂದುದನೆ ಕೊಟ್ಟುದು; ಡಂಗಂ ಅಡಂಗಿ ಬಂದುದು; ಒಕ್ಕಲಿಗವೆಸರ್ಗೆ ಪೂಣ್ದುದು ಕುಱುಂಬು; ತಱುಂಬದೆ ಮಿಕ್ಕ ಶತ್ರು ಮಂಡಳಿಕರೆ ಮಿತ್ರ ಮಂಡಳಿಕರಾದರ್ ಅನಾಕುಳಂ; ಇಂದು-ನಾಳೆ ಮಾರ್ಮಲೆದರನ್ ಇಕ್ಕಿ ನಮ್ಮನ್ ಎೞೆದು ಇಕ್ಕುಗುಂ ಈ ನೆಲೆಯಿಂ ಗುಣಾರ್ಣವಂ.)
ಗುಡ್ಡಗಾಡು ಜನ ಕೇಳಿದ್ದನ್ನು ಮಾತಿಲ್ಲದೆ ಕೊಟ್ಟು ಶರಣಾದರು; ಪರ್ವತಮಾರ್ಗಗಳಲ್ಲಿದ್ದ ಸುಂಕದ ಕಟ್ಟೆಗಳು ಪಾಂಡವರ ವಶವಾದವು; ಸಣ್ಣ ಪಾಳೆಯಪಟ್ಟುಗಳು ತಾವೆಲ್ಲ ಬೇಸಾಯಗಾರರಾಗಿರಲು (ಎಂದರೆ ಯುದ್ಧ ಮಾಡದಿರಲು) ಒಪ್ಪಿಕೊಂಡರು; ಉಳಿದ ವೈರಿ ಸಾಮಂತರುಗಳು ಮಿತ್ರರಾದರು; ಇಂದೋ ನಾಳೆಯೋ ಆ ಅರ್ಜುನನು ಯಾವುದೇ ಕಷ್ಟವಿಲ್ಲದೆ, ವಿರೋಧಿಸಿದವರನ್ನು ಮೆಟ್ಟಿ, ನಮ್ಮನ್ನು ಈ ನೆಲೆಯಿಂದ ಎಳೆದು ಹಾಕುತ್ತಾನೆ!
(ಡಿ.ಎಲ್.ನರಸಿಂಹಾಚಾರ್ಯರ ಪಾಠವನ್ನು ಅನುಸರಿಸಿ ಅರ್ಥ ಮಾಡಲಾಗಿದೆ-ಲೇ.)
ವ|| ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ ಭೀಮಸೇನಂ ಗದೆಗೊಳಲುಮಾಂಪುದರಿದುಪಾಂಶುವಧದೆ ಕೆಯ್ಗೆ ಮಾಡುವುದುತ್ತಮಪಕ್ಷಮಂತುಮಲ್ಲದೆಯುಂ-
(ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ, ಭೀಮಸೇನಂ ಗದೆಗೊಳಲುಂ, ಆಂಪುದು ಅರಿದು. ಉಪಾಂಶುವಧದೆ ಕೆಯ್ಗೆ ಮಾಡುವುದು ಉತ್ತಮಪಕ್ಷಂ. ಅಂತುಂ ಅಲ್ಲದೆಯುಂ) 
ಹಾಗೆ ವಿಕ್ರಮಾರ್ಜುನನು ಬಿಲ್ಲು ಹಿಡಿದರೆ, ಭೀಮಸೇನನು ಗದೆ ಹಿಡಿದರೆ ಅವರನ್ನು ಎದುರಿಸುವುದು ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ಗುಟ್ಟಾಗಿ ಅವರನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಳ್ಳುವುದೇ ಉತ್ತಮವಾದ ಮಾರ್ಗ. ಅದೂ ಅಲ್ಲದೆ-
ಶ್ಲೋ|| ಸ್ವಾಮ್ಯಾರ್ಥಂ ಸ್ವಾಮ್ಯ ವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ
         ಅರ್ಧರಾಜ್ಯಹರಂ ಭೃತ್ಯಂ ಯೋನ ಹನ್ಯಾತ್ಸ ಹನ್ಯತೇ|| 
ತಾನೇ ಸ್ವತಃ ಒಡೆಯನಾಗಲು ಬಯಸುವ, ಒಡೆಯನಾಗಲು ಬೇಕಾದ ಸಾಮರ್ಥ್ಯವಿರುವ, ರಹಸ್ಯಗಳನ್ನು ಅರಿತ, (ತನ್ನ ಉದ್ದೇಶವನ್ನು ಸಾಧಿಸುವ ದಿಕ್ಕಿನಲ್ಲಿ) ಸದಾ ಕಾರ್ಯಶೀಲನಾದ, ಅರ್ಧರಾಜ್ಯವನ್ನು ಅಪಹರಿಸುವ ಸೇವಕನನ್ನು ಯಾರು ಕೊಲ್ಲುವುದಿಲ್ಲವೋ ಅವನು ಸ್ವತಃ ತಾನೇ ಹತನಾಗುತ್ತಾನೆ
ಎಂಬುದರ್ಥಶಾಸ್ತ್ರ ಸದ್ಭಾವಂ
ಉ|| ಮೇಣ್ಕುಲಮಿಲ್ಲೆಯೋ ನಮಗೆ ದಾಯಿಗರಲ್ಲರೊ ಶಸ್ತ್ರವಿದ್ಯೆಯೊಳ್
      ಪೂಣ್ಕೆಗಳಿಲ್ಲೆಯೋ ಧರೆಗೆ ಮುನ್ನವರಯ್ಯನೆ ಮುಖ್ಯನಲ್ಲನೋ|
     ಜಾಣ್ಕಿಱಿದಾಗವೇಡ ಮನದಲ್ ನಿಮಗಯ್ಯ ವಿಧಾತೃಯೋಗದಿಂ
     ಕಣ್ಕುರುಡಾದೊಡೇನೊ ಕುರುಡಾಗಲೆವೇೞ್ಪುದೆ ನಿಮ್ಮ ಬುದ್ಧಿಯುಂ|| ೯೧ ||
(ಮೇಣ್ ಕುಲಂ ಇಲ್ಲೆಯೋ? ನಮಗೆ ದಾಯಿಗರ್ ಅಲ್ಲರೊ? ಶಸ್ತ್ರವಿದ್ಯೆಯೊಳ್ ಪೂಣ್ಕೆಗಳ್ ಇಲ್ಲೆಯೋ? ಧರೆಗೆ ಮುನ್ನ ಅವರ ಅಯ್ಯನೆ ಮುಖ್ಯನಲ್ಲನೋ? ಜಾಣ್ ಕಿಱಿದು ಆಗವೇಡ ಮನದಲ್ ನಿಮಗೆ ಅಯ್ಯ! ವಿಧಾತೃಯೋಗದಿಂ ಕಣ್ ಕುರುಡು ಆದೊಡೆ ಏನೊ? ಕುರುಡು ಆಗಲೆವೇೞ್ಪುದೆ ನಿಮ್ಮ ಬುದ್ಧಿಯುಂ?)
(ಪಾಂಡವರಿಗೆ) ಏನು ಕುಲವಿಲ್ಲವೆ? ಅವರು ನಮ್ಮ ದಾಯಾದಿಗಳಲ್ಲವೆ? ಶಸ್ತ್ರವಿದ್ಯೆಯಲ್ಲಿ ಸಾಧನೆ ಮಾಡಿದವರಲ್ಲವೆ? ರಾಜ್ಯಕ್ಕೆ ಈ ಮೊದಲು ಅವರ ತಂದೆಯೆ ರಾಜನಾಗಿರಲಿಲ್ಲವೆ? ಇವೆಲ್ಲ ಅರ್ಥವಾಗದಷ್ಟು ನಿಮ್ಮ ಮನಸ್ಸು ಕಿರಿದಾಗಬೇಕೆ? ಅಪ್ಪಾ! ಏನೋ ವಿಧಿಬರಹ! ನಿಮ್ಮ ಕಣ್ಣು ಕುರುಡಾಗಿದೆ ನಿಜ; ಆದರೆ ಅದರೊಂದಿಗೆ ನಿಮ್ಮ ಬುದ್ಧಿಯೂ ಕುರುಡಾಗಬೇಕೇ?
ವ|| ಎಂದು ತನ್ನ ಮನದೊಳೊಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರಂ ಮನದೆಗೊಂಡು
(
ಎಂದು ತನ್ನ ಮನದೊಳ್ ಒಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರಂ ಮನದೆಗೊಂಡು)
ಎಂದು ತನ್ನ ಮನಸ್ಸಿಗೆ ಒಪ್ಪುವ ಹಾಗೆ ನುಡಿದ ಮಗನ ಮಾತನ್ನು ಕೇಳಿ ಧೃತರಾಷ್ಟ್ರನು ಮನದುಂಬಿ-
ಉ|| ಏನೆರ್ದೆಗೊಂಡ ಕಜ್ಜಮನೆ ಪೇೞ್ದೆಯೊ ಚಿಂತಿಸುತಿರ್ಪೆನಾನುಮೇ
     ನಾನುಮುಪಾಯಮಂ ಬಗೆವರಂತವರ್ಗಳ್ ನಿನಗೆಂದೆ ಕಂದ ಪೇೞ್|
     ನೀನಿರೆ ಪಟ್ಟಮುಂ ನೆಲನುಮಪ್ಪುದನೊಲ್ವೆನೆ ವೈರಿಗಳ್ಗೆ ನೀ
     ನೇನುಮದರ್ಕೆ ಚಿಂತಿಸದಿರಿಲ್ಲಿರಲೀವೆನೆ ಪಾಂಡುಪುತ್ರರಂ|| ೯೨ ||
(
ಏನ್ ಎರ್ದೆಗೊಂಡ ಕಜ್ಜಮನೆ ಪೇೞ್ದೆಯೊ! ಚಿಂತಿಸುತಿರ್ಪೆನ್ ಆನುಂ. ಏನಾನುಂ ಉಪಾಯಮಂ ಬಗೆವರ್ ಅಂತು ಅವರ್ಗಳ್ ನಿನಗೆಂದೆ! ಕಂದ ಪೇೞ್ ನೀನಿರೆ ಪಟ್ಟಮುಂ ನೆಲನುಂ ಅಪ್ಪುದನ್ ಒಲ್ವೆನೆ ವೈರಿಗಳ್ಗೆ? ನೀನೇನುಂ ಅದರ್ಕೆ ಚಿಂತಿಸದಿರು! ಇಲ್ಲಿ ಇರಲ್ ಈವೆನೆ ಪಾಂಡುಪುತ್ರರಂ?)
ನನ್ನ ಮನಸ್ಸಿನಲ್ಲಿದ್ದುದನ್ನೇ ನೀನೂ ಹೇಳಿದೆಯಲ್ಲ! ನನಗೂ ಪ್ರತಿದಿನ ಅದೇ ಚಿಂತೆಯಾಗಿದೆ. ನಿನ್ನ ವಿರುದ್ಧವಾಗಿ ಅವರು ಏನಾದರೂ ಸಂಚನ್ನು ಮಾಡಿಯೇ ಮಾಡುತ್ತಾರೆ! ಕಂದಾ! ನೀನಿರುವಾಗ ಪಟ್ಟ, ರಾಜ್ಯಗಳು ವೈರಿಗಳ ಪಾಲಾಗುವುದು ನನಗೆ ಇಷ್ಟವೆ? ನೀನು ಅದರ ಚಿಂತೆಯನ್ನು ಬಿಟ್ಟುಬಿಡು! ಪಾಂಡುಪುತ್ರರನ್ನು ಇಲ್ಲಿಯೇ ಉಳಿಯಲು ನಾನು ಬಿಡುತ್ತೇನೆಯೆ?
ವ|| ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇೞ್ದು ಪಾಂಡವರಯ್ವರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನೇಱಿಸಿಕೊಂಡು ದುರ್ಯೋಧನನಪ್ಪೊಡೆ ಪೊಲ್ಲ ಮಾನಸನಾತನುಂ ನೀಮುಮೊಂದೆಡೆಯೊಳಿರೆ ಕಿಸುಱುಂ ಕಲಹಮುಮೆಂದುಂ ಕುಂದದದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತಮೆಂಬುದು ಪೊೞಲ್ ಕುರುಜಾಂಗಣ ವಿಷಯಕ್ಕೆ ತಿಳಕಮಪ್ಪಂತಿರ್ದುದಲ್ಲಿಗೆ ಪೋಗಿ ಸುಖಮಿರಿಮೆಂದೊಡಂತೆಗೆಯ್ವೆಮೆಂದು ಬೀೞ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಂ ಕುಂತಿಗಂ ತದ್ವೃತ್ತಾಂತಮನಱಿಪಿದರನ್ನೆಗಮಿತ್ತ ದುರ್ಯೋಧನನವರ ಪೋಗನಱಿದು ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮಂ ಚರ್ಚಿಸಿ ವಾರಣಾವತಮನೊಂದೇ ದಿವಸದೊಳೆಯ್ದುವಂತಾಗೆ ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ ನೆರಂಬೇೞ್ದು ಕಳಿಪಿದನಾಗಳ್-  
(
ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇೞ್ದು, ಪಾಂಡವರ್ ಅಯ್ವರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನ್ ಏಱಿಸಿಕೊಂಡು,ದುರ್ಯೋಧನನ್ ಅಪ್ಪೊಡೆ ಪೊಲ್ಲ ಮಾನಸನ್. ಆತನುಂ ನೀಮುಂ ಒಂದೆಡೆಯೊಳಿರೆ ಕಿಸುಱುಂ ಕಲಹಮುಂ ಎಂದುಂ ಕುಂದದು. ಅದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತಮೆಂಬುದು ಪೊೞಲ್ ಕುರುಜಾಂಗಣ ವಿಷಯಕ್ಕೆ ತಿಳಕಂ ಅಪ್ಪಂತೆ ಇರ್ದುದು, ಅಲ್ಲಿಗೆ ಪೋಗಿ ಸುಖಮಿರಿಂ’ ಎಂದೊಡೆ ‘ಅಂತೆಗೆಯ್ವೆಂ’ ಎಂದು ಬೀೞ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಂ ಕುಂತಿಗಂ ತದ್ವೃತ್ತಾಂತಮನ್ ಅಱಿಪಿದರ್. ಅನ್ನೆಗಂ ಇತ್ತ ದುರ್ಯೋಧನನ್ ಅವರ ಪೋಗನ್ ಅಱಿದು ಪುರೋಚನನೆಂಬ ತನ್ನ ಮನದನ್ನನ್ ಅಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮಂ ಚರ್ಚಿಸಿ ವಾರಣಾವತಮನ್ ಒಂದೇ ದಿವಸದೊಳ್ ಎಯ್ದುವಂತಾಗೆ ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ ನೆರಂಬೇೞ್ದು ಕಳಿಪಿದನ್. ಆಗಳ್-

ಎಂದು ದುರ್ಯೋಧನನನ್ನು ಮನೆಗೆ ಹೋಗಲು ಹೇಳಿ, ಧೃತರಾಷ್ಟ್ರನು, ಪಾಂಡವರನ್ನು ಕರೆಸಿಕೊಂಡು, ತೊಡೆಯ ಮೇಲೆ ಕೂರಿಸಿಕೊಂಡು, ‘ದುರ್ಯೋಧನನಾದರೋ ಕೆಟ್ಟ ಮನುಷ್ಯ. ಅವನೂ ನೀವೂ ಒಂದೇ ಕಡೆ ಇದ್ದರೆ ನಿತ್ಯವೂ ಜಗಳ, ಮನಸ್ತಾಪಗಳು ತಪ್ಪಿದ್ದಲ್ಲ. ಆದ್ದರಿಂದ ನೀವು ಗಂಗಾನದಿಯ ದಕ್ಷಿಣ ದಂಡೆಯಲ್ಲಿರುವ, ಹಸ್ತಿನಾಪುರಕ್ಕೆ ತಿಲಕದಂತಿರುವ ವಾರಣಾವತಕ್ಕೆ ಹೋಗಿ ಸುಖವಾಗಿರಿ’ ಎಂದು ಹೇಳಿದನು. ಪಾಂಡವರು ಹಾಗೆಯೇ ಮಾಡುವುದಾಗಿ ಒಪ್ಪಿ, ಧೃತರಾಷ್ಟ್ರನನ್ನು ಬೀಳ್ಕೊಂಡು, ಮನೆಗೆ ಬಂದು ಗಾಂಗೇಯ, ದ್ರೋಣ, ಕೃಪ, ವಿದುರರಿಗೂ ತಾಯಿಯಾದ ಕುಂತಿಗೂ ಈ ವಿಷಯವನ್ನು ತಿಳಿಸಿದರು. ಅಷ್ಟರಲ್ಲಿ ಇತ್ತ ದುರ್ಯೋಧನನು ಪಾಂಡವರು ಹೋಗುವ ಸಮಾಚಾರವನ್ನು ತಿಳಿದು, ಪುರೋಚನನೆಂಬ ತನ್ನ ಆಪ್ತನನ್ನು ಕರೆದು ಅರಗಿನ ಮನೆಯ ವಿಷಯವನ್ನು ಅವನೊಂದಿಗೆ ಚರ್ಚಿಸಿ, ವಾರಣಾವತವನ್ನು ಒಂದೇ ದಿನದಲ್ಲಿ ಸೇರುವ ಹಾಗೆ ರಥವನ್ನು ಏರ್ಪಡಿಸಿ, ಅವನೊಂದಿಗೆ ನಾಲ್ಕು ಲಕ್ಷ ಸೈನ್ಯವನ್ನು ನೆರವಿಗಾಗಿ ಕಳುಹಿಸಿಕೊಟ್ಟನು. ಆಗ-
ಕಂ|| ಉದಿತೋದಿತನೈ ನೀಂ ನಿನ
     ಗುದಯದ ಮೇಲುದಯಮೆಂದು ನೆಗೞ್ದರಿಗಂಗ|
     ಭ್ಯುದಯಮನಱಿಪುವ ತೆಱದಿಂ
     ದುದಯಾಚಳಚುಂಬಿಬಿಂಬನಿನನುದಯಿಸಿದಂ|| ೯೩ ||
(
ಉದಿತೋದಿತನೈ ನೀಂ! ನಿನಗೆ ಉದಯದ ಮೇಲೆ ಉದಯಂ ಎಂದು ನೆಗೞ್ದ ಅರಿಗಂಗೆ ಅಭ್ಯುದಯಮನ್ ಅಱಿಪುವ ತೆಱದಿಂದ ಉದಯಾಚಳ ಚುಂಬಿಬಿಂಬನ್, ಇನನ್, ಉದಯಿಸಿದಂ)
‘ನೀನು ತುಂಬ ಪ್ರಸಿದ್ಧನಾದವನು. ಶಾಸ್ತ್ರವನ್ನು ತಿಳಿದವನು. ನಿನಗೆ ಶ್ರೇಯಸ್ಸಿನ ಮೇಲೆ ಶ್ರೇಯಸ್ಸಾಗಲಿ’ ಎನ್ನುತ್ತ ಅರ್ಜುನನಿಗೆ – ಅರಿಕೇಸರಿಗೆ – ಅಭ್ಯುದಯವನ್ನು ತಿಳಿಸುವಂತೆ, ಉದಯಗಿರಿಗೆ ಮುತ್ತಿಡುತ್ತಿರುವ ಗುಂಡಾದ ಸೂರ್ಯನು ಮೂಡಿಬಂದನು.
ವ|| ಪ್ರಸ್ತಾವದೊಳ್ ಮಂಗಳಪಾಠಕರ ಮಂಗಳವೃತ್ತೋಚ್ಚಾರಣೆಗಳಿಂದಂ ಪಾಂಡವರಯ್ವರುಮುನ್ಮೀಲಿತನಯನರಾಗಿ ನಿತ್ಯನಿಯಮಂಗಳಂ ನಿರ್ವರ್ತಿಸಿ ಮಂಗಳವಸದನಂಗೊಂಡು ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನಿಕ್ಕುವ ಸೇಸೆಗಳುಮನಾಂತುಕೊಳುತ್ತುಂ ಪಲವುಂ ತೆಱದ ಪ್ರಯಾಣ ಪಟಹಂಗಳೆಸೆಯೆ ಶುಭ ಲಕ್ಷಣ ಲಕ್ಷಿತಂಗಳಪ್ಪಾಜಾನೇಯ ಕಾಂಭೋಜ ವಾಜಿರಾಜಿಗಳೊಳ್ ಪೂಡಿದ ದಿವ್ಯರಥಂಗಳನೇಱಿ ದಿವ್ಯಬಾಣಾಸನ ಬಾಣಪಾಣಿಗಳಾಗಿ ನಿಜಪರಿಜನಂ ಬೆರಸು ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೞಲ್ದು ಸೈರಿಸಲಾಱದೆ
(
ಪ್ರಸ್ತಾವದೊಳ್, ಮಂಗಳಪಾಠಕರ ಮಂಗಳವೃತ್ತೋಚ್ಚಾರಣೆಗಳಿಂದಂ ಪಾಂಡವರಯ್ವರುಂ ಉನ್ಮೀಲಿತನಯನರಾಗಿ, ನಿತ್ಯನಿಯಮಂಗಳಂ ನಿರ್ವರ್ತಿಸಿ, ಮಂಗಳವಸದನಂಗೊಂಡು, ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನ್, ಇಕ್ಕುವ ಸೇಸೆಗಳುಮನ್ ಆಂತುಕೊಳುತ್ತುಂ, ಪಲವುಂ ತೆಱದ ಪ್ರಯಾಣ ಪಟಹಂಗಳ್ ಎಸೆಯೆ, ಶುಭ ಲಕ್ಷಣ ಲಕ್ಷಿತಂಗಳಪ್ಪ ಆ ಜಾನೇಯ ಕಾಂಭೋಜ ವಾಜಿರಾಜಿಗಳೊಳ್ ಪೂಡಿದ ದಿವ್ಯರಥಂಗಳನ್ ಏಱಿ, ದಿವ್ಯಬಾಣಾಸನ ಬಾಣಪಾಣಿಗಳಾಗಿ, ನಿಜಪರಿಜನಂ ಬೆರಸು, ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ, ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಅೞಲ್ದು ಸೈರಿಸಲಾಱದೆ)
ವ| ಆ ಸಮಯದಲ್ಲಿ ಬೆಳಗಿನ ಮಂಗಳವಾಚಕರು ಮಂಗಳವೃತ್ತಗಳನ್ನು ಓದುತ್ತಿರುವಂತೆ ಪಾಂಡವರು ನಿದ್ರೆಯಿಂದೆದ್ದು, ನಿತ್ಯನಿಯಮಗಳನ್ನು ಪೂರೈಸಿ, ಮಂಗಳಕರವಾದ ಅಲಂಕಾರಗಳನ್ನು ಮಾಡಿಕೊಂಡು, ಮಹಾಬ್ರಾಹ್ಮಣರು ಹರಸುವ ಹರಕೆಗಳನ್ನೂ, ಎರಚುವ ಮಂತ್ರಾಕ್ಷತೆಗಳನ್ನೂ ಪಡೆದುಕೊಳ್ಳುತ್ತ, ಹಲವು ತೆರದ ತಮಟೆಯ ನಾದ ಹೊಮ್ಮುತ್ತಿರಲು, ಕಾಂಭೋಜದೇಶದ ಉತ್ತಮ ತಳಿಯ ಕುದುರೆಗಳನ್ನು ಕಟ್ಟಿದ ರಥಗಳನ್ನೇರಿ, ದಿವ್ಯವಾದ ಬಿಲ್ಲು ಬಾಣಗಳನ್ನು ಹಿಡಿದುಕೊಂಡು ಭೀಷ್ಮ, ದ್ರೋಣ, ಕೃಪ, ವಿದುರರು ಕಳಿಸಿಕೊಡಲೆಂದು ಜೊತೆಗೆ ಬರುತ್ತಿರಲು, ಪುರಜನರೆಲ್ಲರೂ ಒಟ್ಟಾಗಿ ಸೇರಿ ಪಾಂಡವರ ಅಗಲಿಕೆಯಿಂದಾದ ವ್ಯಥೆಯನ್ನು ಸೈರಿಸಲಾರದೆ
ಚಂ|| ಮನದೊಳಲಂಪು ಪೊಣ್ಮೆ ನುಡಿದುಂ ನಡೆ ನೋಡಿಯುಮಾಟಪಾಟಮುಂ
     ಬಿನದಮುಮಾರುಮಂ ಮಱೆಯಿಸುತ್ತಿರೆ ಬೀದಿಗಳೊಳ್ ವಿಳಾಸದೊ|
     ಡ್ಡೆನಿಸಿ ತೊೞಲ್ವ ಪಾಂಡವರ ಪೋಗಿನೊಳುಂತೆ ಬೆಡಂಗುಗೆಟ್ಟು
     ಸ್ತಿನಪುರಮಿಂದು ರಕ್ಕಸನ ತಿಂದ ಪೊೞಲ್ಗೆಣೆಯಾಗದಿರ್ಕುಮೇ|| ೯೪ ||
 (ಮನದೊಳ್ ಅಲಂಪು ಪೊಣ್ಮೆ ನುಡಿದುಂ, ನಡೆ ನೋಡಿಯುಂ, ಆಟಪಾಟಮುಂ ಬಿನದಮುಂ ಆರುಮಂ ಮಱೆಯಿಸುತ್ತಿರೆ, ಬೀದಿಗಳೊಳ್ ವಿಳಾಸದ ಒಡ್ಡೆನಿಸಿ ತೊೞಲ್ವ ಪಾಂಡವರ ಪೋಗಿನೊಳ್ ಉಂತೆ ಬೆಡಂಗುಗೆಟ್ಟು, ಹಸ್ತಿನಪುರಂ ಇಂದು ರಕ್ಕಸನ ತಿಂದ ಪೊೞಲ್ಗೆ ಎಣೆಯಾಗದೆ ಇರ್ಕುಮೇ)
ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡು ಮಾತಾಡುತ್ತ, ನೋಡಲು ಚೆನ್ನಾಗಿ ಕಾಣಿಸುತ್ತ, ತಮ್ಮ ಆಟಪಾಠಗಳಿಂದ, ವಿನೋದಗಳಿಂದ ಎಲ್ಲರನ್ನೂ ಮೈಮರೆಸುತ್ತ, ಬೀದಿಗಳಲ್ಲಿ ಉತ್ಸಾಹದ ಚಿಲುಮೆಯಂತೆ ತಿರುಗಾಡುವ ಪಾಂಡವರು (ಊರು ಬಿಟ್ಟು) ಹೋಗುತ್ತಿರುವುದರಿಂದ ಹಸ್ತಿನಾಪುರವು ತನ್ನ ಚೈತನ್ಯವನ್ನು ಕಳೆದುಕೊಂಡು, ರಕ್ಕಸನು ತಿಂದುಳಿಸಿದ ಊರಿನ ಹಾಗೆ ಕಾಣುವುದಿಲ್ಲವೇ?
ವ|| ಎಂದು ಕಣ್ಣನೀರಂ ನೆಗಪೆ
ಎಂದು ಕಣ್ಣೀರನ್ನು ತುಂಬಿಕೊಂಡಾಗ
ಚಂ|| ಪರಸುವ ಪೌರವೃದ್ಧರ ಕುಲಾಂಗನೆಯರ್ಕಳ ಸಾಧು ವಾದದೊಳ್ 
     ಬೆರಸಿ ಸಮಂತು ಸೂಸುವ ಜಲಾರ್ದ್ರಲಸದ್ಧವಳಾಕ್ಷತಂಗಳೊಳ್|
     ಬೆರಸಿದ ತಣ್ಪನೆತ್ತಿ ಕವಿದೆತ್ತಿದ ಬಾಸಿಗದೊಂದು ಕಂಪಿನೊಳ್
     ಪೊರೆದು ಮದಾಳಿಗಳ್ವೆರಸು ಬಂದುದದೊಂದನುಕೂಲ ಮಾರುತಂ|| ೯೫ ||
(
ಪರಸುವ ಪೌರವೃದ್ಧರ, ಕುಲಾಂಗನೆಯರ್ಕಳ ಸಾಧು ವಾದದೊಳ್ ಬೆರಸಿ,  ಸಮಂತು ಸೂಸುವ ಜಲಾರ್ದ್ರ ಲಸದ್ಧವಳಾಕ್ಷತಂಗಳೊಳ್ ಬೆರಸಿದ ತಣ್ಪನೆತ್ತಿ, ಕವಿದು ಎತ್ತಿದ ಬಾಸಿಗದ ಒಂದು ಕಂಪಿನೊಳ್ ಪೊರೆದು, ಮದಾಳಿಗಳ್ವೆರಸು ಬಂದುದು ಅದೊಂದು ಅನುಕೂಲ ಮಾರುತಂ)
ಹರಸುತ್ತಿರುವ ಊರಿನ ಹಿರಿಯರ, ಕುಲಾಂಗನೆಯರ ಒಳ್ಳೆಯ ಮಾತುಗಳಿಂದ ಕೂಡಿ, ಅವರು ಎರಚುವ ಒದ್ದೆಯಾಗಿ ಹೊಳೆಯುತ್ತಿರುವ ಬಿಳಿಯ ಮಂತ್ರಾಕ್ಷತೆಯನ್ನು ಎತ್ತಿಕೊಂಡು, ಬಾಸಿಗದ ಸುಗಂಧವನ್ನು ಲೇಪಿಸಿಕೊಂಡು, ಸೊಕ್ಕಿದ ದುಂಬಿಗಳ ಸಮೇತವಾಗಿ ಒಂದು ಹಿತವಾದ ಗಾಳಿ ಬೀಸಿ ಬಂದಿತು
ವ|| ಅಂತು ಪೊೞಲಂ ಪೊಱಮಡೆ ಬೞಿಯನೆ ತಗುಳ್ದು ಬರ್ಪ ತಮ್ಮೊಡನಾಡಿಗಳಪ್ಪ ಮೇಳದ ಸಬ್ಬವದ ನಗೆಯ ತೆಗೞಿನವರನೆಮ್ಮ ಬೞಿಯಟ್ಟಿದಂದು ಬನ್ನಿಮೆಂದು ಪ್ರಿಯಂ ನುಡಿದಿರಿಸಿ ಕಿಱಿದಂತರಂ ಬಂದೊಂದು ತಾವರೆಗೆಱೆಯ ಮೊದಲೊಳ್ ನಿಂದು ಭೀಷ್ಮ ದ್ರೋಣ ಕೃಪ ವಿದುರರ್ಕಳನೆಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಿಮೆನೆ
(
ಅಂತು ಪೊೞಲಂ ಪೊಱಮಡೆ ಬೞಿಯನೆ ತಗುಳ್ದು ಬರ್ಪ ತಮ್ಮ ಒಡನಾಡಿಗಳಪ್ಪ ಮೇಳದ, ಸಬ್ಬವದ, ನಗೆಯ, ತೆಗೞಿನವರನ್ ‘ಎಮ್ಮ ಬೞಿಯಟ್ಟಿದಂದು ಬನ್ನಿಂ’ ಎಂದು ಪ್ರಿಯಂ ನುಡಿದು ಇರಿಸಿ, ಕಿಱಿದು ಅಂತರಂ ಬಂದು ಒಂದು ತಾವರೆಗೆಱೆಯ ಮೊದಲೊಳ್ ನಿಂದು, ಭೀಷ್ಮ ದ್ರೋಣ ಕೃಪ ವಿದುರರ್ಕಳನ್ ‘ಎಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಿಂ’ ಎನೆ)
ಹಾಗೆ ಊರು ಬಿಟ್ಟು ಹೊರಟಾಗ, ಹಿಂದೆಯೇ ಅನುಸರಿಸಿಕೊಂಡು ಬಂದ ತಮ್ಮ ಒಡನಾಡಿಗಳಾದ ಪರಿಚಾರಕರು, ವಿನೋದದವರು, ಹಾಸ್ಯದವರು, ನಿಂದಕರು ಇವರೆಲ್ಲರನ್ನೂ ‘ನಾವು ಹೇಳಿಕಳಿಸಿದಾಗ ಬನ್ನಿ’ ಎಂದು ಒಳ್ಳೆಯ ಮಾತುಗಳಲ್ಲಿ ಹೇಳಿ, ಅವರನ್ನು ಅಲ್ಲಿಯೇ ಬಿಟ್ಟು, ಸ್ವಲ್ಪ ದೂರ ಬಂದು ಒಂದು ತಾವರೆಗೆರೆಯ ಸಮೀಪದಲ್ಲಿ ನಿಂತು ಭೀಷ್ಮ, ದ್ರೋಣ, ಕೃಪ, ವಿದುರರುಗಳಿಗೆ ‘ನಮಗೆ ತಕ್ಕ ಬುದ್ಧಿಮಾತುಗಳನ್ನು ಹೇಳಿ ಮರಳಿರಿ’ ಎನ್ನಲು-
ಕಂ|| ನಡಪಿಯುಮೋದಿಸಿಯುಂ ಬಿ
     ಲ್ವಿಡಿಯಿಸಿಯುಂ ಕೆಚ್ಚುವಿರ್ದ ಕೂರ್ಮೆಗಳೆರ್ದೆಯಂ|
     ನಡೆ ಪಾಂಡುಸುತರಗಲ್ಕೆಗೆ
     ನಿಡುಸುಯ್ದರ್ ದ್ರೋಣ ಭೀಷ್ಮ ಕೃಪ ವಿದುರರ್ಕಳ್|| ೯೬ ||
(
ನಡಪಿಯುಂ, ಓದಿಸಿಯುಂ, ಬಿಲ್ವಿಡಿಯಿಸಿಯುಂ ಕೆಚ್ಚುವಿರ್ದ ಕೂರ್ಮೆಗಳ್ ಎರ್ದೆಯಂ ನಡೆ, ಪಾಂಡುಸುತರ ಅಗಲ್ಕೆಗೆ     ನಿಡುಸುಯ್ದರ್ ದ್ರೋಣ ಭೀಷ್ಮ ಕೃಪ ವಿದುರರ್ಕಳ್)
ಸಾಕಿ ಸಲಹಿ ಅಕ್ಷರ ವಿದ್ಯೆಯನ್ನೂ, ಬಿಲ್ವಿದ್ಯೆಯನ್ನೂ ಕಲಿಸಿ, ಹೃದಯಕ್ಕೆ ಪ್ರೀತಿಯಿಂದ ಅಂಟಿಕೊಂಡಂತಿದ್ದ ಪಾಂಡವರನ್ನು ಅಗಲಬೇಕಾಯಿತಲ್ಲಾ ಎಂದು ಭೀಷ್ಮ, ದ್ರೋಣ, ಕೃಪ, ವಿದುರರು ನಿಟ್ಟುಸಿರು ಬಿಟ್ಟರು.
ವ|| ಆಗಳ್ ವಿದುರಂ ಕೆಲನಱಿಯದಂತುಮವರಱಿವಂತುಂ ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ ನಂಜಿನ ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಮೆಂದೊಡಂತೆ ಗೆಯ್ವೆಮೆಂದವರನಿರಲ್ವೇೞ್ದು ಪಯಣಂಬೋಗಿ
(
ಆಗಳ್ ವಿದುರಂ ಕೆಲನ್ ಅಱಿಯದಂತುಂ ಅವರ್ ಅಱಿವಂತುಂ,ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ, ನಂಜಿನ, ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಂ’ ಎಂದೊಡೆ ‘ಅಂತೆಗೆಯ್ವೆಂ’ ಎಂದು ಅವರನ್ ಇರಲ್ವೇೞ್ದು ಪಯಣಂಬೋಗಿ)
ಆಗ ವಿದುರನು ಅಕ್ಕಪಕ್ಕದವರಿಗೆ ತಿಳಿಯದಂತೆ, ಪಾಂಡವರು ಮಾತ್ರ ತಿಳಿಯುವಂತೆ ‘ಮಾರ್ಗದ, ವಿಷದ, ಉರಿಯ ವಿಷಯಕ್ಕೆ ವಿಶೇಷವಾಗಿ ಪ್ರಯತ್ನಪರರಾಗಿ (ಗಮನ ವಹಿಸಿ) ಎಂದನು. ಪಾಂಡವರು ‘ಹಾಗೆಯೇ ಮಾಡುತ್ತೇವೆ’ ಎಂದು ಅವರನ್ನು ಅಲ್ಲಿಯೇ ಬಿಟ್ಟು ಪಯಣವನ್ನು ಮಂದುವರಿಸಿ-
ಕಂ|| ಪೊಳಪಿನ ಕಿರಣದ ಗಾಳಿಯ
     ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್|
     ತಳರ್ದು ನೆಲೆಯಿಂದಮಾಗಳ್
     ಕೊಳದಿಂ ಪೊಱಮಟ್ಟ ಹಂಸೆಗಳ್ಗೆಣೆಯಾದರ್|| ೯೭ ||
(
ಪೊಳಪಿನ ಕಿರಣದ, ಗಾಳಿಯ ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್, ತಳರ್ದು ನೆಲೆಯಿಂದಂ ಆಗಳ್      ಕೊಳದಿಂ ಪೊಱಮಟ್ಟ ಹಂಸೆಗಳ್ಗೆ ಎಣೆಯಾದರ್)
ಬಿರುಬಿಸಿಲಿನ, ಬೀಸುವ ಗಾಳಿಯ ಹೊಡೆತವನ್ನು ಸೈರಿಸಲಾರದೆ, ಹೂವಿನ ಎಸಳುಗಳ ಹಾಗೆ ಕೋಮಲರಾದ ಆ ಹುಡುಗರು ತಾವು ಬೆಳೆದ ಊರಿನಿಂದ ಹೊರಹೊರಟು, ಸರೋವರದಿಂದ ಹೊರಬಿದ್ದ ಹಕ್ಕಿಗಳಂತೆ ಕಂಡರು.
ವ|| ಆಗಿ ತಾವಾದಿಗರ್ಭೇಶ್ವರರಪ್ಪುದಱಿಂ ತಳರ್ದೆಡೆಯೆಡೆಯ ಮರಂಗಳ ತೊಱೆಗಳ ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನಜನ್ನವಿರಂಗಳುಮನವರ ಪರಕೆಯುಮಂ ಕೆಯ್ಕೊಳುತ್ತುಮವರ್ಗೆ ಬಾಧೆಯಾಗದಂತು ಕಾಪಂ ನಿಯಮಿಸುತ್ತುಂ ಕಾಲೂರ್ಗಳ ಗಂಡರ ಪೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಗುತ್ತುಮಲ್ಲಿಗಲ್ಲಿಗೊಡೆದ ಕೆಱೆಗಮೞಿದಾಯತನಕ್ಕಂ ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ ಬೀಡುದಾಣಂಗಳೊಳಿಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು
(
ಆಗಿ ತಾವು ಆದಿಗರ್ಭೇಶ್ವರರ್ ಅಪ್ಪುದಱಿಂ, ತಳರ್ದು ಎಡೆಯೆಡೆಯ ಮರಂಗಳ, ತೊಱೆಗಳ, ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ,  ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನಜನ್ನವಿರಂಗಳುಮನ್ ಅವರ ಪರಕೆಯುಮಂ ಕೆಯ್ಕೊಳುತ್ತುಂ, ಅವರ್ಗೆ ಬಾಧೆಯಾಗದಂತು ಕಾಪಂ ನಿಯಮಿಸುತ್ತುಂ, ಕಾಲೂರ್ಗಳ ಗಂಡರ ಪೆಂಡಿರ ನಡೆಯ ಉಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಗುತ್ತುಂ, ಅಲ್ಲಿಗಲ್ಲಿಗೆ ಒಡೆದ ಕೆಱೆಗಂ, ಅೞಿದ ಆಯತನಕ್ಕಂ ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ, ಬೀಡುದಾಣಂಗಳೊಳ್ ಇಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು)
ಆಗಿ ತಾವು ಆಗರ್ಭ ಶ್ರೀಮಂತರಾದುದರಿಂದ ಹೊರಟ ದಾರಿಯಲ್ಲಿ ಅಲ್ಲಲ್ಲಿ ಇರುವ ಮರಗಳ, ತೊರೆಗಳ ಗ್ರಾಮಗಳ ಹೆಸರುಗಳನ್ನು ವಿಚಾರಿಸುತ್ತ, ದೊಡ್ಡ ಅಗ್ರಹಾರಗಳ ಮಹಾಜನರು ಕೊಟ್ಟ ಬಂಗಾರದ ಜನಿವಾರಗಳನ್ನೂ, ಅವರ ಹರಕೆಗಳನ್ನೂ ಪಡೆದುಕೊಳ್ಳುತ್ತ, ಅವರಿಗೆ ತೊಂದರೆಗಳು ಬಾರದಂತೆ ಕಾವಲು ನಿಯಮಿಸುತ್ತ, ಹಳ್ಳಿಯ ಗಂಡು-ಹೆಣ್ಣುಗಳ ನಡೆ-ನುಡಿಗೆ, ಅಲಂಕಾರಕ್ಕೆ, ಮಾತಿನ ರೀತಿಗೆ, ತಲೆಗೂದಲು ಗಂಟು ಹಾಕುವ ಚೆಂದಕ್ಕೆ, ಮುಗ್ಧತೆಗೆ ಮುಗುಳ್ನಗೆ ನಗುತ್ತ, ಅಲ್ಲಲ್ಲಿ ಒಡೆದು ಹೋದ ಕೆರೆಗಳನ್ನು, ಅಳಿದು ಹೋದ ದೇವಸ್ಥಾನಗಳನ್ನು ಹಣ ಕೊಟ್ಟು ಜೀರ್ಣೋದ್ಧಾರ ಮಾಡಿಸುತ್ತ, ಬೀಡು ಬಿಡುವ ಸ್ಥಳಗಳಲ್ಲಿ ಹಾಕಿದ ಬಳ್ಳಿಯ ಚಪ್ಪರಗಳ ಕೆಳಗೂ, ಮೊಗ್ಗಿನ ಚಪ್ಪರಗಳ ಕೆಳಗೂ ವಿಶ್ರಮಿಸಿಕೊಳ್ಳುತ್ತ ಬಂದು
ಚಂ|| ಎಡಱಱಿದೀವ ಕಲ್ಪತರುವೆಂದು ವನೀಪಕಕೋಟಿ ಸಂತಸಂ
     ಬಡೆ ಪೊಡೆವೊಂದಕಾಳವಿಳಯಾಶನಿಯೆಂದು ವಿರೋಧಿಗಳ್ ಮನಂ|
     ಗಿಡೆ ಬಿಯಮುಂ ಪರಾಕ್ರಮಮುಮೊಪ್ಪಿರೆ ತನ್ನೊಡವುಟ್ಟಿದರ್ ಸಮಂ
     ತೊಡವರೆ ವಾರಣಾವತಮನೆಯ್ದಿದನಮ್ಮನ ಗಂಧವಾರಣಂ|| ೯೮ ||
(‘
ಎಡಱಱಿದು ಈವ ಕಲ್ಪತರು’ ಎಂದು ವನೀಪಕಕೋಟಿ ಸಂತಸಂಬಡೆ,ಪೊಡೆವೊಂದು ಅಕಾಳವಿಳಯಾಶನಿ’ ಎಂದು ವಿರೋಧಿಗಳ್ ಮನಂಗಿಡೆ, ಬಿಯಮುಂ ಪರಾಕ್ರಮಮುಂ ಒಪ್ಪಿರೆ, ತನ್ನೊಡವುಟ್ಟಿದರ್ ಸಮಂತೊಡವರೆ,  ವಾರಣಾವತಮನ್ ಎಯ್ದಿದನ್ ಅಮ್ಮನ ಗಂಧವಾರಣಂ)
‘ಕಷ್ಟವನ್ನು ಅರ್ಥ ಮಾಡಿಕೊಂಡು ದಾನ ಕೊಡುವ ಕಲ್ಪತರು’ ಎಂದು ಯಾಚಕ ಕೋಟಿಯು ಸಂತೋಷಪಟ್ಟರೆ ‘ಅಕಾಲದಲ್ಲಿ ಬರುವ ಪ್ರಳಯಕಾರಕ ಸಿಡಿಲು’ ಎಂದು ವಿರೋಧಿಗಳು ಹೆದರಿಕೊಳ್ಳುತ್ತಿದ್ದರು; ದಾನ-ಧರ್ಮ, ಪರಾಕ್ರಮಗಳು ಒಪ್ಪುವಂತಿದ್ದವು; ತನ್ನ ಒಡಹುಟ್ಟಿದವರು ಜೊತೆಗಿದ್ದರು. ಹೀಗೆ ‘ಅಮ್ಮನ ಗಂಧವಾರಣ’ ಎಂಬ ಬಿರುದು ಹೊತ್ತ ಅರ್ಜುನನು ವಾರಣಾವತವನ್ನು ತಲುಪಿದನು.
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ 
ಚತುರ ಕವಿತಾಗುಣಾರ್ಣವ ವಿರಚಿತಮಪ್ಪ
ವಿಕ್ರಮಾರ್ಜುನ ವಿಜಯದೊಳ್  ದ್ವಿತೀಯಾಶ್ವಾಸಂ