ಭಾನುವಾರ, ಜನವರಿ 30, 2011

ಮಾಹಿತಿ ಆಯೋಗದ ತೀರ್ಪು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ!

"ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದೆ. ಈ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟು, ಮಾಹಿತಿ ಆಯೋಗದ ತೀರ್ಪಿಗೆ ಆರುವಾರಗಳ ತಡೆಯಾಜ್ನೆ ನೀಡಿದೆ. ಮಾಹಿತಿ ಆಯೋಗ ನೀಡಿದ ತೀರ್ಪನ್ನು ಈ ಹಿಂದೆಯೇ ಪ್ರಕಟಿಸಿದ್ದೇನೆ. ಈಗ ಈ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ, ಮಂಗಳೂರು ಎಸ್ ಇ ಜಡ್ ಕಂಪೆನಿಯ ಪರ ವಕೀಲರು ಏನು ವಾದ ಮಂಡಿಸಿದ್ದಾರೆ ಮತ್ತು ಅದಕ್ಕೆ ನನ್ನ ಪ್ರತಿವಾದ ಏನು ಎಂದು ನೋಡೋಣ:
ಈ ಪ್ರಕರಣದಲ್ಲಿ ತೀರ್ಮಾನವಾಗಬೇಕಾದ ಮುಖ್ಯ ಅಂಶ ಮಂಗಳೂರು ಎಸ್ ಇ ಜಡ್ ಕಂಪೆನಿಯು ಒಂದು ಸಾರ್ವಜನಿಕ ಪ್ರಾಧಿಕಾರ ಹೌದೇ ಅಲ್ಲವೇ ಎನ್ನುವುದು. ಅದು ಸಾರ್ವಜನಿಕ ಪ್ರಾಧಿಕಾರ ಹೌದು ಎಂದಾದರೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ, ಅಲ್ಲ ಎಂದಾದರೆ ಬರುವುದಿಲ್ಲ. ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸ್ಪಷ್ಟವಾಗಿ "Commission comes to the conclusion that M/s Mangalore SEZ Ltd., is a 'public authority' under section 2(h) of the Right to information Act, 2005" ಎಂದು ತೀರ್ಪು ನೀಡಿದೆ.
ಮಾಹಿತಿ ಹಕ್ಕು 2005ರ ಪ್ರಕಾರ ಸಾರ್ವಜನಿಕ ಪ್ರಾಧಿಕಾರ ಎಂದರೆ:
(h) "public authority" means any authority or body or institution of self- government established or constituted—
(a) by or under the Constitution;
(b) by any other law made by Parliament;
(c) by any other law made by State Legislature;
(d) by notification issued or order made by the appropriate Government,
and includes any—
(i) body owned, controlled or substantially financed;
(ii) non-Government organisation substantially financed,
directly or indirectly by funds provided by the appropriate Government;
ಈ ನಿಯಮಗಳ ವ್ಯಾಪ್ತಿಯೊಳಗೆ ಮಂಗಳೂರು ಎಸ್ ಇ ಜಡ್ ಕಂಪೆನಿ ಬರುವುದಿಲ್ಲ ಎನ್ನುವ ವಾದವನ್ನು ಮಂಡಿಸುತ್ತಾ ಹೈಕೋರ್ಟಿನ ವಕೀಲರು (ಶ್ರೀ ಪಿ.ಡಿ. ವಿಶ್ವನಾಥ್) ಹೀಗೆ ಹೇಳುತ್ತಾರೆ:
"The petitioner ( ಎಂದರೆ ಮಂಗಳೂರು ಎಸ್ ಇ ಜಡ್ ಕಂಪೆನಿ) is not established or constituted by or under the Constitution. The petitioner is not established or constituted either by any law made by the parliament or the state legislature or by any notification issued or order made by the Government. The petitioner is not a body owned or controlled or substantially financed by the Government. The Oil & Natural Gas Corporation Ltd (ONGC) is a Government Company and it is not the Central Government. The Karnataka Industrial Areas Development Board(KIADB) is a statutory corporation constituted under the Karnataka Industrial Areas Development Act and it is not a Government...."
ಮಂಗಳೂರು ಎಸ್ ಇ ಜಡ್ ಕಂಪೆನಿಯಲ್ಲಿ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲು ಒಟ್ಟು ಶೇ. 49; ಉಳಿದ ಶೇ. 51 ಐಎಲ್ & ಎಫ್ ಎಸ್ ಕಂಪೆನಿಯದು ಎಂಬುದು ಈ ಮೊದಲೇ ಸಾಬೀತಾಗಿದೆ. ಕರ್ನಾಟಕ ಮಾಹಿತಿ ಆಯೋಗ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳ ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲು ಎಂದು ಪರಿಗಣಿಸಿದೆ. ಈ ಎರಡೂ "ಸರಕಾರ" ಅಲ್ಲ; ಓಎನ್ ಜಿಸಿ ಒಂದು ಸರಕಾರಿ ಕಂಪೆನಿಯಾದರೆ, ಕಕೈಪ್ರಮಂ ಒಂದು ಸರಕಾರಿ ನಿಗಮ ಮಾತ್ರ, ಹಾಗಾಗಿ ಇವುಗಳ ಪಾಲನ್ನು ಸರಕಾರದ ಪಾಲು ಎಂದು ಪರಿಗಣಿಸುವಂತಿಲ್ಲ, ಹಾಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿ ಒಂದು ಸಾರ್ವಜನಿಕ ಪ್ರಾಧಿಕಾರ ಅಲ್ಲ ಎನ್ನುವುದು ಹೈಕೋರ್ಟ್ ವಕೀಲರ ವಾದ.
"ಶೇ. 49ರ ಪಾಲು 'ಗಣನೀಯ'ವಾದ ಪಾಲು ಅಲ್ಲ" ಎಂಬ ವಾದವನ್ನೇನೂ ಅವರು ಮಂಡಿಸಿಲ್ಲ.
ವಾದಕ್ಕಾಗಿ ಒಂದು ಕ್ಷಣ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವುಗಳ ಪಾಲು ನೇರವಾಗಿ ಸರಕಾರದ ಪಾಲು ಅಲ್ಲವೆಂದೇ ತಿಳಿಯೋಣ. ಆಗಲೂ ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ಕುಣಿಕೆಯಿಂದ ಉಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಾಹಿತಿ ಹಕ್ಕು 2005ರ 2(h) ಹೀಗೆ ಹೇಳುತ್ತದೆ:
"public authority" means any authority or body or institution of self- government established or constituted—
.........
.........
and includes any— .......
(i) body ........substantially financed;
.........
directly or indirectly by funds provided by the appropriate Government;
ಎಂದರೆ ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ.
ವಕೀಲರ ವಾದದ ಪ್ರಕಾರ ಮಂಗಳೂರು ಎಸ್ ಇ ಜಡ್ ಕಂಪೆನಿ ನೇರವಾಗಿ ಸರಕಾರದಿಂದ ಹಣವನ್ನು ಪಡೆದಿಲ್ಲ ಎಂಬುದನ್ನು ಒಪ್ಪಿದರೂ, ಪರೋಕ್ಷವಾಗಿ, ಕೇಂದ್ರ ಸರಕಾರದ ಕಂಪೆನಿಯಾದ ಓಎನ್ ಜಿಸಿಯಿಂದ ಮತ್ತು ಕರ್ನಾಟಕ ಸರಕಾರದ ನಿಗಮವಾದ ಕಕೈಪ್ರಮಂಡಳಿಯಿಂದ ಗಣನೀಯ ಪ್ರಮಾಣದ ಹಣ ಪಡೆದಿದೆ. ಹೀಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿಯು ನಿಸ್ಸಂದೇಹವಾಗಿ ಒಂದು ಸಾರ್ವಜನಿಕ ಪ್ರಾಧಿಕಾರವೇ ಆಗುತ್ತದೆ.
*******************************
ಕಾನೂನಿನಲ್ಲಿರುವ "ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ" ಎಂಬ ವಾಕ್ಯವನ್ನು ಕೊಂಚ ಹಿಂಜಿ ನೋಡಬೇಕಾದ ಅಗತ್ಯವಿದೆ. ಕಾನೂನು "Funds" ಎಂಬ ಪದವನ್ನು ಬಳಸಿರುವುದರಿಂದ "ಸರಕಾರವು ನೇರವಾಗಿ ಅಥವಾ ಪರೋಕ್ಷವಾಗಿ ಹಣ ಹೂಡಿದ್ದರೆ" ಎಂದೇ ಅರ್ಥ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ಸರಕಾರದ ಪಾಲು ಹಣದ ರೂಪದಲ್ಲಿರದೆ ವಸ್ತುರೂಪದಲ್ಲಿದ್ದರೂ ಸಹ ಅಂತಹ ನಿಕಾಯವು ಕಾನೂನಿನ ವ್ಯಾಪ್ತಿಗೆ ಏಕೆ ಬರಬಾರದು?
ಉದಾಹರಣೆಗೆ ಮಂಗಳೂರು ವಿ.ಆ.ವ. ಕಂಪೆನಿಗೆ ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ ಒಟ್ಟು 6.75 ಕೋಟಿ ಲೀಟರ್ ನೀರೆತ್ತಲು ಅನುಮತಿ ನೀಡಿದೆ. (ಈ ನೀರಿಗೆ ಕಂಪೆನಿ ಹಣ ಕೊಡಬೇಕಾಗಿದೆಯಾದರೂ ಅದು ತೀರ ನಿಕೃಷ್ಟ ಮೊತ್ತ) ಆದರೆ ಸದ್ಯದ ಕಾನೂನಿನಲ್ಲಿ ಸರಕಾರದ ಈ ಪಾಲನ್ನು ಪರಿಗಣಿಸಲು ಅವಕಾಶವಿಲ್ಲ. ಇದರಿಂದಾಗಿ ಕಾನೂನಿನ ಮೂಲ ಉದ್ದೇಶವೇ ನಿಷ್ಫಲವಾದಂತಾಗುತ್ತದೆ. ಆದ್ದರಿಂದ ಸರಕಾರವು ವಸ್ತುರೂಪದಲ್ಲಿ ಏನನ್ನಾದರೂ ತೊಡಗಿಸಿದ ಸಂದರ್ಭದಲ್ಲಿಯೂ, ಅಂತಹ ನಿಕಾಯವನ್ನು ಸಾರ್ವಜನಿಕ ಪ್ರಾಧಿಕಾರ ಎಂದೇ ಪರಿಗಣಿಸಬೇಕಾದ ಅಗತ್ಯವಿದೆ. (ಈ ವಿಷಯದಲ್ಲಿ ಈಗಾಗಲೇ ಯಾವುದಾದರೂ ಕೋರ್ಟಿನ ತೀರ್ಪು ಆಗಿರುವುದು ಸಾಧ್ಯ. ಅಂತಹ ತೀರ್ಪು ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿರಿ).
ಮಂಗಳೂರು ವಿ.ಆ.ವ. ಕಂಪೆನಿಯಲ್ಲೇನೋ ಸರಕಾರದ ಪಾಲು ನೇರವಾಗಿಯೋ ಪರೋಕ್ಷವಾಗಿಯೋ ಇದೆ. ಆದ್ದರಿಂದ ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರಬೇಕಾಗುತ್ತದೆ. ಆದರೆ ಇಂದು ಅಸ್ತಿತ್ವಕ್ಕೆ ಬರುತ್ತಿರುವ ಎಷ್ಟೋ ಖಾಸಗಿ ಎಸ್ ಇ ಜಡ್ ಕಂಪೆನಿಗಳು ಈ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ವಾಸ್ತವವಾಗಿ ಸರಕಾರಗಳು ಭೂಮಿಯನ್ನು ಅದರ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಇವುಗಳಿಗೆ ಹಸ್ತಾಂತರಿಸದೆ ಹೋದರೆ, ಇವು ಅಸ್ತಿತ್ವಕ್ಕೆ ಬರುವುದು ಸಾಧ್ಯವೇ ಇಲ್ಲ. ಹಾಗಾಗಿ ಪರೋಕ್ಷವಾಗಿ ಸರಕಾರದಿಂದ ಭೂಮಿಯನ್ನು ಪಡೆದಿರುವ ಕಾರಣಕ್ಕಾಗಿ ಈ ಖಾಸಗಿ ಕಂಪೆನಿಗಳನ್ನೂ ಸಹ ಮಾಹಿತಿ ಹಕ್ಕಿನ ವ್ಯಾಪ್ತಿಗೆ ತರುವುದು ಅಗತ್ಯವಿದೆ.