ಮಂಗಳವಾರ, ಮಾರ್ಚ್ 8, 2011

ನೇತ್ರಾವತಿ ತಿರುವು ಯೋಜನೆ: ತಕ್ಷಣಕ್ಕೆ ಅನ್ನಿಸಿದ್ದು:


ನೇತ್ರಾವತಿ ತಿರುವು ಯೋಜನೆಗೆ ಮತ್ತೆ ಜೀವ ಬಂದಿದೆ. ಈ ಯೋಜನೆಯನ್ನು ಜಾರಿಗೆ ಕೊಡುವ ಮೊದಲು ನಮ್ಮ ಸರಕಾರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು:
ಈ ಯೋಜನೆ ತುಮಕೂರು, ಕೋಲಾರ, ಚಿತ್ರದುರ್ಗ, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಹಾಗಿದ್ದರೆ,
೧. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಯಾವಾಗಿನಿಂದ ಪ್ರಾರಂಭವಾಯಿತು?
೨, ಅಭಾವ ಉಂಟಾಗಲು ಕಾರಣಗಳೇನು?
೩. ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳುವುದು ಸಾಧ್ಯವೇ?
೪. ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಮಾಡಿರುವ ಪ್ರಯತ್ನಗಳು ಯಾವುವು? ಅವುಗಳು ಫಲ ಕೊಟ್ಟಿಲ್ಲವೇ? ಯಾಕೆ?
೫. ಸಮಸ್ಯೆಯ ಪರಿಹಾರ ಹೇಗೆ?
ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಮೊದಲು ಕಂಡುಕೊಳ್ಳಬೇಕು. ಈ ಅಧ್ಯಯನದ ನಂತರವೂ ಹೊರಗಿನಿಂದ ನೀರು ತರುವುದು ಅನಿವಾರ್ಯ ಎಂದಾದರೆ ಮಾತ್ರ ಆ ಪ್ರಯತ್ನಕ್ಕೆ ಕೈ ಹಾಕಬಹುದು.
ಹಿಂದೊಬ್ಬಳು ಮುದುಕಿ ಇದ್ದಳಂತೆ. ಮನೆಯೊಳಗೆ ಸೂಜಿ ಕಳೆದುಕೊಂಡು, ಒಳಗೆ ಕತ್ತಲು, ಹೊರಗೆ ಬೆಳಕಿದೆ ಎಂದು, ಅಂಗಳಕ್ಕೆ ಬಂದು ಸೂಜಿ ಹುಡುಕಿದವಳು. ನಮ್ಮ ಕಥೆಯೂ ಹಂಗಾಗಬಾರದು. ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿ ಹುಡುಕೋಣ. ಸಿಗುವುದು ಸಾಧ್ಯ, ಸಿಗುತ್ತದೆ.
ಒಂದು ಉದಾಹರಣೆ: ಬೆಂಗಳೂರಿನಲ್ಲಿ ವೃಷಭಾವತಿ ಎಂಬ ನದಿ ಇತ್ತಂತೆ. ಅದೀಗ ದೊಡ್ಡ ಚರಂಡಿಯಾಗಿದೆ. ಒಂದು ಕಾಲಕ್ಕೆ (ಬಹಳ ಹಿಂದೇನೂ ಅಲ್ಲ. ಬಹುಶಃ ಐವತ್ತು ವರ್ಷಗಳ ಹಿಂದೆ) ಕುಡಿಯುವ ಸಿಹಿನೀರು ಕೊಡುತ್ತಿದ್ದ ನದಿ ಇಂದು ಕೊಳಚೆ ಹರಿಯುವ ಚರಂಡಿಯಾಗಿದ್ದರೆ, ಅದಕ್ಕೆ ನಾವೇ ಹೊಣೆ. ನಮ್ಮ ಮೊದಲ ಕರ್ತವ್ಯ ಆ ಚರಂಡಿಯನ್ನು ಹಿಂದೆ ಇದ್ದ ನದಿಯಾಗಿ ಪರಿವರ್ತಿಸುವುದು. ಬೆಂಗಳೂರಿನ ಕೆರೆಗಳ ನೀರನ್ನು ಕುಡಿಯಲಾಗದಂತೆ ಮಲಿನ ಮಾಡಿ, ಅಲ್ಲಿ ದೋಣಿಯಾಟವಾಡಿ ಮಜಾ ಮಾಡುವ, ಕೆರೆಯಂಗಳವನ್ನು ಕ್ರಿಕೆಟ್ ಮೈದಾನ ಮಾಡಿ ಹಗಲೂ ರಾತ್ರಿ ಕ್ರಿಕೆಟ್ ನಶೆಯಲ್ಲಿ ಮುಳುಗಿರುವ ಪಾಪಿಗಳು ನಾವು. ಅದಕ್ಕೆ ಪ್ರಾಯಶ್ಚಿತ್ತವನ್ನೂ ನಾವೇ ಮಾಡಿಕೊಳ್ಳಬೇಕು. ಈ ಮಾತು ಮೇಲೆ ಹೇಳಿದ ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದುಕೊಂಡಿದ್ದೇನೆ.