ಶನಿವಾರ, ಅಕ್ಟೋಬರ್ 13, 2018


ಪಂಪಭಾರತಂ
ಆಶ್ವಾಸ ೨ ಪದ್ಯಗಳು ೧ರಿಂದ ೧೭

ಕಂ|| ಶ್ರೀಗಗಲುರಮಂ ಕೀರ್ತಿ |
     ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ ||
     ಶ್ರೀಗೆ ಭುಜಶಿಖರಮಂ ನೆಲೆ |
     ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ ||೧||
(ಶ್ರೀಗೆ ಅಗಲು ಉರಮಂ, ಕೀರ್ತಿಶ್ರೀಗೆ ದಿಗಂತಮುಮನ್, ಅಹಿತರಂ ಗೆಲ್ವ ಜಯಶ್ರೀಗೆ ಭುಜಶಿಖರಮಂ ನೆಲೆಯಾಗಿಸಿ, ನೀಂ ನೆಲಸು ನೇಸಱ್ ಉಳ್ಳಿನಂ ಅರಿಗಾ)
ಅರಿಗಾ, ನೀನು ಲಕ್ಷ್ಮಿಗೆ ನಿನ್ನ ಹರವಾದ ಎದೆಯನ್ನು, ಕೀರ್ತಿಲಕ್ಷ್ಮಿಗೆ ದಿಗಂತವನ್ನು, ವೈರಿಗಳನ್ನು ಗೆಲ್ಲುವ ಜಯಲಕ್ಷ್ಮಿಗೆ ಎತ್ತರದ ಹೆಗಲನ್ನು ನೆಲೆಯಾಗಿಸಿ, ಸೂರ್ಯನಿರುವವರೆಗೂ ಈ ಲೋಕದಲ್ಲಿ ನೆಲೆಸಿರು..
ಕಂ|| ಎಂಬ ಪರಕೆಗಳ ರವದೊಳ್ |
     ತುಂ[ಬೆ] ನಭೋವಿವರಮಮರ ಮುನಿಜನಮಮರೇಂ ||
     ದ್ರಂ ಬೆರಸು ತಳರ್ದುದಾದುದ |
     ಳುಂಬಂ ಮನದೊಸಗೆ ಕುಂತಿಗಂ ತತ್ಪತಿಗಂ||೨|| 
(ಎಂಬ ಪರಕೆಗಳ ರವದೊಳ್ ತುಂಬೆ ನಭೋವಿವರಂ, ಅಮರ ಮುನಿಜನಂ ಅಮರೇಂದ್ರಂ ಬೆರಸು ತಳರ್ದುದು, ಆದುದು ಅಳುಂಬಂ ಮನದ ಒಸಗೆ ಕುಂತಿಗಂ ತತ್ಪತಿಗಂ)
ಎಂಬ ಹರಕೆಗಳಿಂದ ಆಕಾಶದ ಅವಕಾಶವು ತುಂಬಿಕೊಂಡಿರುವಂತೆಯೇ, ಮುನಿಗಳು, ದೇವತೆಗಳು ದೇವೇಂದ್ರನೊಂದಿಗೆ ಅಲ್ಲಿಂದ ಹೊರಟು ಹೋದರು. ಇತ್ತ ಕುಂತಿಗೂ, ಪಾಂಡುರಾಜನಿಗೂ ಮನಸ್ಸು ಸಂತೋಷದಿಂದ ತುಂಬಿತ್ತು.
ವ|| ಅಂತು ಗುಣಾರ್ಣವನ ಪುಟ್ಟಿದೊಸಗೆಯೊಳೊಸಗೆ ಮರುಳ್ಗೊಂಡು ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕ್ತೆಯಾಗಿ ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡಾಕೆಯ ಬಿನ್ನನಾದ ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ ಮಂತ್ರಾಕ್ಷರಂಗಳನುಪದೇಶಂಗೆಯ್ದೊಡಾಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ- 
(ಅಂತು ಗುಣಾರ್ಣವನ ಪುಟ್ಟಿದ ಒಸಗೆಯೊಳ್ ಒಸಗೆ ಮರುಳ್ಗೊಂಡು ಕುಂತಿಯುಂ ಪಾಂಡುರಾಜನುಂ ಇರೆ, ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕ್ತೆಯಾಗಿ, ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡೆ, ಆಕೆಯ ಬಿನ್ನನಾದ ಮೊಗದ ಅಂದಮಂ ಕಂಡು, ಕುಂತಿ ಕರುಣಿಸಿ, ಪುತ್ರೋತ್ಪತ್ತಿ ನಿಮಿತ್ತಂಗಳ್ ಅಪ್ಪ ಮಂತ್ರಾಕ್ಷರಂಗಳನ್ ಉಪದೇಶಂಗೆಯ್ದೊಡೆ, ಆಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ-)
ಹೀಗೆ ಗುಣಾರ್ಣವನ ಹುಟ್ಟಿನಿಂದ ಕುಂತಿ, ಪಾಂಡುರಾಜರು ಅತ್ಯಂತ ಸಂಭ್ರಮದಲ್ಲಿದ್ದರು. ಆದರೆ ಮಾದ್ರಿಯು ಮಾತ್ರ ತನಗೆ ಮಕ್ಕಳಿಲ್ಲದುದರಿಂದ, ಹೊಸಕಿ ಬಿಸಾಡಿದ ಕೆಂಪು ಅಶೋಕದ ಚಿಗುರಿನಂತೆ ತುಂಬಾ ಕೊರಗಿನಲ್ಲಿದ್ದಳು. ಮಾದ್ರಿಯು ಹೀಗೆ ಮುಖ ಬಾಡಿಸಿಕೊಂಡಿರುವುದನ್ನು ಕಂಡ ಕುಂತಿಯು ಕರುಣೆಯಿಂದ, ಮಕ್ಕಳ ಹುಟ್ಟಿಗೆ ಸಾಧನವಾದ ಮಂತ್ರವನ್ನು ಆಕೆಗೆ ಉಪದೇಶ ಮಾಡಿದಳು. ಮಾದ್ರಿಯು ಆ ಮಂತ್ರಗಳಿಗೆ ಅನುಗುಣವಾದ ಆಚರಣೆಗಳನ್ನು ಮಾಡಿ ನಿಯಮಗಳನ್ನು ಪಾಲಿಸಿ
ಕಂ|| ಆಹ್ವಾನಂಗೆಯ್ದಶ್ವಿನಿ |
     ದೇವರನವರಿತ್ತ ವರದೊಳವರಂಶಮೆ ಸಂ||
     ಭಾವಿಸೆ ಗರ್ಭದೊಳಮಳರ |
     ನಾ ವನಜದಳಾಕ್ಷಿ ಪಡೆದು ಸಂತತಿವೆತ್ತಳ್ ||೩|| 
(ಆಹ್ವಾನಂಗೆಯ್ದು ಅಶ್ವಿನಿ ದೇವರನ್, ಅವರಿತ್ತ ವರದೊಳ್ ಅವರಂಶಮೆ ಸಂಭಾವಿಸೆ ಗರ್ಭದೊಳ್,  ಅಮಳರನ್ ಆ  ವನಜದಳಾಕ್ಷಿ ಪಡೆದು ಸಂತತಿವೆತ್ತಳ್)
ಅಶ್ವಿನಿ ದೇವತೆಗಳನ್ನು ಆಹ್ವಾನಿಸಿ, ಅವರ ಕೊಟ್ಟ ವರದಿಂದ ಅವರ ಅಂಶದ ಅವಳಿ ಮಕ್ಕಳನ್ನು ಪಡೆದು ಮಾದ್ರಿಯು ತಾಯಿ ಎನಿಸಿಕೊಂಡಳು.
ವ|| ಆಗಳಾ ಪಾಂಡುರಾಜನಾ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದವರ್ಗಮಳ್ವೆಸರನಿಟ್ಟು ಪುತ್ರ ಸಂಪೂರ್ಣ ಮನೋರಥನಾಗಿರ್ಪಿನಮಯ್ವರ್ ಕೂಸುಗಳುಮೇೞ್ಗೆವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಿಜನಕ್ಕೆ ಕಲ್ಪವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರ[ಂ] ಸ್ವರೂಪದೊಳ್ ಮೂರ್ತಿಮಂ[ತ]ಂಗಳಾದಂತೆ ಸೊಗಯಿಸಿ ಬಳೆಯೆ-
(ಆಗಳ್, ಆ ಪಾಂಡುರಾಜನ್, ಆ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ, ನಕುಲ ಸಹದೇವರೆಂದು ಅವರ್ಗೆ ಅಮಳ್ ಪೆಸರನ್ ಇಟ್ಟು, ಪುತ್ರ ಸಂಪೂರ್ಣ ಮನೋರಥನಾಗಿ ಇರ್ಪಿನಂ, ಅಯ್ವರ್ ಕೂಸುಗಳುಂ ಏೞ್ಗೆವಾಡಿವದ ಚಂದ್ರನಂತೆ ಉತ್ತರ ಅಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ, ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯ ಅಂಕುರಂಗಳುಂ, ವಂದಿಜನಕ್ಕೆ ಕಲ್ಪವೃಕ್ಷ ಅಂಕುರಂಗಳುಂ, ಅರಾತಿಜನಕ್ಕೆ ಕಾಳಕೂಟ ಅಂಕುರಂಗಳುಮಂ ಪೋಲ್ತು, ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತಂಗಳ್  ಆದಂತೆ ಸೊಗಯಿಸಿ ಬಳೆಯೆ)
ಆಗ ಆ ಪಾಂಡುರಾಜನು ಆ ಮಕ್ಕಳಿಗೆ ಜಾತಕರ್ಮಗಳನ್ನು ಮುನಿಗಳಿಂದ ಮಾಡಿಸಿ, ಅವರಿಗೆ ನಕುಲ-ಸಹದೇವರೆಂದು ಅವಳಿ ಹೆಸರಿಟ್ಟು, ಮಕ್ಕಳ ಆಸೆಯನ್ನು ಪೂರೈಸಿಕೊಂಡನು. ಆ ಐದು ಮಕ್ಕಳೂ ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯತೊಡಗಿದರು. ಅವರ ಏಳಿಗೆಯು ಭರತಕುಲಕ್ಕೆ ಯಶಸ್ಸಿನ ಮೊಳಕೆಗಳಂತೆ, ಬಂಧುಜನಕ್ಕೆ ಪುಣ್ಯದ ಮೊಳಕೆಗಳಂತೆ, ಹೊಗಳುಭಟರಿಗೆ ಕಲ್ಪವೃಕ್ಷದ ಮೊಳಕೆಗಳಂತೆ, ವೈರಿಗಳಿಗೆ ಕಾಳಕೂಟ ವಿಷದ ಮೊಳಕೆಗಳಂತೆ ಕಾಣಿಸಿದವು. ಹೀಗೆ ಆ ಮಕ್ಕಳೆಲ್ಲ ಪಂಚಾಂಗ ಮಂತ್ರವೇ ಮೂರ್ತರೂಪ ಪಡೆದಂತೆ ಬೆಳೆಯತೊಡಗಿದರು.
ಕಂ|| ತೊಡರ್ದಮರ್ದ ಬಾಳವಣ್ಣದ |
     ತುಡುಗೆ ಪಳಂಚಲೆವ ಪಂಚ ಜಡೆ ನೊಸಲೊಳೊಡಂ ||
     ಬಡುವರಳೆಲೆಯಿವಱಿಂ ಚೆ |
     ಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ||  ||
(ತೊಡರ್ದು ಅಮರ್ದ ಬಾಳವಣ್ಣದ ತುಡುಗೆ, ಪಳಂಚಲೆವ ಪಂಚ ಜಡೆ, ನೊಸಲೊಳ್ ಒಡಂಬಡುವ ಅರಳೆಲೆ ಇವಱಿಂ ಚೆಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ)
ಮೈಗೊಪ್ಪುವ ಕತ್ತಿಯ ಬಣ್ಣದ – ನೀಲಿಯ – ಉಡುಪು, ಬೆನ್ನಿಗೆ ತಾಗುವ ಐದು ಜಡೆಗಳು, ಹಣೆಯಲ್ಲಿ ಒಪ್ಪುವ ಅರಳೆಲೆ ಇವುಗಳಿಂದ ಧರ್ಮರಾಜನ ಮಗುವಿನಾಟವು ಸೊಗಸುತ್ತಿತ್ತು.

ವ|| ಅಂತಾತಂ ಬಳೆಯೆವಳೆಯೆ
ಕಂ|| ನಡೆವ ತಳರ್ನಡೆಯೊಳ್ ಪುಡಿ|
     ವುಡಿಯಾದುವು ಶಿಲೆಗಳೊಡೆದು ಕರಿಗಳ್ ಭೀಮಂ||
     ಪಿಡಿದಡರ್ದೊಡೆ ಬಾಯ್ವಿಟ್ಟೆ|
     ಲ್ವಡಗಾದುವು ಮುದ್ದದಂತು ಸೊಗಯಿಸವೇಡಾ||೫||
(ನಡೆವ ತಳರ್ ನಡೆಯೊಳ್ ಪುಡಿ ಪುಡಿಯಾದುವು ಶಿಲೆಗಳ್ ಒಡೆದು, ಕರಿಗಳ್ ಭೀಮಂ ಪಿಡಿದು ಅಡರ್ದೊಡೆ ಬಾಯ್ವಿಟ್ಟು     ಎಲುವು ಅಡಗು ಆದುವು, ಮುದ್ದದಂತು ಸೊಗಯಿಸವೇಡಾ?)
ಭೀಮನು ತಪ್ಪುಹೆಜ್ಜೆ ಹಾಕುತ್ತ ನಡೆದಾಡುವಾಗ ಅವನ ಕಾಲ ಕೆಳಗೆ ಸಿಕ್ಕಿದ ಶಿಲೆಗಳು ಪುಡಿಪುಡಿಯಾದವು. ಅವನು ಆನೆಗಳನ್ನು ಹಿಡಿದು ಅವುಗಳ ಮೇಲೆ ಹತ್ತಿದಾಗ ಅವು ಜಜ್ಜಿ ಹೋಗಿ, ಎಲುಬು ಮಾಂಸಗಳ ರಾಶಿಯಾದುವು. ಮಗುವಿನ ಮುದ್ದು ಇರಬೇಕಾದ್ದು ಹೀಗಲ್ಲವೆ?
ಕಂ|| ಮುನಿವನಮನೆ ಬಿಸುಟುವು ಮುಂ|
     ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್ ಮು||
     ದ್ದಿನೊಳಡರ್ವ ಪಿಡಿವ ಗುರ್ದುವ|
     ಮನೆಗೆೞೆವನಿತರ್ಕಮಲಸಿ ಮರುದಾತ್ಮಜನಾ||೬|| 
(ಮುನಿವನಮನೆ ಬಿಸುಟುವು ಮುಂ ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್, ಮುದ್ದಿನೊಳ್ ಅಡರ್ವ, ಪಿಡಿವ, ಗುರ್ದುವ,  ಮನೆಗೆ ಎೞೆವ ಅನಿತರ್ಕಂ ಅಲಸಿ, ಮರುದಾತ್ಮಜನಾ)
ಈ ಮೊದಲು ಮುನಿಗಳ ಮಡಿಲಿನಲ್ಲಿ ಬೆಳೆದ ಸಿಂಹಗಳ ಮೇಲೆ ಭೀಮನು ಮುದ್ದಿನಿಂದ ಹತ್ತಿ, ಅವುಗಳನ್ನು ಹಿಡಿದು, ಗುದ್ದಿ, ಮನೆಗೆ ಎಳೆದು ತಂದು ಕೊಟ್ಟ ಕಾಟಕ್ಕೆ ಆ ಸಿಂಹಗಳು ಆಶ್ರಮವನ್ನೇ ಬಿಟ್ಟು ಹೋದವು.
ವ|| ಅಂತಾತಂ ಬಳೆಯೆ
ಅವನು ಹಾಗೆ ಬೆಳೆಯುತ್ತಿರಲು
ಕಂ|| ಬೇಡಿದುದಂ ಬೇಡುವ ಪುಡಿ|
     ಯಾಡುವ ತೊದಳೊದವೆ ನುಡಿವ ನಗಿಸುವ ಬಾಲ||
     ಕ್ರೀಡೆ ಮುರಾರಿಯ ಬಾಲ|
     ಕ್ರೀಡೆಯನನುಕರಿಪುದಾದುದರಿಕೇಸರಿಯಾ||೭|| 
(ಬೇಡಿದುದಂ ಬೇಡುವ, ಪುಡಿಯಾಡುವ, ತೊದಳೊದವೆ ನುಡಿವ, ನಗಿಸುವ, ಬಾಲಕ್ರೀಡೆ ಮುರಾರಿಯ ಬಾಲ ಕ್ರೀಡೆಯನ್ ಅನುಕರಿಪುದಾದುದು ಅರಿಕೇಸರಿಯಾ)
ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುವ, ಮಣ್ಣಿನಲ್ಲಿ ಆಡುವ, ತೊದಲು ಮಾತಾಡಿ ಎಲ್ಲರನ್ನೂ ನಗಿಸುವ ಅರಿಕೇಸರಿಯ ಮಕ್ಕಳಾಟವು ಆ ಶ್ರೀಕೃಷ್ಣನ ಮಕ್ಕಳಾಟವನ್ನೇ ಹೋಲುತ್ತಿತ್ತು.
ಕಂ|| ಪರೆದಡರ್ದ ಧೂಳಿ ಕಿಱುನಗೆ|
     ವೆರಸಿದ ತೊದಳೊದವೆ ನುಡಿವ ನುಡಿ ನಗೆಮೊಗದೊಳ್||
     ಪರಕಲಿಸಿದ ಕಾಡಿಗೆವೆರ|
     ಸರಿಕೇಸರಿ ತಾಯ ಮನಮನಿೞ್ಕುಳಿಗೊಂಡಂ||೮||
(ಪರೆದು ಅಡರ್ದ ಧೂಳಿ, ಕಿಱುನಗೆವೆರಸಿದ, ತೊದಳ್ ಒದವೆ ನುಡಿವ, ನುಡಿ, ನಗೆಮೊಗದೊಳ್ ಪರಕಲಿಸಿದ ಕಾಡಿಗೆವೆರಸು, ಅರಿಕೇಸರಿ ತಾಯ ಮನಮನ್ ಇೞ್ಕುಳಿಗೊಂಡಂ)
ಕೆದರಿ ಮೈಗಂಟಿದ ಧೂಳು, ನಗುನಗುತ್ತಾ ಆಡುವ ತೊದಲು ಮಾತು, ನಗುವ ಮುಖದ ತುಂಬ ಹರಡಿದ ಕಣ್ಣ ಕಾಡಿಗೆ ಇವುಗಳಿಂದ ಅವನು ತಾಯಿಯ ಮನಸ್ಸಿಗೆ ಸಂತೋಷ ಕೊಟ್ಟನು.
ಕಂ|| ಒಗೆತರ್ಪ ಪಲ್ಗಳಾ ನಗೆ|
     ಮೊಗದ ಸರಸ್ವತಿಯನಾಗಳರ್ಚಿಸಿದ ಪೊದ||
     ಳ್ದಗಲದ ಚೆಲ್ವಿನ ಮೊಲ್ಲೆಯ|
     ಮುಗುಳ್ಗಳನಿಳಿಸಿರೆ ಗುಣಾರ್ಣವಂ ಸೊಗಯಿಸಿದಂ||೯|| 
(ಒಗೆತರ್ಪ ಪಲ್ಗಳ್, ಆ ನಗೆಮೊಗದ ಸರಸ್ವತಿಯನ್ ಆಗಳ್ ಅರ್ಚಿಸಿದ, ಪೊದಳ್ದ ಅಗಲದ, ಚೆಲ್ವಿನ, ಮೊಲ್ಲೆಯ ಮುಗುಳ್ಗಳನ್ ಇಳಿಸಿರೆ ಗುಣಾರ್ಣವಂ ಸೊಗಯಿಸಿದಂ)
ಆಗಷ್ಟೇ ಹುಟ್ಟುತ್ತಿದ್ದ ಗುಣಾರ್ಣವನ ಹಲ್ಲುಗಳು, ನಗೆಮೊಗದ ಸರಸ್ವತಿಯನ್ನು ಪೂಜಿಸಿದ ಅಗಲವಾದ, ಚೆಲುವಾದ ಮೊಲ್ಲೆಯ ಮೊಗ್ಗುಗಳಿಗಿಂತ ಸುಂದರವಾಗಿ ತೋರುತ್ತಿದ್ದವು.
ಕಂ|| ಕರಿಕಳಭಂಗಳ ಶಿಶು ಕೇ|
     ಸರಿಗಳ ಬೞಿಯಂ ತಗುಳ್ದು ಬಡವುಗಳನವಂ||
     ತಿರಿಪಿ ಪಿಡಿಯುತ್ತುಮರಿಗಂ|
     ಪರಿದಾಡುವ ಸಮವಯ[ಸ್ಕರೊ]ಳ್ ಸೊಗಯಿಸಿದಂ||೧೦|| 
(ಕರಿಕಳಭಂಗಳ, ಶಿಶು ಕೇಸರಿಗಳ, ಬೞಿಯಂ ತಗುಳ್ದು, ಬಡವುಗಳನ್ ಅವಂ ತಿರಿಪಿ ಪಿಡಿಯುತ್ತುಂ, ಅರಿಗಂ ಪರಿದಾಡುವ ಸಮವಯಸ್ಕರೊಳ್ ಸೊಗಯಿಸಿದಂ)
ಆನೆಯ ಮರಿಗಳನ್ನು, ಸಿಂಹದ ಮರಿಗಳನ್ನು ಅಟ್ಟಿಸಿಕೊಂಡು ಹೋಗಿ, ಆ ಬಡಪಾಯಿಗಳನ್ನು ಹಿಡಿದು ತಿರುಪುತ್ತ ಅರಿಗನು ಅತ್ತಿತ್ತ ಓಡಾಡುವ ತನ್ನ ಓರಗೆಯ ಮಕ್ಕಳೊಂದಿಗೆ ಮೆರೆದನು.
ಕಂ|| ದೆಯ್ವಬಲಂ ಸೊಗಸಿಕೆ ಮುಂ|
     ಗೆಯ್ವ ಬಲಂ ಬಾಳಕಾಲದೊಳ್ ತೊಡರ್ದ ಪೊಡ||
     ರ್ದಯ್ವರ ಬಾಲಕ್ರಿಯೆಯುಂ|
     ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ||೧೧|| 
(ದೆಯ್ವಬಲಂ, ಸೊಗಸಿಕೆ, ಮುಂ ಗೆಯ್ವ ಬಲಂ, ಬಾಳಕಾಲದೊಳ್ ತೊಡರ್ದ, ಪೊಡರ್ದ, ಅಯ್ವರ ಬಾಲಕ್ರಿಯೆಯುಂ ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ)
ದೈವಬಲ, ಚೆಲುವು, ವಯಸ್ಸಿಗೆ ಮೀರಿದ ಸಾಮರ್ಥ್ಯ ಹೀಗೆ ಅವರುಗಳ ಮಕ್ಕಳಾಟವು ತಾಯಿತಂದೆಯರಿಗೆ ತಮ್ಮ ಹೆಗಲನ್ನು ತಾವೇ ಮುಟ್ಟಿಕೊಳ್ಳುವಂತೆ (ಹೆಮ್ಮೆ ಪಡುವಂತೆ) ಮಾಡಿತು.
ವ|| ಅಂತಾ ಕೂಸುಗಳ್ ನಿಜ ಜನನೀಜನಕರ ಮನಮನಿೞ್ಕುಳಿಗೊಳಿಸಿಯುಮರಾತಿ ಜನಂಗಳ ಮನಮನಸುಂಗೊಳಿಸಿಯುಂ ಬಳೆಯೆ ಬಳೆಯೆ-
(ಅಂತು ಆ  ಕೂಸುಗಳ್ ನಿಜ ಜನನೀಜನಕರ ಮನಮನ್ ಇೞ್ಕುಳಿಗೊಳಿಸಿಯುಂ, ಅರಾತಿ ಜನಂಗಳ ಮನಮನ್ ಅಸುಂಗೊಳಿಸಿಯುಂ ಬಳೆಯೆ ಬಳೆಯೆ) 
ಹಾಗೆ, ಮಕ್ಕಳು ಆ ತಂದೆತಾಯಿಗಳ ಮನಸ್ಸನ್ನು ಸಂತಸಗೊಳಿಸಿ, ವೈರಿಗಳ ಚೇತನವನ್ನು ಅಡಗಿಸಿ ಬೆಳೆಯುತ್ತಿರುವಾಗ-
ಚಂ|| ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ|
     ಬೆಲರು[ಮಿದ]ಂ ಗೆಲಲ್ಬಗೆವ ತುಂಬಿ ಗಳಧ್ವನಿಯಿಂ ಕುಕಿಲ್ವ ಕೋ||
     ಗಿಲೆ ನನೆದೋಱಿ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು|
     ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್||೧೨|| 
(ಅಲರ್ದ ಅದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂಬೆಲರುಂ, ಇದಂ ಗೆಲಲ್ ಬಗೆವ ತುಂಬಿ, ಗಳಧ್ವನಿಯಿಂ ಕುಕಿಲ್ವ ಕೋಗಿಲೆ, ನನೆದೋಱಿ ನುಣ್ಪೆಸೆವ ಮಾಮರನ್, ಒರ್ಮೊದಲ್ ಅಲ್ಲದೆ ಉಣ್ಮುವ ಉಯ್ಯಲ ಪೊಸಗಾವರಂ ಪುಗಿಲೊಳ್ ಏನ್ ಎಸೆದತ್ತೊ ಬಸಂತಮಾಸದೊಳ್!)
ಆಗತಾನೇ ಅರಳಿದ ಅದಿರ್ಮುತ್ತೆ, ಮಲ್ಲಿಗೆ ಹೂಗಳ ಮೇಲೆ ರಭಸದಿಂದ ಬೀಸಿ ಅವುಗಳ ಪರಿಮಳವನ್ನು ಕಸಿದುಕೊಳ್ಳುವ ತೆಂಕಣಗಾಳಿ, ಆ ತೆಂಕಣಗಾಳಿಗೆ ನಾನೇನು ಕಡಿಮೆ ಎನ್ನುವಂತೆ ಅವೇ ಹೂಗಳಿಂದ ಮಕರಂದವನ್ನು ಕಸಿಯುವ ದುಂಬಿಗಳು, ಮಧುರಧ್ವನಿಯಲ್ಲಿ ಕೂಗುವ ಕೋಗಿಲೆ, ನುಣುಪಾಗಿ ತೋರುವ ಹೂ ತಳೆದ ಮಾವಿನ ಮರ, ಮತ್ತೆ ಮತ್ತೆ ಕೇಳಿಬರುವ ಉಯ್ಯಾಲೆಯಾಡುವವರ ಗಲಾಟೆ ಇವುಗಳಿಂದ ವಸಂತ ಋತುವಿನ ಆಗಮನವು ಶೋಭಿಸುತ್ತಿತ್ತು.
ವ|| ಆಗಳಾ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಾತನ ಬರವಿಂಗೆ ತೋರಣಂಗಟ್ಟಿದಂತೆ ಬಂದ ಮಾಮರಂಗಳನಡರ್ದು ತೊಡರ್ದೆಳಗೊಂಬುಗಳ್ವಿಡಿದು ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳುಮಾತನ ಬರವಿಂಗೆ ನೆಱೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ ನನೆಯ ಬಿರಿಮುಗುಳ್ಗಳ ತುಱುಗಲೊಳೆಱಗಿ ತುಱುಗಿದ ಕಲ್ಪಲತೆಗಳುಮಾತನ ಬರವಿಂಗೆ ಬದ್ದವಣಂ ಬಾಜಿಪಂತೆ ಭೋರ್ಗರೆದು ಮೊರೆವ ತುಂಬಿಗಳುಮಾತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನಸ್ಥಳಂಗಳೊಳುದಿರ್ದ ಕೞಿವೂಗಳುಮಾತನ ಬರವಿಂಗೆ ವನವನಿತೆ ಮೆಚ್ಚಿ ನೆಱೆಯೆ ಕೆಯ್ಗೆಯ್ದಂತೆ ನಿಱಿನಿಱಿಗೊಂಡು ಸೊಗಯಿಸುವ ನಿಱಿಗನ ನಿಱಿದಳಿರ ಗೊಂಚಲ್ಗಳುಮಾತನ ಮೇಲ್ವಾಯೆ ರಾಗಿಸಿ ರೋಮಾಂಕುರಮೊಗೆದಂತೊಗೆದ ಕಳಿಕಾಂಕುರಂಗಳುಮಾತನಂಗಸಂಗದೊಳ್ ಕಾಮರಸಮುಗುವಂತುಗುವ ಸೊನೆಯ ಸೋನೆಗಳುಮನೊಳಕೊಂಡು ತದಾಶ್ರಮದ ನಂದನವನಂಗ[ಳ್ಜನಂಗಳನನಂಗಂಗೆ ತೊೞ್ತುವೆಸಂಗೆಯ್ಸಿದುವು
 (ಆಗಳ್ ಆ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ ಮಿಳಿರ್ವ ಅಶೋಕೆಯ ತಳಿರ್ಗಳುಂ, ಆತನ ಬರವಿಂಗೆ ತೋರಣಂಗಟ್ಟಿದಂತೆ, ಬಂದ ಮಾಮರಂಗಳನ್ ಅಡರ್ದು, ತೊಡರ್ದು, ಎಳಗೊಂಬುಗಳ ಪಿಡಿದು, ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳುಂ, ಆತನ ಬರವಿಂಗೆ ನೆಱೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ, ನನೆಯ ಬಿರಿಮುಗುಳ್ಗಳ ತುಱುಗಲೊಳ್ ಎಱಗಿ ತುಱುಗಿದ ಕಲ್ಪಲತೆಗಳುಂ, ಆತನ ಬರವಿಂಗೆ ಬದ್ದವಣಂ ಬಾಜಿಪಂತೆ ಭೋರ್ಗರೆದು ಮೊರೆವ ತುಂಬಿಗಳುಂ, ಆತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನಸ್ಥಳಂಗಳೊಳ್ ಉದಿರ್ದ ಕೞಿವೂಗಳುಂ, ಆತನ ಬರವಿಂಗೆ ವನವನಿತೆ ಮೆಚ್ಚಿ, ನೆಱೆಯೆ ಕೆಯ್ಗೆಯ್ದಂತೆ, ನಿಱಿನಿಱಿಗೊಂಡು ಸೊಗಯಿಸುವ ನಿಱಿಗನ ನಿಱಿದಳಿರ ಗೊಂಚಲ್ಗಳುಂ, ಆತನ ಮೇಲ್ವಾಯೆ ರಾಗಿಸಿ ರೋಮಾಂಕುರಂ ಒಗೆದಂತೆ ಒಗೆದ ಕಳಿಕಾಂಕುರಂಗಳುಂ, ಆತನ ಅಂಗಸಂಗದೊಳ್ ಕಾಮರಸಂ ಉಗುವಂತೆ ಉಗುವ ಸೊನೆಯ ಸೋನೆಗಳುಮನ್ ಒಳಕೊಂಡು ತದಾಶ್ರಮದ ನಂದನವನಂಗಳ್  ಜನಂಗಳನ್ ಅನಂಗಂಗೆ ತೊೞ್ತುವೆಸಂಗೆಯ್ಸಿದುವು)
ಆಗ ಆ ನಂದನದಲ್ಲಿ ಅಶೋಕಮರದ ಕೋಮಲ ಚಿಗುರುಗಳು ವಸಂತ ರಾಜನನ್ನು ಸ್ವಾಗತಿಸಲು ಕಟ್ಟಿದ ಬಾವುಟದಂತೆ ಅಲುಗುತ್ತಿದ್ದವು. ಮಾಧವೀಲತೆಗಳು ಮಾವಿನಮರಗಳನ್ನು ಹಿಡಿದು, ಹತ್ತಿ, ಅವುಗಳ ಎಳೆಯ ಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ದಾಟಿ ಆತನ ಸ್ವಾಗತಕ್ಕೆ ತೋರಣವನ್ನು ಕಟ್ಟಿದಂತೆ ಕಾಣುತ್ತಿದ್ದವು. ನಲ್ಲನನ್ನು ಎದುರ್ಗೊಳ್ಳುವ ನಲ್ಲೆಯು ಆತನ ಕಣ್ಣಿಗೆ ಚೆನ್ನಾಗಿ ಕಾಣಬೇಕೆಂದು ಸಿಂಗರಿಸಿಕೊಳ್ಳುವಂತೆ, ಕಲ್ಪಲತೆಗಳು ಮೊಗ್ಗುಗಳನ್ನು, ಅರಿಬಿರಿದ ಮುಗಳುಗಳನ್ನು ರಾಶಿರಾಶಿಯಾಗಿ ತಳೆದಿದ್ದವು. ಆತನು ಬರುವ ಹೊತ್ತಿಗೆ ಭೇರಿಯನ್ನು ಬಾರಿಸುವಂತೆ ದುಂಬಿಗಳು ಝೇಂಕರಿಸುತ್ತಿದ್ದವು. ಹರಡಿಕೊಂಡ ಮರಳಿನಲ್ಲಿ ಬಿದ್ದ ಗಳಿತ ಹೂವುಗಳು ಆತನ ಬರವಿಗೆ ರಂಗೋಲೆ ಇಟ್ಟಂತೆ ಕಾಣುತ್ತಿದ್ದವು. ಆತನನ್ನು ಮೆಚ್ಚಿಸಲೆಂಬಂತೆ ಕಾಡೆಂಬ ಹೆಣ್ಣು ತನ್ನನ್ನು ಚೆನ್ನಾಗಿ ಅಲಂಕರಿಸಿಕೊಂಡಂತೆ ಮಾವಿನ ಮರದಲ್ಲಿ ಚಿಗುರಿನ ಗೊಂಚಲುಗಳು ತೂಗುತ್ತಿದ್ದವು. ಆತನು ಬಂದು ತಮ್ಮ ಮೇಲೆ ಎರಗಿದ್ದರಿಂದ ರೋಮಾಂಚನಗೊಂಡಂತೆ ಗಿಡಮರಗಳು ಚಿಗುರೊಡೆದವು. ಆತನ ಅಂಗಸಂಗದಿಂದೊಸರಿದ ಕಾಮರಸವೋ ಎಂಬಂತೆ ಮರಗಳು ಸೊನೆಯನ್ನು ಸುರಿಸುತ್ತಿದ್ದವು. ಹೀಗೆ ಆ ನಂದನವನಗಳು ಜನರನ್ನು ಮನ್ಮಥನ ತೊತ್ತುಗಳನ್ನಾಗಿಸಿದವು!

ಚಂ|| ಬಿರಯಿಯ ಮಿೞ್ತು[ವೆ]ಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ|
     ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ||
     ಱರನಿರದೂಱಿ ಸಾಱಿ ಜಡಿವಂತೆಸೆಗುಂ ಸಹಕಾರ ಕೋಮಳಾಂ|
     ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್ ||೧೩|| 
(ಬಿರಯಿಯ ಮಿೞ್ತುವೆಂ, ಮಿದಿದೊಡಲ್ಲದೆ ಅಣಂ ಮುಳಿಸು ಆಱದು ಎಂದು ಪಲ್ ಮೊರೆದಪನ್ ಇಲ್ಲಿ ಮನ್ಮಥನ್, ಇದಂ ಪುಗಲ್ ಇಂ ಗಡಿಂ, ಎಂದು ಬೇಟಕಾಱರನ್ ಇರದೆ ಊಱಿ ಸಾಱಿ ಜಡಿವಂತೆ ಎಸೆಗುಂ, ಸಹಕಾರ ಕೋಮಳಾಂಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್)
‘ನಾನು ವಿರಹಿಗಳ ಪಾಲಿನ ಮೃತ್ಯು! ಅವರನ್ನು ಹಿಡಿದು ಹಿಂಸಿಸದಿದ್ದರೆ ನನ್ನ ಸಿಟ್ಟು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಲು ಮಸೆಯುತ್ತಿದ್ದಾನೆ! ಆದ್ದರಿಂದ ವಿರಹಿಗಳ್ಯಾರೂ ಈ ನಂದನಕ್ಕೆ ಬರಬೇಡಿ’ ಎಂದು ಕೂಗಿ ಹೇಳಿ, ಪ್ರೇಮಿಗಳನ್ನು ಎಚ್ಚರಿಸುವಂತೆ, ಮಾವಿನ ಚಿಗುರುಂಡು ಸೊಕ್ಕಿದ ಕೋಗಿಲೆಗಳ ಕೂಗು ಆ ನಂದನಗಳಲ್ಲಿ ಕೇಳುತ್ತಿತ್ತು.
ಚಂ|| ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ|
     ಲ್ಗವಿಲನುಮಾಗಿ ಬಂದ ಮಲಯಾನಿಲನೂದೆ ತೆರಳ್ವ ಚೂತ ಪ||
     ಲ್ಲವದ ತೆರಳ್ಕೆ ತದ್ವನ ವಿಳಾಸಿನಿಯುಟ್ಟ ದುಕೂಲದೊಂದು ಪ|
     ಲ್ಲವದ ತೆರಳ್ಕೆಯಂತೆಸೆಯೆ ಕಣ್ಗೆಸೆದಿರ್ದುವು ನಂದನಾಳಿಗಳ್||೧೪|| 
(ಕವಿವ ಮದಾಳಿಯಿಂ ಮಸುಳನಾಗಿ, ಪಯೋಜರಜಂಗಳೊಳ್ ಕವಿಲ್ ಕವಿಲನುಂ ಆಗಿ ಬಂದ ಮಲಯಾನಿಲನ್ ಊದೆ, ತೆರಳ್ವ ಚೂತ ಪಲ್ಲವದ ತೆರಳ್ಕೆ, ತದ್ವನ ವಿಳಾಸಿನಿಯುಟ್ಟ ದುಕೂಲದ ಒಂದು ಪಲ್ಲವದ ತೆರಳ್ಕೆಯಂತೆ ಎಸೆಯೆ ಕಣ್ಗೆ ಎಸೆದಿರ್ದುವು ನಂದನಾಳಿಗಳ್)
ಆ ನಂದನದಲ್ಲಿ ಎಲ್ಲ ಕಡೆಯೂ ಕವಿದ ಸೊಕ್ಕೇರಿದ ದುಂಬಿಗಳಿಂದಾಗಿ ಅಲ್ಲಿ ಬೀಸುವ ಮಲಯಾನಿಲನೂ ಮಾಸಿದ್ದಾನೆ. ತಾವರೆಯ ಪರಾಗಗಳಿಂದಾಗಿ ಅವನ ಬಣ್ಣ ಕೆಂಪುಕೆಂಪಾಗಿದೆ. (ಹೀಗೆ ಬುದ್ಧಿ ಮಾಸಿದ, ಪರಾಗದ ನಶೆಯಿಂದ  ಮುಖ ಕೆಂಪೇರಿಸಿಕೊಂಡ) ಮಲಯಾನಿಲ ಆ ವನವಿಳಾಸಿನಿಯ ದುಕೂಲದ ಸೆರಗಿನಂತೆ ಶೋಭಿಸುವ ಮಾವಿನ ಚಿಗುರನ್ನು ಊದಿ ಅಲುಗಿಸುತ್ತಿದ್ದಾನೆ! ಅವಳನ್ನು ಕೆಣಕುತ್ತಿದ್ದಾನೆ! ಹೀಗೆ ಆ ನಂದನವನವು ಶೋಭಿಸುತ್ತಿದೆ.
ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ|
     ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ||
     ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ|
     ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ||೧೫|| 
(ಪೋಗದೆ ಪಾಡುತಿರ್ಪ ಅಳಿಯೆ ಬೃಂಹಿತಂ ಆಗಿರೆ ಚಂದ್ರಕಾಂತಿ ಕಾಯ್ಪು ಆಗಿರೆ ಬೀಸುವೊಂದು ಎಲರೆ ಬೀಸುವುದಾಗಿರೆ ಕಾಯ್ಗಳಿಂದಂ ಇಂಬಾಗಿರೆ ಸೋರ್ವ ಸೋನೆ ಮದಮಾಗಿರೆ, ಮಾವಿನ ಬಂದ ಕೋಡೆ ಕೋಡಾಗಿರೆ, ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ)
ದುಂಬಿಗಳು ಬೇರೆಲ್ಲಿಯೂ ಹೋಗದೆ ಆ ನಂದನದಲ್ಲಿಯೇ ಉಳಿದು ಝೇಂಕರಿಸುತ್ತಿವೆ. ಅವುಗಳ ಆ ಝೇಂಕಾರ ವಸಂತ ಋತುವೆಂಬ ಆನೆಯ ಘೀಂಕಾರದಂತಿದೆ. ಆ ನಂದನದ ಬೆಳ್ದಿಂಗಳು ಆನೆಯ ಕೋಪದಂತಿದೆ. ಅಲ್ಲಿ ಬೀಸುವ ಗಾಳಿ ಆನೆಯ ರಭಸವಾದ ನಡಿಗೆಯಂತಿದೆ. ಮಾವಿನ ಕಾಯಿಗಳಿಂದ ಸೊಗಸಾಗಿ ಸೋರುವ ಸೊನೆ ಆನೆಯ ಮದಜಲದಂತಿದೆ. ಮಾವಿನ ಮರದ ಕೊಂಬೆಗಳು ಆನೆಯ ದಂತಗಳಂತಿವೆ. ಹೀಗೆ ಆ ನಂದನದಲ್ಲಿ ವಸಂತ ಋತು ಆನೆಯ ರೂಪು ತಳೆದು ವಿಯೋಗಿಗಳ ಮೇಲೆ ಹರಿಹಾಯ್ದಿದೆ.
(ಬೀಸು: ವೇಗವಾಗಿ ನಡೆ; ಉದಾ: “ಕಪ್ಪಾಯ್ತು ಕಣ್ರೋ: ನಾನು ಸುಮಾರು ದೂರ ಹೋಗಬೇಕು” ಎನ್ನುತ್ತಾ ಗುತ್ತಿ ತನ್ನ ಕುಳ್ಳುದೇಹದ ಕುಳ್ಳುಗಾಲುಗಳನ್ನು ಬೀಸಿ ಬೀಸಿ ಹಾಕುತ್ತಾ ತೋಟದ ದಾರಿ ಹಿಡಿದು ಹೊರಟನು
-ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು” ಪುಟ‍ ೬)


|| ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯುಮಪ್ಪುದಱಿಂ ವನಕ್ರೀಡಾನಿಮಿತ್ತದಿಂ ಪೋಗಿ
(ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ, ಕ್ರೀಡಾನುಶೀಲೆಯುಂ ಅಪ್ಪುದಱಿಂ, ವನಕ್ರೀಡಾನಿಮಿತ್ತದಿಂ ಪೋಗಿ-) 
ಹಾಗೆ ಬಂದ ವಸಂತದಲ್ಲಿ ಸೊಕ್ಕಿನವಳೂ, ಆಟದ ಖಯಾಲಿಯವಳೂ ಆದ ಮಾದ್ರಿ ಕಾಡು ತಿರುಗಲೆಂದು ಹೋಗಿ-

ಚಂ|| ವನಕುಸುಮಂಗಳಂ ಬಗೆಗೆವಂದುವನೞ್ತಿಯೊಳಾಯ್ದು ಕೊಯ್ದು ಮೆ|
     ಲ್ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದೆ ಮ||
     ತ್ತನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇ|
     ೞ್ಪನಿತನೆ ಮಾಡಿ ತೊಟ್ಟು ಕರಮೊಪ್ಪಿದಳಾಕೆ ಬಸಂತ ಕಾಂತೆವೋಲ್||೧೬|| 
(ವನಕುಸುಮಂಗಳಂ ಬಗೆಗೆ ಬಂದುವನ್ ಅೞ್ತಿಯೊಳ್ ಆಯ್ದು, ಕೊಯ್ದು, ಮೆಲ್ಲನೆ ವಕುಳ ಆಳವಾಳ ತಳದೊಳ್ ಸುರಿದು ಅಂಬುಜಸೂತ್ರದಿಂದೆ, ಮತ್ತೆ ಅನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಂ ಎಂದು ಬೇೞ್ಪ ಅನಿತನೆ ಮಾಡಿ, ತೊಟ್ಟು, ಕರಂ ಒಪ್ಪಿದಳ್ ಆಕೆ, ಬಸಂತ ಕಾಂತೆವೋಲ್)
(ಮಾದ್ರಿ) ತನಗೆ ಇಷ್ಟವಾದ ಕಾಡು ಹೂಗಳನ್ನು ಪ್ರೀತಿಯಿಂದ ಆರಿಸಿ, ಕೊಯ್ದು, ಬಕುಳ ವೃಕ್ಷಗಳ (ರಂಜ, ರೆಂಜೆ, ಬಾಗೆ) ತೋಪಿನಲ್ಲಿ ಆ ಮರಗಳ ನೆರಳಿನಲ್ಲಿ ಕುಳಿತುಕೊಂಡು, ವಿರಾಮವಾಗಿ, ತಾವರೆಯ ದಂಟಿನ ನಾರಿಗೆ ತಾನು ತಂದ ಹೂಗಳನ್ನು ಪೋಣಿಸಿ, ಅಷ್ಟೂ ಹೂಗಳಿಂದ ಮೊಗ್ಗಿನ ಸರಿಗೆ, ತೋಳ್ಬಳೆ, ಬಳೆ, ಹಾರ ಎಂದು ಬೇಕಾದಷ್ಟನ್ನು ಮಾಡಿ, ತೊಟ್ಟು ವಸಂತರಾಜನ ರಮಣಿಯಂತೆ ಶೋಭಿಸಿದಳು.
(ಸುರಿ=ಪೋಣಿಸು;  ಮಲೆನಾಡಿನ ಭಾಗದಲ್ಲಿ ಈ ಅರ್ಥದಲ್ಲಿ ಈಗಲೂ ಬಳಸುತ್ತಾರೆ. 
ಉದಾ: "...ಸ್ವಲ್ಪ ಗಡಸಾದ ಕಾಯಿಗಳನ್ನ ದಾರಕ್ಕೆ ಸುರಿದು ಪೋಣಿಸಿ ಹವಳದ ಹಾರದಂತೆ ಎರಡೆಳೆಯ ಹಾರವನ್ನಾಗಿಸಿ ಅವನ್ನ ದನ ಹಾಗೂ ಕರುಗಳ ಕುತ್ತಿಗೆಗೆ ಕಟ್ಟಲಾಗುತ್ತಿತ್ತು..."
-ಅನಘಾ ಕಿರಣ ಅವರಮರೆತ ಮಾತುಗಳು” ಬ್ಲಾಗಿನಿಂದ. http://maretamaatugalu.blogspot.com/2013/11/blog-post_4.html)
ವ|| ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ-
(ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆ ಎಣೆಯಾಗಿರೆ)
ಹಾಗೆ ತೊಟ್ಟ ಹೂವಿನ ಆಭರಣಗಳು ಮನ್ಮಥನು ಹೂಡಿದ ಹೂಬಾಣದಂತೆ ಇರಲು-
ಚಂ|| ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನಾವಗಮೀವ ಚೆನ್ನ ಪೂ|
     ಗಳನವನೊಯ್ಯನೋಸರಿಸುತುಂ ವದನಾಬ್ಜದ ಕಂಪನಾಳ್ದುಣಲ್||
     ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳೊಯ್ಯನೆ ಸೋವುತುಂ ಬೆಡಂ|
     ಗೊಳಕೊಳೆ ಸೊರ್ಕಿದಂಗಜ ಮತಂಗಜದಂತಿರೆ ಬರ್ಪ ಮಾದ್ರಿಯಂ||೧೭|| 
(ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನ್ ಆವಗಂ ಈವ ಚೆನ್ನ ಪೂಗಳನ್ ಅವನ್ ಒಯ್ಯನೆ ಓಸರಿಸುತುಂ, ವದನ ಅಬ್ಜದ ಕಂಪನ್ ಆಳ್ದು ಉಣಲ್  ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳ್ ಒಯ್ಯನೆ ಸೋವುತುಂ, ಬೆಡಂಗು ಒಳಕೊಳೆ ಸೊರ್ಕಿದ ಅಂಗಜ ಮತಂಗಜದಂತೆ ಇರೆ ಬರ್ಪ ಮಾದ್ರಿಯಂ)
ಅಲುಗಾಡುವ ಗುಂಗುರುಕೂದಲುಗಳ ನಡುವೆ ಸಿಕ್ಕಿಕೊಂಡು ಚೆಲುವನ್ನೀವ ಚೆಂದದ ಹೂಗಳನ್ನು ಮೆಲ್ಲನೆ ಬದಿಗೆ ಸರಿಸುತ್ತಾ, ಮುಖಕಮಲದ ಪರಿಮಳಕ್ಕಾಗಿ ಮೇಲೆ ಬಿದ್ದು ಮುತ್ತುವ ದುಂಬಿಗಳನ್ನು ಕೈಯಲ್ಲಿ ಹಿಡಿದ ನೈದಿಲೆಯಿಂದ ಮೆಲ್ಲನೆ ಓಡಿಸುತ್ತಾ, ವೈಯಾರದಿಂದ, ಸೊಕ್ಕಿದ ಆನೆಯಂತೆ ನಡೆದು ಬರುತ್ತಿದ್ದ  ಮಾದ್ರಿಯನ್ನು-
|| ತಾಪಸಾಶ್ರಮದಿಂ ಪೊಱಮಟ್ಟಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು-
ತಾಪಸಾಶ್ರಮದಿಂ ಪೊಱಮಟ್ಟು ಅಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು)
ತಾಪಸಾಶ್ರಮದಿಂದ ಹೊರಬಿದ್ದು ಹಾಗೇ ಸುಮ್ಮನೆ (ಮಾದ್ರಿಯ ಹಾಗೆಯೇ!) ಕಾಡು ತಿರುಗುತ್ತಿದ್ದ ಪಾಂಡುರಾಜನು ಕಂಡಾಗ-