ಶನಿವಾರ, ಡಿಸೆಂಬರ್ 19, 2009

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ- ಭಾಗ ೨

ಕಾರ್ಪೋರೇಟ್ ಕಂಪೆನಿಗಳು ತಮ್ಮ ಕೆಲಸವನ್ನು ತುಂಬಾ ವ್ಯವಸ್ಥಿತವಾಗಿಯೂ, ನಿಖರವಾಗಿಯೂ ಮಾಡುತ್ತವೆ, ಖಚಿತವಾದ ಪೂರ್ವ ಲೆಕ್ಕಾಚಾರ ಇಲ್ಲದೆ ಯಾವ ವ್ಯವಹಾರಕ್ಕೂ ಮುಂದುವರಿಯುವುದಿಲ್ಲ ಎಂದೆಲ್ಲ ನಾನು ಭಾವಿಸಿದ್ದೆ. ಆದರೆ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯು ನನ್ನ ನಂಬಿಕೆ ಬುಡಭದ್ರವಿಲ್ಲದ್ದು ಎಂದು ಸಾಧಿಸಿ ತೋರಿಸಿದೆ.
ಹಿಂದಿನ ನನ್ನ ಲೇಖನದಲ್ಲಿ ಎಂ ಎಸ್ ಇ ಝಡ್ ವಿರುದ್ಧ ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸಿದ ವಿಷಯ ಹೇಳಿದ್ದೆ. ತಾ. ೧೭-೧೨-೨೦೦೯ರಂದು ಕಂಪೆನಿ ನಾನು ಕೇಳಿದ ಮೂರು ಮಾಹಿತಿಗಳಲ್ಲಿ ಎರಡನ್ನು ಕೊಟ್ಟು, ಕೊಳಚೆ ನೀರು ಸಂಸ್ಕರಣದ ಕುರಿತ ಮಾಹಿತಿಯನ್ನು ಮಂಗಳೂರು ಮಹಾನಗರಪಾಲಿಕೆಯಿಂದ ಪಡೆಯಲು ನನಗೆ ಸೂಚಿಸಿದೆ. ಇದಕ್ಕೆ ನಾನು ಹೀಗೆ ಉತ್ತರ ಬರೆದಿದ್ದೇನೆ: "ಮಾಹಿತಿ ಹಕ್ಕು ೨೦೦೫ರ ಪ್ರಕಾರ ಒಂದು ವೇಳೆ ಮಾಹಿತಿ ನಿಮ್ಮಲ್ಲಿ ಇಲ್ಲದಿದ್ದರೆ ಅದು ಎಲ್ಲಿ ದೊರೆಯುತ್ತದೆಯೋ ಅಲ್ಲಿಗೆ ನನ್ನ ಅರ್ಜಿಯನ್ನು ಐದು ದಿನಗಳ ಒಳಗೆ ಕಳಿಸಿಕೊಟ್ಟು, ಹಾಗೆ ಮಾಡಿರುವುದನ್ನು ನನಗೆ ತಿಳಿಸುವುದು ನಿಮ್ಮದೇ ಕರ್ತವ್ಯವಾಗಿರುತ್ತದೆ. ಆದ್ದರಿಂದ ನನ್ನ ಅರ್ಜಿಯನ್ನು ನೀವೇ ಮಂಗಳೂರು ಮಹಾನಗರಪಾಲಿಕೆಗೆ ಕಳಿಸಿಕೊಡಬೇಕಾಗಿ ಕೋರುತ್ತೇನೆ.
ನಿದರ್ಶನಕ್ಕಾಗಿ ಜಿಲ್ಲಾಧಿಕಾರಿಯ ಕಚೇರಿಯಿಂದ ನನಗೆ ಬಂದಿರುವ ಪತ್ರದ ಯಥಾಪ್ರತಿಯನ್ನು ಕಳಿಸಿದ್ದೇನೆ".
ಅದಿರಲಿ. ಕಂಪೆನಿಯ ಹತ್ತಿರ ಈ ಮಾಹಿತಿ ಇಲ್ಲವೆಂಬುದು ಈ ಉತ್ತರದಿಂದ ಖಚಿತವಾಯ್ತಷ್ಟೆ. ಕೊಳಚೆ ನೀರು ಘಟಕಗಳಿಂದ ದೊರೆಯುವ ನೀರಿನ ಪ್ರಮಾಣದ ಬಗ್ಗೆ ಯಾರು ಏನೇ ಹೇಳಲಿ, ಜವಾಬ್ದಾರಿಯಿಂದ ವರ್ತಿಸುವ ಯಾವುದೇ ಕಂಪೆನಿ ಅದನ್ನು ಸ್ವತಃ ತಾನು ಅಧ್ಯಯನ ಮಾಡಿ ಖಚಿತ ಪಡಿಸಿಕೊಳ್ಳಲೇ ಬೇಕು. (ಈ ನಡುವೆ ಮಹಾನಗರಪಾಲಿಕೆಗೂ ವಿಶೇಷ ಆರ್ಥಿಕ ವಲಯ ಕಂಪೆನಿಗೂ ಈ ಬಗ್ಗೆ ಒಪ್ಪಂದವೇನಾದರೂ ಆಗಿದೆಯೆ, ಪಾಲಿಕೆ ಆ ನೀರನ್ನು ಕಂಪೆನಿಗೆ ಕೊಡಲು ಒಪ್ಪಿದೆಯೆ ಎಂಬ ಪ್ರಶ್ನೆಯೂ ಇದೆ. ಕೊಳಚೆ ನೀರು ಶುದ್ಧೀಕರಿಸಲು ಸಾಕಷ್ಟು ಖರ್ಚಿದೆ. ಪಾಲಿಕೆಯ ನೀರಿನ ರೇಟು ಕಂಪೆನಿಗೆ ಪೂರೈಸುತ್ತದೆಯೆ ಎಂಬ ಅಂಶವೂ ತೀರ್ಮಾನವಾಗಬೇಕಾಗುತ್ತದೆ. ಪೈಪ್ ಲೈನಿನ ಬಹು ಮುಖ್ಯ ಭಾಗ ಮಂಗಳೂರು ಪೇಟೆಯಲ್ಲಿಯೇ ಹಾದು ಹೋಗಬೇಕಾಗಿ ಬಂದರೆ ಅದನ್ನು ಅಳವಡಿಸಲು ಬೇಕಾದ ಜಮೀನಿನ ಏರ್ಪಾಟು ಖಂಡಿತಾ ಸುಲಭವಲ್ಲ.) ಹಾಗೆ ಖಚಿತಪಡಿಸಿಕೊಳ್ಳದೆ ಹೋದರೆ ಅಗತ್ಯ ಪ್ರಮಾಣದ ನೀರು ಸಿಗುತ್ತದೆ ಎಂದು ಯಾವ ಗ್ಯಾರಂಟಿ? ಮುಂದೆ ಮಳೆನೀರಿನ ಬಗ್ಗೆ ಕಂಪೆನಿ ಕೊಟ್ಟಿರುವ ಉತ್ತರ ನೋಡಿದರೆ, ಕೊಳಚೆ ನೀರನ್ನು ಶುದ್ಧೀಕರಿಸಿ ಒದಗಿಸಿಕೊಳ್ಳುವ ಮಾತು ಕೂಡ ಯಾವ ಅಧ್ಯಯನವನ್ನೂ ಆಧರಿಸದ ಕೇವಲ ಪೊಳ್ಳುಮಾತಾಗಿ ಕಾಣುತ್ತದೆ.
ಮಳೆನೀರು ಸಂಗ್ರಹದ ಕುರಿತಂತೆ ಕಂಪೆನಿಯ ಉತ್ತರ ಹೀಗಿದೆ:
"ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಕಾಮಗಾರಿಯು ಈಗಷ್ಟೇ ಆರಂಭವಾಗಿದ್ದು, ತತ್ ಕ್ಷಣಕ್ಕೆ ದಿನವಹಿ ೪೫ ಎಂ.ಜಿ.ಡಿ. ನೀರು ಅವಶ್ಯಕತೆ ಇರುವುದಿಲ್ಲ. ಬಹು ಉತ್ಪಾದನಾ ವಿಶೇಷ ಆರ್ಥಿಕ ವಲಯ (Multi Product SEZ) ಸ್ಥಾಪನೆಯಾಗುವ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು".
ಈ ಮಾತಿನ ಅರ್ಥ ಅತ್ಯಂತ ಸ್ಪಷ್ಟ: ಮಳೆ ನೀರು ಸಂಗ್ರಹದ ವಿಷಯದಲ್ಲಿ ಕಂಪೆನಿ ಈವರೆಗೂ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ! ಇದರ ಸಾಧ್ಯಾಸಾಧ್ಯತೆಯ ಬಗ್ಗೆ (ನಾನು ನನ್ನ ಲೇಖನದಲ್ಲಿ ತಲೆ ಕೆಡಿಸಿಕೊಂಡಷ್ಟು ಸಹ) ತಲೆ ಕೆಡಿಸಿಕೊಂಡಿಲ್ಲ. ವಾಸ್ತವವಾಗಿ ತನ್ನ ನೀರಿನ ಅಗತ್ಯ ಎಷ್ಟು ಎಂಬುದೂ ಅದಕ್ಕೆ ಸರಿಯಾಗಿ ತಿಳಿದಿಲ್ಲ. ಹಾಗಿದ್ದರೂ ಅದರ ಜಾಹೀರಾತು ಸ್ಪಷ್ಟವಾಗಿ ಹೇಳುತ್ತದೆ: "ಮಳೆನೀರನ್ನು ಸಂಗ್ರಹಿಸಿ ೧೨ ಎಂಜಿಡಿ ನೀರನ್ನು ಒದಗಿಸಿಕೊಳ್ಳಲಾಗುವುದು" ಎಂದು. ಈ ಮಾತಿನ ಉದ್ದೇಶ ಸಾಮಾನ್ಯ ಜನರನ್ನು ಮಂಗ ಮಾಡುವುದು ಬಿಟ್ಟು ಬೇರೇನು ಇರಲು ಸಾಧ್ಯ? ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಈ ಜಾಹೀರಾತಿನ ಅಂತಿಮ ಒಳ ಉದ್ದೇಶ ಬೇರೇನೋ ಇರಬಹುದೇ? (ಇಲ್ಲಿ ಜಾಗ ತೆಗೆದುಕೊಂಡು ಕೈಗಾರಿಕೆ ಸ್ಥಾಪಿಸಬಯಸುವ ಯಾವುದೇ ಕಂಪೆನಿಯನ್ನು ಇಂಥ ಜಾಹೀರಾತಿನಿಂದ ಮರುಳು ಮಾಡುವುದು ಖಂಡಿತ ಸಾಧ್ಯವಿಲ್ಲ). ಹಾಗಾಗಿ ಈ ಜಾಹೀರಾತಿನ ಗುರಿ ಜನಸಾಮಾನ್ಯರೇ ಎಂದು ಭಾವಿಸಬೇಕಾಗುತ್ತದೆ.
ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ನೀರು ಸರಬರಾಜಿನ ಬಗ್ಗೆ:
ಈ ಕುರಿತು ಕರ್ನಾಟಕ ಸರಕಾರವು ಅನುಮತಿ ನೀಡಿರುವುದರ ದಾಖಲೆಯನ್ನು ಕಂಪೆನಿ ನನಗೆ ನೀಡಿದೆ. ಜೊತೆಗೇ ಮತ್ತೊಂದು ಕುತೂಹಲಕರವಾದ ಮಾಹಿತಿಯನ್ನು ನೀಡಿದೆ: "ನೇತ್ರಾವತಿಯ ನೀರಿಗಾಗಿ ಎ. ಎಂ. ಆರ್. ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ಅದು ಹೇಳಿದೆ.
ಎ. ಎಂ. ಆರ್. ಎಂಬುದು ಒಂದು ಖಾಸಗಿ ಕಂಪೆನಿ. ಅದು ಬಂಟ್ವಾಳ ತಾಲೂಕಿನ ಶಂಬೂರಿನ ಹತ್ತಿರ ನೇತ್ರಾವತಿ ನದಿಯಲ್ಲಿ ಒಂದು ಕಿರು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿದೆ. ಈ ಬಗ್ಗೆ ಈಗ ಬರೆಯುವುದಿಲ್ಲ. ಅಧ್ಯಯನ ಮಾಡಿ ಮತ್ತೆ ಬರೆಯುತ್ತೇನೆ. ಈ ಒಪ್ಪಂದದ ಪ್ರತಿಯನ್ನು ಕಳಿಸಿಕೊಡುವಂತೆ ಪುನಃ ಮಾಹಿತಿ ಹಕ್ಕಿನಡಿ ಕಂಪೆನಿಗೆ ಅರ್ಜಿ ಸಲ್ಲಿಸಿದ್ದೇನೆ.
ಗುರುಪುರ ನದಿಯಿಂದ ನೀರೆತ್ತುವ ಬಗ್ಗೆ ಕಂಪೆನಿ ಮೌನ ವಹಿಸಿದೆ. ಯಾವ ಮಾಹಿತಿಯನ್ನೂ ಕೊಟ್ಟಿಲ್ಲ.
ಒಟ್ಟಿನ ಮೇಲೆ ಕಂಪೆನಿ ನನಗೆ ನೀಡಿರುವ ಉತ್ತರ ಮತ್ತು ಮಾಹಿತಿಯನ್ನು ಆಧರಿಸಿ ತೀರ್ಮಾನಿಸಬಹುದಾದ್ದು ಇಷ್ಟು: ಕಂಪೆನಿಯ ಕಣ್ಣು ಮುಖ್ಯವಾಗಿ ನೆಟ್ಟಿರುವುದು ನೇತ್ರಾವತಿ ನದಿಯ ನೀರಿನ ಮೇಲೆ ಮಾತ್ರ. ಕೊಳಚೆ ನೀರು ಸಂಸ್ಕರಣೆ, ಮಳೆ ನೀರು ಸಂಗ್ರಹ ಎಂದೆಲ್ಲ ಅದು ಹೇಳುತ್ತಿರುವುದು ಜನಸಾಮಾನ್ಯರಿಗೆ ಅರ್ಥವಾಗದ ಬೇರೆ ಯಾವುದೋ ಉದ್ದೇಶದಿಂದ.
*************
ಮಾಹಿತಿಗಾಗಿ ಅರ್ಜಿ ಸಲ್ಲಿಸುವವರನ್ನು ಸತಾಯಿಸುವ ಇನ್ನೊಂದು ವಿಧಾನವನ್ನು ನಮ್ಮ ಅಧಿಕಾರಿಗಳು ಅನುಸರಿಸುತ್ತಾರೆ. ಅದಕ್ಕೊಂದು ಉದಾಹರಣೆ:
ಸಣ್ಣ ನೀರಾವರಿ ಇಲಾಖೆಯಿಂದ ನಾನು ಕೇಳಿದ ಒಂದು ಮಾಹಿತಿಗೆ ಇಲಾಖೆ "ಮಾಹಿತಿಗಾಗಿ ಒಂದು ರೂಪಾಯಿ ಕಳಿಸಿಕೊಡಿ" ಎಂದು ನನಗೆ ತಿಳಿಸಿತು. ಒಂದು ರೂಪಾಯಿ ಕಳಿಸುವುದರ ಕಷ್ಟ ಅನುಭವಿಸಿದವನಿಗೇ ಗೊತ್ತು. ಮನಿ ಆರ್ಡರನ್ನು ಇಲಾಖೆ ಸ್ವೀಕರಿಸುವುದಿಲ್ಲ. ನಮ್ಮ ಬಿ.ಸಿ.ರೋಡಿನ ಅಂಚೆ ಕಛೇರಿಯಲ್ಲಿ ಒಂದು ರೂಪಾಯಿಯ ಪೋಸ್ಟಲ್ ಆರ್ಡರ್ ಸಿಗುವುದಿಲ್ಲ. ಡಿಡಿ ತೆಗೆಯುವುದೆಂದರೆ ಕಮಿಷನ್ನೇ ಹದಿನೈದೋ ಇಪ್ಪತ್ತೋ ರೂಪಾಯಿ ಆಗುತ್ತದೆ. ಪುನಃ ಅದನ್ನು ನೊಂದಾಯಿತ ಅಂಚೆಯಲ್ಲಿ ಕಳಿಸಲು ಇಪ್ಪತ್ತು ರೂ. ಖರ್ಚು!
ಆ ಅಧಿಕಾರಿ ನನಗೆ ಪತ್ರವನ್ನು ಸಾಧಾರಣ ಅಂಚೆಯಲ್ಲಿ ಕಳಿಸಿದ್ದರು. ಬೆಂಗಳೂರಿನಲ್ಲಿ "ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಇಲಾಖೆ" ಎಂಬುದೊಂದು ಇದೆ. ನಾನು ಆ ಇಲಾಖೆಗೆ ಒಂದು ಪತ್ರ ಬರೆದು ಸಮಸ್ಯೆಯನ್ನು ವಿವರಿಸಿ, ಜೊತೆಗೆ ಹೀಗೆ ಸೇರಿಸಿದೆ. "ಅವರು ಬರೆದ ಪತ್ರದಿಂದ ಸರಕಾರಕ್ಕೆ ಸಿಗುವುದು ಒಂದು ರೂಪಾಯಿ. ಆ ಒಂದು ರೂಪಾಯಿಗಾಗಿ ಅವರು ಸ್ಟ್ಯಾಂಪಿಗೆ ಐದು ರೂ., ಕವರಿಗೆ ಐವತ್ತು ಪೈಸೆ, ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದ ಪತ್ರಕ್ಕೆ ಕಡಿಮೆ ಎಂದರೂ ಹದಿನೈದು ರೂಪಾಯಿ, ಉಳಿದ ಕೆಲಸಗಳಿಗೆ ಎರಡು ರೂಪಾಯಿ - ಹೀಗೆ ಒಟ್ಟು ಇಪ್ಪತ್ತೆರಡೂವರೆ ರೂ. ಖರ್ಚು ಮಾಡಿದ್ದಾರೆ. ಇದೇ ತಂತ್ರವನ್ನು ಇನ್ನೂ ಅನೇಕ ಅಧಿಕಾರಿಗಳು ಬಳಸುತ್ತಿರಬಹುದು. ಆದ್ದರಿಂದ ಎಲ್ಲರಿಗೂ ಅನ್ವಯವಾಗುವಂತೆ ಈ ಸಮಸ್ಯೆಗೆ ಒಂದು ಪರಿಹಾರ ಒದಗಿಸುವಂತೆ ಕೋರುತ್ತೇನೆ". (ಅವರಿಂದ ಇನ್ನೂ ಉತ್ತರ ಬಂದಿಲ್ಲ. ಆದರೆ ಬರುವ ಸಾಧ್ಯತೆ ಇದೆ. ಕಾಯೋಣ!)
ಮೇಲಿನ ಪತ್ರದ ಯಥಾಪ್ರತಿಯನ್ನಿಟ್ಟು, ಐದು ರೂಪಾಯಿಯ ಒಂದು ಪೋಸ್ಟಲ್ ಆರ್ಡರ್ ಲಗತ್ತಿಸಿ, ಸಣ್ಣ ನೀರಾವರಿ ಇಲಾಖೆಗೆ ಒಂದು ಪತ್ರವನ್ನು ಸಾಧಾರಣ ಅಂಚೆಯಲ್ಲಿಯೇ ರವಾನಿಸಿದೆ: "ಈ ಪತ್ರದೊಂದಿಗೆ ಐದು ರೂಪಾಯಿಯ ಪೋಸ್ಟಲ್ ಆರ್ಡರನ್ನು ಇಟ್ಟಿದ್ದೇನೆ. ಈ ಪೈಕಿ ಒಂದು ರೂಪಾಯಿಯನ್ನು ಮಾಹಿತಿಗೆ ಮತ್ತು ಉಳಿದ ನಾಲ್ಕು ರೂಪಾಯಿಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿ/ ಮುಖ್ಯಮಂತ್ರಿಗಳ ಪರಿಹಾರ ನಿಧಿ/ ನೆರೆ ಪರಿಹಾರ ನಿಧಿಗೆ ಜಮಾ ಮಾಡಿಕೊಂಡು ನನಗೆ ಮಾಹಿತಿಯನ್ನು ಕಳಿಸಿಕೊಡಿರಿ"
ಅಧಿಕಾರಿ ಮಾಹಿತಿಯನ್ನು ಕಳಿಸಿಕೊಟ್ಟರು. ಜೊತೆಗೆ ಮಾಹಿತಿಗೆ ಒಂದು ರೂಪಾಯಿಗೆ ರಶೀದಿ, ಪ್ರಕೃತಿ ವಿಕೋಪ ಪರಿಹಾರ ನಿಧಿಗೆ, ಟ್ರೆಶರಿಯಲ್ಲಿ ಚಲನ್ ತುಂಬಿಸಿ ನಾಲ್ಕು ರೂ. ಕಟ್ಟಿದ್ದರ ರಶೀದಿಯ ಯಥಾಪ್ರತಿ ಇವುಗಳೂ ಇದ್ದವು!

ಬುಧವಾರ, ಡಿಸೆಂಬರ್ 16, 2009

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ

ಈ ಕುರಿತಾದ ನನ್ನ ಮೊದಲಿನ ಲೇಖನಕ್ಕೆ ಎಂ ಎಸ್ ಇ ಝಡ್ ತಾ. ೬-೧೦-೦೯ರ ಉದಯವಾಣಿಯಲ್ಲಿ ಪ್ರಕಟಿಸಿದ ಜಾಹೀರಾತನ್ನು ಆಧಾರವಾಗಿ ಇಟ್ಟುಕೊಂಡಿದ್ದೆ. ನನ್ನ ವಿಶ್ಲೇಷಣೆಯ ದೋಷಗಳು ನನಗೆ ತಿಳಿಯುವುದಿಲ್ಲ. ಹಾಗಾಗಿ, ಕಂಪೆನಿ ಯಾವ ಅಧ್ಯಯನವನ್ನು ಆಧರಿಸಿ ಈ ಅಂಕಿ ಅಂಶಗಳನ್ನು, ಮಾಹಿತಿಯನ್ನು ಪ್ರಕಟಿಸಿದೆ ಎಂದು ತಿಳಿಯುವ ಕುತೂಹಲದಿಂದ, ಮಾಹಿತಿ ಹಕ್ಕನ್ನು ಬಳಸಿ ಎಂ ಎಸ್ ಇ ಝಡ್ ಗೆ ಅರ್ಜಿ ಹಾಕಿ ಈ ಮೂರು ಮಾಹಿತಿಗಳನ್ನು ಕೇಳಿದ್ದೆ:
೧. ಮಂಗಳೂರು ಮಹಾನಗರ ಪಾಲಿಕೆಯ ಕೊಳಚೆ ನೀರು ಸಂಸ್ಕರಣಾ ಘಟಕಗಳಿಂದ ೧೮ ಎಂಜಿಡಿ ನೀರು ದೊರೆಯುವುದಕ್ಕೆ ಆಧಾರಗಳು, ಈ ತೀರ್ಮಾನಕ್ಕೆ ಬರಲು ನಡೆಸಿದ ಅಧ್ಯಯನದ ಸಂಪೂರ್ಣ ವಿವರ. ಹೀಗೆ ಪಡೆಯುವ ನೀರಿಗೆ ತಗಲಬಹುದಾದ ಖರ್ಚು ಎಷ್ಟು.
೨. ನೈಸರ್ಗಿಕ ಅಣೆಕಟ್ಟುಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ೧೨ ಎಂಜಿಡಿ ನೀರು ಪಡೆಯುವ ಹೇಳಿಕೆಗೆ ಆಧಾರ, ಈ ಬಗ್ಗೆ ನಡೆಸಿರುವ ಅಧ್ಯಯನದ ಸಂಪೂರ್ಣ ವಿವರ (ಸಂಗ್ರಹಾಗಾರದ ಸ್ವರೂಪ, ಅದು ಕೆರೆಯ ರೂಪದಲ್ಲಿರುತ್ತದೆಯೆ ಅಥವಾ ಕಾಂಕ್ರೀಟ್ ಇತ್ಯಾದಿ ಬಳಸಿ ಟ್ಯಾಂಕುಗಳನ್ನು ನಿರ್ಮಿಸಲಾಗುವುದೆ, ಒಟ್ಟು ಎಷ್ಟು ಎಕರೆ ಪ್ರದೇಶದಲ್ಲಿ ಇತ್ಯಾದಿ ವಿವರಗಳು)
೩. ಗುರುಪುರ ಮತ್ತು ನೇತ್ರಾವತಿಗೆ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.
ಈ ಅರ್ಜಿಗೆ ಕಂಪೆನಿ ಅಮೋಘ ಒಂದು ಸಾಲಿನ ಉತ್ತರ ನೀಡಿತು: "ನೀವು ಕೋರಿದ ಮಾಹಿತಿಯಂತೆ ದಿನಾಂಕ ೬-೧೦-೨೦೦೯ರ ಉದಯವಾಣಿಯಲ್ಲಿ ನಾವು ಯಾವುದೇ ಜಾಹೀರಾತನ್ನು ನೀಡಲಿಲ್ಲವೆಂದು ಈ ಮೂಲಕ ತಿಳಿಸಬಯಸುತ್ತೇವೆ". "ಕೆಪ್ಪ ಅಂದರೆ ಕೊಪ್ಪದ ಕಡೆ" ಅಂತ ನಮ್ಮೂರು ಕೊಪ್ಪದ ಕಡೆ ಒಂದು ಗಾದೆ. ಇರಲಿ. ನಾನು ಪ್ರತಿ ಬಾಣ ಬಿಟ್ಟೆ:
"೧. ದಿ. ೬-೧೦-೦೯ರ ಉದಯವಾಣಿ ಪತ್ರಿಕೆಯ ಪ್ರತಿ ನನ್ನಲ್ಲಿದೆ. ಅದರಲ್ಲಿ ನಿಮ್ಮ ಜಾಹೀರಾತೂ ಇದೆ.
೨. ನಿಮ್ಮ ವೆಬ್ ಸೈಟಿನಲ್ಲೂ ನೀವು ನೀರನ್ನು ಎಲ್ಲಿಂದ ಒದಗಿಸಿಕೊಳ್ಳಲಾಗುವುದು ಎಂದು ವಿವರಿಸಿದ್ದೀರಿ. ಅದರ ಪ್ರಿಂಟ್ ಔಟ್ ಸಹ ನನ್ನಲ್ಲಿದೆ.
೩. ನೀರಿನ ಲಭ್ಯತೆಯ ಬಗ್ಗೆ ನೀವು ಮಾಡಿರುವ ಅಧ್ಯಯನ ಇಲ್ಲಿ ಮುಖ್ಯವೇ ಹೊರತು ನೀವು ಜಾಹೀರಾತು ಕೊಟ್ಟಿದ್ದೀರೋ ಇಲ್ಲವೋ ಎನ್ನುವುದು ಅಲ್ಲ.
ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮಾಹಿತಿ ಕೊಡತಕ್ಕದ್ದೆಂದು ಮಾಹಿತಿ ಹಕ್ಕು ಕಾಯಿದೆ ಹೇಳುತ್ತದೆ. ಅದರಂತೆ ತಾ. ೧೦-೧೧-೨೦೦೯ರ ನನ್ನ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನನಗೆ ಕೊಡದಿದ್ದಲ್ಲಿ, ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸುವುದು ನನಗೆ ಅನಿವಾರ್ಯವಾಗುತ್ತದೆ ಎಂಬುದನ್ನು ಗಮನಿಸಿರಿ."
ಈವರೆಗೆ ಮಾಹಿತಿ ಬಂದಿಲ್ಲ.(ತಾ. ೧೪-೧೨-೨೦೦೯) ಅನಿವಾರ್ಯವಾಗಿ ನಾಳೆ ಮಾಹಿತಿ ಆಯುಕ್ತರಿಗೆ ದೂರು ಸಲ್ಲಿಸುತ್ತೇನೆ. ಏನಾಗುತ್ತದೋ ನೋಡೋಣ.
**********
ನಮಗೆ ಬೇಕಾದ ಮಾಹಿತಿ ಯಾವ ಇಲಾಖೆಯಲ್ಲಿ ದೊರೆಯುತ್ತದೆ ಎಂದು ತಿಳಿದುಕೊಳ್ಳುವುದೇ ಮೊದಲ ದೊಡ್ಡ ಸಮಸ್ಯೆ. ಆದರೆ ಮಾಹಿತಿ ಹಕ್ಕು ಕಾನೂನು ಇದನ್ನು ಸರಳವಾಗಿ ಪರಿಹರಿಸಿದೆ. ಎಂ ಆರ್ ಪಿ ಎಲ್ - ಕರ್ನಾಟಕ ಸರಕಾರಗಳ ನಡುವೆ ನೀರಿನ ಕುರಿತು ಆಗಿರುವ ಒಪ್ಪಂದದಲ್ಲಿ ಎಂ ಆರ್ ಪಿ ಎಲ್ ಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨.೨೫ ಕೋಟಿ ಲೀಟರ್ ನೀರು ಎತ್ತಲು ಸರಕಾರ ಅನುಮತಿ ನೀಡಿದೆ. ಎಂ ಆರ್ ಪಿ ಎಲ್ ಈ ಮಿತಿಯೊಳಗೇ ನೀರು ಎತ್ತುತ್ತಿದೆಯೇ ಎಂದು ನೋಡಿಕೊಳ್ಳಲು ಒಂದು ಸರಕಾರಿ ಸಮಿತಿ ಇದೆ. ಈ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರು. ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬ ಸದಸ್ಯರು. ಇನ್ನೂ ಹಲವು ಸದಸ್ಯರಿದ್ದಾರೆ. ನಾನು ಜಿಲ್ಲಾಧಿಕಾರಿಯವರ ಕಛೇರಿಯ ಮಾಹಿತಿ ಅಧಿಕಾರಿಗೆ ಪತ್ರ ಬರೆದು, "ಈ ಸಮಿತಿ ಕಳೆದ ೫ ವರ್ಷಗಳಲ್ಲಿ ಎಷ್ಟು ಸಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಎಂಬ ಮಾಹಿತಿ ಮತ್ತು ತೀರ ಇತ್ತೀಚೆಗೆ ನೀಡಿದ ಭೇಟಿಯ ವರದಿಯ ಯಥಾಪ್ರತಿ"ಗಳನ್ನು ಕೊಡುವಂತೆ ಕೇಳಿದೆ. ಜಿಲ್ಲಾಧಿಕಾರಿ ಕಛೇರಿಯ ಮಾಹಿತಿ ಅಧಿಕಾರಿ ನನಗೆ ಪತ್ರ ಬರೆದು, "ಈ ಮಾಹಿತಿಯು ಸಣ್ಣ ನೀರಾವರಿ ಇಲಾಖೆಗೆ ಸಂಬಂಧ ಪಟ್ಟಿರುವುದರಿಂದ ನಿಮ್ಮ ಅರ್ಜಿಯನ್ನು ಅವರಿಗೆ ಕಳಿಸಿಕೊಟ್ಟಿದೆ" ಎಂದು ತಿಳಿಸಿ ನನ್ನ ಅರ್ಜಿಯನ್ನು ಅವರೇ ಸಣ್ಣ ನೀರಾವರಿ ಇಲಾಖೆಗೆ ಕಳಿಸಿಕೊಟ್ಟರು. ಇದೇ ಕಾನೂನು. ಅರ್ಜಿದಾರ ಕೇಳಿದ ಮಾಹಿತಿ ತನ್ನಲ್ಲಿ ಇಲ್ಲವೆಂದು ಯಾವ ಮಾಹಿತಿ ಅಧಿಕಾರಿಯೂ ಹೇಳುವಂತಿಲ್ಲ. ಆತ ಅರ್ಜಿಯನ್ನು ಮಾಹಿತಿ ಯಾರಲ್ಲಿದೆಯೋ ಅವರಿಗೆ ಕಳಿಸಿಕೊಟ್ಟು, ಹಾಗೆ ಕಳಿಸಿಕೊಟ್ಟಿರುವುದನ್ನು ಅರ್ಜಿದಾರನಿಗೆ ತಿಳಿಸಬೇಕು.
ಸಣ್ಣ ನೀರಾವರಿ ಇಲಾಖೆ ನನಗೆ ಪೂರ್ಣ ಮಾಹಿತಿ ಕೊಡಲಿಲ್ಲ. ಆದರೆ ಕೊಟ್ಟ ಮಾಹಿತಿ ಕುತೂಹಲಕರವಾಗಿದೆ: ಸಮಿತಿ ಸ್ಥಳಕ್ಕೆ ಭೇಟಿ ನೀಡಿದ ದಿನ ಎಷ್ಟು ನೀರು ಎತ್ತಲಾಯಿತೆಂಬುದರ ಲೆಕ್ಖವನ್ನು ಎಂ ಆರ್ ಪಿ ಎಲ್ ಸಮಿತಿಗೆ ಕೊಟ್ಟಿದೆ. ಅದು ನಿಗದಿತ ಮಿತಿಯೊಳಗೇ ಇದೆ. ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಯಾವುದೇ ವ್ಯಾಪಾರದಲ್ಲೂ, ವಸ್ತುವನ್ನು ಕೊಡುವವನು ತಾನೇ ಅಳೆದು ಅಥವಾ ತೂಕ ಮಾಡಿ ವಸ್ತುವನ್ನು ಕೊಡುವುದು ರೂಢಿ. ಕರೆಂಟಿನ ಮೀಟರ್ ಇಲಾಖೆಯದು. ದೂರವಾಣಿ ಮೀಟರ್ ಸಹ ಹಾಗೆಯೇ. ಆದರೆ ಎಂ ಆರ್ ಪಿ ಎಲ್ ವಿಷಯದಲ್ಲಿ ಮಾತ್ರ ಇದು ಉಲ್ಟಾ. (ಒಪ್ಪಂದದಲ್ಲಿ ಹೀಗೆ ಹೇಳಿದೆ: MRPL has to make its own arrangement to draw the permitted quantity of 5 MGD of water from the river for providing calibrated gauge or any other mechanical or electronic devise for assessing the quantum of water lifted and permitted to inspect the same by the Deputy Commissioner of D.K.... ಈ ವಾಕ್ಯದಲ್ಲಿ ಕೊಮಾ, ಪೂರ್ಣವಿರಾಮ ಇತ್ಯಾದಿಗಳನ್ನು ಓದುವವರೇ ಸೇರಿಸಿಕೊಳ್ಳಬೇಕು. ಕಾಲಸೂಚಕ ಪ್ರತ್ಯಯಗಳಿಗೂ ಓದುಗರೇ ಜವಾಬ್ದಾರಿ!) ಕಂಪೆನಿಯು ತಾನು ಎತ್ತಿದ ನೀರಿನ ಪ್ರಮಾಣವನ್ನು ತಾನೇ ಅಳೆದು ಸಮಿತಿಗೆ ಲೆಕ್ಖ ಕೊಡುತ್ತದೆ. ಸಮಿತಿ "ಎಲ್ಲ ಸರಿ ಇದೆ" ಎಂದು ತಲೆಯಾಡಿಸುತ್ತದೆ! ಹೇಗೆ ವ್ಯಾಪಾರ? ( ಪೋಲಿಸ್ ಅಧಿಕಾರಿ ಶಂಕರ ಬಿದರಿಯವರಿಗೆ ಒಂದು ವಿಶಿಷ್ಟ ದೇಹಭಾಷೆ ಇದೆ. "ಹೇಗೆ ವ್ಯಾಪಾರ?" ಅಂತ ನಾನು ಕೇಳಿದೆನಲ್ಲ, ಅದನ್ನು ಅವರು ಶಬ್ದಗಳೇ ಇಲ್ಲದೆ, ಮುಖ ಮತ್ತು ಕಣ್ಣುಗಳಲ್ಲೇ ಕೇಳಿ, ಆ ವ್ಯಾಪಾರದ ಪರಮ ಮೂರ್ಖತನವನ್ನು ಹೊರಹಾಕಬಲ್ಲರು. ಆ ಮಾತು ಬರೆದಾಗ ನನಗೆ ಅವರ ನೆನಪಾಯಿತು).
*******************
ನೇತ್ರಾವತಿ ನದಿ ನೀರು ಎತ್ತುವ ಬಗ್ಗೆ ಎಂ ಆರ್ ಪಿ ಎಲ್ ಮತ್ತು ಕರ್ನಾಟಕ ಸರಕಾರದ ನಡುವೆ ಆಗಿರುವ ಒಪ್ಪಂದದ ಕುರಿತು:
ಈ ಒಪ್ಪಂದದ ಪ್ರತಿಯನ್ನು ನಾನು ಮಾಹಿತಿ ಹಕ್ಕಿನಡಿ ಎಂ ಆರ್ ಪಿ ಎಲ್ ನಿಂದ ಪಡೆದುಕೊಂಡಿದ್ದೇನೆ.
೧. ಎಂ ಆರ್ ಪಿ ಎಲ್ ಗೆ ಕರ್ನಾಟಕ ಸರಕಾರ ಕೊಡುವ ನೀರಿಗೆ ದರ ಈಗ ೪೫ ಲಕ್ಷ ಲೀಟರಿಗೆ ರೂ. ೨೮೮-೯೦! ಈ ದರ ಯಾವ ಆಧಾರದಲ್ಲಿ ಯಾರು ನಿಗದಿ ಮಾಡಿದರು ಎಂಬುದು ಆಶ್ಚರ್ಯದ ವಿಷಯ. ಮಾರುಕಟ್ಟೆಯಲ್ಲಿ ದೊರೆಯುವ ಕುಡಿಯುವ ನೀರಿಗೆ ಲೀಟರಿಗೆ ರೂ. ೧೨-೦೦ ಇದೆ. ಅದರ ವಿಷಯ ಬಿಡೋಣ. ಬಂಟ್ವಾಳ ಪಟ್ಟಣ ಪಂಚಾಯತ್ ತಾನು ಸರಬರಾಜು ಮಾಡುವ ಕುಡಿಯುವ ನೀರಿನ ದರ ಒಂದು ಸಾವಿರ ಲೀಟರಿಗೆ ಎರಡು ರೂ. ವಾಣಿಜ್ಯ ಬಳಕೆಗೆ ಒಂದು ಸಾವಿರ ಲೀಟರಿಗೆ ಐದು ರೂ. ಮತ್ತು ಕೈಗಾರಿಕಾ ಬಳಕೆಗೆ ಒಂದು ಸಾವಿರ ಲೀಟರಿಗೆ ಎಂಟು ರೂಪಾಯಿ ಮೂವತ್ತಮೂರು ದರ ವಿಧಿಸುತ್ತದೆ. ಹೀಗಿರುವಾಗ ಇಂಥ ಬಿಸಾಕುದರದಲ್ಲಿ ಸರಕಾರ ಎಂ ಆರ್ ಪಿ ಎಲ್ ಗೆ ನೀರನ್ನು ಕೊಡುತ್ತಿರುವುದರ ಗುಟ್ಟು ಅರ್ಥವಾಗುವುದಿಲ್ಲ. ಈ ದರವನ್ನು ನಿಗದಿ ಮಾಡಿದವರು ಯಾರು ಮತ್ತು ಅದಕ್ಕೆ ಆಧಾರವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ. ಮಾಹಿತಿ ಸಿಕ್ಕಿದರೆ ಮುಂದೆ ತಿಳಿಸುತ್ತೇನೆ.