ಬುಧವಾರ, ನವೆಂಬರ್ 3, 2010

ಮಂಗಳೂರು ಎಸ್ ಇ ಝಡ್ ಕಂಪೆನಿ ಆರ್ ಟಿ ಐ ವ್ಯಾಪ್ತಿಗೆ


ನೇತ್ರಾವತಿ ನದಿನೀರಿಗೆ ಸಂಬಂಧಪಟ್ಟಂತೆ ಮಂಗಳೂರು ಎಸ್ ಇ ಝಡ್ ಕಂಪೆನಿ ಎ ಎಂ ಆರ್ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ಮಾಹಿತಿ ಹಕ್ಕಿನಡಿ ನಾನು ಕೇಳಿದಾಗ, ಕಂಪೆನಿ ನನಗೆ ಮಾಹಿತಿ ನೀಡಲು ತಿರಸ್ಕರಿಸಿತ್ತು. ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ವಿಚಾರಣೆಗೆ ಬಂದಾಗ ಕಂಪೆನಿ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಬೆಂಬಲವಾಗಿ ಅದು ಮಂಗಳೂರಿನ ಖ್ಯಾತ ವಕೀಲ ಶ್ರೀ ಎಂ. ಶಂಕರ ಭಟ್ಟರ ಕಾನೂನು ಅಭಿಪ್ರಾಯವನ್ನೂ ಲಗತ್ತಿಸಿತ್ತು.
ಮೊದಲು ಮಡಿಕೇರಿಯಲ್ಲಿ, ನಂತರ ಬೆಂಗಳೂರಿನಲ್ಲಿ ಹೀಗೆ ಎರಡು ಸಲ ವಿಚಾರಣೆ ನಡೆದು ಈಗ ಆಯೋಗದ ತೀರ್ಪು ಹೊರಬಿದ್ದಿದೆ. ಅದನ್ನು ಯಥಾವತ್ತಾಗಿ ಮುಂದೆ ಕೊಟ್ಟಿದ್ದೇನೆ.
14-10-2010
1. Petitioner is present.
2. Complaint was last heard on 05-06-2010, when the Commission directed the Respondent to file the copies of balance sheets of Mangalore SEZ for last 3 years to enable the Commission to decide whether the Company is substantially financed by the Government and whether it is a public authority under the provision of Right to Information Act 2005 or not.
3. In his letter dated 22nd July 2010 to Commission, Sri A.G.Pai, ED&COO, Mangalore SEZ Ltd., has furnished the copies of the balance sheets.
4. In his letter dated 12th October 2010 to the Commission, Sri Ramachandra Bhandarkar, PIO & PRO, Mangalore SEZ has requested the Commission to adjourn the case by two weeks and he also states that in the meanwhile he is seeking legal opinion.
5. Commission noted that request for information was received on 19-12-2009, case was posted for hearing on 05-06-2010, Respondent was allowed time to file copies of Balance Sheets, Respondent filed copies of Balance Sheets on 22nd July 2010. Since no information is provided till today i.e., till 14-12-2010 for nearly twelve months, Commission considers the delay is considerable and it didn't agree with the request of the Respondent to adjourn the case for another two weeks. Hence Commission decides to proceed with the case treating Respondent ex-parte.
6. In his letter dated 06-10-2010 to the Commission, Petitioner has produced documents such as Annual report of M/s ONGC for the year 2008-09 and 2009-10 wherein ONGC has recorded that it has got a share holding of Rs. 13 crores in M/s Mangalore SEZ Ltd. He has also produced documents to show that KIADB has got Rs. 11.27 crore share capital in M/s Mangalore SEZ Ltd.
7. Commission noted that ONGC had entered into a Memorandum of Understanding with the Governemt of Karnataka to jointly develop the Special Economic Zone (SEZ) near Mangalore through Special Purpose Vehicle(SPV) consequently with the appproval of the cabinet, the SPV known as M/s Mangalore SEZ Ltd. has been incorporated during February 2006 with a authoized share capital of Rs. One crore the equity pattern M/s Mangalore SEZ Ltd. is stated as follows
a) ONGC - 26%
b) KIADB - 23%
c) IL & FS - 51%
8. Government of Karnataka in his order number CI 400 SPI 2006 dated 3rd March 2007, has accorded permission to KIADB to subscribe to the additional equity share capital to the extent of Rs. 11.27 crores in M/s Mangalore SEZ Ltd. and permission was given to KIADB to sign the share holders agreement in connection with M/s Mangalore SEZ Ltd.
9. In the statement of accounts produced along with the Balance Sheet by M/s Mangalore SEZ Ltd., in Schedule 7 under the head "Significant Accounting Policies" under sub-heading at Sl. No. 6 it is mentioned as follows:-
"6. Advance against Share Capital as at 31/3/2008 represents, the amount received from the following parties in terms of clause 3.3 of share holder's agreement dated 29-03-2007"
Name of the Share holder As on 31-03-2008(in Rs.)
Oil and Natural Gas corporation Limited 127,412,000
Karnataka Industrial Area Development Board 112,700,000
Infrastructure leasing and Financial Services Limited 245,100,000
Total 485,212,000
The above documents produced by the Petitioner and Respondents clearly show that M/s Mangalore SEZ Ltd., has received substantial Financial Aid both from Central and State Governments. Hence there is no substance in the argument that M/s Mangalore SEZ Ltd., is not a Public Authority. Commission comes to the conclusion that M/s Mangalore SEZ Ltd., is a 'Public Authority' under section 2(h) of the Right to Information Act. 2005.
10. Commission therefore directs Sri A.G.Pai, ED & COO, Mangalore SEZ Ltd., 3rd Floor, MUDA Building, Ashokanagar, Urwa Stores, Mangalore-575006 to provide the information sought by the Petitioner within 30 days free of cost, through RPAD, under intimation to the Commission.
11. The complaint is adjourned to 18-01-2011at 3-30 p.m.
ದಿನಾಂಕ 6-10-2010 ರಂದು ನಾನು ಕಳಿಸಿಕೊಟ್ಟ ದಾಖಲೆಗಳನ್ನು ಆಯೋಗ ವಿವರವಾಗಿ ಪರಿಶೀಲಿಸಿ, ಹೆಚ್ಚು ಕಡಿಮೆ ಅದರ ಆಧಾರದ ಮೇಲೆಯೇ ತೀರ್ಪು ಕೊಟ್ಟಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ 6.75 ಕೋಟಿ ಲೀ. ನೀರೆತ್ತಲು ಅನುಮತಿ ನೀಡಿರುವುದರ ದಾಖಲೆಯನ್ನೂ ನಾನು ಆಯೋಗಕ್ಕೆ ನೀಡಿದ್ದೆ. ಆದರೆ ಮಾನ್ಯ ಆಯೋಗ ಆ ದಾಖಲೆಯನ್ನು ಪರಿಗಣಿಸಿಲ್ಲ.
ಅನುಮಾನವೇ ಇಲ್ಲದಂತೆ "ಮಂಗಳೂರು ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ " ಎಂದು ತೀರ್ಪು ನೀಡಿದ ಮೇಲೂ, ವಿಚಾರಣೆಯನ್ನು ಪುನಃ 18-01-2011ಕ್ಕೆ ಯಾಕೆ ಇಡಲಾಗಿದೆ ಎಂಬುದು ಮಾತ್ರ ನನಗೆ ಅರ್ಥವಾಗಿಲ್ಲ. ತಿಳಿದವರು ಯಾರಾದರೂ ಇದು ಹೀಗೆ ಯಾಕೆ ಎಂದು ತಿಳಿಸಿ ಹೇಳಿದರೆ ಕೃತಜ್ಞ.

ಕೆಂಪುಕಲ್ಲೆಂಬ ಮೈಸೂರುಪಾಕು!


ಕಂಚಿನಡ್ಕಪದವು ಇರುವುದು ಸಜಿಪನಡು ಸಜಿಪಪಡುಗಳ ನಡುವೆ. ಈ ಎರಡೂ ಸಣ್ಣ ಊರುಗಳಿರುವುದು ಬಂಟ್ವಾಳ ತಾಲೂಕಿನಲ್ಲಿ; ಬಿ.ಸಿ.ರೋಡಿನಿಂದ ಮೆಲ್ಕಾರಿಗಾಗಿ ಕೊಣಾಜೆಗೆ ಹೋಗುವ ದಾರಿಯಲ್ಲಿ. ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಕಂಚಿನಡ್ಕಪದವಿನಲ್ಲಿ ನಿರ್ಮಾಣವಾಗುತ್ತಿದೆ. ಗಲೀಜು ಅಲ್ಲಿ ಸಂಗ್ರಹವಾದಮೇಲೆ ಗಬ್ಬು ವಾಸನೆ ಹೊಡೆಯುವುದು ಇದ್ದೇ ಇದೆಯಷ್ಟೆ. ಆದರೆ ಈ ತ್ಯಾಜ್ಯಘಟಕದ ವ್ಯವಹಾರ ಕಸ ತಂದು ಇಲ್ಲಿ ಸುರಿಯುವ ಮೊದಲೇ, ಘಟಕದ ನಿರ್ಮಾಣ ಹಂತದಲ್ಲಿಯೇ, ಗಬ್ಬು ವಾಸನೆ ಹೊರಡಿಸುತ್ತಿದೆ ಎಂದು ನಮ್ಮ ಬಿ.ಸಿ.ರೋಡಿನ ವಂಶ ಪತ್ರಿಕೆ ವರದಿ ಮಾಡಿತ್ತು. ಹಾಗಾಗಿ ಈ ಪವಾಡವನ್ನು ಕಣ್ಣಾರೆ ಕಂಡುಬಿಡೋಣ ಎಂದು ಮೊನ್ನೆ ಭಾನುವಾರ (31-10-2010) ನಾನು ವಂಶದ ಪತ್ರಕರ್ತರೊಂದಿಗೆ ಅಲ್ಲಿಗೆ ಹೋದೆ. ಗೆಳೆಯ ಕೃಷ್ಣಗಟ್ಟಿಯವರೂ ಜೊತೆಗಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಇಂತಹ ಹಲವು ಪದವುಗಳಿವೆ. ವಿಸ್ತಾರವಾದ ಖಾಲಿ ಬಯಲು ಪ್ರದೇಶ. ಸ್ವಲ್ಪಮಟ್ಟಿಗೆ ಹುಲ್ಲು, ಸಣ್ಣ ಸಣ್ಣ ಸಸ್ಯಗಳು ಮಾತ್ರ ಬೆಳೆಯುವ ಜಮ್ಮಿಟಿಗೆ ಅಥವಾ ಕೆಂಪುಕಲ್ಲಿನ ರಚನೆಗಳು. ಬೆಂಜನಪದವು ಇಂತಹದೇ ಇನ್ನೊಂದು ಪ್ರದೇಶ. ಸಜಿಪನಡುವಿನಲ್ಲಿ ಎಡಕ್ಕೆ ತಿರುಗಿ ಕೆಂಪುಕಲ್ಲು ಸಾಗಿಸುವ ಲಾರಿಗಳು ಓಡಿಯಾಡಿ ಎರಡು-ಮೂರು ಅಡಿ ಆಳದ ಗುಂಡಿಗಳಾಗಿರುವ ರಸ್ತೆಯಲ್ಲಿ ಅಂದಾಜು ಮೂರು ಕಿ.ಮೀ. ಹೋದರೆ ಕಂಚಿನಡ್ಕಪದವು. ಅಲ್ಲಲ್ಲಿ ಒನ್ನೊಂದು ಮನೆಗಳು. ಜನವಸತಿ ಕಡಿಮೆ. ಕೆಂಪುಕಲ್ಲಿನ ಹಲವು ಕೋರೆಗಳು. ನಾವು ಹೋದದ್ದು ಭಾನುವಾರವಾದ್ದರಿಂದ ಕೆಲಸ ನಡೆಯುತ್ತಿರಲಿಲ್ಲ. ಘಟಕದ ದಾರಿಯಲ್ಲಿ ಒಂದು ಜಲ್ಲಿ ಕ್ರಷರ್ ಸಹ ಇದೆ.ಅಡ್ಡಾದಿಡ್ಡಿಯಾಗಿ ಹರಡಿಕೊಂಡಿರುವ ಕೆಂಪುಮಣ್ಣಿನ ರಾಶಿ ತುಂಬಿದ ಕೋರೆಗಳನ್ನು ಬಿಟ್ಟರೆ ಉಳಿದಂತೆ ಧಾರಾಳ ಶುದ್ಧಗಾಳಿ ಬೀಸುವ, ಪೃಕೃತಿಸಹಜವಾಗಿ ನಿರ್ಮಲವಾಗಿರುವ, ಮನೋಹರ ಭೂಪ್ರದೇಶ.
ಜನ ಇಲ್ಲವೇ ಇಲ್ಲ ಎಂದಲ್ಲ. ನಾವು ಐದು ಜನ ಅಲ್ಲಿಗೆ ಹೋದಮೇಲೆ ಸಹಜ ಕುತೂಹಲದಿಂದ ಜನ ಸೇರಿದರು. ಪತ್ರಕರ್ತ ಮಿತ್ರರು ಅವರೊಂದಿಗೆ ಮಾತನಾಡಿ ವಿಷಯ ಸಂಗ್ರಹಿಸುತ್ತಿದ್ದರು. ಅಲ್ಲಿಗೆ ಬಂದ ಒಂದಿಬ್ಬರು ಸ್ಥಳೀಯ ಲೀಡರುಗಳು "ನೀವು ಯಾರನ್ನು ಕೇಳಿ ಇಲ್ಲಿ ಬಂದಿರಿ? ಯಾರನ್ನು ಕೇಳಿ ಫೋಟೋ ತೆಗೆದಿರಿ? ಅಬ್ಬಾಸರನ್ನು ಕರೆದುಕೊಂಡು ಬರಬೇಕಿತ್ತು. ರೈಗಳನ್ನು (ಎಂದರೆ ಬಂಟ್ವಾಳ ಶಾಸಕ ರಮಾನಾಥ ರೈ) ಕರೆದುಕೊಂಡು ಬರಬೇಕಿತ್ತು" ಎಂದೆಲ್ಲ ತಕರಾರು ತೆಗೆದರು. ಪತ್ರಕರ್ತರೂ ಬುದ್ಧಿವಂತರೇ. ಬ್ಯಾರಿ ಭಾಷೆ, ತುಳು ಎರಡನ್ನೂ ಸರಾಗ ಮಾತಾಡಬಲ್ಲವರು. ಕ್ರಮೇಣ ವಾತಾವರಣ ತಿಳಿಯಾಯಿತು.
ಘಟಕದ ಕೆಲಸ ಶುರುವಾಗಿದೆ. ಸುತ್ತ ಪಾಗಾರ ಹಾಕುವ ಕೆಲಸ ನಡೆಯುತ್ತಿದೆ. ಹಾಗಾಗಿ ಎಂಟೂವರೆ ಎಕ್ರೆ ವಿಸ್ತಾರದ ಘಟಕ ಕಣ್ಣಳತೆಗೆ ಸಿಗುತ್ತದೆ. ನಾನು ಹೋದ ಮೂಲ ಉದ್ದೇಶ ತ್ಯಾಜ್ಯ ತುಂಬುವ ಮೊದಲೇ ಗಬ್ಬುವಾಸನೆ ಹೊರಡುತ್ತಿರುವ ಆರೋಪ ನಿಜವೇ ಸುಳ್ಳೇ ಎಂದು ತಿಳಿಯಲು. ನಮ್ಮಲ್ಲಿ ಬಗೆಬಗೆಯದನ್ನು ತಿಂದು ಜೀರ್ಣಿಸಿಕೊಳ್ಳುವ ಜನ ಇದ್ದಾರಷ್ಟೆ. ಮೇವು ತಿನ್ನುವವರು, ಮಣ್ಣು(ಭೂಮಿ) ತಿನ್ನುವವರು, ಸಿಮೆಂಟ್, ಹೊಯ್ಗೆ, ಕಬ್ಬಿಣ ಇತ್ಯಾದಿ ತಿನ್ನುವವರು, ಮರ ತಿನ್ನುವವರು, ಪುಸ್ತಕ ತಿನ್ನುವವರು ಹೀಗೆ ವೈವಿಧ್ಯಮಯ ಆಹಾರಪದ್ಧತಿ ಇರುವ ಪುಣ್ಯಭೂಮಿ ನಮ್ಮದು. ನಾವೊಂದು ಕಡಿಮೆಯಾಗುವುದು ಯಾಕೆ ಅಂತ ನಮ್ಮೂರ ಕೆಲವರು ಕಲ್ಲು (ಕೆಂಪುಕಲ್ಲು) ತಿನ್ನುತ್ತಿದ್ದಾರೆ ಎಂಬುದು ನಮ್ಮಲ್ಲಿ ಕೆಲವರ ಅನುಮಾನ. ಅಂಥದನ್ನೆಲ್ಲ ತಿನ್ನುವವರಿಗೆ ಇಂದಲ್ಲ ನಾಳೆ ಹೊಟ್ಟೆ ನೋವು ಬರಲಾರದೆ? ಯಾಕೆ ಅನ್ನ ತಿನ್ನಬಾರದು? ಕಲ್ಲು, ಮಣ್ಣು ಯಾಕೆ ತಿನ್ನಬೇಕು? ನನಗೆ ಅರ್ಥವಾಗುವುದಿಲ್ಲ.
ನೋಡಿದರೆ ಪೂರ್ತಿ ಎಂಟೂವರೆ ಎಕ್ರೆ ಜಾಗ ಹರಪ್ಪ ಮೊಹೆಂಜೋದಾರೋದ ಹಾಗೆ ಕಾಣುತ್ತದೆ. ಎಲ್ಲ ಕಡೆ ಅಗೆದ ಕೆಂಪು ಮಣ್ಣಿನ ರಾಶಿ. ಕೆಂಪು ಕಲ್ಲು ಕಡಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ, ಉಳಿದಿರುವ ಭಾಗದಲ್ಲಿ ಕೆಂಪುಕಲ್ಲಿನ ಚೌಕಾಕಾರದ ಅಚ್ಚುಗಳು. ಎಡೆ ಎಡೆಯಲ್ಲಿ ವಾಹನಗಳು ಓಡಾಡಬಹುದಾದ ದಾರಿಗಳು. ಯಾರೋ ಈ ಜಾಗದಲ್ಲಿ ಕೆಂಪುಕಲ್ಲು ಕಡಿದಿದ್ದಾರೆ, ಸಾಗಿಸಿದ್ದಾರೆ ಎನ್ನುವುದು ಎಂಥ ದಡ್ಡನಿಗೂ ಸ್ಪಷ್ಟವಾಗುವ ಸನ್ನಿವೇಶ, ದೃಶ್ಯ. ಪತ್ರಕರ್ತ ಮಿತ್ರರು ಸುಮಾರು ಫೋಟೋ ತೆಗೆದರು. ಆ ಪೈಕಿ ಒಂದೆರಡನ್ನು ಇಲ್ಲಿಯೂ ಕೊಟ್ಟಿದ್ದೇನೆ.
ಈ ಘಟಕದ ನಿರ್ಮಾಣಕ್ಕೆ ಸರಕಾರ 62 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆಯಂತೆ. ಈ ಯೋಜನೆಯನ್ನು ಯಾರು ತಯಾರಿಸಿದರು, ಸ್ಥಳ ಪರಿಶೀಲನೆ ಯಾರು ಮಾಡಿದರು, ಹಾಗೆ ಪರಿಶೀಲನೆ ಮಾಡಿದವರು ಇಲ್ಲಿ ಕೆಂಪುಕಲ್ಲಿನ ನಿಕ್ಷೇಪವಿದೆ ಎಂದು ತಮ್ಮ ವರದಿಯಲ್ಲಿ ಕಾಣಿಸಿದ್ದಾರೆಯೆ? ಯಾರಾದರೂ ಈ ಕೆಂಪುಕಲ್ಲಿನ ಮೌಲ್ಯನಿರ್ಣಯ ಮಾಡಿದ್ದಾರೆಯೆ? ಇಲ್ಲಿ ಕೋರೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆಯೆ? ಕೆಂಪುಕಲ್ಲುಗಳನ್ನು ಈ ಜಾಗದಿಂದ ಈಗ ತೆಗೆದು ಸಾಗಿಸುತ್ತಿರುವವರು ಯಾರು? ಅದರ ಹಣ ಯಾರಿಗೆ ಹೋಗುತ್ತಿದೆ? ಈ ವಿದ್ಯಮಾನಗಳು ಬಂಟ್ವಾಳ ಪುರಸಭೆಯ ಗಮನಕ್ಕೆ ಬಂದಿದೆಯೆ? ಮುಂತಾದ ಅನೇಕ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ.ಅಲ್ಲಿ ಬೀಸುತ್ತಿರುವ ಶುದ್ಧ ಗಾಳಿಯನ್ನು ಮಲಿನಗೊಳಿಸುತ್ತಿವೆ.
ನನಗೆ ಇಲ್ಲಿ ಇದ್ದ, ಇರುವ, ಕೆಂಪುಕಲ್ಲಿನ ಮೌಲ್ಯ ನಿರ್ಣಯ ಮಾಡುವಷ್ಟು ಪರಿಣತಿ ಇಲ್ಲ. ಆದರೆ, ಅದು ಯೋಜನೆಯ ಮೊತ್ತವಾದ 62 ಲಕ್ಷವನ್ನು ಮೀರಿಸಬಹುದು ಎಂಬ ಅನುಮಾನವಿದೆ. ವಂಶ ಪತ್ರಿಕೆ ಪ್ರಕರಣವನ್ನು ಎರಡು ಸಂಚಿಕೆಗಳಲ್ಲಿ ವರದಿ ಮಾಡಿದೆ. ನೋಡೋಣ ಏನಾಗುತ್ತದೆಂದು.
[ಈ ಮೊದಲು ನೇತ್ರಾವತಿ ನದಿಯಲ್ಲಿ (ನದಿಯಲ್ಲಿ ಎಂದರೆ ನದಿಯ ದಂಡೆಯಲ್ಲಿ ಅಲ್ಲ. ನದಿಯ ಪಾತ್ರದಲ್ಲಿ, ನದಿ ಹರಿಯುವ ದಾರಿಯಲ್ಲಿ) ಜಲವಿದ್ಯುತ್ ಯೋಜನೆ ಕಾರ್ಯಗತಗೊಳಿಸುವಾಗಲೂ ಡೈನಮೈಟ್ ಬಳಸಿ ಒಡೆದು ತೆಗೆದ ಕಲ್ಲನ್ನು ಕಂಪೆನಿ ಮಾರಿ ಹಣ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ಯೋಜನೆಗಳಿಗೆ ಅನುಮತಿ ನೀಡುವಾಗ ಅಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳ ಲೆಕ್ಕವನ್ನು ನಮ್ಮ ಅಧಿಕಾರಿಗಳೂ, ಎಂಜಿನಿಯರುಗಳೂ ಬುದ್ಧಿವಂತಿಕೆಯಿಂದ ಮರೆತುಬಿಡುತ್ತಿದ್ದಾರೆ ಎಂಬ ಅನುಮಾನ ನನಗಿದೆ. ಪಶ್ಚಿಮ ಘಟ್ಟಗಳ ಉದ್ದಕ್ಕೂ ಹತ್ತು ಮೂವತ್ತು ಕಿರು ಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಕಾರ ಅನುಮತಿ ನೀಡಿದೆ. ಈ ಎಲ್ಲ ಕಡೆಯಲ್ಲೂ ಗ್ರಾನೈಟ್ ಶಿಲೆ ಸಾಕಷ್ಟು ಪ್ರಮಾಣದಲ್ಲಿ ದೊರೆಯಲೇಬೇಕು. ಅನುಮತಿ ನೀಡುವಾಗ ಅಧಿಕಾರಿಗಳು ಈ ಅಂಶವನ್ನು ಲೆಕ್ಕ ಹಿಡಿದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಲು ನಿಶ್ಚಯಿಸಿದ್ದೇನೆ.]
********************
ತ್ಯಾಜ್ಯವಸ್ತುಗಳನ್ನು ಹೀಗೆ ಒಂದುಕಡೆ ತಂದು ಸುರಿಯುವುದರಿಂದ ಅಲ್ಲೊಂದು ನರಕ ಸೃಷ್ಟಿಯಾಗುತ್ತದೆ. ಸುತ್ತಮುತ್ತ ಮನುಷ್ಯರು ಬದುಕಲು ಸಾಧ್ಯವೇ ಇಲ್ಲದಂಥ ವಾತಾವರಣ ನಿರ್ಮಾಣವಾಗುತ್ತದೆ. ಈ ಜನರ ಕೂಗು ಕೇಳುವವರಾರು? ಹಾಗೆಂದು ಅಂಥವರ ಕೂಗನ್ನು ಮನ್ನಿಸಿದರೆ ಕಸ ಸುರಿಯುವುದೆಲ್ಲಿ? ಈ ಕಗ್ಗಂಟನ್ನು ಬಿಡಿಸಲು ನಾನು ಹೊರಡುವುದಿಲ್ಲ. ನನ್ನ ಬುದ್ಧಿಗೆ ಕಾಣುವ ಒಂದೇ ಪರಿಹಾರವೆಂದರೆ, ಅವರವರ ಮನೆಯ, ಅಂಗಡಿಯ, ಕಾರ್ಖಾನೆಯ ಕಸದ ವಿಲೇವಾರಿ ಅವರವರದೇ ಜವಾಬ್ದಾರಿಯಾಗಬೇಕು. ಯಾರೂ ತಾವು ಸೃಷ್ಟಿಸಿದ ಕಸವನ್ನು ಸಾರ್ವಜನಿಕ ಸ್ಥಳಕ್ಕೆ ತಂದು ಹಾಕಲು ಅವಕಾಶ ಇರಬಾರದು. ಕಸ ಸೃಷ್ಟಿಯಾಗದಂತೆ ಮಾಡುವುದೇ ಕಸ ವಿಲೇವಾರಿಯ ಅತ್ಯುತ್ತಮ ವಿಧಾನ. ಆದರೆ ಕಸ ಸೃಷ್ಟಿ ಮಾಡದಿದ್ದರೆ ಆಧುನಿಕ ನಾಗರಿಕತೆ ಉಸಿರು ಕಟ್ಟಿ ಸತ್ತೇ ಹೋಗುತ್ತದೆ. ಕಸ ಹೀಗೆ ಸೃಷ್ಟಿ ಮಾಡುತ್ತ ಹೋದರೂ ಮುಂದೊಂದು ದಿನ ಅದೇ ಪರಿಣಾಮ ಆದೀತು. ಆದರೆ ಅದು ಮುಂದೊಂದು ದಿನವಷ್ಟೆ? ಇವತ್ತಲ್ಲವಲ್ಲ? ಆಗ ನೋಡಿಕೊಂಡರಾಯಿತು!

ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!

(ಪುತ್ತೂರಿನ ಡಾ ನಿತ್ಯಾನಂದ ಪೈಯವರು ವೈದ್ಯವೃತ್ತಿಯ ಜೊತೆಗೆ ಬಳಕೆದಾರರ ಚಳುವಳಿಯಲ್ಲೂ ತೀವ್ರವಾಗಿ ತೊಡಗಿಕೊಂಡಿರುವವರು. ಅವರ ಲೇಖನಗಳು ಉದಯವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿವೆ. ಪೈಗಳು ಮಹಾ ಛಲವಾದಿ. ಒಂದು ಸಮಸ್ಯೆಯ ಬೆನ್ನು ಹಿಡಿದರೆ ಫಕ್ಕನೆ ಬಿಡುವ ಪೈಕಿ ಅಲ್ಲ. ಪುತ್ತೂರಿನ ಕುಡ್ಸೆಂಪ್ ಕಾಮಗಾರಿಗಳ ಅನರ್ಥಗಳ ಕುರಿತು ಮತ್ತೆ ಮತ್ತೆ ಲೇಖನಗಳನ್ನು ಬರೆದು, ವ್ಯವಸ್ಥೆಗೆ ಮೂಗುದಾರ ಹಾಕಿದವರು ಅವರು. ಇಂಥವರೇ ಪ್ರಜಾಪ್ರಭುತ್ವದ ನಿಜವಾದ ರಕ್ಷಕರು.
31-10-2010ರ ಉದಯವಾಣಿಯ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿದೆ. ವಿದ್ಯುತ್ತಿನ ಸಮಸ್ಯೆ ಪರಿಹರಿಸಲೆಂದು ಪಶ್ಚಿಮ ಘಟ್ಟಗಳ ಅಮೂಲ್ಯ ಕಾಡುಗಳನ್ನು ನಾಶ ಮಾಡಲು ಕರ್ನಾಟಕ ಸರ್ಕಾರ ಹೊಂಚುಹಾಕುತ್ತಿದೆ. ಕಂಟ್ರಾಕ್ಟರುಗಳು ಜೆಸಿಬಿಗಳನ್ನು ತಯಾರಿಟ್ಟುಕೊಂಡು ತೆರೆಮರೆಯಲ್ಲಿ ಕಾಯುತ್ತಿದ್ದಾರೆ. ಅಧಿಕಾರಿಗಳಲ್ಲಿ ಕೆಲವರು ಲೋಕಾಯುಕ್ತರಿಗೆ ಸಿಕ್ಕದ ಹಾಗೆ ದುಡ್ಡು ಮುಚ್ಚಿಡಲು ಹೊಸ ಉಪಾಯಗಳನ್ನು ಹುಡುಕಿಟ್ಟುಕೊಂಡು ತಯಾರಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಮಸ್ಯೆಗೆ ಬೇರೊಂದು ಪರಿಹಾರ ಇರುವುದನ್ನು ಎತ್ತಿ ತೋರಿಸಿರುವುದಕ್ಕಾಗಿ ಈ ಲೇಖನ ನನಗೆ ಮಹತ್ವದ್ದಾಗಿ ಕಂಡಿದೆ. ಹಾಗಾಗಿ ಅದನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ. ಲೇಖನವನ್ನು ಈಗಿನ ಇಂಧನ ಮಂತ್ರಿ ಶೋಭಾ ಕರಂದ್ಲಾಜೆಯವರಿಗೂ ಕಳಿಸಿ, ಅವರ ಅಭಿಪ್ರಾಯ ಕೇಳಿದ್ದೇನೆ. ನಿಮ್ಮಲ್ಲೂ ಯಾರಿಗಾದರೂ ಹಾಗೆ ಮಾಡಬೇಕೆಂದು ಕಂಡರೆ, ಮಾಡಬಹುದು).
-ಎಚ್. ಸುಂದರ ರಾವ್)

ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇಸಗೆಯ ದಿನಗಳಲ್ಲಿ ಮಾತ್ರ ತಲೆದೋರುತ್ತಿದ್ದ ವಿದ್ಯುತ್ ಕ್ಷಾಮವು ಇತ್ತೀಚೆಗೆ ಮಳೆಗಾಲದ ದಿನಗಳಲ್ಲೂ ಉದ್ಭವಿಸಲಾರಂಭಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯದಲ್ಲಿನ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಅಲ್ಪ ಬೆಲೆಗೆ ಖರೀದಿಸದ ರಾಜ್ಯ ಸರಕಾರವು, ನೆರೆಯ ರಾಜ್ಯಗಳಿಂದ ದುಬಾರಿ ಬೆಲೆ ತೆತ್ತು ವಿದ್ಯುತ್ತನ್ನು ಖರೀದಿಸುತ್ತಿದೆ!
ಕಳೆದ ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯವು ವಿದ್ಯುತ್ ಕ್ಷಾಮದ ಸಮಸ್ಯೆಯಿಂದ ತತ್ತರಿಸುತ್ತಿದೆ. ಏಕೆಂದರೆ ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆಯ ಪ್ರಮಾಣವು ಉತ್ಪಾದನೆಯ ಪ್ರಮಾಣಕ್ಕಿಂತಲೂ ಸಾಕಷ್ಟು ಹೆಚ್ಚಾಗಿದೆ. ಇದಲ್ಲದೆ ರಾಜ್ಯದಲ್ಲಿರುವ ಹಳೆಯ ವಿದ್ಯುತ್ ಉತ್ಪಾದನಾ ಸ್ಥಾವರಗಳು ಪದೇ ಪದೇ ಕೆಟ್ಟು ಹೋಗುತ್ತಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣವು ಇನ್ನಷ್ಟು ಕಡಿಮೆಯಾಗುತ್ತಿದೆ. ಇಷ್ಟೆಲ್ಲಾ ಸಾಲದೆಂಬಂತೆ ವಿದ್ಯುತ್ತಿನ ಕೊರತೆ ಅತಿಯಾದ ಸಂದರ್ಭಗಳಲ್ಲಿ ಕೇಂದ್ರದ ವಿದ್ಯುತ್ ಗ್ರಿಡ್ ನಿಂದ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ಲಭಿಸಬೇಕಿದ್ದ ವಿದ್ಯುಚ್ಛಕ್ತಿಯಲ್ಲಿ ಗಣನೀಯ ಪ್ರಮಾಣದ ವಿದ್ಯುತ್ತನ್ನು ನೆರೆಯ ರಾಜ್ಯಗಳು ಕಬಳಿಸುತ್ತಿರುವುದರಿಂದ ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುತ್ತಿದೆ.
ರಾಜ್ಯದ ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆಗಳ ನಡುವಿನ ಕೊರತೆಯನ್ನು ತುಂಬಿಸಲು ಸರಕಾರವು ನೆರೆಯ ರಾಜ್ಯಗಳಿಂದ ಆವಶ್ಯಕ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಖರೀದಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಲು ಮೀನ ಮೇಷ ಎಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ರಾಜ್ಯ ಸರಕಾರವು ಇದೀಗ ಪ್ರತಿನಿತ್ಯ 1000 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ನೆರೆಯ ರಾಜ್ಯಗಳಿಂದ ಖರೀದಿಸುತ್ತಿದೆ. ವಿಶೇಷವೆಂದರೆ ನೆರೆಯ ರಾಜ್ಯಗಳು ನಮ್ಮ ರಾಜ್ಯದ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಅಲ್ಪಬೆಲೆಗೆ ಖರೀದಿಸುತ್ತಿವೆ!
ಇದೇ ವರ್ಷದ ಬೇಸಗೆಯ ದಿನಗಳಲ್ಲಿ ವಿದ್ಯುತ್ ಕ್ಷಾಮದ ಬಾಧೆ ಮಿತಿ ಮೀರಿದಾಗ ರಾಜ್ಯದಲ್ಲಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಕಡ್ಡಾಯವಾಗಿ ತನಗೆ ನೀಡಬೇಕೆಂದು ಸರಕಾರ ಆದೇಶಿಸಿತ್ತು. ಸರಕಾರದ ಈ ನಿಲುವು ಖಾಸಗಿ ಘಟಕಗಳ ಅಸಮಾಧಾನಕ್ಕೆ ಕಾರಣವೆನಿಸಿತ್ತು. ಏಕೆಂದರೆ ಈ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ವರ್ಷವಿಡೀ ಅಲ್ಪಬೆಲೆಗೆ ಪೂರೈಸುವ ಪ್ರಸ್ತಾವವನ್ನು ನಿರಾಕರಿಸಿರುವ ಸರಕಾರವು, ವಿದ್ಯುತ್ ಕ್ಷಾಮದ ದಿನಗಳಲ್ಲಿ ಮಾತ್ರ ತಮಗೆ ಬೇಕಾದಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸಲೇ ಬೇಕು ಎನ್ನುವುದೇ ಅಸಮಾಧಾನಕ್ಕೆ ಕಾರಣವೆನಿಸಿದೆ. ಸರಕಾರವು ಈ ಘಟಕಗಳಿಂದ ನಿರಂತರವಾಗಿ ವಿದ್ಯುಚ್ಛಕ್ತಿಯನ್ನು ಖರೀದಿಸಿದಲ್ಲಿ "ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುವುದು" ತಪ್ಪುತ್ತದೆ.
ಉದಾಹರಣೆಗೆ ಬಳ್ಳಾರಿಯ ತೋರಣಗಲ್ಲಿನಲ್ಲಿರುವ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು ಪ್ರತಿನಿತ್ಯ 1100 ಮೆ.ವ್ಯಾ. ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಉಕ್ಕಿನ ಕಾರ್ಖಾನೆಗೆ ಬೇಕಾಗುವ 400 ಮೆ.ವ್ಯಾ. ವಿದ್ಯುತ್ತನ್ನು ಬಳಸಿದ ಬಳಿಕ ಉಳಿದ 700 ಮೆ.ವ್ಯಾ. ವಿದ್ಯುತ್ತನ್ನು ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಿಗೆ ಕರ್ನಾಟಕದ ಗ್ರಿಡ್ ಮೂಲಕವೇ ಪೂರೈಕೆ ಮಾಡುತ್ತದೆ.
ಇದೀಗ ರಾಜ್ಯಸರಕಾರವು ನೆರೆಯ ರಾಜ್ಯಗಳಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 10 ರೂ.ನಂತೆ ಪಾವತಿಸುತ್ತಿದ್ದು ನಮ್ಮದೇ ರಾಜ್ಯದಲ್ಲಿರುವ ಜಿಂದಾಲ್ ಉಕ್ಕು ತಯಾರಿಕಾ ಘಟಕದೊಂದಿಗೆ ದೀರ್ಘಕಾಲೀನ ಒಪ್ಪಂದವನ್ನು ಮಾಡಿಕೊಂಡಲ್ಲಿ ಈ ಸಂಸ್ಥೆಯು ಪ್ರತಿ ಯೂನಿಟ್ಟಿಗೆ ಕೇವಲ 4 ರೂ.ನಂತೆ ವಿದ್ಯುತ್ ಪೂರೈಸಲು ಸಿದ್ಧವಿದೆ. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯ ನಿರ್ದೇಶಕರು ಹೇಳುವಂತೆ ರಾಜ್ಯ ಸರಕಾರವು ಬೇಸಗೆ ದಿನಗಳಲ್ಲಿ ಮಾತ್ರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸದೇ, ವರ್ಷವಿಡೀ ವಿದ್ಯುತ್ತನ್ನು ಖರೀದಿಸಲು ಸಿದ್ಧವಿದ್ದಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳು ಉಳಿತಾಯವಾಗಲಿದೆ. ಇಷ್ಟು ಮಾತ್ರವಲ್ಲ ಈ ಸಂಸ್ಥೆಯು ತನ್ನ ವಿದ್ಯುತ್ ಉತ್ಪಾದನೆಯನ್ನು ಇನ್ನೂ 600 ಮೆ.ವ್ಯಾ.ಗಳಷ್ಟು ಹೆಚ್ಚಿಸಲಿದ್ದು ಇದನ್ನು ರಾಜ್ಯ ಸರಕಾರಕ್ಕೆ ಪೂರೈಸಲು ಸಿದ್ಧವಿದೆ. ಪ್ರಸ್ತುತ ಈ ಸಂಸ್ಥೆಯು ನೆರೆಯ ರಾಜ್ಯಗಳಿಗೆ ಸಾಕಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸುತ್ತಿದ್ದರೂ ವಿದ್ಯುತ್ ರವಾನೆಯ ಸಂದರ್ಭದಲ್ಲಿ ಸುಮಾರು 200 ಮೆ.ವ್ಯಾ.ನಷ್ಟು ವಿದ್ಯುಚ್ಛಕ್ತಿಯು ನಷ್ಟವಾಗುತ್ತಿದೆ. ಆದರೆ ಈ ಹೆಚ್ಚುವರಿ ವಿದ್ಯುತ್ತನ್ನು ರಾಜ್ಯ ಸರಕಾರವೇ ಖರೀದಿಸಲು ಸಿದ್ಧವಿದ್ದಲ್ಲಿ, ರಾಜ್ಯ ಸರಕಾರಕ್ಕೆ 10 ರೂ.ಗಳಿಗೆ 2.5 ಯೂನಿಟ್ ವಿದ್ಯುಚ್ಛಕ್ತಿ ಲಭಿಸುವುದರೊಂದಿಗೆ ಸಂಸ್ಥೆಗೆ ಸಂಭವಿಸುತ್ತಿರುವ ನಷ್ಟವನ್ನೂ ತಡೆಗಟ್ಟಬಹುದಾಗಿದೆ.
ಉಕ್ಕು ತಯಾರಿಸುವ ಸಂದರ್ಭದಲ್ಲಿ ಕಲ್ಲಿದ್ದಲನ್ನು ಉರಿಸುವ ಕಾರ್ಖಾನೆಗಳು ಇದರಿಂದ ಉತ್ಪನ್ನವಾಗುವ ಉಷ್ಣತೆಯನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸುತ್ತವೆ. ರಾಜ್ಯದಲ್ಲಿ ಇರುವ ಇತರ ಕಬ್ಬಿಣದ ಕಾರ್ಖಾನೆಗಳು ಮತ್ತು ಜಾಗತಿಕ ಹೂಡಿಕೆದಾರರ ಸಮಾವೇಶದ ಫಲವಾಗಿ ರಾಜ್ಯದಲ್ಲಿ ಹೊಸತಾಗಿ ನಿರ್ಮಿತವಾಗಲಿರುವ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಮುಂದೆ ಉತ್ಪಾದಿಸಲಿರುವ ಹೆಚ್ಚುವರಿ ವಿದ್ಯುತ್ತನ್ನು ಸರಕಾರವು ನಿರಂತರವಾಗಿ ಖರೀದಿಸಿದಲ್ಲಿ, ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ನಿಶ್ಚಿತವಾಗಿ ಅಂತ್ಯಗೊಳ್ಳಲಿದೆ. ಜೊತೆಗೆ ನೂತನ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕಾಗಿ ರಾಜ್ಯ ಸರಕಾರಗಳು ವ್ಯಯಿಸಲೇಬೇಕಾದ ಸಹಸ್ರಾರು ಕೋಟಿ ರೂ.ಗಳು ಉಳಿತಾಯವಾಗಲಿದೆ. ರಾಜ್ಯ ಸರಕಾರವು ಇದೀಗ ನೆರೆಯ ರಾಜ್ಯಗಳಿಂದ 1000 ಮೆ.ವ್ಯಾ. ವಿದ್ಯುತ್ತನ್ನು ಖರೀದಿಸಲು ಬಳಸುತ್ತಿರುವ 350 ಕೋಟಿ ರೂ.ಗಳಲ್ಲೇ ಇದರ ಎರಡೂವರೆ ಪಟ್ಟು ಅಧಿಕ ವಿದ್ಯುಚ್ಛಕ್ತಿಯನ್ನು ರಾಜ್ಯದ ಉಕ್ಕಿನ ಕಾರ್ಖಾನೆಗಳಿಂದಲೇ ಖರೀದಿಸಬಹುದಾಗಿದೆ.
-ಡಾ. ಸಿ. ನಿತ್ಯಾನಂದ ಪೈ

ಗುರುವಾರ, ಸೆಪ್ಟೆಂಬರ್ 9, 2010

ಎಸ್ ಇ ಝಡ್ ಪೈಪ್ ಲೈನ್: ಪರೋಕ್ಷ ಉದ್ಯೋಗ ಪರದೇಶಿಗಳಿಗೆ?

ಅಭಿವೃದ್ಧಿ:ಕಾಲ ಮೇಲೆ ಕಲ್ಲು
ಕಳೆದ ಜುಲೈ ತಿಂಗಳ 24ನೇ ತಾರೀಖಿನಂದು ಮಂಗಳೂರು ಎಸ್ ಇ ಝಡ್ ಕಂಪೆನಿ ಉದಯವಾಣಿಯಲ್ಲಿ "ನೇತ್ರಾವತಿ ನದಿಯಿಂದ ನೀರು ಸಾಗಿಸುವ ಕಾಮಗಾರಿ"ಗೆ ಒಂದು ಟೆಂಡರ್ ಕರೆದಿದೆ. ಈ ಟೆಂಡರಿನ ಒಂದು ಪ್ರಮುಖ ಲಕ್ಷಣ "Bidding is open to all contractors / firms, both Indian and foreign firms......". ಎಂದರೆ ಭಾರತದ ಅಥವಾ ವಿದೇಶದ ಯಾವುದೇ ಗುತ್ತಿಗೆದಾರರು ಈ ಕಾಮಗಾರಿಯನ್ನು ನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ಅಭಿವೃದ್ಧಿಯ ದ್ಯೋತಕವಾಗಿರುವ ಈ ಮತ್ತು ಇಂತಹ ಕಂಪೆನಿಗಳ ಪರವಾಗಿ ಮಾತಾಡುವವರು ಪ್ರಮುಖವಾಗಿ ಮುಂದಿಡುವ ವಾದ "ಅವು ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ ಮಾಡುತ್ತವೆ" ಎನ್ನುವುದು. ಈಗ ಪೈಪ್ ಲೈನ್ ಕೂರಿಸುವ "ಪರೋಕ್ಷ ಉದ್ಯೋಗಸೃಷ್ಟಿ" ಆಗಿದೆ. ಆದರೆ ಯಾರಿಗೆ? ತಾಂತ್ರಿಕವಾಗಿ ಭಾರತಕ್ಕಿಂತ ಎಷ್ಟೋ ಮುಂದಿರುವ ಚೀನಾ, ಜಪಾನ್, ಕೊರಿಯಾ ಮುಂತಾದ ದೇಶಗಳ ಯಾವುದೇ ಕಂಪೆನಿ ಭಾರತದ ಕಂಪೆನಿಗಳಿಗಿಂತ ಕಡಿಮೆ ದರದಲ್ಲಿ ಈ ಕಾಮಗಾರಿ ನಿರ್ವಹಿಸಲು ಮುಂದೆ ಬರುವ ಸಾಧ್ಯತೆ ಇಲ್ಲದೆ ಇಲ್ಲ. ಆಗ ಸಹಜವಾಗಿ ಕಾಮಗಾರಿ ಅಂತಹ ಕಂಪೆನಿಯ ಪಾಲಾಗುತ್ತದೆ. ಹಾಗಾದರೆ "ಉದ್ಯೋಗ ಸೃಷ್ಟಿ" ಆದದ್ದು ಯಾರಿಗೆ? ಕಾಲುವೆ ತೋಡಿ ಪೈಪು ಕೂರಿಸಿ ಕೊಡಬಲ್ಲ ತಾಂತ್ರಿಕತೆ, ಆರ್ಥಿಕ ಬಲ ಹೊಂದಿರುವ ಭಾರತೀಯ ಕಂಪೆನಿಗಳು ಇಲ್ಲವೆ? ಈ ಮೊದಲು ನೇತ್ರಾವತಿ ನದಿಯಿಂದ ಮಂಗಳೂರು ಮಹಾನಗರಪಾಲಿಕೆ ಹಾಗೂ ಎಂ ಆರ್ ಪಿ ಎಲ್ ಕಂಪೆನಿಗಳು ಪೈಪ್ ಲೈನ್ ಹಾಕಿಲ್ಲವೆ? ಆ ಪೈಪುಗಳಲ್ಲಿ ನೀರು ಹರಿಯುತ್ತಿಲ್ಲವೆ? ಟೆಂಡರಿಗೆ ಅರ್ಜಿ ಸಲ್ಲಿಸಲು ವಿದೇಶೀ ಕಂಪೆನಿಗಳಿಗೆ ಅವಕಾಶ ಕೊಟ್ಟರೆ, ಅಭಿವೃದ್ಧಿಯ ಫಲವನ್ನು ನಾವಾಗಿ ಪರದೇಶಿಗಳಿಗೆ ಬಿಟ್ಟುಕೊಟ್ಟಂತಾಗಲಿಲ್ಲವೆ? ಇಂತಹ ಉದ್ಯೋಗಸೃಷ್ಟಿಯಿಂದ ದ.ಕ. ಅಥವಾ ಕರ್ನಾಟಕದವರನ್ನು ಬಿಡಿ, ಭಾರತೀಯರಿಗೆ ಆಗುವ ಪ್ರಯೋಜನವಾದರೂ ಏನು? ಕಾಮಗಾರಿಯ ಹೆಸರಿನಲ್ಲಿ ಯಾವ್ಯಾವ ಪರದೇಶಿಗಳು ನಮ್ಮ ದೇಶದ ಮೂಲೆ ಮೂಲೆಗೆ ಪ್ರವೇಶಿಸಿ, ದೇಶದ ಆಯಕಟ್ಟಿನ ಪ್ರದೇಶಗಳ ನಿಕಟ ಪರಿಚಯ ಮಾಡಿಕೊಳ್ಳಲು ನಾವು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೆ? ಇದು ದೇಶದ ಭದ್ರತೆಯ ದೃಷ್ಟಿಯಿಂದ ಸಾಧುವೆ? ಸೂಕ್ತವೆ? ಹಾಗಾದರೆ ಕಾಲ ಮೇಲೆ ಕಲ್ಲು ಹಾಕಿಕೊಳ್ಳುವ ಇಂತಹ ಕೆಲಸವನ್ನೇ ಅಭಿವೃದ್ಧಿ ಎಂದು ಕರೆಯಲಾಗುತ್ತಿದೆಯೆ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ.
ಷರತ್ತುಗಳಿವೆ, ಪಾಲಿಸುವವರೆಲ್ಲಿ?
ನೇತ್ರಾವತಿ ನದಿಯಿಂದ ನೀರೆತ್ತಲು ಅನುಮತಿ ಕೊಡುವಾಗ ಜಲ ಸಂಪನ್ಮೂಲ ಇಲಾಖೆಯು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಒಟ್ಟು 19 ಷರತ್ತುಗಳನ್ನು ವಿಧಿಸಿದೆ. ಈ ಪೈಕಿ 6ನೆಯ ಷರತ್ತು ಇದು: "ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು". ಕಂಪೆನಿ ಅನುಮತಿಯನ್ನೇನಾದರೂ ಪಡೆದಿದೆಯೇ ಎಂಬುದನ್ನು ತಿಳಿಯುವ ಕುತೂಹಲದಿಂದ ನಾನು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ದ.ಕ. ಜಿಲ್ಲಾಧಿಕಾರಿಯವರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿಗಳನ್ನು ಸಲ್ಲಿಸಿದೆ.
ಲೋಕೋಪಯೋಗಿ ಇಲಾಖೆ ಯಾವುದೇ ತಕರಾರಿಲ್ಲದೆ ಕೂಡಲೇ ಸಾಕಷ್ಟು ವಿವರವಾದ ಮಾಹಿತಿ ನೀಡಿತು. ( ಈ ಮಾಹಿತಿಯ ಮುಖ್ಯಭಾಗವನ್ನು "ವಂಶ" ಪತ್ರಿಕೆ ಕಳೆದ ಸಂಚಿಕೆಯಲ್ಲಿ ಪ್ರಕಟಿಸಿದೆ). ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳಲ್ಲಿ ಯಾವ ಯಾವ ರಸ್ತೆಗಳ ಬದಿಯಲ್ಲಿ ಪೈಪ್ ಲೈನ್ ಗಳನ್ನು ಅಳವಡಿಸಲಾಗುವುದು, ಈ ಬಗ್ಗೆ ಕಂಪೆನಿಗೆ ವಿಧಿಸಲಾಗಿರುವ ಷರತ್ತುಗಳೇನು ಮುಂತಾದ ಮಾಹಿತಿಯಲ್ಲದೆ, ಕಂಪೆನಿ ಇಲಾಖೆಗೆ ನೀಡಬೇಕಾದ ಹಣ ಎಷ್ಟು ಎಂಬ ಮಾಹಿತಿಯನ್ನೂ ಇಲಾಖೆ ನನಗೆ ನೀಡಿತು.

ಜಿಲ್ಲಾಧಿಕಾರಿಗಳ ಕಛೇರಿ ನನ್ನ ಅರ್ಜಿಯನ್ನು-ಮಾಹಿತಿ ನೀಡುವಂತೆ ಸೂಚಿಸಿ-ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಕಳಿಸಿಕೊಟ್ಟಿತು! ಮಂಗಳೂರು ಎಸ್ ಇ ಝಡ್ ಕಂಪೆನಿ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ ನೀಡಿ ಕೈ ತೊಳೆದುಕೊಂಡಿತು. ನಾನು ಜಿಲ್ಲಾಧಿಕಾರಿಯವರಿಗೆ ಪುನಃ ಪತ್ರ ಬರೆದು "ಮಾಹಿತಿ ನೇರವಾಗಿ ನಿಮ್ಮ ಕಛೇರಿಗೆ ಸಂಬಂಧಪಟ್ಟಿದೆ. ಆದ್ದರಿಂದ ನೀವೇ ಅದನ್ನು ಕೊಡಬೇಕು" ಎಂದು ಕೇಳಿದ್ದೇನೆ. ಅವರ ಉತ್ತರಕ್ಕೆ ಕಾಯುತ್ತಿದ್ದೇನೆ. ಉತ್ತರ ಬರುತ್ತದೆ ಎಂಬ ವಿಶ್ವಾಸವಿದೆ.
ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಹೀಗೆ ಉತ್ತರಿಸಿದ್ದೇನೆ: "ನಿಮಗೆ ಗೊತ್ತಿರುವಂತೆ ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ತೀರ್ಪಿಗೆ ಬಾಕಿ ಇದೆ. ಆದ್ದರಿಂದ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂದು ಹೇಳುವ ಅಧಿಕಾರ ನಿಮಗೆ ಇಲ್ಲ. ಆ ಅಧಿಕಾರ ಇರುವುದು ಮಾಹಿತಿ ಹಕ್ಕು ಆಯೋಗಕ್ಕೆ"

ಸ್ವಾರಸ್ಯ ಇರುವುದು ಅರಣ್ಯ ಇಲಾಖೆಗೆ ಸಲ್ಲಿಸಿದ ಅರ್ಜಿ ವಿಚಾರದಲ್ಲಿ. ನಾನು ಅರ್ಜಿ ಸಲ್ಲಿಸಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ. ಅವರು ಅದನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ವರ್ಗಾಯಿಸಿ, ಮಾಹಿತಿ ನೀಡುವಂತೆ ಸೂಚಿಸಿದರು. ಸ.ಅ.ಸಂ. ರವರು "ಈ ಬಗ್ಗೆ ಯಾವುದೇ ಮಾಹಿತಿಯು ಅರಣ್ಯ ಇಲಾಖೆಯಲ್ಲಿ ಲಭ್ಯವಿರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ (ಮಾಹಿತಿ?) ನೀಡಿದರು! ನಾನು ಪಟ್ಟು ಬಿಡಲಿಲ್ಲ. "ನಾನು ಕೇಳಿರುವುದು ಅರಣ್ಯಕ್ಕೆ ಸಂಬಂಧಪಟ್ಟ ಮಾಹಿತಿ. ಅದನ್ನು ನಿಮ್ಮನ್ನಲ್ಲದೆ ಬೇರಾರನ್ನೂ ನಾನು ಕೇಳುವಂತಿಲ್ಲ. ಆದ್ದರಿಂದ ನೀವೇ ಅದನ್ನು ಕೊಡಬೇಕಾಗುತ್ತದೆ" ಎಂದು ಹೇಳಿ ಪೂರಕ ಮಾಹಿತಿಯಾಗಿ, ನನಗೆ ಈ ಬಗ್ಗೆ ಗೊತ್ತಿರುವ ಎಲ್ಲ ವಿಷಯವನ್ನೂ ತಿಳಿಸಿ, ಮಾಹಿತಿ ನೀಡುವಂತೆ ಪುನಃ ಪತ್ರ ಬರೆದೆ. ಸುಮಾರು ಒಂದು ತಿಂಗಳ ನಂತರ ಸ.ಅ.ಸಂ. ರವರ ಉತ್ತರ ಬಂತು: "ಮೇಲಿನ ವಿಷಯಕ್ಕೆ ಸಂಬಂಧಿಸಿ ದಿನಾಂಕ 7-8-2010ರಂದು ನೀಡಿದ ಉತ್ತರವು ಸಮಂಜಸವಾಗಿದೆ. ಹೆಚ್ಚಿನ ಮಾಹಿತಿಗಳಿಗೆ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಸಂಪರ್ಕಿಸಬಹುದಾಗಿದೆ". ಮೊದಲ ಪತ್ರಕ್ಕೆ ಒಂದು ಸಾಲಿನ ಉತ್ತರವಾದರೆ, ಎರಡನೆಯದಕ್ಕೆ ಎರಡು ಸಾಲಿನ ಉತ್ತರ! ಹೇಗಾದರೂ ಮಾಡಿ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸುವ ವಿಶಿಷ್ಟ ಅಧಿಕಾರಶಾಹಿ ಮನೋಭಾವ! ನಾನು ಬೇರೆ ದಾರಿ ಇಲ್ಲದೆ, ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿ ಬೇಕಾದ ದಾಖಲೆಗಳನ್ನೂ, ಅರ್ಜಿಯನ್ನೂ ಸಿದ್ದಪಡಿಸಿದೆ. ಆದರೆ ಅದನ್ನು ಮಾಹಿತಿ ಹಕ್ಕು ಆಯೋಗಕ್ಕೆ ಕಳಿಸುವ ಮುಂಚೆಯೇ ಉ.ಅ.ಸಂ.ರವರಿಂದ ಒಂದು ಪತ್ರ ಬಂತು: ".....ತಾವು ತಿಳಿಸಿರುವ ಮಾಹಿತಿಗಳಿಗೆ ಧನ್ಯವಾದಗಳು. ಸದ್ರಿ ಮಾಹಿತಿಯನ್ನು ಆಧರಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ತಮ್ಮ ಪತ್ರವನ್ನು ವಲಯ ಅರಣ್ಯ ಅಧಿಕಾರಿ, ಮಂಗಳೂರು ಮತ್ತು ಬಂಟ್ವಾಳ ಇವರಿಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗೆ ತಾವು ಅವರನ್ನು ನೇರವಾಗಿ ಸಂಪರ್ಕಿಸಬಹುದು". ಕೇವಲ ಕುತೂಹಲಕ್ಕಾಗಿ ಸ.ಅ.ಸಂ.ರವರ ಎರಡು ಸಾಲಿನ ಪತ್ರವನ್ನೂ, ಉ.ಅ.ಸಂ.ರವರ ಪತ್ರವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದೆ. ಎರಡು ಪತ್ರಗಳಿಗೂ ಸಹಿ ಇರುವುದು ಒಬ್ಬರದ್ದೇ: ಸ.ಅ.ಸಂ.ರವರದ್ದು. 31-8-2010ರ ಪತ್ರದಲ್ಲಿ ಉ.ಅ.ಸಂ.ರವರ ಪರವಾಗಿ ಅವರು ಸಹಿ ಹಾಕಿದ್ದರೆ, 1-9-2010ರ ಪತ್ರದಲ್ಲಿ ತಾನು ಬರೆದ ಪತ್ರಕ್ಕೆ ತಾನೇ ಸಹಿ ಹಾಕಿದ್ದಾರೆ!
ಈ ನಡುವೆ ಮಂಗಳೂರು ಮತ್ತು ಬಂಟ್ವಾಳದ ವಲಯ ಅಧಿಕಾರಿಗಳು ನಾನು ನೀಡಿದ ಮಾಹಿತಿಯ ಆಧಾರದಲ್ಲಿ ಸ್ಥಳ ತನಿಖೆ ನಡೆಸಬೇಕೆಂದು ಉ.ಅ.ಸಂ.ರವರು ಹೇಗೆ ನಿರೀಕ್ಷಿಸುತ್ತಾರೋ ನನಗೆ ಅರ್ಥವಾಗುವುದಿಲ್ಲ. ಇಲಾಖೆಗೆ ಮಾಹಿತಿ ನೀಡಲು ನಾನು ಯಾವ ಪೋತಪ್ಪ ನಾಯಕ? ನನಗೆ ತಿಳಿದ ಮಟ್ಟಿಗೆ ಉ.ಅ.ಸಂ. ಅಥವಾ ಸ.ಅ.ಸಂ.ರವರು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಬರೆದು, ಕಂಪೆನಿಯ ಪೈಪ್ ಲೈನ್ ಹೋಗುವ ದಾರಿಯ ನಕಾಶೆಯನ್ನು ಪಡೆದು, ಅದನ್ನು ವಲಯ ಅರಣ್ಯ ಅಧಿಕಾರಿಗಳಿಗೆ ಕೊಟ್ಟರೆ ಮಾತ್ರ ವಲಯ ಅರಣ್ಯ ಅಧಿಕಾರಿಗಳು ಸಮರ್ಪಕವಾಗಿ ಸ್ಥಳ ತನಿಖೆ ನಡೆಸಲು ಸಾಧ್ಯ. ಹಾಗಲ್ಲದೆ ನಾನು ಕೊಟ್ಟ ಅರೆಬರೆ ಮಾಹಿತಿಯಿಂದ ಎಂಥ ಸ್ಥಳ ತನಿಖೆ? ಎಂಥ ವರದಿ?
ಉ.ಅ.ಸಂ.ರವರಿಗೆ ಪತ್ರ ಬರೆಯುವಾಗ ನನ್ನಿಂದ ಒಂದು ಲೋಪವಾಗಿತ್ತು. ಜಲಸಂಪನ್ಮೂಲ ಇಲಾಖೆ ವಿಧಿಸಿರುವ ಷರತ್ತಿನ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿರಲಿಲ್ಲ. ಇದೀಗ ಆ ಮಾಹಿತಿಯನ್ನು ನೀಡಿ, ಸ್ಥಳ ತನಿಖೆಗೆ ವಲಯ ಅರಣ್ಯಾಧಿಕಾರಿಗಳಿಗೆ ನಕಾಶೆ ಅಗತ್ಯವಿರುವುದನ್ನು ತಿಳಿಸಿ ಮತ್ತೊಂದು ಪತ್ರ ಬರೆದಿದ್ದೇನೆ. ಏನಾಗುತ್ತದೋ ನೋಡೋಣ.
ಹಾದಿಗುಂಟ ಊರುಗಳಿಗೆ ಕುಡಿಯುವ ನೀರು?
ಜಲಸಂಪನ್ಮೂಲ ಇಲಾಖೆ ವಿಧಿಸಿರುವ 16ನೆಯ ಷರತ್ತು ಇದು: "ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು." (ಇಲ್ಲಿ "ಕುಮಾರಧಾರಾ" ಎಂದಿರುವುದು ತಪ್ಪು; "ಗುರುಪುರ ನದಿ" ಎಂದಿರಬೇಕಾಗಿತ್ತು. ಷರತ್ತುಗಳಿರಲಿ, ಲಕ್ಷಾಂತರ ರೂಪಾಯಿ ವ್ಯವಹಾರದ, ಸ್ಟಾಂಪ್ ಪೇಪರ್ ಮೇಲೆ ಬರೆಯುವ ಅಗ್ರಿಮೆಂಟುಗಳಲ್ಲೂ ಇಂತಹ ದೋಷಗಳು ಸರಕಾರಿ ಅಧಿಕಾರಿಗಳಿಗೆ ಲೆಕ್ಕದ್ದೇ ಅಲ್ಲ. ಈ ಮಾತಿಗೆ ನನ್ನಲ್ಲಿ ಆಧಾರವಿದೆ).
ಲೋಕೋಪಯೋಗಿ ಇಲಾಖೆ ನನಗೆ ನೀಡಿದ ಮಾಹಿತಿಯಲ್ಲಿ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಯಾವ ಯಾವ ಭಾಗದಲ್ಲಿ ಪೈಪ್ ಲೈನ್ ಹಾದು ಹೋಗುತ್ತದೆ ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಈ ಮಾಹಿತಿಗಳನ್ನು ನೀಡಿ ನಾನು ಬಂಟ್ವಾಳದ ಶಾಸಕರಾದ ಶ್ರೀ ಬಿ. ರಮಾನಾಥ ರೈಯವರಿಗೂ, ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲು ಅವರಿಗೂ ಪತ್ರಗಳನ್ನು ಬರೆದೆ. ರೈಗಳನ್ನು ಭೇಟಿ ಮಾಡಿ, ವಿಷಯ ವಿವರಿಸಿ ಹೇಳಿದೆ. ಅವರು ಕೂಡಲೇ ಶ್ರೀ ಐ ಎಸ್ ಎನ್ ಪ್ರಸಾದರಿಗೆ ಫೋನ್ ಮಾಡಿದರು. ಪ್ರಸಾದ್ ಯಾವುದೋ ಮೀಟಿಂಗಿನಲ್ಲಿದ್ದರಂತೆ, ಸಿಕ್ಕಲಿಲ್ಲ. ರೈಗಳು ಜಿಲ್ಲಾಧಿಕಾರಿಗೆ ಫೋನ್ ಮಾಡಿ, ವಿಷಯ ತಿಳಿಸಿ, ಎಸ್ ಇ ಝಡ್ ಅಧಿಕಾರಿಗಳನ್ನು ಕರೆಸಿ ಒಂದು ಮೀಟಿಂಗ್ ಮಾಡುವಂತೆ ಸೂಚಿಸಿದರು. ಜೊತೆಗೇ, ಜಿಲ್ಲಾಧಿಕಾರಿಯವರಿಗೆ ಒಂದು ಪತ್ರವನ್ನೂ ಬರೆಯುವಂತೆ ತಮ್ಮ ಸಹಾಯಕರಿಗೆ ಸೂಚಿಸಿದರು. ಆ ಪತ್ರದ ಯಥಾಪ್ರತಿಯನ್ನು ನನಗೂ ಕಳಿಸಿದ್ದಾರೆ. ಅದನ್ನಿಟ್ಟು ನಾನು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಬೇಕಾಗಿದೆ. ಬರೆಯುತ್ತೇನೆ.
ಇತ್ತ ನಳಿನ್ ಕುಮಾರ್ ಕಟೀಲ್ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಬಂದೀತೆಂಬ ನಿರೀಕ್ಷೆಯಲ್ಲಿದ್ದೇನೆ.
ದಿನಕ್ಕೆ ಆರೂಕಾಲು ಕೋಟಿ ಲೀಟರ್ ನೀರು ಎಸ್ ಇ ಝಡ್ ಕಡೆಗೆ ತಿರುಗಿದರೆ, ಬೆಳೆಯುತ್ತಿರುವ ಮಂಗಳೂರಿಗೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚು. ಆದರೆ, ಕೊನೆಯ ಪಕ್ಷ ಎಸ್ ಇ ಝಡ್ ಪೈಪ್ ಲೈನ್ ಹಾದು ಹೋಗುವ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದರೆ, ಅದನ್ನು ಒಂದು ಪ್ರಯೋಜನ ಎಂದು ಪರಿಗಣಿಸಬಹುದು. ಈ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಅಲ್ಲಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳು ಪ್ರಯತ್ನ ಮಾಡಬೇಕು, ತಮ್ಮ ಹಕ್ಕಿನ ಪ್ರಯೋಜನ ಪಡೆದುಕೊಳ್ಳಬೇಕು ಅಷ್ಟೆ.

ಶನಿವಾರ, ಜುಲೈ 31, 2010

ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?


ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?
ದಿನಾಂಕ 24-7-2010ರ ಉದಯವಾಣಿಯಲ್ಲಿ ಮಂಗಳೂರು ಎಸ್ ಇ ಝಡ್ ಕಂಪೆನಿಯು ಒಂದು ಜಾಹೀರಾತು ನೀಡಿ ನದಿನೀರು ಸಾಗಣೆಗೆ ಪೈಪುಗಳನ್ನು ಅಳವಡಿಸಲು ಒಂದು ಜಾಗತಿಕ ಟೆಂಡರನ್ನು ಆಹ್ವಾನಿಸಿದೆ. ಈ ಜಾಹೀರಾತಿನಲ್ಲಿ ಯಾವ ನದಿಯಿಂದ, ಯಾವ ಜಾಗದಿಂದ ಇತ್ಯಾದಿ ಯಾವ ವಿವರಗಳೂ ಇಲ್ಲ. ಈ ಕಾಮಗಾರಿಯ ಸಂಪೂರ್ಣ ವಿವರಗಳು ಬೇಕಾದಲ್ಲಿ ನೀವು ಕಂಪೆನಿಗೆ ರೂ. 25,000/- ಹಣ ಕೊಟ್ಟು ಬಿಡ್ಡಿಂಗ್ ಫಾರ್ಮುಗಳನ್ನು ಪಡೆದುಕೊಳ್ಳಬೇಕು!
ನೀರಿಗೇನು ವ್ಯವಸ್ಥೆ?
ಎಸ್ ಇ ಝಡ್ ಕಂಪೆನಿಗೆ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ದಿನಕ್ಕೆ 6.75 ಕೋಟಿ ಲೀಟರ್ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ಪೈಕಿ ದಿನಕ್ಕೆ 5.625 ಕೋಟಿ ಲೀಟರು ನೀರನ್ನು ನೇತ್ರಾವತಿ ನದಿಯಿಂದಲೂ, ದಿನಕ್ಕೆ 1.125 ಕೋಟಿ ಲೀಟರು ನೀರನ್ನು ಗುರುಪುರ ನದಿಯಿಂದಲೂ ಅದು ಎತ್ತುವ ಸಾಧ್ಯತೆ ಇದೆ. ಎಂ ಆರ್ ಪಿ ಎಲ್ ಕಂಪೆನಿಗೆ ನೇತ್ರಾವತಿಯಿಂದ ದಿನಕ್ಕೆ 2.25 ಕೋಟಿ ಲೀಟರು ನೀರೆತ್ತಲು ಸರಕಾರ ಅನುಮತಿ ನೀಡಿದೆ. ಎಂದರೆ ಎಸ್ ಇ ಝಡ್ ಕಂಪೆನಿಗೆ ಎಂ ಆರ್ ಪಿ ಎಲ್ ಕಂಪೆನಿಗಿಂತ ಎರಡೂವರೆ ಪಟ್ಟು ಹೆಚ್ಚು ನೀರು ಎತ್ತಲು ಸರಕಾರ ಹೊಸದಾಗಿ ಅನುಮತಿ ನೀಡಿದೆ ಎಂದಾಯಿತು.
ಎ ಎಂ ಆರ್ ಕಂಪೆನಿಯು ಜಲವಿದ್ಯುತ್ ಉತ್ಪಾದನೆ ಮಾಡಲು ಸರಕಾರದಿಂದ ಅನುಮತಿ ಪಡೆದು ಬಂಟ್ವಾಳ ತಾಲೂಕಿನ ಶಂಬೂರಿನಲ್ಲಿ ನೇತ್ರಾವತಿ ನದಿಗೆ ಒಂದು ಅಣೆಕಟ್ಟು ಹಾಕಿದೆಯಷ್ಟೆ. ಈ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಎಸ್ ಇ ಝಡ್ ಕಂಪೆನಿ ತನ್ನ ನೆಲೆಗೆ ಸಾಗಿಸಲು ಉದ್ದೇಶಿಸಿದೆ. ಈ ಬಗ್ಗೆ ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆಂದು ಅದು ತಿಳಿಸಿದೆ. ಆದರೆ ಆ ಒಪ್ಪಂದದಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. (ಈ ಮಾಹಿತಿಯನ್ನು ಕೇಳಿ ನಾನು ಎಸ್ ಇ ಝಡ್ ಕಂಪೆನಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಕಂಪೆನಿ ಮಾಹಿತಿಯನ್ನು ನೀಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಅಲ್ಲಿ ಕಂಪೆನಿಯು ತಾನು ಹೂಡಿರುವ ಬಂಡವಾಳದಲ್ಲಿ ಸರಕಾರದ ಗಣನೀಯ ಪಾಲು (substantial) ಇಲ್ಲವಾದ್ದರಿಂದ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಅಹವಾಲು ಮಂಡಿಸಿದೆ. ಈ ಬಗ್ಗೆ ಮಾಹಿತಿ ಹಕ್ಕು ಆಯೋಗ ವಿಚಾರಣೆ ನಡೆಸುತ್ತಿದ್ದು ತೀರ್ಪು ಇನ್ನೂ ಬರಬೇಕಾಗಿದೆ.)
ಗುರುಪುರ ನದಿಯ ಯಾವ ಸ್ಥಳದಿಂದ ಕಂಪೆನಿಯು ನೀರು ಸಾಗಿಸಲು ಉದ್ದೇಶಿಸಿದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. .
ಒಟ್ಟಿನಲ್ಲಿ ಈ ಮೊದಲು ಎಂ ಆರ್ ಪಿ ಎಲ್ ನ ಪೈಪುಗಳನ್ನು ಅಳವಡಿಸಿದಂತೆಯೇ, ಎಂ ಎಸ್ ಇ ಝಡ್ ಕಂಪೆನಿಯ ಪೈಪು ಅಳವಡಿಸುವ ಕಾರ್ಯವು ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಈ ಪೈಪುಗಳು ಯಾವ ಅಳತೆಯವು, ಅದಕ್ಕೆ ಎಷ್ಟು ಜಾಗ ಬೇಕಾಗಬಹುದು ಎಂಬ ವಿಷಯ ಸ್ಪಷ್ಟವಿಲ್ಲ. ಈ ಎಲ್ಲ ವಿಷಯಗಳಲ್ಲಿ ಮಾಹಿತಿ ಬೇಕಾದವರು ಕಂಪೆನಿಯನ್ನು ಅಥವಾ ಅದರ ಕಂಟ್ರಾಕ್ಟುದಾರರನ್ನು ಸಂಪರ್ಕಿಸುವ ಬದಲು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಅಥವಾ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸುವುದೇ ಉತ್ತಮ ಎಂದು ನನ್ನ ಅಭಿಪ್ರಾಯ.
ಎಂ ಎಸ್ ಇ ಝಡ್ ಕಂಪೆನಿಯು ಒಟ್ಟು ಸುಮಾರು 4000 ಎಕ್ರೆ ಸ್ಥಳದಲ್ಲಿ ಸ್ಥಾಪಿತವಾಗುತ್ತದೆ ಎಂದು ಹೇಳಲಾಗಿದೆ. ಈ ಪೈಕಿ ಈಗ ಕಂಪೆನಿಯು ಸ್ವಾಧೀನ ಪಡಿಸಿಕೊಂಡಿರುವುದು ಹತ್ತಿರ ಹತ್ತಿರ 2000 ಎಕ್ರೆ ಭೂಮಿಯನ್ನು. ಇನ್ನುಳಿದ ಭೂಮಿಯ ಸ್ವಾಧೀನಕ್ಕೆ ಕಂಪೆನಿಯು ತೀವ್ರವಾದ ವಿರೋಧವನ್ನು ಎದುರಿಸುತ್ತಿದೆ. ಪಾರ್ಲಿಮೆಂಟ್ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರೇ ತಾನು ಇನ್ನೂ ಹೆಚ್ಚಿನ ಭೂಸ್ವಾಧೀನವನ್ನು ವಿರೋಧಿಸುತ್ತೇನೆ ಎಂದು ಹಲವಾರು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. ತನ್ನ ಕೃಷಿಭೂಮಿಯನ್ನು ಸರಕಾರ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಕೃಷಿಕ ಗ್ರೆಗರಿ ಪತ್ರಾವೋ ಅವರು ನಡೆಸಿರುವ ಹೋರಾಟ ಅಖಿಲ ಭಾರತ ಪ್ರಸಿದ್ದಿ ಪಡೆದಿದೆ. ಒಟ್ಟಿನಲ್ಲಿ ಭೂಸ್ವಾಧೀನದ ವಿರುದ್ಧ ದೊಡ್ಡದೊಂದು ಚಳುವಳಿಯೇ ಹುಟ್ಟಿಕೊಂಡಿದ್ದು, ಪೇಜಾವರ ಸ್ವಾಮಿಗಳು, ಕೇಮಾರು ಸ್ವಾಮಿಗಳು, ಕ್ರೈಸ್ತ, ಮುಸ್ಲಿಂ ಧಾರ್ಮಿಕ ನಾಯಕರು ಎಲ್ಲರೂ ಒಟ್ಟಾಗಿ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪೆನಿಯು ಇನ್ನೂ ಹೆಚ್ಚಿನ ಭೂಸ್ವಾಧೀನ ಮಾಡಿಕೊಳ್ಳುವುದನ್ನು, ಅದು ಆದ ಮೇಲೆ ಮಾತ್ರ ಒಪ್ಪಿಕೊಳ್ಳಬಹುದೇ ಹೊರತು ಆಗುವ ಮೊದಲು ಅಲ್ಲ.
ನೀರಿಗೆ ಅನ್ಯಮೂಲಗಳಿಲ್ಲವೆ?
ತನಗೆ ಬೇಕಾಗಿರುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ 20.25 ಕೋಟಿ ಲೀಟರುಗಳು; ಈ 8.1 ಕೋಟಿ ಲೀಟರ್ ನೀರನ್ನು ಮಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸುವ ಮೂಲಕ; 5.4 ಕೋಟಿ ಲೀಟರ್ ನೀರನ್ನು ಮಳೆನೀರು ಸಂಗ್ರಹದ ಮೂಲಕ ಮತ್ತು ಉಳಿದ 6.75 ಕೋಟಿ ಲೀಟರ್ ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತುವ ಮೂಲಕ ಒದಗಿಸಿಕೊಳ್ಳುವುದಾಗಿ ತಾ. 6-10-2009ರ ಉದಯವಾಣಿ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿನಲ್ಲಿ ಕಂಪೆನಿಯು ಘೋಷಿಸಿದೆ. ಈ ಜಾಹೀರಾತಿನ ಕುರಿತು ನಾನು ಕಂಪೆನಿಯಿಂದ ಹೆಚ್ಚಿನ ಕೆಲವು ಮಾಹಿತಿಗಳನ್ನು - ಮುಖ್ಯವಾಗಿ ಮಳೆ ನೀರು ಸಂಗ್ರಹದ ಬಗ್ಗೆ - ಕೇಳಿದ್ದೆ. ಅದಕ್ಕೆ ಉತ್ತರ ಬರೆಯುವಾಗ ಕಂಪೆನಿಯು ಹೀಗೆ ಹೇಳಿತ್ತು. "ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಕಾಮಗಾರಿಯು ಈಗಷ್ಟೇ ಆರಂಭವಾಗಿದ್ದು, ತತ್ ಕ್ಷಣಕ್ಕೆ ದಿನವಹಿ 45 ಎಂಜಿಡಿ (ಎಂದರೆ 20.25 ಕೋಟಿ ಲೀಟರ್) ನೀರಿನ ಅವಶ್ಯಕತೆ ಇರುವುದಿಲ್ಲ. ಬಹು ಉತ್ಪಾದನಾ ವಿಶೇಷ ಆರ್ಥಿಕ ವಲಯ ಸ್ಥಾಪನೆಯಾಗುವ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು"
ಎಂದರೆ ಕಂಪೆನಿಯು ಮಳೆನೀರು ಸಂಗ್ರಹಿಸಿ ಬಳಸುವ ಯೋಜನೆಯನ್ನು ಜಾಹೀರಾತಿಗೆ ಸೀಮಿತಗೊಳಿಸಿದೆ. ಕಾರ್ಯಗತ ಮಾಡುವ ಗಂಭೀರ ಚಿಂತನೆಯನ್ನು ನಡೆಸಿಯೇ ಇಲ್ಲ. ನೇತ್ರಾವತಿ ನದಿಯಲ್ಲಿ ನೀರು ಇರುವುದರಿಂದ ಅದು ನಿಶ್ಚಿಂತೆಯಿಂದ ನೇರವಾಗಿ ಆ ನೀರಿಗೇ ಕೈ ಹಾಕಿದೆ!
ಮಳೆಯ ನೀರು ಶ್ರೇಷ್ಠ - ಅದನ್ನೇ ಸಂಗ್ರಹಿಸಲಿ
ಆದರೆ ಕಂಪೆನಿ ನದಿಯ ನೀರಿಗೆ ಕೈ ಹಾಕುವ ಮೊದಲೇ ತನಗೆ ಬೇಕಾದ ನೀರಿಗಾಗಿ ಮಳೆ ನೀರು ಸಂಗ್ರಹದ ಯೋಜನೆಯನ್ನು ಯಾಕೆ ಕೈಗೆತ್ತಿಕೊಳ್ಳಬಾರದು? ಹಾಗೆ ಮಾಡಲು ಅದಕ್ಕೆ ಏನು ಸಮಸ್ಯೆ ಇದೆ? ನದಿಯಿಂದ ನೀರು ಕೊಂಡು ಹೋಗುವುದೆಂದರೆ, ಪೈಪುಗಳನ್ನು ಅಳವಡಿಸುವ ದಾರಿಯುದ್ದಕ್ಕೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳ ನಾಶ ಮಾಡಲೇ ಬೇಕಾಗುತ್ತದೆ. ಎಷ್ಟೋ ಕಡೆ ಕೃಷಿಭೂಮಿಯನ್ನೂ ಇದಕ್ಕಾಗಿ ಬಲಿಕೊಡಬೇಕಾಗಬಹುದು. ಅಲ್ಲದೆ, ನೀರೆತ್ತಲು ಅಳವಡಿಸುವ ಮೋಟರುಗಳು ಬೃಹತ್ ಪ್ರಮಾಣದಲ್ಲಿ ಅಮೂಲ್ಯವಾದ ವಿದ್ಯುತ್ತನ್ನು ನುಂಗುತ್ತವೆ. ಅದರ ಬದಲಿಗೆ ಕಂಪೆನಿಯೇ ಹೇಳುವಂತೆ, ತತ್ಕಾಲದ ಅಗತ್ಯಕ್ಕೆ ಮಳೆನೀರು ಸಂಗ್ರಹಿಸಿ ದಿನಕ್ಕೆ 5.4 ಕೋಟಿ ಲೀಟರ್ ನೀರನ್ನು ಯಾಕೆ ಪೂರೈಸಿಕೊಳ್ಳಬಾರದು? ವೈಜ್ಞಾನಿಕವಾಗಿ ಸಂಗ್ರಹಿಸಿದರೆ, ಮಳೆ ನೀರು ಪೃಕೃತಿಯಲ್ಲಿ ದೊರೆಯುವ ಅತ್ಯಂತ ಪರಿಶುದ್ಧ ನೀರೆಂಬುದನ್ನೂ ಇಲ್ಲಿ ಪರಿಗಣಿಸಬೇಕು.
ಮಳೆ ನೀರು ಸಂಗ್ರಹದ ಯೋಜನೆಯನ್ನೇ ಮೊದಲು ಕೈಗೆತ್ತಿಕೊಳ್ಳಬೇಕು. ಮುಂದೆ ಭೂಸ್ವಾಧೀನ ಮಾಡಿಕೊಳ್ಳುವುದು ಸಾಧ್ಯವಾದರೆ ಮಾತ್ರ ನದಿಯ ನೀರಿಗೆ ಕೈ ಹಾಕುವ ಬಗ್ಗೆ ಯೋಚಿಸಬಹುದು, ಈ ನಡುವೆ ಮಂಗಳೂರಿನ ಕೊಳಚೆ ನೀರು ಶುದ್ಧೀಕರಣ ಸ್ಥಾವರಗಳ ಕಾಮಗಾರಿಯನ್ನು ಆದಷ್ಟೂ ತ್ವರಿತವಾಗಿ ಮುಗಿಸಬೇಕು ಎಂದು ಸಾರ್ವಜನಿಕರೂ, ಜಿಲ್ಲಾಧಿಕಾರಿಗಳೂ, ಬಂಟ್ವಾಳ ಪುರಸಭೆಯೂ, ಎಲ್ಲಕ್ಕಿಂತ ಮುಖ್ಯವಾಗಿ ಮಂಗಳೂರಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಜವಾಬ್ದಾರಿ ಇರುವ ಮಹಾನಗರ ಪಾಲಿಕೆಯೂ ಕಂಪೆನಿಯ ಮೇಲೆ ಒತ್ತಡ ತರುವ ಅಗತ್ಯವಿದೆ.

ಮಂಗಳವಾರ, ಜೂನ್ 22, 2010

ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ?

ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. "ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?" ಎಂಬ ಲೇಖನ ಬರೆದಾಗ ನೋಡಿದ್ದೆ. ಅಲ್ಲಿ ಕೊಟ್ಟಿದ್ದ ಕೆಲವು ಅಂಕಿಸಂಖ್ಯೆಗಳನ್ನು ಲೇಖನದಲ್ಲಿ ಬಳಸಿಕೊಂಡಿದ್ದೆ. ಅದೇ ನೆನಪಿನ ಮೇಲೆ ಮೊನ್ನೆ "ನಿಮ್ಮ ಕಾನೂನು ನಿಮಗಿರಲಿ......" ಲೇಖನದಲ್ಲಿ "ಕರ್ನಾಟಕ ಸರಕಾರ ದಿನಕ್ಕೆ ೬.೭೫ ಕೋಟಿ ಲೀಟರ್ ನೀರು ಕೊಡಲು ಒಪ್ಪಿಕೊಂಡಿದೆ" ಎಂದು ಬರೆದೆ. ನಿನ್ನೆ ಅಂದರೆ ೧೭-೦೬-೨೦೧೦ರಂದು ಯಾಕೋ ಕಂಪೆನಿಯ ವೆಬ್ ಸೈಟನ್ನು ಪುನಃ ನೋಡಬೇಕಾಯಿತು. ನೋಡಿದರೆ ನೀರಿನ ಕುರಿತಾದ ಕಂಪೆನಿಯ ಅಂಕಿಸಂಖ್ಯೆಗಳು ಬದಲಾಗಿಬಿಟ್ಟಿವೆ!
೧. ಒಟ್ಟು ಅಗತ್ಯ ೪೫ ಎಂಜಿಡಿ ನೀರು ಎಂಬುದೇನೋ ಮೊದಲಿನಂತೆಯೇ ಇದೆ. ಈ ಪೈಕಿ ೧೫ ಎಂಜಿಡಿ ನೀರನ್ನು ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ಒದಗಿಸಿಕೊಳ್ಳುತ್ತೇವೆ ಎಂದು ಹಿಂದಿನ ವೆಬ್ ಸೈಟಿನಲ್ಲಿ ಇತ್ತು. ಈಗ ಅದು ೨೫ ಎಂಜಿಡಿ ಆಗಿದೆ! ಎಂದರೆ ಈಗಿನ ಲೆಕ್ಕದ ಪ್ರಕಾರ ಈ ನದಿಗಳಿಂದ ಅದು ಎತ್ತುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ ೧೧.೨೫ ಕೋಟಿ ಲೀಟರುಗಳು!
೨೦೦೭ರ ಸರ್ಕಾರಿ ಆಜ್ಞೆಯಲ್ಲಿ "೧೫ ಎಂಜಿಡಿ ನೀರು ಎತ್ತಲು ಅನುಮತಿ ನೀಡಲಾಗಿದೆ" ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಈಗ ಹತ್ತು ಎಂಜಿಡಿ ಜಾಸ್ತಿ ಆದದ್ದು ಹೇಗೆ? ಸರಕಾರ ೨೫ ಎಂಜಿಡಿ ನೀರೆತ್ತಲು ಕಂಪೆನಿಗೆ ಹೊಸದಾಗಿ ಅನುಮತಿ ನೀಡಿದೆಯೆ? ಈ ಬಗ್ಗೆ ಮಾಹಿತಿ ಕೇಳಿ ಸಣ್ಣ ನೀರಾವರಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೇನೆ.
೨, ಇನ್ನೊಂದು ಬದಲಾವಣೆ ಎಂದರೆ ಮಳೆನೀರಿನ ಸಂಗ್ರಹದ ವಿಷಯ ಮಂಗಮಾಯ ಆಗಿರುವುದು! ಈ ಹಿಂದೆ, ೧೨ ಎಂಜಿಡಿ ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಒದಗಿಸಿಕೊಳ್ಳುವುದಾಗಿ ಕಂಪೆನಿ ಹೇಳಿತ್ತು. "ಸ್ವಾಧೀನ ಪಡಿಸಿಕೊಂಡ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ" ಮಾತನ್ನು ಆಗ ಕಂಪೆನಿ ಆಡಿತ್ತು.ಇದರ ಸಾಧ್ಯತೆಯ ಬಗ್ಗೆ ನನ್ನ ಲೇಖನದಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಸ್ವಾಧೀನ ಪಡಿಸಿಕೊಂಡ ಎಲ್ಲ ಭೂಮಿಯನ್ನೂ ಈಗ ಒಂದೇ ಲೆಕ್ಕ ತಟ್ಟು ಮಾಡಿದ್ದಾರಂತೆ. ಹಾಗಾಗಿ "ತಗ್ಗು ಪ್ರದೇಶ"ದ ಜೊತೆಗೇ ಮಳೆನೀರು ಸಂಗ್ರಹದ ಯೋಜನೆಯೂ ಮಾಯವಾಗಿರಬೇಕು!
೩. ಈಗಿನ ಲೆಕ್ಕಾಚಾರದ ಪ್ರಕಾರ ನದಿಗಳಿಂದ ೨೫ ಎಂಜಿಡಿ, ಮಂಗಳೂರಿನ ಗಲೀಜು ನೀರು ಸಂಸ್ಕರಿಸಿ ೧೦ ಎಂಜಿಡಿ ಎಂದಿದೆ. ಇನ್ನೂ ಬೇಕಾಗುವ ೧೦ ಎಂಜಿಡಿ ಎಲ್ಲಿಂದ ಬರುತ್ತದೆ ಎನ್ನುವುದಕ್ಕೆ ಯಾವ ವಿವರಣೆಯೂ ಇಲ್ಲ.
ವೆಬ್ ಸೈಟಿನಲ್ಲಿ, ಪತ್ರಿಕೆಯಲ್ಲಿ, ಕಂಪೆನಿಯ ಹೆಸರು ಹಾಕಿ "ಮಳೆ ನೀರು ಸಂಗ್ರಹಿಸುತ್ತೇವೆ" ಎಂದು ಎಲ್ಲರೂ ಓದುವಂತೆ ಪ್ರಕಟಿಸಿದ ಮೇಲೆ, ಅದು ಸಾರ್ವಜನಿಕರಿಗೆ ಕೊಟ್ಟ ವಾಗ್ದಾನವೇ ಆಯಿತು. ಮಳೆನೀರು ಸಂಗ್ರಹ ಮಾಡುತ್ತೇವೆಂದು ಮೊದಲು ಹೇಳಿದವರು, ಈಗ ಆ ಯೋಜನೆಯನ್ನು ಕೈ ಬಿಡುವುದು ಹೇಗೆ ಸಾಧ್ಯ? ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಕಂಪೆನಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ.
ನೇರವಾಗಿ ಕೇಳುವುದೇ ಸರಿ ಎಂದುಕೊಂಡು ಎಸ್ ಇ ಝಡ್ ಕಂಪೆನಿಗೆ ಸಮಸ್ಯೆ ವಿವರಿಸಿ ಸ್ಪಷ್ಟೀಕರಣ ಕೇಳಿ ಒಂದು ಮಿಂಚಂಚೆ ಕಳಿಸಿದೆ. ೨೧ರ ಮಂಗಳವಾರ ಮಧ್ಯಾಹ್ನ ಒಂದು ಫೋನು: "ನಾನು ದಿವಾಕರ್ ಅಂತ ಎಸ್ ಇ ಝಡ್ನಿಂದ ಮಾತಾಡುವುದು. ಇದು ನಮ್ಮ ವೆಬ್ ಸೈಟಿನಲ್ಲಿ ಮೊದಲು ಏನಂತ ಇತ್ತು ಸಾರ್?"
ನಾನು: ಮೊದಲು ಇದ್ದದ್ದು ೧೫ ಎಂಜಿಡಿ ನೇತ್ರಾವತಿ ಮತ್ತು ಗುರುಪುರ ನದಿಗಳಿಂದ, ೧೮ ಎಂಜಿಡಿ ಮಂಗಳೂರು ಎಸ್ ಟಿ ಪಿ ಯಿಂದ ಮತ್ತು ೧೨ ಎಂಜಿಡಿ ಮಳೆ ನೀರು ಸಂಗ್ರಹದಿಂದ ಅಂತ"
ದಿವಾಕರ್: ಓ ಹಾಗಿತ್ತ?
ನಾನು: ನನ್ನ ಹತ್ತಿರ ಅದರ ಪ್ರಿಂಟ್ ಔಟ್ ಇದೆ. ಉದಯವಾಣಿ ಜಾಹೀರಾತಿನಲ್ಲೂ ಹಾಗೇ ಇತ್ತು.
ದಿವಾಕರ್: ಸರಿ, ಹಾಗಾದರೆ ನಾನು ಚೆಕ್ ಮಾಡಿ ನಿಮಗೆ ಪುನಃ ಫೋನ್ ಮಾಡುತ್ತೇನೆ. ಮತ್ತೆ ಇದು ಮೊನ್ನೆ ಮಡಿಕೇರಿಯಲ್ಲಿ ಮಾಹಿತಿ ಹಕ್ಕಿನದು ಇತ್ತಲ್ಲ. ನಾವು ಕಂಪೆನಿಯಿಂದ ಒಂದು ಕಾಗದ ಬರೆದಿದ್ದೆವು ಅಲ್ಲಿಗೆ.
ನಾನು: ನಾನು ಹೋಗಿದ್ದೆ. ನನಗೆ ನಿಮ್ಮ ಕಾಗದ, ವಕೀಲರ ಅಭಿಪ್ರಾಯ ಸಿಕ್ಕಿದೆ. ಅದರ ವಿಷಯ ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ
ದಿವಾಕರ್: ನಿಮ್ಮ ಬ್ಲಾಗ್ ಯಾವುದು"
ನಾನು: ಇವೊತ್ತಿನ ಉದಯವಾಣಿ ಆರನೇ ಪುಟದಲ್ಲಿ ಹಾಕಿದ್ದಾರೆ ನೋಡಿ ವಿಳಾಸ
ದಿವಾಕರ್: ಸರಿ ಸರಿ ನೋಡುತ್ತೇನೆ
ಸುಮಾರು ಒಂದೂವರೆ ಗಂಟೆ ಕಳೆದ ಮೇಲೆ ಪುನಃ ಫೋನ್ ಬಂತು: "ನೀವು ಹೇಳಿದ್ದು ಸರಿ. ಅದು ಹಾಗೆಯೇ ಇರಬೇಕು. ವೆಬ್ ಸೈಟಿನಲ್ಲಿ ಸರಿ ಮಾಡುತ್ತೇವೆ
ನಾನು: ಸರಿ ಸರಿ. ನನಗೊಂದು ಮೇಲ್ ಕಳಿಸಿಬಿಡಿ
ದಿವಾಕರ್: ಇಲ್ಲ ಅದು ಕಳಿಸುವುದಿಲ್ಲ....
ನಾನು: ಸರಿ ಹಾಗಾದರೆ.
ದಿವಾಕರ್: ನಿಮ್ಮ ಬ್ಲಾಗ್ ನೋಡಿದೆ. ಲೇಖನ ಚೆನ್ನಾಗಿದೆ.
ನಾನು : ಥ್ಯಾಂಕ್ಸ್!
ಇವೊತ್ತು ಅಂದರೆ ೨೨ರ ಬುಧವಾರ ರಾತ್ರಿ ವೆಬ್ ಸೈಟ್ ನೋಡಿದೆ. ನೀರಿನ ವಿಷಯ ನಾಪತ್ತೆ! ಜೊತೆಗೆ ಕಂಪೆನಿಗೆ ಬೇಕಾಗುವ ವಿದ್ಯುತ್ ಎಷ್ಟು, ಅದಕ್ಕೆ ಏನು ವ್ಯವಸ್ಥೆ ಎಂಬ ಮಾಹಿತಿ ಇತ್ತು, ಅದೂ ನಾಪತ್ತೆ! ಹೇಗಾದರೂ ನನ್ನ ಹತ್ತಿರ ಅದರ ಪ್ರಿಂಟೌಟ್ ಇದೆ.

ಶುಕ್ರವಾರ, ಜೂನ್ 11, 2010

ನಿಮ್ಮ ಕಾನೂನು ನಿಮಗಿರಲಿ; ನೀರು, ಭೂಮಿ ನಮಗಿರಲಿ!


ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯನ್ನು ಅದರ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿದಾಗ "ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿತ್ತು. ಒಪ್ಪಂದದ ಪ್ರತಿಯನ್ನು ಕೇಳಿ ನಾನು ಅರ್ಜಿ ಸಲ್ಲಿಸಿದೆ. ಕಂಪೆನಿ ಅದನ್ನು ಕೊಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಮೊನ್ನೆ ೫-೬-೨೦೧೦ರಂದು ಮಡಿಕೇರಿಯಲ್ಲಿ ಮಾಹಿತಿ ಹಕ್ಕು ಆಯೋಗ ಈ ಬಗ್ಗೆ ವಿಚಾರಣೆ ಇಟ್ಟುಕೊಂಡಿತ್ತು. ನಾನು ಹಾಜರಾದೆ. ಕಂಪೆನಿಯ ಪರವಾಗಿ ಯಾರೂ ಬಂದಿರಲಿಲ್ಲ. ಆದರೆ, ಬರಹ ರೂಪದಲ್ಲಿ ಆಯೋಗಕ್ಕೆ ಒಂದು ಅರ್ಜಿ ಸಲ್ಲಿಸಿ ಕಂಪೆನಿಯನ್ನು ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವಂತೆ ವಿನಂತಿಸಿಕೊಂಡಿದ್ದರು. ಆಯೋಗದ ಅಧ್ಯಕ್ಷರು, "ಕಂಪೆನಿ ಸಲ್ಲಿಸಿದ ಅರ್ಜಿ ಹಾಗೂ ವಕೀಲರ ಅಭಿಪ್ರಾಯಗಳ ಯಥಾಪ್ರತಿಗಳು ನಿಮಗೆ ಬೇಕೆ?" ಎಂದು ಕೇಳಿದಾಗ ನಾನು "ದಯವಿಟ್ಟು ಕೊಡಿ" ಎಂದೆ. ಕೂಡಲೇ ಯಥಾಪ್ರತಿ ಮಾಡಿಸಿಕೊಟ್ಟರು, ಉಚಿತವಾಗಿ. ಹೀಗೆ ನಾನು ಹಾಜರಾದದ್ದು ಸಾರ್ಥಕವಾಯಿತು.
ಮಾಹಿತಿ ಆಯೋಗದ ಅಧ್ಯಕ್ಷರು "ಈಗ ನಾನು ಏನು ಮಾಡಲಿ?" ಎಂದು ನನ್ನನ್ನು ಕೇಳಿದರು. ನನ್ನ ತಲೆ ಓಡುವುದು ನಿಧಾನ. (ಅದು ಓಡಿದ್ದನ್ನು ನಾನು ಕಂಡೇ ಇಲ್ಲ ಎನ್ನುವ ಟೀಕಾಚಾರ್ಯರೂ ಇದ್ದಾರು - ಅಂಥವರ ಸಂತತಿ ಬೆಳೆಯಲಿ!). ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ. ಕಡೆಗೆ ಅವರೇ, "ನೋಡೋಣ. ಮೂರು ವರ್ಷದ ಬ್ಯಾಲೆನ್ಸ್ ಶೀಟ್ ಹಾಜರುಪಡಿಸಲು ಆಜ್ಞೆ ಮಾಡುತ್ತೇನೆ. ಅದರ ಆಧಾರದಲ್ಲಿ ತೀರ್ಮಾನಿಸೋಣ" ಎಂದರು. ನಾನು "ಆಗಲಿ" ಎಂದೆ. ಪ್ರಕರಣದ ವಿಚಾರಣೆ ನಡೆಯುವುದು ಇನ್ನು ನಾಲ್ಕು ತಿಂಗಳು ಬಿಟ್ಟು. ಅಲ್ಲಿಯವರೆಗೆ ನನ್ನ ತಲೆ ಓಡಿದಷ್ಟು ಓಡಿಸಲು ನನಗೆ ಪುರುಸೊತ್ತಿದೆ. ತಜ್ಞರ ಸಲಹೆ ಪಡೆಯಲೂ ಅವಕಾಶವಿದೆ.
ಓದುಗರ ಸಲಹೆಗಳಿಗೆ, ಮಾಹಿತಿಗೆ ಸ್ವಾಗತ. ಮಾಹಿತಿ ಹಕ್ಕು ಆಯೋಗಕ್ಕೆ ನಾನು ಸಲ್ಲಿಸಬೇಕೆಂದಿರುವ ಉತ್ತರ ವಕೀಲರ ಅಭಿಪ್ರಾಯಕ್ಕೆ ನಾನು ನೀಡಿರುವ ಪ್ರತಿಕ್ರಿಯೆಯಲ್ಲಿರುವ ಅಂಶಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಇನ್ನೂ ಸೇರಿಸಬಹುದಾದ್ದು ಇದ್ದರೆ, ತಿಳಿಸಿರಿ.
ಎಂ ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆ:
ಕಂಪೆನಿಯ ಹೇಳಿಕೆ ೧: ಮಾಹಿತಿ ಹಕ್ಕು ಕಾಯಿದೆಯು ಪ್ರತಿವಾದಿ ಕಂಪೆನಿಗೆ ಲಗಾವು ಆಗುವುದಿಲ್ಲ. ಮೊದಲು ಇದ್ದ ಕರ್ನಾಟಕದ ಕಾಯಿದೆಯಲ್ಲಿ ಬಳಸಲಾದ ವ್ಯಾಪಕವಾದ ಪರಿಭಾಷೆಯು ಕೇಂದ್ರದ ಕಾಯಿದೆಯಲ್ಲಿ ಇಲ್ಲದಿರುವ ಕಾರಣ, ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಎಂಬ ಕಂಪೆನಿಯು "ಸಾರ್ವಜನಿಕ ಪ್ರಾಧಿಕಾರ" ಆಗಲಾರದು. ಆದ ಕಾರಣ ಪಿರ್ಯಾದಿಯು ರದ್ದಾಗತಕ್ಕದ್ದು.
ನನ್ನ ವಿವರಣೆ: ಈ ಅಂಶವು ವಕೀಲರು ನೀಡಿರುವ ಅಭಿಪ್ರಾಯದಲ್ಲಿ ಇದೆ. ಹಾಗಾಗಿ ಅಲ್ಲಿ ಚರ್ಚಿಸಿದ್ದೇನೆ.
ಕಂಪೆನಿಯ ಹೇಳಿಕೆ ೨: ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಇವರು ಆರಂಭದಿಂದಲೂ ಮಾಹಿತಿಯನ್ನು ಸಾಧ್ಯವಾದ ಮಟ್ಟಿಗೆ ಒದಗಿಸುತ್ತಾ ಬಂದುದು ಬಹುಶಃ ತಪ್ಪು ಕಲ್ಪನೆಗೆ ಅವಕಾಶ ಆಗಿರಬೇಕು. ಪಾರದರ್ಶಕತೆಯ ದೃಷ್ಟಿಯಿಂದ ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತದವರು ಈ ರೀತಿ ವರ್ತಿಸಿದ್ದೇ ಹೊರತು ಮಾಹಿತಿ ಹಕ್ಕು ಕಾಯಿದೆಯು ತಮಗೆ ಲಗಾವಾಗುವುದೆಂಬ ಕಾರಣದಿಂದಲ್ಲ. ನಮ್ಮ ಕಂಪೆನಿಯು ಈ ಕುರಿತಾಗಿ ನುರಿತ ವಕೀಲರಿಂದ ಕಾನೂನಿನ ಅಭಿಪ್ರಾಯವನ್ನು ಪಡೆದಿತ್ತು. ಅದರ ಒಂದು ಪ್ರತಿಯನ್ನು ತಮ್ಮ ಅವಗಾಹನೆಗೆ ಈ ಉದಾಹರಣೆಯ ಜೊತೆಗೆ ಲಗತ್ತಿಸಿದ್ದೇವೆ.
ನನ್ನ ವಿವರಣೆ: ಪಾರದರ್ಶಕತೆಯ ದೃಷ್ಟಿಯಿಂದ ಈ ಮೊದಲು ಮಾಹಿತಿಗಳನ್ನು ಒದಗಿಸಲಾಗಿತ್ತಷ್ಟೆ. ಅದೇ ಉದಾತ್ತ ಧ್ಯೇಯವನ್ನು ಮುಂದುವರಿಸಿಕೊಂಡು ಹೋಗಿದ್ದರೆ, ಕಂಪೆನಿಯ ಬಗ್ಗೆ ಜನಸಾಮಾನ್ಯರಿಗೆ ಗೌರವ-ವಿಶ್ವಾಸಗಳು ಹೆಚ್ಚುತ್ತಿದ್ದವು. ಪ್ರಾರಂಭಿಸಿದ್ದ ಒಂದು ಸತ್ಸಂಪ್ರದಾಯವನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಟ್ಟದ್ದರಿಂದ ಕಂಪೆನಿಯ ವ್ಯವಹಾರಗಳಲ್ಲಿ ಮುಚ್ಚಿಟ್ಟುಕೊಳ್ಳುವಂಥದ್ದು ಏನೋ ಇದೆ ಎಂಬ ಅನುಮಾನ ಜನಸಾಮಾನ್ಯರಿಗೆ ಬರುವಂತಾಯಿತು.
ವಕೀಲರು ನೀಡಿರುವ ಕಾನೂನು ಅಭಿಪ್ರಾಯದ ಕುರಿತು ಮುಂದೆ ಪ್ರತಿಕ್ರಿಯೆ ನೀಡಿದ್ದೇನೆ.
ಕಂಪೆನಿಯ ಹೇಳಿಕೆ ೩: ಮಾಹಿತಿಯನ್ನು ಕೋರುವವರು ಅದನ್ನು ಪಡೆಯಲು ಯಾವುದಾದರೂ ಸರಿಯಾದ ಕಾರಣ ಬೇಕು. ಈ ಪ್ರಕರಣವನ್ನು ದಯವಿಟ್ಟು ಗಮನಿಸಿರಿ. ೬-೧೦-೨೦೦೯ರ ಉದಯವಾಣಿ ಪತ್ರಿಕೆಯಲ್ಲಿ ಬಂದ ಜಾಹೀರಾತಿಗೆ ಮತ್ತು ಅರ್ಜಿದಾರರಿಗೆ ಯಾವ ಸಂಬಂಧವೂ ಇಲ್ಲ. ಆ ಜಾಹೀರಾತು ಆರ್ಥಿಕ ವಲಯದ ಪ್ರಗತಿಗೆ ಸಂಬಂಧಿಸಿತ್ತು. ಅದರ ಒಂದು ಜೆರೋಕ್ಸ್ ಪ್ರತಿಯನ್ನು ಲಗತ್ತಿಸಿದ್ದೇವೆ. ಆದರೂ ಅವರು ಬರೆದ ಪತ್ರಕ್ಕೆ ನಾವು ಮಾಹಿತಿಯನ್ನು ನಮ್ಮ ಪತ್ರ ದಿನಾಂಕ ೧೪-೧೨-೨೦೦೯ರ ಪ್ರಕಾರ ಒದಗಿಸಿದೆವು.
ನನ್ನ ವಿವರಣೆ: ಮಾಹಿತಿ ಹಕ್ಕು ಕಾಯಿದೆಯಲ್ಲಿ ಮಾಹಿತಿ ಕೇಳಲು ಯಾವುದೇ ಕಾರಣ ನೀಡಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಕಾರಣ ನೀಡುವುದು ಬೇರೆ, ಕಾರಣ ಇರುವುದು ಬೇರೆ ಎಂದೇ ತಿಳಿಯೋಣ. ಕಂಪೆನಿ ಪತ್ರಿಕೆಯಲ್ಲಿ ಜಾಹೀರಾತು ನೀಡಿರುವುದು ಅದನ್ನು ಸಾರ್ವಜನಿಕರು ಓದಬೇಕೆಂಬ ಉದ್ದೇಶದಿಂದ. ಪ್ರಜಾಪ್ರಭುತ್ವ ಇರುವ ದೇಶದ ಒಬ್ಬ ಪ್ರಜೆಯಾಗಿ, ದೇಶದ ಆರ್ಥಿಕ ವಲಯದ ಪ್ರಗತಿಯು ನನಗೆ ಖಂಡಿತವಾಗಿಯೂ ಸಂಬಂಧಪಡುತ್ತದೆ. ಅದೇ ಕಾರಣಕ್ಕೆ ಈ ಜಾಹೀರಾತು ಸಹ ನನಗೆ ಸಂಬಂಧಪಡುತ್ತದೆ.
ಈ ಜಾಹೀರಾತಿನ ಆಧಾರದಲ್ಲಿ ನಾನು ಕೇಳಿರುವ ಮಾಹಿತಿಯು ಬಂಟ್ವಾಳ ಮತ್ತು ಮಂಗಳೂರಿನ ಜನರ ಕುಡಿಯುವ ನೀರಿಗೆ ಸಂಬಂಧಪಟ್ಟಿದೆ. ಕಂಪೆನಿಯು ನೀಡಿದ ಮಾಹಿತಿಯನ್ನು ವಿಶ್ಲೇಷಿಸಿ, ನಾನು ನನ್ನ ಬ್ಲಾಗಿನಲ್ಲಿ ಲೇಖನವನ್ನೂ ಪ್ರಕಟಿಸಿದ್ದೇನೆ. ಈ ಕುರಿತು ಒಂದು ವಿಚಾರಸಂಕಿರಣ ನಡೆಸಲು ಕೋರಿ ಮಂಗಳೂರಿನ ಮೇಯರ್ ರವರಿಗೆ ಒಂದು ಪತ್ರವನ್ನೂ ಬರೆದಿದ್ದೇನೆ. ವಾಸ್ತವವಾಗಿ ಇದೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯ. ಬಂಟ್ವಾಳ ಹಾಗೂ ಮಂಗಳೂರಿನ, ನೇತ್ರಾವತಿ ನದಿ ನೀರನ್ನು ಕುಡಿಯುವ ಎಲ್ಲ ಜನರಿಗೂ ನೇರವಾಗಿ ಸಂಬಂಧಪಡುವ ವಿಷಯ. ಆ ಎಲ್ಲರೂ ಈ ವಿಷಯದಲ್ಲಿ ಆಸಕ್ತಿ ತಳೆಯಬೇಕಾದ ಅಗತ್ಯವಿದೆ. ಬಂಟ್ವಾಳದಲ್ಲಿ ವಾಸಿಸುವ ನನಗೆ ಇದು ಖಂಡಿತವಾಗಿಯೂ ನೇರವಾಗಿ ಸಂಬಂಧಪಡುತ್ತದೆ.
ಇನ್ನೊಂದು ವಿಷಯ: ಯಾವುದೇ ಜಾಹೀರಾತು ಜನರನ್ನು ತಪ್ಪುದಾರಿಗೆ ಎಳೆಯುವಂತಿರಬಾರದು, ಅವರಿಗೆ ತಪ್ಪು ಮಾಹಿತಿಗಳನ್ನು ನೀಡಬಾರದು. ಯಾವುದಾದರೂ ಜಾಹೀರಾತು ಹೀಗೆ ಮಾಡಿದರೆ, ಅಂಥ ಜಾಹೀರಾತುಗಳ ಕುರಿತು Advertising Standarads Council of India ಎಂಬ ಸಂಸ್ಥೆಗೆ ಯಾರು ಬೇಕಾದರೂ ದೂರು ನೀಡಬಹುದು. ಚರ್ಚಿತ ಜಾಹೀರಾತಿನಲ್ಲಿ ಮಳೆ ನೀರು ಸಂಗ್ರಹದ ಕುರಿತಾದ ಮಾತುಗಳು ಯಾವ ಅಧ್ಯಯನವನ್ನೂ ಆಧರಿಸಿದವಲ್ಲ ಎಂಬುದನ್ನು ಕಂಪೆನಿಯೇ ಒಪ್ಪಿಕೊಂಡಿದೆ. ಇವು ಮಳೆ ನೀರು ಸಂಗ್ರಹದ ಹೆಸರಿನಲ್ಲಿ, ಜನಸಾಮಾನ್ಯರಲ್ಲಿ ಕಂಪೆನಿಯ ಕುರಿತು ಸದ್ಬಾವನೆ ಮೂಡಿಸುವ ಬೇರೆಯೇ ಉದ್ದೇಶ ಹೊಂದಿದಂತೆ ಭಾಸವಾಗುತ್ತದೆ. ಇದು ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಲ್ಲವೆ?
ಈ ಮುಂದಿನ ಕಂಪೆನಿಯ ಹೇಳಿಕೆಗಳಿಗೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ
೪. ಅರ್ಜಿದಾರರ ಪತ್ರದಲ್ಲಿ ೨ನೇ ಪ್ರಶ್ನೆ ಹೀಗಿತ್ತು: ಗುರುಪುರ ಮತ್ತು ನೇತ್ರಾವತಿಯಲ್ಲಿ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.
೫. ಇದಕ್ಕೆ ನಾವು ಕೊಟ್ಟ ಉತ್ತರ ಹೀಗಿತ್ತು. ಈಗಾಗಲೇ ನೇತ್ರಾವತಿ ನದಿಯಿಂದ ನೀರಿನ್ ಪೂರೈಕೆಗಾಗಿ ಎ.ಎಂ.ಆರ್. ಪವರ್ ಪ್ರೋಜೆಕ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಜಲ ಸಂಪನ್ಮೂಲ ವಿಭಾಗದಿಂದ ೨೦೦೭ರಲ್ಲಿ ಅನುಮತಿ ದೊರಕಿದ್ದು ಅದರ ಪ್ರತಿ ಲಗತ್ತಿಸಿದೆ
೬. ನಮ್ಮ ಬಳಿ ಇದ್ದು ಸರಕಾರದ ವತಿಯಿಂದ ದೊರಕಿದ ಅನುಮತಿಯನ್ನು ನಾವು ಅರ್ಜಿದಾರರಿಗೆ ಒದಗಿಸಿದ್ದೆವು. ಆದರೆ, ಎ ಎಂ ಆರ್ ಕಂಪೆನಿಯ ಜೊತೆ ಮಾಡಿದ ಒಪ್ಪಂದವು ಸಾರ್ವಜನಿಕರಿಗೆ ಅದರಲ್ಲೂ ಏನೂ ಸಂಬಂಧವಿಲ್ಲದ ಅರ್ಜಿದಾರರಿಗೆ ಒದಗಿಸುವ ಅಗತ್ಯ ಇಲ್ಲದ್ದರಿಂದ ಮತ್ತು ಆ ದಾಖಲೆಯು ಇನ್ನೊಬ್ಬ ವ್ಯಕ್ತಿಯು ನಮ್ಮ ಬಳಿ ಮಾಡಿದ ಒಪ್ಪಂದಕ್ಕೆ ಸಂಬಂಧಿಸಿದ್ದರಿಂದ ಅದರ ಪ್ರತಿಯನ್ನು ನಾವು ಕೊಡಲಿಲ್ಲ. ದಿನಾಂಕ ೧೮-೦೧-೨೦೧೦ರಂದು ಅರ್ಜಿದಾರರಿಗೆ ಉತ್ತರವನ್ನು ನೀಡಿದ್ದೇವೆ. ಇದು ನಮ್ಮ ಪ್ರಕಾರ ಸರಿಯಾದ ಕ್ರಮವೆಂದು ತಿಳಿಯುತ್ತೇವೆ.
೭. ಈಗಲೂ ಸಹ ಇದೇ ಮೇಲೆ ಬರೆದ ಕಾರಣಕ್ಕಾಗಿ ದಯವಿಟ್ಟು ಅರ್ಜಿಯನ್ನು ವಜಾ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. ಮಾಹಿತಿ ಹಕ್ಕು ಕಾಯಿದೆಯ ಕಲಂ ೮(ಡಿ) ಮತ್ತು (ಇ) ಎಂಬ್ ಉಪಕಲಂಗಳ ಪ್ರಕಾರ ಸದ್ರಿ ದಾಖಲೆಯನ್ನು (ಮಾಹಿತಿಯನ್ನು) ನೀಡುವುದು ಕಡ್ಡಾಯವಲ್ಲ.
ಮೇಲೆ ಬರೆದ ವಿವರವಾದ ಉತ್ತರವನ್ನು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಬೇಕಾಗಿ ಪ್ರಾರ್ಥಿಸುತ್ತೇವೆ.
***********************
ಈ ಮುಂದಿನದು ವಕೀಲರ ಅಭಿಪ್ರಾಯ:
M.V. Shanker Bhat, B.A.B.L.,
Advocate
H-3, II Floor, Ramabhavan Complex
Kodialbail, Mangalore.
ED& COO
Mangalore SEZ Ltd.
Muda Building
Urva Stores, Managalore-575006
Sir,
Sub: Opinion on query regarding applicability of Right to Information Act.
Ref: Your company's memorandum, Articles and certificate of incorportion dtd. 24-2-2006
1. The Memorandum dtd. 18-2-2006 as amended up to 18-7-08 relating to Mangalore SEZ Ltd shows that it is a public company limited by shares. It has authorised share capital of One Hundred Crores of Rs. 10/- value per share. Memorandum of Association of the company has been subscribed by ONGC representing MRPL, KIADB, Kanara Chamber of Commerce, and four individuals. In all 76200 shares were subscribed by them. KIADB has subscribed only 5000 shares. MRPL has subscribed 50000 shares. Chamber of Commerce has subscribed 20000 shares. Rest by the four individuals.
2. On the above facts the question is whether your company is Public Authority as defined in Sec.2(h) of the RTI Act. 2005.
3. Your company is not established by or under Constitution, or by law made by Parliament or State Legislature. Your company has not been notified as Public Authority by State or Central Government. Your company is not financed by State or Central Government either directly or indirectly. Even if participation of KIADB, which is an independent Board, is considered as indirect financing by State Government, its holding is very small compared to what has been subscribed as per Menorandum of Association. Therefore it would not be 'substantially financed by State Government'.
4. From the above analysis of facts with reference to the definition found in the Act, I am of the considered opinion that your company will not be covered by the RTI Act, 2005
Yours faithfully
(Sd)
ಕಂಪೆನಿಯು ನೀಡಿದ ಮಾಹಿತಿಯನ್ನು ಆಧರಿಸಿ ವಕೀಲರು ನೀಡಿರುವ ಮೇಲಿನ ಅಭಿಪ್ರಾಯ ಖಂಡಿತವಾಗಿಯೂ ಸರಿಯಾಗಿದೆ. ದುರದೃಷ್ಟವಶಾತ್ ಕಂಪೆನಿಯು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ವಕೀಲರ ಗಮನಕ್ಕೆ ತಂದಿಲ್ಲ. ತನ್ನ ಕಕ್ಷಿದಾರನು ತನ್ನಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ಬಂದರೆ - ಅದರಲ್ಲೂ ಪ್ರಕರಣವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದಾಗ - ಆ ಅನುಮಾನವನ್ನು ಪರಿಹರಿಸಿಕೊಳ್ಳುವುದು ವಕೀಲರ ಕರ್ತವ್ಯದ ಒಂದು ಭಾಗ ಎಂದು ನಾನು ಭಾವಿಸಿದ್ದೇನೆ. ಆ ಅಭಿಪ್ರಾಯ ತಪ್ಪೆ?
ಕಂಪೆನಿಯು ವಕೀಲರ ಗಮನಕ್ಕೆ ತಾರದ ಮಾಹಿತಿಗಳು ಈ ಕೆಳಗಿನಂತಿವೆ:
೧, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಬಗೆಯ ತೆರಿಗೆ ರಿಯಾಯತಿಗಳನ್ನು ವಿಶೇಷ ಆರ್ಥಿಕ ವಲಯಕ್ಕೆ ನೀಡಿವೆ. ಈ ರಿಯಾಯತಿಗಳು ಪ್ರಸ್ತುತ ಕಂಪೆನಿಗೂ ಅನ್ವಯವಾಗುತ್ತವೆ. ಈ ರಿಯಾಯತಿಗಳನ್ನು ನೀಡಲು ಬೇಕಾಗಿ ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಆದಾಯತೆರಿಗೆ ಮತ್ತಿತರ ಕೆಲವು ಕಾನೂನುಗಳಿಗೇ ತಿದ್ದುಪಡಿ ಮಾಡಲಾಗಿದೆ.
೨. ವಿಶೇಷ ಆರ್ಥಿಕ ವಲಯಕ್ಕೆ ಬೇಕಾದ ಒಟ್ಟು ಭೂಮಿ ಸುಮಾರು ೪೦೦೦ ಎಕರೆಗಳು. ಈ ಪೈಕಿ ಸುಮಾರು ೨೦೦೦ ಎಕ್ರೆಯಷ್ಟು ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರ ತೀವ್ರ ವಿರೋಧದ ನಡುವೆಯೂ, ಜಮೀನನ್ನು ಸ್ವಾಧೀನಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸುವಲ್ಲಿ ಕರ್ನಾಟಕ ರಾಜ್ಯ ಸರಕಾರವು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
೩. ಕಂಪೆನಿಗೆ ಪ್ರತಿದಿನ ೬.೭೫ ಕೋಟಿ ಲೀಟರು ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತಲು ರಾಜ್ಯ ಸರಕಾರವು ಅನುಮತಿ ನೀಡಿದೆ. ಈ ನೀರಿನ ದರ ೪೫ ಲಕ್ಷ ಲೀಟರಿಗೆ ರೂ. ೨೮೮-೯೦. (ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ದರ ೧೦೦೦ ಲೀಟರಿಗೆ ೨-೦೦ ರೂಪಾಯಿ.)
೪. ಕಂಪೆನಿಗೆ ಅಗತ್ಯವಿರುವಷ್ಟು ಪ್ರಮಾಣದ ವಿದ್ಯುತ್ತನ್ನು ಸರಬರಾಜು ಮಾಡಲು ಸಹ ಕರ್ನಾಟಕ ಸರಕಾರವು ಒಪ್ಪಿಕೊಂಡಿದೆ.
೫. ಮಂಗಳೂರು ಮಹಾನಗರ ಪಾಲಿಕೆಯು ಗಲೀಜು ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವ ಬಗ್ಗೆ ಎಂ ಎಸ್ ಇ. ಝಡ್ ಕಂಪೆನಿಯೊಂದಿಗೆ ಮೂವತ್ತು ವರ್ಷಗಳ ದೀರ್ಘಾವಧಿಗೆ ಅನ್ವಯಿಸುವ (೩೦:೭೦ ಅನುಪಾತ) ಒಂದು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಕರ್ನಾಟಕ ಸರ್ಕಾರವು ಕಂಪೆನಿಯ ಆಗುಹೋಗುಗಳಲ್ಲಿ ಗಣನೀಯ ಪಾತ್ರ ವಹಿಸಿರುವುದರ ದ್ಯೋತಕವಾಗಿದೆ.
ಈ ಮೇಲಿನ ಅಂಶಗಳನ್ನು ಪರಿಗಣಿಸಿದರೆ ಕಂಪೆನಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಪಾಲು "ಗಣನೀಯ"ವಾಗಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡುವುದು ನ್ಯಾಯವಲ್ಲ.

ಸೋಮವಾರ, ಮೇ 17, 2010

ಮರಗಳ ಸಂರಕ್ಷಣೆಯ ಕಾನೂನು ಜಾರಿಗೆ ಕೊಡುವ ಪರಿ.......


ಎಪ್ರಿಲ್ ೮ರಂದು "ಅರಣ್ಯ ಇಲಾಖೆ ಅಧಿಕಾರಿಗಳ ಉತ್ತರ ಬಂತು, ಆದರೆ....." ಎಂಬ ಲೇಖನ ಬರೆದಿದ್ದೆ. ಇದು ಪ್ರಕರಣ ಮುಂದುವರಿದ ಬಗೆ:
.
ನನ್ನ ಪತ್ರಕ್ಕೆ ಮಂಗಳೂರಿನ ಉ.ಅ.ಸಂ. ಯವರು ಉತ್ತರ ಬರೆಯಲಿಲ್ಲ. ನೆನಪೋಲೆ ಬರೆದೆ. ಪ್ರಯೋಜನವಾಗಲಿಲ್ಲ. "ಉತ್ತರ ಬರೆಯದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ" ಎಂಬ ಎಚ್ಚರಿಕೆ ರವಾನಿಸಿದೆ. ಆದರೂ ಉತ್ತರ ಬರಲಿಲ್ಲ. ಮಂಗಳೂರಿನ ಮಹಾನಗರಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಕಛೇರಿ ಇರುವ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಲ್ಲಾ ದಾಖಲೆಗಳ ಸಮೇತ ಒಂದು ದೂರು ನೀಡಿ ಯಥಾಪ್ರತಿಯನ್ನು ಉ.ಅ.ಸಂ.ಯವರಿಗೆ ಕಳಿಸಿದೆ. ಇಷ್ಟು ಹಟ ಮಾಡಿದ ಮೇಲೆ ಮೊನ್ನೆ ೧೩-೫-೨೦೧೦ರಂದು ಉ.ಅ.ಸಂ. ಒಂದು ಉತ್ತರ ಬರೆದಿದ್ದಾರೆ. ನಾನು ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಬರೆದ ಪತ್ರದ ಪರಿಣಾಮ ಈ ಪತ್ರವೋ ಎಂದು ತಿಳಿಯುವಂತಿಲ್ಲ. ಹೇಗಾದರೂ ಇರಲಿ, ಅವರ ಉತ್ತರ ಓದಿ ನೋಡಿ:
"...... -ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ- ಎಂಬ ಕುರಿತು ಮೊದಲನೆಯದಾಗಿ ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ತಾವು ಇಟ್ಟುಕೊಂಡಿರುವ ತಮ್ಮ ಕಾಳಜಿಗೆ ಅಭಿನಂದನೆಗಳು. ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
೧. ಮರಗಳ ರಕ್ಷಣೆಯ ಬಗ್ಗೆ "ಕಾಡು ಉಳಿಸಿ ನಾಡು ಬೆಳೆಸಿ" ಎಂಬ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
೨. ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ.
೩. "ವೃಕ್ಷಲಕ್ಷ" ಕಾರ್ಯಕ್ರಮದಡಿಯಲ್ಲಿ ಹಲವು ಕಡೆಗಳಲ್ಲಿ ಕಾರ್ಯಾಗಾರ, ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
೪. ಮರಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಜನರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ.
೫. ಈ ವಿಭಾಗದಲ್ಲಿ ಕಾರ್ಯಕಾರಿ ಸಿಬ್ಬಂದಿ ಕೊರತೆ ಇದ್ದರೂ, ಅರಣ್ಯ ಅಪರಾಧಗಳನ್ನು ತಡೆಗಟ್ಟುವರೇ ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ.
ಈ ಮೇಲಿನಂತಹ ಹಲವಾರು "ಜಾಗೃತಿ" ಕ್ರಮಗಳನ್ನು ಜನರಲ್ಲಿ ಮೂಡಿಸಿದ್ದರೂ, ಆಗಾಗ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದು ಸಾಗಿಸುವುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗೂ ತಮ್ಮ ಪತ್ರದಲ್ಲಿ ತಿಳಿಸಿದಂತೆ ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಇನ್ನು ಮುಂದೆ ಮರಗಳ ರಕ್ಷಣೆಯ ಬಗ್ಗೆ ಇರುವ ಕಾಯ್ದೆ, ಕಾನೂನುಗಳನ್ನು ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಕಾರ್ಯಗಾರಗಳನ್ನು ಏರ್ಪಡಿಸಿದಾಗ ಸದ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನು ತಮಗೂ ಕೂಡ ಮಾಡಲಾಗುವುದು ಎಂಬ ವಿಷಯವನ್ನು ತಮ್ಮ ಮಾಹಿತಿಗೆ ನೀಡಲಾಗಿದೆ"
ಪತ್ರಕ್ಕೆ ಕೂಡಲೇ ಹೀಗೆ ಉತ್ತರಿಸಿದ್ದೇನೆ:
ಮರಗಳ ರಕ್ಷಣೆಯ ಕಾನೂನನ್ನು ಜಾರಿಗೆ ಕೊಡುವ ಬಗ್ಗೆ ನೀವು ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ತಿಳಿದು ತುಂಬಾ ಸಂತೋಷವಾಯಿತು. ಅರಣ್ಯ ಸಂರಕ್ಷಣೆಗೆ ನೀವು ನೀಡುತ್ತಿರುವ ಮಹತ್ವವು ಅಭಿನಂದನಾರ್ಹವಾಗಿದೆ.
೧. "ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ" ಎಂದು ನಿಮ್ಮ ಪತ್ರದಲ್ಲಿ ಹೇಳಿದ್ದೀರಿ. ೨೦೦೫-೨೦೦೬ರಲ್ಲಿ ಬಂಟ್ವಾಳ ಅರಣ್ಯವಲಯಕ್ಕೆ ಸಂಬಂಧಪಟ್ಟ ಬಿ. ಮೂಡ ಗ್ರಾಮದಲ್ಲಿ ನೀವು ಹೇಳುವ ಯಾವುದಾದರೂ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಡಲಾಗಿತ್ತೆ? ಎಲ್ಲಿ, ಎಷ್ಟು ಸಸಿಗಳನ್ನು ನೆಡಲಾಗಿತ್ತು, ಯಾವ ಜಾತಿಗೆ ಸೇರಿದ ಸಸಿಗಳು ಎಂಬುದರ ಪೂರ್ಣ ವಿವರವನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
೨. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಸಮಿತಿಯು ಅಸ್ತಿತ್ವದಲ್ಲಿದೆಯೆ? ಇದ್ದರೆ ಅದರ ವಿಳಾಸ, ಸದಸ್ಯರ ಹೆಸರು ಇತ್ಯಾದಿ ವಿವರಗಳನ್ನೂ, ಒಂದು ವೇಳೆ ಇಲ್ಲದಿದ್ದರೆ, ಬಿ.ಮೂಡ ಗ್ರಾಮವು ಯಾವ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೂ ಅದರ ವಿಳಾಸ ಇತ್ಯಾದಿ ವಿವರಗಳನ್ನೂ ನನಗೆ ನೀಡಬೇಕಾಗಿ ಕೋರುತ್ತೇನೆ.
೩. " ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ." ಎಂದು ನೀವು ಹೇಳಿದ್ದೀರಿ. ದಿನಾಂಕ ೧೬-೩-೨೦೧೦ರ ನನ್ನ ಪತ್ರದಲ್ಲಿ ನಾನು ಪ್ರಸ್ತಾವಿಸಿರುವ ಮರಗಳ ನಾಶವನ್ನು ಕಂಡುಕೊಳ್ಳಲು ಹಗಲು ರಾತ್ರಿ ಗಸ್ತು ತಿರುಗುವ ಅವಶ್ಯಕತೆಯೇ ಇಲ್ಲ. ಈ ರೀತಿಯಲ್ಲಿ ಆಗುತ್ತಿರುವ ಮರಗಳ ನಾಶವು ಹಾಡುಹಗಲೇ, ಎಲ್ಲರ ಎದುರಿನಲ್ಲೇ, ಸಾಕಷ್ಟು ದೂರಕ್ಕೆ ಕೇಳುವಂತೆ ಶಬ್ದ ಮಾಡುವ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿ ತಿರುಗಿದರೂ ನೀವು ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ಕಾಣಬಹುದು. ಜಿಲ್ಲೆಯ ನಗರ ಪ್ರದೇಶಗಳೂ ಸೇರಿದಂತೆ ಎಲ್ಲ ಕಡೆಯೂ ಸಹ, ಈ ರೀತಿಯಲ್ಲಿ ಮರಗಳನ್ನು ಬುಡಸಮೇತ ಉರುಳಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ಇದನ್ನು ಕಂಡುಕೊಳ್ಳಲು ನೀವು ನಿಮ್ಮ ವಾಹನದಿಂದ ಕೆಳಗೆ ಇಳಿಯಬೇಕಾಗಿಯೂ ಇಲ್ಲ. ನೀವು ಕುಳಿತಲ್ಲಿಗೇ ಕಾಣುವಷ್ಟು ಸ್ಪಷ್ಟವಾಗಿ ಈ ನಾಶಕ್ರಿಯೆ ನಡೆಯುತ್ತಿದೆ. ಯಾವುದಾದರೊಂದು ಗುಡ್ಡದ ನೆತ್ತಿಗೆ ಹೋಗಿ ನಿಂತು ನೋಡಿದರೆ, ಭೂಭಾಗವು ಅಲ್ಲಲ್ಲಿ ಕೆಂಪಾಗಿರುವುದನ್ನು ನೀವು ಕಾಣಬಹುದು. ಹತ್ತಿರ ಹೋಗಿ ನೋಡಿದರೆ, ಉರುಳಿಸಿದ ಮರಗಳು ಅಥವಾ ಅವುಗಳ ಅವಶೇಷಗಳು ಅಲ್ಲಿಯೇ ಬಿದ್ದಿರುವುದನ್ನೂ ಕಾಣುವ ಸಾಧ್ಯತೆ ಇದೆ.
ಆದ್ದರಿಂದ ಯಂತ್ರಗಳನ್ನು ಬಳಸಿ ಆಗುತ್ತಿರುವ ಮರಗಳ ನಾಶವನ್ನು ತಡೆಹಿಡಿಯುವ ನಿಟ್ಟಿನಲ್ಲಿ ನೀವು ಮರಗಳ ರಕ್ಷಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡಬೇಕಾಗಿ ನಿಮ್ಮನ್ನು ಮತ್ತೊಮ್ಮೆ ಕೋರುತ್ತೇನೆ.
"ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ" ಎಂದು ನೀವು ಹೇಳಿದ್ದೀರಿ. ಆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿಕೊಡಬೇಕಾಗಿ ಕೋರುತ್ತೇನೆ.
ಈ ಪತ್ರಕ್ಕೆ ಇನ್ನು ಹದಿನೈದು ದಿನಗಳಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ."
ಈ ಪ್ರಕರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ಬ್ಲಾಗಿನಲ್ಲಿ ಪ್ರತಿಕ್ರಿಯೆ ಪ್ರಕಟಿಸುವುದು ಬೇಡ ಎಂದಿದ್ದರೆ, ಇ-ಮೇಲ್ ವಿಳಾಸಕ್ಕೆ ಪ್ರತಿಕ್ರಿಯೆ ಕಳಿಸಿ. (nesara.mudrana@gmail.com) ನನ್ನನ್ನು ಟೀಕಿಸಲು ಯಾವ ಮುಲಾಜೂ, ದಾಕ್ಷಿಣ್ಯವೂ ಬೇಡ.

ಗುರುವಾರ, ಏಪ್ರಿಲ್ 22, 2010

ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!

ಬಂಟ್ವಾಳ ತಾಲೂಕಿನ ಮಂಚಿ ಬಿ.ವಿ. ಕಾರಂತರ ಹುಟ್ಟೂರು. ಈ ತಿಂಗಳ ೯,೧೦,೧೧ರಂದು ಅಲ್ಲಿ ಅವರ ನೆನಪಿಗಾಗಿ ಅವರ ಅಭಿಮಾನಿಗಳೆಲ್ಲ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಲು ಹೊರಟದ್ದಲ್ಲ. ಆ ದಿನ ಶ್ರೀಮತಿ ವೈದೇಹಿಯವರು ವ್ಯಕ್ತಪಡಿಸಿದ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕೆನ್ನಿಸಿದ್ದರಿಂದ ಈ ಬರಹ.
ವೈದೇಹಿಯವರು ಆ ದಿನ ಸಂಜೆಯ ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಒಂದು ಮಾತು ಹೇಳಿದರು: "ಎಂಜಿನಿಯರ್ ಎಂದರೆ ಮರಗಳನ್ನು ಕಡಿದು ರಸ್ತೆ ನಿರ್ಮಿಸುವವನಲ್ಲ. ಆ ಕೆಲಸವನ್ನು ಯಾವ ಕಂಟ್ರಾಕ್ಟರ್ ಕೂಡ ಮಾಡಬಲ್ಲ. ಎಂಜಿನಿಯರ್ ಆದವನು ಮರಗಳನ್ನು ಉಳಿಸಿಕೊಂಡೇ ರಸ್ತೆ ಮಾಡುವ ಜಾಣ್ಮೆ ಹೊಂದಿರಬೇಕು. ಈಗ ಎಲ್ಲೆಂದರಲ್ಲಿ ರಸ್ತೆ ಮಾಡಲೆಂದು ಮರ ಕಡಿಯುತ್ತಾರೆ. ಯಾರು ಇದನ್ನು ತಡೆಯುವವರು? ನಾವು ಹೇಳಲು ಸಾಧ್ಯವೆ? ನಾವು ಹೇಳಿದರೆ ಕೇಳುತ್ತಾರೆಯೆ?". ಮೊನ್ನೆ ಮೊನ್ನೆ ಒಂದು ಊಟದ ಮನೆಯಲ್ಲಿ ಸಿಕ್ಕಿದ ಅಲ್ಲಿನವರೇ ಆದ ಕಂದೂರು ಐತಾಳರೂ ವೈದೇಹಿಯವರ ಈ ಮಾತುಗಳನ್ನು ತುಂಬ ಮೆಚ್ಚಿಕೊಳ್ಳುತ್ತಾ. "ನಾವು ಹೇಳಿದರೆ ಆದೀತ? ನಮಗೆ ಏನು ಶಕ್ತಿ ಇದೆ?" ಎಂದರು. ನಾನು ಸುಮ್ಮನಿದ್ದೆ.
**********
ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲವಂತೆ. ಅದೇ ಅವನ ಸಮಸ್ಯೆ.
**********
ನಾನು ಮಂಗಳೂರಿಗೆ ಹೋಗುವುದು ಅಪರೂಪ. ಕಳೆದ ವರ್ಷದ ಪ್ರಾರಂಭದಲ್ಲಿ ಯಾತಕ್ಕೋ ಹೋಗಿದ್ದೆ. ಕಾರ್ನಾಡು ಸದಾಶಿವರಾವ್ ರಸ್ತೆಯಲ್ಲಿ ನಡೆದು ಹೋಗಬೇಕಾಯಿತು. ನೋಡಿದರೆ ಹಳತೆಲ್ಲ ಪೂರ್ತಿ ಹೋಗಿ, ಹೊಸ ವಿಶಾಲವಾದ ರಸ್ತೆ ಆಗಿದೆ. ಪೂರ್ತಿ ಕಾಂಕ್ರೀಟ್ ರಸ್ತೆ, ಬದಿಯ ಅಂಗಡಿಗಳ ಹೊಸ್ತಿಲವರೆಗೂ ಚಾಚಿಕೊಂಡಿದೆ. ಅರೆ! ಹಿಂದೆ ಹೀಗಿರಲಿಲ್ಲವಲ್ಲ ಎನಿಸಿತು. ನೆನಪು ಮಾಡಿಕೊಂಡೆ. ಹಿಂದೆ ಕಾಲ್ನಡಿಗೆಯಲ್ಲಿ ಹೋಗುವವರಿಗೆ ರಸ್ತೆಯ ಎರಡೂ ಬದಿಗಳಲ್ಲಿ ಅಂದಾಜು ಮೂರಡಿ ಅಗಲದ ಕಾಲುದಾರಿ ಇತ್ತು. ಕೆಲವು ಕಡೆ ಅದರ ಮೇಲೆ ವಾಹನಗಳು ನುಗ್ಗದಂತೆ ಪೈಪಿನ ಬೇಲಿ ಇತ್ತು. ಅದೀಗ ಕಾಣುತ್ತಿಲ್ಲ! ರಸ್ತೆಯ ತೀರ ಬದಿಯಲ್ಲಿ ವಾಹನಗಳು ಒಂದೋ ಪಾರ್ಕಿಂಗ್ ಮಾಡಿವೆ ಇಲ್ಲವೇ ಆಚೆ ಈಚೆ ಓಡುತ್ತಿವೆ. ನಡೆದು ಹೋಗುವವರ ಕತೆ ಕೈಲಾಸ! ಇದ್ದದ್ದರಲ್ಲೇ ದಾರಿ ಮಾಡಿಕೊಂಡು ಹೋಗಬೇಕು!
ಬಿ.ಸಿ.ರೋಡಿಗೆ ಹಿಂದೆ ಬಂದವನೇ ಅಶೋಕವರ್ಧನರಿಗೆ ಫೋನಾಯಿಸಿದೆ: "ಹ್ವಾಯ್! ಕೆ.ಎಸ್. ರಾವ್ ರೋಡಿನಲ್ಲಿ ಮುಂಚೆ ಫುಟ್ ಪಾತ್ ಇರಲಿಲ್ಲವ?" ಅಂತ. ನನ್ನ ನೆನಪನ್ನು ನನಗೆ ಖಚಿತ ಮಾಡಿಕೊಳ್ಳಬೇಕಾಗಿತ್ತು. "ಇತ್ತಲ್ಲ. ಈಗ ಎಲ್ಲ ಹೋಗಿದೆ. ಅದರಿಂದಾಗಿ ಕೆಲವು ಆಕ್ಸಿಡೆಂಟ್ ಗಳೂ ಆಗಿಯಾಯಿತು" ಎಂದರು ಅಶೋಕರು.
ಆಗಲಿ ನೋಡೋಣ ಎಂದುಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒಂದು ಪತ್ರ ಬರೆದೆ: "ಮುಂಚೆ ಈ ರಸ್ತೆಯ ಬದಿಗೆ ಕಾಲುದಾರಿ ಇತ್ತು. ಹೊಸರಸ್ತೆ ಮಾಡುವಾಗ ಕಾಲುದಾರಿ ಇಲ್ಲವಾಗಿದೆ. ಇದು ಪಾದಚಾರಿಗಳಿಗೆ ಅನ್ಯಾಯ. ಕೂಡಲೇ ಕಾಲುದಾರಿ ಮಾಡಿಸಿಕೊಡಬೇಕಾಗಿ ಕೋರುತ್ತೇನೆ"
ನಿರೀಕ್ಷಿಸಿದಂತೆ ಉತ್ತರ ಬರಲಿಲ್ಲ. ಆದರೆ ನನಗೆ ಇದು ಹೊಸತಲ್ಲ. ಮುಂಚೆಯೂ ಪತ್ರಗಳನ್ನು ಬರೆದ ಅನುಭವ ನನಗಿತ್ತು. ಕೆಲವು ದಿನ ಕಾದೆ. ನೆನಪೋಲೆ ಬರೆದೆ. ಉತ್ತರವಿಲ್ಲ. ಮೂರನೆಯ ಪತ್ರ ಬರೆದು "ಈಗಲೂ ನೀವು ಉತ್ತರ ಬರೆಯದಿದ್ದರೆ/ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುತ್ತೇನೆ" ಎಂದೆ. ಆಗಲೂ ಉತ್ತರವಿಲ್ಲ. ಉಸ್ತುವಾರಿ ಸಚಿವರಿಗೆ (ಶ್ರೀ ಕೃಷ್ಣ ಪಾಲೆಮಾರ್) ಆಯುಕ್ತರಿಗೆ ಬರೆದ ಎಲ್ಲಾ ಪತ್ರಗಳ ಪ್ರತಿಗಳನ್ನಿಟ್ಟು ಒಂದು ದೂರು ಕೊಟ್ಟೆ. ಆಗ ನನ್ನ ಹತ್ತಿರ ಅವರ ವಿಳಾಸ ಇರಲಿಲ್ಲ. ಅದಕ್ಕೇನು? "ಶ್ರೀ ಕೃಷ್ಣ ಪಾಲೆಮಾರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು" ಎಂದು ವಿಳಾಸ ಬರೆದು ಅಂಚೆಗೆ ಹಾಕಿದೆ. ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಒಂದು ಪತ್ರ ಬಂತು. ಆಯುಕ್ತರಿಗೆ ಒಂದು ಪತ್ರ ಬರೆದು ಅದರ ಪ್ರತಿ ನನಗೆ ಕಳಿಸಿದ್ದರು.".... ಸದ್ರಿಯವರ ಮನವಿಯನ್ನು ಪರಿಶೀಲಿಸಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲು ಕೋರಲಾಗಿದೆ". ಸಚಿವರ ಪತ್ರದ ತಾರೀಕು ೧೩-೦೩-೦೯. ಅಂದಾಜು ೨೫-೦೩-೦೯ರ ಹೊತ್ತಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ಒಂದು "ಹಿಂಬರಹ"ವನ್ನು ನನಗೆ ಕಳಿಸಿಕೊಟ್ಟರು. ಈ ಹಿಂಬರಹದ ತಾರೀಕು ೧೨-೦೩-೦೯. ಎಂದರೆ ಸಚಿವರು ಸೂಚನೆ ಕೊಡುವ ಒಂದು ದಿನದ ಮೊದಲೇ ಹಿಂಬರಹ ತಯಾರಾಗಿತ್ತು! ಕೆಳಗಡೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಹಿಯ ಕೆಳಗೆ ಮಾತ್ರ ೨೩-೩-೦೯ ಎಂದಿತ್ತು! ಇರಲಿ ಬಿಡಿ. ಅಂತೂ ಉತ್ತರ ಬಂದಿತ್ತು.
ಅವರ ಹಿಂಬರಹದ ಈ ವಾಕ್ಯಗಳನ್ನು ನೋಡಿ: "......ಹಂಪನಕಟ್ಟದಿಂದ ಪ್ರಾರಂಭವಾಗಿ ನವಭಾರತ ವೃತ್ತದವರೆಗಿನ ಕೆ.ಎಸ್.ರಾವ್ ರಸ್ತೆಗಳಿಗೆ ೫೦೦ ಮೀ. ಉದ್ದಕ್ಕೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚತುಷ್ಪಥ ಕಾಂಕ್ರೀಟೀಕರಣ ರಸ್ತೆಯಾಗಿ ೧೪.೫೦ ಮೀ. ಅಗಲದಲ್ಲಿ ನಿರ್ಮಿಸಲಾಗಿದೆ.
ಆದರೆ ಈ ರಸ್ತೆಯ ಅಕ್ಕಪಕ್ಕದಲ್ಲಿ ವಾಣಿಜ್ಯಸಂಸ್ಥೆಗಳ ವ್ಯಾಪಾರೋದ್ಯಮ ಮಳಿಗೆಗಳು ರಸ್ತೆ ಉದ್ದಕ್ಕೆ ಇರುತ್ತವೆ. ಈಗ ಮಾಡಿರುವ ರಸ್ತೆಯ ಎರಡು ಬದಿಗಳಲ್ಲಿ ೧.೦೦ಮೀಟರ್ ಅಗಲದಲ್ಲಿ ಚರಂಡಿ ಸಮೇತ ಫುಟ್ ಪಾತ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಜಾಗದ ಅಡಚಣೆ ಇದ್ದು ಅದನ್ನು ಸರಿಪಡಿಸಿ ..........ಕೈಗೊಳ್ಳಲಾಗುವುದು. ಅಂದಾಜುಪಟ್ಟಿಯು ಅನುಮೋದನೆಗೊಂಡ ನಂತರ ಹಾಗೂ ಸ್ಥಳದ ಆ ಭಾಗ ಇತ್ಯರ್ಥಗೊಂಡ ನಂತರ ಎರಡು ಬದಿ ಫುಟ್ ಪಾತ್ ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಪ್ರತ್ಯೇಕ ಪಥ ನಿರ್ಮಿಸಲಾಗುವುದೆಂದು ತಿಳಿಸಿದೆ"
ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ. ಒಂದು, ರಸ್ತೆ ನಿರ್ಮಿಸುವಾಗ ಖಾಸಗಿಯವರ ಸಹಭಾಗಿತ್ವ ಇದೆ. ಎಂದರೆ ಅಷ್ಟರಮಟ್ಟಿಗೆ ಪಾಲಿಕೆಯ ಬಾಯಿ ಕಟ್ಟಿದೆ.
ಎರಡು, ರಸ್ತೆ ಸಂಪೂರ್ಣ ರಚನೆ ಆದಮೇಲೆ, ಚರಂಡಿ ಮತ್ತು ಫುಟ್ ಪಾತ್ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ! ಇದು ಎಂಜಿನಿಯರ್ ಆದವರು ಮಾಡುವ ಕೆಲಸವೆ? ಯಾವುದೇ ರಸ್ತೆ ರಚನೆಯಾಗುವುದಿದ್ದರೆ, ಬದಿಯಲ್ಲಿ ಚರಂಡಿ, ಕಾಲುದಾರಿ ಇದನ್ನೆಲ್ಲ ಸೇರಿಸದೆ ಯಾರಾದರೂ ಪ್ಲಾನ್ ತಯಾರಿಸುತ್ತಾರೆಯೆ? ಹಾಗಾದರೆ, ಫುಟ್ ಪಾತ್ ಹೋಗಲಿ ಚರಂಡಿ ಇಲ್ಲದ ರಸ್ತೆ ಇವರು ಮಾಡಿದ್ದು ಹೇಗೆ? ಇದು ಖಾಸಗಿ ಸಹಭಾಗಿತ್ವದ ಫಲ ಇರಬಹುದೆ?
ಇದೆಲ್ಲ ನಡೆದು ಸ್ವಲ್ಪ ದಿನದ ನಂತರ ನಾನು ಆ ಕಡೆ ಹೋದಾಗ ಚರಂಡಿ ಮಾಡಲು ರಸ್ತೆ ಬದಿ ಅಗೆಯುತ್ತಿದ್ದುದನ್ನು ನೋಡಿದ್ದೆ. ಈಗ ಹೋಗದೆ ಸುಮಾರು ಸಮಯ ಆಯಿತು. ಫುಟ್ ಪಾತಿನ ಕಥೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಾದರೂ ಆ ಕಡೆಯವರು ತಿಳಿಸಿದರೆ ಕೃತಜ್ಞ. ಒಂದು ವೇಳೆ ಫುಟ್ ಪಾತ್ ಆಗದಿದ್ದರೆ, ಮೇಲಿನ ಪತ್ರದ ಆಧಾರದಲ್ಲಿ ಅದಕ್ಕಾಗಿ ಪುನಃ ಪ್ರಯತ್ನಿಸುವುದು ಸಾಧ್ಯ. ಅಂಥ ಪ್ರಯತ್ನವನ್ನು ಯಾರು ಬೇಕಾದರೂ ಮಾಡಬಹುದು.
ಇಲ್ಲಿ ಒಂದು ಮಾತು ನಾನು ಸೇರಿಸಬೇಕು. ನಾನು ಯಾವ ರಾಜಕೀಯ ಪಕ್ಷದ ಕಾರ್ಯಕರ್ತನೂ ಅಲ್ಲ. ಶ್ರೀ ಕೃಷ್ಣ ಪಾಲೆಮಾರ್ ಅವರು ನನ್ನ ಪರಿಚಯದವರೂ ಅಲ್ಲ. (ಇನ್ನೂ ಒಂದು ಪ್ರಕರಣದಲ್ಲಿ ಅವರು ನನ್ನ ಪತ್ರಕ್ಕೆ ಸ್ಪಂದಿಸಿದ್ದಾರೆ). ಪ್ರಕರಣವನ್ನು ನಾನು ಯಾವ ಮಾಧ್ಯಮಕ್ಕೂ ಕೊಂಡುಹೋಗಲಿಲ್ಲ. ಜನ ಸೇರಿಸಿ ಚಳುವಳಿ ಮಾಡುವ ಮಾತಂತೂ ದೂರವೇ ಉಳಿಯಿತಷ್ಟೆ. ಅಂಚೆಗಾಗಿ ಸ್ವಲ್ಪ ಹಣ ಖರ್ಚಾಗಿದೆ ಅಷ್ಟೆ.
ನಮ್ಮ ದೇಶದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೆ ಖಂಡಿತ ಬೆಲೆ ಇದೆ. ನಾವು ಸರಿಯಾದ ರೀತಿಯಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಗತ್ಯ.

ಶುಕ್ರವಾರ, ಏಪ್ರಿಲ್ 9, 2010

ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ......

ತಾ. ೧೬-೩-೧೦ರ ನನ್ನ ಪತ್ರಕ್ಕೆ ಮಂಗಳೂರು ಉ.ಅ.ಸಂ.ಯವರು ನನಗೆ ಉತ್ತರಿಸದಿದ್ದರೂ, ತಾ. ೨೦-೩-೧೦ರಂದೇ ಅದನ್ನು ಸುಬ್ರಹ್ಮಣ್ಯ ಉಪವಿಭಾಗದ ಸ.ಅ.ಸಂ.ಯವರಿಗೆ ಕಳಿಸಿಕೊಟ್ಟಿದ್ದಾರೆ. ಎಂದರೆ ನನ್ನ ಪತ್ರ ಅವರಿಗೆ ಮುಟ್ಟಿದ ಒಂದೆರಡು ದಿನಗಳಲ್ಲಿಯೇ ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.
ನನ್ನ ನೆನಪೋಲೆ ಹೋದಮೇಲೆ ಅವರು ಸುಳ್ಯದ ಉ.ಸ.ಅ.ಸಂ.ಯವರಿಗೆ ಮತ್ತೊಂದು ಅರೆಸರಕಾರಿ ಪತ್ರ ಬರೆದು ನನಗೆ ಅದರ ಯಥಾಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ಆ ಪತ್ರ ಹೀಗಿದೆ:
........."ಮೇಲಿನ ವಿಷಯಕ್ಕೆ ಸಂಬಂಧಿಸಿ ಉಲ್ಲೇಖ(೧)ರ ಈ ಕಾರ್ಯಾಲಯದ ಪತ್ರದ ಕಡೆಗೆ ನಿಮ್ಮ ಗಮನ ಸೆಳೆಯಲಾಗಿದೆ. ಸದ್ರಿ ಪತ್ರದಲ್ಲಿ ಉಲ್ಲೇಖ(೧)ರ ಅರ್ಜಿಯ ಕುರಿತು ಕೂಡಲೇ ತನಿಖೆ ನಡೆಸಿ ತನಿಖಾವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.ಆದರೆ, ಸುಮಾರು ೧೫ ದಿನ ಕಳೆದರೂ, ನಿಮ್ಮಿಂದ ವರದಿ ಬಾರದೇ ಇರುವುದು ವಿಷಾದನೀಯ ಸಂಗತಿಯಾಗಿರುತ್ತದೆ. ಈ ಬಗ್ಗೆ ಅರ್ಜಿದಾರರು....ಉತ್ತರಕ್ಕೆ ಇನ್ನೂ ಹತ್ತು ದಿನ ಕಾಯಲು ಸಿದ್ಧನಿರುವುದಾಗಿ ತಿಳಿಸಿರುತ್ತಾರೆ.....ಪತ್ರದ ಕಡೆಗೆ ನಿಮ್ಮ ವೈಯಕ್ತಿಕ ಗಮನ ಹರಿಸಿ ತನಿಖಾವರದಿಯನ್ನು ಮರುಟಪ್ಪಾಲಿನಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ಇನ್ನು ಮುಂದೆ ಪತ್ರವ್ಯವಹಾರಕ್ಕೆ ಆಸ್ಪದ ಕೊಡಬಾರದಾಗಿ ತಿಳಿಸಲಾಗಿದೆ"
ಕ್ರಮದ ವಿಶ್ಲೇಷಣೆ:
ನನ್ನ ಪತ್ರವನ್ನು ಸುಬ್ರಹ್ಮಣ್ಯದ ಪ್ರಕರಣದ ಕುರಿತ ದೂರು ಎಂದು ಪರಿಗಣಿಸುವ ಮೂಲಕ ಮಂಗಳೂರಿನ ಉ.ಅ.ಸಂ.ಯವರು ಸಮಸ್ಯೆಯನ್ನು ತಮ್ಮ ಪಾಲಿಗೆ ಸುಲಭ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾದ ರೀತಿಯಲ್ಲಿ ಹೊಣೆಯನ್ನು ಕೆಳ ಅಧಿಕಾರಿಗೆ ವರ್ಗಾಯಿಸಿದ್ದಾರೆ. ಆ ಅಧಿಕಾರಿಗಿಂತ ಕೆಳಗೆ ವಲಯ ಅರಣ್ಯಾಧಿಕಾರಿ ಮತ್ತು ವನಪಾಲಕರು ಇರುವುದರಿಂದ ಜವಾಬ್ದಾರಿ ಅವರಿಗೆ ವರ್ಗಾವಣೆಯಾದರೆ ಆಶ್ಚರ್ಯವಿಲ್ಲ!
ಇಷ್ಟು ನೇರವಾಗಿ, ಸ್ಪಷ್ಟವಾಗಿ ಬರೆದದ್ದು ಸಹ ಉ.ಅ.ಸಂ.ಯವರಿಗೆ ಅರ್ಥವಾಗಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅನಿವಾರ್ಯವಾಗಿ ಇದನ್ನು ಪುನಃ ಸ್ಪಷ್ಟ ಪಡಿಸಿ ಅವರಿಗೆ ಹೀಗೆ ಪತ್ರ ಬರೆದಿದ್ದೇನೆ.
"..........ನಿಮ್ಮ ಪತ್ರದ ಯಥಾಪ್ರತಿಯನ್ನು ನನಗೆ ಕಳಿಸಿದ್ದೀರಿ. ಧನ್ಯವಾದಗಳು.
ನಿಮ್ಮ ಪತ್ರಕ್ಕೆ ಸಂಬಂಧಿಸಿ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ಕೋರುತ್ತೇನೆ.
೧. ದಿ. ೧೮-೩-೨೦೧೦ರ ನನ್ನ ಪತ್ರದ ವಿಷಯ - ದ. ಕ. ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ - ಎಂಬುದಾಗಿತ್ತು. ಆದರೆ ನೀವು ಕೈಗೊಂಡ ಕ್ರಮ ಅದಕ್ಕೆ ಸಂಬಂಧಪಟ್ಟಿರುವುದಿಲ್ಲ.
೨. ಮರಗಳ ರಕ್ಷಣೆಯ ಕಾನೂನು ಉಲ್ಲಂಘನೆಯಾಗುತ್ತಿರುವುದಕ್ಕೆ ನಿದರ್ಶನವಾಗಿ ಮಾತ್ರ ನಾನು ಸುಬ್ರಹ್ಮಣ್ಯದ ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಮರಗಳು ಸಂಪೂರ್ಣ ನಾಶವಾದ ಮೇಲೆ ಅದರ ಬಗ್ಗೆ ತನಿಖೆ ಮಾಡುವುದು, ಕಾನೂನು ಕ್ರಮ ತೆಗೆದುಕೊಳ್ಳುವುದು ಇತ್ಯಾದಿಗಳಲ್ಲಿ ನನಗೆ ಆಸಕ್ತಿ ಇಲ್ಲ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದೂ, ಬಿಡುವುದೂ ಇಲಾಖೆಗೆ ಬಿಟ್ಟ ವಿಷಯ. ನನ್ನ ಆಸಕ್ತಿ ಇರುವುದು ಇನ್ನು ಮುಂದಾದರೂ, ಇರುವ ಮರಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರ.
೩. ಸುಬ್ರಹ್ಮಣ್ಯದ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸುವುದು ನನ್ನ ಉದ್ದೇಶವಾಗಿದ್ದರೆ, ನಾನು ಅಲ್ಲಿನ ಸ.ಅ.ಸಂ.ಯವರಿಗೆ ಪತ್ರ ಬರೆಯುತ್ತಿದ್ದೆ. ಅವರು ಕ್ರಮ ಕೈಗೊಳ್ಳದಿದ್ದರೆ ಮಾತ್ರ ನಿಮಗೆ ದೂರು ಸಲ್ಲಿಸುತ್ತಿದ್ದೆ.
೪. ನೀವು ಜಿಲ್ಲಾಮಟ್ಟದ ಅಧಿಕಾರಿಯಾಗಿರುವುದರಿಂದ ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ನನ್ನ ಪತ್ರದಲ್ಲಿ ನಿಮ್ಮನ್ನು ಕೋರಿದ್ದೆ.
೫. ಈ ನಿಟ್ಟಿನಲ್ಲಿ, ಮರಗಳ ಸಂರಕ್ಷಣೆಯ ಕಾನೂನು ಇದೆ ಎಂಬ ಅರಿವೇ ಇಲ್ಲದ ಹಾಗೆ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಗಳ ನಾಶವನ್ನು ತಡೆಗಟ್ಟಲು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕಾಗಿಯೂ, ಹಾಗೆ ತೆಗೆದುಕೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿಯೂ ಮತ್ತೊಮ್ಮೆ ನಿಮ್ಮನ್ನು ಕೋರುತ್ತೇನೆ."

ಶುಕ್ರವಾರ, ಏಪ್ರಿಲ್ 2, 2010

ತಾ. ೨-೪-೧೦
ಇವೊತ್ತಿನ ಉದಯವಾಣಿಯ ವಾರ್ತೆ:
ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ: ಸುಬ್ರಹ್ಮಣ್ಯ ಶ್ರೀ
ಪ್ರಕೃತಿಯಲ್ಲಿ ಭಗವಂತನ ಶಕ್ತಿ ಅಡಗಿದೆ. ಆದುದರಿಂದಾಗಿ ನಮ್ಮ ಹಿರಿಯರು ಪ್ರಕೃತಿಯನ್ನು ಆರಾಧನೆ ಮಾಡುವುದರೊಂದಿಗೆ ಪ್ರಕೃತಿಯ ಸೊಬಗಿನ ನಡುವೆ ಆರಾಧನಾಲಯಗಳನ್ನು ನಿರ್ಮಿಸಿದರು. ನಮ್ಮದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. (ವಾರ್ತೆಯಲ್ಲಿ ಅವರ ಇನ್ನೂ ಕೆಲವು ಅಭಿಪ್ರಾಯಗಳಿವೆ)
ಇದೇ ವಾರ್ತೆ ಹೀಗೆ ಮುಂದುವರಿದಿದೆ:
.....ವಾಸ್ತು ತಜ್ಞ ಶ್ರೀಕೃಷ್ಣ ಮಹಾಲಿಂಗ ಪ್ರಸಾದ್ ಮುನಿಯಂಗಳ ಮಾತನಾಡಿ ನಮ್ಮ ಪ್ರದೇಶದಲ್ಲಿನ ಬಹುತೇಕ ಶ್ರದ್ಧಾಕೇಂದ್ರಗಳು ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಜೀರ್ಣೋದ್ಧಾರದಂತಹ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗುತ್ತಿರುವುದು ಎಲ್ಲ ಕಡೆ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
*********
ನಾನು ಬರೆದ ಪತ್ರಕ್ಕೆ ಉತ್ತರಿಸಲು ದ.ಕ. ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ ಎಂಬುದು ವಿಷಾದದ ಸಂಗತಿ. ಮೊನ್ನೆ ಅಂದರೆ ೩೧-೩-೧೦ಕ್ಕೆ ಒಂದು ನೆನಪೋಲೆ ಅವರಿಗೆ ಬರೆದಿದ್ದೇನೆ.
*********
ಅನೇಕ ಸ್ನೇಹಿತರು ಬ್ಲಾಗನ್ನು ಓದಿರುವುದಾಗಿ ಹೇಳಿದ್ದಾರೆ. ಆದರೆ ಪ್ರತಿಕ್ರಿಯೆಗಳು ಇಲ್ಲವಾಗಿದೆ. ಅಶೋಕರ ಹತ್ತಿರ ಇದನ್ನು ಹೇಳಿದ್ದಕ್ಕೆ, "ಜನ ಜಡ. ಚುಚ್ತಾ ಇರಬೇಕು" ಎಂದರು. ಇದೊಂದು ಸಣ್ಣ ಮಟ್ಟದ ಚಳುವಳಿ: ಪ್ರಜಾಪ್ರಭುತ್ವದ ಅನುಸಂಧಾನದ ಒಂದು ಸಣ್ಣ ಪ್ರಯತ್ನ. ನೀವೂ ಇದರಲ್ಲಿ ಸೇರಿಕೊಳ್ಳಿ ಎಂದು ನಾನು ಬಾಯಿಬಿಟ್ಟು ಹೇಳುವುದು ಸಭ್ಯತೆಯಲ್ಲ. ಇದು ನಮ್ಮೆಲ್ಲರ ದೇಶ.
ನಾನು ಬರೆಯುತ್ತಿರುವುದು ಓದುಗರಿಗೆ ಮನರಂಜನೆ ನೀಡುವ ಉದ್ದೇಶದಿಂದ ಖಂಡಿತಾ ಅಲ್ಲ.
ಅಶೋಕವರ್ಧನರ ಪ್ರತಿಕ್ರಿಯೆ:
ಇಂದು ಆರಾಧನಾ ಸ್ಥಳಗಳ ವಿಪುಲತೆಯಲ್ಲಿ ಸ್ವಾಮಿಗಳು ಚರಿತ್ರೆಯನ್ನಷ್ಟೇ ಹೇಳಬಲ್ಲರು. ವರ್ತಮಾನದಲ್ಲಿ ಅದನ್ನು ರೂಢಿಸುವ ಧೈರ್ಯವಿದ್ದಿದ್ದರೆ, ತಳ ಇಲ್ಲದ ಮಾನದಲ್ಲಿ (ಸೇರಿನಲ್ಲಿ) ಭವಿಷ್ಯವನ್ನು ಅಳೆಯುವ ಶಾಸ್ತ್ರಕ್ಕೆ ಸುಮಾರು ಆರು ಎಕ್ರೆ ವ್ಯಾಪ್ತಿಯ ಪ್ರಾಕೃತಿಕ ಹಾನಿಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ.
ನನ್ನ ತಿಳುವಳಿಕೆಯಂತೆ ಇಂದು ಆರಾಧನೀಯವಾಗಿರುವ ‘ವಾಸ್ತು’ ಸಂದ ಕಾಲದ ವಿಜ್ಞಾನ, ಸಿವಿಲ್ ಇಂಜಿನಿಯರಿಂಗ್. ಆದರೆ ನಾಗರಿಕತೆಯ ಬೆಳೆವಣಿಗೆಯಲ್ಲಿ ನಮ್ಮ ಪ್ರಾಕೃತಿಕ ತಿಳುವಳಿಕೆಗಳು ಮತ್ತದಕ್ಕೆ ಸಂವಾದಿಯಾಗಿ ಉತ್ಪನ್ನಗಳು ಸಾಕಷ್ಟು ಮುಂದುವರಿದ ಕಾಲದಲ್ಲಿ ವಾಸ್ತುತಜ್ಞರ ಅನುಸರಣೆ ಗಡಿರಕ್ಷಣೆಗೆ ಬಿಲ್ಲು ಭಾಲೆಗಳನ್ನು ಹಿಡಿದು ಹೊರಟಷ್ಟೇ ಅದ್ಭುತ!

ಶನಿವಾರ, ಮಾರ್ಚ್ 20, 2010

ಜಾಗೆದು ಗುರ್ತೇ ಸಿಕ್ತಿಲ್ಲೆ - ಭಾಗ-೨



ಹಿಂದಿನ ಲೇಖನದಲ್ಲಿ ಮಾಹಿತಿ ಬಂದ ಕೂಡಲೇ ತಿಳಿಸುವುದಾಗಿ ಬರೆದಿದ್ದೆ. ದಿನಾಂಕ ೧೭-೩-೨೦೧೦ರಂದು ಸುಬ್ರಹ್ಮಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ನನಗೆ ಮಾಹಿತಿ ನೀಡಿದ್ದಾರೆ.
ನಾನು ಕೇಳಿದ ಮಾಹಿತಿ ೧: ಗುಡ್ಡವನ್ನು ಸಮತಟ್ಟು ಮಾಡುವಾಗ ಅಲ್ಲಿದ್ದ ಹಲವಾರು ಮರಗಳು ನಾಶವಾಗಿರುವ ಸಾಧ್ಯತೆ ಇದೆ. ಹೀಗೆ ಮರಗಳನ್ನು ನಾಶ ಮಾಡಲು ನಿಮ್ಮ ಇಲಾಖೆ ಅನುಮತಿ ನೀಡಿದೆಯೆ?
ಉತ್ತರ:ಸದ್ರಿ ಸ್ಥಳದಲ್ಲಿರುವ ಮರಮಟ್ಟುಗಳನ್ನು ಕಡಿಯಲು ಇಲಾಖಾವತಿಯಿಂದ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ.
ನಾನು ಕೇಳಿದ ಮಾಹಿತಿ ೨: ನೀಡಿದ್ದರೆ ಅನುಮತಿಯ ಯಥಾಪ್ರತಿಯನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
ಉತ್ತರ: ಅನುಮತಿ ನೀಡದೇ ಇರುವುದರಿಂದ ಯಥಾಪ್ರತಿ ಇರುವುದಿಲ್ಲ.
ಈ ಮಾಹಿತಿಯಲ್ಲದೆ ಸ.ಅ.ಸಂರಕ್ಷಣಾಧಿಕಾರಿಯವರು ಪ್ರಕರಣಕ್ಕೆ ಸಂಬಂಧಿಸಿ ಉಪಯುಕ್ತವಾದ ಇತರ ಕೆಲವು ಮಾಹಿತಿಗಳನ್ನೂ ನೀಡಿದ್ದಾರೆ:
೧. ಸದ್ರಿ ಸ್ಥಳದಲ್ಲಿರುವ ಅಕೇಶಿಯಾ ಜಾತಿಯ ಗಿಡಗಳನ್ನು ಕಡಿಯುವರೇ ಅವಕಾಶ ಕೋರಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಲಿಖಿತ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯ ಯಥಾಪ್ರತಿ ಲಗತ್ತಿಸಿದೆ.
೨.ಸದ್ರಿ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳದ ಹಾಗೂ ಸ್ಥಳದಲ್ಲಿರುವ ಮರಮಟ್ಟುಗಳ ಒಡೆತನ ದೃಢಪತ್ರ ಹಾಗೂ ಸ್ಥಳದ ಮೋಜಣಿ ನಕಾಶೆಯನ್ನು ಸಲ್ಲಿಸಿದಲ್ಲಿ ಅರ್ಜಿಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅರ್ಜಿ ಬರಕೊಂಡ ಸ್ವಾಮೀಜಿಯವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರು ಪತ್ರ ಸಂ...........................ರಂತೆ ತಿಳಿಸಿರುತ್ತಾರೆ. ಹಾಗೂ ನಂತರ ಇಲಾಖಾ ಅನುಮತಿ ಪಡೆದು ಮರಗಳನ್ನು ಕಡಿಯುವರೇ ಪತ್ರದಲ್ಲಿ ತಿಳಿಸಲಾಗಿದೆ.ಪತ್ರದ ಪ್ರತಿ ಲಗತ್ತಿಸಲಾಗಿದೆ.ಆದರೆ ಸದ್ರಿಯವರು ಯಾವುದೇ ದಾಖಲಾತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರಿಗೆ ಸಲ್ಲಿಸಿರುವುದಿಲ್ಲ.
**************
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಸಲ್ಲಿಸಿರುವ ಲಿಖಿತ ಅರ್ಜಿ (ಅರ್ಜಿ ಶ್ರೀ ಮಠದ ಲೆಟರ್ ಹೆಡ್ ನಲ್ಲಿದೆ):
ನಮ್ಮ ಸಂಸ್ಥಾನದ ಮುಖ್ಯಾಭಿಮಾನಿಗಳಾದ ವಲಯ ಅರಣ್ಯಾಧಿಕಾರಿಗಳಿಗೆ ಸಪ್ರೇಮ ನಾರಾಯಣ ಸ್ಮರಣೆಗಳು.
ವಿಷಯ: ವನದುರ್ಗಾದ ಎದುರು ಗುಡ್ಡೆಯಲ್ಲಿರುವ ಅಕೇಶಿಯಾ ಗಿಡಗಳನ್ನು (ಅರ್ಜಿಯಲ್ಲಿ ಒಟ್ಟು ಮೂರು ಕಡೆ "ಮರ" ಎಂದು ಬರೆದಿರುವುದನ್ನು ಹೊಡೆದು "ಗಿಡ" ಎಂದು ತಿದ್ದಲಾಗಿದೆ - ಎಚ್. ಸುಂದರರಾವ್). ಕಡಿಯಲು ಅವಕಾಶ ನೀಡುವ ಕುರಿತು.
ಆತ್ಮೀಯರೇ, April 9-10-11 2010ರ ದಿನಗಳಲ್ಲಿ ವಿಶ್ವಜ್ಯೋತಿಷ್ಯ ಸಮ್ಮೇಳನ ವನದುರ್ಗಾದ ಎದುರಿರುವ ಗುಡ್ಡದಲ್ಲಿ ನಡೆಯಲಿದೆ. ರಾಷ್ಟ್ರದ ಗಣ್ಯಾತಿಗಣ್ಯ ವ್ಯಕ್ತಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಭದ್ರತೆಯ ದೃಷ್ಟಿಯಿಂದ ಗಿಡಗಳನ್ನು ತೆಗೆಯಬೇಕೆಂದು ಸರ್ಕಾರದ ಉನ್ನತಾಧಿಕಾರಿಗಳು ಸಲಹೆ ನೀಡಿದ್ದಾರೆ. ಅಲ್ಲದೆ ಅಕೇಶಿಯಾ ಗಿಡ ಪರಿಸರಕ್ಕೂ ಮಾರಕವಾಗಿದೆ. ಈ ಎಲ್ಲ ಕಾರಣಗಳಿಂದ ಆ ಅಕೇಶಿಯಾ ಗಿಡಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕಾಗಿ ಅಪೇಕ್ಷಿಸುತ್ತೇವೆ.
ನಿರಂತರ ಅಭಿಮಾನವಿರಲಿ
ಇತಿ ನಾರಾಯಣ ಸ್ಮರಣಪೂರ್ವಕ
(ಸಹಿ)
**************
ಇಲ್ಲಿ ಗಮನಿಸಬೇಕಾದ್ದು: ಸ್ವಾಮೀಜಿಯವರು ಅರ್ಜಿ ಸಲ್ಲಿಸಿರುವುದು ೭-೨-೨೦೧೦ರಂದು.
ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಯವರು ಉತ್ತರಿಸಿರುವುದು ತಾ. ೧೫-೨-೨೦೧೦ರಂದು
ಸುಬ್ರಮಣ್ಯದಲ್ಲಿ ಜ್ಯೋತಿಷ್ಯ ಸಮ್ಮೇಳನಕ್ಕಾಗಿ ಗುಡ್ದ ಅಗೆದು ಸಮತಟ್ಟು ಮಾಡುತ್ತಿರುವ ಫೋಟೋಸಹಿತ ವರದಿ ಉದಯವಾಣಿಯಲ್ಲಿ ಪ್ರಕಟವಾಗಿರುವುದು ೧೬-೨-೨೦೧೦ರಂದು.
**************
ಈ ದಾಖಲೆಗಳನ್ನು ನಾನು ದ,ಕ.ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಕಳಿಸಿಕೊಟ್ಟು ಹೀಗೆ ಪತ್ರ ಬರೆದಿದ್ದೇನೆ:
"..... ಈ ಪ್ರಕರಣವನ್ನು ಗಮನಿಸಿದಾಗ ಮರಗಳ ಸಂರಕ್ಷಣೆಗಾಗಿ ಇರುವ ಕಾನೂನು ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಒಂದು ಆತಂಕಕಾರಿ ಬೆಳವಣಿಗೆ.
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೀಗೆ ಮರಗಳನ್ನು ನಾಶ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಪ್ರತಿದಿನವೂ ಸಾವಿರಾರು ಮರಗಳು ಬೇರು ಸಮೇತ ನೆಲಕ್ಕುರುಳುತ್ತಿವೆ. ಇದನ್ನು ತಡೆಗಟ್ಟಲು ಸಂಬಂಧಪಟ್ಟ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡುವುದು ಅಗತ್ಯ.
ಇನ್ನು ಮುಂದೆ ಮರಗಳ ಸಂರಕ್ಷಣೆಯ ಕಾನೂನನ್ನು ಯಾರೂ ಉಲ್ಲಂಘಿಸದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ನಿಮ್ಮನ್ನು ಕೋರುತ್ತೇನೆ.
ಇನ್ನು ಹತ್ತು ದಿನಗಳ ಒಳಗೆ ನೀವು ಕೈಗೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿ ಕೋರುತ್ತೇನೆ..."
ಪತ್ರ ಅವರಿಗೆ ತಲುಪಿದೆ. ಉತ್ತರ ಬಂದನಂತರ ಮತ್ತೆ ಬರೆಯುತ್ತೇನೆ........

ಶುಕ್ರವಾರ, ಮಾರ್ಚ್ 12, 2010

ಜಾಗೆದು ಗುರ್ತೇ ಸಿಕ್ತಿಲ್ಲೆ!

ಕಳೆದ ವರ್ಷ ಪ್ರೇಮಕ್ಕ ಮಂಗಳೂರಿನಿಂದ ನಮ್ಮಲ್ಲಿಗೆ ಬಂದಾಗ ಇವಳ ಹತ್ತಿರ "ರಾತ್ರೆ ಬೆಳ್ಗಾತ ಹೊತ್ತಿಗೆ ಗುಡ್ಡೆನೇ ಇಲ್ಲ ಮಾಡಿಬಿಡ್ತ್ರ್ಯ. ಬೆಳ್ಗಾತ ಕಂಡ್ರೆ ಜಾಗೆದು ಗುರ್ತೇ ಸಿಕ್ತಿಲ್ಲೆ, ಹಂಗಾಗಿರ್ತ್" ಅಂದಿದ್ದರು. ಜೆಸಿಬಿಗೆ ಗುಡ್ಡ, ಕಣಿವೆಗಳನ್ನು ಕಂಡರಾಗುವುದಿಲ್ಲ. ಸಾವಿರಾರು ಜೆಸಿಬಿಗಳು ದಕ್ಷಿಣ ಕನ್ನಡವನ್ನು ಬಯಲು ಸೀಮೆ ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿವೆ. ಗುಡ್ಡೆ ತಟ್ಟು ಮಾಡುವುದು ಸೈಟು ಮಾಡಿ ಮಾರುವುದು, ಸೈಟು ಕೊಂಡವರು ನೀರಿಗೆಂದು ಬೋರು ಹಾಕುವುದು.
ದಕ್ಷಿಣ ಕನ್ನಡದ ಜೀವ ಇರುವುದೇ ಇಲ್ಲಿನ ಗುಡ್ಡಬೆಟ್ಟಗಳಲ್ಲಿ, ಸುಂದರವಾದ ಕಣಿವೆಗಳಲ್ಲಿ, ಇದನ್ನು ಯಾವ ವಿವೇಚನೆಯೂ ಇಲ್ಲದೆ ತಟ್ಟು ಮಾಡುತ್ತಾ ಹೋಗುತ್ತಿದ್ದೇವೆ ನಾವು.
ನಮ್ಮ ಬಿ.ಸಿ.ರೋಡಿನ ಸುತ್ತಮುತ್ತ ಗುಡ್ಡ ಬೆಟ್ಟಗಳು ಧಾರಾಳ. ನಮ್ಮ ಮನೆಯ ಹಿಂದೆಯೇ ಇರುವ ಬೆದ್ರಗುಡ್ಡೆ ನಮ್ಮಿಬ್ಬರ ಸಂಜೆ ತಿರುಗಾಟದ ಅತ್ಯಂತ ನೆಚ್ಚಿನ ಸ್ಥಳ. ಕೇಪಳ ಮಾತ್ರ ಅಲ್ಲ, ನೇರಳೆ, ಕಾಡುಮಾವು, ಅಬ್ಬಳಕ, ಜೀರ್ಕ ಹೀಗೆ ಹಲವು ಹಣ್ಣುಗಳು. ಉಪ್ಪಿನ ಕಾಯಿಗೆ ಕರಂಡೆ. ಅರಮಾರಲು. ಕೊಡಿಕಟ್ಟಕ್ಕೆ ಇಪ್ಪತ್ತೆಂಟು ಬಗೆಯ ಚಿಗುರು. ಯಾವುದೂ ಬೇಡವೆಂದರೆ ಉಸಿರಾಡಲು ವಾಸನೆ ಗೀಸನೆ ಇಲ್ಲದ ಧಾರಾಳ ಶುದ್ಧ ಗಾಳಿ. ಈಗ ನಾಲ್ಕೈದು ವರ್ಷದ ಹಿಂದಿನವರೆಗೂ ಗುಡ್ಡೆಯ ಕೆಳಭಾಗದಲ್ಲಿ ಅದರ ಪಕ್ಕದಲ್ಲೇ ಒಂದು ಕಾಲುದಾರಿ ಇತ್ತು. ಈಗೀಗ ಅದರ ಗುರುತು ಮಸಕಾಗುತ್ತಿದೆ. ಜನ ಕಾಲ್ನಡಿಗೆಯಲ್ಲಿ ಓಡಾಡುವುದು ಕಡಿಮೆಯಾಗುತ್ತಿದೆ. ನನಗೆ ಇನ್ನೂ ಆಶ್ಚರ್ಯವೆಂದರೆ ಮಳೆಗಾಲ ಕಳೆದಾಗ ಈ ಗುಡ್ಡೆಯಲ್ಲಿ ಧಾರಾಳವಾಗಿ ಬೆಳೆದು ನಿಲ್ಲುವ ಹಸಿರು ಹುಲ್ಲು. ಡಿಸೆಂಬರ್ ಜನವರಿ ಹೊತ್ತಿಗೆ ಒಣಗಿ ನಿಂತ ಈ ಹುಲ್ಲಿಗೆ ಬೆಂಕಿ ಹೊತ್ತಿ ಉರಿಯುತ್ತದೆ. ಯಾರು ಯಾಕೆ ಕೊಡುತ್ತಾರೋ?
ನನ್ನ ಮೂಲ ಊರು ಕೊಪ್ಪವೂ ಗುಡ್ಡ ಬೆಟ್ಟಗಳ ಊರೇ. ಆದರೆ ಅಲ್ಲಿನ ಗುಡ್ಡಗಳಲ್ಲಿ ಮೊಣಕಾಲೆತ್ತರಕ್ಕೆ ಹಸಿ ಹುಲ್ಲು ಬೆಳೆಯುವುದಿಲ್ಲ. ನೆಲದಿಂದ ಹುಲ್ಲು ತಲೆ ಎತ್ತಲು ಪುರುಸೊತ್ತಿಲ್ಲ, ಯಾವುದೋ ದನವೋ ಎಮ್ಮೆಯೋ ಬಂದು ಅದನ್ನು ಮೆಂದಾಯಿತು. ಈಗ ದನಗಳನ್ನು ಗುಡ್ಡೆಗೆ ಎಬ್ಬುವ ಪದ್ಧತಿಯೂ ಕಡಿಮೆಯಾಗುತ್ತಿದೆ. ಏನಿದ್ದರೂ ಮನೆಯಲ್ಲಿ ಕಟ್ಟಿ, ಹಿಂಡಿ ಗಿಂಡಿ ಹಾಕಿ ಸಾಕುವುದು. ಅವುಗಳ ಸೆಗಣಿಗೆ ಹೇಲಿನ ವಾಸನೆ.
ಬೆದ್ರಗುಡ್ಡೆಯ ನವಿಲುಗಳ ಸಂಗೀತ ದಿನನಿತ್ಯ ನಮ್ಮ ಮನೆಗೆ ಕೇಳುತ್ತದೆ. ತಿರುಗಾಡಲು ಸಂಜೆ ಹೋದರೆ ನವಿಲುಗಳು ನೋಡಲು ಸಿಗುತ್ತವೆ. ಒಂದಿಷ್ಟು ಗರಿ ಆರಿಸಿ ತಂದು ಮನೆಯಲ್ಲೂ ಇಟ್ಟುಕೊಂಡಿದ್ದೆವು. ಬೆಳಗ್ಗೆ ನಮ್ಮ ಮನೆಯ ಸ್ಲಾಬಿನ ಮೇಲೆ ಹೋಗಿ ನಿಂತು ದುರ್ಬೀನಿನಲ್ಲಿ ನೋಡಿದರೆ ಗುಡ್ಡದ ಚಿಕ್ಕ ಒಂದು ಮರದಲ್ಲಿ ಒಂದು ನವಿಲು ಊದ್ದಕ್ಕೆ ಗರಿ ಇಳಿಬಿಟ್ಟುಕೊಂಡು ಕೂತಿರುವುದು ಚಿತ್ರ ಬರೆದಂತೆ ಕಾಣುತ್ತಿತ್ತು. ಅದು ಆ ನವಿಲಿನ ಮೆಚ್ಚಿನ ಜಾಗ ಇರಬೇಕು. ನನಗೆ ನಿತ್ಯವೂ ಅದನ್ನು ನೋಡುವುದೇ ಒಂದು ಕೆಲಸವಾಗಿತ್ತು. ಮೊನ್ನೆ ಮೊನ್ನೆ ಹೋದಾಗ ಕಾಡುಕೋಳಿಯೊಂದು ತನ್ನ ಎರಡು ಮರಿಗಳೊಂದಿಗೆ ಮೇಯುತ್ತಿದ್ದುದನ್ನು ಕಂಡೆ. ಕಳೆದ ವರ್ಷ ಪೊದೆಯಿಂದ ಒಂದು ಮೊಲ ಓಡಿದ್ದನ್ನು ನೋಡಿದ ನೆನಪಿದೆ.
ಇನ್ನೂ ಒಂದು ಆಶ್ಚರ್ಯವೆಂದರೆ ಇಷ್ಟು ಚೆಂದದ ಈ ಗುಡ್ಡೆ ಊರಿಗೆ ಇಷ್ಟು ಹತ್ತಿರವೇ ಇದ್ದರೂ ಅಲ್ಲಿಗೆ ತಿರುಗಾಡಲು ಬರುವವರು ಯಾರೂ ಇಲ್ಲ. ಗುಡ್ಡದ ಬೆನ್ನು ಮಲಗಿದ ಬಸವನ ಬೆನ್ನಿನಂತಿದೆ. ಅದರ ಬಾಲದ ಬದಿಯ ತುದಿಯಲ್ಲಿ ಬಂಡೆಗಳಿವೆ. ಆ ಬಂಡೆಯ ಮೇಲೆ ಆದಿತ್ಯವಾರದಂದು ಯಾರಾದರೂ ಹುಡುಗರು ಬಂದು ಕೂರುವುದಿದೆ. ಅವರು ಬಾಟ್ಲಿ ತಂದು ಅಲ್ಲಿ ಕೂರುವುದು ಎಂದು ಇವಳಿಗೆ ಅನುಮಾನ. ಅಲ್ಲಿಂದ ಮುಂದೆ ಅಡ್ಡ ಸಿಗುವ ಒಂದು ಮಣ್ಣಿನ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದರೆ ಸಣ್ಣ ಸಣ್ಣ ಮರಗಳ ಒಂದು ಗಂಧರ್ವವನವೇ ಇದೆ. ಈ ಸ್ಥಳ ಲಕ್ಷ್ಮೀನಾರಾಯಣ ಆಳ್ವರಿಗೆ ಸೇರಿದ್ದಂತೆ. ಅದಂತೂ ನನ್ನ ಪಾಲಿಗೆ ಯಾವ ಲಾಲ್ ಬಾಗಿಗೂ ಕಡಿಮೆಯಲ್ಲ.
ಈ ಸ್ಥಳದ ಸಮೀಪ ಎರಡು ವರ್ಷದಿಂದ ಕಪ್ಪುಕಲ್ಲು ತೆಗೆಯುತ್ತಿದ್ದಾರೆ. ಯಾರೋ ಹೇಳಿದರು ಹತ್ತು ವರ್ಷಕ್ಕೆ ಗುತ್ತಿಗೆ ಆಗಿದೆ ಅಂತ......
.
ಕಳೆದ ವರ್ಷ ನಮ್ಮ ಈ ಬೆದ್ರಗುಡ್ಡೆಯಲ್ಲಿ ಎ ಎಂ ಆರ್ ಕಂಪೆನಿ ಟವರ್ ಗಳನ್ನು ನಿರ್ಮಿಸಿ ಪವರ್ ಲೈನ್ ಎಳೆದಿದೆ. ಅಡ್ಡ ಬಂದ ಮರಗಳು ನೆಲಕ್ಕುರುಳಿವೆ. ಈಗ ನಮ್ಮ ಮನೆಯ ಸ್ಲಾಬಿನ ಮೇಲೆ ನಿಂತರೆ ಗುಡ್ಡಕ್ಕಿಂತ ಪ್ರಮುಖವಾಗಿ ಎರಡು ಟವರ್ ಗಳೇ ಕಾಣುತ್ತವೆ. ಅಥವಾ ನೋಡುವ ನನ್ನ ದೃಷ್ಟಿಯಲ್ಲೇ ಏನಾದರೂ ಐಬು ಇದೆಯೋ?.
ಬೆದ್ರಗುಡ್ಡೆಯಲ್ಲೂ ಕಪ್ಪು ಕಲ್ಲು ಇದೆ. ಇಡೀ ಗುಡ್ಡ ಖಾಸಗಿ ಒಡೆತನದ್ದು. ಊರಿಗೆ ಹತ್ತಿರದಲ್ಲಿದೆ. ಜೆಸಿಬಿಗಳು ಅಲ್ಲೇ ಸುತ್ತ ಓಡಾಡುತ್ತಿವೆ..ವಾಹನಗಳು ಓಡಾಡುವ ಪೊಳಲಿ ರಸ್ತೆಯ ಬದಿಯಲ್ಲಿ ಜೆಸಿಬಿ ಬೋಣಿ ಮಾಡಿಯಾಗಿದೆ....
ಕೋಟಿ ಕೋಟಿ ವರ್ಷಗಳಿಂದ ಇಲ್ಲಿ ನಿಂತಿರಬಹುದಾದ ಈ ಗುಡ್ಡದ ಆಯಸ್ಸು ಇನ್ನೆಷ್ಟು ತಿಂಗಳು ಅಥವಾ ಇನ್ನೆಷ್ಟು ವರ್ಷ?
*******
ಅಯ್ಯೋ ದೇವರೆ, ನಾನು ಹೇಳಲು ಹೊರಟ ವಿಷಯವೇ ಒಂದು, ಹೇಳಿದ್ದೇ ಒಂದು ಆಗಿಹೋಯಿತು. ಜೆಸಿಬಿಯ ಈ ರಾಪಾಟಿಕೆಯನ್ನು ಬಹಳ ದಿನದಿಂದಲೂ ವಿಷಾದದಿಂದ ನೋಡುತ್ತಲೇ ಇದ್ದೇನೆ. ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯೇ ಇಲ್ಲವೋ ಎಂಬ ರೀತಿಯಲ್ಲಿ ಜೆಸಿಬಿಯಿಂದ ಗುದ್ದಿಸಿ ಮರಗಳನ್ನು ಉರುಳಿಸುವುದು; ಹಾಗೆ ಬಿದ್ದ ಮರಗಳನ್ನು ಎಷ್ಟು ದಿನ ಬೇಕಾದರೂ ಯಾರ ಹೆದರಿಕೆಯೂ ಇಲ್ಲದೆ ಅಲ್ಲಿಯೇ ಬಿಟ್ಟುಬಿಡುವುದು ಕಂಡು ನನಗೆ ಭಾರೀ ಆಶ್ಚರ್ಯ. ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನೊಬ್ಬರು ಆತ್ಮೀಯರನ್ನು ವಿಚಾರಿಸಿದರೆ "ಕರ್ನಾಟಕದಲ್ಲಿ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ. ಕಾನೂನು ತುಂಬಾ ಬಿಗಿಯಾಗಿದೆ" ಎನ್ನುತ್ತಾರೆ. ಇಲ್ಲಿ ನೋಡಿದರೆ ಪ್ರತಿನಿತ್ಯವೂ ಜೆಸಿಬಿ ಮರಗಳನ್ನು ಯಾವ ಎಗ್ಗೂ ಇಲ್ಲದೆ ದೂಡಿ ಬೀಳಿಸಿ ಮುಂದುವರಿಯುತ್ತಿದೆ! (ಕಳಲೆ (ಕಣಿಲೆ)ಯ ವಿಷಯವೂ ಹೀಗೆಯೇ. ನನಗೆ ತಿಳಿದ ಮಟ್ಟಿಗೆ ಕಳಲೆ/ಬಿದಿರು ಕಡಿಯುವುದು ದೊಡ್ಡ ಅಪರಾಧ. ಬಿದಿರು ಕಡಿದರೆಂಬ ಕಾರಣಕ್ಕೆ ಜೈಲಿಗೆ ಹೋದವರನ್ನೂ ನಾನು ಕಂಡಿದ್ದೇನೆ. ಆದರೆ ನಮ್ಮ ಬಿ.ಸಿ.ರೋಡಿನಲ್ಲಿ ನೋಡಿದರೆ ಜೂನ್ ಜುಲೈ ತಿಂಗಳುಗಳಲ್ಲಿ ಕಳಲೆಯನ್ನು ಹಾಡು ಹಗಲೇ ಅಂಗಡಿಗಳಲ್ಲಿ ಮಾರುತ್ತಿರುತ್ತಾರೆ!) ಬಹುಶಃ ಹೀಗಿರಬೇಕು: ಕಾನೂನು ಮರಗಳನ್ನು "ಕಡಿಯುವುದನ್ನು" ನಿಷೇಧಿಸುತ್ತದೆ ಆದರೆ ಜೆಸಿಬಿ ಮರಗಳನ್ನು ಬುಡ ಸಮೇತ ಉರುಳಿಸುವುದು ತಾನೆ, ಹಾಗಾಗಿ ಕಾನೂನು ಅದಕ್ಕೆ ಅನ್ವಯವಾಗುವುದಿಲ್ಲ.
ನನ್ನ ಮಿತಿಯಲ್ಲೇ ಆದರೂ, ಏನು ಮದ್ದು ಮಾಡುವುದು ಇದಕ್ಕೆ? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಸಾಮಾನ್ಯವಾಗಿ ಹೀಗೆ ಗುಡ್ಡ ಮಟ್ಟ ಮಾಡಿಸುವವರು ಖಾಸಗಿಯವರು. ಅಲ್ಲಿ ಮಧ್ಯೆ ಮೂಗು ತೂರಿಸುವಂತಿಲ್ಲ. ಯಾಕೆಂದರೆ ಇವರ ಪೈಕಿ ಒಬ್ಬ ನನ್ನ ಅಜ್ಜ, ಮತ್ತೊಬ್ಬ ವಿದ್ಯಾಗುರು, ಇನ್ನೊಬ್ಬ ಸೋದರಮಾವ, ಮತ್ತೊಬ್ಬ ಭಾವ. ನನ್ನ ಉದ್ದೇಶ ಎಷ್ಟೇ ಉದಾತ್ತವಾದರೂ, ಹೋರಾಟಕ್ಕಿಳಿಯುವುದು ವ್ಯಾವಹಾರಿಕ ಅಲ್ಲ.
ಓ ಮೊನ್ನೆಯೊಂದು ದಿನ ನೋಡುತ್ತೇನೆ, ಉದಯವಾಣಿಯ ಪುರವಣಿಯೊಂದರಲ್ಲಿ ಸುಬ್ರಮಣ್ಯದಲ್ಲಿ ಜ್ಯೋತಿಷ ಸಮ್ಮೇಳನ ನಡೆಯಲಿದೆಯೆಂದೂ ಅದಕ್ಕಾಗಿ ಆರು ಎಕ್ರೆ ವಿಸ್ತಾರದ ಗುಡ್ಡೆಯನ್ನು ಸಪಾಟು ಮಾಡುವ ಕೆಲಸವನ್ನು ಅದೆಷ್ಟೋ ಸಂಖ್ಯೆಯ ಜೆಸಿಬಿಗಳು ಹಗಲಿರುಳೂ ಮಾಡುತ್ತಿವೆಯೆಂದೂ ವರದಿಯಾಗಿತ್ತು. ಈ ವರದಿಯ ಜೊತೆಗೆ ಜೆಸಿಬಿಯೊಂದು ತನ್ನ ಸೊಂಡಿಲಿನಿಂದ ಮರಗಳನ್ನು ದೂಡಿ ನೆಲಕ್ಕುರುಳಿಸುತ್ತಿರುವ ಫೋಟೋ ಮತ್ತು ಇತರ ಫೋಟೋಗಳೂ ಇದ್ದವು.
ಕೂಡಲೇ ಸುಬ್ರಮಣ್ಯದ ಅರಣ್ಯ ವಲಯಾಧಿಕಾರಿಗಳಿಗೆ -ಮಾಹಿತಿ ಹಕ್ಕಿನ ಆಡಿಯಲ್ಲಿ- ಪತ್ರಿಕೆಯಲ್ಲಿ ಪ್ರಕಟವಾದ ಫೋಟೋಗಳ ಜೆರಾಕ್ಸ್ ಪ್ರತಿಗಳನ್ನೂ ಇಟ್ಟು, "ದೊಡ್ಡ ಸಂಖ್ಯೆಯಲ್ಲಿ ಮರಗಳು ನಾಶವಾದಂತೆ ಕಾಣುತ್ತಿದೆ. ಈ ಬಗ್ಗೆ ನೀವು ಅನುಮತಿ ಕೊಟ್ಟಿದ್ದೀರಾ, ಕೊಟ್ಟಿದ್ದರೆ ಅದರ ಒಂದು ಪ್ರತಿಯನ್ನು ಕಳಿಸಿಕೊಡಿ" ಎಂದು ಬರೆದೆ. ಅಧಿಕಾರಿ ಕೂಡಲೇ, ನಾನು ಕಳಿಸಿದ್ದ ಪೋಸ್ಟಲ್ ಆರ್ಡರನ್ನು ಹಿಂದೆ ಕಳಿಸಿ, ಉತ್ತರಿಸಿದರು: "ನೀವು ಈ ಮಾಹಿತಿಯನ್ನು ಸುಳ್ಯದಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು". ನಾನು ಮರು ಟಪಾಲು ಪುನಃ ನೋಂದಾಯಿತ ಅಂಚೆಯಲ್ಲಿಯೇ ಕಳಿಸಿ ಕಾನೂನು ಏನಿದೆಯೆಂದು ತಿಳಿಸಿದೆ. ಆ ಅಧಿಕಾರಿ ನೊಂದಾಯಿತ ಅಂಚೆಯಲ್ಲಿ ನಾನು ಕಳಿಸಿದ ಪತ್ರವನ್ನು ಸ್ವೀಕರಿಸಿದೆ ತಿರಸ್ಕರಿಸಿಬಿಟ್ಟರು!
ನಾನು ಕೂಡಲೇ ಎಲ್ಲಾ ದಾಖಲೆಗಳನ್ನೂ ಇಟ್ಟು, ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಈ ದೂರಿನಲ್ಲಿ, ನನಗೆ ಖರ್ಚಾಗಿರುವ ಹಣವನ್ನು ಸದ್ರಿ ಅಧಿಕಾರಿಯಿಂದ ಕೊಡಿಸಿಕೊಡಬೇಕೆಂದು ಮನವಿ ಮಾಡಿದ್ದೇನೆ. ಜೊತೆಗೆ ಕಾನೂನನ್ನು ಕಲಿಸಿಕೊಟ್ಟಿರುವುದಕ್ಕಾಗಿ ನನಗೆ ಸೂಕ್ತ ಶುಲ್ಕವನ್ನೂ ಈ ಅಧಿಕಾರಿಯಿಂದ ಕೊಡಿಸಬೇಕೆಂದು ಕೇಳಿಕೊಂಡಿದ್ದೇನೆ. ನೋಡೋಣ ಪ್ರಕರಣ ಏನಾಗುತ್ತದೆ ಎಂದು.
ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿದ ನನ್ನ ಅಹವಾಲು ಮತ್ತು ದಾಖಲೆಗಳ ಯಥಾಪ್ರತಿಗಳನ್ನು ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಗೆ ಸಾಮಾನ್ಯ ಅಂಚೆಯಲ್ಲಿ ಕಳಿಸಿಕೊಟ್ಟಿದ್ದೆ. ಕೂಡಲೇ ಪ್ರತಿಕ್ರಿಯೆ ಬಂದಿದೆ: ಮಾಹಿತಿ ಕೇಳಿ ನಾನು ಸಲ್ಲಿಸಿದ ಅರ್ಜಿಯನ್ನು ಅವರೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕಳಿಸಿಕೊಟ್ಟಿದ್ದಾರಂತೆ. ಪೋಸ್ಟಲ್ ಆರ್ಡರ್ ಗೆ ಏನು ವ್ಯವಸ್ಥೆ ಮಾಡಿದರೋ ತಿಳಿಯಲಿಲ್ಲ.
ಅರಣ್ಯ ಇಲಾಖೆ ಮರಗಳನ್ನು ಉರುಳಿಸಲು ಅನುಮತಿ ಕೊಟ್ಟಿದೆಯೆ ಎಂಬುದು ಈ ಪ್ರಕರಣದ ಜೀವಾಳವಷ್ಟೆ. ಹಾಗಾಗಿ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ಪತ್ರ ಅವರಿಗೆ ಮುಟ್ಟಿದೆ. ಉತ್ತರ ಬಂದ ಕೂಡಲೇ ತಿಳಿಸುತ್ತೇನೆ.

ಅಶೋಕವರ್ಧನರ ಪ್ರತಿಕ್ರಿಯೆ:

ನಿಮ್ಮ ಹಿತ್ತಿಲ ಮದ್ದನ್ನು ಮುದ್ದಾಗಿ ತೋರುತ್ತಾ ಸುಬ್ರಹ್ಮಣ್ಯದಲ್ಲಿ ಜೋಯಿಸರುಗಳು ಪರಿಸರ ಭವಿಷ್ಯವನ್ನು ಹಾಳುಗೆಡಹುವ ಸಮಸ್ಯೆಯ ಸುಳಿಯೊಳಗೆ ಓದುಗರನ್ನು ಅನೌಪಚಾರಿಕವಾಗಿಯೇ ಆದರೆ ಖಚಿತವಾಗಿ ಸಿಕ್ಕಿಸಿದ್ದೀರಿ. ರಾಕ್ಷಸ ಸಾಮರ್ಥ್ಯಕ್ಕೂ ರಕ್ಕಸ ಕ್ರಿಯೆಗೂ ಮಧ್ಯೆ ಕಳೆದುಹೋದ ವಿವೇಚನೆಯನ್ನು ಭೂತಗನ್ನಡಿ ಇಟ್ಟು ತೋರಿದ್ದೀರಿ. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದ ಅನಾಮಧೇಯ ದೂರವಾಣಿ ಕರೆಯೊಂದು ಇದೇ ಸಮಸ್ಯೆಯ ಕುರಿತು ನನ್ನಲ್ಲಿನ ಪರಿಸರ ಪ್ರೇಮಿಯನ್ನು ಕ್ರಿಯಾಶೀಲವಾಗಿಸಲು ಪ್ರಯತ್ನಿಸಿತ್ತು. ನನಗಾ ಸ್ಥಳೀಯ ಬೇಜವಾಬ್ದಾರೀ ಶ್ರೀಸಾಮಾನ್ಯನ ಮಟ್ಟದಲ್ಲಿ ನಿಂತದ್ದಕ್ಕೆ ಅಸಮಾಧಾನವಿತ್ತು, ಊರಿನೆಲ್ಲಾ ದುಃಖಕ್ಕೆ ಪರಿಹಾರ ಹುಡುಕುವ ತಾಕತ್ತಿನವ ನಾನಲ್ಲ ಎನ್ನುವ ಬಗ್ಗೆ ಅರಿವೂ ಬೇಸರವೂ ಇತ್ತು. ನಿಮ್ಮ ಬರಹಕ್ಕೆ ಭೇಷ್, ಭಲೇ ಎನ್ನುವುದರೊಡನೆ ನಿಮ್ಮ ಕ್ರಿಯೆಯ ಭವಿಷ್ಯವೇನು ಎಂಬ ಕುತೂಹಲದಲ್ಲಿರುತ್ತೇನೆ.ಅಶೋಕವರ್ಧನ

ಶನಿವಾರ, ಮಾರ್ಚ್ 6, 2010

ಕಸ ವಿಲೇವಾರಿಯ ಕಗ್ಗಂಟು

"ಆಧುನಿಕ"ವೆಂದು ಕರೆಸಿಕೊಳ್ಳುವ ಯಾವುದೇ ದೊಡ್ಡ ಊರಿಗೆ ನೀವು ಹೋಗಿ, ಇಡೀ ಊರಿನ ಗಾಳಿಯಲ್ಲಿ ಒಂದು ವಿಶಿಷ್ಟ ದುರ್ನಾತ ಹಾಸುಹೊಕ್ಕಾಗಿ ತುಂಬಿ ತುಳುಕುತ್ತಿರುತ್ತದೆ. ಈ ದುರ್ನಾತದ ಕಾಯಿಲೆ ಇತ್ತೀಚೆಗೆ ನಮ್ಮ ಬಿ.ಸಿ.ರೋಡಿನಂಥ ಸಣ್ಣ ಊರುಗಳಿಗೂ ಹಬ್ಬುತ್ತಿದೆ. ಮೊನ್ನೆ ಮೊನ್ನೆ ತಮಿಳುನಾಡಿನ ತಿರುಚ್ಚಿಗೆ ಹೋಗುವ ಪ್ರಸಂಗ ಬಂದಿತ್ತು. ಊರು ಶುರುವಾದಕೂಡಲೇ, ಇಡೀ ಊರಿನ ಎಲ್ಲರ ಮನೆಗಳಲ್ಲೂ ಏಕಕಾಲದಲ್ಲಿ ಮೂಲಂಗಿ ಹುಳಿ ಮಾಡುತ್ತಿದ್ದಾರೇನೋ ಎಂಬಂಥ ಉಸಿರು ಕಟ್ಟಿಸುವ ದುರ್ನಾತ. ಆದರೆ ಆ ಊರೊಳಗಿನ ಯಾರಿಗೂ ಈ ನಾತದ ಅರಿವೇ ಇದ್ದಂತೆ ಕಾಣಲಿಲ್ಲ! ಕಾಲೇಜುಗಳ ಕೆಮಿಸ್ಟ್ರಿ ಲ್ಯಾಬಿನಲ್ಲಿ ದಿನನಿತ್ಯ ಹೈಡ್ರೋಜನ್ ಸಲ್ಫೈಡಿನ ಹೊಲಸು ವಾಸನೆ ತಿಂದೂ ತಿಂದೂ, ಮೂಗು ಆ ವಾಸನೆಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿಬಿಟ್ಟಿರುತ್ತದೆ ಅದರೊಳಗೆ ಇರುವವರಿಗೆ. ಬಹುಶಃ ಇದೂ ಹಾಗೆಯೇ ಇರಬೇಕು. ಅಥವಾ ಆ ರೀತಿಯ ವಾಸನೆ ಇಲ್ಲದೆ ಹೋದರೆ ಅದು ತಮ್ಮ ಊರೇ ಅಲ್ಲ ಅನ್ನಿಸಿಬಿಡಬಹುದು ಅದು ಅಭ್ಯಾಸವಾದವರಿಗೆ.
ನಮ್ಮ ಬಿ.ಸಿ.ರೋಡಿನ ಕೈಕಂಬವು ದುರ್ನಾತದ ಕೇಂದ್ರವಾಗಿದೆ ಎಂದೂ, ಅದಕ್ಕೆ ಏನಾದರೂ ಮಾಡಬೇಕೆಂದೂ ನನ್ನ ಹೈಕಮಾಂಡ್ ರಮಾದೇವಿ. ಪುರಾತನ ಕಾಲದಿಂದಲೂ ನನಗೆ ಹೇಳುತ್ತಲೇ ಇದ್ದಳು. "ಏನಾದರೂ ಮಾಡಬೇಕು" ಎಂದರೆ ನಾನು ಮುನಿಸಿಪಾಲಿಟಿಗೆ ದೂರು ಕೊಡಬೇಕು ಎಂಬುದು ಅವಳ ಪರೋಕ್ಷ ಸೂಚನೆ. ನಾನು ಮಾತ್ರ,
"ನನಗೆ ಯಾವಾಗಲೂ ಶೀತ ಜಾಸ್ತಿ. ಹಾಗಾಗಿ ವಾಸನೆ ಬರುವುದು ಕಡಿಮೆ" ಎನ್ನುತ್ತಾ ಕಾಲಹರಣ ಮಾಡುತ್ತಲೇ ಇದ್ದೆ.
"ಮೂಗಿಗೆ ಶೀತ ಆದರೇನು? ಕೊಳಕಿನ ರಾಶಿ ಕಣ್ಣಿಗೆ ಕಾಣುವುದಿಲ್ಲವೇ?"
"ನಾನು ಸ್ಕೂಟರ್ ರೈಡ್ ಮಾಡುವಾಗ ಹಾಗೆಲ್ಲ ಆಚೆ ಈಚೆ ನೋಡುವುದಿಲ್ಲ, ರಸ್ತೆ ಮಾತ್ರ ನೋಡುವುದು!"
ಇತ್ತೀಚೆಗೆ ಒಂದು ದಿನ ಅವಳಿಗೆ, ವಾಕಿಂಗ್ ಹೋದಲ್ಲಿ, ಅದೇ ಕೈಕಂಬದಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಡಾ. ಪ್ರತಿಭಾ ರೈ ಸಿಕ್ಕಿದ್ದರಂತೆ. ಈ ದುರ್ನಾತದ ಬಗ್ಗೆ ಅವರೂ ಸಾರ್ವಜನಿಕರ ಸಹಿ ಸಂಗ್ರಹಿಸಿ ಪುರಸಭೆಗೆ ದೂರು ಕೊಟ್ಟು ಹತಾಶರಾಗಿದ್ದರು. ಅವರ ಹತ್ತಿರವೂ ಈ ಬಗ್ಗೆ ವಿಚಾರ ವಿನಿಮಯವಾಯಿತು.
ಅಂತೂ ಯಾವುದೋ ಒಂದು ಸುಮುಹೂರ್ತದಲ್ಲಿ ನನ್ನ ಹೆಂಡತಿ ಒಂದು ದೂರನ್ನು ಕಂಪ್ಯೂಟರಿನಲ್ಲಿ ಟೈಪಿಸಿಯೇ ಬಿಟ್ಟಳು. ಅದಕ್ಕೆ ವಿಳಾಸ ಬರೆದು ಪೋಸ್ಟಿಸುವ ಕೆಲಸವನ್ನು ಯಥಾಪ್ರಕಾರ ನನಗೆ ಅಂಟಿಸಿದಳು. "ಆಗಲಿ ಒಂದು ಹೆಜ್ಜೆಯಾದರೂ ಮುಂದೆ ಹೋಯಿತಲ್ಲ" ಎನ್ನುವ ಸಮಾಧಾನದಿಂದ ನಾನು ಕಾಗದವನ್ನು ಪೋಸ್ಟಿಗೆ ಹಾಕಿದೆ. ಕಾಗದ ಹೋಗಿ ಇಪ್ಪತ್ತು ದಿನವಾದರೂ ಉತ್ತರ ಬರಲಿಲ್ಲ. ವಾಸನೆಯೂ ಕಡಿಮೆಯಾಗಲಿಲ್ಲ.
"ಈಗೇನು ಮಾಡುವುದು?" ಉತ್ತರ ಗೊತ್ತಿದ್ದ ಪ್ರಶ್ನೆ ಬಂತು.
"ಇನ್ನೊಂದು ಪತ್ರ ಬರಿ". ಎರಡನೆಯ ಪತ್ರ ಹೋಯಿತು. ಆ ಪತ್ರಕ್ಕೂ ಅದೇ ಗತಿ! ಪುನಃ ಪ್ರಶ್ನೆ:
"ಈಗೇನು ಮಾಡುವುದು?"
"ಇನ್ನೂ ಒಂದು ಪತ್ರ ಬರಿ". ಮತ್ತೊಂದು ಪತ್ರ ಹೋಯಿತು. ಉತ್ತರದ ಸುದ್ದಿ ಇಲ್ಲ.
"ಈಗೇನು ಮಾಡುವುದು?"
"ಮೂರಕ್ಕೆ ಮುಕ್ತಾಯ. ಈವರೆಗೆ ಬರೆದ ಎಲ್ಲಾ ಪತ್ರಗಳ ಕಾಪಿ ಇಟ್ಟು ಡಿಸಿಗೆ ದೂರು ಕೊಡು. ಹಾಗೆ ದೂರು ಕೊಟ್ಟದ್ದನ್ನು ಪುರಸಭೆಗೆ ತಿಳಿಸು"
ಅದೂ ಆಯಿತು. ಪತ್ರ ಹೋಗಿ ಒಂದೇ ವಾರದಲ್ಲಿ ರಿಜಿಸ್ಟರ್ ಅಂಚೆಯಲ್ಲಿ ಬಂಟ್ವಾಳ ಪುರಸಭೆಯ ಉತ್ತರ ಬಂತು: ಈ ಉತ್ತರ ಆಧುನಿಕ ಭಾರತದ ಕಸವಿಲೇವಾರಿಯ ಕಗ್ಗಂಟನ್ನು ಅತ್ಯಂತ ಸೊಗಸಾಗಿ ಮುಂದಿಟ್ಟಿದೆ ಎಂದು ನನಗನಿಸುತ್ತದೆ. ನೀವೂ ಒಂದು ಸಲ ಅದನ್ನು ಓದಿ ನೋಡಿ:
"ಉಲ್ಲೇಖದಲ್ಲಿ ನಮೂದಿಸಿದ ಪತ್ರದ ಪ್ರಕಾರ ಬಿ. ಮೂಡ ಗ್ರಾಮದ ಕೈಕಂಬ ಪೊಳಲಿ ಕ್ರಾಸ್ ಬಸ್ ನಿಲ್ದಾಣದ ಬಳಿ ಕಸ ಸಂಗ್ರಹಿಸುವ ತೊಟ್ಟಿ ಇರುತ್ತದೆ. ಸದ್ರಿ ತೊಟ್ಟಿಗೆ ಸತ್ತ ಬೆಕ್ಕು ಅಪರೂಪಕ್ಕೆ ಸಾರ್ವಜನಿಕರು ಹಾಕುತ್ತಾರೆ. ಅಲ್ಲದೇ ಹಸಿ ಕೋಳಿಯ ತ್ಯಾಜ್ಯ ವಸ್ತುವನ್ನು ಸಹಾ ಹಾಕುತ್ತಿದ್ದು, ತೊಟ್ಟಿಯಿಂದ ಕಸವನ್ನು ಮತ್ತು ತ್ಯಾಜ್ಯವನ್ನು ವಿಲೇ ಮಾಡಲಾಗುತ್ತಿದೆ. ಫೆಬ್ರವರಿ ತಿಂಗಳಿಂದ ಡೋರ್ ಟು ಡೋರ್ ಕಸ ಸಂಗ್ರಹಿಸಲು ಆರಂಭಿಸಿದ್ದು, ಆರಂಭಿಕ ಹಂತದಲ್ಲಿದ್ದು ಜನರಿಗೆ ಮನವರಿಕೆ ಮಾಡಲಾಗಿದೆ. ಈ ಕಾರ್ಯ ಯಶಸ್ವಿಯಾದಲ್ಲಿ ತಕ್ಷಣ ಶೀಘ್ರದಲ್ಲಿ ಅಲ್ಲಿಯ ತೊಟ್ಟಿಯನ್ನು ತೆಗೆದು ಹಾಕಲಾಗುವುದು.
ಘನತ್ಯಾಜ್ಯ ವಸ್ತು ವಿಲೇವಾರಿಗಾಗಿ ಪುರಸಭೆಗೆ ನಿವೇಶನವನ್ನು ಸಜಿಪನಡು ಗ್ರಾಮದಲ್ಲಿ ಗುರುತಿಸಿ, ಸಂಬಂಧಪಟ್ಟ ಇಲಾಖೆಯವರಿಂದ ಎನ್.ಓ.ಸಿ. ಪಡೆದು ಸ್ವಾಧೀನಪಡಿಸಲಾಗಿದೆ. ಸದ್ರಿ ನಿವೇಶನಕ್ಕೆ ಆವರಣ ಗೋಡೆ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳ ತಕರಾರು ಇಲ್ಲದಿದ್ದಲ್ಲಿ ಆ ನಿವೇಶನದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಮಾಡಲಾಗುವುದು. ಈ ಹಿಂದೆ ಬಿ. ಮೂಡ ಗ್ರಾಮದಲ್ಲಿ ಗುರುತಿಸಿದ ಸ್ಥಳದಲ್ಲಿ ಕಸ ವಿಲೇ ಮಾಡಲು ಸಾರ್ವಜನಿಕರು ಅಡ್ಡಿಪಡಿಸಿರುತ್ತಾರೆ. ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ. ಘನತ್ಯಾಜ್ಯ ವಸ್ತುವಿಲೇವಾರಿ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗಿದೆ. ಘನತ್ಯಾಜ್ಯ ವಸ್ತು ಸುಡುವುದರಿಂದ ಬಿಸಾಡುವುದರಿಂದ ಆಗುವ ತೊಂದರೆ ಬಗ್ಗೆ ಸಹಾ ತಿಳುವಳಿಕೆ ನೀಡಲಾಗಿದೆ. ಈ ಬಗ್ಗೆ ತಮ್ಮ ವತಿಯಿಂದ ಸಹಾ ಜನರಿಗೆ ಅರಿವು ಮೂಡಿಸಿದಲ್ಲಿ ಪುರಸಭೆಗೆ ತುಂಬಾ ಸಹಾಯವಾಗುತ್ತದೆ. ಪುರಸಭೆ ನಿರ್ಮಲ ಪರಿಸರದ ಬಗ್ಗೆ ಕಾಳಜಿ ಹೊಂದಿದೆ ಎಂದು ಈ ಮೂಲಕ ತಿಳಿಸಲಾಗಿದೆ"
ಈ ಪತ್ರ ಎತ್ತಿರುವ ಬಹು ಮುಖ್ಯ ಸಮಸ್ಯೆ ತ್ಯಾಜ್ಯದ ವಿಲೇವಾರಿಗಾಗಿ ಸ್ಥಳ ಹುಡುಕಿಕೊಳ್ಳುವುದು. ನಮ್ಮ ಮನೆಯ ಎದುರಿಗೆ ಪುರಸಭೆ ಒಂದು ಕಸದ ತೊಟ್ಟಿ ತಂದಿಟ್ಟರೆ ನಾವು ತಕರಾರು ಮಾಡದೆ ಇರುತ್ತೇವೆಯೇ? ಮಾಡದೆ ಇರಲು ಸಾಧ್ಯವೆ? ನಮ್ಮ ಮನೆಗೆ ಸಮೀಪದ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಿದರೆ ನಾವು ಸುಮ್ಮನಿರುತ್ತೇವೆಯೇ? ನಾವೆಲ್ಲ ಕಸವನ್ನು ಎಷ್ಟು ಬೇಕಾದರೂ ಉತ್ಪತ್ತಿ ಮಾಡಿ ರಾಶಿ ಹಾಕುತ್ತೇವೆ. (ಅತ್ರಿ ಬುಕ್ ಸೆಂಟರ್ ಬಿಟ್ಟರೆ) ಎಲ್ಲಾ ಅಂಗಡಿಯವರೂ ಪೈಪೋಟಿಯಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸಾಮಾನು ತುಂಬಿಸಿಕೊಡುತ್ತಾರೆ. ಈ ತೊಟ್ಟೆಗಳು ತಮ್ಮ ಕೆಲಸ ಮುಗಿದ ಕೂಡಲೇ ಊರು ತುಂಬ ಹಾರಾಡತೊಡಗುತ್ತವೆ ಹೀಗೆ ಇಡೀ ನಮ್ಮ ಭಾರತ ದೇಶವನ್ನು ಒಂದು ಪ್ಲಾಸ್ಟಿಕ್ ತಿಪ್ಪೆ ಮಾಡಿಟ್ಟುಕೊಂಡಿದ್ದೇವೆ ನಾವು. ಈ ಸಮಸ್ಯೆಯನ್ನು ಪರಿಹಾರ ಮಾಡುವವರು ಯಾರು? ಹೇಗೆ?
ಬಿ.ಮೂಡ ಗ್ರಾಮದಲ್ಲಿ ಬಂಟ್ವಾಳ ಪುರಸಭೆ ತ್ಯಾಜ್ಯವಿಲೇವಾರಿ ಘಟಕಕ್ಕಾಗಿ ಸ್ಥಳದ ವ್ಯವಸ್ಥೆಗೆ ಮುಂದಾದಾಗ ಸಹಜವಾಗಿ ಸ್ಥಳೀಯ ನಾಗರಿಕರು ವಿರೋಧಿಸಿದರು. ಆಗ ಕೆಲವರು ಬಳಕೆದಾರರ ವೇದಿಕೆಯನ್ನೂ ಸಂಪರ್ಕಿಸಿದ್ದರು. ವೇದಿಕೆಯ ನಾವು ಶಾನುಭಾಗರ ಹತ್ತಿರ ಸಲಹೆ ಕೇಳಿದೆವು. ಶಾನುಭಾಗರು "ನಾವು ಯಾರನ್ನೂ ಬೆಂಬಲಿಸುವುದು ಸಾಧ್ಯವಿಲ್ಲ. ತಜ್ಞರಿಗೆ ಸಮಸ್ಯೆಯನ್ನು ಬಿಡುವುದೇ ಇದಕ್ಕೆ ಪರಿಹಾರ" ಎಂದಿದ್ದರು.
ಸಮಸ್ಯೆ ಹೀಗೆ ಬಿಡಿಸಲಾಗದ ಕಗ್ಗಂಟಾಗಿರುವುದನ್ನು ಈ ಅಧಿಕಾರಿ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಯಾವುದೇ ಮುಲಾಜಿಲ್ಲದೆ "ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ" ಎಂದಿದ್ದಾರೆ. ಈಗ ಬಂಟ್ವಾಳದ ನಾಗರಿಕರ ಮುಂದೆ ಎರಡು ದಾರಿಗಳಿವೆ: ಒಂದೋ ಅವರು ತಮಗೂ ಹಂದಿಗಳಿಗೂ ವ್ಯತ್ಯಾಸವೇ ಇಲ್ಲದಂತೆ ಕಸದ ರಾಶಿಯ ನಡುವೆ, ಸತ್ತ ಬೆಕ್ಕು, ಹಸಿ ಕೋಳಿಯ ತ್ಯಾಜ್ಯದ ವಾಸನೆ ಇವುಗಳನ್ನು ಸಹಿಸಿಕೊಳ್ಳುತ್ತಾ ಬದುಕಬೇಕು; ಅಥವಾ ಕಾನೂನುಬಾಹಿರವಾಗಿ ಕಸ ಸಾಗಿಸುವುದನ್ನು ಒಪ್ಪಿಕೊಳ್ಳಬೇಕು. ಕಸ ಸಾಗಿಸುವ ಕಾನೂನುಬಾಹಿರ ಕಾರ್ಯವನ್ನು ಒಪ್ಪಿಕೊಂಡರೆ, ನಾಳೆ ಇದೇ ಅಧಿಕಾರಿ "ಲಂಚ ಕೊಡದೆ ಪುರಸಭೆಯಲ್ಲಿ ಕೆಲಸ ಮಾಡಿಕೊಡುವುದು ಸಾಧ್ಯವೇ ಇಲ್ಲ" ಎಂಬ ವಾದವನ್ನೂ ಇಷ್ಟೇ ತರ್ಕಬದ್ಧವಾಗಿ ನಿಮ್ಮೆದುರಿಗೆ ಮಂಡಿಸಿ, ಅದಕ್ಕೆ ಕಸ ಸಾಗಿಸುವ ಕಾನೂನುಬಾಹಿರ ಕಾರ್ಯದ ಉದಾಹರಣೆಯ ಬೆಂಬಲ ಕೊಟ್ಟು, ನ್ಯಾಯದ ಮಾತಾಡುವ ನಿಮ್ಮನ್ನು ಹಾಸ್ಯಾಸ್ಪದ ಮಾಡಿಬಿಡಬಹುದು. ಯಾವುದನ್ನು ಒಪ್ಪುವುದು? ಯಾವುದನ್ನು ಬಿಡುವುದು?
ನಾವಂತೂ ಜಿಲ್ಲಾಧಿಕಾರಿಗಳಿಗೆ ಬರೆದು ಈ ಸಮಸ್ಯೆಗೆ ಕಾನೂನಿನ ಮಿತಿಯಲ್ಲೇ ಒಂದು ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಲಿದ್ದೇವೆ. ಆದರೆ ಎಲ್ಲಾ ಊರುಗಳಲ್ಲೂ "ಕಸವನ್ನು ಹಾಕಲು ಜಾಗ ಎಲ್ಲಿ?" ಎಂಬ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಾ ಹೋಗುವುದು ಖಂಡಿತ.
ಕಸದ ತೊಟ್ಟಿಗೆ ಏನು ಹಾಕಬಹುದು, ಏನು ಹಾಕಬಾರದು ಎಂಬ ವಿವೇಚನೆಯೇ ಇಲ್ಲದೆ, ತಮಗೆ ಬೇಡದ್ದನ್ನೆಲ್ಲ ತಂದು ಹಾಕುವ ನಾಗರಿಕರ ಸಮಸ್ಯೆಯನ್ನೂ ಈ ಅಧಿಕಾರಿ ಪ್ರಸ್ತಾಪಿಸಿದ್ದಾರೆ. ಶಿಕ್ಷಣ ಹೆಚ್ಚಾದಂತೆ ಈ ಸಮಸ್ಯೆ ಕಡಿಮೆ ಆದೀತೆಂದು ಆಶಿಸಬಹುದು ಅಷ್ಟೇ.