ಭಾನುವಾರ, ಮೇ 13, 2018

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧೫-೪೩





ಕಂ|| ಶ್ರೀಮಚ್ಚುಳಕ್ಯ ವಂಶ |
     ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂ ||
     ಡೀ ಮಹಿಯೊಳಾತ್ಮ ವಂಶ ಶಿ |
     ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ ||೧೫||
(ಶ್ರೀಮತ್ ಚಳುಕ್ಯ ವಂಶ ವ್ಯೋಮ ಅಮೃತ ಕಿರಣನ್ ಎನಿಪ ಕಾಂತಿಯನ್ ಒಳಕೊಂಡು, ಈ ಮಹಿಯೊಳ್ ಆತ್ಮ ಶಿಖಾಮಣಿ ಜಸಂ ಎಸೆಯೆ ಯುದ್ಧಮಲ್ಲಂ ನೆಗೞ್ದಂ.)
ಇಲ್ಲಿಂದ ಮುಂದಕ್ಕೆ ಅರಿಕೇಸರಿಯ ವಂಶವೃತ್ತಾಂತ:
ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನಂತೆ, ಆ ವಂಶದ ಶಿಖಾಮಣಿಯಂತೆ, ಈ ಭೂಮಿಯಲ್ಲಿ ಯುದ್ಧಮಲ್ಲನು ತನ್ನ ಯಶಸ್ಸಿನ ಮೂಲಕ ಪ್ರಕಾಶಿಸುತ್ತಿದ್ದನು.
ಕಂ|| ಆತಂ ನಿಜ ಭುಜವಿಜಯ |
    ಖ್ಯಾತಿಯನಾಳ್ದಾಳ್ದನಧಿಕಬಲನವನಿಪತಿ ||
    ವ್ರಾತ ಮಣಿಮಕುಟ ಕಿರಣ |
    ದ್ಯೋತಿತಪಾದಂ ಸಪಾದ ಲಕ್ಷ ಕ್ಷಿತಿಯಂ ||೧೬||
(ಆತಂ ನಿಜ ಭುಜ ವಿಜಯ ಖ್ಯಾತಿಯನ್ ಆಳ್ದು, ಆಳ್ದನ್ ಅಧಿಕಬಲನ್ ಅವನಿಪತಿ ವ್ರಾತ ಮಣಿಮಕುಟ ಕಿರಣ ದ್ಯೋತಿತ ಪಾದಂ, ಸಪಾದ ಲಕ್ಷ ಕ್ಷಿತಿಯಂ.)
ಆತನು ತನ್ನ ಬಾಹುಬಲದಿಂದ ಖ್ಯಾತಿಯನ್ನು ಗಳಿಸಿದ್ದವನು. ಶಕ್ತಿಶಾಲಿಯಾಗಿದ್ದ ಅವನ ಪಾದಗಳನ್ನು ಅನೇಕ ರಾಜರ ಕಿರೀಟಗಳಿಂದ ಹೊಮ್ಮಿದ ಕಿರಣಗಳು ಬೆಳಗುತ್ತಿದ್ದವು.
ಕಂ|| ಏನಂ ಪೇೞ್ವುದೋ ಸಿರಿಯು |
     ದ್ದಾನಿಯನೆಣ್ಣೆಯೊಳೆ ತೀವಿ ದೀರ್ಘಿಕೆಗಳನಂ ||
     ತಾ ನೃಪತಿ ನಿಚ್ಚಲಯ್ನೂ |
     ಱಾನೆಯನವಗಾಹಮಿರಿಸುವಂ ಬೋದನದೊಳ್ ||೧೭||
(ಏನಂ ಪೇೞ್ವುದೋ ಸಿರಿಯ ಉದ್ದಾನಿಯನ್? ಎಣ್ಣೆಯೊಳೆ ತೀವಿ ದೀರ್ಘಿಕೆಗಳನ್, ಅಂತು ಆ ನೃಪತಿ ನಿಚ್ಚಲ್ ಅಯ್ನೂಱು ಆನೆಯನ್ ಅವಗಾಹಂ ಇರಿಸುವಂ ಬೋದನದೊಳ್.) 
ಅವನ ಶ್ರೀಮಂತಿಕೆಯನ್ನು ಏನೆಂದು ಹೇಳುವುದು? ತನ್ನ ರಾಜಧಾನಿಯಾದ ಬೋದನದಲ್ಲಿ ಅವನು ಪ್ರತಿನಿತ್ಯವೂ ಐನೂರು ಆನೆಗಳನ್ನು ಎಣ್ಣೆ ತುಂಬಿದ ಬಾವಿಗಳಲ್ಲಿ ಮುಳುಗಿಸಿ ಮಜ್ಜನ ಮಾಡಿಸುತ್ತಾನೆ.
ಕಂ|| ಶ್ರೀಪತಿಗೆ ಯುದ್ಧಮಲ್ಲ ಮ |
     ಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದನಖಿಳ ||
     ಕ್ಷ್ಮಾಪಾಲ ಮೌಳಿ ಮಣಿ ಕಿರ |
     ಣಾಪಾಳಿತ ನಖ ಮಯೂಖ ರಂಜಿತ ಚರಣಂ ||೧೮||
ಕಂ|| ಅರಿಕೇಸರಿಯೆಂಬ ಸುಂ |
     ದರಾಂಗನತ್ಯಂತ ವಸ್ತುವಂ ಮದಕರಿಯಂ ||
     ಹರಿಯಂ ಪಡೆವಡೆಗುರ್ಚಿದ |
     ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ ||೧೯||

(ಶ್ರೀಪತಿಗೆ, ಯುದ್ಧಮಲ್ಲ ಮಹೀಪತಿಗೆ, ನೆಗೞ್ತೆ ಪುಟ್ಟೆ ಪುಟ್ಟಿದನ್, ಅಖಿಳ ಕ್ಷ್ಮಾಪಾಲ ಮೌಳಿ ಮಣಿ ಕಿರಣಾ ಪಾಳಿತ ನಖ ಮಯೂಖ ರಂಜಿತ ಚರಣಂ-)
 (ಅರಿಕೇಸರಿ ಎಂಬ ಸುಂದರಾಂಗನ್ ಅತ್ಯಂತ ವಸ್ತುವಂ, ಮದಕರಿಯಂ, ಹರಿಯಂ, ಪಡೆವಡೆಗೆ ಉರ್ಚಿದ ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ.)
ಇಲ್ಲಿ ೧೮ನೇ ಕಂದಪದ್ಯವು ೧೯ನೇ ಕಂದಪದ್ಯದಲ್ಲಿ ಮುಂದುವರಿದಿದೆ.
ಶ್ರೀಮಂತನಾದ ಆ ಯುದ್ಧಮಲ್ಲ ರಾಜನಿಗೆ ಕೀರ್ತಿಯೇ ಹುಟ್ಟಿಬಂದಂತೆ ಅರಿಕೇಸರಿ ಎಂಬ ಮಗನು ಹುಟ್ಟಿದನು. ಆ ಅರಿಕೇಸರಿಯ ಕಾಲ್ಬೆರಳಿನ ಉಗುರುಗಳು ಎಲ್ಲಾ ರಾಜರುಗಳ ಕಿರೀಟಮಣಿಗಳಿಂದ ಹೊಮ್ಮುವ ಕಾಂತಿಯಿಂದ ಬೆಳಗುತ್ತಿದ್ದವು. ಅವನು ಅತ್ಯಂತ ಸುಂದರಾಂಗನಾಗಿದ್ದನು. ತನ್ನನ್ನು ಎದುರಿಸಿದ ರಾಜರ ಸೈನ್ಯಕ್ಕೆ ಹಿರಿದ ಕತ್ತಿಯನ್ನು ತೋರಿಸಿ ಅವರಿಂದ ಅನೇಕ ಬೆಲೆಬಾಳುವ ವಸ್ತುಗಳನ್ನು, ಆನೆ, ಕುದುರೆಗಳನ್ನು ಗೆದ್ದುಕೊಂಡನು.
ಕಂ|| ನಿರುಪಮ ದೇವನ ರಾಜ್ಯದೊ |
     ಳರಿಕೇಸರಿ ವೆಂಗಿ ವಿಷಯಮಂ ತ್ರಿ[ಕಳಿಂಗಂ] ||
     ಬೆರಸೊತ್ತಿಕೊಂಡು ಗರ್ವದೆ |
     ಬರೆಯಿಸಿದಂ ಪೆಸರನಖಿಳ ದಿಗ್ಭಿತ್ತಿಗಳೊಳ್ ||೨೦||
(ನಿರುಪಮ ದೇವನ ರಾಜ್ಯದೊಳ್ ಅರಿಕೇಸರಿ ವೆಂಗಿವಿಷಯಮಂ ತ್ರಿಕಳಿಂಗಂ ಬೆರಸು ಒತ್ತಿಕೊಂಡು, ಗರ್ವದೆ ಬರೆಯಿಸಿದಂ ಪೆಸರನ್ ಅಖಿಳ ದಿಗ್ಭಿತ್ತಿಗಳೊಳ್.)
ಇಲ್ಲಿ ಒಂದು ಐತಿಹಾಸಿಕ ವಿಷಯ ಹಾಗೂ ಘಟನೆಯ ಪ್ರಸ್ತಾಪ ಇದೆ. ಡಿ ಎಲ್ ಎನ್ ಅವರ ಪ್ರಕಾರ ನಿರುಪಮ ದೇವನು ಒಬ್ಬ ರಾಷ್ಟ್ರಕೂಟ ರಾಜ. ಅರಿಕೇಸರಿಯು ಆ ರಾಜನಿಗಾಗಿ ವೆಂಗಿಮಂಡಲ ಎಂಬ ದೇಶವನ್ನೂ, ಮೂರು ಕಳಿಂಗಗಳನ್ನೂ ಗೆದ್ದು ತನ್ನ ಹೆಸರನ್ನು ಗರ್ವದಿಂದ ಎಲ್ಲಾ ದಿಕ್ಕುಗಳಲ್ಲಿಯೂ ಬರೆಸಿದನು.
ಕಂ|| ಕ್ಷತ್ರಂ ತೇಜೋಗುಣಮಾ |
     ಕ್ಷತ್ರಿಯರೊಳ್ ನೆಲಸಿ ನಿಂದುದಾ ನೆಗೞ್ದಾದಿ ||
     ಕ್ಷತ್ರಿಯರೊಳಮಿಲ್ಲೆನಿಸಿದು |
     ದೀ ತ್ರಿಜಗದೊಳೆಸಗಿದೆಸಕಮರಿಕೇಸರಿಯಾ ||೨೧||
(ಕ್ಷತ್ರಂ ತೇಜೋಗುಣಂ ಆ ಕ್ಷತ್ರಿಯರೊಳ್ ನೆಲಸಿ ನಿಂದುದು, ಆ ನೆಗೞ್ದ ಆದಿ ಕ್ಷತ್ರಿಯರೊಳಂ ಇಲ್ಲ ಎನಿಸಿದುದು ಈ ತ್ರಿಜಗದೊಳ್ ಎಸಗಿದ ಎಸಕಂ ಅರಿಕೇಸರಿಯಾ.)
ಕ್ಷತ್ರಿಯರಲ್ಲಿ ಶೌರ್ಯ, ತೇಜಸ್ಸುಗಳು ನೆಲೆಸಿರುವುದು ಸಾಮಾನ್ಯ. ಆದರೆ ಅರಿಕೇಸರಿಯು ಮಾಡಿದ ಕೆಲಸಗಳು ಮೂರು ಲೋಕಗಳಲ್ಲಿಯೂ ಹಿಂದಿನ ಪ್ರಖ್ಯಾತ ರಾಜರುಗಳು ಮಾಡಿದ ಕೆಲಸಗಳನ್ನು ಮೀರಿಸುವಂತಿದ್ದವು.
ಕಂ|| ಅರಿಕೇಸರಿಗಾತ್ಮಜರರಿ |
     ನರಪ ಶಿರೋದಳನ ಪರಿಣತೋಗ್ರಾಸಿ ಭಯಂ ||
     ಕರರಾಯಿರ್ವರೊಳಾರ್ |
     ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್ ||೨೨||
(ಅರಿಕೇಸರಿಗೆ ಆತ್ಮಜರ್ ಅರಿ ನರಪ ಶಿರೋದಳನ ಪರಿಣತ ಉಗ್ರ ಅಸಿ ಭಯಂಕರರ್, ಆ ಇರ್ವರೊಳ್ ಆರ್ ದೊರೆ ಎನೆ ನರಸಿಂಹ, ಭದ್ರದೇವರ್ ನೆಗೞ್ದರ್.)
ಅರಿಕೇಸರಿಗೆ ನರಸಿಂಹ, ಭದ್ರದೇವ ಎಂಬ ಇಬ್ಬರು ಮಕ್ಕಳು. ಆ ಇಬ್ಬರೂ ಸಹ ತಮ್ಮ ಬಲಿಷ್ಠವಾದ ಕೈಗಳಲ್ಲಿ ಹಿಡಿದ ಕತ್ತಿಗಳಿಂದ ವೈರಿರಾಜರ ತಲೆಗಳನ್ನು ಸೀಳುವುದರಲ್ಲಿ ಸಮರ್ಥರು. ಅಂಥ ಆ ಇಬ್ಬರಿಗೆ ಸಮಾನರಾದವರು ಈ ಲೋಕದಲ್ಲಿ ಯಾರಾದರೂ ಇದ್ದಾರೆಯೆ?
ಕಂ|| ಅವರೊಳ್ ನರಸಿಂಗಂಗತಿ |
     ಧವಳಯಶಂ [ಯುದ್ಧ]ಮಲ್ಲನಗ್ರಸುತಂ ತ ||
     ದ್ಭುವನ ಪ್ರದೀಪನಾಗಿ |
     ರ್ದವಾರ್ಯ ವೀರ್ಯಂಗೆ ಬದ್ದೆಗಂ ಪಿರಿಯ ಮಗಂ ||೨೩||
(ಅವರೊಳ್ ನರಸಿಂಗಂಗೆ ಅತಿ ಧವಳ ಯಶಂ ಯುದ್ಧಮಲ್ಲನ್ ಅಗ್ರಸುತಂ ತತ್ ಭುವನ ಪ್ರದೀಪನ್ ಆಗಿರ್ದ ಅವಾರ್ಯವೀರ್ಯಂಗೆ ಬದ್ದೆಗಂ ಪಿರಿಯ ಮಗಂ-)
ಅವರಲ್ಲಿ ನರಸಿಂಹನಿಗೆ ನಿರ್ಮಲ ಯಶಸ್ಸಿನಿಂದ ಕೂಡಿದ ಇಮ್ಮಡಿ ಯುದ್ಧಮಲ್ಲನು ಹಿರಿಯ ಮಗ. ಲೋಕಕ್ಕೆಲ್ಲ ಜ್ಯೋತಿಯಾಗಿದ್ದ ಅಪ್ರತಿಮ ಪ್ರತಾಪಿ ಯುದ್ಧಮಲ್ಲನಿಗೆ ಬದ್ದೆಗ ಅಂದರೆ ಭದ್ರದೇವನು ಹಿರಿಯ ಮಗನು.
ಕಂ|| ಪುಟ್ಟಿದೊಡಾತನೊಳಱಿವೊಡ |
     ವುಟ್ಟಿದುದಱಿವಿಂಗೆ ಪೆಂಪು ಪೆಂಪಿನೊಳಾಯಂ ||
     ಕಟ್ಟಾಯದೊಳಳವಳವಿನೊ |
     ಳೊಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ ||೨೪||
(ಪುಟ್ಟಿದೊಡೆ ಆತನೊಳ್ ಅಱಿವು ಒಡವುಟ್ಟಿದುದು, ಅಱಿವಿಂಗೆ ಪೆಂಪು, ಪೆಂಪಿನೊಳ್ ಆಯಂ, ಕಟ್ಟಾಯದೊಳ್ ಅಳವು, ಅಳವಿನೊಳ್ ಒಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ)
ಹೀಗೆ ಹುಟ್ಟಿದ ಭದ್ರದೇವನಿಗೆ ಜೊತೆಯಲ್ಲಿಯೇ ಜ್ಞಾನವೂ, ಜ್ಞಾನದೊಂದಿಗೆ ಹಿರಿಮೆ, ಹಿರಿಮೆಯೊಂದಿಗೆ ದ್ರವ್ಯಾದಿ ಲಾಭಗಳು, ಅವುಗಳೊಂದಿಗೆ ಪರಾಕ್ರಮಾತಿಶಯಗಳೂ ಹುಟ್ಟಿದವು. ಹೀಗಿರುವ ಭದ್ರದೇವನನ್ನು ಹೋಲುವವರು ಯಾರಿದ್ದಾರೆ?
ಕಂ|| ಬಲ್ವರಿಕೆಯೊಳರಿ ನೃಪರ ಪ |
     ಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂ ||
     ಸೊಲ್ವಿನಮಾವರ್ಜಿಸಿದಂ |
     ನಾಲ್ವತ್ತೆರಡಱಿಕೆಗಾಳೆಗಂಗಳೊಳೀತಂ ||೨೫||
(ಬಲ್ವರಿಕೆಯೊಳ್ ಅರಿ ನೃಪರ ಪಡಲ್ವಡೆ ತಳ್ತಿಱಿದು, ರಣದೊಳ್ ಆ ವಿಕ್ರಮಮಂ ಸೊಲ್ವಿನಮ್ ಆವರ್ಜಿಸಿದಂ ನಾಲ್ವತ್ತೆರಡು ಅಱಿಕೆಗಾಳೆಗಂಗಳೊಳ್ ಈತಂ.)
ಈ ಭದ್ರದೇವನು ಬಲವಾದ ದಾಳಿಯನ್ನು ಸಂಘಟಿಸಿ ಶತ್ರುರಾಜರು ಚದುರಿ ಓಡುವಂತೆ ಹೋರಾಡಿ ನಲ್ವತ್ತೆರಡು ಸುಪ್ರಸಿದ್ಧವಾದ ಕಾಳಗಗಳಲ್ಲಿ ಯುದ್ಧ ಮಾಡಿ ಜಯ ಗಳಿಸಿ ತನ್ನ ಪ್ರತಾಪವನ್ನು ಮೆರೆದನು. ಎಲ್ಲೆಲ್ಲಿಯೂ ಅವನ ಯುದ್ಧದ ಮಾತೇ ಮಾತು.
ಚಂ|| ವನಧಿ ಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪೆಂ |
     ಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದಗು ||
     ರ್ವೆನಲಿಱಿದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀ |
     ಮನನತಿ ಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ ||೨೬||
(‘ವನಧಿ ಪರೀತ ಭೂತಳದೊಳ್ ಈತನೆ ಸೋಲದ ಗಂಡನ್’ ಎಂಬ ಪೆಂಪಿನ ಪೆಸರಂ ನಿಮಿರ್ಚಿದುದುಂ ಅಲ್ಲದೆ, ವಿಕ್ರಮದಿಂದೆ ನಿಂದು ಅಗುರ್ವೆನಲ್ ಇಱಿದು ಆಂತರಂ, ಮೊಸಳೆಯಂ ಪಿಡಿವಂತಿರೆ ನೀರೊಳ್ ಒತ್ತಿ, ಭೀಮನನತಿ ಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನ್ ಆವನೋ?)
ತನ್ನೊಂದಿಗೆ ಯುದ್ಧಕ್ಕೆ ನಿಂತವರನ್ನು ಭಯಂಕರವೆನಿಸುವಂತೆ ಇರಿದವನು ಈತ. ಹಾಗಾಗಿ ‘ಕಡಲಿನವರೆಗೆ ಇರುವ ಭೂಪ್ರದೇಶದಲ್ಲಿ ತನಗೆ ಸಮಾನರಾದ ವೀರರು ಯಾರೂ ಇಲ್ಲ’ ಎಂಬ ಕೀರ್ತಿಯನ್ನು ಹಬ್ಬಿಸಿಕೊಂಡಿದ್ದಾನೆ.   ಭೀಮನನ್ನು ‘ನೀರೊಳಗೆ ಮೊಸಳೆಯನ್ನು ಹಿಡಿಯುವಂತೆ’ ಗರ್ವದಿಂದ ಹಿಡಿದ ಈ ಬದ್ದೆಗನಂಥ ವೀರರು ಬೇರೆ ಯಾರಾದರೂ ಇದ್ದಾರೆಯೆ?
ಮ || ಮುಗಿಲಂ ಮುಟ್ಟಿದ ಪೆಂಪು ಪೆಂಪನೊಳಕೊಂಡುದ್ಯೋಗಮುದ್ಯೋಗದೊಳ್ |
     ನೆಗೞ್ದಾಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗು ||
     ರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪ್ಪನ್ನೆಗಂ ಸಂದನೀ |
     ಜಗದೊಳ್ ಬದ್ದೆಗನನ್ನನಾವನಿೞಿಕುಂ ಭ್ರೂಕೋಟಿಯಿಂ ಕೋಟಿಯಂ ||೨೭||
(ಮುಗಿಲಂ ಮುಟ್ಟಿದ ಪೆಂಪು, ಪೆಂಪನ್ ಒಳಕೊಂಡ ಉದ್ಯೋಗಂ, ಉದ್ಯೋಗದೊಳ್ ನೆಗೞ್ದ ಆಜ್ಞಾಫಲಂ, ಆಜ್ಞೆಯೊಳ್ ತೊಡರ್ದ ಅಗುರ್ವು, ಒಂದೊಂದು ಅಗುರ್ವಿಂದ ಅಗುರ್ವುಗೊಳುತ್ತ ಇರ್ಪ ಅರಿಮಂಡಳಂ,
ಜಸಕೆ ಅಡರ್ಪಪ್ಪನ್ನೆಗಂ ಸಂದನೀ ಜಗದೊಳ್, ಬದ್ದೆಗನನ್ನನ್ ಆವನ್? ಇೞಿಕುಂ ಭ್ರೂಕೋಟಿಯಿಂ ಕೋಟಿಯಂ.)
ಬದ್ದೆಗನ ದೊಡ್ಡಸ್ತಿಕೆ ಆಕಾಶದೆತ್ತರದ್ದು. ಆ ದೊಡ್ಡಸ್ತಿಕೆಗೆ ತಕ್ಕನಾದ ಕಾರ್ಯಗಳನ್ನೇ ಅವನು ಕೈಗೆತ್ತಿಕೊಳ್ಳುತ್ತಿದ್ದನು. ಆ ಕಾರ್ಯಗಳನ್ನು ಪೂರೈಸಲು ಬೇಕಾದ ಕಟ್ಟುನಿಟ್ಟಿನ ಆಜ್ಞೆಗಳನ್ನು ಹೊರಡಿಸುತ್ತಿದ್ದನು. ಅಂಥ ಅವನ ಆಜ್ಞೆಗಳು ಕಾರ್ಯಗತಗೊಳ್ಳುವುದು ನಿಶ್ಚಿತ ಎಂದು ಶತ್ರುಗಳಿಗೆ ಗೊತ್ತಿರುತ್ತಿತ್ತು. ಹಾಗಾಗಿ ಶತ್ರುಗಳ ಗುಂಪಿನಲ್ಲಿ ಹೆದರಿಕೆ ಹುಟ್ಟುತ್ತಿತ್ತು. ಹೀಗೆ ಕೀರ್ತಿಗೆ ಪಾತ್ರನಾದ ಬದ್ದೆಗನಂಥವರು ಬೇರೆ ಯಾರು ತಾನೇ ಇದ್ದಾರೆ? ಅವನ ಹುಬ್ಬಿನ ಸನ್ನೆಗೆ ಕೋಟಿ ಸಂಖ್ಯೆಯ ಸೈನ್ಯದಲ್ಲಿ ನಡುಕ ಹುಟ್ಟಿಸುವ ಶಕ್ತಿ ಇದೆ.
ಕಂ|| ಮೇರು[ವ] ಪೊನ್ ಕಲ್ಪಾಂಘ್ರಿ ಪ |
     ದಾರವೆ ರಸದೊಱವು ಪರುಸವೇದಿಯ ಕಣಿ ಭಂ ||
     ಡಾರದೊಳುಂಟೆನೆ ಕುಡುವನಿ |
     ವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ ||೨೮||
(ಮೇರು[ವ] ಪೊನ್, ಕಲ್ಪಾಂಘ್ರಿ ಪದಾರವೆ, ರಸದೊಱವು, ಪರುಸವೇದಿಯ ಕಣಿ, ಭಂಡಾರದೊಳ್ ಉಂಟೆನೆ ಕುಡುವನಿವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ?)

(೨೯ನೇ ಪದ್ಯವನ್ನು ಬಿಟ್ಟಿದೆ).

ಕಂ|| ಆ ಬದ್ದೆಗಂಗೆ ವೈರಿ ತ |
     ಮೋಬಳ ದಶಶತಕರಂ ವಿರಾಜಿತ ವಿಜಯ ||
     ಶ್ರೀಬಾಹು [ಯುದ್ಧ]ಮಲ್ಲನಿ |
     ಳಾ ಬಹು ವಿಧ [ರ]ಕ್ಷಣ ಪ್ರವೀಣ ಕೃಪಾಣಂ ||೩೦||
ಕಂ|| ಆತ್ಮಭವನಾ ನರಾಧಿಪ |
     ನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾ ||
     ಹಾತ್ಮರನಿೞಿಸಿ ನೆಗೞ್ದ ಮ |
     ಹಾತ್ಮಂ ನರಸಿಂಹನಱಿವಿನೊಳ್ ಪರಮಾತ್ಮಂ ||೩೧||
(ಆ ಬದ್ದೆಗಂಗೆ, ವೈರಿ ತಮೋಬಳ ದಶಶತಕರಂ, ವಿರಾಜಿತ ವಿಜಯಶ್ರೀಬಾಹು, ಯುದ್ಧಮಲ್ಲನ್, ಇಳಾ ಬಹುವಿಧ ರಕ್ಷಣ ಪ್ರವೀಣ ಕೃಪಾಣಂ
ಆತ್ಮಭವನ್; ಆ ನರಾಧಿಪನ ಆತ್ಮಜನ್ ಆ ನಹುಷ, ಪೃಥು, ಭಗೀರಥ, ನಳ ಮಾಹಾತ್ಮರನ್ ಇೞಿಸಿ ನೆಗೞ್ದ ಮಹಾತ್ಮಂ ನರಸಿಂಹನ್, ಅಱಿವಿನೊಳ್ ಪರಮಾತ್ಮಂ.)
ಆ ಬದ್ದೆಗನ ಮಗ ಯುದ್ಧಮಲ್ಲ. ವೈರಿಗಳೆಂಬ ಕತ್ತಲೆಯ ಪಾಲಿನ ಸೂರ್ಯ; ಅವನ ತೋಳುಗಳನ್ನು ಜಯಲಕ್ಷ್ಮಿ ಅಲಂಕರಿಸಿದ್ದಾಳೆ; ಅವನು ತನ್ನ ರಾಜ್ಯವನ್ನು ಬಹುವಿಧವಾಗಿ ರಕ್ಷಿಸಿಕೊಳ್ಳುವುದರಲ್ಲಿ ನಿಪುಣ.
ಯುದ್ಧಮಲ್ಲನ ಮಗ ನರಸಿಂಹ. ಅವನು ಹಿಂದಿನ ಪ್ರಖ್ಯಾತ ರಾಜರುಗಳಾದ ನಹುಷ, ಪೃಥು, ಭಗೀರಥ, ನಳ ಮುಂತಾದವರನ್ನೂ ಮೀರಿಸಿದವನು. ಅರಿವಿನಲ್ಲಿ ಅವನು ಪರಮಾತ್ಮ.
ಕಂ|| ಮಾಂಕರಿಸದಱಿವು ಗುರು ವಚ |
     ನಾಂಕುಶಮಂ ಪಾೞಿಯೆಡೆಗೆ ಪೊಣರ್ದರಿಬಲಮಂ ||
     ಕಿಂಕೊಳೆ ಮಾೞ್ಪೆಡೆಗಣಮೆ ನಿ |
     ರಂಕುಶಮೆನಿಸಿದುದು ಮುನಿಸು ಭದ್ರಾಂಕುಶ[ನಾ] ||೩೨||
(ಮಾಂಕರಿಸದು ಅಱಿವು ಗುರು ವಚನ ಅಂಕುಶಮಂ ಪಾೞಿಯೆಡೆಗೆ, ಪೊಣರ್ದು ಅರಿಬಲಮಂ ಕಿಂಕೊಳೆ ಮಾೞ್ಪೆಡೆಗೆ ಅಣಮೆ ನಿರಂಕುಶಂ  ಎನಿಸಿದುದು ಮುನಿಸು ಭದ್ರಾಂಕುಶನಾ.)
ಧರ್ಮ, ಪರಂಪರೆಗಳಿಗೆ ಸಂಬಂಧಿಸಿದಂತೆ ಹಿರಿಯರ ಮಾತನ್ನು ಅವನು ಎಂದೂ ಉಪೇಕ್ಷೆ ಮಾಡುತ್ತಿರಲಿಲ್ಲ. ಆದರೆ ಶತ್ರುಗಳೊಂದಿಗೆ ಕಾದಾಡಿ ಅವರನ್ನು ಸಂಹರಿಸುವ ವಿಷಯದಲ್ಲಿ ಅವನ ಕೋಪವು ಯಾರ ಅಂಕೆಗೂ ಸಿಕ್ಕುತ್ತಿರಲಿಲ್ಲ.
ಕಂ|| ತಱಿಸಂದು ಲಾೞರೊಳ್ ತ |
     ಳ್ತಿಱಿದೇಱಂ ಪೇೞೆ ಕೇಳ್ದು ಮಂಡಲಮಿನ್ನುಂ ||
     ತಿಱುನೀರಿಕ್ಕುವುದೆನಿಸಿದ |
     ತಱಿಸಲವಿನ ಚಲದ ಬಲದ ಕಲಿ ನರಸಿಂಹಂ ||೩೩||
(ತಱಿಸಂದು ಲಾೞರೊಳ್ ತಳ್ತು ಇಱಿದ ಏಱಂ ಪೇೞೆ ಕೇಳ್ದು ಮಂಡಲಂ ಇನ್ನುಂ ತಿಱು ನೀರಿಕ್ಕುವುದು ಎನಿಸಿದ ತಱಿಸಲವಿನ ಚಲದ ಬಲದ ಕಲಿ ನರಸಿಂಹಂ.)
ನರಸಿಂಹನು ಛಲದಿಂದ ಲಾಟ ದೇಶದವರೊಂದಿಗೆ ಯುದ್ಧ ಮಾಡಿದವನು. ಆ ಯುದ್ಧವನ್ನು ನೆನಪಿಸಿದರೆ ಇಂದಿಗೂ ಸಹ ಅಲ್ಲಿನ ಜನ ತರ್ಪಣವನ್ನು ಕೊಡುತ್ತಾರೆ! ನರಸಿಂಹನು ಅಂತಹ ಚಲ, ಬಲಗಳ ವೀರ.
ಕಂ|| ಸಿಂಗಂ ಮಸಗಿದವೋಲ್ ನರ |
     ಸಿಂಗಂ ತಳ್ತಿಱಿಯೆ ನೆಗೆದ ನೆತ್ತರ್ ನಭದೊಳ್ ||
     ಕೆಂಗುಡಿ ಕವಿದಂತಾದುದಿ |
     ದೇಂ ಗರ್ವದ ಪೆಂಪೊ ಸಕಲ ಲೋಕಾಶ್ರಯನಾ ||೩೪||
(ಸಿಂಗಂ ಮಸಗಿದವೋಲ್ ನರಸಿಂಗಂ ತಳ್ತು ಇಱಿಯೆ, ನೆಗೆದ ನೆತ್ತರ್ ನಭದೊಳ್ ಕೆಂಗುಡಿ ಕವಿದಂತೆ ಆದುದು, ಇದೇಂ ಗರ್ವದ ಪೆಂಪೊ ಸಕಲ ಲೋಕಾಶ್ರಯನಾ.)
ಸಿಂಹದಂತೆ ಕೆರಳಿ ನರಸಿಂಹನು ವೈರಿಯನ್ನು ಇರಿದನೆಂದರೆ ಚಿಮ್ಮುವ ರಕ್ತವು ಆಕಾಶದಲ್ಲಿ ಹಾರುವ ಕೆಂಬಣ್ಣದ ಬಾವುಟದಂತೆ ಕಾಣಿಸುತ್ತಿತ್ತು. ಲೋಕಕ್ಕೇ ಆಶ್ರಯನಾದ ಅವನ ಹಿರಿಮೆಯನ್ನು ಏನೆಂದು ಹೇಳುವುದು?
ಕಂ|| ಏೞುಂ ಮಾಳಮುಮಂ ಪಾ |
     ಱೇಳೆ ತಗುಳ್ದಿಱಿದು ನರಗನುರಿಪಿದೊಡೆ ಕರಿಂ ||
     ಕೇೞಿಸಿದಾತನ ತೇಜದ |
     ಬೀೞಲನನುಕರಿಪುವಾದುವೊಗೆದುರಿವುರಿಗಳ್ ||೩೫||
(ಏೞುಂ ಮಾಳಮುಮಂ ಪಾಱೇಳೆ ತಗುಳ್ದು ಇಱಿದು ನರಗನ್ ಉರಿಪಿದೊಡೆ ಕರಿಂಕೇೞಿಸಿದ ಆತನ ತೇಜದ ಬೀೞಲನ್ ಅನುಕರಿಪುವು ಆದುವು ಒಗೆದ ಉರಿ ಉರಿಗಳ್.)
ನರಸಿಂಹನು ಏಳು ಮಾಳವಗಳನ್ನು ಬೆನ್ನಟ್ಟಿ ಆ ದೇಶಗಳಿಗೆ ಬೆಂಕಿ ಕೊಟ್ಟು ಸುಟ್ಟು ಹಾಕಿದನು. ಸುಟ್ಟು ಕರಕಲಾದ ಮಾಳವ ದೇಶಗಳಿಂದ ಎದ್ದ ಜ್ವಾಲೆಗಳು ಅವನ ಯಶಸ್ಸಿನ ಬೀಳಲುಗಳಂತೆ ಕಾಣುತ್ತಿದ್ದವು.
ಕಂ|| ವಿಜಯಾರಂಭ ಪುರಸ್ಸರ |
     ವಿಜಯ ಗಜಂಗಳನೆ ಪಿಡಿದು ಘೂರ್ಜರ ರಾಜ ||
     ಧ್ವಜಿನಿಯನಿಱಿದೋಡಿಸಿ ಭುಜ |
     ವಿಜಯದೆ ವಿಜಯನುಮನಿೞಿಸಿದಂ ನರಸಿಂಹಂ ||೩೬||
(ವಿಜಯಾರಂಭ ಪುರಸ್ಸರ ವಿಜಯ ಗಜಂಗಳನೆ ಪಿಡಿದು ಘೂರ್ಜರ ರಾಜಧ್ವಜಿನಿಯನ್ ಇಱಿದು ಓಡಿಸಿ ಭುಜ ವಿಜಯದೆ ವಿಜಯನುಮನ್ ಇೞಿಸಿದಂ ನರಸಿಂಹಂ.)
ಗೆಲ್ಲುವ ಉದ್ದೇಶದಿಂದ ಸೈನ್ಯದ ಎದುರುಭಾಗದಲ್ಲಿಯೇ ನಿಲ್ಲಿಸಿದ ಆನೆಗಳನ್ನು ಹಿಂಬಾಲಿಸಿಕೊಂಡು ಹೋಗಿ, ಘೂರ್ಜರ ರಾಜನ ಸೈನ್ಯವನ್ನು ಇರಿದು ಓಡಿಸಿ, ನರಸಿಂಹನು ತೋಳಬಲದಲ್ಲಿ ಅರ್ಜುನನನ್ನೂ ಮೀರಿಸಿದನು.
ಕಂ|| ಸಿಡಿಲವೊಲೆಱಗುವ ನರಗನ |
     ಪಡೆಗಗಿದುಮ್ಮಳದಿನುಂಡೆಡೆಯೊಳುಣ್ಣದೆಯುಂ ||
     ಕೆಡೆದೆಡೆಯೊಳ್ [ಕೆ]ಡೆಯದೆ ನಿಂ |
     ದೆಡೆಯೊಳ್ ನಿಲ್ಲದೆಯುಮೋಡಿದಂ ಮಹಿಪಾಲಂ ||೩೭||
(ಸಿಡಿಲವೋಲ್ ಎಱಗುವ ನರಗನ ಪಡೆಗೆ ಅಗಿದು ಉಮ್ಮಳದಿನ್ ಉಂಡ ಎಡೆಯೊಳ್ ಉಣ್ಣದೆಯುಂ, ಕೆಡೆದ ಎಡೆಯೊಳ್ ಕೆಡೆಯದೆಯುಂ, ನಿಂದ ಎಡೆಯೊಳ್ ನಿಲ್ಲದೆಯುಂ ಓಡಿದಂ ಮಹಿಪಾಲಂ.)
ಮಹಿಪಾಲನೆಂಬ ರಾಜನು ನರಸಿಂಹನಿಗೆ ಹೆದರಿ ಓಡಿಹೋದದ್ದರ ವರ್ಣನೆ ಈ ಪದ್ಯ. ನರಸಿಂಹನ ಸೈನ್ಯವು ಅವನ ಮೇಲೆ ಎರಗಿದಾಗ ಆತನು ಉಂಡ ಜಾಗದಲ್ಲಿ ಮತ್ತೆ ಉಣದೆ, ಮಲಗಿದಲ್ಲಿ ಮತ್ತೆ ಮಲಗದೆ ನಿಂತಲ್ಲಿ ಮತ್ತೆ ನಿಲ್ಲದೆ ಓಡಿದನಂತೆ!
ಕಂ|| ಗಂಗಾವಾರ್ಧಿಯೊಳಾತ್ಮ ತು |
     ರಂಗಮುಮಂ ಮಿಸಿಸಿ ನೆಗಳ್ದ ಕಾಳಪ್ರಿಯನೊಳ್ ||
     ಸಂಗತಗುಣನಸಿ ಲತೆಯನ |
     ಸುಂಗೊಳೆ ಭುಜ ವಿಜಯ ಗರ್ವದಿಂ ಸ್ಥಾಪಿಸಿದಂ ||೩೮||
(ಗಂಗಾವಾರ್ಧಿಯೊಳ್ ಆತ್ಮ ತುರಂಗಮುಮಂ ಮಿಸಿಸಿ ನೆಗಳ್ದ ಕಾಳಪ್ರಿಯನೊಳ್ ಸಂಗತ ಗುಣನ್ ಅಸಿ ಲತೆಯನ್ ಅಸುಂಗೊಳೆ ಭುಜ ವಿಜಯ ಗರ್ವದಿಂ ಸ್ಥಾಪಿಸಿದಂ.)
ನರಸಿಂಹನು ಗಂಗೆಯ ನೀರಿನಲ್ಲಿ ತನ್ನ ಕುದುರೆಯನ್ನು ಮೀಯಿಸಿದನು. ಪ್ರಖ್ಯಾತವಾದ ಮಹಾಕಾಲೇಶ್ವರನ ದೇವಸ್ಥಾನದಲ್ಲಿ, ವೈರಿಗಳ ಪ್ರಾಣಹರಣ ಮಾಡಲೆಂದು ತನ್ನ ಹರಿತವಾದ ಖಡ್ಗವನ್ನು ಸ್ಥಾಪಿಸಿದನು.
ಕಂ|| ಆ ನರಸಿಂಹ ಮಹೀಶ ಮ |
     ನೋನಯನ ಪ್ರಿಯೆ ವಿಳೋಳ ನೀಳಾಳಕೆ ಚಂ ||
     ದ್ರಾನನೆ ಜಾಕವ್ವೆ ದಲಾ |
     ಜಾನಕಿಗಗ್ಗಳಮೆ ಕುಲದೊಳಂ ಶೀಲದೊಳಂ ||೩೯||
(ಆ ನರಸಿಂಹ ಮಹೀಶ ಮನೋನಯನ ಪ್ರಿಯೆ, ವಿಳೋಳ ನೀಳಾಳಕೆ, ಚಂದ್ರಾನನೆ ಜಾಕವ್ವೆ ದಲ್, ಆ  ಜಾನಕಿಗೆ ಅಗ್ಗಳಮೆ ಕುಲದೊಳಂ ಶೀಲದೊಳಂ.)
ಆ ನರಸಿಂಹನ ಮನಸ್ಸಿಗೂ, ಕಣ್ಣಿಗೂ ಪ್ರಿಯಳಾದವಳು ಆತನ ಮಡದಿ ಜಾಕವ್ವೆ. ಅತ್ತಿತ್ತ ಓಲಾಡುವ ಚೆಲುವಾದ ಮುಂಗುರುಳುಗಳಿಂದಲೂ, ಚಂದ್ರನಂತಹ ಮುಖದಿಂದಲೂ ಶೋಭಿಸುವ ಅವಳು ಕುಲಶೀಲಗಳಲ್ಲಿ ಸೀತೆಗಿಂತಲೂ ಶ್ರೇಷ್ಠಳಾದವಳು.
ಕಂ|| ಪೊಸತಲರ್ದ ಬಿಳಿಯ ತಾವರೆ |
     ಯೆಸೞ್ಗಳ ನಡುವಿರ್ಪ ಸಿರಿಯುಮಾಕೆಯ ಕೆಲದೊಳ್ ||
     ನಸು ಮಸುಳ್ದು ತೋರ್ಪಳೆನೆ ಪೋ |
     ಲಿಸುವೊಡೆ ಜಾಕವ್ವೆಗುಳಿದ ಪೆಂಡಿರ್ ದೊರೆಯೇ ||೪೦||
(ಪೊಸತು ಅಲರ್ದ ಬಿಳಿಯ ತಾವರೆ ಎಸೞ್ಗಳ ನಡುವೆ ಇರ್ಪ ಸಿರಿಯುಮ್ ಆಕೆಯ ಕೆಲದೊಳ್ ನಸು ಮಸುಳ್ದು ತೋರ್ಪಳ್ ಎನೆ, ಪೋಲಿಸುವೊಡೆ ಜಾಕವ್ವೆಗೆ ಉಳಿದ ಪೆಂಡಿರ್ ದೊರೆಯೇ?)
ಆಗಷ್ಟೇ ಹೊಸತಾಗಿ ಅರಳಿದ ತಾವರೆಯ ದಳಗಳ ನಡುವೆ ಇರುವ ಲಕ್ಷ್ಮಿಯೂ ಸಹ ಆ ಜಾಕವ್ವೆಯ ಪಕ್ಕದಲ್ಲಿ ಕೊಂಚ ಮಬ್ಬಾಗಿ ಕಾಣುತ್ತಾಳೆ! ಎಂದಮೇಲೆ ಉಳಿದ ಹೆಣ್ಣುಗಳು ಆ ಜಾಕವ್ವೆಗೆ ಸಮಾನರಾಗುವುದು ಎಂದಾದರೂ ಸಾಧ್ಯವೇ?
ಕಂ|| ಆ ಜಾಕವ್ವೆಗಮಾ ವಸು |
     ಧಾ ಜಯ ಸದ್ವಲ್ಲಭಂಗಮತಿ ವಿಶದ ಯಶೋ ||
     ರಾಜಿತನೆನಿಪರಿಕೇಸರಿ |
     ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ ||೪೧||
ಕಂ|| ಮಗನಾದನಾಗಿ ಚಾಗದ |
     ನೆಗೞ್ತೆಯೊಳ್ ಬೀರದೇೞ್ಗೆಯೊಳ್ ನೆಗೞೆ ಮಗಂ ||
     ಮಗನೆನೆ ಪುಟ್ಟಲೊಡಂ ಕೋ |
     ೞ್ಮೊಗಗೊಂಡುದು ಭುವನ ಭವನಮರಿಕೇಸರಿಯೊಳ್ ||೪೨||
(ಆ ಜಾಕವ್ವೆಗಂ ಆ ವಸುಧಾ ಜಯ ಸದ್ವಲ್ಲಭಂಗಂ ಅತಿ ವಿಶದ ಯಶೋರಾಜಿತನ್ ಎನಿಪ ಅರಿಕೇಸರಿ ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ-
ಮಗನ್ ಆದನಾಗಿ, ಚಾಗದ ನೆಗೞ್ತೆಯೊಳ್ ಬೀರದ ಏೞ್ಗೆಯೊಳ್ ನೆಗೞೆ, ಮಗಂ ಮಗನ್ ಎನೆ ಪುಟ್ಟಲೊಡಂ ಕೋೞ್ಮೊಗಗೊಂಡುದು ಭುವನ ಭವನಂ ಅರಿಕೇಸರಿಯೊಳ್.)
ಆ ಜಾಕವ್ವೆಗೂ, ಭೂಮಿಯನ್ನು ಗೆದ್ದು ಅದರ ಒಡೆಯನಾಗಿ ಕೀರ್ತಿಯನ್ನು ಸಂಪಾದಿಸಿದ ನರಸಿಂಹನಿಗೂ, ವೈರಿಗಳೆಂಬ ಪತಂಗಗಳನ್ನು ತನ್ನ ತೇಜಸ್ಸಿನ ಬೆಂಕಿಯತ್ತ ಸೆಳೆದುಕೊಳ್ಳುವ ಅರಿಕೇಸರಿಯು ಮಗನಾಗಿ ಹುಟ್ಟಿದನು. ಆತನು ತನ್ನ ತ್ಯಾಗ ಹಾಗೂ ಶೌರ್ಯಗಳಿಂದಾಗಿ ಕೀರ್ತಿವಂತನಾದನು. ಲೋಕವು ಅವನನ್ನು ‘ಮಗನೆಂದರ ಮಗ’ ಎಂದು ಕೊಂಡಾಡಿತು. ಆತನು ಹುಟ್ಟಿದ್ದರಿಂದಾಗಿ ಲೋಕಕ್ಕೆ ಕೋಡು ಮೂಡಿತು.
ತರಳ|| ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ದಳಿದಾಗಳಾ |
     ಮದಗಜಾಂಕುಶದಿಂದೆ ಪೆರ್ಚಿಸಿ ನಾಭಿಯಂ ಮದ ದಂತಿ ದಂ ||
     ತದೊಳೆ ಕಟ್ಟಿದ ತೊಟ್ಟಿಲಂ ನಯದಿಂದಮೇಱಿ[ಸೆ] ಬಾಳ ಕಾ |
     ಲದೊಳೆ ತೊಟ್ಟಿಲಿಗಂ ಗಜಪ್ರಿಯನಪ್ಪುದಂ ಸಲೆ ತೋಱಿದಂ ||೪೩||
ಆಗತಾನೇ ಹುಟ್ಟಿದ ಮಗುವಿನ ಮೇಲೆ ತಣ್ಣೀರನ್ನು ಚಿಮುಕಿಸುವುದು ಲೋಕರೂಢಿ. ಆದರೆ ಅರಿಕೇಸರಿಯು ಹುಟ್ಟಿದಾಗ ಅವನ ಮೇಲೆ ಚಿಮುಕಿಸಿದ್ದು ಆನೆಯ ಮದಜಲವನ್ನು, ತಣ್ಣೀರನ್ನಲ್ಲ. ಆತನ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ್ದು ಆನೆಗಳನ್ನು ಪಳಗಿಸುವ ಅಂಕುಶದಿಂದ. ಆತನನ್ನು ಹಾಕಿದ್ದು ಸೊಕ್ಕಿದಾನೆಗಳ ದಂತದಿಂದ ತಯಾರಾದ ತೊಟ್ಟಿಲಿಗೆ. ಹೀಗೆ ಅರಿಕೇಸರಿಯು ತೊಟ್ಟಿಲಕೂಸಾಗಿರುವಾಗಲೇ ಮುಂದೆ ಗಜಪ್ರಿಯನಾಗುವ ಎಲ್ಲ ಲಕ್ಷಣಗಳನ್ನೂ ತೋರಿಸಿದನು.



ಮಂಗಳವಾರ, ಮೇ 1, 2018

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧-೧೪


ಶ್ರೀಃ
ಪಂಪಕವಿ ವಿರಚಿತಂ
ವಿಕ್ರಮಾರ್ಜುನ ವಿಜಯಂ
ಪ್ರಥಮಾಶ್ವಾಸಂ 

|| ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ |
     ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ ||
     ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ |
     ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ ||||
(ಶ್ರೀಯನ್ ಅರಾತಿ ಸಾಧನ ಪಯೋನಿಧಿಯೊಳ್ ಪಡೆದುಂ, ಧರಿತ್ರಿಯಂ ಜೀ ಎನೆ ಬೇಡಿ ಕೊಳ್ಳದೆ ವಿರೋಧಿ ನರೇಂದ್ರರನ್ ಒತ್ತಿ ಕೊಂಡುಂ, ಆತ್ಮೀಯ ಸುಪುಷ್ಪಪಟ್ಟಮನ್ ಒಡಂಬಡೆ ತಾಳ್ದಿಯುಂ, ಇಂತು ಉದಾತ್ತ ನಾರಾಯಣನಾದ ದೇವನ್ ಎಮಗೆ ಈಗೆ  ಅರಿಕೇಸರಿ ಸೌಖ್ಯಕೋಟಿಯಂ.)
ಲಕ್ಷ್ಮಿಯನ್ನು ವೈರಿ ಸೈನ್ಯವೆಂಬ ಸಮುದ್ರದಲ್ಲಿ ಪಡೆದವನು; ಭೂಮಿಯನ್ನು ದೈನ್ಯದಿಂದ ಬೇಡಿ ಪಡೆಯದೆ  ಶತ್ರು ರಾಜರನ್ನು ಸೋಲಿಸಿ ಪಡೆದವನು; ಸುಪುಷ್ಪಪಟ್ಟವೆಂಬ ಕಿರೀಟವನ್ನು ಒಪ್ಪವಾಗಿ ಧರಿಸಿದವನು; ಹೀಗೆ ಉದಾತ್ತ ನಾರಾಯಣನೆಂಬ ಬಿರುದು ಪಡೆದ ಅರಿಕೇಸರಿಯು ನಮಗೆ ಧಾರಾಳ ಸುಖವನ್ನು ಕೊಡಲಿ.

ಚಂ|| ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತವರಪ್ರಸಾದಮು|
     ಜ್ಜಳಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ||
     ರ್ಮಳ ಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ|
     ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ ||||
(ಮುಳಿಸು ಲಲಾಟ ನೇತ್ರ ಶಿಖಿ, ಮೆಚ್ಚೆ ವಿನೂತ ವರಪ್ರಸಾದಂ, ಉಜ್ಜಳ ಜಸಂ ಅಂಗ ಸಂಗತ ಲಸತ್ ಭಸಿತಂ, ಪ್ರಭುಶಕ್ತಿ ಶಕ್ತಿ, ನಿರ್ಮಳ ಮಣಿಭೂಷಣಂ ಫಣಿವಿಭೂಷಣಂ ಆಗೆ, ನೆಗೞ್ತೆಯಂ ಪುದುಂಗೊಳಿಸಿದನ್ ಈಶ್ವರಂ, ನೆಗೞ್ದುದಾರ ಮಹೇಶ್ವರನ್ ಈಗೆ ಭೋಗಮಂ.)
ಇಲ್ಲಿ ಕವಿ ಈಶ್ವರನನ್ನೂ ಅರಿಕೇಸರಿಯನ್ನೂ ಒಟ್ಟಿಗೆ ಸ್ತೋತ್ರ ಮಾಡಿ ಅರಿಕೇಸರಿ ಉದಾರ ಮಹೇಶ್ವರನೆಂಬುದನ್ನು ಪ್ರತಿಪಾದಿಸಿದ್ದಾನೆ.
ಇವನದು ಕೋಪ, ಅವನದು ಹಣೆಗಣ್ಣ ಬೆಂಕಿ; ಇವನದು ಮೆಚ್ಚುಗೆ, ಅವನದು ಪ್ರಸಾದ; ಇವನದು ಶೋಭಿಸುವ ಯಶಸ್ಸು, ಅವನದು ಮೈಗೆಲ್ಲ ಬಳಿದ ವಿಭೂತಿ; ಇವನದು ಪ್ರಭುಶಕ್ತಿ, ಅವನದು ಶಕ್ತಿದೇವತೆ; ಇವನದು ನಿರ್ಮಲ ಮಣಿಗಳ ಅಲಂಕಾರ, ಅವನದು ಸರ್ಪದ ಅಲಂಕಾರ. ಹೀಗೆ, ಹಲವು ಲಕ್ಷಣಗಳಿಂದ  ಕೂಡಿ ಖ್ಯಾತನಾದ ಈಶ್ವರನೂ, ಸಮಾಂತರ ಲಕ್ಷಣಗಳನ್ನು ಹೊಂದಿ ಖ್ಯಾತನಾದ ಉದಾರ ಮಹೇಶ್ವರನೆಂಬ ಬಿರುದು ಹೊತ್ತ ಅರಿಕೇಸರಿಯೂ ನಮಗೆ ಭೋಗವನ್ನು ಕೊಡಲಿ.

|| ಚಂಡವಿರೋಧಿಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ |
     ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗಕೋಟಿ ಕೈ ||
     ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ |
     ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ ||||
(ಚಂಡ ವಿರೋಧಿ ಸಾಧನ ತಮಸ್ತಮಂ ಓಡೆ, ವಿಶಿಷ್ಟ ಪದ್ಮಿನೀ ಷಂಡಂ ಅರಲ್ದು ರಾಗದಿನ್ ಒಱಲ್ದು ಇರೆ, ಯಾಚಕ ಭೃಂಗಕೋಟಿ ಕೈಕೊಂಡು ನಿರಂತರಂ ತಗುಳ್ದು ಕೀರ್ತಿಸೆ, ಮಿಕ್ಕು ಎಸೆವ ಪ್ರಚಂಡ ಮಾರ್ತಾಂಡನ್ ಅಲರ್ಚುಗೆ ಎನ್ನ ಹೃದಯ ಅಂಬುಜಮಂ ನಿಜ ವಾಕ್ ಮರೀಚಿಯಿಂ.)
ಈ ಪದ್ಯವನ್ನು ಸೂರ್ಯ ಹಾಗೂ ಅರಿಕೇಸರಿ ಇಬ್ಬರಿಗೂ ಅನ್ವಯವಾಗುವಂತೆ ಕವಿ ರಚಿಸಿದ್ದಾನೆ.
ಸೂರ್ಯನ ಪರವಾಗಿ:
ಸೂರ್ಯೋದಯವಾದಾಗ ಕತ್ತಲೆಯು ಓಡಿಹೋಯಿತು. ಕೊಳದಲ್ಲಿ ತುಂಬಿದ ಕಮಲಗಳು ಅರಳಿ ಪ್ರೀತಿಯಿಂದ ನೋಡಿದವು. ದುಂಬಿಗಳು ಅವಿರತ ಝೇಂಕಾರ ಎಲ್ಲೆಡೆಯೂ ಕೇಳಿಸಿತು. ಇಂತಹ ಸೂರ್ಯನು ತನ್ನ ಕಿರಣಗಳಿಂದ ನನ್ನ ಹೃದಯಕಮಲವನ್ನು ಅರಳಿಸಲಿ.
ಅರಿಕೇಸರಿಯ ಪರವಾಗಿ:
ಶತ್ರುಗಳು ಓಡಿಹೋದರು. ಪದ್ಮಿನೀ ಸ್ತ್ರೀಯರು ಮುಖವರಳಿಸಿ ಪ್ರೀತಿಯಿಂದ ನೋಡಿದರು. ಭಿಕ್ಷುಕರು ನಿರಂತರವಾಗಿ, ಬೆಂಬಿಡದೆ ಹೊಗಳಿದರು. ಇಂತಹ ‘ಪ್ರಚಂಡ ಮಾರ್ತಾಂಡ’ನಾದ ಅರಿಕೇಸರಿಯು ತನ್ನ ಮಾತಿನ ಕಿರಣಗಳಿಂದ ನನ್ನ ಹೃದಯಕಮಲವನ್ನು ಅರಳಿಸಲಿ.

ಚಂ|| ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು |
     ನ್ನಹಿತವೆನಿಪ್ಪಪೂರ್ವ ಶುಭ ಲಕ್ಷಣ ದೇಹದೊಳೊಳ್ಪನಾಳ್ದು ಸಂ ||
     ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ |
     ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ ||||
(ಸಹಜದ ಚೆಲ್ವಿನೊಳ್, ರತಿಯ ಸೋಲದ ಕೇಳಿಕೆಯೊಳ್ ಪೊದೞ್ದುಸನ್ನಹಿತ ಎನಿಪ್ಪ ಅಪೂರ್ವ ಶುಭ ಲಕ್ಷಣ ದೇಹದೊಳ್ ಒಳ್ಪನ್ ಆಳ್ದು, ಸಂದ ಅಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನ್, ಆಗಳುಂ ಸಹಜ ಮನೋಜನ ಓಜನ್ ಎಮಗೀಗೆ ವಿಚಿತ್ರ ರತೋತ್ಸವಂಗಳಂ.)
ಅರಿಕೇಸರಿಯನ್ನೂ ಮನ್ಮಥನನ್ನೂ ಒಟ್ಟಿಗೆ ಹೊಗಳಿ ಅರಿಕೇಸರಿ ಕಾಮನನ್ನು ಮೀರಿಸಿದವನೆಂದು ಪದ್ಯದಲ್ಲಿ ವರ್ಣಿಸಲಾಗಿದೆ.
ಅರಿಕೇಸರಿಗೆ ಹುಟ್ಟಿನಿಂದಲೇ ಬಂದ ಸಹಜವಾದ ಚೆಲುವು ಇದೆ. ಮನ್ಮಥನು ಹುಟ್ಟಿನಿಂದಲೇ ಚೆಲುವನಾಗಿದ್ದಿರಬಹುದು, ಆದರೆ ನಂತರ ಅವನು ದೇಹವನ್ನು ಕಳೆದುಕೊಂಡಿದ್ದಾನೆ. ಅರಿಕೇಸರಿಯು ರತಿಕೇಳಿಯಲ್ಲಿ ಸೋಲುವವನಲ್ಲ. ಆದರೆ ಮನ್ಮಥನು ಹಾಗಲ್ಲ. ಏಕೆಂದರೆ ರತಿಯು ಅವನ ಹತ್ತಿರ ‘ಸೋಲ’ವನ್ನು ಕೇಳುತ್ತಾಳೆ. ಅರಿಕೇಸರಿಯು ತನ್ನ ಲಕ್ಷಣವಾದ ದೇಹವನ್ನು ಅಲಂಕರಿಸಿಕೊಂಡು ಸುಂದರವಾಗಿ ಕಾಣುತ್ತಾನೆ. ಮನ್ಮಥನಿಗೆ ದೇಹವಿಲ್ಲವಾದ್ದರಿಂದ ಅಲಂಕರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅರಿಕೇಸರಿಯು ಶಿವನ ಕರುಣೆಯನ್ನು ಪಡೆದಿದ್ದಾನೆ; ಮನ್ಮಥನು ಶಿವನ ಶಾಪಕ್ಕೆ ಪಾತ್ರನಾಗಿದ್ದಾನೆ. ಹೀಗೆ ಹಲವು ದೃಷ್ಟಿಗಳಿಂದ ಅರಿಕೇಸರಿಯು ಮನ್ಮಥನಿಗಿಂತಲೂ ಮಿಗಿಲಾದವನು, ಮನ್ಮಥನನ್ನು ಗೆದ್ದವನು. ಇಂಥ ‘ಸಹಜ ಮನೋಜ’ನೂ, (ಮನ್ಮಥನ) ಗುರುವೂ ಆದ ಅರಿಕೇಸರಿಯು ನಮಗೆ ವಿಚಿತ್ರವಾದ ರತೋತ್ಸವಗಳನ್ನು ಕೊಡಲಿ.

ಚಂ|| ಕ್ಷಯಮಣಮಿಲ್ಲ ಕೇಳ್ದು ಕಡೆಗಂಡವನಾವನುಮಿಲ್ಲೆನಲ್ ತದ |
     ಕ್ಷಯನಿಧಿ ತಾನೆ ತನ್ನನೊಸೆದೊಲಗಿಪಂಗರಿದಿಲ್ಲೆನಿಪ್ಪ ವಾ ||
     ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ |
     ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧಬುದ್ಧಿಯಂ || ||
(ಕ್ಷಯಮ್ ಅಣಮ್ ಇಲ್ಲ, ಕೇಳ್ದು ಕಡೆಗಂಡವನ್ ಆವನುಂ ಇಲ್ಲ ಎನಲ್, ತದಕ್ಷಯ ನಿಧಿ ತಾನೆ? ತನ್ನನ್ ಒಸೆದು ಓಲಗಿಪಂಗೆ ಅರಿದಿಲ್ಲ ಎನಿಪ್ಪ ವಾಙ್ಮಯಮ್ ಅನಿತರ್ಕಂ ಅಂಬಿಕೆ ಸರಸ್ವತಿ, ಮನ್ಮುಖ ಪದ್ಮರಂಗದ ಏೞ್ಗೆಯನ್ ಎಡೆಗೊಂಡು, ಕೊಂಡು ಕೊನೆದು, ಈಗೆ ಅರಿಗಂಗೆ ವಿಶುದ್ಧ ಬುದ್ಧಿಯಂ.)
ವಿದ್ಯೆಗೆ ನಾಶವಿಲ್ಲ; ಅದನ್ನು ಕೇಳಿ ಮುಗಿಸಿದವನು ಯಾರೂ ಇಲ್ಲ. ಹಾಗಾಗಿಯೇ ಅದು ‘ಅಕ್ಷಯ ನಿಧಿ’ ಎಂದು ಕರೆಸಿಕೊಂಡಿರುವುದು ತಾನೆ? ಯಾರು ಪ್ರೀತಿಯಿಂದ ಆ ವಿದ್ಯೆಯ ಸೇವೆ ಮಾಡುತ್ತಾರೋ ಅಂಥವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಅಂಥ ವಿದ್ಯೆಗೆ ತಾಯಿಯಾದ ಸರಸ್ವತಿ ನನ್ನ ಮುಖದಲ್ಲಿ ನೆಲೆಸಿ, ಸಂತೋಷದಿಂದ ಅರಿಕೇಸರಿಗೆ ಒಳ್ಳೆಯ ಬುದ್ಧಿಯನ್ನು ಕೊಡಲಿ.
(ಪದ್ಯದ ಮೊದಲ ಸಾಲಿನಲ್ಲಿ ‘ಕೇಳ್ದು ಕಡೆಗಂಡವನ್’ ಎಂಬ ಮಾತಿದೆ. ಬರೆಯುವ ಪದ್ಧತಿ ಜಾರಿಗೆ ಬರುವ ಮೊದಲು ಒಬ್ಬರಿಂದೊಬ್ಬರು ಕೇಳಿ ಕಲಿಯುವ ಪದ್ಧತಿ ಇತ್ತು. ಪಂಪನ ಕಾಲಕ್ಕಾಗಲೇ ಬರವಣಿಗೆ ಚಾಲ್ತಿಗೆ ಬಂದಿತ್ತಾದರೂ, ಕೇಳಿ ಕಲಿಯುವ ಪದ್ಧತಿ ಸಂಪೂರ್ಣ ನಾಶವಾಗಿದ್ದಿರಲಾರದು. ‘ಬಹುಶ್ರುತ’ ಎಂದರೆ ‘ತುಂಬಾ ಕೇಳಿದವನು’ – ದೊಡ್ಡ ವಿದ್ವಾಂಸ. ಆದ್ದರಿಂದ ಇಲ್ಲಿ ‘ಕೇಳಿ’ ಎಂದರೆ ‘ಓದಿ’ ಎಂದೇ ಅರ್ಥ.)


ಚಂ|| ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗು |
     ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳ ಮೃಣಾಳಮಾಗೆ ಮಿ ||
     ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾಱಿಸುತಿಂತೆ ತನ್ನ ಕೂ |
     ರಸಿಯೊಳಡುರ್ತು ಕೊಂದಸಿಯಳಿರ್ಕಸಿಯೊಳ್ ಪಡೆ ಮೆಚ್ಚೆ ಗಂಡನಾ || ||
(ತಿಸುಳದೊಳ್ ಉಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ, ಕಣ್ಗೆ ಅಗುರ್ವಿಸುವಿನಂ ಒಕ್ಕು ನೇಲ್ವ ಕರುಳ ಓಳಿಯೆ ಬಾಳ ಮೃಣಾಳಮಾಗೆ, ಮಿಕ್ಕ ಅಸುರರ ಮೆಯ್ಯೊಳ್ ಆದ ವಿರಹಾಗ್ನಿಯನ್ ಆರಿಸುತೆ ಇಂತೆತನ್ನ ಕೂರಸಿಯೊಳ್ ಅಡುರ್ತು ಕೊಂದ ಅಸಿಯಳ್, ಇರ್ಕೆ ಅಸಿಯೊಳ್ ಪಡೆ ಮೆಚ್ಚೆ ಗಂಡನಾ.)
ಈ ಪದ್ಯದಲ್ಲಿ ಕವಿ ದುರ್ಗಾದೇವಿಯನ್ನು ಪ್ರಾರ್ಥಿಸಿದ್ದಾನೆ. ಆಕೆಯ ತ್ರಿಶೂಲದಿಂದ ಚಿಮ್ಮುವ ರಾಕ್ಷಸರ ತಾಜಾ ರಕ್ತವೇ ಕೆಂಬಣ್ಣದ ಚಿಗುರಾಯಿತು. ಭೀಕರವಾಗಿ ಕಾಣುವ ಅವರ ಕರುಳ ಮಾಲೆಯೇ ಎಳೆಯ ತಾವರೆಯ ದಂಟಾಯಿತು. ಹೀಗೆ ತನ್ನ ಹರಿತವಾದ ಕತ್ತಿಯನ್ನು ಹಿಡಿದು ಮುನ್ನುಗ್ಗಿ ದುರ್ಗೆಯು ರಾಕ್ಷಸರನ್ನು  ಕೊಂದು, ಹೆಚ್ಚಿಕೊಂಡ ಅವರ ವಿರಹಾಗ್ನಿಯನ್ನು ತಣಿಸಿದಳು. ಅಂಥ ದುರ್ಗೆಯು ‘ಪಡೆ ಮೆಚ್ಚೆ ಗಂಡ’ನಾದ ಅರಿಕೇಸರಿಯ ಕತ್ತಿಯಲ್ಲಿ ನೆಲೆಸಿರಲಿ.
(“ಕಾಮಸಂತಾಪವನ್ನು ಶಮನಗೊಳಿಸುವುದಕ್ಕಾಗಿ ಚಿಗುರನ್ನೂ ತಾವರೆಯ ದಂಟನ್ನೂ ವಿರಹಿಗಳು ಉಪಯೋಗಿಸುವುದು ಪದ್ಧತಿ. ಇಲ್ಲಿ ಆದಿಶಕ್ತಿ ಸ್ವರೂಪಳಾದ ಕಾಳಿಯನ್ನು, ತ್ರಿಪುರಸುಂದರಿಯನ್ನು ಮೋಹಿಸಿ ಬಂದ ಶುಂಭ ನಿಶುಂಭಾದಿ ಉದ್ಧತ ರಾಕ್ಷಸರ ವಿರಹಾಗ್ನಿಯನ್ನು ಆರಿಸಲು ಅವರ ಬಿಸಿನೆತ್ತರನ್ನೂ ಕರುಳಮಾಲೆಯನ್ನೂ ಬಳಸಿತೆಂದು ಹೇಳಿದೆ” – ಡಿ.ಎಲ್.ಎನ್.)
ಮಲ್ಲಿಕಾಮಾಲೆ|| ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ |
     ಚ್ಛಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆ ||
     ನ್ನನ್ನಿಜೋನ್ನತಿಯಿಂದಮೀ ಪತಿಯೆಂದು ಮೆಚ್ಚಿ ವಿನಾಯಕಂ |
     ತಾನ್ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ || ||
(ಎನ್ನ ದಾನಂ ಇದು ಆಗಳುಂ ಮಧುಪಾಶ್ರಯಂ, ಧರೆಗೆ ಅವ್ಯವಚ್ಛಿನ್ನ ದಾನಂ ಇದು ಆಗಳುಂ ವಿಬುಧ ಆಶ್ರಯಂ ಗೆಲೆವಂದನ್ ಎನ್ನನ್ ನಿಜ ಉನ್ನತಿಯಿಂದಂ ಪತಿ ಎಂದು ಮೆಚ್ಚಿ ವಿನಾಯಕಂ ತಾನ್ ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ.)
‘ದಾನ’ ಶಬ್ದವನ್ನು ಕವಿ ಇಲ್ಲಿ ಎರಡು ಅರ್ಥಗಳಲ್ಲಿ ಬಳಸಿದ್ದಾನೆ. ದಾನ ಎಂದರೆ ಪ್ರಸಿದ್ಧ ಅರ್ಥ ‘ದಾನ’. ಅಷ್ಟೇನೂ ಪ್ರಸಿದ್ಧವಲ್ಲದ ಮತ್ತೊಂದು ಅರ್ಥ ‘ಆನೆಯ ಮದದ ನೀರು’.
“ನನ್ನ ಮದದ ನೀರು ಬರಿಯ ದುಂಬಿಗಳಿಗೆ ಆಶ್ರಯ ಕೊಟ್ಟರೆ, ಅರಿಕೇಸರಿಯು ನೀಡುವ ದಾನ ಪಂಡಿತರಿಗೆ ಆಶ್ರಯ ಕೊಡುತ್ತದೆ. ಎಂದಮೇಲೆ ಈ ಅರಿಕೇಸರಿಯು  ನಿಜವಾದ ಯೋಗ್ಯತೆಯ ಮೂಲಕವೇ ನನ್ನನ್ನು ಮೀರಿಸುತ್ತಾನೆ” ಎಂದು ಮೆಚ್ಚಿ ವಿನಾಯಕನು ಅರಿಕೇಸರಿ ರಾಜನ ಕುರಿತಾದ ಈ ಕಾವ್ಯವನ್ನು ಪ್ರೀತಿಯಿಂದ ವಿಸ್ತರಿಸಲಿ.
ಚಂ|| ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್ |
     ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಮೊ ||
     ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊಱೆಯಿಂ ಬೞಲ್ದು ತುಂ |
     ಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್  ||೮||
(ಬಗೆ ಪೊಸತು ಅಪ್ಪುದು, ಆಗಿ ಮೃದುಬಂಧದೊಳ್ ಒಂದುವುದು, ಒಂದಿ ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು, ತಳ್ತೊಡೆ ಕಾವ್ಯಬಂಧಂ ಒಪ್ಪುಗುಂ ಎಳಮಾವು ಕೆಂದಳಿರ, ಪೂವಿನ, ಬಿಣ್ಪೊಱೆಯಿಂ ಬೞಲ್ದು, ತುಂಬಿಗಳಿನೆ ತುಂಬಿ, ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳ್ ಒಪ್ಪುವಂತೆವೋಲ್)
ಕಾವ್ಯಬಂಧವು ಹೇಗಿರಬೇಕೆಂಬುದನ್ನು ಕವಿ ಇಲ್ಲಿ ಹೇಳುತ್ತಾನೆ.
ಆಲೋಚನೆ ಅಥವಾ ಕಲ್ಪನೆ ಹೊಸತಾಗಿರಬೇಕು. ಅದನ್ನು ಮೃದುವಾದ (ಯೋಗ್ಯವಾದ) ಶಬ್ದಗಳಲ್ಲಿ ಜೋಡಿಸಬೇಕು. ಹಾಗೆ ಜೋಡಿಸಿ ದೇಸಿಯಲ್ಲಿ ಹೊಗಿಸಬೇಕು. ನಂತರ ಅದನ್ನು ಮಾರ್ಗದಲ್ಲಿ ಸೇರಿಸಬೇಕು. ಹೀಗೆ ಸೇರಿಸಿದರೆ ಕಾವ್ಯಬಂಧವು ಸುಗ್ಗಿಯ ಕಾಲದಲ್ಲಿ ಎಳಮಾವು, ಕೆಂಪು ಚಿಗುರುಗಳ ಹಾಗೂ ಹೂವುಗಳ ಭಾರಕ್ಕೆ ಬಳಲಿ, ದುಂಬಿಗಳಿಂದ ತುಂಬಿ, ಹಾಡುವ ಕೋಗಿಲೆಗಳಿಗೆ ಆಶ್ರಯವಾಗಿ ಮನೋಹರವಾಗಿ ಒಪ್ಪುವಂತೆ, ಶೋಭಿಸುತ್ತದೆ.
ಉ|| ಆ ಸಕಳಾರ್ಥಸಂಯುತಮಳಂಕೃತಿಯುಕ್ತಮುದಾತ್ತ [ವೃತ್ತಿ] ವಿ |
     ನ್ಯಾಸಮನೇಕ ಲಕ್ಷಣ ಗುಣ ಪ್ರಭವಂ ಮೃದುಪಾದಮಾದ ವಾ ||
     ಕ್ಶ್ರೀ ಸುಭಗಂ ಕಳಾಕಳಿತಮೆಂಬ ನೆಗೞ್ತೆಯನಾಳ್ದ ಕಬ್ಬಮಂ |
     ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ ||೯||
(ಆ ಸಕಳ ಅರ್ಥ ಸಂಯುತಂ, ಅಳಂಕೃತಿ ಯುಕ್ತಂ, ಉದಾತ್ತ ವೃತ್ತಿ ವಿನ್ಯಾಸಂ, ಅನೇಕ ಲಕ್ಷಣ ಗುಣ ಪ್ರಭವಂ, ಮೃದುಪಾದಂ ಆದ, ವಾಕ್ ಶ್ರೀ ಸುಭಗಂ ಕಳಾಕಳಿತಂ ಎಂಬ ನೆಗೞ್ತೆಯನ್ ಆಳ್ದ, ಕಬ್ಬಮಂ ಕೂಸುಮನ್ ಈವುದು, ಈವುದು ಅರಿಕೇಸರಿಗೆ ಅಲ್ಲದೆ ಅವಸ್ತುಗೆ ಈವುದೇ?)
೩ನೆಯ ಪದ್ಯದಂತೆ ಇಲ್ಲಿಯೂ ಕವಿ ಎರಡರ್ಥ ಬರುವಂತೆ ಪದಪುಂಜಗಳನ್ನು ಬಳಸಿದ್ದಾನೆ. ಕಾವ್ಯ ಹಾಗೂ ಕನ್ನಿಕೆಯ ವರ್ಣನೆಗಳು ಇಲ್ಲಿ ಇವೆ.
ಕಾವ್ಯದ ಪರವಾಗಿ:
ಎಲ್ಲ ಅರ್ಥಗಳನ್ನೂ ಒಳಗೊಂಡದ್ದು, ಕಾವ್ಯಾಲಂಕಾರಗಳಿಂದ ಕೂಡಿರುವುದು, ಉದಾತ್ತ ವೃತ್ತಿಗಳನ್ನು ಒಳಗೊಂಡದ್ದು, ಕಾವ್ಯ ಲಕ್ಷಣಗಳಿಗೆ ಜನ್ಮಸ್ಥಾನವಾದದ್ದು, ಮೃದುವಾದ ಪದ್ಯಪಾದಗಳಿರುವಂಥದು, ಮಾತಿನ ಸಿರಿಯಿಂದ ಸುಂದರವಾದದ್ದು, ಕಲೆಗಳಿಂದ ಕೂಡಿರುವುದು – ಎಂಬ ಖ್ಯಾತಿಯು ಕಾವ್ಯಕ್ಕಿದೆ. ಅಂತಹ ಕಾವ್ಯವನ್ನು ಅರಿಕೇಸರಿಯಂಥ ಮಹಾನುಭಾವನಿಗೆ ಅರ್ಪಿಸಬೇಕು, ಸುಮ್ಮನೆ ಯಾರಿಗೋ ಅರ್ಪಿಸುವುದಲ್ಲ.
ಕನ್ನಿಕೆಯ ಪರವಾಗಿ:
ಎಲ್ಲ ಸಂಪತ್ತುಗಳನ್ನೂ ಹೊಂದಿದವಳು, ಸುಂದರವಾಗಿ ಅಲಂಕರಿಸಿಕೊಂಡವಳು, ಉತ್ತಮ ನಡವಳಿಕೆಯುಳ್ಳವಳು, ಅನೇಕ ಲಕ್ಷಣಗಳನ್ನೂ ಗುಣಗಳನ್ನೂ ಹೊಂದಿದವಳು, ಕಲೆಗಳನ್ನು ಬಲ್ಲವಳು  ಎಂದು ಖ್ಯಾತಳಾದ ಕನ್ನಿಕೆಯನ್ನು  ಅರಿಕೇಸರಿಯಂಥ ಮಹಾನುಭಾವನಿಗೆ ಅರ್ಪಿಸಬೇಕು, ಸುಮ್ಮನೆ ಯಾರಿಗೋ ಅರ್ಪಿಸುವುದಲ್ಲ.
(ಕಾವ್ಯವನ್ನು ರಾಜನಿಗೆ ಅರ್ಪಿಸಬೇಕೆನ್ನುವುದು ಅರ್ಥವಾಗುವ ಮಾತು. ಕನ್ನಿಕೆಯನ್ನು ಅರ್ಪಿಸುವುದೆಂದರೆ? ಅಂಥದೊಂದು ಪದ್ಧತಿ ಪಂಪನ ಕಾಲದಲ್ಲಿ  ಇದ್ದಿರಬಹುದೆ?)
ಚಂ|| ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಂ |
     ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗೞ್ತೆವೆತ್ತ ಸ ||
     ತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂ |
     ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುಮೀ ಗುಣಾರ್ಣವಂ ||೧೦||
(ಕವಿಗಳ, ನಾಮಧಾರಕ ನರಾಧಿಪರ ಓಳಿಯೊಳ್, ಈತನ್ ಒಳ್ಳಿದಂ ಕವಿ, ನೃಪನೀತನ್ ಒಳ್ಳಿದನ್, ಎನಲ್ ದೊರೆಯಲ್ತು, ನೆಗೞ್ತೆವೆತ್ತ ಸತ್ಕವಿಗಳ, ಷೋಡಶ ಅವನಿಪರ ಓಳಿಯೊಳಂ, ಕವಿತಾ ಗುಣಾರ್ಣವಂ ಕವಿತೆಯೊಳ್ ಅಗ್ಗಳಂ, ಗುಣದೊಳ್ ಅಗ್ಗಳಂ ಎಲ್ಲಿಯುಂ ಈ ಗುಣಾರ್ಣವಂ.)
ಈ ಪದ್ಯದಲ್ಲಿ ಕವಿ ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ, ತನ್ನ ಆಶ್ರಯದಾತನಾದ ಅರಿಕೇಸರಿಯನ್ನೂ ಹೊಗಳುತ್ತಾನೆ.
ಕೇವಲ ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡವರ ಸಾಲಿನಲ್ಲಿ ‘ಇವನು ಒಳ್ಳೆಯ ಕವಿ’ ಎನಿಸಿಕೊಳ್ಳುವುದರಲ್ಲಿ ಆಗಲಿ, ಹೆಸರಿಗೆ ಮಾತ್ರ ರಾಜರೆನಿಸಿಕೊಂಡವರ ಸಾಲಿನಲ್ಲಿ ‘ಇವನು ಒಳ್ಳೆಯ ರಾಜ’ ಎನಿಸಿಕೊಳ್ಳುವುದರಲ್ಲಿ ಆಗಲಿ ಹೆಚ್ಚುಗಾರಿಕೆ ಏನಿದೆ? ಪ್ರಖ್ಯಾತವಾದ ಉತ್ತಮ ಕವಿಗಳ ಸಾಲಿನಲ್ಲಿ ಈ ‘ಕವಿತಾಗುಣಾರ್ಣವ’ನು ಶ್ರೇಷ್ಠ ಕವಿ; ಹಾಗೆಯೇ ಪ್ರಸಿದ್ಧರಾದ ಹದಿನಾರು ರಾಜರುಗಳ ಸಾಲಿನಲ್ಲಿ ‘ಗುಣಾರ್ಣವ’ ನೆಂಬ ಬಿರುದು ಪಡೆದ ಅರಿಕೇಸರಿಯು ಶ್ರೇಷ್ಠ ರಾಜ.
ಚಂ|| ಕತೆ ಪಿರಿದಾದೊದಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ |
     ರತಮನಪೂರ್ವಮಾಗೆ ಸಲೆ ಪೇೞ್ದ [ಕವೀಶ್ವರರಿ]ಲ್ಲ ವರ್ಣಕಂ ||
     ಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂ |
     ಡಿತರೆ ತಗುಳ್ದು ಬಿಚ್ಚೞಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ ||೧೧||
(ಕತೆ ಪಿರಿದು ಆದೊಡಂ, ಕತೆಯ ಮೆಯ್ ಕಿಡಲ್ ಈಯದೆ, ಮುಂ ಸಮಸ್ತ ಭಾರತಮನ್ ಅಪೂರ್ವಂ ಆಗೆ ಸಲೆ ಪೇೞ್ದ ಕವೀಶ್ವರರ್ ಇಲ್ಲ, ವರ್ಣಕಂ ಕತೆಯೊಳ್ ಒಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಂ ಎಂದು ಪಂಡಿತರೆ ತಗುಳ್ದು ಬಿಚ್ಚೞಿಸೆ, ಪೇೞಲ್ ಒಡರ್ಚಿದೆನ್ ಈ ಪ್ರಬಂಧಮಂ.)
“ಮಹಾಭಾರತದ ಕತೆಯು ವಿಸ್ತಾರವಾದುದು. ಈ ಮೊದಲು ಆ ಕತೆಯನ್ನು ‘ಇಂಥದ್ದು ಹಿಂದೆಂದೂ ಇರಲಿಲ್ಲ’ ಎನ್ನುವ ಹಾಗೆ ಹೇಳಿದ ಕವಿಗಳು ಯಾರೂ ಇಲ್ಲ. ಕತೆಯ ವಿವರಗಳಲ್ಲಿ ವರ್ಣನೆಗಳನ್ನು ಒಪ್ಪುವಂತೆ ಸೇರಿಸಿ ಹೇಳುವ ಶಕ್ತಿ ಇರುವುದು ಪಂಪನಿಗೇ ಸರಿ” ಎಂದು ಪಂಡಿತರುಗಳೇ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಹಾಗಾಗಿ ನಾನು ಈ ‘ಸಮಸ್ತ ಭಾರತ’ವನ್ನು ಹೇಳಲು ತೊಡಗಿದ್ದೇನೆ.
ಚಂ|| ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆ |
     ಳ್ಗಳ ಕೃತಿಬಂಧಮುಂ ಬರೆ[ಪ]ಕಾಱರ ಕೈಗಳ ಕೇಡು ನುಣ್ಣನ ||
     ಪ್ಪಳಕದ ಕೇಡು ಪೇೞಿಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊ |
     ಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ ||೧೨||
(ಲಲಿತಪದಂ ಪ್ರಸನ್ನ ಕವಿತಾ ಗುಣಂ ಇಲ್ಲದೆ, ಪೂಣ್ದು ಪೇೞ್ದ ಬೆಳ್ಗಳ ಕೃತಿಬಂಧಮುಂ ಬರೆಪಕಾಱರ ಕೈಗಳ ಕೇಡು, ನುಣ್ಣನ ಅಪ್ಪಳಕದ ಕೇಡು, ಪೇೞಿಸಿದೊಡರ್ಥದ ಕೇಡು ಎನೆ, ಪೇೞ್ದು, ಬೀಗಿ, ಪೊಟ್ಟಳಿಸಿ, ನೆಗೞ್ತೆಗೆ ಆಟಿಸುವ ದುಷ್ಕವಿಯುಂ ಕವಿ ಎಂಬ ಲೆಕ್ಕಮೇ?)
ಈ ಪದ್ಯದಲ್ಲಿ ಕವಿಯು ಸಂಪ್ರದಾಯದಂತೆ ಕೆಟ್ಟ ಕವಿಗಳನ್ನು ನಿಂದಿಸಿದ್ದಾನೆ.
ಕೆಲವು ದಡ್ಡರು ಸುಂದರವಾದ ಶಬ್ದಗಳಿಲ್ಲದ, ಮನಸ್ಸಿಗೆ ಮುದ ನೀಡುವ ಕಾವ್ಯಗುಣಗಳಿಲ್ಲದ ಕೃತಿಗಳನ್ನು ರಚಿಸುತ್ತಾರೆ. ಅಂತಹ ಕಾವ್ಯಗಳನ್ನು ಪ್ರತಿ ಮಾಡಿಸಿದರೆ ಅದು ಪ್ರತಿಕಾರರ ಶ್ರಮವನ್ನು ದಂಡ ಮಾಡಿದಂತೆ; ಬರೆಯಲು ಬಳಸುವ ನುಣ್ಣನೆಯ ಓಲೆಗಳನ್ನು ಹಾಳು ಮಾಡಿದಂತೆ; ತುಂಬಿದ ಸಭೆಯಲ್ಲಿ ಓದಿಸಿದರೆ ಕಾವ್ಯದ ಅರ್ಥವನ್ನೂ, ಓದಿಸಿದವರ ಹಣವನ್ನೂ ವ್ಯರ್ಥ ಮಾಡಿದಂತೆ. ಹೀಗಿದ್ದರೂ ಸಹ ಕೆಲವರು ಕಾವ್ಯವನ್ನು ರಚಿಸುತ್ತಾರೆ; ತಾನೇ ದೊಡ್ಡ ಕವಿ ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ; ತನಗೇ ಕೀರ್ತಿ ಸಿಗಬೇಕೆಂದು ಆಸೆಪಡುತ್ತಾರೆ! ಅಂಥ ಕೆಟ್ಟ ಕವಿಗಳನ್ನೂ ಕವಿಗಳ ಲೆಕ್ಕಕ್ಕೆ ಸೇರಿಸಲು ಸಾಧ್ಯವೆ?
ಉ|| ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ |
     ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ ||
     ವಾಸಮನೆಯ್ದೆ ಪೇೞ್ದಪೆನದಲ್ಲದೆ ಗರ್ವಮೆ ದೋಷಮ[ೞ್ತಿ]ಗಂ
     ದೋಷಮೆ ಕಾಣೆನೆನ್ನಱಿವ ಮಾೞ್ಕೆಯೆ ಪೇೞ್ವೆನಿದಾವ ದೋಷಮೋ ||೧೩||
(ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನ್ ಈಸುವೆಂ, ಕವಿ ವ್ಯಾಸನೆನ್ ಎಂಬ ಗರ್ವಂ ಎನಗಿಲ್ಲ, ಗುಣಾರ್ಣವನ ಒಳ್ಪು ಮನ್ಮನೋವಾಸಮನ್ ಎಯ್ದೆ ಪೇೞ್ದಪೆನ್, ಅದಲ್ಲದೆ ಗರ್ವಮೆ ದೋಷಂ, ಅೞ್ತಿಗಂ ದೋಷಮೆ? ಕಾಣೆನ್, ಎನ್ನ ಅಱಿವ ಮಾೞ್ಕೆಯೆ ಪೇೞ್ವೆನ್ ಇದಾವ ದೋಷಮೋ?)
‘ವ್ಯಾಸ ಮುನಿಯಿಂದ ರಚಿತವಾದ ಮಹಾಭಾರತವು ಮಾತಿನಮೃತದ ಒಂದು ಕಡಲು. ನಾನು ಆ ಕಡಲಿನಲ್ಲಿ ಈಜುತ್ತೇನೆ. ಆದರೆ ‘ನಾನೇ ವ್ಯಾಸ’ ಎಂಬ ಅಹಂಕಾರ ನನಗಿಲ್ಲ. ರಾಜನಾದ ಅರಿಕೇಸರಿಯ ಒಳ್ಳೆಯ ಗುಣಗಳನ್ನು ಕಂಡು ಮನಸೋತ ನಾನು ಈ ಕಾವ್ಯವನ್ನು ಹೇಳುತ್ತಿದ್ದೇನೆ. ಅದೂ ಅಲ್ಲದೆ ಅಹಂಕಾರವಾದರೆ ದೋಷ, ಪ್ರೀತಿಗೆ ದೋಷವುಂಟೆ? ಕಾಣೆನಲ್ಲ! ಹಾಗಾಗಿ, ನನಗೆ ತಿಳಿದ ಹಾಗೆ ಈ ಕಾವ್ಯವನ್ನು ಹೇಳುತ್ತೇನೆ.
ಚಂ|| ವಿಪುಳ ಯಶೋವಿತಾನ ಗುಣಮಿಲ್ಲದನಂ ಪ್ರಭು ಮಾಡಿ ಪೂರ್ವ ಭೂ|
     ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ ||
     ಮಿಪರುಮನೊಳ್ಪಿನೊಳ್ ತಗುಳೆವಂದೊಡೆಯೀ ಕಥೆಯೊಳ್ ತಗುಳ್ಚಿ ಪೋ |
     ಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್ ||೧೪||
(ವಿಪುಳ ಯಶೋವಿತಾನ ಗುಣಂ ಇಲ್ಲದನಂ ಪ್ರಭು ಮಾಡಿ, ಪೂರ್ವ ಭೂಮಿಪರ ಪದಂಗಳಂ ಪುಗಿಸಿ ಪೋಲಿಪೊಡೆ, ಈತನ್ ಉದಾತ್ತ ಪೂರ್ವ ಭೂಮಿಪರುಮನ್ ಒಳ್ಪಿನೊಳ್ ತಗುಳೆ ವಂದೊಡೆ, ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆ ಎನಗೆ ಅೞ್ತಿಯಾದುದು, ಗುಣಾರ್ಣವ ಭೂಭುಜನಂ ಕಿರೀಟಿಯೊಳ್.)
ಯಾವುದೇ ಗುಣವಾಗಲಿ, ಕೀರ್ತಿಯಾಗಲಿ ಇಲ್ಲದವರನ್ನು ಸಹ ಕೆಲವರು ಹಿಂದೆ ಆಗಿಹೋದ ಮಹಾರಾಜರುಗಳಿಗೆ ಹೋಲಿಸಿಬಿಡುತ್ತಾರೆ! ಆದರೆ ಅರಿಕೇಸರಿಯು ಅಂಥವನಲ್ಲ. ಅವನು ಹಿಂದಿನ ಮಹಾರಾಜರುಗಳನ್ನು ಸಹ ಮೀರಿಸುವಷ್ಟು ಒಳ್ಳೆಯವನು, ಕೀರ್ತಿವಂತ. ಆದ್ದರಿಂದಲೇ ಈ ಕಥೆಯಲ್ಲಿ ಅವನನ್ನು ಅರ್ಜುನನೊಂದಿಗೆ ಹೋಲಿಸಲು ನನಗೆ ಇಷ್ಟವಾಯಿತು.