ಶುಕ್ರವಾರ, ಆಗಸ್ಟ್ 5, 2011

ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?

ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ "ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ" ಎಂಬ ಸುದ್ದಿಗಳು ಪ್ರಕಟವಾದವು. "ವಂಶ" ಪತ್ರಿಕೆಯ ಮಿತ್ರರನ್ನು "ನಮ ಒರ ಪೋದು ತೂದು ಬರ್ಕನ?" (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ.
ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.
ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ.
ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.
ಹಿನ್ನೆಲೆ:
2007 ರಲ್ಲಿಯೇ ಕರ್ನಾಟಕ ಸರ್ಕಾರ ಎಮ್ ಎಸ್ ಇ ಜಡ್ ಕಂಪೆನಿಗೆ "ನೇತ್ರಾವತಿ ಹಾಗೂ ಗುರುಪುರ ನದಿಗಳ ಮೇಲೆ ಗುರುತಿಸಲಾಗಿರುವ ಸ್ಥಳಗಳಲ್ಲಿ 4 ಬ್ಯಾರೇಜ್ ಗಳನ್ನು ನಿರ್ಮಿಸುವ ಮೂಲಕ ಸೂಕ್ತವಾಗಿ ನೀರನ್ನು ಸಂಗ್ರಹಿಸಿ ದಿನಂಪ್ರತಿ 15 ಎಂಜಿಡಿ ನೀರನ್ನು ಬಳಸಲು" 19 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಸರಕಾರ ನೀಡಿರುವ ಈ ಅನುಮತಿಯ ಆಧಾರದಲ್ಲಿಯೇ ಈಗ ಕಂಪೆನಿಯು ಕಾಮಗಾರಿಯನ್ನು ಪ್ರಾರಂಭಿಸಿದೆ ಎಂಬುದು ಸ್ಪಷ್ಟ. ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಕಾಮಗಾರಿ ಪ್ರಾರಂಭಿಸುವ ಮುನ್ನ ಸರಕಾರ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಪಾಲಿಸಿದೆಯೇ ಇಲ್ಲವೇ, ಒಂದು ವೇಳೆ ಇಲ್ಲದಿದ್ದರೆ, ಈ ಷರತ್ತುಗಳು ಅನುಷ್ಠಾನವಾಗುವಂತೆ ಮಾಡಬೇಕಾದ ಜವಾಬ್ದಾರಿ ಯಾರದ್ದು, ಅವರು ಏನು ಮಾಡುತ್ತಿದ್ದಾರೆ ಎನ್ನುವುದು.
ಅನುಷ್ಠಾನದ ದುರಂತ ಕತೆ
ಸರಕಾರ ಷರತ್ತುಗಳನ್ನೇನೋ ವಿಧಿಸಿದೆ. ಅದನ್ನು ಕಂಪೆನಿ ಪಾಲಿಸಬೇಕು, ಪಾಲಿಸುತ್ತದೆ ಎನ್ನುವುದು ಸಾಮಾನ್ಯ ತಿಳುವಳಿಕೆ. ಒಂದು ವೇಳೆ ಪಾಲಿಸದಿದ್ದರೆ? ಪಾಲಿಸದಿದ್ದರೆ, ಅಂತಿಮವಾಗಿ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರಜೆಗಳದ್ದೇ. ಏಕೆಂದರೆ ಅಂತಿಮವಾಗಿ ಪೆಟ್ಟು ತಿನ್ನುವವರು ಅವರೇ. ಆದರೂ, ಸರಕಾರ ಎಂಬ ಒಂದು ವ್ಯವಸ್ಥೆ ಇದೆ, ಅಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಧಿಕಾರಿಗಳನ್ನು ಸಂಬಳ ಕೊಟ್ಟು ನೇಮಿಸಲಾಗಿದೆ ಎಂಬುದರಿಂದ ಈ ಅಧಿಕಾರಿಗಳು ಹೇಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಲೇಬೇಕು.
2010 ರ ಸೆಪ್ಟೆಂಬರಿನಲ್ಲಿಯೋ ಏನೋ ಪತ್ರಿಕೆಗಳಲ್ಲಿ ಎಮ್ ಎಸ್ ಇ ಜಡ್ ನೇತ್ರಾವತಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿಗಾಗಿ ಟೆಂಡರು ಕರೆದಿತ್ತು. ಟೆಂಡರು ಕರೆಯುವುದೆಂದರೆ ಪೂರ್ವಭಾವಿ ತಯಾರಿಗಳು ಮುಗಿದಿವೆ ಎಂದೇ ಅರ್ಥ. ಸರಕಾರ ವಿಧಿಸಿದ 19 ಷರತ್ತುಗಳಲ್ಲಿ ಮುಖ್ಯವಾಗಿ ಮೂರು ಷರತ್ತುಗಳನ್ನು ನೋಡೋಣ:
1. ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು
2. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು. (ಇಲ್ಲಿ ಕುಮಾರಧಾರಾ ಅಲ್ಲ, ಗುರುಪುರ ನದಿ ಎಂದಾಗಬೇಕು)
3. ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು.
ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ: ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು
ಮಂಗಳೂರು ವಿ. ಆ. ವ. ಕಂಪೆನಿ ತನ್ನನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡಬೇಕೆಂದು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿ ತತ್ಕಾಲಕ್ಕೆ ತನ್ನ ವ್ಯವಹಾರಗಳನ್ನು ನಿಗೂಢವಾಗಿ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದರಿಂದಾಗಿ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವುದು ನನಗೆ ಅನಿವಾರ್ಯವಾಯಿತು.ನಾನು ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದೆ. ಏನು ಬರೆದರೂ, ಹೇಗೆ ಬರೆದರೂ ಅವರದ್ದು ಒಂದೇ ಹಟ: "ಕಂಪೆನಿ ಇಲ್ಲಿಯವರೆಗೂ ನಮ್ಮಿಂದ ಅನುಮತಿ ಕೇಳಿಲ್ಲ. ಅದು ಕೇಳಲಿ, ಆಗ ಅದನ್ನು ನಾವು ಪರಿಶೀಲಿಸುತ್ತೇವೆ". ಇಂಥ ಹೋರಾಟಗಳಲ್ಲಿ ನನಗಿಂತಲೂ ಆಳವಾಗಿ ತೊಡಗಿಕೊಂಡಿರುವ ಮಿತ್ರರೊಬ್ಬರ ಹತ್ತಿರ ಏನು ಮಾಡಬಹುದೆಂದು ಚರ್ಚಿಸಿದೆ. ಅವರೆಂದರು: "ಇಲಾಖೆಯಲ್ಲಿ ನಾನಿದ್ದರೆ ನಾನೂ ನಿಮಗೆ ಹಾಗೇ ಉತ್ತರಿಸುತ್ತಿದ್ದೆ". (ಸುಬ್ರಹ್ಮಣ್ಯದ ಪ್ರಕರಣದಲ್ಲಿ ನಾನು ಹೋರಾಟವನ್ನು ಅರ್ಧಕ್ಕೆ ಬಿಟ್ಟೆನೆಂದು ಅವರಿಗೆ ಅನ್ನಿಸಿರಬೇಕು. ಕೋರ್ಟಿಗೆ ಹೋಗಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುವವರೆಗೂ ಬಿಡಬಾರದು ಎಂಬುದು ಅವರ ದೃಷ್ಟಿಕೋನ. ನನಗೆ ಕೋರ್ಟಿನ ವ್ಯವಹಾರದ ಬಗ್ಗೆ ಭಯಂಕರ ಜಿಗುಪ್ಸೆ; ಅಷ್ಟೇ ಅಲ್ಲ, ವಕೀಲರಿಗೆ ಸುರಿಯಲು ನನ್ನ ಹತ್ತಿರ ಹಣವೂ ಇಲ್ಲ. ಇತ್ತ ಮರಗಳೇ ನಾಶವಾದ ಮೇಲೆ ಯಾರಿಗೆ ಶಿಕ್ಷೆಯಾಗಿ ಏನು ಪ್ರಯೋಜನ?) ನನಗೆ ಆ ಕ್ಷಣಕ್ಕೆ ಹೋರಾಟದ ಉತ್ಸಾಹ ಉಡುಗಿತು. ಕ್ರಮೇಣ, "ನನ್ನ ದಾರಿ ನನಗೆ" ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ನನ್ನ ಪರಿಚಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಹತ್ತಿರ ಸಮಸ್ಯೆಯನ್ನು ಹೇಳಿ ಪ್ರಶ್ನೆ ಇಟ್ಟೆ: "ಇಂಥ ಪ್ರಕರಣಗಳಲ್ಲಿ ನಾನು ಕೊಟ್ಟ ಮಾಹಿತಿಯ ಆಧಾರದಲ್ಲಿ ಇಲಾಖೆ ಸ್ವಯಂಪ್ರೇರಿತವಾಗಿ ಮುಂದುವರಿಯುವುದು ಸಾಧ್ಯವಿಲ್ಲವೆ?" "ಸಾಧ್ಯ" ಎಂದರು ಅವರು. ಮನಸ್ಸಿಗೆ ಧೈರ್ಯವಾಯಿತು.
ಆರಣ್ಯ ಇಲಾಖೆಗೆ ಕೊಟ್ಟ ದೂರಿನ ಪರಿಣಾಮ: ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ!
ಇಲಾಖೆಯೊಂದಿಗೆ ನನ್ನ ತಕರಾರು ಮುಂದುವರಿಯುತ್ತಿದ್ದಂತೆ, ಪತ್ರಿಕೆಗಳಲ್ಲಿ "ಎಂ ಎಸ್ ಇ ಜಡ್ ಕಂಪೆನಿಯ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ" ಎಂಬ ಸುದ್ದಿ ಪ್ರಕಟವಾಯಿತು. ಮೊದಲೇ ವಿವರಿಸಿದಂತೆ ಸ್ಥಳಕ್ಕೆ ಹೋಗಿ ನೋಡಿಬಂದು ಬಂಟ್ವಾಳದ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದೆ. ಜೊತೆಗೆ ಪತ್ರಿಕಾವರದಿಯನ್ನೂ ಇಟ್ಟಿದ್ದೆ. ಅವರಿಂದ ಉತ್ತರ ಬಂತು:".... ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಸರಕಾರಿ ಜಾಗದಿಂದ ಅನುಮತಿ ಇಲ್ಲದೆ ಸಣ್ಣಪುಟ್ಟ ಗಿಡಮರಗಳನ್ನು ಕಡಿದಿರುವ ಬಗ್ಗೆ ಶ್ರೀ ಸೀತಾರಾಮ ಶೆಟ್ಟಿ..... ಇವರ ವಿರುದ್ಧ..... ತಕ್ಷೀರು ದಾಖಲಿಸಲಾಗಿದೆ"
ಕಾಮಗಾರಿ ನಡೆಸುತ್ತಿರುವುದು ಮಂ ವಿ ಆ ವ ಕಂಪೆನಿ ಎಂಬುದಕ್ಕೆ ನಾನು ಸಾಕ್ಷಿ ಒದಗಿಸಿದ್ದರೂ, ತಕ್ಷೀರು ಬಿದ್ದದ್ದು ಸೀತಾರಾಮ ಶೆಟ್ಟರ ಮೇಲೆ. ಇರಲಿ. ಅದನ್ನು ಮುಂದೆ ನೋಡೋಣ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು "ಸಣ್ಣ ಪುಟ್ಟ ಗಿಡಮರಗಳ್ನ್ನು ಕಡಿಯಲಾಗಿದೆ" ಎಂದು ಸ್ವತಃ ಅರಣ್ಯಾಧಿಕಾರಿಯೇ ಹೇಳುತ್ತಿರುವುದು! ಯಾವ ಆಧಾರದಲ್ಲಿ ಅವರಿದನ್ನು ಹೇಳುತ್ತಿದ್ದಾರೆ? ಆ ಸ್ಥಳದಲ್ಲಿ ದೊಡ್ದ ಮರಗಳಿದ್ದು ಅವುಗಳನ್ನು ಯಾರಾದರೂ ಅಲ್ಲಿಂದ ಸಾಗಿಸಿರಬಾರದು ಯಾಕೆ? ಈ ಬಗ್ಗೆ ತನಿಖೆಯನ್ನು ಯಾರು ಮಾಡಿದ್ದಾರೆ? ಯಾರ ಮೇಲೆ ತಕ್ಷೀರು ದಾಖಲಿಸಿದ್ದಾರೋ ಅವರು "ಸಣ್ಣ ಪುಟ್ಟ ಗಿಡಮರಗಳನ್ನು ಕಡಿದಿದ್ದಾರೆ" ಎಂದು ಹೇಳುವ ಮೂಲಕ ಅವರು ಅಂಥಾ ದೊಡ್ಡ ಅಪರಾಧವನ್ನೇನೂ ಮಾಡಿಲ್ಲ ಎಂದು ಸೂಚಿಸಿ, ತಮ್ಮನ್ನೂ, ಯಾರಮೇಲೆ ತಕ್ಷೀರು ದಾಖಲಾಗಿದೆಯೋ ಅವರನ್ನೂ ಏಕಕಾಲದಲ್ಲಿ ರಕ್ಷಿಸಿಕೊಳ್ಳುವ ಉಪಾಯವಾಗಿ ಇದು ಕಾಣುವುದಿಲ್ಲವೆ?.
ಇನ್ನು "ಕಡಿಯಲಾಗಿದೆ" ಎಂದರೇನರ್ಥ? ನಾವು ತೆಗೆದ ಫೋಟೋಗಳು ಸ್ಪಷ್ಟವಾಗಿ ತೋರಿಸುತ್ತಿವೆ ಅಲ್ಲಿ ಜೆಸಿಬಿ ಬಳಸಿ ಮರಗಳನ್ನು ಬೇರು ಸಮೇತ ಮಗುಚಲಾಗಿದೆ ಎಂಬುದನ್ನು. ಅಲ್ಲಿ ಜೆಸಿಬಿ ಕಾರ್ಯಾಚರಿಸುತ್ತಿರುವುದನ್ನು ಮುಚ್ಚಿ ಹಾಕಲು "ಕಡಿಯಲಾಗಿದೆ" ಎಂಬ ಶಬ್ದವನ್ನು ಅಧಿಕಾರಿ ಬಳಸುತ್ತಿದ್ದಾರೆಯೆ? ಏಕೆಂದರೆ ಕಡಿಯಲಾಗಿದೆ ಎಂದರೆ ಯಾವ ರಗಳೆಯೂ ಇಲ್ಲ. ಜೆಸಿಬಿ ಬಳಸಿ ಉರುಳಿಸಲಾಗಿದೆ ಎಂದರೆ ಜೆಸಿಬಿ ಯಾರದ್ದು, ಅದು ಸ್ಥಳದಲ್ಲಿ ಇತ್ತೆ, ಅದನ್ನು ಯಾಕೆ ಜಪ್ತು ಮಾಡಲಿಲ್ಲ ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕಾಗುತ್ತದೆ. ಕಡಿಯಲಾಗಿದೆ ಎಂದು ಬಿಟ್ಟರೆ ಆ ರಗಳೆಯೇ ಇಲ್ಲ ತಾನೆ?

ಇನ್ನು "ತಕ್ಷೀರಿ"ನ ಕತೆ ಏನು? ತಕ್ಷೀರು ಹಾಕಿಸಿಕೊಂಡ ಶ್ರೀ ಸೀತಾರಾಮ ಶೆಟ್ಟರನ್ನು ನಾನು ಮಾತಾಡಿಸಿದೆ. ಅವರು ಕೃಷಿಕರು, ಜೊತೆಗೆ ಕಾಂಗ್ರೆಸ್ ಪಕ್ಷದವರು. ರಾಜಕೀಯದಲ್ಲಿ ನುರಿತವರು. ಅವರ ಮನೆ ಅಲ್ಲೇ ಹತ್ತಿರ ಇದೆಯಂತೆ. "ತಕ್ಷೀರಿ"ಗೆ ಅವರ ವಿವರಣೆ ಹೀಗೆ: "ಅಲ್ಲಿ ಮರಗಳನ್ನು ಕಡಿದಿದ್ದೇನೆ ಎಂದು ನನಗೆ ದಂಡ ಹಾಕುತ್ತಾರೆ. (ನಾನು ಒಂದು ಮರವನ್ನೂ ಕಡಿಯಲಿಲ್ಲ.) ಅಷ್ಟನ್ನು ನಾನು ಕಟ್ಟಬೇಕು. ನಂತರ ಫೈಲು ಮೇಲೆ ಡಿ ಎಫ್ ಓಗೆ ಹೋಗುತ್ತದೆ. ಅಲ್ಲಿ ಅವರು "ದಂಡ ಹಾಕಿದ್ದು ಕಡಿಮೆಯಾಯಿತು" ಅಂತ ಹೇಳಿ ಸ್ವಲ್ಪ ಜಾಸ್ತಿ ದಂಡ ಹಾಕುತ್ತಾರೆ. ಅಷ್ಟು ದಂಡ ಕಟ್ಟಿದರಾಯಿತು". ಇಷ್ಟಾದರೆ ತಕ್ಷೀರಿನ ಕತೆ ಮುಗಿಯಿತು! ಉರುಳಿದ ಮರಗಳ ಕತೆ ಏನು? ಬದಲಿಗೆ ಬೇರೆ ಸಸಿಗಳನ್ನು ಎಲ್ಲಿಯಾದರೂ ನೆಡುತ್ತಾರೆಯೆ? ಯಾರು ಕೇಳುವವರು? ( ಈ ಪ್ರಕರಣದಲ್ಲಿ ನಾನು ಕೇಳಿದ್ದೇನೆ. ನೋಡೋಣ ಏನು ಉತ್ತರ ಬರುತ್ತದೋ ಅಂತ)
ಕಾಣದ ಕೈಯ ಕಾರುಭಾರು?
ಪತ್ರಿಕಾವರದಿ ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಂ ಎಸ್ ಇ ಜಡ್ ಕಂಪೆನಿ ಎಂದು ಸ್ಪಷ್ಟವಾಗಿಯೇ ಹೇಳಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ಸ್ವಲ್ಪ ಸ್ಥಳ ಪರಿಶೀಲನೆ ಮಾಡಿದ್ದರೆ, ಮರ ಉರುಳಿಸಿರುವುದಲ್ಲದೆ, ಬಂಡೆಗಳನ್ನು (ಬಹುಶಃ ಡೈನಮೈಟ್ ಬಳಸಿ) ಒಡೆದಿರುವುದು, ಯಂತ್ರಗಳ ಮೂಲಕ ಹೊಳೆಯ ಬದಿಯಲ್ಲಿ ಗುಂಡಿ ತೆಗೆಯುತ್ತಿರುವುದು ಇದೆಲ್ಲ ಕಂಡೇ ಕಾಣುತ್ತಿತ್ತು.



ಸೀತಾರಾಮ ಶೆಟ್ಟರಂಥ ರೈತರೊಬ್ಬರು ನಡೆಸಿರುವ ಕಾರುಭಾರು ಇದಲ್ಲ ಎಂದು ಯಾರಿಗೂ ಅರ್ಥವಾಗುವಂತಿತ್ತು. ನಮ್ಮ ಅರಣ್ಯ ಅಧಿಕಾರಿಗಳಿಗೆ, ಪಾಪ, ಇದ್ಯಾವುದೂ ಕಾಣಲೇ ಇಲ್ಲ! ಯಾವ ಶಕ್ತಿ ಇದೆಲ್ಲ ಕಾಣದಂತೆ ಅವರ ಕಣ್ಣು ಕಟ್ಟಿತೋ? ಇದನ್ನೆಲ್ಲ ನೋಡದಂತೆ ಅವರನ್ನು ತಡೆಹಿಡಿಯಿತೋ? ಸೀತಾರಾಮ ಶೆಟ್ಟರ ಮೇಲೆ ತಕ್ಷೀರು ಬಿತ್ತೇ ಬಿತ್ತು.
ವೃಕ್ಷವನು ಕಡಿದವನು ಭಿಕ್ಷೆಯನು ಬೇಡುವನು
ಇದೊಂದು ಅರಣ್ಯ ಇಲಾಖೆಯ ನುಡಿಮುತ್ತು. ಎಂ ಎಸ್ ಇ ಜಡ್ ಕಂಪೆನಿ ತನ್ನ ಪೈಪ್ ಲೈನ್ ಕಾಮಗಾರಿಗಾಗಿ ಮರಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದೂ, ಮರಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದೂ ನಾನು ಸಾಕಷ್ಟು ಮೊದಲೇ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೆ. ಸಾಕಷ್ಟು ಪತ್ರಗಳನ್ನು ಬರೆದಿದ್ದೆ. ಕಂಪೆನಿ ಕರೆದಿದ್ದ ಟೆಂಡರಿನ ಪ್ರತಿ, ಅದು ಪೈಪುಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರುವುದರ ದಾಖಲೆ ಇದೆಲ್ಲವನ್ನೂ ಅವರ ಗಮನಕ್ಕೆ ತಂದಿದ್ದೆ. ಇಷ್ಟು ಮಾಡಿದ್ದಕ್ಕೆ ಇಲಾಖೆ ನನ್ನನ್ನು ಅಭಿನಂದಿಸಲು ಮರೆಯಲಿಲ್ಲ. ಆದರೆ ಮಾಡಬೇಕಾದ ಕೆಲಸ ಮಾತ್ರ ಮಾಡಲಿಲ್ಲ. ದೇಶದ ದುರದೃಷ್ಟ, ಅಧಿಕಾರಿಗಳಿಗೆ ಮರಗಳ ರಕ್ಷಣೆಗಿಂತ ಇಲಾಖೆಯ ಪ್ರತಿಷ್ಠೆಯ ರಕ್ಷಣೆ ಹೆಚ್ಚು ಮುಖ್ಯವಾಯಿತು. ಹೀಗಾಗಿ ಬೊಳ್ಳಾಜೆಯ ಹಲವು ಮರಗಳು ಅಕಾಲ ಮರಣಕ್ಕೀಡಾದವು. ಅರಣ್ಯ ಅಧಿಕಾರಿಗಳ ಪ್ರತಿಷ್ಠಾಪೂಜಕ ನಿಲುವೇ ಈ ಮರಗಳ ಸಾವಿಗೆ ನೇರ ಕಾರಣ ಹೊರತು ಬೇರೇನೂ ಅಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಭಿಕ್ಷೆ ಬೇಡಬೇಕಾದವರು ಯಾರು ಎಂದು ಅವರೇ ತೀರ್ಮಾನಿಸಲಿ.ಇನ್ನು ಮುಂದೆ ಕಂಪೆನಿ ನಾಶ ಮಾಡಲಿರುವ ಮರಗಳನ್ನಾದರೂ ಉಳಿಸಲು ಕ್ರಮ ಕೈಗೊಂಡು ತಮ್ಮ ನುಡಿಮುತ್ತಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲಿ
ಸಣ್ಣ ನೀರಾವರಿ ವಿಭಾಗ ಎಂಬ ಚಂಡಿ ಕಂಬಳಿ
ಅರಣ್ಯ ಇಲಾಖೆಯ ಕತೆ ಹೀಗಾದರೆ ಸಣ್ಣ ನೀರಾವರಿಯದು ಇನ್ನೊಂದೇ ಕತೆ. ಪೈಪ್ ಲೈನ್ ಕಾಮಗಾರಿಯ ಕುರಿತಂತೆ ಬಹು ಮುಖ್ಯ ಜವಾಬ್ದಾರಿ ಇರುವುದು ಇದೇ ಇಲಾಖೆಗೆ. ಏಕೆಂದರೆ ಸರಕಾರಿ ಆದೇಶ ಸ್ಪಷ್ಟವಾಗಿ ಹೇಳುತ್ತದೆ: "ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು"
ನಾನು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಅಭಿಯಂತರರಿಗೆ ("ಅಭಿಯಂತರ" ಎಂದು ಬರೆಯುವಾಗೆಲ್ಲ ನನಗೆ "ಬೆಂತರ" ಶಬ್ದ ನೆನಪಾಗುತ್ತದೆ. ಬೆಂತರ ಎಂದರೆ ಭೂತ. ನಿಜವಾಗಿ ಅಭಿಯಂತ ಎಂದಿರಬೇಕಾದ್ದನ್ನು ನಮ್ಮ ಅಧಿಕಾರಿಗಳು ಅಭಿಯಂತರ ಮಾಡಿಕೊಂಡಿದ್ದಾರೆ! ನನ್ನ ಅಭ್ಯಂತರ ಇಲ್ಲ ಅನ್ನಿ.) ಮಾಹಿತಿ ಹಕ್ಕಿನಲ್ಲಿ ಅರ್ಜಿ ಕೊಟ್ಟೆ: "ಸರಕಾರಿ ಆದೇಶ ಹೀಗೆ ಹೇಳುತ್ತಿದೆ; ನೀವು ಎಂ ಎಸ್ ಇ ಜಡ್ ನೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಮುಚ್ಚಳಿಕೆ ಬರೆಸಿಕೊಂಡಿದ್ದೀರಾ? ಏಕೆಂದರೆ ಕಾಮಗಾರಿ ಪ್ರಾರಂಭವಾಗಿಬಿಟ್ಟಿದೆ" ಅಲ್ಲಿಂದ ಉತ್ತರ ಬಂತು: "... ಮಂಗಳೂರು ಎಸ್ ಇ ಜಡ್ ಕಂಪೆನಿಯೊಂದಿಗೆ ಈ ವಿಭಾಗದಿಂದ ಯಾವುದೇ ಕರಾರನ್ನು ಕೈಗೊಂಡಿರುವುದಿಲ್ಲ. ಹಾಗೂ ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಾರದಿರುವ ಕಾರಣ ಈ ವಿಷಯದಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ"
ನಿಮ್ಮ ಹೆಚ್ಚಿನ ಪತ್ರಗಳಿಗೆ ಇಲಾಖೆಯಿಂದ ಇಂಥ ಉತ್ತರ ಬರದಿದ್ದರೆ ಅದು ಸರಕಾರಿ ಇಲಾಖೆಯೇ ಅಲ್ಲ! "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀವು ಅಲ್ಲಿ ಹೋಗಿ, ಇಲ್ಲಿ ಕೇಳಿ" ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳೇ ನಮ್ಮ ಎಲ್ಲ ಸರಕಾರಿ ಕಚೇರಿಗಳಲ್ಲಿ ತುಂಬಿ ಹೋಗಿದ್ದಾರೆ. ಇದನ್ನು ತಿಳಿದೇ ಮಾಹಿತಿ ಹಕ್ಕು 2005 ಕಾನೂನು "ಅರ್ಜಿಯು ನಿಮಗೆ ಸಂಬಂಧಪಡದೆ ಇದ್ದಲ್ಲಿ ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಎಂದು ವಿಧಿಸಿ ಇಂಥ ಅಧಿಕಾರಿಗಳ ಹೆಡೆಮುರಿ ಕಟ್ಟಿದೆ. ಆದರೆ ಹೆಚ್ಚಿನ ಅಧಿಕಾರಿಗಳಿಗೆ, ಅವರು ಯಾವ ಮಟ್ಟದ ಅಧಿಕಾರಿಯೇ ಆಗಿರಲಿ, ಈ ನಿಯಮದ ಅರಿವೇ ಇಲ್ಲ.
ಸಣ್ಣ ನೀರಾವರಿ ವಿಭಾಗಕ್ಕೆ ಸರಕಾರದ ಅದೇಶವನ್ನು ಉದ್ಧರಿಸಿ ಪುನಃ ಬರೆದೆ: "ನಿಮಗೆ ಸಂಬಂಧಪಡದಿದ್ದರೆ ಯಾರಿಗೆ ಸಂಬಂಧ ಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ. ನೀವು ಹಾಗೆ ಮಾಡದಿದ್ದಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಕೊಡುವುದು ನನಗೆ ಅನಿವಾರ್ಯವಾಗುತ್ತದೆ. ನಿಮ್ಮ ಉತ್ತರಕ್ಕಾಗಿ ಇನ್ನೂ ಹತ್ತು ದಿನಗಳು ಕಾಯುತ್ತೇನೆ" ಎಂದು.
ಈ ಲೇಖನ ಬರೆಯುತ್ತಿದ್ದಂತೆ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರರ ಉತ್ತರ ಬಂದಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗದ ಕಾರ್ಯಕಾರಿ ಎಂಜಿನಿಯರರಿಗೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ನನಗೆ ಹೀಗೆ ಸಲಹೆ ನೀಡಿದ್ದಾರೆ: "... ಈ ಕಛೇರಿಗೆ ವಿಷಯವು ಯಾವ ಕಛೇರಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಿಖರವಾಗಿ ತಿಳಿದಿರದ ಕಾರಣ ಜಲಸಂಪನ್ಮೂಲ ಇಲಾಖೆಯೊಡನೆ ಸಂಪರ್ಕಿಸುವಂತೆ ಕೋರಿದೆ".
"ನಮಗೆ ಗೊತ್ತಿಲ್ಲ, ನಮ್ಮನ್ನು ಕೇಳಬೇಡಿ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಓ ಅಗೋ ಅವರನ್ನು ಕೇಳಿನೋಡಿ" ಇಂಥ ಉತ್ತರಗಳು ನಮ್ಮ ಅಧಿಕಾರಿಗಳಿಗೆ ರಕ್ತಗತವಾಗಿ ಹೋಗಿರುವುದಕ್ಕೆ ಮತ್ತೊಂದು ಉದಾಹರಣೆ ಇದು. ಗೊತ್ತಿಲ್ಲ ಸರಿ. ತಿಳಿದುಕೊಳ್ಳಲು ಸಾಧ್ಯವಿಲ್ಲವೆ? ಮಂಗಳೂರಿನ ಕಾರ್ಯಕಾರಿ ಎಂಜಿನಿಯರರ ಕಛೇರಿಯಲ್ಲಿ ಫೋನ್ ಸೌಲಭ್ಯ ಇಲ್ಲವೆ? (ಈಗಂತೂ ಸರಕಾರವೇ ತನ್ನ ಹಲವು ಅಧಿಕಾರಿಗಳಿಗೆ ಮೊಬೈಲ್ ಫೋನ್ ಸೌಲಭ್ಯ ಒದಗಿಸಿರುವುದಾಗಿ ಕೇಳಿದ್ದೇನೆ). ತಮ್ಮದೇ ಇಲಾಖೆಯಲ್ಲಿ ಯಾರನ್ನು ವಿಚಾರಿಸಿದರೆ ಈ ವಿಷಯ ತಿಳಿಯಬಹುದು ಎಂಬುದೂ ಅವರಿಗೆ ಗೊತ್ತಿಲ್ಲವೆ? ಕೆಲಸ ಮಾಡದೆ ಇರುವುದಕ್ಕೆ ಕಾರಣ ಹುಡುಕುವ ವಿಷಯದಲ್ಲಿ ಗೌರವ ಡಾಕ್ಟರೇಟ್ ಇದ್ದರೆ ಅದನ್ನು ಮೊದಾಲು ಇಂಥವರಿಗೆ ಕೊಡಬಹುದೆಂದು ಕಾಣುತ್ತದೆ.
ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ನನಗೆ ಸಲಹೆ ಕೊಡುತ್ತಿದ್ದಾರಷ್ಟೆ? ಯಾವ ಜಲಸಂಪನ್ಮೂಲ ಇಲಾಖೆ? ಅದರ ವಿಳಾಸ ಏನು? ಸಂಪರ್ಕಿಸಬೇಕಾದ ಅಧಿಕಾರಿ ಯಾರು? "ಜಲ ಸಂಪನ್ಮೂಲ ಇಲಾಖೆ" ಎಂದು ವಿಳಾಸ ಬರೆದು ಅಂಚೆಗೆ ಹಾಕಿದರೆ ಅಂಚೆಯವರು ಅದನ್ನು ಯಾರಿಗೆ ತಲುಪಿಸಬೇಕು? ಇಷ್ಟಕ್ಕೂ ಅವರು ಹೇಳುತ್ತಿರುವ ಜಲಸಂಪನ್ಮೂಲ ಇಲಾಖೆಯನ್ನು ಅವರೇ ಸಂಪರ್ಕಿಸಿ ನನಗೆ ಮಾಹಿತಿ ಯಾಕೆ ಕೊಡಬಾರದು?
ಅದಿರಲಿ. ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸಬೇಕೆಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಕಳೆದ ಜೂನ್ ತಿಂಗಳಿನಲ್ಲಿಯೇ, ಈ ವಿಷಯದಲ್ಲಿ ಮಾಹಿತಿ ಕೋರಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಅರ್ಜಿ ಹಾಕಿದ್ದೆ. ಅವರ ಪರವಾಗಿ ಬೇರೊಬ್ಬರು ಅಧಿಕಾರಿ ಹೀಗೆ ಉತ್ತರ ಬರೆದರು: ".......ತಾವು ಅಪೇಕ್ಷಿಸಿರುವ.... ಮಾಹಿತಿಯನ್ನು ಮಂಗಳೂರು ವಿಶೇಷ ಅರ್ಥಿಕ ವಲಯ ಸಂಸ್ಥೆಯಿಂದಲೇ ನೇರವಾಗಿ ಪಡೆದುಕೊಳ್ಳಬಹುದೆಂದು ಈ ಮೂಲಕ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ". ಇವರು ಕರ್ನಾಟಕ ಸರಕಾರದ ಇಲಾಖಾ ಕಾರ್ಯದರ್ಶಿ. ಬಹುಶಃ ಐ.ಎ.ಎಸ್. ಮಾಡಿರುವವರು. ಇವರಿಗೆ ಮಾಹಿತಿ ಹಕ್ಕಿನ ಪಾಠ ನನ್ನಂಥವರು ಮಾಡಬೇಕಾಗಿದೆ. ಏನು ಮಾಡುವುದು?
"ಸಾರ್ವಜನಿಕ ಸೇವಕ"ರಾದ ಈ ಆಧುನಿಕ ಮಹಾರಾಜರುಗಳೊಂದಿಗೆ ವ್ಯವಹರಿಸುವುದು ಕಷ್ಟ, ಕಡುಕಷ್ಟ.
ಸೆರೆ ಬಿಟ್ಟಲ್ಲಿ ಉಳಿ ಇಳಿಸುವ ಚಾಣಕ್ಯ: ಎಂ ಎಸ್ ಇ ಜಡ್ ಕಂಪೆನಿ
ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ ನೀರೆತ್ತಲು ಸರ್ಕಾರ ಕಂಪೆನಿಗೆ ಅನುಮತಿ ನೀಡಿದ್ದು 2007ರಲ್ಲಿ. ಆಗ ಕಂಪೆನಿ ನಾಲ್ಕು ಸಾವಿರ ಎಕ್ರೆ ಜಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಯೋಜನೆ ಇತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಸರಕಾರ 1998 ಎಕ್ರೆ ಜಮೀನನ್ನು ಡಿನೋಟಿಫೈ ಮಾಡಿದೆ. ಹೀಗಾಗಿ ಈಗ ಎರಡುಸಾವಿರ ಚಿಲ್ಲರೆ ಎಕ್ರೆಯಲ್ಲಿ ಮಾತ್ರ ಕಂಪೆನಿಯ ಉದ್ಯಮಗಳು ಸ್ಥಾಪನೆಗೊಳ್ಳಬೇಕು. ಜಮೀನು ನಾಲ್ಕು ಸಾವಿರ ಎಕ್ರೆ ಎಂದಿದ್ದ ಕಾಲದಲ್ಲಿ ಕಂಪೆನಿ ತನ್ನ ನೀರಿನ ವ್ಯವಸ್ಥೆಯ ಚಿತ್ರಣವನ್ನು ಹೀಗೆ ನೀಡಿತ್ತು:
ಒಟ್ಟು ಅಗತ್ಯ: 45 ಎಂಜಿಡಿ;
ಪೂರೈಕೆ:
ಮಂಗಳೂರು ಕೊಳಚೆ ನೀರು ಶುದ್ಧೀಕರಣದಿಂದ 18 ಎಂಜಿಡಿ,
ಮಳೆನೀರು ಸಂಗ್ರಹದಿಂದ 12 ಎಂಜಿಡಿ
ನೇತ್ರಾವತಿ, ಗುರುಪುರ ನದಿಗಳಿಂದ 15 ಎಂಜಿಡಿ.
ಬದಲಾದ ಸನ್ನಿವೇಶದಲ್ಲಿ ಇದರ ಅರ್ಧ ನೀರು ಹೇಗೂ ಸಾಕಷ್ಟೆ. ಎಂದರೆ 22.5 ಎಂಜಿಡಿ. ಇಷ್ಟು ನೀರನ್ನು ಕೊಳಚೆನೀರು ಶುದ್ಧೀಕರಣದಿಂದ ಮತ್ತು ಮಳೆನೀರು ಸಂಗ್ರಹದಿಂದ ಧಾರಾಳವಾಗಿ ಒದಗಿಸಿಕೊಳ್ಳಬಹುದು. ಹಾಗಾಗಿ ನಿಜವಾಗಿ ನೇತ್ರಾವತಿಯಿಂದ ನೀರೆತ್ತುವ ಅಗತ್ಯವೇ ಕಂಪೆನಿಗೆ ಇಲ್ಲ. ಹೀಗಿದ್ದರೂ ಕಂಪೆನಿ ತನ್ನ ಕೈಗಾರಿಕಾ ನೆಲೆಯಿಂದ ಸುಮಾರು 35 ಕಿ.ಮೀ. ದೂರಕ್ಕೆ 1400 ಮಿ.ಮೀ. ವ್ಯಾಸದ ಪೈಪ್ ಲೈನ್ ಅಳವಡಿಸುವ ಕೋಟಿಗಟ್ಟಲೆ ರೂಪಾಯಿ ಕಾಮಗಾರಿಯನ್ನು ಪ್ರಾರಂಭಿಸಿಬಿಟ್ಟಿದೆ. ಈ ವೃಥಾ ಖರ್ಚಿನ ಕೆಲಸವನ್ನು ಕಂಪೆನಿ ಯಾಕಾದರೂ ಕೈಗೊಂಡಿರಬಹುದು?
ಕಾರಣಗಳನ್ನು ಊಹಿಸಲು ಸಾಧ್ಯವಿದೆ. ನಮ್ಮ ನೇತ್ರಾವತಿ ನದಿಯ ನೀರು - ಗಾದೆಯೇ ಇದೆಯಲ್ಲ, ಹೊಳೆನೀರಿಗೆ ದೊಣೆ ನಾಯಕನ ಅಪ್ಪಣೆಯೆ? ಅಂತ - ಅಕ್ಷರಶಃ ಹೇಳುವವರು ಕೇಳುವವರೇ ಇಲ್ಲದ ವಸ್ತುವಾಗಿಬಿಟ್ಟಿದೆ. ಸಾಪೇಕ್ಷವಾಗಿ ಉತ್ತಮ ಗುಣಮಟ್ಟದ್ದು ಎಂದೇ ಹೇಳಬಹುದಾದ ನೇತ್ರಾವತಿ ನೀರಿನ ವಿಷಯದಲ್ಲಿ ಸರಕಾರ "ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ" ಎಂಬಂತೆ ನಡೆದುಕೊಳ್ಳುತ್ತಿರುವುದು ಕಂಪೆನಿಯ ಪಾಲಿಗೆ ದೊಡ್ಡ ವರದಾನವಾಗಿದೆ. ಒಂದು ಸಲ ಹೇಗಾದರೂ ಮಾಡಿ ನದಿಯಿಂದ ಪೈಪ್ ಲೈನಿಗೆ ನೀರು ಹತ್ತಿಸಿದರಾಯಿತು; ನಂತರ ನೇತ್ರಾವತಿಯನ್ನು ಮುಡಿ ಹಿಡಿದು ತನ್ನ ಅರಮನೆಗೆ ಎಳೆದುಕೊಂಡು ಹೋಗಬಹುದು, ರಕ್ಷಣೆಗೆ ಬರುವವರು ಯಾರೂ ಇಲ್ಲ ಎಂದು ಕಂಪೆನಿಗೆ ಗೊತ್ತಿದೆ. ನಿರಂತರವಾಗಿ ಧಂಡಿಯಾಗಿ ಉತ್ತಮ ಗುಣಮಟ್ಟದ ನೀರು ಅತ್ಯಂತ ಕಡಿಮೆ ದರಕ್ಕೆ ಸಿಗುವುದಾದರೆ ಯಾರಿಗೆ ಬೇಡ? ಆಫೀಸರುಗಳ ಮನೆಯಲ್ಲಿ ನಾಲ್ಕು ನಾಲ್ಕು ಬಚ್ಚಲು ಮನೆಗಳನ್ನು ಕಟ್ಟಿಸಬಹುದು, ಒಂದೊಂದರಲ್ಲೂ ಟಬ್ ಅಳವಡಿಸಬಹುದು, ಕ್ಯಾಂಪಸ್ಸಿಗೆ ಬಂದವರ ಕಣ್ಣು ತಂಪಾಗುವಂತೆ ಅಲ್ಲಲ್ಲಿ ಸರೋವರಗಳನ್ನೇ ನಿರ್ಮಿಸಬಹುದು, ನಿರಂತರ ನೀರು ಚಿಮ್ಮುವ ಕಾರಂಜಿಗಳನ್ನು ನಿರ್ಮಿಸಿ, ರಾತ್ರಿವೇಳೆ ಅವುಗಳಿಗೆ ದೀಪಾಲಂಕಾರ ಮಾಡಬಹುದು - ಅಲ್ಲವೆ?
ಯಾಕೆ ಹೇಳುತ್ತಿದ್ದೇನೆಂದರೆ, ಒಮ್ಮೆ ನೀರು ಹೋಗಲು ಶುರುವಾಯಿತೆಂದರೆ ಕತ್ತಿ, ಕುಂಬಳಕಾಯಿ ಎರಡನ್ನೂ ಕಂಪೆನಿಯ ಕೈಯಲ್ಲೇ ಕೊಟ್ಟುಬಿಡುತ್ತದೆ ಸರಕಾರ. ಕಂಪೆನಿ ಎತ್ತುವ ನೀರಿಗೆ ಮೀಟರ್ ಹಾಕುವುದು ಸರಕಾರವಲ್ಲ, ಕಂಪೆನಿಯೇ! ಎಲ್ಲಾದರೂ ಕೇಳಿದ್ದೀರಾ ಇಂಥ ಅವಿವೇಕವನ್ನು? ಅಂಗಡಿಗೆ ಹೋದರೆ ತಕ್ಕಡಿ ವ್ಯಾಪಾರಸ್ಥನದು; ಕರೆಂಟಿನ ಮೀಟರ್ ಮೆಸ್ಕಾಮಿನದು; ದೂರವಾಣಿ ಮೀಟರ್ ಇಲಾಖೆಯದು. ಕರ್ನಾಟಕ ಸರ್ಕಾರ ಮಾತ್ರ ನೀರಿನ ಮೀಟರನ್ನು ಹಾಕಲು, ನೋಡಿಕೊಳ್ಳಲು ಕಂಪೆನಿಗೇ ವಹಿಸಿಬಿಡುತ್ತದೆ. ನಂತರ ಕಂಪೆನಿ ಕೊಟ್ಟದ್ದೇ ಲೆಕ್ಕ, ಕಟ್ಟಿದ್ದೇ ದುಡ್ಡು!
"ಸರಕಾರ ಇಂತಿಷ್ಟೇ ನೀರು ಎತ್ತಬೇಕೆಂದು ವಿಧಿಸಿದೆ, ಅದಕ್ಕಿಂತ ಜಾಸ್ತಿ ನೀರು ನಾವು ಎತ್ತುವಂತೆಯೇ ಇಲ್ಲ, ನೀರಿನ ಮೀಟರನ್ನು ಸರಕಾರಿ ಅಧಿಕಾರಿಗಳು ಆಗಿಂದಾಗ್ಗೆ ತನಿಖೆ ಮಾಡುತ್ತಾರೆ, ನೀವು ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ" ಎಂದು ಕಂಪೆನಿ ನನ್ನ ಮಾತನ್ನು ತಳ್ಳಿಹಾಕಬಹುದು. ಹಾಗಿದ್ದರೆ ಎಷ್ಟು ನೀರೆತ್ತಲು ಸರಕಾರ ಅನುಮತಿ ಕೊಟ್ಟಿದೆಯೋ ಅಷ್ಟೇ ಸಾಮರ್ಥ್ಯದ ಪೈಪ್ ಲೈನ್ ಹಾಕಬಹುದಲ್ಲ? ನೇತ್ರಾವತಿಯಿಂದ ಅನುಮತಿ ಇರುವುದು ನಿಜವಾಗಿ 12.5 ಎಂಜಿಡಿ ಮಾತ್ರ. ಹಾಗಿರುವಾಗ ಪೈಪ್ ಲೈನ್ ಸಹ ಅಷ್ಟೇ ಸಾಮರ್ಥ್ಯದ್ದಿರಬೇಕಲ್ಲವೆ? ಕಂಪೆನಿ ಹಾಕುತ್ತಿರುವ ಪೈಪ್ ಲೈನ್ ಸಾಮರ್ಥ್ಯ ಎಷ್ಟು?
ಈ ಪ್ರಶ್ನೆ ನಿಜವಾಗಿ ನನ್ನ ತಲೆಗೆ ಹೋಗಿರಲಿಲ್ಲ. ಬೇರೆ ಯಾವುದೋ ಒಂದು ದಾಖಲೆಗಾಗಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದೆ. ಅವರು ಆ ದಾಖಲೆಯನ್ನು ಕೊಡುವಾಗ ಜೊತೆಗೆ ಇನ್ನೊಂದು ದಾಖಲೆಯನ್ನು ಲಗತ್ತಿಸಿದ್ದರು. ಆ ಇನ್ನೊಂದು ದಾಖಲೆ ಇಲಾಖೆ ಕಂಪೆನಿಗೆ ಮೂಲರಪಟ್ನದಲ್ಲಿ ಪೈಪ್ ಲೈನನ್ನು ಗುರುಪುರ ನದಿ ದಾಟಿಸಲು ಕೊಟ್ಟ ಅನುಮತಿಯಾಗಿತ್ತು. ಅದರಲ್ಲಿ ಸ್ಪಷ್ಟವಾಗಿ ಹೇಳಿತ್ತು: ಕಂಪೆನಿಗೆ 30 ಎಂಜಿಡಿ ಸಾಮರ್ಥ್ಯದ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು!
ನಾನು ಕೂಡಲೇ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೇಳಿದೆ: ಇದು ಹೇಗೆ ಸಾಧ್ಯ? ಎಂದು. ಅವರ ಉತ್ತರ ಎಂದಿನ ಸರಕಾರಿ ಶೈಲಿಯಲ್ಲಿ: ತಾಂತ್ರಿಕ ಇಲಾಖೆಯ ಶಿಫಾರಸಿನಂತೆ ನಾವು ಮಾಡಿದ್ದೇವೆ (ಎಂದರೆ "ನಾವು ಜವಾಬ್ದಾರರಲ್ಲ"). ತಾಂತ್ರಿಕ ಇಲಾಖೆಗೆ ಬರೆದೆ. ಸುಮಾರು ಒಂದು ತಿಂಗಳಾದರೂ ಉತ್ತರ ಕೊಡಲಿಲ್ಲ. ಮೊನ್ನೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದ್ದೇನೆ. ಏನು ಹೇಳುತ್ತಾರೋ ನೋಡೋಣ.
ಅದಿರಲಿ, ಕಂಪೆನಿ ಎಷ್ಟು ಪ್ರಮಾಣದ ನೀರಿಗೆ ಹೊಂಚು ಹಾಕುತ್ತಿದೆ ಎಂಬುದಂತೂ ಇದರಿಂದ ಸ್ಪಷ್ಟ ತಾನೆ? ಮಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವ ಮಹಾ ನಗರ ಪಾಲಿಕೆ ಈ ವಿಷಯದಲ್ಲಿ ಮೊದಲು ಆಸಕ್ತಿ ತೆಗೆದುಕೊಳ್ಳಬೇಕಿತ್ತು. ಎಂ ಎಸ್ ಇ ಜಡ್ ಕಂಪೆನಿಯ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಆದರೆ, ಅದು ಹೊಸದೊಂದು ಅಣೆಕಟ್ಟು ನಿರ್ಮಿಸಿ ಮಂಗಳೂರಿಗರಿಗೆ ನೀರು ಕೊಡುವ ಉತ್ಸಾಹದಲ್ಲಿ, ತನ್ನ ನೀರಿನ ಮೂಲಕ್ಕೇ ಕನ್ನ ಬೀಳುತ್ತಿರುವುದನ್ನು ಕಾಣುತ್ತಿಲ್ಲ. ಈಗಲಾದರೂ ಏನಾದರೋ ಮಾಡುತ್ತದೋ ನೋಡೋಣ.
ಮಂಗಳೂರಿನ, ನೇತ್ರಾವತಿ ನೀರು ಕುಡಿಯುತ್ತಿರವ ಜನ ಈ ವಿದ್ಯಮಾನಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆಂದು ಆಶಿಸುತ್ತೇನೆ.

ಭಾನುವಾರ, ಜೂನ್ 12, 2011

ನೇತ್ರಾವತಿ ತಿರುವು ಯೋಜನೆ: ಎತ್ತಿನಹೊಳೆಯಿಂದ ಪ್ರಾರಂಭ?

ಕಳೆದ ವರ್ಷದ (2010) ಕರ್ನಾಟಕ ಸರ್ಕಾರದ ಬಜೆಟ್ಟಿನಲ್ಲಿ ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರನ್ನು ತಿರುಗಿಸುವ ಯೋಜನೆಯ ಪ್ರಸ್ತಾವವಿತ್ತು. ಈವರೆಗೂ ನೇತ್ರಾವತಿಯನ್ನು ತಿರುಗಿಸುವ ಮಾತಾಡುತ್ತಿದ್ದವರು ಈಗ ಎತ್ತಿನಹೊಳೆ ತಿರುಗಿಸುವ ಬಗ್ಗೆ ಮಾತಾಡಲು ಶುರು ಮಾಡಿದ್ದರು. ಬಜೆಟ್ಟಿನಲ್ಲಿ ಹುಡುಕಿ ನೋಡಿದಾಗ ಅಲ್ಲಿ ಹೀಗಿತ್ತು:
"107) ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ. ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."

ಈ ಯೋಜನೆಯ ಮಾಹಿತಿ ಕೇಳಿ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮಕ್ಕೆ ಅರ್ಜಿ ಹಾಕಿದೆ. ಬೆಂಗಳೂರಿನವರು ಅದನ್ನು ಚಿತ್ರದುರ್ಗದ ಕನೀನಿನಿಗೆ ಕಳಿಸಿದರು. ಅಂತೂ ನನಗೆ ಶಿರಾದ ಕನೀನಿನಿಯವರಿಂದ ಮಾಹಿತಿ ಶುಲ್ಕ ಕಳಿಸಲು ಪತ್ರ ಬಂತು. ಅಲ್ಲಿಂದ ಬಂದ ಮಾಹಿತಿಯಲ್ಲಿ ವಿವರಣೆಯೊಂದಿಗೆ ಕೋಷ್ಟಕಗಳು, ನಕ್ಷೆಗಳು ಎಲ್ಲವೂ ಇವೆ. ಈ ಸಾಧ್ಯತಾ ವರದಿಯನ್ನು ತಯಾರಿಸಿದವರು ಬೆಂಗಳೂರಿನ ಇ ಐ ಟೆಕ್ನಾಲಜೀಸ್ ಪ್ರೈವೇಟ್ ಲಿ. ಎಂಬ ಸಂಸ್ಥೆ. ಮುಂದೆ ವರದಿಯ ಪ್ರಸ್ತುತವಾದ ಭಾಗವನ್ನು ಮಾತ್ರ ಅನುವಾದಿಸಿ ಕೊಟ್ಟಿದ್ದೇನೆ:

ಪಶ್ಚಿಮದ ಸಕಲೇಶಪುರದಿಂದ ಪೂರ್ವದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೆರೆನೀರನ್ನು ತಿರುಗಿಸುವ ಯೋಜನೆ

ಕರ್ನಾಟಕವು ವಿಸ್ತಾರದಲ್ಲಿ ದೇಶದ ಎಂಟನೇ ರಾಜ್ಯ. ಅದರ ವಿಸ್ತಾರ 1,91,976 ಚ.ಕಿ.ಮೀ.ಗಳು. (ಒಂದು ಚದರ ಕಿಲೋ ಮೀಟರ್ ಎಂದರೆ ಸುಮಾರು 247 ಎಕ್ರೆ-ಅನು.) 2001ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆ ಐದು ಕೋಟಿ ಇಪ್ಪತ್ತೆಂಟು ಲಕ್ಷ. (2011ರ ಜನಗಣತಿಯಂತೆ ಇದು ಆರು ಕೋಟಿ ಹನ್ನೊಂದು ಲಕ್ಷ-ಅನು.) ರಾಜ್ಯದ ಮುಖ್ಯ ನದಿಗಳು ವರ್ಷಪೂರ್ತಿ ಹರಿಯುವ ಕೃಷ್ಣಾ, ತುಂಗಾ, ಭದ್ರಾ, ಕಾವೇರಿ ಹಾಗೂ ಹದಿಮೂರು ಪಶ್ಚಿಮ ವಾಹಿನಿ ನದಿಗಳು. (ಪಶ್ಚಿಮವಾಹಿನಿಗಳೆಂದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಇಳಿದು, ಅರಬೀ ಸಮುದ್ರ ಸೇರುವ ನದಿಗಳು. ಉದಾ: ನೇತ್ರಾವತಿ, ಶರಾವತಿ, ಅಘನಾಶಿನಿ ಮುಂತಾದವು-ಅನು.) ರಾಜ್ಯದ ಪೂರ್ವ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಅತಿ ಕಡಿಮೆ ಎಂದರೆ ವರ್ಷಕ್ಕೆ 400 ಮಿ.ಮೀ.ಗಳಾದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದು ವರ್ಷಕ್ಕೆ 6500 ಮಿ.ಮೀ.ವರೆಗೂ ಇದೆ. ಈ ಮಳೆಯ ಪ್ರಮಾಣ ಸಹ ನಂಬಿಕೆಗೆ ಅರ್ಹವಾದದ್ದಲ್ಲ. ಅನೇಕ ಜಿಲ್ಲೆಗಳು, ತಾಲೂಕುಗಳು ಕೇವಲ ಮಳೆನೆರಳಿನ ಪ್ರದೇಶಗಳಾಗಿವೆ. ಇಂಥ ಕಡೆ ನೀರಿನ ತೀವ್ರ ಅಭಾವವಿದೆ. ಈ ಭಾಗಗಳಿಗೆ, ಕೃಷಿಗೆ ಬಿಡಿ, ಕುಡಿಯಲು ನೀರಿನ ವ್ಯವಸ್ಥೆ ಮಾಡುವುದೂ ಒಂದು ದೊಡ್ಡ ಸವಾಲೇ ಸರಿ.

ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು. ಅಗಾಧಪ್ರಮಾಣದಲ್ಲಿ ಅಂತರ್ಜಲಕ್ಕೆ ಕನ್ನ ಹಾಕಿದ್ದರಿಂದಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಿತು. ನೀರಿನ ಗುಣಮಟ್ಟವೂ ಸಹ ಕಡಿಮೆಯಾಯಿತು.
ಈ ದೃಷ್ಟಿಯಿಂದ, ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಹಾನಿಗೊಳಗಾದ ಪ್ರದೇಶಗಳೆಂದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು. ಕರ್ನಾಟಕ ಸರ್ಕಾರವು ಈ ಎರಡು ಜಿಲ್ಲೆಗಳ ನೀರಿನ ಅಗತ್ಯವನ್ನು ಪೂರೈಸಲು ಸೂಕ್ತವೂ, ಸುಸ್ಥಿರವೂ ಆದ ನೀರಿನ ಮೂಲವನ್ನು ಗುರುತಿಸುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ನಿರ್ದೇಶನ ನೀಡಿತು.

ಕರ್ನಾಟಕ ನೀರಾವರಿ ನಿಗಮವು ಇ ಐ ಟೆಕ್ನಾಲಜೀಸ್ ಲಿ., ಬೆಂಗಳೂರು ಇವರಿಗೆ, ಈ ಬಗ್ಗೆ ಒಂದು ಸಾಧ್ಯತಾ ಅಧ್ಯಯನ ಮಾಡಿ, ನೀರಿನ ಮೂಲವನ್ನು ಗುರುತಿಸುವ, ಯೋಜನೆಗೆ ಒಂದು ಪೂರ್ವಭಾವಿ ಚೌಕಟ್ಟನ್ನು ಒದಗಿಸುವ, ಹೆಚ್ಚಿನ ಅಧ್ಯಯನದ ಖರ್ಚನ್ನು ಅಂದಾಜು ಮಾಡುವ ಮುಂತಾದ ಕೆಲಸಗಳನ್ನು ವಹಿಸಿಕೊಟ್ಟಿತು.

1. ಸ್ಥಳ:ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಕರ್ನಾಟಕದ ದಕ್ಷಿಣಪೂರ್ವ ಭಾಗದಲ್ಲಿವೆ. ಇವು ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಗಡಿಗಳನ್ನು ಹಂಚಿಕೊಂಡಿವೆ. ಈ ಎರಡೂ ಜಿಲ್ಲೆಗಳು ಕಾವೇರಿ, ಪಾಲಾರ್ ಹಾಗೂ ಪೆನ್ನಾರ್ ನದಿಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿವೆ. ಈ ಜಿಲ್ಲೆಗಳಿಗೆ ಕಾವೇರಿ ನದಿಯಿಂದ ನೀರು ಪೂರೈಸುವ ಯಾವ ಯೋಜನೆಯೂ ಇಲ್ಲ. ಏಕೆಂದರೆ ಕಾವೇರಿಯ ನೀರು ನೀರಾವರಿ ಹಾಗೂ ದಿನದಿನವೂ ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಮೀಸಲಾಗಿದೆ.
ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೇ ಇರುವ, ನಂಬಲರ್ಹವೂ, ಸುಸ್ಥಿರವೂ ಆದ ನೀರಿನ ಮೂಲವೆಂದರೆ ಪಶ್ಚಿಮ ವಾಹಿನಿ ನದಿಗಳು. ಆದ್ದರಿಂದ ಅಲ್ಲಿಂದ ನೀರನ್ನು ಸಾಗಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ.

2. ಪಶ್ಚಿಮ ವಾಹಿನಿ ನದಿಗಳು:ಕರ್ನಾಟಕದ ಎಲ್ಲ ನದಿಗಳಿಂದ ದೊರೆಯುವ ವಾರ್ಷಿಕ ನೀರಿನ ಪ್ರಮಾಣ 3440 ಟಿಎಂಸಿ (ಟಿಎಂಸಿ ಎನ್ನುವುದನ್ನು ಯಾವಾಗಲೂ ಟಿಎಂಸಿ ಅಡಿ ಅಥವಾ ಟಿಎಂಸಿ ಮೀಟರುಗಳಲ್ಲಿ ಹೇಳಬೇಕು. ಒಂದು ಟಿಎಂಸಿ ಅಡಿ ಎಂದರೆ ಸಾವಿರ ದಶಲಕ್ಷ ಘನ ಅಡಿ ನೀರು ಎಂದರ್ಥ. ಒಂದು ಘನ ಅಡಿ ಎಂದರೆ 28 ಲೀಟರ್ ನೀರು. ಇಲ್ಲಿ ಟಿಎಂಸಿ ಅಡಿ ಎಂದು ಇಟ್ಟುಕೊಳ್ಳಲಾಗಿದೆ.-ಅನು.) ಈ ಪೈಕಿ ಪಶ್ಚಿಮವಾಹಿನಿ ನದಿಗಳದೇ ಸಿಂಹಪಾಲು: 2000 ಟಿಎಂಸಿ ಅಡಿ. ಕಿರಿದಾದ ಸಮುದ್ರತೀರದಲ್ಲಿ ಈ ನದಿಗಳು ಹರಿಯುವುದರಿಂದ, ಇದರ ಹೆಚ್ಚಿನ ಭಾಗ ಯಾವುದೇ ಉಪಯೋಗವಿಲ್ಲದೆ ಸಮುದ್ರವನ್ನು ಸೇರುತ್ತಿದೆ.
ಪಶ್ಚಿಮ ಘಟ್ಟಗಳ ಎತ್ತರವು ಒಡ್ಡುವ ಸವಾಲಿನಿಂದಾಗಿ, ಈ ನೀರನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ತಾಂತ್ರಿಕವಾಗಿಯಾಗಲಿ, ಆರ್ಥಿಕವಾಗಿಯಾಗಲಿ ಸಾಧ್ಯವಲ್ಲ. ಹೀಗಾಗಿ ಇಲ್ಲಿ ಪಶ್ಚಿಮ ಘಟ್ಟಗಳ ಎತ್ತರ ಪ್ರದೇಶದಿಂದ ಕೇವಲ ಶೇ. 0.54 ಭಾಗ ನೀರನ್ನು ಮಾತ್ರ ಪೂರ್ವಕ್ಕೆ ತಿರುಗಿಸಲು ಯೋಜಿಸಲಾಗಿದೆ.

ಪಶ್ಚಿಮದಿಂದ ಪೂರ್ವಕ್ಕೆ ನೀರನ್ನು ಸಾಗಿಸುವ ಈ ಯೋಜನೆಯು ಅತ್ಯಂತ ವಿಶಿಷ್ವವಾದುದು. ಏಕೆಂದರೆ, ಅತ್ಯಂತ ಕಡಿಮೆ ಅವಧಿಯಲ್ಲಿ, ಬಹು ದೊಡ್ದ ಪ್ರಮಾಣದ ನೀರನ್ನು ಅತಿ ಎತ್ತರಕ್ಕೆ ಪಂಪ್ ಮಾಡುವ ಮೂಲಕ ಅಥವಾ ದೀರ್ಘ ಸುರಂಗಗಳ ಮೂಲಕ ಸಾಗಿಸಲು ಇಲ್ಲಿ ಉದ್ದೇಶಿಸಿದೆ.

ಈ ಯೋಜನೆಯಿಂದ ನೀರು ಪಡೆಯಲಿರುವ ಪ್ರದೇಶಗಳು ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕೂಡಲೇ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡದಿದ್ದರೆ, ಈ ಪ್ರದೇಶಗಳು ಬರದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇತ್ತ ಪಶ್ಚಿಮ ಘಟ್ಟಗಳು ಅತ್ಯಂತ ಮುಖ್ಯವೂ, ಪರಿಸರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವೂ ಆದ ಪ್ರದೇಶಗಳಾಗಿವೆ. ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ. ಪ್ರಸಕ್ತ ಯೋಜನೆಯನ್ನು ಪಶ್ಚಿಮ ಘಟ್ಟಗಳಲ್ಲಿ ದೊರೆಯುವ ನೀರಿನ ಪ್ರಮಾಣದ ಕೇವಲ ಶೇ.0.54 ರಷ್ಟನ್ನು ಮಾತ್ರ, ಯಾವ ನೆಚ್ಚಬಹುದಾದ ನೀರಿನ ಮೂಲವೂ ಇಲ್ಲದ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಬಳಸಿಕೊಳ್ಳಲು ಅತ್ಯಂತ ಎಚ್ಚರಿಕೆಯಿಂದ ರೂಪಿಸಲಾಗಿದೆ. ಟ್ರಿಬ್ಯುನಲ್ ಹಾಗೂ ಇತರ ಅಡ್ಡಿಗಳಿರುವುದರಿಂದ, ಈ ಪ್ರದೇಶಕ್ಕೆ ಹತ್ತಿರದ ಇತರ ಯಾವುದೇ ನದಿಗಳ ನೀರನ್ನು ತರುವುದು ಸಾಧ್ಯವೇ ಇಲ್ಲ ಎಂಬುದನ್ನು ಗಮನಿಸಬೇಕು. ಇದೂ ಅಲ್ಲದೆ ಈ ಪ್ರದೇಶಗಳ ಅಂತರ್ಜಲ ಮಟ್ಟವು ಸಂಪೂರ್ಣವಾಗಿ ಪಾತಾಳಕ್ಕಿಳಿದಿದೆ.

ಆದ್ದರಿಂದ ಪಶ್ಚಿಮ ಘಟ್ಟಗಳ ಒಟ್ಟು ಇಳುವರಿಯ ಶೇ. 0.54 ಭಾಗ ನೀರನ್ನು ಬಳಸಿಕೊಳ್ಳುವ ಈ ಯೋಜನೆ, ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದು, ಇದಕ್ಕೆ ಯಾವುದೇ ಟ್ರಿಬ್ಯುನಲ್ ಇತ್ಯಾದಿ ಅಡ್ಡಿಗಳಿಲ್ಲದ್ದರಿಂದ, ಇದನ್ನು ತಾಂತ್ರಿಕವಾಗಿ ಸಾಧ್ಯವಿರುವ ಯೋಜನೆ ಎಂದು ಪರಿಗಣಿಸಲಾಗಿದೆ.


ಯೋಜನೆಯ ವಿಶ್ಲೇಷಣೆ:ಸಾಧ್ಯತಾವರದಿಯ ಕೆಲವು ಅಂಶಗಳನ್ನು ಹೀಗೆ ವಿಶ್ಲೇಷಿಸಬಹುದು:

"ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು".
ಈ ಭಾಗದಲ್ಲಿ ನದಿಗಳೇ ಇಲ್ಲ ಎಂದು ಹೇಳುವಂತಿಲ್ಲ. ಚಿಕ್ಕಬಳ್ಳಾಪುರ ನಂದಿಬೆಟ್ಟಕ್ಕೆ ಹತ್ತಿರದಲ್ಲಿದೆ. ಅಲ್ಲಿ ಹುಟ್ಟುವ ಅರ್ಕಾವತಿ ಚಿಕ್ಕಬಳ್ಳಾಪುರದ ಮೂಲಕವೇ ಹರಿಯುತ್ತದೆ. ಕೋಲಾರದಲ್ಲಿಯೂ ಪಾಲಾರ್, ಪೆನ್ನಾರ್ ಇತ್ಯಾದಿ ನದಿಗಳಿವೆ. ಆದರೆ, ಈ ಜಿಲ್ಲೆಗಳ ಜನರು ಹಿಂದಿನ ಕಾಲದಿಂದಲೂ ನೀರಿಗಾಗಿ ಮುಖ್ಯವಾಗಿ ಆಶ್ರಯಿಸಿದ್ದು ನದಿಗಳಿಗಿಂತ ಮುಖ್ಯವಾಗಿ ಕೆರೆಗಳನ್ನು. ಕೋಲಾರ ಜಿಲ್ಲೆಯಂತೂ ಕೆರೆಗಳಿಗೆ ಪ್ರಸಿದ್ಧವಾಗಿದೆ. ಹೀಗಿದ್ದೂ ಸಹ ಕೆರೆಗಳ ಸುದ್ದಿಯನ್ನೇ ತೆಗೆಯದೆ, ನೀರಿನ ಸಮಸ್ಯೆಯ ಮೂಲವನ್ನು ಗುರುತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಈ ಜಿಲ್ಲೆಗಳ ಕೆರೆಗಳ ಕಥೆ ಏನಾಗಿದೆ? 1970 ರ ನಂತರದ ದಶಕಗಳಲ್ಲಿ ಬೋರ್ ವೆಲ್ ಗಳ ಸಂಖ್ಯೆ ಕೋಲಾರ ಜಿಲ್ಲೆಯಲ್ಲಂತೂ ಅಗಾಧವಾಗಿ ಹೆಚ್ಚಿದೆ. ಚಿಕ್ಕಬಳ್ಳಾಪುರದಲ್ಲಿಯೂ ಇದೇ ಸ್ಥಿತಿ ಎಂದುಕೊಂಡಿದ್ದೇನೆ. ಕೆರೆಗಳನ್ನೂ, ಅವುಗಳ ನಿರ್ವಹಣಾ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇ ಸಮಸ್ಯೆಗೆ ಕಾರಣವಿರಬಹುದೆ? ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದಲ್ಲಿ ಸಮಸ್ಯೆಗೆ ಬೇರೆಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು.
"ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ".
ವರದಿಯು ನೀರಿನ ಸಮಸ್ಯೆಯ ಮೂಲವನ್ನು ಅತ್ಯಂತ ನಿಖರವಾಗಿ ಗುರುತಿಸಿದೆ. ದುರದೃಷ್ಟವಶಾತ್ ಅದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಲು ಅದು ತಯಾರಿಲ್ಲ. ಕೈಗಾರಿಕೀಕರಣ ಹಾಗೂ ನಗರೀಕರಣಗಳೇ ನೀರಿನ ಸಮಸ್ಯೆಯ ಮೂಲ ಎನ್ನುವುದಾದರೆ, ಒಂದು ಕಡೆ ನೀರನ್ನೂ ಮತ್ತೊಂದು ಕಡೆ ಕೈಗಾರಿಕೀಕರಣ ಹಾಗೂ ನಗರೀಕರಣವನ್ನೂ ಇಟ್ಟು, ಈ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗೆ ಸಕಲೇಶಪುರದಲ್ಲಿ ಪರಿಹಾರ ಹುಡುಕುವುದು, ಹುಲಿ ತನ್ನ ಗಾಯಕ್ಕೆ ಮದ್ದು ಮಾಡಿಕೊಂಡ ಹಾಗೆಯೇ.
ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ:
ಯಾವ ಯಾವ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ ಎಂದು ತಿಳಿಸಲಾಗಿಲ್ಲ. ವರದಿ ತಯಾರಿಸುವಾಗ, ಅಧ್ಯಯನ ಮಾಡಿದ ಎಲ್ಲ ಸಾಧ್ಯತೆಗಳನ್ನೂ ನಮೂದಿಸಿ ಅವುಗಳ ಪೈಕಿ ಯಾವುದಾದರೊಂದನ್ನು ಆರಿಸಿಕೊಂಡದ್ದಕ್ಕೆ ಮತ್ತು ಉಳಿದವನ್ನು ಕೈ ಬಿಟ್ಟಿದ್ದಕ್ಕೆ ಸಕಾರಣ ವಿವರಣೆ ನೀಡುವುದು ಅಗತ್ಯ. ಹಾಗೆ ಮಾಡದಿದ್ದರೆ ವರದಿ ಅಪೂರ್ಣವಾದಂತೆ.
"ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ."
ಸಾಧ್ಯತಾವರದಿ ತಯಾರಿಸಿದವರು ಪಶ್ಚಿಮ ಘಟ್ಟದ ಬಗ್ಗೆ ಆದಷ್ಟೂ ಎಚ್ಚರಿಕೆ ವಹಿಸಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತನ್ನ ಬಜೆಟ್ಟಿನಲ್ಲಿ ಹೇಳಿರುವುದನ್ನು ನೋಡಿ: "ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು." "ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."
*****************
ಮೊನ್ನೆ - ಆಶೋಕವರ್ಧನ್, ನಿರೇನ್ ಜೈನ್, ನಾನು ಮುಂತಾಗಿ ಹತ್ತು ಜನ - ಈ ಯೋಜನಾಸ್ಥಳಕ್ಕೆ ಹೋಗಿ ಬಂದೆವು.
ಸಕಲೇಶಪುರದಿಂದ ಗುಂಡ್ಯಕ್ಕೆ ಬರುವ ರಸ್ತೆಯಲ್ಲಿ ಮಾರೇನಹಳ್ಳಿ ಸಿಕ್ಕುತ್ತದೆ. ಇಲ್ಲಿ ಬಲಕ್ಕೆ ಒಂದು ರಸ್ತೆ ತಿರುಗುತ್ತದೆ. ಅದರಲ್ಲಿ ಹೋದರೆ, ಅಲ್ಸರ್ಮನೆ, ಗುಡಾಣಕೆರೆ, ಕಾಡಮನೆ ಎಸ್ಟೇಟ್ ಮುಂತಾದ ಪ್ರದೇಶಗಳಿಗೆ ಹೋಗಬಹುದು. ( ಈ ಪ್ರವಾಸದ ಬಗ್ಗೆ ಅಶೋಕವರ್ಧನರು ತಮ್ಮ ಎಂದಿನ "ನಾರೀಕೇಳ ಶೈಲಿ"ಯಲ್ಲಿ ಲೇಖನ ಬರೆಯುತ್ತಾರೆ ಎಂದು ಹಾರೈಸುತ್ತೇನೆ!). ಎತ್ತಿನ ಹೊಳೆಯೂ, ಅದರ ಎರಡು ಚಿಕ್ಕ ಉಪನದಿಗಳೂ ಸುಮಾರಿಗೆ ಇದೇ ಪ್ರದೇಶದಲ್ಲಿ ಹುಟ್ಟಿ ಹರಿಯುತ್ತವೆ.(ಇವೇ ಮುಂದೆ ಒಟ್ಟಾಗಿ ಕೆಂಪುಹೊಳೆ, ಗುಂಡ್ಯ ಹೊಳೆ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಇದು ಕುಮಾರಧಾರೆಯ ಉಪನದಿ. ಧರ್ಮಸ್ಥಳದ ಮೂಲಕ ಹರಿಯುವ ನೇತ್ರಾವತಿಯ ಉಪನದಿಯಲ್ಲ. ನೇತ್ರಾವತಿಗೆ ಇದು ಸೇರುವುದು ಉಪ್ಪಿನಂಗಡಿಯಲ್ಲಿ.) ಒಟ್ಟು ಮೂರು ಅಣೆಕಟ್ಟುಗಳನ್ನು ನಿರ್ಮಿಸಿ ಎತ್ತಿನಹೊಳೆಯಿಂದ ನೀರೆತ್ತುವ ಯೋಜನೆ ಕಾರ್ಯಗತ ಮಾಡುವ ಉದ್ದೇಶ ಇರುವುದು ಈ ಪ್ರದೇಶದಲ್ಲಿಯೇ.

ಅಲ್ಲೆಲ್ಲ ತಿರುಗಾಡಲು ನಮ್ಮ ಜೊತೆ ಬಂದಿದ್ದ ಸ್ಥಳೀಯರಾದ ಹೇಮಂತಕುಮಾರ್ ಹೇಳಿದರು: "ಆ ಕಡೆ ನಮ್ಮ ತೋಟ ಇದೆ. ನಾನು ಅಲ್ಲಿ ಹೋಗುವುದನ್ನೇ ಬಿಟ್ಟಿದ್ದೇನೆ. ಆನೆ ಬರ್ತಾವೆ ಮಾರಾಯ್ರೆ. ಹೆದ್ರಿಕೆ ಆಗ್ತದೆ."

(ಆನೆ ಮರಕ್ಕೆ ಬೆನ್ನು ತಿಕ್ಕಿದ್ದರ ಗುರುತು.-ಅಶೋಕವರ್ಧನರ ಫೋಟೋ.)
ಅಂದರೆ ಈ ಪ್ರದೇಶದಲ್ಲಿ ಯೋಜನೆ ಕಾರ್ಯಗತವಾದರೆ ಅಲ್ಲಿರುವ ಆನೆಗಳು ಬೇರೆ ಜಾಗ ನೋಡಿಕೊಳ್ಳಬೇಕು. "ತೊಂದರೆ ಇಲ್ಲಪ್ಪ, ಹತ್ತಿರವೇ ಸಕಲೇಶಪುರ ಇದೆ, ಅಲ್ಲಿಗೆ ಬಂದು ಇರ್ತಾವೆ. ಮೊನ್ನೆ ಮೈಸೂರಿಗೆ ಬಂದಿದ್ದವಲ್ಲ ಹಾಗೇ" ಅಂದಾರು ನಮ್ಮ ಯೋಜನಾಕರ್ತರು. ಆದರೆ ಸಕಲೇಶಪುರದ ಜನ ಇದಕ್ಕೆ ಒಪ್ಪಿಗೆ ಕೊಡುತ್ತಾರೋ ಗೊತ್ತಿಲ್ಲ!

******************
"ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ" ಎಂದು ಬಜೆಟ್ಟಿನಲ್ಲಿ ಹೇಳಿದೆಯಷ್ಟೆ. ಈ ಮಾಹಿತಿಯನ್ನು ನೀಡುವಂತೆ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಅರ್ಜಿ ಕೊಟ್ಟಿದ್ದೆ. ಅಲ್ಲಿಂದ ಬಂದ ಉತ್ತರ ಹೀಗಿದೆ:
"ಮೆ. ಎನ್. ಆರ್.ಎಸ್.ಸಿ. (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್) ಸಂಸ್ಥೆಗೆ ಸರ್ವೆ ಸಮೀಕ್ಷೆ ಮತ್ತು ವಿವರವಾದ ಯೋಜನಾ ವರದಿಯ ತಯಾರಿಕೆ ಕಾರ್ಯವನ್ನು ಕೈಗೊಳ್ಳಲು ವಹಿಸಿಕೊಡಲಾಗಿತ್ತು. ಆದರೆ ಮೆ. ಎನ್. ಆರ್. ಎಸ್. ಸಿ.ರವರು ALTM ಸರ್ವೆ ಮಾಡಿ ಅದರ ಕಚ್ಚಾ ಮಾಹಿತಿಯನ್ನು ಸಲ್ಲಿಸಿದ್ದು, ವಿವರವಾದ ಯೋಜನಾವರದಿಯನ್ನು (DPR) ತಯಾರು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿರುವುದರಿಂದ DPR ನ್ನು ಬೇರೆ ಸಂಸ್ಥೆಯಿಂದ ತಯಾರಿಸಲು ಕ್ರಮ ಜರುಗಿಸಲಾಗುತ್ತಿದೆ.
ಸದರಿ ಯೋಜನೆಯ ಮಾಲಾ ಕಾಲುವೆಗಳಿಗೆ ಸಂಬಂಧಿಸಿದಂತೆ ಮೆ: ಎನ್. ಆರ್. ಎಸ್. ಸಿ. ಸಂಸ್ಥೆ, ಹೈದ್ರಾಬಾದ್ ಇವರು ALTM ಸರ್ವೆ ಕೈಗೊಂಡು ಸರ್ವೆಯ ಕಚ್ಚಾ ಮಾಹಿತಿಯನ್ನು ಕೆಲವೊಂದು ಸಾಫ್ಟ್ ವೇರಿನಲ್ಲಿ ಮಾತ್ರ ವೀಕ್ಷಿಸಬಹುದಾದಂತಹ ರೂಪದ (Format ನಲ್ಲಿ) ತಾಂತ್ರಿಕ ಮಾಹಿತಿಯನ್ನು ನೀಡಿರುತ್ತಾರೆ. ಈ ಮಾಹಿತಿಯನ್ನು ಸಂಸ್ಕರಿಸಿ ಸದರಿ ಯೋಜನೆಯ ವಿವರವಾದ ಯೋಜನಾವರದಿಯನ್ನು ತಯಾರಿಸಲು ಹಾಗೂ ಸೇವಾ ಕಾಲುವೆಯ ಸರ್ವೆ ಕಾರ್ಯವನ್ನು ಕೈಗೊಳ್ಳಲು ಕ್ರಮ ಜರುಗಿಸಲಾಗುತ್ತಿದೆ. ಮೆ: ಎನ್. ಆರ್. ಎಸ್. ಸಿ. ಸಂಸ್ಥೆಯವರು ಯೋಜನೆಯ ಯಾವುದೇ ಸಂಪೂರ್ಣ ವರದಿಯನ್ನು ನೀಡಿರುವುದಿಲ್ಲ"
ಇದರ ಅರ್ಥ ಸ್ಪಷ್ಟ: ಶ್ರೀ ಪರಮಶಿವಯ್ಯನವರ ವರದಿಯನ್ನು ಆಧರಿಸಿದ ಯೋಜನೆ ಸರಕಾರಿ ವೇಗದಲ್ಲಿಯೇ ಆದರೂ ಮುಂದುವರಿಯುತ್ತಿದೆ. ಒಂದಲ್ಲ ಒಂದು ದಿನ ಅದು ಪಶ್ಚಿಮ ಘಟ್ಟಗಳ ಮೇಲೆ ಎರಗುವುದು ನಿಶ್ಚಿತ.
*****************
ಬಯಲುಸೀಮೆಯ ನೀರಿನ ಸಮಸ್ಯೆಗೆ ಪರಿಹಾರ ಏನು? "ಕಣಜ" (www.kanaja.in)ದಲ್ಲಿ ಪ್ರಕಟವಾಗಿರುವ ಶ್ರಿ ಮಲ್ಲಿಕಾರ್ಜುನ ಹೊಸಪಾಳ್ಯ ಇವರ ಲೇಖನವನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. "ಕಣಜ" ಹಾಗೂ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಇವರಿಗೆ ನಾನು ಆಭಾರಿ.
"ಜಲ ಜೀವನಿ" : ಸಾವಿರಾರು ಎಕರೆ ಒಣಭೂಮಿಗೆ ಆಸರೆಯಾದ ಕಿರು ಜಲಾನಯನ ಯೋಜನೆ:
ನಂದಿಹಳ್ಳಿಯ ರಂಗನಾಥ್ ತಮ್ಮ ಹೊಲದಲ್ಲಿದ್ದ ಸುಮಾರು 70 ಹುಣಸೆ ಮರಗಳನ್ನು ಕಡಿಸಿ ಹಾಕುವ ಯೋಚನೆ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಇವರ ಹೊಲದಲ್ಲಿ 150 ಹುಣಸೆ ಮರಗಳಿದ್ದವು. ಎಲ್ಲಾ ಅವರ ತಂದೆಯ ಕಾಲದಲ್ಲಿ ನೆಟ್ಟವು. ಮುಂಚೆ ಉತ್ತಮ ಇಳುವರಿ ನೀಡುತ್ತಿದ್ದ ಅವು ಸ್ವಲ್ಪ ವರ್ಷಗಳಿಂದೀಚೆಗೆ ಮಂಕಾಗಿ ಎಲೆಗಳೆಲ್ಲಾ ಉದುರಿ ಬೋಳು-ಬೋಳಾಗಿ ನಿಂತಿದ್ದವು. ಫಸಲೇ ಬಿಡುತ್ತಿರಲಿಲ್ಲ, ಹಾಗಾಗಿ ರಂಗನಾಥ್ 2004 ರಲ್ಲಿ 70 ಗಿಡಗಳನ್ನು ಕಡಿಸಿ ಮಾರಿದ್ದರು. ಉಳಿದ ಗಿಡಗಳನ್ನು ಈ ವರ್ಷ ಮಾರಿ ಕೈತೊಳೆದುಕೊಳ್ಳಬೇಕೆಂಬುದು ಅವರ ಯೋಚನೆಯಾಗಿತ್ತು. ಅವರೊಬ್ಬರೇ ಅಲ್ಲದೆ ಅವರ ಗ್ರಾಮದ ಬಹುತೇಕ ರೈತರು ಇದೇ ಹಾದಿಯಲ್ಲಿದ್ದರು. ನಾಲ್ಕೈದು ವರ್ಷಗಳ ಹಿಂದೆ ಉತ್ತಮ ಇಳುವರಿ ನೀಡುತ್ತಿದ್ದ ಹುಣಸೆ ಮರಗಳು ಕ್ರಮೇಣ ಬರಲಾಗಿಹೋಗಿದ್ದವು. ಇದಕ್ಕೆ ಕಾರಣ ಮಳೆಯ ಪ್ರಮಾಣದ ಗಣನೀಯ ಕುಸಿತ. ಬತ್ತಿದ ಅಂತರ್ಜಲ, ಒಣಗಿದ ಕೊಳವೆ ಬಾವಿಗಳು, ಫಲವತ್ತಾದ ಮೇಲ್ಮಣ್ಣು ಸವಕಳಿಯಿಂದ ಬರಡಾದ ಭೂಮಿ. ಬರಕ್ಕೆ ತಡೆದುಕೊಳ್ಳುವ ಗುಣವುಳ್ಳ ಹುಣಸೆಯೇ ಒಣಗುವ ಹಂತಕ್ಕೆ ತಲುಪಿತೆಂದರೆ ಇನ್ನು ಅಡಿಕೆ, ತೆಂಗು ಮತ್ತು ಇತರ ಫಸಲುಗಳ ಸ್ಥಿತಿಯನ್ನು ಊಹಿಸಬಹುದು.
ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ಕೃಷಿ ಉತ್ಪಾದಕತೆಯಲ್ಲಿಯೂ ಇಳಿತ, ಜೀವನ ನಿರ್ವಹಣೆಗೆ ಕಂಟಕ. ಈ ನಷ್ಟವನ್ನು ತುಂಬಿಕೊಳ್ಳಲು ರೈತರು ಹುಣಸೆ ಗಿಡಗಳನ್ನು ಮಾರಿ ಜೀವನ ನಿರ್ವಹಿಸುವ ಮಟ್ಟಕ್ಕೆ ಹೋಗಿದ್ದರು. ಇದು 2005ನೇ ಇಸವಿಯ ಮುಕ್ತಾಯ ಮತ್ತು 2006ನೇ ಇಸವಿಯ ಆರಂಭ ಕಾಲದಲ್ಲಿದ್ದ ಪರಿಸ್ತಿತಿ. ರಂಗನಾಥ್ ತಮ್ಮ ಹುಣಸೆ ಮರಗಳನ್ನು ಕಡಿಯುವ ಯೋಚನೆ ಮಾಡುತ್ತಿದ್ದುದು ಇದೇ ಅವಧಿಯಲ್ಲಿ.
ಆದರೆ 2007ರ ಮುಕ್ತಾಯ ಮತ್ತು 2008 ರ ಆರಂಭ ಕಾಲಕ್ಕೆ ನಂದಿಹಳ್ಳಿಯ ಚಿತ್ರಣ ಸಂಪೂರ್ಣ ಬದಲು. ಈಗ ಅಲ್ಲಿ ಹುಣಸೆ ಮರಗಳು ಕೊಂಬೆ-ರೆಂಬೆಗಳಲ್ಲೆಲ್ಲಾ ಕಾಯಿ ತೂಗುತ್ತಾ ನಿಂತಿವೆ. ಸಂಪೂರ್ಣ ನಿಂತೇ ಹೋಗಿದ್ದ ಎಷ್ಟೋ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಅಂತರ್ಜಲ ಮೇಲೇರಿದೆ. ಆಹಾರ ಬೆಳೆ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಮಟ್ಟ ಹೆಚ್ಚಾಗಿದೆ.
ನಂದಿಹಳ್ಳಿಯ ರಂಗನಾಥ್ ಮತ್ತು ಅನೇಕ ರೈತರು ಹುಣಸೆ ಮರಗಳನ್ನು ಕಡಿದು ಮಾರಾಟ ಮಾಡಿದ್ದಕ್ಕಾಗಿ ಈಗ ಪೇಚಾಡುತ್ತಿದ್ದಾರೆ.
ಈ ಬದಲಾವಣೆಗೆ ಕಾರಣವಾದದ್ದು ಬರ್ಡ್-ಕೆ ಸಂಸ್ಥೆಯ "ಜಲ ಜೀವನಿ" ಯೋಜನೆ. ಕೇವಲ ಎರಡೂವರೆ ವರ್ಷದಲ್ಲಿ 11 ಹಳ್ಳಿಗಳ ಸಾವಿರಾರು ಕುಟುಂಬಗಳಲ್ಲಿ ಆತ್ಮ ವಿಶಾಸವನ್ನು ಮರಳಿಸಿದ ವಿಶಿಷ್ಟ ಯೋಜನೆ ಇದು. ಯೋಜನೆ ಅಡಿಯಲ್ಲಿ ಇಂದು ಎರಡೂವರೆ ಸಾವಿರ ಹೆಕ್ಟೇರ್ ಗೂ ಅಧಿಕ ಭೂಮಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗಿದೆ.
ಯೋಜನಾ ಪ್ರದೇಶ
ದಕ್ಷಿಣ ಕರ್ನಾಟಕ ವ್ಯಾಪ್ತಿಯ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹಾಲ್ದೊಡ್ಡೇರಿ ಕೆರೆ ಕಿರು ಜಲಾನಯನ ಪ್ರದೇಶವು ಬಹುತೇಕ ಒಣ ಭೂಮಿ. ಸದಾ ಬರಕ್ಕೆ ಎದೆಯೊಡ್ಡುವ ಪ್ರದೇಶ. ನಿಶ್ಚಿತ ಮಳೆ ಭರವಸೆ ಇಲ್ಲ. ವಾರ್ಷಿಕ ಸರಾಸರಿ ಮಳೆ ಕೇವಲ 443.8 ಮಿ.ಮೀ. ತುಮಕೂರು ಜಿಲ್ಲಾ ಕೇಂದ್ರದಿಂದ ಅಂದಾಜು 100 ಕಿ.ಮೀ. ದೂರದಲ್ಲಿದೆ. ಈ ಜಲಾನಯನ ಪ್ರದೇಶವು 2869.5 ಹೆಕ್ಟೇರ್ ವ್ಯಾಪ್ತಿಯಿದ್ದು 11 ಹಳ್ಳಿಗಳನ್ನೊಳಗೊಂಡಿದೆ. ಅವುಗಳೆಂದರೆ; ಗಿಡದಾಗಲಹಳ್ಳಿ, ಬೊರಾಗುಂಟೆ, ವೀರಣ್ಣನಹಳ್ಳಿ, ಕೆ.ಟಿ.ಹಳ್ಳಿ, ಸೀಬಿನಯನಪಾಳ್ಯ,(ಎಲ್ಲವೂ ಮಧುಗಿರಿ ತಾಲ್ಲೂಕು) ಕಬ್ಬಿಗೆರೆ, ಚಿಕ್ಕಣ್ಣನಹಳ್ಳಿ, ಅಜ್ಜೇನಹಳ್ಳಿ, ಮರಾಠಿಗರಪಾಳ್ಯ, (ಎಲ್ಲವೂ ಕೊರಟಗೆರೆ ತಾಲ್ಲೂಕು )ನಂದಿಹಳ್ಳಿ ಮತ್ತು ಬಿಸಾಡಿಹಳ್ಳಿ.(ತುಮಕೂರು ತಾಲ್ಲೂಕು.)
ಯೋಜನಾ ಪ್ರದೇಶದ ಆಯ್ಕೆಗೆ ಕಾರಣಗಳು.
ಬರ್ಡ್-ಕೆ ಸಂಸ್ಥೆಯು ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಇಲ್ಲಿದ್ದಂತಹ ಮಣ್ಣು ಮತ್ತು ನೀರಿನ ಸಮಸ್ಯೆಗಳು. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾರೆ,
1. ವಿಪರೀತ ಮಣ್ಣಿನ ಸವಕಳಿ: ಈ ಪ್ರದೇಶದಲ್ಲಿ ವಿಪರೀತ ಮಣ್ಣು ಸವಕಳಿ ಸಮಸ್ಯೆಯಿಂದಾಗಿ ಮಣ್ಣಿನ ರಚನೆ ಹಾಳಾಗಿ ಅದರ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ ಕುಂಠಿತವಾಗಿತ್ತು. ಕೃಷಿಗೊಳಪಡುವ ಭೂಮಿಯು 60 ರಿಂದ 90 ಸೆಂಟಿಮೀಟರ್ ಆಳವಿದ್ದು ಮರಳು ಮಿಶ್ರಿತ ಕೆಂಪು ಮಣ್ಣಾಗಿದೆ. ಬಹುತೇಕ ಮಣ್ಣು ದ್ವಿತೀಯ ಮತ್ತು ತೃತೀಯ ದರ್ಜೆಯದಾಗಿರುವುದರಿಂದ ಇದರ ಸುಧಾರಣೆಗಾಗಿ ಹಲವಾರು ರೀತಿಯ ಉಪಚಾರಗಳ ಅವಶ್ಯಕತೆ ಇತ್ತು. ಮಣ್ಣು ಈ ರೀತಿ ಸಡಿಲವಾಗಿದ್ದುದರಿಂದ ಸಹಜವಾಗಿಯೇ ಸವಕಳಿಗೆ ತುತ್ತಾಗುತ್ತಿತ್ತು. ಜಲಾನಯನದ ಮೇಲ್ಬಾಗದಲ್ಲಿ ಮಣ್ಣು ಹಿಡಿದಿಡುವ ಗಿಡ-ಮರ, ಅಥವಾ ಹುಲ್ಲುಗಾವಲುಗಳು ಇಲ್ಲದಿರುವುದರಿಂದ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು.
2. ಸಾರವಿಲ್ಲದ ಮಣ್ಣು: ಫಲವತ್ತಾದ ಮೇಲ್ಮಣ್ಣು ವರ್ಷಗಟ್ಟಲೆ ಸವೆದು ಹೋಗಿ ಉಳಿದಂತಹ ಮಣ್ಣು ಹೆಚ್ಚು-ಕಡಿಮೆ ನಿರ್ಜೀವ ಹಂತ ತಲುಪಿತ್ತು. ಈ ಮಣ್ಣಿನಲ್ಲಿ ಯಾವ ಬೆಳೆ ಇಟ್ಟರೂ ಸರಿಯಾದ ಇಳುವರಿ ಬರುತ್ತಿರಲಿಲ್ಲ. ಅಲ್ಲದೆ ವಿಪರೀತ ರಾಸಾಯನಿಕಗಳ ಬಳಕೆ, ನೀರಾವರಿ ಸೌಲಭ್ಯಗಳ ಕೊರತೆ, ಅಸಮರ್ಪಕ ಬೆಳೆ ಪದ್ಧತಿಗಳೂ ಸಹ ಮಣ್ಣಿನ ಉತ್ಪಾದಕತೆ ಕುಂಠಿತವಾಗಲು ಕಾರಣಗಳಾಗಿದ್ದವು.
3. ನೀರಿನ ಕೊರತೆ: ಮತ್ತೊಂದು ಮುಖ್ಯ ಸಮಸ್ಯೆ ನೀರಿನ ಅಲಭ್ಯತೆ. ಕೃಷಿಗೆ ಮತ್ತು ಕುಡಿಯುವ ನೀರಿಗಾಗಿ ಜನರ ಪರದಾಟ ಹೇಳತೀರದಾಗಿತ್ತು. ಎಷ್ಟೋ ಕೊಳವೆ ಬಾವಿಗಳು ಒಣಗಿಹೋಗಿದ್ದರೆ, ಉಳಿದವು ಅಲ್ಪ-ಸ್ವಲ್ಪ ನೀರು ಹರಿಸುತ್ತಾ ಕುಟುಕು ಜೀವ ಉಳಿಸಿಕೊಂಡಿದ್ದವು. ಸದಾ ರಿಪೇರಿಗೆ ಬರುತ್ತಿದ್ದ ಅವುಗಳನ್ನು ನಿರ್ವಹಿಸುವುದೇ ರೈತರಿಗೆ ಕಷ್ಟವಾಗಿತ್ತು. ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿಗೆ ಕೊಳವೆ ಬಾವಿ ನೀರೇ ಅಸರೆ, ಆದರೆ ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಸುರಕ್ಷಿತತೆ ಮತ್ತು ನೈರ್ಮಲ್ಯತೆಯೇ ಇಲ್ಲವಾಗಿತ್ತು.
4. ಕೃಷಿ ಕ್ಷೇತ್ರದ ಅವಗಣನೆ: ಮಣ್ಣಿನ ಸವಕಳಿಯಿಂದ ಕೃಷಿ ಉತ್ಪಾದಕತೆ ಒಂದೆಡೆ ಕಡಿಮೆಯಾಗಿದ್ದರೆ ಮತ್ತೊಂದೆಡೆ ಏಕ ಬೆಳೆ ಪದ್ಧತಿ ಅನುಸರಣೆ, ಕೀಟ-ರೋಗಗಳ ಹಾವಳಿ, ನೂತನ ತಾಂತ್ರಿಕತೆಗಳ ಬಗ್ಗೆ ಅಜ್ಞಾನ. ಮುಂತಾದವುಗಳಿಂದ ಕೃಷಿ ದುಬಾರಿಯಾಗಿತ್ತು. ಲಾಭಕ್ಕಿಂತ ಖರ್ಚೇ ಹೆಚ್ಚಾಗಿ ರೈತರು ಬೇಸಾಯದಿಂದ ವಿಮುಖರಾಗುವ ಮನಸ್ತಿತಿಯಲ್ಲಿದ್ದರು.
ಇವುಗಳಲ್ಲದೆ, ಬಡತನ, ಅಪೌಷ್ಠಿಕತೆ, ಜನರ ಸಾಮಾಜಿಕ-ಆರ್ಥಿಕ ಹಿನ್ನಡೆ, ನಿರುದ್ಯೋಗ, ಅರೆ ಉದ್ಯೋಗ ಮುಂತಾದ ಅನೇಕ ಸಮಸ್ಯೆಗಳು ಇಲ್ಲಿದ್ದುದರಿಂದ ಬರ್ಡ್-ಕೆ ಸಂಸ್ಥೆಯು "ಜಲ ಜೀವನಿ" ಯೋಜನೆಯನ್ನು ಹಮ್ಮಿಕೊಂಡಿತು.
ಮೇಲ್ಕಂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೊಪಿಸಿ ರೈತರಲ್ಲಿ ಆತ್ಮ ವಿಶ್ವಾಸ ವೃದ್ಧಿಸಲು ಸಂಸ್ಥೆಯು ಹಲವಾರು ಚಟುವಟಿಕೆಗಳ ಮೂಲಕ ಕಾರ್ಯೋನ್ಮುಖವಾಯಿತು. ಈ ಚಟುವಟಿಕೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.
1. ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ
2. ಸಮುದಾಯದ ಸಾಮಾಜಿಕ, ಆರ್ಥಿಕ ಮಟ್ಟದ ಅಭಿವೃದ್ಧಿ, ತರಬೇತಿ ಮತ್ತು ಸಂಘಟನೆ.
ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಜಲ ಸಂಪನ್ಮೂಲಗಳನ್ನು ವೃದ್ಧಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಹೊಂದಿಕೆಯಾಗುವ ವಿಧಾನಗಳ ಅಳವಡಿಕೆ ಗಮನಿಸಬೇಕಾದ ಅಂಶ. ಪ್ರತಿಯೊಂದು ವಿಧಾನವೂ ಏಕಕಾಲಕ್ಕೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವಂತಹವು. ಕೆಲವು ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ.
1. ಹರಿವ ನೀರನ್ನು ಕಟ್ಟಿಹಾಕುವ ಉದಿ-ಬದುಗಳು: ಮೊದಲೇ ಹೇಳಿದಂತೆ ಹಾಲ್ದೊಡ್ಡೇರಿ ಜಲಾನಯನ ಪ್ರದೇಶವು ಏರು-ತಗ್ಗುಗಳಿಂದ ಕೂಡಿದ್ದು ಬಹುತೇಕ ಎರಡು ಮತ್ತು ಮೂರನೇ ದರ್ಜೆಯ ಮಣ್ಣುಳ್ಳದ್ದಾಗಿದೆ. ವಿಪರ್ಯಾಸವೆಂದರೆ, ಬೇಸಾಯಕ್ಕೊಳಪಡುವ ಭೂಮಿಗೆ ಅತ್ಯಗತ್ಯವಾಗಿ ಬೇಕಾದ ಉದಿ-ಬದುಗಳೇ ಇಲ್ಲ. ಈ ಅಂಶವನ್ನು ಮನಗಂಡ ಸಂಸ್ಥೆ ಪ್ರತಿ ಹೆಕ್ಟೇರ್ ಗೆ 75 ಕ್ಯುಬಿಕ್ ಮೀಟರ್ ನಷ್ಟು ಉದಿ-ಬದು ಹಾಕಲು ತೀರ್ಮಾನಿಸಿತು. ಇಷ್ಟು ಅಳತೆಯಲ್ಲಿ ಪ್ರತಿ ಸಲ 1500 ಲೀಟರ್ ನೀರು ಸಂಗ್ರಹ ಸಾಧ್ಯ. ಮಣ್ಣು ಸವಕಳಿ ತಡೆಗೆ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ ಎಂಬುದು ಕಬ್ಬಿಗೆರೆಯ ಹನುಮಂತಪ್ಪನವರ ಅನುಭವ. ಬದುಗಳ ಮೇಲೆ ಹೆಮಟ ಹುಲ್ಲನ್ನು ಬೆಳೆಯಲು ಯೋಜನೆಯಿಂದ ಉತ್ತೇಜನ ನೀಡಿರುವುದಲ್ಲದೆ ಬೀಜಗಳನ್ನೂ ಸಹ ಪೂರೈಸಲಾಗಿದೆ, ಇದರಿಂದ ಬದುಗಳು ಭದ್ರಗೊಳ್ಳುವುದಲ್ಲದೆ ರೈತರಿಗೆ ಉತ್ತಮ ಮೇವು ಲಭ್ಯವಾಗುತ್ತದೆ. ಅಲ್ಲದೆ ಈ ಬದುಗಳ ಮೇಲೆ ವಿವಿಧ ರೀತಿಯ ಕಾಡುಗಿಡಗಳನ್ನು ಬೆಳೆಸಲಾಗುತ್ತಿದೆ. ಯೋಜನೆಯು ಸಮುದಾಯ ಸಹಭಾಗಿತ್ವ ತತ್ವವನ್ನಾಧರಿಸಿದ್ದು ಈ ಉದಿ-ಬದು ಚಟುವಟಿಕೆಗೆ ಆಯಾ ಜಮೀನಿನ ಮಾಲೀಕರು ಶೇ 50 ರಷ್ಟು ವಂತಿಕೆ ಭರಿಸಬೇಕು, ಈ ನಿಯಮಕ್ಕೆ ಎಲ್ಲಾ ಹಳ್ಳಿಗಳ ರೈತರೂ ಅಕ್ಷರಶಃ ಒಪ್ಪಿರುವುದಲ್ಲದೆ ತಾವೇ ಖುದ್ದಾಗಿ ನಿಂತು ತಮ್ಮ-ತಮ್ಮ ಹೊಲಗಳಿಗೆ ಉದಿ-ಬದು ಹಾಕಿಸಿಕೊಂಡಿದ್ದಾರೆ.
2. ಇಂಗು ಹೊಂಡಗಳು: ಜಲಾನಯನ ಪ್ರದೇಶದಲ್ಲಿ ಪ್ರತಿ 2-3 ಹೆಕ್ಟೇರ್ ಗೆ ಒಂದರಂತೆ ಸರಣಿಯೋಪಾದಿಯಲ್ಲಿ ಇಂಗು ಹೊಂಡಗಳನ್ನು ತೆಗೆಯಲಾಗಿದೆ. ಉದಿ-ಬದುಗಳ ಮೂಲಕ ಪ್ರತಿಯೊಂದು ಗುಂಡಿಗೂ ಸಂಪರ್ಕವೇರ್ಪಡುವಂತೆ ಮಾಡಲಾಗಿರುವುದು ವಿಶೇಷ. ಉದಿ-ಬದುಗಳನ್ನು ತುಂಬಿ ಹೆಚ್ಚಾದ ನೀರು ಸಾಗಿ ಬಂದು ಈ ಹೊಂಡಗಳಲ್ಲಿ ಶೇಖರಗೊಳ್ಳುತ್ತದೆ. "30 ಅಡಿ ಅಗಲ, 30 ಅಡಿ ಉದ್ದ ಮತ್ತು 10 ಅಡಿ ಆಳದ ಗುಂಡಿಯೊಂದು ಪ್ರತಿಬಾರಿ ತುಂಬಿದಾಗ ಒಂದೂವರೆ ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ" ಎನ್ನುತ್ತಾರೆ ಯೋಜನೆಯ ಹಿರಿಯ ವಲಯ ಕಾರ್ಯಕ್ರಮ ಅಧಿಕಾರಿ ಧನಂಜಯ ಟಿ.ಎಸ್.
ಪ್ರಸ್ತುತ ಯೋಜನಾ ಪ್ರದೇಶದಲ್ಲಿ 200 ಇಂಗು ಹೊಂಡಗಳಿದ್ದು ನೀರು ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ಸಲ್ಲಿಸಿವೆ. ಈ ಹೊಂಡಗಳಲ್ಲಿ ದೀರ್ಘಕಾಲ ನೀರು ಸಂಗ್ರಹವಾಗಿ ನಿಧಾನವಾಗಿ ನೆಲದಲ್ಲಿ ಇಂಗುತ್ತದೆ. ಈ ಸಂಗ್ರಹಿತ ನೀರನ್ನು ರೈತರು ತರಕಾರಿ, ಹೂವಿನ ತೋಟಗಳಿಗೆ ಕೈನೀರು ಹಾಕಲು ಬಳಸುತ್ತಿದ್ದಾರೆ.
3. ಹೂಳು ತೆಗೆಯುವುದು: ಈ ಜಲಾನಯನ ಪ್ರದೇಶದಲ್ಲಿ 17 ಚೆಕ್ ಡ್ಯಾಮ್ ಗಳು, 16 ಗೋಕಟ್ಟೆಗಳು ಮತ್ತು ಒಂದೆರಡು ಇತರ ನೀರಿನ ಕುಂಟೆಗಳಿರುವುದನ್ನು ಯೋಜನೆಯು ಗುರುತಿಸಿತು. ಇವು ಬಹಳ ವರ್ಷಗಳ ಹಿಂದೆ ಜನರ ಸಹಭಾಗಿತ್ವ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ನಿರ್ಮಾಣವಾಗಿದ್ದು, ಪ್ರಸ್ತುತ ಹೂಳು ತುಂಬಿ ಹಾಳಾಗಿದ್ದವು. ಅವುಗಳ ನೀರು ಹಿಡಿದಿಡುವ ಸಾಮರ್ಥ್ಯ ಕುಂಠಿತಗೊಂಡಿತ್ತು. ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ವೃದ್ಧಿಸಲು, ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ರಚನೆಗಳ ಹೂಳೆತ್ತುವಿಕೆಗೆ ಜನರ ಮನವೊಲಿಸಲಾಯಿತು. ಬಹುತೇಕ ಸರ್ಕಾರೀ ಜಮೀನಿನಲ್ಲಿದ್ದ ಇವುಗಳಲ್ಲಿ ಬೃಹತ್ ಪ್ರಮಾಣದ ಹೂಳು ಶೇಖರವಾಗಿತ್ತು. ಅತ್ಯಂತ ಫಲವತ್ತಾಗಿದ್ದ ಈ ಮಣ್ಣನ್ನು ತಮ್ಮ ಹೊಲಗಳಿಗೆ ಸಾಗಿಸಲು ರೈತರು ಉತ್ಸಾಹದಿಂದಲೇ ಮುಂದೆ ಬಂದರು. ಹೂಳು ತೆಗೆದ ಪರಿಣಾಮ ಅಪಾರ ಪ್ರಮಾಣದ ನೀರು ಈ ರಚನೆಗಳಲ್ಲಿ ಶೇಖರಣೆಗೊಂಡು ಸುತ್ತ-ಮುತ್ತಲ ವಿಶಾಲ ಭೂಮಿಗೆ ತಂಪೆರೆಯುತ್ತಿವೆ ಹಾಗೂ ಕೊಳವೆಬಾವಿಗಳಿಗೆ ನೀರಿನ ಸೆಲೆಯಾಗಿವೆ.
ಗೋಕಟ್ಟೆ ಮತ್ತು ಚೆಕ್ ಡ್ಯಾಮ್ ಗಳ ಆಸು-ಪಾಸಿನಲ್ಲಿದ್ದ ಮರವಳಿಗೆ- ಅದರಲ್ಲಿಯೂ ಹುಣಸೆ ಮರಗಳಿಗೆ ಇದರಿಂದ ಮರುಜನ್ಮ ಬಂದಂತಾಗಿದೆ ಎನ್ನುತ್ತಾರೆ ಇಲ್ಲಿನ ರೈತರು. ನಂದಿಹಳ್ಳಿಯ ರಂಗನಾಥ್ ತಮ್ಮ ಜಮೀನಿನಲ್ಲಿ ಫಲಭರಿತ ಹುಣಸೆಮರವನ್ನು ತೋರಿಸಿ ಅದರ ಪಕ್ಕದಲ್ಲಿದ್ದ ಚೆಕ್ ಡ್ಯಾಮ್ ನಲ್ಲಿ ಹೂಳು ತೆಗೆದದ್ದರಿಂದ ನೀರು ನಿಂತ ಪರಿಣಾಮ ಇದು ಎನ್ನುತ್ತಾರೆ.
೪. ಸಮುದಾಯ ಕೊಳವೆ ಬಾವಿ ಮರುಪೂರಣ: ಇದೊಂದು ವಿಶಿಷ್ಟ ಪ್ರಯತ್ನ. ಇದೇ ಯೋಜನಾ ವ್ಯಾಪ್ತಿಯಲ್ಲಿ ಹಿಂದೆ "ಬೆರಿ"(ಹಸಿರು ಶಕ್ತಿ ) ಯೋಜನೆಯಡಿಯಲ್ಲಿ ಸಮುದಾಯ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಉದ್ದೇಶ 5-6 ಬಡ ರೈತರಿಗೆ ಒಂದೇ ಕೊಳವೆ ಬಾವಿಯ ನೀರನ್ನು ಸರದಿಯಂತೆ ಒದಗಿಸುವುದು. ಆ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ಮೂಲಕ ಅವುಗಳ ಕಾರ್ಯ ಕ್ಷಮತೆಯನ್ನು ನಿರಂತರವಾಗಿಸುವುದು ಈ ಚಟುವಟಿಕೆಯ ಉದ್ದೇಶ. ಅಂದಾಜು 18 ಸಮುದಾಯ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ವ್ಯವಸ್ತೆಯಾಗಿದೆ. ಪ್ರತಿಯೊಂದು ಸಮುದಾಯ ಕೊಳವೆ ಬಾವಿಯ ಕೇಸಿಂಗ್ ಪೈಪಿನ ಸುತ್ತ 11 ಅಡಿ ಉದ್ದ 11 ಅಡಿ ಅಗಲ ಮತ್ತು 10 ಅಡಿ ಆಳದ ಗುಂಡಿ ತೆಗೆದು, ಪದರ-ಪದರವಾಗಿ ದಪ್ಪ ಜಲ್ಲಿ ,ಸಣ್ಣ ಜಲ್ಲಿಯನ್ನು ಹಾಕುತ್ತಾ ಬಂದು ಕೊನೆಯಲ್ಲಿ ಜಾಲರಿಯನ್ನು ಹಾಸಿ ಅದರ ಮೇಲೆ ಒಂದು ಪದರ ಮರಳು ಹಾಕಲಾಗುತ್ತದೆ. ಸುತ್ತಲೂ ಸಿಮೆಂಟಿನ ಕಟ್ಟೆ ಮಾಡಿ ಮಳೆ ಬಂದಾಗ ಅಕ್ಕ-ಪಕ್ಕದ ನೀರು ಆ ಕಟ್ಟೆಗೆ ಹಾಯುವಂತೆ ದಾರಿ ಕಲ್ಪಿಸಲಾಗುತ್ತದೆ. ಮಳೆ ನೀರು ಈ ಮೂಲಕ ನೆಲದಲ್ಲಿ ಹಿಂಗಿ ಕೊಳವೆ ಬಾವಿಗೆ ನೀರಿನ ಮೂಲವಾಗುತ್ತದೆ. ಕಬ್ಬಿಗೆರೆ ಮರಾಠಿಪಾಳ್ಯದ ಸಮುದಾಯ ಕೊಳವೆಬಾವಿಗೆ 6 ಜನ ಫಲಾನುಭವಿಗಳಿದ್ದು ತಲಾ ಅರ್ಧ ಎಕರೆ ಜಮೀನಿಗೆ ನೀರು ಪಡೆಯುತ್ತಿದ್ದಾರೆ.
ಈ ಚಟುವಟಿಕೆಗಳಿಗೆ ಪೂರಕವಾಗಿ ಇಳಿಜಾರುಗಳಲ್ಲಿ ಹೆಚ್ಚಿನ ಕೊರಕಲನ್ನು ತಡೆಯಲು ತಡೆಗೋಡೆಗಳ ನಿರ್ಮಾಣ, ಮಣ್ಣು ಹಿಡಿದಿಡಲು ಕತ್ತಾಳೆ ತಡೆಗಳ ನೆಡುವಿಕೆ, ಉದಿ-ಬದುಗಳಲ್ಲಿ ತುಂಬಿ ಹೆಚ್ಚಾದ ನೀರು ಸರಾಗವಾಗಿ ಹರಿಯಲು ಕಲ್ಲಿನ ಕೊಡಿಗಳ ನಿರ್ಮಾಣ, ತೆರೆದ ಬಾವಿಗಳಿಗೆ ಹಳ್ಳದ ನೀರಿನ ಸಂಪರ್ಕ ಕಲ್ಪಿಸಿ ಮರುಪೂರಣ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿತಗೊಳಿಸಲು ಸಾವಯವ ಪ್ರಾತ್ಯಕ್ಷಿಕೆಗಳು, ಇದಕ್ಕೆ ಪೂರಕವಾಗಿ ಎರೆಹುಳು ತೊಟ್ಟಿಗಳ ನಿರ್ಮಾಣಕ್ಕೆ ಉತ್ತೇಜನ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಗ್ರ ಮಣ್ಣು-ನೀರು ಸಂರಕ್ಷಣೆ ಮಾಡಲಾಗಿದೆ. ಪ್ರತಿಯೊಂದು ಚಟುವಟಿಕೆಯೂ ಸಹ ಪರಸ್ಪರ ಪೂರಕವಾಗಿವೆ. ಅದೇ ರೀತಿ ಅವುಗಳನ್ನು ಸಂಯೋಜಿಸಲಾಗಿದೆ.
ಈ ಎಲ್ಲಾ ಚಟುವಟಿಕೆಗಳು ಸಕಾಲದಲ್ಲಿ ಅನುಷ್ಠಾನಗೊಂಡು ನಿರೀಕ್ಷಿತ ಫಲಿತಾಂಶ ಬರಲು ಸಮುದಾಯ ಸಹಕಾರ ಅತ್ಯಂತ ಮುಖ್ಯ. ಅವರ ಮನವೊಲಿಸಿ, ಸಂಘಟನೆ ಮಾಡಲು ಸಂಸ್ಥೆಯು ನಿರಂತರ ಸಂಪರ್ಕ, ಪ್ರತಿಯೊಬ್ಬ ರೈತರ ಜೊತೆ ವೈಯಕ್ತಿಕ ಸಂಬಂಧ, ಗುಂಪು ಸಭೆಗಳು, ಶೈಕ್ಷಣಿಕ ಪ್ರವಾಸ ಮುಂತಾದ ಅನೇಕ ಮಾರ್ಗಗಳನ್ನು ಅನುಸರಿಸಿದೆ.
ಕಣ್ಣ ಮುಂದಿರುವ ಪರಿಣಾಮಗಳು: ಇಷ್ಟೆಲ್ಲಾ ಚಟುವಟಿಕೆಗಳ ಅನುಷ್ಠಾನ, ಸಮುದಾಯದ ಕೈಜೋಡಿಸುವಿಕೆಯಿಂದ ಉಂಟಾಗಿರುವ ಪರಿಣಾಮ ಅದ್ಭುತ. ಅದು ಯೋಜನಾ ಪ್ರದೇಶದಲ್ಲಿ ಕಾಣುವ ಹಸಿರು, ಫಲಭರಿತ ಹುಣಸೆ ಮರಗಳು, ಮೇಲೇರಿರುವ ನೀರಿನ ಮಟ್ಟ ಮತ್ತು ರೈತಾಪಿಗಳ ವಿಶ್ವಾಸಭರಿತ ಮಾತಿನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕೆಲವು ಅಂಶಗಳನ್ನು ನೋಡುವುದಾದರೆ;
1. ಕೊಳವೆಬಾವಿಗಳಿಗೆ ಮರುಜೀವ: ಯೋಜನೆ ಆರಂಭಕ್ಕೆ ಮುನ್ನ ಇಲ್ಲಿ ಅಂತರ್ಜಲ ಮಟ್ಟ 350 ರಿಂದ 400 ಅಡಿಗಳಿಗಿಳಿದಿತ್ತು, ಈಗ 200 ಅಡಿ ಅಳದಲ್ಲಿಯೇ ನೀರು ಲಭ್ಯವಾಗುತ್ತಿದೆ. ಚಿಕ್ಕಣ್ಣನಹಳ್ಳಿಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಕೊಳವೆ ಬಾವಿಯೊಂದು ಯೋಜನಾ ಅನುಷ್ಠಾನದ ನಂತರ ಮತ್ತೆ ನೀರು ಹರಿಸುತ್ತಿದೆ. ನಂದಿಹಳ್ಳಿಯ ಯಂಜೇರಪ್ಪನವರು 1996ರಲ್ಲಿ ತೆಗೆಸಿದ ಕೊಳವೆ ಬಾವಿ ಆರಂಭದಲ್ಲಿ 2.5 ಇಂಚು ನೀರು ಕೊಡುತ್ತಿತ್ತು. ಕ್ರಮೇಣ ಕಡಿಮೆಯಾಗುತ್ತಾ ಬಂದು 2005 ರಲ್ಲಿ ಕೇವಲ ಅರ್ಧ ಇಂಚಿಗಿಳಿಯಿತು. ಜಲ ಜೀವನಿ ಯೋಜನೆಯಡಿಯಲ್ಲಿ ಇವರು ತಮ್ಮ 10 ಎಕರೆ ಭೂಮಿಯಲ್ಲಿ ಉದಿ-ಬದು ಹಾಕಿಸಿ, 2 ಇಂಗು ಹೊಂಡಗಳನ್ನು ತೆಗೆಸಿದ ಪರಿಣಾಮ ಈಗ ಮತ್ತೆ 2.5 ಇಂಚು ನೀರು ಲಭ್ಯವಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯಂಜೇರಪ್ಪ ಮತ್ತೆರಡು ಇಂಗು ಹೊಂಡ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ನಂದಿಹಳ್ಳಿ ಗ್ರಾಮದ ರಂಗನಾಥ್ ರವರದೂ ಸಹ ಇದೇ ರೀತಿಯ ಅನುಭವ. ಇವರ 2 ಕೊಳವೆಬಾವಿಗಳಲ್ಲಿ ನೀರು ಬಿಟ್ಟೂ-ಬಿಟ್ಟೂ ಬರುತ್ತಿದ್ದುದು ಜಲ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡ ನಂತರ ಉತ್ತಮ ನೀರು ಕೊಡುತ್ತಿವೆ.
"ನಮ್ಮೂರಿನ ಪ್ರತಿಯೊಬ್ಬರೂ ಉದಿ-ಬದು ಹಾಕಿ, ಇಂಗು ಹೊಂಡ ತೆಗೆದು, ಗೋಕಟ್ಟೆಗಳಲ್ಲಿ ಹೂಳು ತೆಗೆದದ್ದರಿಂದ ನಮ್ಮೂರ ಹೊಲಗಳಿಂದ ಒಂದು ಹನಿ ನೀರು ಪಕ್ಕದ ಕೆರೆಗೆ ಹೋಗಿಲ್ಲ, ಹಾಗಾಗಿ ಆ ಕೆರೆ ಈ ಸಲ ತುಂಬಲೇ ಇಲ್ಲ" ಎಂದು ಬಾಯ್ತುಂಬಾ ನಗುತ್ತಾರೆ ಇದೇ ಗ್ರಾಮದ ಪುಟ್ಟರಂಗಯ್ಯ.
2. ಫಸಲಿನ ಇಳುವರಿ ಹೆಚ್ಚಳ: ಇದು ಮತ್ತೊಂದು ಗಮನಿಸಬೇಕಾದ ಪರಿಣಾಮ. ಆಹಾರ ಬೆಳೆಗಳಾದ ರಾಗಿ, ಭತ್ತ ಹಾಗೂ ಉಳಿದ ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿದೆ. ಉದಾಹರಣೆಗೆ ರಾಗಿಯಲ್ಲಿ 7-8 ಚೀಲ ಇದ್ದ ಇಳುವರಿ ಸರಾಸರಿ 2 ಚೀಲಗಳಷ್ಟು ಹೆಚ್ಚಾಗಿದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಹುಣಸೆ ಮರಗಳ ಇಳುವರಿ ಸಹ ಹೆಚ್ಚಿದೆ. ಸಿದ್ದಮ್ಮ ಎಂಬುವರ 3 ಹುಣಸೆ ಮರಗಳು ಪೂರಾ ಒಣಗಿದಂತಾಗಿದ್ದವು ಯೋಜನೆ ನಂತರ ಯಥಾಸ್ತಿತಿ ಇಳುವರಿ ನೀಡುತ್ತಿವೆ. ನಂದಿಹಳ್ಳಿಯ ರಂಗನಾಥ್ ರವರು ಹೇಳುವಂತೆ "ಮುಂಚೆ 7-8 ಕ್ವಿಂಟಾಲ್ ಇಳುವರಿ ನೀಡುತ್ತಿದ್ದ ಮರಗಳಲ್ಲಿ ಕಳೆದ ವರ್ಷ (2007) 10-12 ಕ್ವಿಂಟಾಲ್ ಇಳುವರಿ ಬಂದಿತ್ತು, ಈ ವರ್ಷ (2008) 15-16 ಕ್ವಿಂಟಾಲ್ ಇಳುವರಿ ನಿರೀಕ್ಷಿಸುತ್ತಿದ್ದೇವೆ."
3. ಕೈತುಂಬಾ ಕೆಲಸ: ಯೋಜನೆಯಲ್ಲಿ ಬಹುತೇಕ ಚಟುವಟಿಕೆಗಳು ಮಾನವಶ್ರಮವನ್ನು ಆಧರಿಸಿರುವುದರಿಂದ ಸತತವಾಗಿ ಕೆಲಸದ ಅವಕಾಶ ಲಭಿಸಿದೆ. ಕೇವಲ ಆರು ತಿಂಗಳು ಕೃಷಿ ಕೆಲಸ ನಿರ್ವಹಿಸಿ ಆ ನಂತರ ಕೆಲಸವಿಲ್ಲದೆ ಇರುತ್ತಿದ್ದ ರೈತ ಕುಟುಂಬಗಳಿಗೆ ಆ ಅವಧಿಯಲ್ಲಿ ಕೆಲಸ ಲಭ್ಯವಾಗಿದೆ, ಜೊತೆಗೆ ಕೃಷಿ ಕಾರ್ಮಿಕರಿಗಂತೂ ವರ್ಷವಿಡೀ ಕೆಲಸ ಸಿಕ್ಕಿದೆ. ಇದು ಎಲ್ಲ ವರ್ಗದವರ ಆರ್ಥಿಕ ಪರಿಸ್ತಿತಿ ಉತ್ತಮಗೊಳ್ಳಲು ಸಹಾಯಕವಾಗಿದೆ. ಉದಿ-ಬದು ಹಾಕುವ ಚಟುವಟಿಕೆ ಎಲ್ಲರಿಗೂ ಹೆಚ್ಚು ಕಾಲ ಕೆಲಸ ಒದಗಿಸಿದ್ದು, ಕಲ್ಲುಕೋಡಿ, ಗಲ್ಲಿಪ್ಲಗ್, ಎರೆಹುಳು ತೊಟ್ಟಿ ನಿರ್ಮಾಣ, ಕೊಳವೆ ಬಾವಿ ಮರುಪೂರಣದಂತಹ ಚಟುವಟಿಕೆಗಳು ವಿಶೇಷವಾಗಿ ಬೋವಿಗಳಿಗೆ ಮತ್ತು ಗಾರೆ ಕೆಲಸದವರಿಗೆ ಕೆಲಸ ಒದಗಿಸಿವೆ.
4. ಶಾಲಾ ಮಕ್ಕಳಿಗೆ ನೀರ ಅರಿವು: ಯೋಜನಾ ವ್ಯಾಪ್ತಿಯಲ್ಲಿ ಬರುವ ಕಬ್ಬಿಗೆರೆಯ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಈಗ ನೀರ ನೆಮ್ಮದಿ. ವರ್ಷ ಪೂರ್ತಿ ಮಳೆ ನೀರು ಕುಡಿಯುವ ಅವಕಾಶವನ್ನು ಜಲ ಜೀವನಿ ಯೋಜನೆ ಕಲ್ಪಿಸಿದೆ. 135 ವಿದ್ಯಾರ್ಥಿಗಳು ಮತ್ತು 16 ಬೋಧಕ ಮತು ಬೋಧಕೇತರ ಸಿಬ್ಬಂದಿಗಳಿರುವ ಶಾಲೆಗೆ 10 ಸಾವಿರ ಲೀಟರ್ ಸಾಮರ್ಥ್ಯದ ಎರಡು ಮಳೆ ನೀರು ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿದ್ದು, ಇದರ ಉಸ್ತುವಾರಿಯನ್ನು ಮಕ್ಕಳಿಗೇ ವಹಿಸಲಾಗಿದೆ. ಶಾಲೆಯ ಸುತ್ತ-ಮುತ್ತ ಉದಿ-ಬದು, ಗಲ್ಲಿ ಪ್ಲಗ್ ಮುಂತಾದ ನೀರು ಸಂರಕ್ಷಣಾ ರಚನೆಗಳನ್ನು ನಿರ್ಮಿಸಿ ಮಕ್ಕಳಿಗೆ ನೀರ ಪಾಠ ಹೇಳಿಕೊಡಲಾಗುತ್ತಿದೆ. ಅಲ್ಲದೆ ಶಾಲೆಯ ಆವರಣದಲ್ಲಿ ಔಷಧಿ ತೋಟ ಮತ್ತು ತರಕಾರಿ ತೋಟಗಳನ್ನೂ ಬೆಳೆಸಲಾಗುತ್ತಿದೆ. ಮಕ್ಕಳಿಗೆ ಕಂಪ್ಯೂಟರ್ ಜ್ಞಾನದ ಅವಶ್ಯಕತೆಯನ್ನು ಮನಗಂಡು ಅದರ ವ್ಯವಸ್ಥೆಯನ್ನೂ ಯೋಜನಾ ವತಿಯಿಂದ ಸಹ ಮಾಡಲಾಗಿದೆ. ಈಗ ಕಬ್ಬಿಗೆರೆ ಶಾಲೆ ಉಳಿದ ಶಾಲೆಗಳಿಗೆ ಮಾದರಿ. ಈ ಎಲ್ಲಾ ಚಟುವಟಿಕೆಗಳಿಗೆ ಶಾಲಾ ಸಿಬ್ಬಂದಿಗಳ ನೆರವು ಮತ್ತು ಒತ್ತಾಸೆಗಳೂ ಸಹ ಉತ್ತಮವಾಗಿವೆ ಎನ್ನುತ್ತಾರೆ ಯೋಜನೆಯ ಅಧಿಕಾರಿ ಫಕೀರ ಸ್ವಾಮಿ.
ಒಟ್ಟಾರೆ ಹೇಳಬೇಕೆಂದರೆ "ಜಲಜೀವನಿಯು" ಕಿರು ಜಲಾನಯನ ಯೋಜನೆಗಳಿಗೊಂದು ಉತ್ತಮ ಮಾದರಿ. ಕಾರ್ಯಕ್ರಮಗಳ ಆಯ್ಕೆ, ಅವುಗಳ ವ್ಯವಸ್ತಿತ ಸಂಯೋಜನೆ ಹಾಗೂ ಸಕಾಲದಲ್ಲಿ ಅನುಷ್ಠಾನಗೊಳಿಸಿರುವ ರೀತಿ ಅನುಕರಣ ಯೋಗ್ಯ. ಬರ್ಡ್-ಕೆ ಸಂಸ್ಥೆಯ ಹಿಂದಿನ ಅನುಭವ ಮತು ಬದ್ಧತೆ ಕ್ಷಿಪ್ರ ಗತಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಅಪಾರ ನೆರವಾಗಿದೆ. ಹಾಲ್ದೋಡ್ಡೇರಿ ಜಲಾನಯನ ಪ್ರದೇಶದಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೊಂಡು ಯಶಸ್ವಿಯಾದ ಇದನ್ನು ಈ ವರ್ಷದಿಂದ (2008) ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಅಳವಡಿಸಲು ಸಿದ್ಧತೆಗಳು ನಡೆದಿವೆ.
"ಜಲಜೀವನಿ"ಎಂಬ ಹೆಸರೂ ಸಹ ಅರ್ಥಪೂರ್ಣವಾದುದು. ಎಲ್ಲರ ಜೀವನಕ್ಕೆ ಜಲವೇ ಅತ್ಯಂತ ಮೂಲಭೂತ ಅಂಶವಾಗಿರುವುದರಿಂದ ಅದನ್ನು ಕಾಪಾಡುವುದು ಮತ್ತು ಅಭಿವೃದ್ಧಿಪಡಿಸುವ ಯೋಜನೆಯ ಆಶಯಗಳೆಲ್ಲವೂ ಹೆಸರಿನಲ್ಲೇ ಅಡಗಿದೆ.

ಶನಿವಾರ, ಮೇ 21, 2011

3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ

ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ" ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು.
ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ, ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ ನಮ್ಮ ದಡ್ಡತನಕ್ಕಾಗಿ ನಾನು ಮರುಗಿದ್ದೇನೆ. ಹಾಗಾಗಿ ಈ ಕೇಂದ್ರದ ಬಗ್ಗೆ ನನಗೆ ಕುತೂಹಲ ಬಂತು. ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಿದೆ. ನಾನು ಕೇಳಿದ ಮಾಹಿತಿಗಳೂ, ಅದಕ್ಕೆ ಬಂದ ಉತ್ತರವೂ ಹೀಗಿದೆ:

೧. ಈ ಕೇಂದ್ರ ಹಾಕಿಕೊಂಡಿರುವ ಕಾರ್ಯ ಯೋಜನೆಗಳೇನು?

ನಾಗರೀಕರಲ್ಲಿ ಮಳೆನೀರು ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ ಬಗ್ಗೆ ಜಾಗೃತಿ ನೀಡುವುದು, ಮಳೆ ನೀರು ಕೊಯ್ಲು ಮಾದರಿಗಳನ್ನು ನಾಗರಿಕರ ವೀಕ್ಷಣೆಗೆ ನಿರ್ಮಿಸಲಾಗಿದೆ. ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾಹಿತಿ ಒದಗಿಸುವುದು.

೨. ಕೇಂದ್ರವು ಪ್ರತಿತಿಂಗಳು ತನ್ನ ಕಾರ್ಯವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುತ್ತದೆಯೇ?
ಮೇಲಧಿಕಾರಿಗಳಿಗೆ ಸಲ್ಲಿಸುತ್ತಿದೆ

೩. ಈ ಕೇಂದ್ರದ ಒಟ್ಟು ಸಿಬ್ಬಂದಿಗಳ ಸಂಖ್ಯೆ, ಅವರ ಹುದ್ದೆ ಮತ್ತು ವೇತನದ ವಿವರ

ಒಬ್ಬ ಕಿರಿಯ ಅಭಿಯಂತರರನ್ನು ನಿಯೋಜಿಸಲಾಗಿದೆ. ರೂ. ೧೧,೦೦೦/- ಮತ್ತು ಇತರೆ ಭತ್ಯೆಗಳು

೪.ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚು

ಸುಮಾರು 3 ಕೋಟಿ ರೂಪಾಯಿಗಳು

೫. ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚನ್ನು ಯಾವ ನಿಧಿಯಿಂದ ಭರಿಸಲಾಗಿದೆ?
ಮಂಡಳಿಯ ನಿಧಿಯಿಂದ ಭರಿಸಲಾಗಿದೆ.

ಈ ಸಂಸ್ಥೆಯ ಬಗ್ಗೆ ಈಗ ನಾನು ಏನೂ ಬರೆಯಲಾರೆ. ಇದನ್ನು ಬೆಂಗಳೂರಿನ ಮತ್ತು ಇತರ ಊರುಗಳ ಜನ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಮಾಹಿತಿಯನ್ನು ಓದಿದ ಯಾರಿಗಾದರೂ, ಏನಾದರೂ ಹೇಳಬೇಕೆನಿಸಿದರೆ, ಖಂಡಿತಾ ಹೇಳಿ.

ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ

(ನೀನಾಸಂ ಉಡುಪಿಯಲ್ಲಿ ಆಡಿದ ನಾಟಕ "ನೀರ ನಿಲುತಾಣ"ದ ಕುರಿತ ಚರ್ಚೆಯಲ್ಲಿ ಶ್ರೀ ನರೇಂದ್ರ ಪೈಗಳು "ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು." ಎಂದು ಹೇಳಿದ್ದರು. ಇದು ಅದಕ್ಕೆ ಉತ್ತರವಾಗಿ ಬರೆದದ್ದು. "ಅವಧಿ"ಯಲ್ಲಿ ಪ್ರಕಟವಾಗದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.)
ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಂಡೇ ಬದುಕುತ್ತಿದ್ದೇವೆ. ಆದರೆ, ನಾನು ಮೈಕಿನ ಈ ಕಿರಿಕಿರಿಯಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ನಾಟಕದ ಪ್ರಯೋಗವನ್ನು ಮಾತ್ರ ಅಲ್ಲ, ಮೈಕನ್ನು ಸಹ "ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರ ಪೈಕಿ" ಅಲ್ಲ.
ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು ಸಾಧ್ಯವಿಲ್ಲ. ಅದೂ ಅಲ್ಲದೆ, ಹಾಗೆ ಮಾಡಿದರೆ ಮೈಕಿನ ಗಲಾಟೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಂಭವವೇ ಜಾಸ್ತಿ. ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಕೊಡಬೇಕು. ಇದು ಇನ್ನೂ ದೊಡ್ಡ ರಗಳೆ. ನಮ್ಮ ದೇಶದಲ್ಲಿ ಇದೂ ಸಾಧ್ಯವಿಲ್ಲ. ಮತ್ತೆ? ಫ್ಯಾನಿನ ವೇಗ ಹೆಚ್ಚಿಸಿ, ಸಾಧ್ಯವಾದಷ್ಟೂ ಜೋರಾಗಿ ಶಬ್ದ ಆಗುವಂತೆ ಮಾಡಿ, ಮೈಕ್ ಶಬ್ದ ಬರುವ ಕಡೆಯ ಕಿಟಿಕಿ ಬಾಗಿಲು ಹಾಕಿ, ಮೈಕ್ ಹಾಕಿದವರಿಗೆ ಸಹಸ್ರನಾಮ ಅರ್ಚನೆ ಮಾಡುತ್ತಾ ಮಲಗಿಬಿಡಿ! ಮತ್ತೆ? ಮತ್ತೆ ಬೇರೆ ಯಾರಾದರೂ ನಿಮ್ಮ ಕಷ್ಟ ಕೇಳುವವರು ಸಿಕ್ಕಿದರೆ ನಿಮ್ಮ ತಲೆನೋವು ಅವರಿಗೆ ದಾಟಿಸಿ. ಅಲ್ಲಿಗೆ ಸಮಸ್ಯೆ ಪರಿಹಾರವಾಯಿತು! ಮಗನೋ ಮಗಳೋ ಎರಡನೇ ಪಿಯುಸಿ ಪರೀಕ್ಷೆ ಕಟ್ಟಿದ್ದರೆ ಏನು ಮಾಡುತ್ತೀರಿ? ಕೂತಲ್ಲಿಯೇ ರಕ್ತದೊತ್ತಡ ಹೆಚ್ಚಿಸಿಕೊಳ್ಳಿ!
ಏನು ಮಾಡುವುದು? ಏನು ಪರಿಹಾರ? ಕೆಲವು ವರ್ಷಗಳ ಕೆಳಗೆ ನಾನು ನಮ್ಮ ತಾಲೂಕಿನ ಹಳ್ಳಿಯೊಂದರಲ್ಲಿ ಅದೆಷ್ಟೋ ದಿನಗಳ ಅಖಂಡ ಭಜನೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೊಬ್ಬರನ್ನು ಕೇಳಿದೆ:"ನೀವು ಭಜನೆಗೆ ಮೈಕ್ ಯಾಕೆ ಹಾಕುತ್ತೀರಿ?" (ಹೀಗೆ ಪ್ರಶ್ನೆ ಕೇಳುವುದು ತುಂಬ ಅಪಾಯಕಾರಿ. ನಾನು ಮೊದಲೇ ಬೇರೆ ಪೀಠಿಕೆ ಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ). ಅವರು ನನಗೆ ಭಜನೆಯ ಮಹತ್ವವನ್ನೂ, "ಭಜನೆಯಿದ್ದಲ್ಲಿ ವಿಭಜನೆ ಇಲ್ಲ" ಎಂಬ ತತ್ವವನ್ನೂ ವಿವರಿಸಿ ಹೇಳಿದರು. ನಾನು ಎಲ್ಲವನ್ನೂ ಸಮಾಧಾನದಿಂದ ಕೇಳಿ, "ಅದೆಲ್ಲ ಸರಿಯೇ. ಆದರೆ ಮೈಕ್ ಯಾಕೆ? ಅದಿಲ್ಲದೇ ಭಜನೆ ಮಾಡಬಹುದಲ್ಲ?" ಎಂದೆ. ಆಗ ಅವರು " ಓ ಅದಾ? ಅದು ನೋಡಿ, ಮೈಕ್ ಇಲ್ಲದಿದ್ದರೆ ಭಜನೆ ಮಾಡುವವರಿಗೆ ಉಮೇದೇ ಬರುವುದಿಲ್ಲ" ಎಂದರು. ನನಗೆ ಶಬ್ದಮಾಲಿನ್ಯದ ವಿಷಯದಲ್ಲಿ ಒಂದು ಭಾಷಣ ಮಾಡುವ ಜವಾಬ್ದಾರಿ ಇದ್ದುದರಿಂದ, ನಾನು ಇನ್ನೂ ಹಲವರನ್ನು ಈ ಪ್ರಶ್ನೆ ಕೇಳಿದೆ. ಯಾರೂ ಸಮರ್ಪಕ ಉತ್ತರ ಕೊಡುವುದಿಲ್ಲ. ಆದರೆ, ಈ ಪ್ರಶ್ನೆ ಕೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ..
ಹಲವು ವರ್ಷಗಳ ಕೆಳಗೆ, ಉಡುಪಿಯಲ್ಲಿ ಕ.ಸಾ.ಪ. ಒಂದು ಸಮ್ಮೇಳನ ನಡೆಸಿದಾಗ ಅದಕ್ಕೆ ಪ್ರತಿ ಎಂಬಂತೆ ಅಲ್ಲಿಯೇ ಮತ್ತೊಂದು ಸಮ್ಮೇಳನವೂ ನಡೆಯಿತು. ನಾನು ಅದಕ್ಕೆ ಹೋಗಿದ್ದೆ. ಜಿ. ರಾಜಶೇಖರ ಈ ಪ್ರತಿ ಸಮ್ಮೇಳನದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮ್ಮೇಳನ ಮುಗಿಸಿ ಬಂದ ನಾನು ಅದರ ಕುರಿತಂತೆ ಅವರಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ, ಊರಿಗೆಲ್ಲ ಕೇಳುವಂತೆ ಮೈಕ್ ಹಾಕಿದ ಕ್ರಮದ ಬಗ್ಗೆ ಆಕ್ಷೇಪಿಸಿದ್ದೆ. ಅವರು ನಾನು ಎತ್ತಿದ ಹಲವು ಸಂದೇಹಗಳಿಗೆ ಉತ್ತರ ಕೊಟ್ಟರು. ಮೈಕಿನ ಬಗ್ಗೆ ಮೌನ ವಹಿಸಿದರು. ಎಂಥೆಂಥ ಸೂಕ್ಷ್ಮವಾಗಿ ಆಲೋಚಿಸಬಲ್ಲವರೂ ಸಹ ಮೈಕ್ ಬಳಕೆಯ ಬಗ್ಗೆ ಹೇಗೆ ಒಂದು ನಿರ್ಲಿಪ್ತಿ ಬೆಳಸಿಕೊಂಡು ಬಿಟ್ಟಿರುತ್ತಾರೆ ಎಂಬುದಕ್ಕೆ ಇದನ್ನು ಹೇಳಿದೆ ಅಷ್ಟೆ.
ಬಂಟ್ವಾಳದಲ್ಲಿ ವಂಶ ಎಂಬ ಪತ್ರಿಕೆ ಇದೆ. ಈ ಪತ್ರಿಕೆಯ ಸಂಪಾದಕ ವರ್ಗದವರೊಂದಿಗೆ ನಾನೂ ಸೇರಿಕೊಂಡು ನಮ್ಮೂರಿನ ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ಸಂದರ್ಶನಕ್ಕಾಗಿ ಹೋಗಿದ್ದೆವು. ಪೋಲೀಸಿನವರ ಪ್ರಕಾರ, ಮೈಕು ಒಂದು ಸಮಸ್ಯೆಯೇ ಅಲ್ಲ. ಅದನ್ನು ಬಳಸುವವರೆಲ್ಲ ಸರಿಯಾದ ಲೈಸೆನ್ಸ್ ಪಡೆದೇ ಬಳಸುತ್ತಿದ್ದಾರೆ! ಸಮಸ್ಯೆಯೇ ಅಲ್ಲದ ಮೇಲೆ ಪರಿಹಾರದ ಮಾತೆಲ್ಲಿ ಬಂತು?
ಮಾಹಿತಿ ಹಕ್ಕು ಬಂದನಂತರ ಅದರ ಮೂಲಕ ಈ ಸಮಸ್ಯೆಗೆ ಏನಾದರೂ ಮದ್ದರೆಯಲು ಸಾಧ್ಯವೇ ಎಂದು ಯೋಚಿಸಿದೆ. ದಾರಿ ಕಾಣಲಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಹೀಗೊಂದು ಪತ್ರ ಬರೆದೆ:

ವಿಷಯ: ಧ್ವನಿವರ್ಧಕ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಬಗ್ಗೆ
ಧ್ವನಿವರ್ಧಕಗಳು ಉಂಟು ಮಾಡುವ ಶಬ್ದಮಾಲಿನ್ಯದಿಂದ ಅನೇಕ ನಾಗರಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಸೂಕ್ತ ಮಾಹಿತಿಯ ಕೊರತೆಯಿಂದ ಅಂಥವರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಾಗ, ಅನುಮತಿ ಪಡೆದವರು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡುವಂತೆ ಅವರಿಗೆ ಸೂಚಿಸಬೇಕಾಗಿ ಕೋರುತ್ತೇನೆ.
೧. ಧ್ವನಿವರ್ಧಕ ಬಳಸಲು ಅನುಮತಿ ಪಡೆದವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ
೨. ಬಳಸುವ ಧ್ವನಿವರ್ಧಕಗಳ ಸಂಖ್ಯೆ ಮತ್ತು ಅವುಗಳನ್ನು ಬಳಸುವ ಸ್ಥಳ
೩. ಧ್ವನಿವರ್ಧಕಗಳನ್ನು ಬಳಸುವ ಅವಧಿ (ಯಾವ ತಾರೀಕಿನಿಂದ ಯಾವ ತಾರೀಕಿನವರೆಗೆ ಮತ್ತು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ)
೪. ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ದೂರು ನೀಡಬಹುದಾದ ಅಧಿಕಾರಿಯ ಪದನಾಮ ಮತ್ತು ಮೊಬೈಲ್ ಸಂಖ್ಯೆ/ಸ್ಥಿರ ದೂರವಾಣಿ ಸಂಖ್ಯೆ
(ಯಾವುದೇ ಕಾರ್ಯಕ್ರಮ ಮಾಡುವವರು ತಮ್ಮ ಕಾರ್ಯಕ್ರಮದ ಬಗ್ಗೆ ಕರಪತ್ರ ಅಥವಾ ಆಮಂತ್ರಣವನ್ನು ಮುದ್ರಿಸುತ್ತಾರೆ. ಅದರಲ್ಲಿಯೇ ಈ ಮಾಹಿತಿಗಳನ್ನು ಮುದ್ರಿಸತಕ್ಕದ್ದೆಂದು ಅವರಿಗೆ ಸೂಚಿಸಬಹುದು. ಜೊತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಈ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಬಹುದು.)
ಮೇಲ್ಕಂಡ ಕ್ರಮವನ್ನು ಕೈಗೊಂಡಲ್ಲಿ ಸಾರ್ವಜನಿಕರು ತಮಗೆ ಧ್ವನಿವರ್ಧಕದ ಬಳಕೆಯಿಂದ ಕಿರಿಕಿರಿಯಾದರೆ ಕೂಡಲೇ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ.
ಈ ಪತ್ರಕ್ಕೆ ತಮ್ಮಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತೇನೆ.

ಜಿಲ್ಲಾಧಿಕಾರಿಗಳು "ಸೂಕ್ತ ಹಿಂಬರಹ ನೀಡುವುದು" ಎಂದು ಟಿಪ್ಪಣಿ ಹಾಕಿ, ಪತ್ರವನ್ನು ಎಸ್ ಪಿಯವರ ಆಫೀಸಿಗೆ ಕಳಿಸಿದ್ದಾರೆ.ಅಲ್ಲಿಂದ ಉತ್ತರ ಬಂದಿಲ್ಲ. ಒಂದು ನೆನಪೋಲೆ ಬರೆದಿದ್ದೇನೆ. ಆದರೂ ಉತ್ತರ ಬಂದಿಲ್ಲ. ಇನ್ನೊಂದು ನೆನಪೋಲೆ ಬರೆಯುವ ಸಮಯ ಆಗಿದೆ. ಬರೆಯುತ್ತೇನೆ. ಈ ಹಂತದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವುದನ್ನೂ ಪರಿಶೀಲಿಸಬಹುದು.
ಓದುಗರಿಂದ ಕೂಡಲೇ ಬರುವ ಪ್ರತಿಕ್ರಿಯೆ "ಹೀಗೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ" ಎಂಬುದು. ಅಂಥವರಿಗೆ ನನ್ನ ಪ್ರಶ್ನೆ: "ಬರೆದು ನೋಡಿದ್ದೀರಾ?" ಏನೂ ಮಾಡದಿರುವುದಕ್ಕಿಂತ ಹೀಗೆ ಮಾಡುವುದು ಉತ್ತಮ ಅಲ್ಲವೆ? ಇದು ಪ್ರಜಾಪ್ರಭುತ್ವ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅಣ್ಣಾ ಹಜಾರೆಯಂಥವರಿಂದ ನಮಗೊಂದು ನೈತಿಕ ಬೆಂಬಲಕ್ಕಿಂತ ಹೆಚ್ಚೇನೂ ಸಿಗುವುದು ಸಾಧ್ಯವಿಲ್ಲ.

ಭಾನುವಾರ, ಏಪ್ರಿಲ್ 24, 2011

ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ


ಪ್ರಿಯ ಮಧು ಸೀತಪ್ಪನವರಿಗೆ ನಮಸ್ಕಾರ.
ದೂರದ ಬ್ರಿಟನ್ನಿನಲ್ಲಿದ್ದೂ ತಾಯಿನಾಡಿನ ಸಮಸ್ಯೆಗಳ ಬಗ್ಗೆ ನೀವು ತೋರಿಸುತ್ತಿರುವ ಆಸಕ್ತಿಗಾಗಿ ಅಭಿನಂದನೆಗಳು.
ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನಿಮ್ಮ ಲೇಖನವನ್ನು ಓದಿರಲಿಲ್ಲ. ಇತ್ತೀಚೆಗೆ ಅಕಸ್ಮಾತ್ತಾಗಿ ನಿಮ್ಮ ಬ್ಲಾಗನ್ನು ನೋಡಿದೆ. ನೇತ್ರಾವತಿ ತಿರುವು ಯೋಜನೆಯ ಕುರಿತು ನಾನು ಮೊದಲಿಂದಲೂ ಆಸಕ್ತಿ ತಳೆದವನು. ಹಾಗಾಗಿ ನಿಮ್ಮ ಲೇಖನಗಳನ್ನು ಕುತೂಹಲದಿಂದ ಓದಿದೆ. ಓದಿದ ನಂತರ ನನ್ನ ಕೆಲವು ವಿಚಾರಗಳನ್ನು ಮಂಡಿಸಿದ್ದೇನೆ. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ.
"ಪ್ರಪಂಚದ ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ" ಎಂದು ಯಾರೋ ಹೇಳಿದ್ದಾರಂತೆ. ನೀರು ದಿನದಿಂದ ದಿನಕ್ಕೆ ಅಮೂಲ್ಯವಾಗುತ್ತ ಹೋಗುತ್ತಿದೆ. ನಮ್ಮ ಚರ್ಚೆಯ ಮೂಲದಲ್ಲಿರುವುದೂ ನೀರೇ. ನೀರಿಲ್ಲದ ಬಯಲುಸೀಮೆಯ ಜನರ, ಅದರಲ್ಲೂ ಹೆಂಗಸರ ಕಷ್ಟ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಬಯಲು ಸೀಮೆಯ ಜನರ ಸಮಸ್ಯೆಗೆ ಪಶ್ಚಿಮ ಘಟ್ಟಗಳಿಂದ ನೀರು ಒಯ್ಯುವುದು ಪರಿಹಾರ ಅಲ್ಲ. ಅದು ಆಯಾ ಸ್ಥಳದಲ್ಲಿಯೇ ಪರಿಹಾರ ಮಾಡಿಕೊಳ್ಳಬೇಕಾದ ಸಮಸ್ಯೆ.
ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಮುಖ್ಯವಾಗಿ ಜನರ ಸಹಭಾಗಿತ್ವ ಬೇಕು. ಭಾರತಕ್ಕೆ ಅದರ ದೊಡ್ಡ ಪರಂಪರೆಯೇ ಇದೆ. ಬಹಳ ಹಿಂದಿನಿಂದಲೂ ಬಯಲು ಸೀಮೆಯಲ್ಲಿ ಕೆರೆಗಳೇ ನೀರಿನ ಮೂಲಗಳಾಗಿದ್ದವು. ಆದರೆ "ಅಭಿವೃದ್ಧಿ" ಆದ ಹಾಗೆ ವಿದ್ಯುತ್ ಬಂತು. ಬೋರ್ ವೆಲ್ ತೆಗೆಯುವುದು ಸಾಧ್ಯವಾಯಿತು. ಕೆರೆಗಳನ್ನು, ಅದರೊಂದಿಗೆ ಬೆಳೆದು ಬಂದಿದ್ದ ನೀರು ಹಂಚಿಕೆಯ ವ್ಯವಸ್ಥೆಯನ್ನು ನಾವು ಕೈಬಿಟ್ಟೆವು. ಈಗ "ಇದ್ದಿದ್ದಿಲ್ಲ ಪೆದ್ದಂಭಟ್ಟ" ಎಂಬಂತಾಗಿದೆ ನಮ್ಮ ಸ್ಥಿತಿ.
ಸರಕಾರವೇನೋ ಕೆರೆಗಳ ಪುನರುಜ್ಜೀವನ ಎಂಬ ಹೆಸರಿನಲ್ಲಿ ಹಣವನ್ನು "ನೀರಿನಂತೆ" (ಈಗ ಹಾಗೆ ಹೇಳುವ ಹಾಗಿಲ್ಲ ಅಲ್ಲವೆ?) ಚೆಲ್ಲುತ್ತಿದೆ. ಆದರೆ, ಎಲ್ಲಿಯವರೆಗೆ ಜನರ ಸಾಮೂಹಿಕ ಸಹಭಾಗಿತ್ವ ಇಲ್ಲವೋ, "ನಮ್ಮ ಊರ ಕೆರೆಗೆ ನಾವೇ ಜವಾಬ್ದಾರರು" ಎಂಬ ಭಾವನೆ ಪುನಃ ಬರುವುದಿಲ್ಲವೋ, ಎಲ್ಲಿಯವರೆಗೆ ನಾವು ಪ್ರತಿಯೊಂದಕ್ಕೂ ಸರಕಾರದ ಕಡೆಗೆ ನೋಡುತ್ತಿರುತ್ತೇವೋ ಅಲ್ಲಿಯವರೆಗೂ ಸಮಸ್ಯೆಗೆ ಪರಿಹಾರವಿಲ್ಲ.
ಬಹುಶಃ ವಿನಾಯಕರೂ ಇದನ್ನು ಹೇಳಿರಬೇಕು. ನನ್ನ ನಿಲುವೂ ಅದೇ: ಜನಸಂಖ್ಯೆಯ ನಿಯಂತ್ರಣ, ಕೆರೆಗಳ ಪುನರುಜ್ಜೀವನ, ಜನರ ಸಹಭಾಗಿತ್ವ, ಮಳೆನೀರು ಕೊಯ್ಲು, ನೀರು ನಿರ್ವಹಣೆ, ಕಾಡುಗಳನ್ನು ಮತ್ತೆ ಬೆಳೆಸುವುದು ಮುಂತಾದ ವಿಧಾನಗಳಿಂದಲೇ ಬಯಲುಸೀಮೆಯ ನೀರಿನ ಸಮಸ್ಯೆ ಪರಿಹಾರವಾಗಬೇಕು. ಅದನ್ನು ಸಾಧಿಸಲು ಸಾಧ್ಯ. ರಾಳೇಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದುಕೊಂಡಿದ್ದೇನೆ. ನೀರಿನ ಕುರಿತಾದ ಶ್ರೀ ಪಡ್ರೆಯವರ ಪುಸ್ತಕಗಳನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಇಲ್ಲವಾದರೆ ದಯವಿಟ್ಟು ಓದಿ ನೋಡಿ.
ಇನ್ನು ಪಶ್ಚಿಮಘಟ್ಟಗಳಿಂದ ನೀರು ಒಯ್ಯುವುದರ ಪರವಾಗಿ ನಿಮ್ಮ ಲೇಖನದಲ್ಲಿರುವ ಹಲವು ಅಂಶಗಳಿಗೆ ಉತ್ತರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ವಾದ ನನ್ನ ಉದ್ದೇಶವಲ್ಲ. ಪಶ್ಚಿಮ ಘಟ್ಟವೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅದರ ಹೊಟ್ಟೆ ಕೊಯ್ಯುವ ಕೆಲಸ ನಾವು ಮಾಡುವುದು ಬೇಡ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತಲಿರುವ ಇರುವ ಇಪ್ಪತ್ತೆರಡು ನದಿಗಳ ನೀರು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ (೩೦೧೬ ಟಿ‌ಎಂಸಿ). ಅಂದರೆ ನೇತ್ರಾವತಿ ನದಿಯಿಂದ ಮಾತ್ರ ಅರಬ್ಬೀ ಸಮುದ್ರ ಜೀವಿಸಿಲ್ಲ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಜೀವನದಿಯಿಂದ ಪ್ರತಿದಿನ ೪೧೫ ಟಿ‌ಎಂಸಿಯಷ್ಟು ನೀರು ಸಮುದ್ರದ ಪಾಲಾದರೆ, ಉಳಿದ ೨೧ ನದಿಗಳು ಮತ್ತು ಅನೇಕ ಹಳ್ಳಗಳಿಂದ ೨೪೦೦ ಟಿ‌ಎಂಸಿಯಷ್ಟು ಸಿಹಿ ನೀರು ಸಮುದ್ರದಲ್ಲಿ ಕರಗುತ್ತದೆ. ಈ ಅಂಕಿ ಅಂಶಗಳನ್ನು ಏಕೆ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ ಎಂದರೆ, ವಿನಾಯಕ ಭಟ್ಟರು ತಮ್ಮ ಲೇಖನದಲ್ಲಿ ಈ ಯೋಜನೆಯಿಂದ ಸಮುದ್ರದ ಉಪ್ಪಿನಾಂಶ ಹೆಚ್ಚಾಗುತ್ತದೆ ಹಾಗೂ ನೇತ್ರಾವತಿ ನದಿಗೆ ಸಮುದ್ರದ ನೀರು ನುಗ್ಗುವುದರಿಂದ ನದಿಯ ಉಪ್ಪಿನಾಂಶವು ಹೆಚ್ಚಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ ನೇತ್ರಾವತಿ ನದಿಯಿಂದ ಕೇವಲ ೪೦ ಟಿ.ಎಂ.ಸಿ ನೀರನ್ನು ಮಾತ್ರ ಬಳಸುತ್ತೇವೆ. ಅಂದರೆ ನೇತ್ರಾವತಿಯ ಮಳೆಗಾಲದ ೪೧೫ ಟಿ.ಎಂ.ಸಿ.ಯಲ್ಲಿ ಕೇವಲ ಶೇ.೧೦ರಷ್ಟು ನೀರು ಕಡಿಮೆಯಾಗುವುದರಿಂದ ನದಿಯ ನೀರಿನ ಲವಣಾಂಶಗಳಾಗಲಿ ಅಥವಾ ಉಪ್ಪಿನಾಂಶವಾಗಲಿ ಅಥವಾ ಸಿಹಿ ನೀರಿನ ಜೀವರಾಶಿಯ ಆಹಾರಕ್ಕಾಗಲಿ ತೊಂದರೆಯಾಗುತ್ತದೆನ್ನುವುದು ಹಾಸ್ಯಾಸ್ಪದ. ಮತ್ತೊಂದು ಅವರ ಪ್ರಶ್ನೆಯೆಂದರೆ, ಸಮುದ್ರಕ್ಕೆ ಸೇರುವ ನದಿ ನೀರು ಕಡಿಮೆಯಾದರೆ ಸಮುದ್ರದ ಉಪ್ಪಿನಾಂಶ ಹೆಚ್ಚಾಗುವ ಆತಂಕ. ನೇತ್ರಾವತಿ ನದಿ ಸಮುದ್ರ ಸೇರುವ ಆಜು ಬಾಜಿನಲ್ಲಿ ಸುಮಾರು ೨೦೦೦ ಟಿ.ಎಂ.ಸಿ.ಯಷ್ಟು ನೀರು ಉಳಿದ ೨೧ ನದಿಗಳಿಂದ ಹಾಗು ಅನೇಕ ಹಳ್ಳಗಳಿಂದ ಮಳೆಗಾಲದಲ್ಲಿ ಸೇರುತ್ತದೆ. ಇದಲ್ಲದೆ ಸಮುದ್ರದ ಸಾವಿರಾರು ಚದರ ಕಿ.ಮಿ.ಗಳ ಮೇಲೆ ೪೫೦೦ ಮಿ.ಮಿ.ಗಿಂತ ಹೆಚ್ಚು ಮಳೆ ಬೀಳುವುದರಿಂದ ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ಸಮುದ್ರಕ್ಕೆ ಸೇರುತ್ತಿರುವಾಗ ಸಮುದ್ರದ ಉಪ್ಪಿನಾಂಶ ಹೆಚ್ಚಾಗಿ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುವವರಿಗೆ ಏನೆನ್ನಬೇಕೊ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅರಬ್ಬೀ ಸಮುದ್ರದಂತಹ ಅಕ್ಷಯಪಾತ್ರೆಗೆ ಅಸಂಖ್ಯಾತ ನದಿಗಳ ನೀರು, ಆಕಾಶದಿಂದ ಬೀಳುವ ಮಳೆಯೆ ನೀರು ಬಂದು ಸೇರುತ್ತಲೇ ಇರುತ್ತದೆ.

ಪರಮಶಿವಯ್ಯನವರ ದೃಷ್ಟಿ ನೇತ್ರಾವತಿಯನ್ನು ತಿರುಗಿಸುವುದಕ್ಕೆ ಸೀಮಿತವಾಗಿಲ್ಲ. ಅವರ ವರದಿಯ ಒಂದನೇ ಅಧ್ಯಾಯದ ೧.೦೭ನೇ ಅಂಶ ಹೀಗಿದೆ: ".....conceiving this water for beneficial use, lies the INGENUITY of the Engineers, and marks as the first step in harnessing further waters of west flowing rivers."
೧.೦೮ರಲ್ಲಿ ಹೀಗಿದೆ:"..... It also paves way for utilising more water of west flowing rivers to drought affected areas" .
ಅಧ್ಯಾಯ ೩ರ ೩.೦೫ರಲ್ಲಿ ಹೀಗಿದೆ: "All the waters of East flowing Rivers have been harnessed (some projects are under construction) and it is time to plan for harvesting these west flowing river waters for beneficial use."
ಅಧ್ಯಾಯ ೨೦ರ ೨೦.೦೪ರಲ್ಲಿ ಹೀಗಿದೆ:
It is expected that west flowing waters can be diverted to East by installing Riversible turbines. When this new concept becomes feasible this can be adopted in our country, when there will be huge quantity of water available to our state.
ಇನ್ನು ನದಿಗಳ ಸಿಹಿನೀರು ಸಮುದ್ರವನ್ನು ಸೇರುವುದನ್ನು ತಡೆಯುವುದರಿಂದ ಆಗುವ ಪರಿಣಾಮಗಳೇನು ಎಂಬುದನ್ನು ತಜ್ನರು ಅಧ್ಯಯನ ಮಾಡಿ ವರದಿ ಕೊಡಬೇಕು. ಅದು ಜನಸಾಮಾನ್ಯರು ಉತ್ತರಿಸಬಹುದಾದ ಪ್ರಶ್ನೆಯಲ್ಲ.
ಮಂಗಳೂರಿನ ಸಮುದ್ರಕ್ಕೆ ಈಗಾಗಲೇ ಎಂ ಆರ್ ಪಿ ಎಲ್ ಮತ್ತಿತರ ಕಂಪೆನಿಗಳು ತಮ್ಮ ತ್ಯಾಜ್ಯವನ್ನು ಸುರಿಯುತ್ತಿವೆ. ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ಇನ್ನು ಸ್ವಲ್ಪ ಸಮಯದಲ್ಲೇ ತನ್ನ ತ್ಯಾಜ್ಯಗಳನ್ನು ಸಮುದ್ರಕ್ಕೆ ಬಿಡಲು ಪ್ರಾರಂಭಿಸುತ್ತದೆ. ದಿನದಿಂದ ದಿನಕ್ಕೆ ಆಧುನಿಕ ತಾಂತ್ರಿಕತೆಯಿಂದಾಗಿ ಹೆಚ್ಚು ಹೆಚ್ಚು ಅಪಾಯಕಾರಿ ತ್ಯಾಜ್ಯಗಳು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. ಮೀನುಗಾರಿಕೆ ಮಾಡುವ ಡೀಸೆಲ್ ಚಾಲಿತ ದೋಣಿಗಳಿಂದಾಗಿಯೂ ಸಮುದ್ರದ ನೀರು ಮಲಿನಗೊಳ್ಳುತ್ತಿದೆ. ಇದರೊಂದಿಗೆ, ಸೇರಬೇಕಾದ ಸಿಹಿನೀರು ಸೇರದೆ ಹೋದರೆ ಏನಾದೀತು ಎಂಬುದನ್ನು ಅಧ್ಯಯನ ಮಾಡಿಯೇ ಹೇಳಬೇಕಾಗುತ್ತದೆ. ಮೇಲ್ನೋಟಕ್ಕೆ ಕಾಣುವಂತೆ, ಮೀನುಗಾರಿಕೆ ನಿಧಾನವಾಗಿಯಾದರೂ ಅಪಾಯಕ್ಕೆ ಸಿಕ್ಕಿಕೊಳ್ಳುತ್ತಿದೆ.


ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ.

ಶೇ. ೧೦ ಎನ್ನುವುದು ಪ್ರಾರಂಭ ಮಾತ್ರ. ಮುಂದೆ ಅದು ಹೆಚ್ಚುತ್ತ ಹೋಗುತ್ತದೆ.

೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ.

ನಾನು ಸುಮಾರು ಮೂವತ್ತು ವರ್ಷದಿಂದ ಬಂಟ್ವಾಳದಲ್ಲಿದ್ದೇನೆ. ಬಂಟ್ವಾಳದವರಿಗೆ ನೆರೆ ಖಂಡಿತವಾಗಿಯೂ ಒಂದು ಸಮಸ್ಯೆಯಲ್ಲ.
(ಈ ನಡುವೆ ವಿನಾಯಕರದ್ದಾಗಲಿ, ಮೋಹನ ಹೆಗಡೆಯವರದ್ದಾಗಲಿ ಪ್ರತಿಕ್ರಿಯೆ ನನಗೆ ಓದಲು ಸಿಗಲಿಲ್ಲ. ಅದನ್ನು ಒದಗಿಸಬಹುದೆ?)


ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ.

ಹಿಂದೆ ನಾಶವಾಗಿದೆ ಹೌದು. ಅದು ಇನ್ನು ಮುಂದೆ ಕಾಡನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಬೇಕು, ಕಡಿಯುವುದಕ್ಕೆ ಸಮರ್ಥನೆಯಾಗಬಾರದು.

ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್ ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ.

ಯೋಜನೆಯ ಸ್ವರೂಪದ ಸ್ಪಷ್ಟ ಕಲ್ಪನೆ ಇಲ್ಲದೆ ಈ ಬಗ್ಗೆ ಏನೂ ಹೇಳುವುದು ಕಷ್ಟ. ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆಗಳ ಮೂಲಕ ನೀರು ಸಂಗ್ರಹಿಸುವುದಾಗಿ ಪರಮೇಶ್ವರಯ್ಯನವರು ಹೇಳಿದ್ದಾರೆ. ಕೊಳವೆಗಳ ವಿಷಯ ಅವರು ಎಲ್ಲೂ ಮಾತಾಡಿದ್ದು ಕಾಣಲಿಲ್ಲ. ಮೇಲಿಂದ ಇಳಿದು ಬಂದ ನೀರು ಸಂಗ್ರಹ ಆಗಬೇಕಾದರೆ ತೆರೆದ ಕಾಲುವೆ ಬೇಕು; ಈ ಕಾಲುವೆಗಳಲ್ಲಿ ನೀರು ಇಂಗಬಾರದು. ಎಂದರೆ ಅವುಗಳನ್ನು ಕಾಂಕ್ರೀಟಿನಲ್ಲಿ ನಿರ್ಮಾಣ ಮಾಡಬೇಕು. ಕಾಲುವೆಯ ಪ್ರಾರಂಭದ ಗಾತ್ರವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಹೋಗುತ್ತ ಹೋಗುತ್ತ ಸಂಗ್ರಹವಾಗುವ ನೀರಿನ ಪ್ರಮಾಣ ಹೆಚ್ಚುತ್ತ ಹೋಗುವುದರಿಂದ, ಕಾಲುವೆಯ ಗಾತ್ರವನ್ನೂ ಅದಕ್ಕೆ ತಕ್ಕಂತೆ ಹೆಚ್ಚಿಸುತ್ತ ಹೋಗಬೇಕಾದೀತು. ಇದೆಲ್ಲ ತಾಂತ್ರಿಕ ವಿಷಯಗಳು. "ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ." ಎಂದು ಪರಮಶಿವಯ್ಯನವರು ಎಲ್ಲಿ ಹೇಳಿದ್ದಾರೆ ಎಂದು ತಿಳಿಸಬಹುದೆ?

ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು.

ಹೌದು. ೫೦೦ ಎಂಜಿಡಿ ಎಂದು ಯಾರಾದರೂ ಹೇಳಿದ್ದರೆ ಅದು ಸರಿಯಲ್ಲ.
ಇಡೀ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿಲ್ಲ. ಈಗ ಮಂಗಳೂರು ವಿಶೇಷ ಅರ್ಥಿಕ ವಲಯ ಕಂಪೆನಿ ಎಂಬ ಕಂಪೆನಿ ಅಸ್ತಿತ್ವಕ್ಕೆ ಬಂದಿದೆ. ಈ ಕಂಪೆನಿಗೆ ಸುಮಾರು ೪೦೦೦ ಎಕ್ರೆ ಭೂಮಿ ಬೇಕಾಗಿದ್ದು, ಈಗ ಸುಮಾರು ೨೦೦೦ ಎಕ್ರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಈ ಕಂಪೆನಿಯ ಒಟ್ಟು ನೀರಿನ ಅವಶ್ಯಕತೆ ೪೫ ಎಂಜಿಡಿ. ಈ ಪೈಕಿ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ೧೫ ಎಂಜಿಡಿ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ೧೫ರ ಪೈಕಿ ೧೨.೫ ಎಂಜಿಡಿ ನೀರನ್ನು ಕಂಪೆನಿ ನೇತ್ರಾವತಿ ನದಿಯಿಂದ ಎತ್ತಲು ಉದ್ದೇಶಿಸಿದೆ. ಈ ಬಗ್ಗ ಪೈಪ್ ಲೈನ್ ಅಳವಡಿಸಲು ಈಗಾಗಲೇ ಟೆಂಡರು ಕರೆಯಲಾಗಿದೆ.
ನೇತ್ರಾವತಿ ನದಿಯ ನೀರು ಬಳಸುವ ಮುಖ್ಯ ಊರುಗಳೆಂದರೆ, ಕುಕ್ಕೆ ಸುಬ್ರಹ್ಮಣ್ಯ (ಕುಮಾರಧಾರೆ), ಧರ್ಮಸ್ಥಳ, ಉಪ್ಪಿನಂಗಡಿ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು. ನದಿಯ ಉದ್ದಕ್ಕೂ ಅಸಂಖ್ಯಾತ ಸಣ್ಣ ಊರುಗಳಿವೆ. ಈ ಊರುಗಳೂ ನೀರಿಗಾಗಿ ನೇತ್ರಾವತಿಯನ್ನು ಆಶ್ರಯಿಸಿವೆ. ಅಸಂಖ್ಯಾತ ಪಂಪ್ ಸೆಟ್ ಗಳನ್ನು ನದಿಗೆ ಅಳವಡಿಸಲಾಗಿದೆ. (ನೇತ್ರಾವತಿ ಎಂದರೆ ಕುಮಾರಧಾರೆ ಮತ್ತು ನೇತ್ರಾವತಿ ನದಿಗಳ ಸಂಗಮ. ಸುಬ್ರಹ್ಮಣ್ಯದ ಕಡೆಯಿಂದ ಬರುವ ಕುಮಾರಧಾರೆ ಮತ್ತು ಧರ್ಮಸ್ಥಳದ ಕಡೆಯಿಂದ ಬರುವ ನೇತ್ರಾವತಿಗಳು ಉಪ್ಪಿನಂಗಡಿಯಲ್ಲಿ ಸಂಗಮವಾಗಿ ಮುಂದೆ ನೇತ್ರಾವತಿ ಎಂಬ ಹೆಸರಿನಲ್ಲಿ ಮಂಗಳೂರಿನವರೆಗೂ ಹರಿಯುತ್ತದೆ.)
ನೇತ್ರಾವತಿಗೆ ಈಗ ಮುಖ್ಯವಾಗಿ ಐದು ಅಣೆಕಟ್ಟುಗಳಿವೆ: ಮೊದಲನೆಯದು ಕುಮಾರಧಾರೆ ನದಿಗೆ ಪುತ್ತೂರಿನ ಸಮೀಪ ಕಟ್ಟಿರುವ ಅಣೆಕಟ್ಟು. ಇದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಎರಡನೆಯದು ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ. ಇದು ಕಿರು ಜಲವಿದ್ಯುತ್ ಯೋಜನೆ. ಮೂರನೆಯದು ಎಂ ಆರ್ ಪಿ ಎಲ್ ಕಂಪೆನಿಯ ಅಣೆಕಟ್ಟು. ಈ ಅಣೆಕಟ್ಟಿನಿಂದ ಒಟ್ಟು ೬ ಎಂಜಿಡಿ ನೀರು ಎತ್ತಲಾಗುತ್ತಿದೆ. ನಾಲ್ಕನೆಯದು ಎ ಎಂ ಆರ್ ಪವರ್ ಪ್ರಾಜೆಕ್ಟ್ ನ ಅಣೆಕಟ್ಟು. ಇದು ಕಿರು ಜಲವಿದ್ಯುತ್ ಯೋಜನೆ. ಐದನೆಯದು ಮಂಗಳೂರು ಮಹಾನಗರ ಪಾಲಿಕೆಯದು. ಇದರಿಂದ ಕಳೆದ ವರ್ಷದ ವರೆಗೂ ೧೮ ಎಂಜಿಡಿ ನೀರೆತ್ತಲಾಗುತ್ತಿತ್ತು. ಈ ವರ್ಷದಿಂದ ೩೬ ಎಂಜಿಡಿ ನೀರೆತ್ತಲು ಸಿದ್ಧತೆಗಳು ನಡೆಯುತ್ತಿವೆ.
ಆರನೆಯದಾಗಿ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ೧೨.೫ ಎಂಜಿಡಿ ನೀರೆತ್ತಲು ಸಿದ್ಧತೆಗಳನ್ನು ನಡೆಸುತ್ತಿದೆ
ಪರಮಶಿವಯ್ಯನವರ ಯೋಜನೆ ಮಳೆಯ ನೀರನ್ನು ಮಾತ್ರ ತಿರುಗಿಸುವ ಉದ್ದೇಶ ಹೊಂದಿರುವುದರಿಂದ, ಮೇಲುನೋಟಕ್ಕೆ ಅದರಿಂದ ಯಾವ ತೊಂದರೆಯೂ ಆಗುವಂತೆ ಕಾಣುವುದಿಲ್ಲ. ಆದರೆ ಸಮಸ್ಯೆ ಇಷ್ಟು ಸರಳ ಅಲ್ಲ.
ನೇತ್ರಾವತಿಯ ಜೀವ ಇರುವುದು ಪಶ್ಚಿಮ ಘಟ್ಟದ ಕಾಡುಗಳಲ್ಲಿ. ಅಲ್ಲಿ ಕಾಡು ಇದ್ದರೆ ಮಾತ್ರ ನೇತ್ರಾವತಿ ಮಾತ್ರವಲ್ಲ, ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಎಲ್ಲ ನದಿಗಳಲ್ಲೂ ನೀರಿರುವುದು ಸಾಧ್ಯ. ಅಲ್ಲಿ ಕಾಡು, ಗುಡ್ಡಗಳನ್ನು ನಾಶ ಮಾಡುವುದೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಕೊಯ್ದ ಹಾಗೆಯೇ.
ಕರ್ನಾಟಕ ಸರಕಾರ ಈಗ ಸುಮಾರು ೨೭ ಕಿರುಜಲವಿದ್ಯುತ್ ಯೋಜನೆಗಳಿಗೆ ಈ ಪ್ರದೇಶದಲ್ಲಿ ಅನುಮತಿ ಕೊಟ್ಟಿದೆ. ಇವುಗಳಲ್ಲಿ ಕೆಲವು ಈಗಾಗಲೇ ಕಾರ್ಯಾರಂಭ ಮಾದಿವೆ. (ತೀರ ಇತ್ತೀಚೆಗೆ ಇನ್ನು ಮುಂದೆ ಕಿರು ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ಕೊಡುವುದಕ್ಕೆ ಹೈಕೋರ್ಟು ತಡೆಯಾಜ್ನೆ ನೀಡಿದೆ) ಈ ಯೋಜನೆಗಳಲ್ಲಿ ಹಲವು, ನೇರವಾಗಿ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲೇ ಇವೆ. ಇವುಗಳ ಉತ್ಪಾದನಾ ಘಟಕಗಳಿಗಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಾಡು ನಾಶ ಆಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವು ಉತ್ಪಾದಿಸುವ ವಿದ್ಯುತ್ತನ್ನು ಪೇಟೆಗೆ ಸಾಗಿಸಲು ವಿದ್ಯುತ್ ಲೈನುಗಳನ್ನು ಎಳೆಯುವಾಗ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಮಾತ್ರವಲ್ಲ, ಸದ್ಯಕ್ಕೆ ದುರ್ಗಮವಾಗಿರುವ ಈ ಪ್ರದೇಶಕ್ಕೆ ಎಲ್ಲ ರೀತಿಯ ಖದೀಮರುಗಳಿಗೂ ಪ್ರವೇಶ ಅತ್ಯಂತ ಸುಲಭವಾಗುತ್ತದೆ. ವಾಸ್ತವವಾಗಿ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸವೆಂದರೆ ಅಲ್ಲಿಗೆ ಮನುಷ್ಯಪ್ರವೇಶವನ್ನು ಸಾಧ್ಯವಾದಷ್ಟೂ ತಡೆಯುವುದು. ಆದರೆ, ಈ ಕಿರು ಜಲವಿದ್ಯುತ್ ಯೋಜನೆಗಳಿಂದಾಗಿ ಪಶ್ಚಿಮಘಟ್ಟಗಳು ತಮ್ಮ ಸ್ವರೂಪವನ್ನೇ ಕಳೆದುಕೊಳ್ಳಲಿವೆ. ಇದರೊಂದಿಗೆ ನೇತ್ರಾವತಿ ತಿರುವು ಯೋಜನೆ ಜಾರಿಗೆ ಬಂದರಂತೂ, ಅಷ್ಟು ಭಾಗ ಪಶ್ಚಿಮ ಘಟ್ಟಗಳು ಸಂಪೂರ್ಣ ವಿರೂಪಗೊಳ್ಳಲಿವೆ. ಈ ತಪ್ಪನ್ನು, ಮುಂದೆ , ಬೇಕೆಂದರೂ ಸರಿಪಡಿಸಿಕೊಳ್ಳುವುದು ಸಾಧ್ಯವಿಲ್ಲ.


ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ.ಮೀ. ವಾರ್ಷಿಕ ಮಳೆಯಾಗುತ್ತದೆ. ಮಳೆ ಕೊಯ್ಲಿನಿಂದ ಸುಮಾರು ೮.೪೨ ಟಿ.ಎಮ್.ಸಿ ನೀರನ್ನು ಶೇಖರಿಸಬಹುದಾಗಿದೆ. ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಅಂದರೆ ನಮಗೆ ಸುಮಾರು ೫೦ ಟಿ,ಎಂ.ಸಿ.ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ.

ನೀವು ಯಾವ ಎರಡು ಜಿಲ್ಲೆಗಳನ್ನು ಹೇಳುತ್ತಿದ್ದೀರೆಂದು ನನಗೆ ತಿಳಿಯಲಿಲ್ಲ. ಆ ಪೈಕಿ ಒಂದು ಕೋಲಾರ ಎಂದು ಭಾವಿಸುತ್ತೇನೆ. ಅಲ್ಲಿ ಯಾರಾದರೂ, ವೈಯಕ್ತಿಕ ನೆಲೆಯಲ್ಲಾದರೂ ಮಳೆನೀರು ಸಂಗ್ರಹ ಮಾಡಿ ಬಳಸುತ್ತಿರುವ ಉದಾಹರಣೆಗಳು ನಿಮಗೆ ತಿಳಿದಿದೆಯೆ? ಅವರ ಅಭಿಪ್ರಾಯವೇನು? ಅಂಥವರ ವಿಳಾಸ ಸಿಕ್ಕಿದರೆ, ಅಲ್ಲಿಗೆ ಹೋಗಿ ನೋಡಿಬರುವ ಆಸೆ ನನಗಿದೆ. ದಯವಿಟ್ಟು ಗೊತ್ತಿದ್ದರೆ ತಿಳಿಸಿ.

ಕರಾವಳಿಯ ಜಾರ್ಜ್ ಫರ್ನಾಂಡಿಸ್ ರ್‍ಯೆಲ್ವೆ ಮಂತ್ರಿಯಾಗಿದ್ದಾಗ ಕೊಂಕಣ ರ್‍ಯೆಲ್ವೆ ಪ್ರಾಜೆಕ್ಟ್ ಜಾರಿಯಾಯ್ತು. ಇದರಲ್ಲಿ ಸುಮಾರು ೪೦೦೦ ಹೆಕ್ಟೆರುಗಳಷ್ಟು ಅರಣ್ಯ ನಾಶವಾದರೂ ಕರಾವಳಿಯ ಯಾವುದೇ ಪರಿಸರವಾದಿಗಳು ಚಕಾರವೆತ್ತಲಿಲ್ಲ.

ಇದು ವಾದದ ಮಾತು. ಪರಿಸರವಾದಿಗಳು ಅದನ್ನೂ ವಿರೋಧಿಸಿರಬಹುದು. ಇರಲಿ.
ಕೊಂಕಣ ರೈಲ್ವೆ ಹೋಗುವುದು ಉದ್ದಕ್ಕೂ ಸಮುದ್ರದ ಬದಿಯಲ್ಲಿ. ಬಹುಶಃ ಎಲ್ಲಿಯೂ ಅದರ ಹಳಿಗಳು ಸಮುದ್ರದಿಂದ ಒಂದು ಕಿ.ಮೀ. ಗಿಂತ ಹೆಚ್ಚು ದೂರದಲ್ಲಿಲ್ಲ. ಈ ಪ್ರದೇಶದಲ್ಲಿ ಇದ್ದಿರಬಹುದಾದ ಕಾಡಿಗೂ, ಪಶ್ಚಿಮಘಟ್ಟದ ಹೃದಯಭಾಗದಲ್ಲಿ ಇರುವ ಕಾಡಿಗೂ ಹೋಲಿಕೆ ಇಲ್ಲ.
"ಅಲ್ಲಿ ಕಡಿದಿದ್ದೇವೆ ಇಲ್ಲಿ ಯಾಕೆ ಕಡಿಯಬಾರದು?" ಎನ್ನುವುದಕ್ಕಿಂತ "ಅಲ್ಲಿ ಕಡಿದಿದ್ದೇವೆ, ಇಲ್ಲಾದರೂ ಉಳಿಸಿಕೊಳ್ಳೋಣ" ಎನ್ನುವುದು ನಮ್ಮ ದೃಷ್ಟಿಕೋನವಾಗಬೇಕು ಅಲ್ಲವೆ?


ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ.

ಪರಮಶಿವಯ್ಯನವರ ವರದಿಯ ಮೂರನೆಯ ಅಧ್ಯಾಯದ ೩.೦೯ರ ಕೊನೆಯಲ್ಲಿ ಹೀಗಿದೆ: "The total yield of water at Pani Mangalore site is 446.62 TMC and total utilisation by these two projects is 142.46 TMC only"
೫ನೇ ಅಧ್ಯಾಯದ ೫.೦೦ರಲ್ಲಿ ಹೀಗೆ ಹೇಳಿದೆ: "Total quantity of water available for this project 90.73"
"ಹೇಮಾವತಿಯ ನೀರಿನೊಂದಿಗೆ ಬೆರಸುವ" ವಿಷಯವನ್ನು ಪರಮಶಿವಯ್ಯನವರು ಪ್ರಸ್ತಾವಿಸಿಲ್ಲ. ೫ನೇ ಅಧ್ಯಾಯದ b vii ನಲ್ಲಿ ಹೀಗಿದೆ:
Main canal crosses Hemavathy River from right to left bank of the river
The main canal is continued further from E to F for a length of 16 Kms in contour with bed slope of seven inches per Km and crosses the Hemavathy river by means of a aqueduct. The bed level of the canal on the left Bank at pont F is 900 Mtrs The F.R. of Hemavathy reservoir is 891 Mtrs (2922 ft.) thus this canal will be about 9 Mtrs above the FRL of the Reservoir. "


ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಅಣೆಕಟ್ಟನ್ನು ಕಟ್ಟುವುದಿಲ್ಲ

ಅಧ್ಯಾಯ ೧ ರ ೧.೦೫: Any scheme for utilisation of heavy quantity of water, involves submersion of large areas of fertile lands, besides Rehabilitation of number of villages/Towns. But the project is entirely different and makes use of existing Tanks for storage"
ಅಧ್ಯಾಯ ೩ರ ೩.೧೧: "As the configuration does not permit large scale storage reservoirs it is envisaged to Construct 27 small reservoirs to hold the yield available from the respective C.A. of hallas ......."
ಅಧ್ಯಾಯ ೫ ರ ೫.೦೨ i): "...Total capacity of 27 reservoirs is about 39.365 TMC, some extra storage capacity is kept to store flash flood waters, since extra submersion area is negligible."
ಈ ಯೋಜನೆಯನ್ನು ರೂಪಿಸುವಾಗ ಪರಮಶಿವಯ್ಯನವರಿಗೆ ಹತ್ತಿರ ಹತ್ತಿರ ಎಂಬತ್ತು ವರ್ಷ ಆಗಿರಬೇಕು. ಅವರ ವರದಿಯಲ್ಲಿ ಎಷ್ಟೋ ಸಲ ಅವರು ಹೇಳಿದ್ದನ್ನೇ ಹೇಳುತ್ತಾರೆ. ಅವರು ಹಿರಿಯರು ಎಂಬುದರಿಂದ, ಅವರ ವಯಸ್ಸಿಗೆ ಗೌರವ ಕೊಟ್ಟು ಅದನ್ನು ಸಹಿಸಿಕೊಳ್ಳಬಹುದು. ಆದರೆ ಮೇಲಿನ ಅವರ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? "But the project is entirely different and makes use of existing Tanks for storage" ಎಂಬ ಅವರ ಮಾತು ಅಪ್ಪಟ ಸುಳ್ಳಲ್ಲವೆ?
/

ಪಶ್ಚಿಮ ಘಟ್ಟಗಳನ್ನು ಸೀಳುವ ಅವಶ್ಯಕತೆಯಿಲ್ಲ.

ಅಧ್ಯಾಯ ೫ ರ ೫.೦೧ a (ಎರಡನೇ ಪ್ಯಾರಾ):
"It is proposed to start the Garland canal from Gadikal Gudda at the peak line of western ghat with C.B.L. of 930 mtrs and reach 150th K.M. with a canal bed slope of seven inches per Km with sufficient canal capacity to intercept and convey all the Run-off water of normal rain-falling on the catchment area between western ghat peak line and the canal alignment......"
ಗುಡ್ಡದ ಮಧ್ಯಭಾಗದಲ್ಲಿ ಕಾಲುವೆ ತೆಗೆಯುವುದೆಂದರೆ ಗುಡ್ಡವನ್ನು ಸೀಳುವುದು ಎಂದೇ ಅರ್ಥವಲ್ಲವೆ?
ಒಂದು ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆ ಎನ್ನುತ್ತಾರೆ. ಅದರ ಅಗಲ ಆಳಗಳನ್ನು ಹೇಳಿಲ್ಲ. (ಮುಂದೆ ೮೨೦೦ಕ್ಯೂಸೆಕ್ಸ್ ನೀರನ್ನು ಸಾಗಿಸಬಲ್ಲ ಕಾಲುವೆ, ಹಾಗಾಗಿ ಇದರಲ್ಲಿ ಜಲಸಾರಿಗೆ ಸಾಧ್ಯ ಎಂದಿದ್ದಾರೆ). ಗಡಿಕಲ್ ಗುಡ್ಡ ಸಮುದ್ರ ಮಟ್ಟದಿಂದ ೧೨೦೦ ಮೀಟರ್ ಎತ್ತರ ಇದೆಯೆಂದು ಭಾವಿಸೋಣ. ೯೩೦ನೇ ಮೀಟರಿನಲ್ಲಿ ಕಾಲುವೆ ಮಾಡಿದರೆ, ಮೇಲಿನ ೨೭೦ ಮೀಟರ್ ಎತ್ತರದಿಂದ ನೀರು ಇಳಿದು ಬಂದು ಕಾಲುವೆಯಲ್ಲಿ ಸಂಗ್ರಹವಾಗಿ ಮುಂದೆ ಹರಿಯಬೇಕು. ಎಂದರೆ ಕಾಲುವೆಯ ಮೇಲುಭಾಗ ೨೭೦ ಮೀಟರ್ ಇಳಿಜಾರಾದ ಗುಡ್ಡ ಮತ್ತು ಕೆಳಭಾಗ ೯೦೦ ಮೀಟರ್ ಇಳಿಜಾರಾದ ಗುಡ್ಡ. ಮಳೆಗಾಲದಲ್ಲಿ ಮೇಲಿಂದ ಗುಡ್ಡ ಜರಿದರೆ ಕಾಲುವೆ ಕಟ್ಟಿಕೊಳ್ಳುತ್ತದೆ. ಕೆಳಗಿಂದ ಜರಿದರೆ, ಕಾಲುವೆ ಹಿಸಿದು ನೀರು ಕೆಳಗೆ ಹರಿಯುತ್ತದೆ. ಗುಡ್ಡ ಜರಿಯದ ಹಾಗೆ ಮಾಡುವ ತಾಂತ್ರಿಕತೆ ಇದೆಯೆ? (ಘಾಟಿ ರಸ್ತೆಗಳಲ್ಲಿ ೩೦-೪೦ ಅಡಿ ಎತ್ತರದ ದರೆಗೆ ಕಲ್ಲು ಕಟ್ಟುವುದನ್ನು ಕಂಡಿದ್ದೇನೆ. ಆದರೆ ಅಂಥಲ್ಲೂ, ಕಲ್ಲಿನ ಸಮೇತ ಜರಿದು ಬೀಳುವುದು ಮಾಮೂಲು.)
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತಿದೆ. ಪಶ್ಚಿಮ ಘಟ್ಟಗಳ ಪರ್ವತಗಳು, ನೆಲದ ಮೇಲೆ ಕವುಚಿಹಾಕಿದ ತೆಂಗಿನಕಾಯಿಯ ಕರಟಗಳಲ್ಲ. ಹತ್ತಿರ ಹೋಗಿ ನೋಡಿದರೆ ಮಾತ್ರ ಅಲ್ಲಿ ಪರಮಶಿವಯ್ಯನವರು ಹೇಳುವ ಬೃಹತ್ ಕಾಲುವೆಗಳನ್ನು ತೋಡಿದರೆ ಪಶ್ಚಿಮಘಟ್ಟಕ್ಕೆ ಆಗುವ ಹಾನಿಯ ಕಲ್ಪನೆ ಬರಬಹುದು. ಅಥವಾ ಆಗಲೂ ಬರುವುದು ಕಷ್ಟ.
ಪರಮಶಿವಯ್ಯನವರು ಹೇಳುತ್ತಿರುವ ಭಾಗದ ಪಶ್ಚಿಮ ಘಟ್ಟಗಳ ಸ್ವರೂಪ ಸಾಮಾನ್ಯವಾಗಿ ಹೀಗಿದೆ. ಗುಡ್ಡದ ತಳದಿಂದ ಪ್ರಾರಂಭಿಸಿ ಸುಮಾರು ಮುಕ್ಕಾಲು ಭಾಗದ ಎತ್ತರದವರೆಗೆ ಬೇರೆ ಬೇರೆ ಸ್ವರೂಪದ ಅರಣ್ಯ. ನಂತರ ಉಳಿದ ಕಾಲುಭಾಗದಲ್ಲಿ, ಎಂದರೆ ಗುಡ್ಡದ ನೆತ್ತಿಯ ಭಾಗದಲ್ಲಿ, ಆಳೆತ್ತರದ ಹುಲ್ಲು. ಈ ಹುಲ್ಲು ಆನೆಗಳ ಆಹಾರ. ಹಾಗಾಗಿಯೇ ಈ ಪ್ರದೇಶದಲ್ಲಿ ಆನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇತ್ತ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಹೋಗುವ ರೈಲುದಾರಿ ಆನೆಗಳ ತಿರುಗಾಟಕ್ಕೆ ಅಡ್ಡಿಯಾಗಿ ನಿಂತಿದೆ. ಶಿರಾಡಿ ಘಾಟಿಯ ಹೆದ್ದಾರಿಯಲ್ಲಿ ಆನೆಗಳ ಸಂಚಾರ ಅಸಾಧ್ಯವಲ್ಲವಾದರೂ, ವಾಹನಗಳ ದಟ್ಟಣೆಯಿಂದಾಗಿ ಅವುಗಳು ಸ್ವಚ್ಛಂದವಾಗಿ ತಿರುಗಾಡುವಂತಿಲ್ಲ. ಇನ್ನು ಅವುಗಳ ಆಹಾರವಾದ ಹುಲ್ಲಿರುವ ಪ್ರದೇಶಕ್ಕೇ ಪರಮಶಿವಯ್ಯನವರ ಕಾಲುವೆ ಅಡ್ಡ ಬಂತೆಂದರೆ, ಬಹುಶಃ ಕೋಟಿ ಕೋಟಿ ವರ್ಷಗಳಿಂದ ಈ ಭಾಗವನ್ನು ತಮ್ಮ ಮನೆಯಾಗಿ ಮಾಡಿಕೊಂಡಿರುವ ಆ ಬಡಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲಿಗೆ ಹೋಗಬೇಕು? ಅವು ಊರು ನುಗ್ಗದೆ ಬೇರೆ ದಾರಿ ಇದೆಯೆ?


ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ.

ಇದನ್ನು ಅಂಕಿ ಅಂಶಗಳ ಮೂಲಕ ನಿರೂಪಿಸಬಹುದೆ?

ಪರಮಶಿವಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರೆ ಅವರಿಗಿರುವ ಆತಂಕ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈಗ ಸುಮಾರು ಐದು ವರ್ಷಗಳ ಕೆಳಗೆ ನಾವು ಪರಮಶಿವಯ್ಯನವರನ್ನು ಮಂಗಳೂರಿಗೆ ಕರೆಸಿ, ಅವರ ಯೋಜನೆಯನ್ನು ವಿವರಿಸಲು ಅವರಿಗೆ ಅವಕಾಶ ಮಾಡಿಕೊಟ್ಟೆವು. ಅಷ್ಟು ದೂರದಿಂದ ಮಂಗಳೂರಿಗೆ ಬಂದ ಅವರು-ಸಾವಿರಾರು ಕೋಟಿ ರೂಪಾಯಿ ಖರ್ಚಿನ ಯೋಜನೆಯನ್ನು ರೂಪಿಸಿದವರು-ಸುಮಾರು ಇಪ್ಪತ್ತು ನಿಮಿಷ ಯೋಜನೆಯ ಬಗ್ಗೆ ಮಾತಾಡಿದರು. ಸಂಘಟಕರಾಗಿ ನಾವು ಅವರಿಗೆ ಸಮಯವನ್ನೇನೂ ನಿಗದಿಪಡಿಸಿರಲಿಲ್ಲ. ಅವರು ತಮ್ಮ ಯೋಜನೆಯನ್ನು ವಿವರಿಸಲು ಬೋರ್ಡು, ಸೀಮೆಸುಣ್ಣ ಆಗಲಿ, ಪವರ್ ಪಾಯಿಂಟ್ ಆಗಲಿ ಬಳಸಲಿಲ್ಲ. ಭಾಷಣದ ನಂತರ ಬಂದ ಹೆಚ್ಚಿನ ಪ್ರಶ್ನೆಗಳಿಗೆ ಯೋಜನೆಯನ್ನು ಹೈದರಾಬಾದಿನ ಯಾವುದೋ ಸಂಸ್ಥೆಗೆ ಕಳಿಸಲಾಗಿದೆ, ಅಲ್ಲಿಂದ ವರದಿ ಬಂದ ಮೇಲೆ ಎಲ್ಲ ಸ್ಪಷ್ಟವಾಗುತ್ತದೆ ಎಂಬ ಉತ್ತರವನ್ನೇ ಮತ್ತೆ ಮತ್ತೆ ಕೊಟ್ಟರು. ಹಾಗಾಗಿ ಅವರ ಹತ್ತಿರ ಚರ್ಚಿಸಿ ನಮಗೆ ಯಾವ ಪ್ರಯೋಜನವೂ ಆಗಲಿಲ್ಲ.

ಬುಧವಾರ, ಏಪ್ರಿಲ್ 20, 2011

ಅಂತೂ ಬಂತು ಅಂತರ್ಜಲ ವಿಧೇಯಕ - ೨೦೧೧

ಜನ ಬೇಕಾಬಿಟ್ಟಿಯಾಗಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದು ಮುಗಿಸುವವರೆಗೂ ಕಾದು, ಹೆಚ್ಚುಕಡಿಮೆ ಎಲ್ಲ ಮುಗಿದ ಮೇಲೆ, ಈಗ ಕರ್ನಾಟಕ ಸರಕಾರವು, ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುವುದನ್ನು ನಿಯಂತ್ರಿಸುವ ಉದ್ದೇಶದಿಂದ, ಒಂದು ವಿಧೇಯಕವನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿಟ್ಟು ಅಂಗೀಕಾರ ಪಡೆದಿದೆ. ಪಕ್ಷಾಂತರವೋ, ಅದಿರು ತಿಂದವರು ಯಾರು ಎಂಬುದರ ಕಚ್ಚಾಟವೋ ಇಂಥದೇ ಯಾವುದೋ ಒಂದು ಪ್ರಕರಣ ವಿಧಾನಮಂಡಲದ ಕಾರ್ಯ ಕಲಾಪಗಳನ್ನೇ ತಿಂದು ಹಾಕುತ್ತಿದ್ದ ದಿನಗಳಲ್ಲಿ, ಈ ವಿಧೇಯಕ ಒಂದು ಸಂದಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಪಾಸಾಗಿಬಿಟ್ಟಿದೆ. ಕರ್ನಾಟಕದ ಯಾವುದೇ ಶಾಸಕನಿಗೂ, ಈ ವಿಧೇಯಕದ ವಿವರಗಳಿರಲಿ, ಇದು ಪಾಸಾಗಿರುವ ವಿಷಯ ಗೊತ್ತಿರುವುದು ಸಹ ಅನುಮಾನ. ಇನ್ನು ಜನಸಾಮಾನ್ಯರ ಪಾಡೇನು?
ಸುಮಾರು ಹತ್ತು ತಿಂಗಳ ಹಿಂದೆ ಯಾವುದೋ ಕಾರಣಕ್ಕೆ ಗಣಿ ಮತ್ತು ಭೂವಿಜ್ನಾನ ಇಲಾಖೆಯ ಜಾಲತಾಣಕ್ಕೆ ಹೋದಾಗ "ಅಂತರ್ಜಲ ವಿಧೇಯಕ ೨೦೦೯ರ ಕುರಿತಂತೆ ಸಾರ್ವಜನಿಕರು ಮೇ ೨೦೧೦ರ ಅಂತ್ಯದ ವರೆಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ" ಎಂಬ ವಾಕ್ಯ ಓಡುತ್ತಿರುವುದು ಕಂಡೆ. ಕುತೂಹಲಕ್ಕೆ ವಿಧೇಯಕವನ್ನು ಓದಿದೆ.
ಬ್ರಿಟಿಷರನ್ನು ಬಿಡಲೊಲ್ಲರು ಅವರ ಮಾನಸಪುತ್ರರು
ಹೊಸ ವಿಧೇಯಕವೆಂದರೆ ಹೊಸ ಕಾನೂನೇ. ನಮ್ಮ ಹೆಚ್ಚಿನ ಕಾನೂನುಗಳು ಬ್ರಿಟಿಷರ ಕಾಲದವು. ಸಹಜವಾಗಿ ಅವು ಆಳುವ ಅಧಿಕಾರಿಗಳ ಪರವಾಗಿ ಇವೆ. ಇಂದು ಪ್ರಜಾಪ್ರಭುತ್ವ ಬಂದಿದೆ. ಆಳರಸರು ಹೋಗಿದ್ದಾರೆ, ಇಂದಿನ ಸರಕಾರಿ ಅಧಿಕಾರಿಗಳು "ಸಾರ್ವಜನಿಕ ಸೇವಕರು" ಎಂದು ಕರೆಸಿಕೊಳ್ಳುತ್ತಿದ್ದಾರೆ. ಎಂದ ಮೇಲೆ ಇಂದು ನಾವು ರೂಪಿಸುವ ಕಾನೂನುಗಳು ಅಧಿಕಾರಿಗಳ ಅನುಕೂಲಕ್ಕಿಂತ ಹೆಚ್ಚಾಗಿ ಪ್ರಜೆಗಳ ಅನುಕೂಲಕ್ಕಾಗಿ ಇರಬೇಕು. ದುರದೃಷ್ಟವಶಾತ್, ಸಾರ್ವಜನಿಕ ಸೇವಕರೆನ್ನಿಸಿಕೊಳ್ಳುವ ಸರಕಾರಿ ಅಧಿಕಾರಿಗಳೇ ನಮ್ಮ ಹೊಸ ಕಾನೂನುಗಳನ್ನು ರೂಪಿಸುತ್ತಾರೆ. ಸಹಜವಾಗಿ ಅದು ಅವರ ಪರವಾಗಿ ಇರುತ್ತದೆ. (ಮಾಹಿತಿ ಹಕ್ಕು ೨೦೦೫ ಇದಕ್ಕೊಂದು ಅಪವಾದ. ಆದರೆ ಅದನ್ನು ಸಾಧ್ಯವಿದ್ದಷ್ಟೂ ತಮಗೆ ಅನುಕೂಲವಾಗುವಂತೆ ಬದಲಿಸಿಕೊಳ್ಳಲು ಬಾಬೂಜಿಗಳು ಪ್ರಯತ್ನಿಸುತ್ತಲೇ ಇದ್ದಾರೆ). ನಂತರ ಅದನ್ನು ಚರ್ಚೆಗಾಗಿ ವಿಧಾನಮಂಡಲದಲ್ಲಿ ಇಟ್ಟರೂ, ಯಾವ್ಯಾವುದೋ ಹಗರಣಗಳಲ್ಲಿ ಮುಳುಗಿಹೋದ ನಮ್ಮ ಶಾಸಕರಿಗೆ, ಈ ಕಾನೂನುಗಳನ್ನು ವಿವರವಾಗಿ ಓದಿ, ಚರ್ಚೆ ಮಾಡಿ, ಅಗತ್ಯವಿದ್ದಲ್ಲಿ ಜನಪರವಾದ ಬದಲಾವಣೆಗಳನ್ನು ಸೂಚಿಸುವ ವ್ಯವಧಾನವಾದರೂ ಎಲ್ಲಿಂದ? ಅಸಲಿಗೆ ನಮ್ಮ ಶಾಸಕರಿಗಾದರೂ ನಿಜವಾದ ಜನಪರ ನಿಲುವುಗಳು ಇವೆಯೇ? ಇಂಥ ಕೆಲಸಕ್ಕಾಗಿಯೇ ಸಂಬಳ ಪಡೆಯುವ ಈ ಶಾಸಕರುಗಳು ತಮ್ಮ ಕರ್ತವ್ಯ ನಿರ್ವಹಿಸದೆ ಜನವಂಚನೆ ಮಾಡುತ್ತ ಕಾಲ ಕಳೆಯುತ್ತಿರುವುದು ಅಧಿಕಾರಿ ವರ್ಗಕ್ಕೆ ಬಯಸದೆ ಬಂದ ಭಾಗ್ಯವಾಗಿದೆ. ಇನ್ನು ಜನಸಾಮಾನ್ಯರನ್ನು ಬಿಡಿ, ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವವರೂ ಇಂಥದ್ದರಲ್ಲೆಲ್ಲ ಆಸಕ್ತಿ ವಹಿಸುವುದನ್ನು ನಮ್ಮ ಸಂದರ್ಭದಲ್ಲಿ ಊಹಿಸುವುದೂ ಸಾಧ್ಯವಿಲ್ಲ.
ಕೊಟ್ಟ ಕುದುರೆಯನೇರಲರಿಯದೆ...
ಏನೇ ಇದ್ದರೂ, ಸರಕಾರ ವಿಧೇಯಕಗಳನ್ನು ಜಾರಿಗೆ ಕೊಡುವಾಗ, ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳುವ ಶಾಸ್ತ್ರವನ್ನಂತೂ ಮಾದಿಯೇ ಮಾಡುತ್ತದೆ. ಎಷ್ಟು ಕಡಿಮೆ ಜನ ತಮ್ಮ ಅಭಿಪ್ರಾಯ ಕೊಡುತ್ತಾರೋ, ಅಧಿಕಾರಿಗಳಿಗೆ ಅಷ್ಟು ತಲೆನೋವು ಕಡಿಮೆ. ಹಾಗಾಗಿ ಅವರು ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸುವ ಶಾಸ್ತ್ರ ಮಾತ್ರ ಮಾಡುತ್ತಾರೆ. ಕುತೂಹಲಕ್ಕಾಗಿ "ಈ ವಿಧೇಯಕದ ಬಗ್ಗೆ ಎಷ್ಟು ಸಾರ್ವಜನಿಕರು ಮತ್ತು ಎಷ್ಟು ಸಂಘಸಂಸ್ಠೆಗಳು ತಮ್ಮ ಅಭಿಪ್ರಾಯವನ್ನು ನೀಡಿವೆ?" ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದೆ. "೧೧ ಸಾರ್ವಜನಿಕರು ಮತ್ತು ಮೂರು ಸಂಘ ಸಂಸ್ಥೆಗಳು ಅಭಿಪ್ರಾಯ ನೀಡಿವೆ" ಎಂಬ ಉತ್ತರ ಬಂತು. ಸಾಕೆ? ಐದು ಕೋಟಿಗೆ ಹನ್ನೊಂದು!

ಲೋಕಪಾಲ ಮಸೂದೆ ಸಾಲದು, ಜನಲೋಕಪಾಲ ಮಸೂದೆ ಬೇಕು ಎಂದು ಅಣ್ಣಾ ಹಜಾರೆಯವರು ಉಪವಾಸ ಕೂತಾಗ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು. ಭ್ರಷ್ಟಾಚಾರದ ಕುರಿತು ಜನ ರೋಸಿಹೋಗಿದ್ದಾರೆ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ ಎಂದು ಟಿವಿಗಳೂ, ಪತ್ರಿಕೆಗಳೂ ಎಷ್ಟು ಸಾಧ್ಯವೋ ಅಷ್ಟು ತಾರಸ್ಥಾಯಿಯಲ್ಲಿ ಬೊಬ್ಬೆ ಹೊಡೆದವು. ಆದರೆ, ಯಾವುದೇ ವಿಧೇಯಕ ತರುವ ಮೊದಲು, ಅದರಲ್ಲಿ ಬದಲಾವಣೆಗಳನ್ನು ಮಾಡಲು ಸರಕಾರ ಈಗಾಗಲೇ ಕೊಡುತ್ತಿರುವ ಅವಕಾಶವನ್ನು ನಾವು ಉಪಯೋಗಿಸುತ್ತಿದ್ದೇವೆಯೇ? ಜನಸಾಮಾನ್ಯರನ್ನು ಬಿಡಿ, ಹಜಾರೆಯವರನ್ನು ಬೆಂಬಲಿಸಿ ಮಾಧ್ಯಮಗಳಲ್ಲಿ ಮಿಂಚಿದ ನಮ್ಮ ವಿವಿಧರಂಗದ ನಾಯಕಮಣಿಗಳು ಪ್ರಜಾಪ್ರಭುತ್ವವನ್ನು ಅನುಸಂಧಾನ ಮಾಡಿದ ಉದಾಹರಣೆಗಳು ಎಷ್ಟಿವೆ? ಎಷ್ಟು ಮಂದಿ ಬುದ್ಧಿಜೀವಿಗಳು ಸರಕಾರದ ಆಗುಹೋಗುಗಳ ಕುರಿತು ತಮ್ಮ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸುತ್ತಾರೆ? ಎಷ್ಟು ಜನ ಲೇಖಕರು ಸಾರ್ವಜನಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಸರಕಾರಕ್ಕೆ ತಿಳಿಸುತ್ತಾರೆ? ಎಷ್ಟು ಮಂದಿ ವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಕುರಿತು ತಿಳುವಳಿಕೆ ಇದೆ? ಎಷ್ಟು ಜನ ಅದನ್ನು ಸಾರ್ವಜನಿಕ ಹಿತಕ್ಕಾಗಿ ಬಳಸುತ್ತಿದ್ದಾರೆ? ಎಷ್ಟು ಊರುಗಳಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಜನ ಸೇರಿ ಚರ್ಚಿಸುವ ಸಂಪ್ರದಾಯವಿದೆ?
ಶಿವರಾಮ ಕಾರಂತರು ಒಂದು ಕಡೆ ಹೇಳಿರುವುದು ನೆನಪಾಗುತ್ತದೆ: "ನಮ್ಮನ್ನು ದೇವರೇ ಹುಟ್ಟಿಸಿದ್ದಾನೆ ಎನ್ನುವುದಾದರೆ, ಸಾಕಷ್ಟು ಬುದ್ದಿಯನ್ನು ಕೊಟ್ಟೇ ಹುಟ್ಟಿಸಿದ್ದಾನೆ ಎಂದು ತಿಳಿಯಬೇಕು. ಕೊಟ್ಟದ್ದನ್ನು ಉಪಯೋಗಿಸಿಕೊಳ್ಳದೆ ಇನ್ನೂ ಕೊಡು ಮತ್ತೂ ಕೊಡು ಎನ್ನುವುದರಲ್ಲಿ ಏನರ್ಥವಿದೆ?"
ಸುಲಭದಲ್ಲಿ ಸಿಕ್ಕಿದ ಮಾಹಿತಿ
ಇರಲಿ. ಕಾನೂನಿನ ಬಡಿಗೆ ತೋರಿಸಿ ಭ್ರಷ್ಟಾಚಾರವನ್ನು ಊರ ಹೊರಗೆ ಓಡಿಸಿಬಿಡಬಹುದೆಂದು ನಾನು ನಂಬುವುದಿಲ್ಲ. ಆದರೂ ಜನಲೋಕಪಾಲ ಮಸೂದೆ ಬಂದರೆ ನನಗೆ ಖಂಡಿತವಾಗಿಯೂ ಸಂತೋಷವಿದೆ. ಇತ್ತ ವಿಧೇಯಕದ ಕರಡನ್ನು ಓದಿದ ಮೇಲೆ, ಉಳಿದಿದ್ದ ಹತ್ತೋ ಹದಿನೈದೋ ದಿವಸದ ಅವಧಿಯಲ್ಲಿ ನನಗೆ ಕಂಡ ಹಲವು ಬದಲಾವಣೆಗಳನ್ನು ಸೂಚಿಸಿ, ಒಂದು ಪತ್ರವನ್ನು ಜೊತೆಗಿಟ್ಟು ಕಳಿಸಿಕೊಟ್ಟೆ. ತಲುಪಿದ್ದಕ್ಕೆ ಉತ್ತರವೇನೂ ಬರಲಿಲ್ಲ. ನಾನೂ ಅಲ್ಲಿಗೇ ಮರೆತಿದ್ದೆ.
ಮೊನ್ನೆ ಟಿವಿಯಲ್ಲಿ ಸಣ್ಣದೊಂದು ಸುದ್ದಿ ತೇಲಿ ಬಂತು: ಅಂತರ್ಜಲ ವಿಧೇಯಕ ಮಂಡನೆಯಾಗಿದೆ. ಇಲಾಖೆಗೆ ಬರೆದಾಗ ಮಾರ್ಚ್ ತಿಂಗಳಿನಲ್ಲಿಯೇ ಮಂಡನೆಯಾಗಿದೆ ಎಂದು ಖಚಿತವಾಯಿತು. ಅದರ ಪ್ರತಿ ಬೇಕು ಎಂದು ಕೇಳಿದ್ದಕ್ಕೆ ವಿಧಾನಸೌಧಕ್ಕೆ ಬರೆಯುವಂತೆ ಸಲಹೆ ಸಿಕ್ಕಿತು! ಶಾಸಕರ ಮೂಲಕ ಪಡೆಯುವುದು ಸುಲಭವಾಗಬಹುದು ಎನಿಸಿದ್ದರಿಂದ ಅವರ ಕಚೇರಿಗೆ ಹೋದೆ. ಅವರ ಪಿಎ ಚಂದ್ರಶೇಖರ ಪಾತೂರು ಇದ್ದರು. "ಗೆಜೆಟ್ಟಿನಲ್ಲಿ ಬಂದಿರಬಹುದು. ಗೆಜೆಟ್ ಶಾಸಕರ ಮನೆಗೆ ಬಂದಿರುತ್ತದೆ. ನಾನು ನೋಡಿ ಹೇಳುತ್ತೇನೆ ನಿಮಗೆ" ಎಂದರು. ನಾನು ಮನೆಗೆ ಬಂದವನು ಇಂಟರ್ ನೆಟ್ ನಲ್ಲಿ ಹುಡುಕಿದೆ. ಸುಲಭದಲ್ಲಿ ಸಿಕ್ಕಿತು.
ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ನಿಜದ ನಾಗರ ಕಂಡರೆ ಕೊಲ್ಲೆಂಬರಯ್ಯಾ...!
ಪುಣ್ಯಾತ್ಮ ಬಸವಣ್ಣ ಎಂಥ ಮಾತು ಆಡಿಬಿಟ್ಟಿದ್ದಾರೆ ನೋಡಿ! ಸ್ವಲ್ಪ ವಿಷಯಾಂತರವೆನಿಸಿದರೂ ಒಂದು ಮಾತು ಇಲ್ಲಿ ಹೇಳಲೇಬೇಕು. ಈಗ ನಮ್ಮ ಶಾಸಕ ರಮಾನಾಥ ರೈಗಳು ತುಂಬಾ ಬಿಜಿ. ನಾಡಿದ್ದು ೨೩ಕ್ಕೆ ಅವರಲ್ಲಿ ನಾಗಮಂಡಲೋತ್ಸವ. ಭಾರೀ ಗೌಜಿ. ಊರ ತುಂಬ ಅದರದ್ದೇ ದೊಡ್ಡ ದೊಡ್ಡ ಬ್ಯಾನರುಗಳು. ಕರ್ನಾಟಕದ ವಿಷಯ ನಾನು ಹೇಳಲಾರೆ, ಆದರೆ ದ.ಕ. ಜಿಲ್ಲೆಯಲ್ಲಂತೂ ಜೆಸಿಬಿಗಳು, ಹಗಲು ರಾತ್ರೆಯ ವ್ಯತ್ಯಾಸವಿಲ್ಲದೆ ಸರ್ಪಯಜ್ನಕ್ಕೆ ತೊಡಗಿವೆ. ಮೊಟ್ಟೆ, ಮರಿ, ಬೆಳೆದ ಸರ್ಪ, ಮುದಿಸರ್ಪ, ನಾಗರ, ಕೇರೆ, ಕಂದೊಡಿ, ಪೆರ್ಮರಿ ಯಾವ ವ್ಯತ್ಯಾಸವನ್ನೂ ನೋಡದೆ ಜೆಸಿಬಿಗಳು ಆಧುನಿಕ ಖಾಂಡವವನ ದಹನವನ್ನೇ ನಡೆಸಿವೆ. ಈ ಅಸಹಾಯಕ ಪ್ರಾಣಿಗಳನ್ನು ರಕ್ಷಿಸಲು ಇರುವ ವನ್ಯಜೀವಿ ಕಾನೂನು, ಜೆಸಿಬಿಗಳ ಚಕ್ರದಡಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದೆ. ಆ ಕಾನೂನನ್ನು ಜಾರಿಗೆ ಕೊಡಬೇಕಾದ ಅರಣ್ಯ ಇಲಾಖೆಯವರು ನಿದ್ರೆಯನ್ನು ನಟಿಸುತ್ತಿದ್ದಾರೆ. ನಮ್ಮ ಶಾಸಕರು ಈ ಕಾನೂನಿಗೆ ಮರುಜೀವ ಕೊಟ್ಟು ಸರ್ಪಜಾತಿ ಉಳಿಯುವಂತೆ ಮಾಡಿದರೆ ಅವರು ನಾಗಮಂಡಲ ಮಾಡಿಸಿದ್ದರ ಫಲ ಪೂರ್ತಿಯಾಗಿ ಪ್ರಾಪ್ತಿ ಆದೀತು. ಅಲ್ಲದಿದ್ದರೆ, ಕಲ್ಲನಾಗರ ಕಂಡರೆ.....
ಸ್ವೀಕೃತವಾದ ಒಂದೇ ಒಂದು ಸಲಹೆ
ವಿಧೇಯಕದಲ್ಲಿ ಬಳಸಿದ ಕನ್ನಡ ಭಾಷೆಯ ಬಗೆಗೆ ನನಗೆ ಏನೂ ಸಮಾಧಾನವಿರಲಿಲ್ಲ. ಅದು ತುಂಬ ಕೆಟ್ಟದಾಗಿತ್ತು. ತಪ್ಪುಗಳೂ ಅಸಂಖ್ಯವಾಗಿದ್ದವು.. ನನ್ನ ಪತ್ರದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದೆ. ಬೇರೆ ಅನೇಕರೂ ಇದನ್ನು ಹೇಳಿರಬಹುದು. ಒಟ್ಟಿನಲ್ಲಿ ಮೊದಲಿನ ಕನ್ನಡದ ಕರಡು ಈಗ ನಾಪತ್ತೆಯಾಗಿತ್ತು. ಅದರ ಸ್ಥಳದಲ್ಲಿ ಬೇರೆಯೇ ಆದ ಕರಡು ತಯಾರಿಸಿ ಮಂಡಿಸಲಾಗಿತ್ತು. ನನ್ನ ಅಭಿಪ್ರಾಯಕ್ಕೂ ಕೊಂಚ ಬೆಲೆ ಬಂತೆಂದು ಬೆನ್ನು ತಟ್ಟಿಕೊಂಡೆ. ಏನಿದ್ದರೂ ಕರಡು ಮೊದಲು ತಯಾರಾಗುವುದು ಇಂಗ್ಲಿಷಿನಲ್ಲಿ. ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡುವುದು. ಮೂಲವನ್ನೇ ಕನ್ನಡದಲ್ಲಿ ತಯಾರಿಸಿ, ನಂತರ ಅದನ್ನು ಇಂಗ್ಲಿಷಿಗೆ ಅನುವಾದ ಮಾದುವಷ್ಟು ಸ್ವಂತಿಕೆ, ಆತ್ಮವಿಶ್ವಾಸಗಳು ನಮಗೆ ಇನ್ನೂ ಸಾಧಿಸಿಲ್ಲ. ಅದರೆ, ಈ ಹೊಸ ಅನುವಾದ ಮೊದಲಿನದ್ದಕ್ಕಿಂತ ಖಂಡಿತ ಚೆನ್ನಾಗಿದೆ.ವಾಕ್ಯಗಳು ಸುಸಂಗತವಾಗಿವೆ, ಅರ್ಥ ಹೆಚ್ಚು ನಿರ್ದಿಷ್ಟವಾಗಿದೆ.
ಗೋರ್ಕಲ್ಲ ಮೇಲೆ ಸುರಿದ ಮಳೆ?
ಈ ಸಲಹೆ ಬಿಟ್ಟರೆ ನಾನು ಕೊಟ್ಟ ಒಂದೇ ಒಂದು ಸಲಹೆಯೂ ಸ್ವೀಕಾರಗೊಂಡಿಲ್ಲ. ಸಲಹೆ ಬಿಡಿ, ಇಂಗ್ಲಿಷಿನ public servant ಎಂಬ ಪದವನ್ನು ಮೊದಲಿನ ಕರಡಿನಲ್ಲಿ "ಸರಕಾರಿ ನೌಕರರು" ಎಂದು ಅನುವಾದಿಸಲಾಗಿತ್ತು. ನಾನು ಅದನ್ನು "ಸಾರ್ವಜನಿಕ ಸೇವಕರು" ಎಂದು ಬದಲಿಸಲು ಸೂಚಿಸಿದೆ. ಹೊಸ ಕರಡಿನಲ್ಲಿ ಅದನ್ನು "ಸಾರ್ವಜನಿಕ ನೌಕರರು" ಎಂದು ಅನುವಾದಿಸಲಾಗಿದೆ! ಇಂಥ ಅನುವಾದದ ಹಿಂದೆ ತಮ್ಮನ್ನು ತಾವು ಸೇವಕರು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಒಂದು ಮನೋಭಾವ ಕೆಲಸ ಮಾಡುತ್ತಿದೆ ಅನ್ನಿಸುವುದಿಲ್ಲವೆ?
"ಲೋಕಪಾಲ್ ಬೇಡ, ಜನಲೋಕಪಾಲ್ ಬೇಕು" ಎನ್ನುವಾಗ ಅದರ ಹಿಂದಿರುವುದು ವಿಧೇಯಕ ಜನರ ಕೈಗೆ ಅಧಿಕಾರವನ್ನು ಕೊಡುವಂತಿರಬೇಕು ಎನ್ನುವ ಕಾಳಜಿ ತಾನೆ? ಸುಮ್ಮನೆ ಮಾದರಿಗಾಗಿ ವಿಧೇಯಕದ ಒಂದು ಸಣ್ಣ ಭಾಗ ಏನು ಹೇಳುತ್ತದೆ ಎಂಬುದನ್ನೂ, ನಾನು ಸೂಚಿಸಿದ ಬದಲಾವಣೆ ಏನು ಎಂಬುದನ್ನೂ ನೋಡಿ:

ವಿಧೇಯಕದಲ್ಲಿ ಇರುವುದು:

(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಅಡಿಯಲ್ಲಿ ಯಾವುದೇ ಯಂತ್ರೋಪಕರಣವನ್ನು ಅಥವಾ ಸಾಧನವನ್ನು ವಶಪಡಿಸಿಕೊಂಡರೆ, ಅದು ಆದಷ್ಟು ಬೇಗನೆ ಈ ಅಪರಾಧದ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿಯುಳ್ಳ ಮ್ಯಾಜಿಸ್ಟ್ರೇಟರಿಗೆ ಹಾಗೆ ವಶಪಡಿಸಿಕೊಂಡದ್ದಕ್ಕೆ ಮಾಹಿತಿ ನೀಡತಕ್ಕದ್ದು ಮತ್ತು ಅದರ ಅಭಿರಕ್ಷೆಗಾಗಿ ಅವರ ಅದೇಶವನ್ನು ಪಡೆಯತಕ್ಕದ್ದು

ನಾನು ಸೂಚಿಸಿದ್ದು:

(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಮೇರೆಗೆ ಯಂತ್ರೋಪಕರಣಗಳನ್ನು ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ, ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗೆ ಅಪರಾಧದ ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟರಿಗೆ ಮಾಹಿತಿ ನೀಡತಕ್ಕದ್ದು ಮತ್ತು ಸ್ವಾಧೀನ ಪ್ರಕ್ರಿಯೆಗೆ ಅವರ ಆಜ್ನೆಯನ್ನು ಪಡೆಯತಕ್ಕದ್ದು. ಸ್ವಾಧೀನಪಡಿಸಿಕೊಂಡ ಯಂತ್ರಗಳ ವಿವರವಾದ ಪಟ್ಟಿಯನ್ನು ತಯಾರಿಸಿ ಅದರಲ್ಲಿ ಸ್ಥಳದ ಮಾಲಕ ಅಥವಾ ಹಾಜರಿರುವ ಇತರ ವ್ಯಕ್ತಿ ಹಾಗೂ ನೆರೆಹೊರೆಯ ಕನಿಷ್ಟ ಮೂವರು ಗೃಹಸ್ಥರ ಸಹಿ ಪಡೆದು, ಅದರ ಒಂದು ಪ್ರತಿಯನ್ನು ಸ್ಥಳದ ಮಾಲಕ ಅಥವಾ ಹಾಜರಿರುವ ವ್ಯಕ್ತಿಗೆ ನೀಡತಕ್ಕದ್ದು.

ಈಗ ವಿಧೇಯಕದಲ್ಲಿ ಇರುವುದನ್ನು ಗಮನಿಸಿ: "ಆದಷ್ಟು ಬೇಗನೆ" ಎಂದರೆ ಏನು? ವ್ಯಾವಹಾರಿಕವಾಗಿ, ಅದು, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡ ನಂತರ ಅಧಿಕಾರಿಗಳು ತಮಗೆ ಅನುಕೂಲವಾದ ಸಮಯದಲ್ಲಿ ಮ್ಯಾಜಿಸ್ಟ್ರೇಟರ ಹತ್ತಿರ ಹೋದರೆ ಸಾಕು ಎಂದು ಹೇಳುತ್ತಿದೆ ತಾನೆ? "ಸೇವಕ"ರಾದ ಅವರು ಮಾಡಬೇಕಾದ ಕೆಲಸಕ್ಕೆ ಒಂದು ಅವಧಿಯನ್ನು ಯಾಕೆ ನಿರ್ದಿಷ್ಟ ಪಡಿಸಬಾರದು?
ತಾವು ಯಾವ ಯಾವ ಯಂತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂಬುದರ ಪಟ್ಟಿ ತಯಾರಿಸಿ ಅದರ ಪ್ರತಿಯನ್ನು ಸ್ಥಳದ ಮಾಲಕನಿಗೆ ಕೊಡಲು ಅಧಿಕಾರಿಗಳಿಗೆ ಅಡ್ಡಿ ಏನು? ಅಷ್ಟು ಕೆಲಸ ಮಾಡುವುದು, ಎಂದರೆ ಯಂತ್ರೋಪಕರಣಗಳು ಯಾವುವು ಎಂದು ಪರಿಶೀಲಿಸಿ ಅವುಗಳನ್ನು ಬರೆದು ಪಟ್ಟಿ ಮಾಡುವ ಕೆಲಸವನ್ನು ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಅಲ್ಲವೆ? ಅಂಥದೊಂದು ಪಟ್ಟಿ ಇಲ್ಲದಿದ್ದರೆ, ಅಧಿಕಾರಿಗಳು ವಶಪಡಿಸಿಕೊಂಡ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಯಾಕೆ ಅವಕಾಶ ಇರಬೇಕು? ಮುಂದೊಂದು ದಿನ ಯಂತ್ರೋಪಕರಣಗಳನ್ನು ಹಿಂದಿರುಗಿಸತಕ್ಕದ್ದು ಎಂದು ನ್ಯಾಯಾಲಯದಲ್ಲಿ ಆಜ್ನೆಯಾದರೆ, ಅಧಿಕಾರಿಗಳು ಯಾವ ಆಧಾರದಲ್ಲಿ ಯಂತ್ರೋಪಕರಣಗಳನ್ನು ಹಿಂತಿರುಗಿಸುತ್ತಾರೆ? ಐದೋ ಹತ್ತೋ ವರ್ಷದ ಹಿಂದೆ ಏನೇನು ವಶಪಡಿಸಿಕೊಳ್ಳಲಾಗಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹಿಂದಿರುಗಿಸುತ್ತಾರೆಯೆ?
"ಹಾಗೇನಿಲ್ಲ. ಕ್ರಮಪ್ರಕಾರ ಒಂದು ಪಟ್ಟಿ ಮಾಡಲೇ ಬೇಕು. ಮಾಡಿಯೇ ಮಾಡುತ್ತೇವೆ" ಎಂಬುದು ಇದಕ್ಕೆ ಅಧಿಕಾರಿಗಳು ಕೊಡುವ ಉತ್ತರ ಎಂದು ಊಹಿಸುತ್ತೇನೆ. ಹಾಗಾದರೆ ಅದನ್ನು ವಿಧೇಯಕದಲ್ಲಿ ಸೇರಿಸಿಬಿಡಿ! ಅದಕ್ಕೇನು ಸಮಸ್ಯೆ?

ಇನ್ನೊಂದು ಉದಾಹರಣೆ:

ವಿಧೇಯಕದಲ್ಲಿ ಇರುವುದು:
(೪) (೨)ನೇ ಉಪ-ಪ್ರಕರಣದಲ್ಲಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ನಂತರ ಪ್ರಾಧಿಕಾರವು ಅರ್ಜಿದಾರನಲ್ಲಿ ಅಂತರ್ಜಲವನ್ನು ತೆಗೆಯಲು ಬೇಕಾದ ಸಾಧನಗಳಿವೆ ಮತ್ತು ಬಾವಿಯನ್ನು ಕೊರೆಯುವ ಅಥವಾ ತೋಡುವ ಕಾರ್ಯಕ್ಕೆ ಬೇಕಾದ ಜ್ನಾನವಿದೆ ಎಂದು ತನಗೆ ಮನದಟ್ಟಾದರೆ, ನಿಯಮಿಸಲಾದಂಥ ಷರತ್ತಿಗೊಳಪಟ್ಟು, ಅಂಥ ಅವಧಿಗೆ ಅಂಥ ನಮೂನೆಯಲ್ಲಿ ನೋಂದಣಿ ಪ್ರಮಾಣ ಪತ್ರವನ್ನು ಮಂಜೂರು ಮಾಡಬಹುದು

ನಾನು ಸೂಚಿಸಿದ ಬದಲಾವಣೆ:
ಮೇಲಿನ ಪ್ಯಾರಾಕ್ಕೆ ಈ ಮುಂದಿನಂತೆ ಸೇರ್ಪಡೆ:
ಅರ್ಜಿದಾರನು ಅರ್ಜಿ ಸಲ್ಲಿಸಿದ ಮೂವತ್ತು ದಿನಗಳ ಒಳಗೆ ಪ್ರಾಧಿಕಾರವು ಆತನಿಗೆ ದೃಡಪತ್ರಿಕೆಯನ್ನು ನೀಡತಕ್ಕದ್ದು ಅಥವಾ ಸಕಾರಣವಾಗಿ ನಿರಾಕರಿಸತಕ್ಕದ್ದು. ಈ ಅವಧಿಯೊಳಗೆ ದೃಢಪತ್ರಿಕೆಯನ್ನು ನೀಡದಿದ್ದರೆ ಅಥವಾ ಸಕಾರಣವಾಗಿ ನಿರಾಕರಿಸದಿದ್ದರೆ, ನಂತರ ಹದಿನೈದು ದಿನಗಳ ಒಳಗೆ ಪ್ರಾಧಿಕಾರವು ದೃಡಪತ್ರಿಕೆಯನ್ನು ಅರ್ಜಿದಾರನಿಗೆ, ಮೂವತ್ತು ದಿನಗಳ ಒಳಗೆ ನೀಡದೆ ಇರಲು ಕಾರಣಗಳೊಂದಿಗೆ, ಉಚಿತವಾಗಿ ನೀಡತಕ್ಕದ್ದು. ಪ್ರಾಧಿಕಾರಕ್ಕೆ ಬರಬೇಕಾದ ಶುಲ್ಕವನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ಪ್ರಾಧಿಕಾರವು ವಸೂಲು ಮಾಡತಕ್ಕದ್ದು.

ಇಂತಹ ಹಲವು ಬದಲಾವಣೆಗಳನ್ನು ನಾನು ಸೂಚಿಸಿದ್ದೆ. ನನ್ನ ಒಂದೇ ಒಂದು ಸಲಹೆ ಸಹ ಸ್ವೀಕೃತವಾಗಿಲ್ಲ.
ಇನ್ನು, ಈ ವಿಧೇಯಕದ ಕರಡನ್ನು ತಯಾರಿಸಿದವರು ಯಾರು, ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಗಣಿಸಲು ಯಾವ ಕ್ರಮವನ್ನು ಅನುಸರಿಸಲಾಗುವುದು ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮುಂದುವರಿಸಬೇಕೆಂದಿದೆ. ನೋಡೋಣ.

ಶುಕ್ರವಾರ, ಏಪ್ರಿಲ್ 8, 2011

ಎಂಡೋಸಲ್ಫಾನ್: ಸದ್ದಿಲ್ಲದೆ ಬಿದ್ದ ಅಣುಬಾಂಬ್


ಸುಮಾರು ಒಂದು ತಿಂಗಳ ಹಿಂದೆ ಡಾ ರವೀಂದ್ರನಾಥ ಶಾನುಭಾಗರಿಂದ ಒಂದು ಮೈಲ್ ಬಂತು: ಅದು ಎಂಡೋ ಸಲ್ಫಾನ್ ಬಹಿಷ್ಕರಿಸುವ ವಿಷಯದಲ್ಲಿ. ನಾನು ಉತ್ತರಿಸಿದೆ: "ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ ಅಪಾಯ ಬಂದರೂ ಜನ ಎದ್ದು ಪ್ರತಿಭಟಿಸುತ್ತಾರೆಂದು ನನಗೆ ಅನ್ನಿಸುವುದಿಲ್ಲ. ಆದರೂ, ನಾವು ಮಾಡಬೇಕಾದ್ದನ್ನು ಮಾಡಲೇಬೇಕು. ಖಂಡಿತ ಮಾಡೋಣ" ಕಳೆದ ತಿಂಗಳಿನಲ್ಲಿ ಕರ್ನಾಟಕ ಸರಕಾರ ಎಂಡೋಸಲ್ಫಾನನ್ನು ಎರಡು ತಿಂಗಳ ಮಟ್ಟಿಗೆ ನಿಷೇಧಿಸಿತು.. ಹೀಗೆ ಮಾಡಲು ಮೂಲ ಕಾರಣ ಬೆಳ್ತಂಗಡಿಯ ವಿಶ್ವನಾಥ ಗೌಡ ಮತ್ತು ಪುತ್ತೂರಿನ ಸಂಜೀವ ಎಂಬ ಸಾಮಾಜಿಕ ಕಾರ್ಯಕರ್ತರ ಸತತ ಪ್ರಯತ್ನ. ( ವಿಶ್ವನಾಥ ಗೌಡರು ಸ್ವತಃ ಎಂಡೋಸಲ್ಫಾನಿನ ಬಲಿ. ಅವರಿಗೆ ಒಂದು ಕಣ್ಣಿನಲ್ಲಿ ಶೇ. ೧೦ ದೃಷ್ಟಿ ಇದೆ. ಮತ್ತೊಂದರಲ್ಲಿ ದೃಷ್ಟಿ ಇಲ್ಲ.) ಅವರು ಹೇಗಾದರೂ ಮಾಡಿ, ಶೋಭಾ ಕರಂದ್ಲಾಜೆಯವರನ್ನು, ಕೊಕ್ಕಡ, ಶಿಶಿಲಗಳಿಗೆ ಸ್ವತಃ ಬಂದು ಸಮಸ್ಯೆಯನ್ನು ಪರಿಶೀಲಿಸುವಂತೆ ಮನ ಒಲಿಸಿದರು. ಶೋಭಾ ಕರಂದ್ಲಾಜೆಯವರು ಬಂದು ನೋಡಿದಾಗ ಅವರಿಗೆ ದುರಂತದ ಸಂಪೂರ್ಣ ಅರಿವಾಯಿತು. ಮುಂದೆ ಕೆಲವೇ ದಿನದಲ್ಲಿ ಎಂಡೋ ಸಲ್ಫಾನ್ ಕರ್ನಾಟಕದಲ್ಲಿ ಎರಡು ತಿಂಗಳ ಮಟ್ಟಿಗೆ ನಿಷೇಧ ಆಯಿತು. ಈಗ ಸರಕಾರದ ಈ ಆಜ್ನೆಯನ್ನು ಪ್ರಶ್ನಿಸಿ ಎಂಡೋಸಲ್ಫಾನ್ ತಯಾರಿಸುವ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಿವೆ, ನಿಷೇಧಿಸಿದ್ದಕ್ಕೆ ಸರಿಯಾದ ಆಧಾರವನ್ನು ಕೋರ್ಟಿಗೆ ಕೊಟ್ಟು ಎಂಡೋಸಲ್ಫಾನ್ ಖಾಯಮ್ಮಾಗಿ ನಿಷೇಧವಾಗುವಂತೆ ನೋಡಿಕೊಳ್ಳುವ ಹೊಣೆ ಕರ್ನಾಟಕ ಸರಕಾರದ ಮೇಲೆ ಇದೆ. ಎಂಡೋಸಲ್ಫಾನಿನಿಂದ ಪೀಡಿತರಾದವರು ಎಷ್ಟು ಜನ ನಮ್ಮ ನಡುವೆ ಇದ್ದಾರೆಂಬುದರ ಲೆಕ್ಕ ಕೋರ್ಟಿಗೆ ಕೊಡಬೇಕು. ಅವರೆಲ್ಲ ಹೀಗಾಗಲು ಕಾರಣ ಎಂಡೋಸಲ್ಫಾನೇ ಎಂಬುದನ್ನು ವೈಜ್ನಾನಿಕವಾಗಿ ಕೋರ್ಟಿನ ಎದುರು ಸಾಬೀತು ಮಾಡಬೇಕು.ಈ ಹೊಣೆಯನ್ನು ನಿಭಾಯಿಸುವಲ್ಲಿ ಸಾರ್ವಜನಿಕರೂ ಸರಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ. ಶಾಸಕರುಗಳು ಪಕ್ಷಭೇದ ಮರೆತು, ಸರಕಾರಕ್ಕೆ ಬೆಂಬಲ ನೀಡಬೇಕಾಗಿದೆ.
ಏನಿದು ಎಂಡೋ ಸಲ್ಫಾನ್?
ಸಾಮಾನ್ಯವಾಗಿ ಜನರ ಅಭಿಪ್ರಾಯವೆಂದರೆ ಅದೊಂದು ಕೀಟಗಳನ್ನು ನಾಶಪಡಿಸುವ ಔಷಧಿ. ಯಾವುದೇ ಕೀಟನಾಶಕ ಕೀಟಗಳನ್ನು ಮಾತ್ರ ನಾಶ ಮಾಡಲು ಶಕ್ತವಾಗಿರಬೇಕು ಹೊರತು ಅದನ್ನು ಸೇವಿಸಿದ ಇತರ ದೊಡ್ಡ ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡುವಂತಿರಬಾರದು. ಆದರೆ ಎಂಡೋ ಸಲ್ಫಾನನ್ನು ಸತತವಾಗಿ ಸೇವಿಸಿದರೆ, ಅದು ಮನುಷ್ಯರ ಮೇಲೂ, ಪ್ರಾಣಿಗಳ ಮೇಲೂ ಅತ್ಯಂತ ಘೋರ ಪರಿಣಾಮಗಳನ್ನುಂಟು ಮಾಡುತ್ತದೆ ಎಂಬುದು ಈಗ ವೈಜ್ನಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಅದನ್ನು ಸುಮಾರು 1960ರ ಸುಮಾರಿಗೆ ಉತ್ಪಾದಿಸಲು ಪ್ರಾರಂಭಿಸಿದ ಅಮೆರಿಕಾ ಸೇರಿ ಜಗತ್ತಿನ 73 ದೇಶಗಳು ಅದರ ತಯಾರಿಕೆ ಹಾಗೂ ಬಳಕೆಯನ್ನು ಬಹಿಷ್ಕರಿಸಿವೆ. ಆದರೆ ಭಾರತದಲ್ಲಿ ಅದರ ತಯಾರಿಕೆ ಹಾಗೂ ಬಳಕೆ ಎರಡನ್ನೂ ಇಲ್ಲಿಯವರೆಗೂ ನಿಷೇಧಿಸಲಾಗಿಲ್ಲ. ಈಗಲೂ ನಮ್ಮ ರೈತರು ಅತ್ಯಂತ ವ್ಯಾಪಕವಾಗಿ ಎಂಡೋಸಲ್ಫಾನನ್ನು ಬಳಸುತ್ತಿದ್ದಾರೆ.
ಎಂಡೋ ಸಲ್ಫಾನ್ ಮತ್ತು ಬಂಟ್ವಾಳ ತಾಲೂಕು
ಕೇರಳದಲ್ಲಿ ಮಾತ್ರ ಎಂಡೋಸಲ್ಫಾನ್ ಬಳಸುತ್ತಾರೆಂದೂ, ಕರ್ನಾಟಕದಲ್ಲಿ ಅದು ಇಲ್ಲವೆಂದೂ ನಾನು ನನ್ನಷ್ಟಕ್ಕೆ ಭಾವಿಸಿಕೊಂಡಿದ್ದೆ. ವಿಶ್ವನಾಥ ಗೌಡರೂ, ಸಂಜೀವರೂ ಸೇರಿ ಕರ್ನಾಟಕದ ಪುತ್ತೂರು, ಬೆಳ್ತಂಗಡಿಗಳಲ್ಲಿ ಎಂಡೋಸಲ್ಫಾನನ್ನು ಗೇರು ತೋಟಗಳಿಗೆ ಧಾರಾಳವಾಗಿ ಸಿಂಪಡಿಸಲಾಗಿದೆ, ಅದರ ಪರಿಣಾಮವಾಗಿಯೇ ಸಾವಿರಾರು ಜನರು ಘೋರವಾದ ಕಾಹಿಲೆಗಳಿಂದ ನರಳುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಬಯಲಿಗೆಳೆದರು. ಆಗ ನಾನು ಅದು ಬಂಟ್ವಾಳ ತಾಲೂಕಿನಲ್ಲಿ ಇಲ್ಲವೆಂದು ನಿಶ್ಚಿಂತೆಯಿಂದಿದ್ದೆ! ಆದರೆ ಸಂಜೀವರು ಮಾಹಿತಿ ಹಕ್ಕಿನ ಮೂಲಕ ಗೇರು ಅಭಿವೃದ್ಧಿ ನಿಗಮದಿಂದ ಪಡೆದ ಮಾಹಿತಿಗಳು ಬೇರೆಯೇ ಸತ್ಯವನ್ನು ಹೇಳುತ್ತಿದ್ದವು: ಬಂಟ್ವಾಳ ತಾಲೂಕಿನ ಅಳಿಕೆ, ವಿಟ್ಲ ಮುಡ್ನೂರು ಹಾಗೂ ಕೇಪು ಗ್ರಾಮಗಳಲ್ಲೂ ಗೇರು ಅಭಿವೃದ್ಧಿ ನಿಗಮದವರು ಎಂಡೋಸಲ್ಫಾನ್ ಸಿಂಪಡಿಸಿದ್ದ ವಿಷಯವನ್ನು ಅಧಿಕೃತ ದಾಖಲೆಗಳ ಮೂಲಕವೇ ಸಂಜೀವರು ನನ್ನೆದುರಿಗೆ ಒಡ್ಡಿದರು. ಈ ವಿಷಯ ತಿಳಿದಾಗ ನಾನು ಕೂತಲ್ಲಿಂದ ಏಳದೆ ವಿಧಿಯೇ ಇರಲಿಲ್ಲ. ಎದ್ದೆ. ಕಣ್ಣು ಬಿಟ್ಟು ಕೊಂಚ ಅತ್ತ ಇತ್ತ ಹುಡುಕಾಡಿದೆ. ನನಗೆ ಕಂಡ ಸತ್ಯ ಘೋರವಾಗಿತ್ತು. ವಿಶ್ವನಾಥ ಗೌಡರು, ಸಂಜೀವರು ಮತ್ತು ಶಾನುಭಾಗರು ನನ್ನ ದಿವ್ಯ ಸೋಮಾರಿತನಕ್ಕೆ ಚಾಟಿ ಏಟು ಕೊಟ್ಟು ಎಬ್ಬಿಸಿದ ಹೊರತು ಏಳಲು, ಕಣ್ಣು ಬಿಡಲು ಸಿದ್ಧನಾಗದ ನನ್ನ ಬಗ್ಗೆ ನನಗೆ ನಾಚಿಕೆಯಾಯಿತು.
ಎಂಡೋಸಲ್ಫಾನ್ ಪೀಡಿತರಿಗಾಗಿ ಶೋಧ
ಕೇಪು, ವಿಟ್ಲಮುಡ್ನೂರು, ಅಳಿಕೆ ಈ ಗ್ರಾಮಗಳಲ್ಲಿ ನನ್ನ ಗುರುತಿನವರು ಯಾರು ಎಂದು ನೆನಪು ಮಾಡಿಕೊಂಡೆ. ತಕ್ಷಣಕ್ಕೆ ಯಾರೂ ನೆನಪಾಗಲಿಲ್ಲ. ಕೊನೆಗೆ ಅನಂತಾಡಿ ಗೋವಿಂದ ಭಟ್ಟರಿಗೆ ಮೇಲ್ ಕಳಿಸಿದೆ. ಅವರು ಕೇಪುವಿನ ನಾರಾಯಣ ಮೂರ್ತಿಯವರ ನಂಬರ್ ಕೊಟ್ಟರು. ನಾರಾಯಣ ಮೂರ್ತಿ ತಮ್ಮ ಸುತ್ತಮುತ್ತ ಅಂಥವರು ಯಾರನ್ನೂ ಕಂಡು ಗೊತ್ತಿಲ್ಲವೆಂದೂ, ವಿ.ಕೆ. ಶರ್ಮರನ್ನು ವಿಚಾರಿಸಿದರೆ ಏನಾದರೂ ಮಾಹಿತಿ ದೊರೆಯಬಹುದೆಂದೂ ಹೇಳಿದರು. ವಿ.ಕೆ. ಶರ್ಮರಿಗೆ ಫೋನ್ ಮಾಡಿದೆ. ಅವರು ಈ ಮುಂಚೆ ಮುಳಿಯದ (ಮುಚ್ಚಿರಪದವು) ಶಾಲೆಯಲ್ಲಿ ಅಧ್ಯಾಪಕರಾಗಿದ್ದವರು. ಅವರೂ ಸಹ ಅಂಥ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿಲ್ಲವೆಂದೂ, ಆದರೆ ಎಂಟು ಹತ್ತು ವರ್ಷಗಳ ಕೆಳಗೆ ನಡೆಯಲು ಕೂಡದ ಒಬ್ಬ ಹುಡುಗ ಶಾಲೆಗೆ ಬರುತ್ತಿದ್ದನೆಂದೂ, ಈಚೆಗೆ ಅವನ ಸಮಾಚಾರ ಗೊತ್ತಿಲ್ಲವೆಂದೂ, ವಿಚಾರಿಸಿ ಹೇಳುವುದಾಗಿಯೂ ತಿಳಿಸಿದರು. ಮಾರನೆಯ ದಿನ ವಿಚಾರಿಸಿದಾಗ ಅಂಥ ಒಬ್ಬ ಹುಡುಗ ಇರುವುದು ಹೌದೆಂದೂ, ಬಂದರೆ ಅವನ ಮನೆಗೆ ಕರೆದುಕೊಂಡು ಹೋಗುವುದಾಗಿಯೂ ಶರ್ಮರು ಹೇಳಿದರು. ಮರುದಿನ ಕೃಷ್ಣ ಗಟ್ಟಿಯವರೂ, ನಾನೂ ಮುಳಿಯಕ್ಕೆ ಹೋದೆವು. ಶಾಲೆಗೆ ಅಂದಾಜು ೩೦೦ ಮೀ. ದೂರದಲ್ಲಿ ಸುಮಾಲಿನಿಯವರ ಮನೆ. ನಾವು ಅಲ್ಲಿಗೆ ಹೋದೆವು. ಚಾವಡಿಯಲ್ಲೇ ಒಂದು ಕುರ್ಚಿಯಲ್ಲಿ ಕೂತಿದ್ದ ಅವರ ಮಗ ಆಕಾಶ್. ಆಕಾಶನನ್ನು ನೋಡಿದರೆ ಅವನು ಆಂಗ್ರಿ ಯಂಗ್ ಮ್ಯಾನ್ ನ ಹಾಗೆ ಕಾಣುತ್ತಾನೆ. ಹಾಗೆ ಇರಲು ಅವನಿಗೆ ಎಲ್ಲ ಕಾರಣವೂ ಇದೆ. ಯಾರೋ ಮಾಡಿದ ತಪ್ಪಿಗಾಗಿ ಆಕಾಶ್ ಇಂದು ಕೂತಲ್ಲೇ ಬದುಕು ಕಳೆಯಬೇಕಾಗಿದೆ. ಜನರ ಅನುಕಂಪವನ್ನು ಸಹಿಸಿಕೊಳ್ಳಬೇಕಾಗಿದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ರೋಷನ್ ಫೆರಾವೋನ ಮನೆ ಇದೆ. ರೋಷನ್ ಗೆ ಈಗ ಅಂದಾಜು ಹದಿನಾರು ವರ್ಷ. ನಾವು ಹೋದಾಗ ಅವನು ಮನೆಯಲ್ಲಿರಲಿಲ್ಲ, ಶಾಲೆಗೆ ಹೋಗಿದ್ದ. ಆದರೆ ಶಾಲೆಯಲ್ಲಿ ಅವನು ಅವನ ತಮ್ಮನಿಗಿಂತ ಹಿಂದೆ ಬಿದ್ದಿದ್ದಾನೆ. ಕ್ಯಾನ್ಸರ್ ಅವನ ವಿದ್ಯಾಭ್ಯಾಸದ ಎರಡು ವರ್ಷಗಳನ್ನೇ ತಿಂದು ಹಾಕಿದೆ. ಅವನ ಮನೆಯಲ್ಲಿರುವುದು ತಂದೆ ಮಾತ್ರ. ರೋಷನ್ ನ ಚಿಕಿತ್ಸೆಗಾಗಿ ಅವನ ತಂದೆ ತಾಯಿ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಅವನ ಚಿಕಿತ್ಸೆಯ ಖರ್ಚು ತೂಗಿಸಲೆಂದೇ ಅವನ ತಾಯಿ ಗಲ್ಫಿಗೆ ಹೋಗಿ ದುಡಿಯುತ್ತಿದ್ದಾರೆ. ಆಕಾಶನ ತಾಯಿ ಸುಮಾಲಿನಿ ನಮಗೆ ಮೂಡಾಯಿಬೆಟ್ಟಿನ ದೇವಕಿಯವರ ಮಗನೂ ಮಲಗಿದಲ್ಲೇ ಎಂಬ ಸುಳಿವು ನೀಡಿದರು. ಆದರೆ ಆ ದಿನ ನಮಗೆ ಅಲ್ಲಿಗೆ ಹೋಗುವುದು ಸಾಧ್ಯವಾಗಲಿಲ್ಲ. ಈ ನಡುವೆ ನಾನು ಮಾಣಿಮೂಲೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ಅವರದೂ ಅದೇ ಮಾತು: "ಈ ಸುತ್ತಿನಲ್ಲೆಲ್ಲೂ ಅಂಥವರು ಕಾಣಲಿಲ್ಲ".ನಾನೆಂದೆ: "ಅಂಥವರು ಸುಲಭದಲ್ಲಿ ಕಾಣಲು ಸಿಗುವುದಿಲ್ಲ. ಏಕೆಂದರೆ ಅವರು ಯಾರಿಗೂ ಕಾಣದ ಹಾಗೆ ಮನೆಯಲ್ಲೇ ಇರುತ್ತಾರೆ". ಗೋವಿಂದ ಭಟ್ಟರಿಗೆ ರವೀಂದ್ರನಾಥ ಶಾನುಭಾಗರ ಪರಿಚಯ ಚೆನ್ನಾಗಿತ್ತು. ಅವರು ಆಸಕ್ತಿ ವಹಿಸಿದರು. ಹೀಗೆ ಅಳಿಕೆಯ ಪಂಚಾಯತ್ ಅಧ್ಯಕ್ಷ ಕಾನ ಈಶ್ವರ ಭಟ್ಟರು, ಗೋವಿಂದ ಭಟ್ಟರು, ಕೃಷ್ಣ ಗಟ್ಟಿ ಮತ್ತು ನಾನು ಒಂದು ದಿನ ಅಳಿಕೆಯಲ್ಲಿ ಸಮೀಕ್ಷೆ ಶುರು ಮಾಡಿದೆವು. ಅಡ್ಯನಡ್ಕ ದಾಟಿ ಕೇರಳದ ಕಡೆಗೆ ಮುಂದೆ ಹೋದರೆ ಅಳಿಕೆಗೆ ತಿರುಗುವ ರಸ್ತೆ ಸಿಗುತ್ತದೆ. ಇದು ಪಡಿಬಾಗಿಲು. ಇಲ್ಲಿ ರಸ್ತೆಯ ಎಡಕ್ಕೆ ಕೆಳಗಿಳಿದು ಹೋದರೆ ಆನಂದ ಆಚಾರರ ಮನೆ ಇದೆ. ಅವರ ಮಗ ಉಮೇಶ ಫಕ್ಕನೆ ನೋಡಲು ಎಲ್ಲರ ಹಾಗೇ ಕಾಣುತ್ತಾನೆ. ಆದರೆ ಅವನು ಎಲ್ಲರಂತಿಲ್ಲ. ಅವನಿಗೀಗ ಹನ್ನೆರಡು ವರ್ಷ. ಅವನು ನನ್ನನ್ನು ನೋಡಿದ್ದು ಅಂದೇ ಮೊದಲು. ಆದರೂ ನಾನು ಕೂತಲ್ಲಿಗೆ ಬಂದು ನನ್ನ ಕಿಸೆಗೇ ಕೈ ಹಾಕಿದ. ಶಾಲೆಗೆ ಹೋಗುತ್ತಾನಾದರೂ. ಓದುವುದು ಅವನಿಗೆ ತುಂಬ ಕಷ್ಟವಾಗುತ್ತದೆ ಎನ್ನುತ್ತಾರೆ ಅವನ ತಾಯಿ.. ನಾವು ಮೂಡಾಯಿಬೆಟ್ಟಿನ ದೇವಕಿಯವರ ಮನೆಗೆ ಹೋದೆವು. ದೇವಕಿ ಈ ಮೊದಲು ತಾಲೂಕು ಪಂಚಾಯತ್ ಸದಸ್ಯರಾಗಿದ್ದವರಂತೆ.ತುಂಬ ಚುರುಕಿನವರು. ನಾವು ಹೋದಾಗ ಬತ್ತ ಹೊತ್ತು ತರುವ ಕೆಲಸದಲ್ಲಿದ್ದರು. ಅವರ ಮಗ ರಾಜೇಂದ್ರ ಪ್ರಸಾದ ಚಾವಡಿಯಲ್ಲಿ ಒಂದು ಮಂಚದ ಮೇಲೆ ಮಲಗಿದ್ದ. ಅವನಿಗೀಗ ಸುಮಾರು ೩೦ ವರ್ಷ."ಇವನು ಹುಟ್ಟಿದಾಗಿಂದಲೂ ಹೀಗೇ ಮಲಗಿದ್ದಾನೆ. ಟಿವಿ ನೋಡಿ ಎಲ್ಲಾ ಭಾಷೆ ಕಲಿತಿದ್ದಾನೆ. ಇತ್ತೀಚೆಗೆ ಅವನನ್ನು ಎತ್ತಿ ಆಚೆ ಈಚೆ ಮಾಡುವುದು ನಮಗೆ ತುಂಬ ಕಷ್ಟವಾಗುತ್ತಿದೆ" ಎಂದರು ದೇವಕಿ. ಅವರ ಮಾತಿನಲ್ಲಿ ಕಷ್ಟ, ದುಃಖಗಳ ಛಾಯೆ ಇರಲಿಲ್ಲ. ದುಃಖ ಪಡುವ ಶಕ್ತಿ ಅವರಲ್ಲಿ ಉಳಿದ ಹಾಗೆ ಕಾಣಲಿಲ್ಲ.ಆದರೆ ದೇವಕಿ, ಅಂಥ ಮಗನನ್ನು ಮನೆಯಲ್ಲಿಟ್ಟುಕೊಂಡೇ ಸಮಾಜದಲ್ಲಿ ತೊಡಗಿಕೊಂಡವರು. ಇಂಥದೇ ಸಮಸ್ಯೆ ಇರುವವರ ಒಂದು ಪಟ್ಟಿಯೇ ಅವರ ಹತ್ತಿರ ಇತ್ತು! ಅದುವರೆಗೂ ಕಣ್ಣಿಗೆ ಮರೆಯಾಗಿದ್ದ ಎಂಡೋಸಲ್ಫಾನ್ ದುರಂತ ಸ್ವಲ್ಪ ಸ್ವಲ್ಪವಾಗಿ ತನ್ನ ಘೋರಸ್ವರೂಪವನ್ನು ನಮ್ಮೆದುರು ಬಿಚ್ಚತೊಡಗಿತು. ದೇವಕಿಯವರು ಕೊಟ್ಟ ಪಟ್ಟಿಯ ಆಧಾರದ ಮೇಲೆ ನಾವು ಹುಡುಕುತ್ತ ಹೋದೆವು.ನಾಲ್ಕು ವರ್ಷದ ಯಶವಂತನಿಗೆ ತಲೆ ತುಂಬ ದೊಡ್ಡದಾಗಿದೆ. ನೀರು ತುಂಬಿದೆ ಎನ್ನುತ್ತಾರಂತೆ ವೈದ್ಯರು.... ಮೂವತ್ತೆರಡರ ಹರಿಪ್ರಸಾದ ಶೆಟ್ಟಿ ಆಚೆ ಈಚೆ ತೆವಳಿಯೇ ಚಲಿಸಬೇಕು.... ಇಪ್ಪತ್ತೆರಡರ ಅಬ್ದುಲ್ ನಝೀರ್ ಮತ್ತು ಇಪ್ಪತ್ನಾಲ್ಕರ ಅವನ ಅಕ್ಕ ಜೋಹರಾ ಇಬ್ಬರಿಗೂ ಬುದ್ಧಿ ಮಾಂದ್ಯ......ಇನ್ನೂ ಆರು ವರ್ಷದ ಮುಹ್ಸೀನ್ ಬಾತಿಶ್ ಗೆ ಬುದ್ಧಿ ಮಂದ.... ೨೬ ವರ್ಷದ ಮಹಮ್ಮದ್ ಆಶ್ರಫ್ ಸಹ ಆಚೆ ಈಚೆ ತೆವಳಿಕೊಂಡೇ ಹೋಗಬೇಕು.... ರಾಮಣ್ಣಗೌಡರ ಪತ್ನಿ ಕುಸುಮಾಗೆ ಕ್ಯಾನ್ಸರ್.... ಮರುದಿನ ಮತ್ತೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ನಿಮಗೆ ಬಿಲ್ಲಂಪದವು ನಾರಾಯಣ ಭಟ್ಟರನ್ನು ಜೊತೆ ಮಾಡಿಕೊಡುತ್ತೇನೆ ಅಂದರು ಅವರು. ಹೀಗೆ ನಾರಾಯಣ ಭಟ್ಟರೂ ನಾನೂ ಮತ್ತೊಂದು ದಿನ ಕುದ್ದುಪದವಿನ ಸುತ್ತಮುತ್ತ ತಿರುಗಿದೆವು: ನಾರಾಯಣ ಭಟ್ಟರು ಸ್ಥಳೀಕರು. ನಾವು ಹೆಚ್ಚು ದೂರ ಹೋಗಬೇಕಾಗಿರಲಿಲ್ಲ. ಎಲ್ಲ ಅಲ್ಲೇ ಇದ್ದಾರೆ. ಇನ್ನೂ ೫೨ರ, ಒಳ್ಳೆಯ ದೇಹ ಸೌಷ್ಟವ ಇರುವ ಬಾಲಕೃಷ್ಣ ಶೆಟ್ಟರು ಕಣ್ಣು ಕಳೆದುಕೊಂಡಿದ್ದಾರೆ... ಅವರ ತಮ್ಮ ನಲವತ್ತರ ಆಸುಪಾಸಿನ ಸತೀಶ ಶೆಟ್ಟರಿಗೆ ಒಂದು ಕೈ, ಒಂದು ಕಾಲು ಬಲಹೀನವಾಗಿದೆ...(ಬಿಲ್ಲಂಪದವು ನಾರಾಯಣ ಭಟ್ಟರ ಮನೆಯಲ್ಲಿ ಹಿಂದಿನಿಂದಲೂ ಒಂದು ನೋವಿನ ಎಣ್ಣೆ ಉಚಿತವಾಗಿ ಕೊಡುವ ಸಂಪ್ರದಾಯ ಇದೆಯಂತೆ. ಆ ಎಣ್ಣೆ ಹಚ್ಚಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ ಎಂದರು ಸತೀಶ ಶೆಟ್ಟರು. "ಬಲೆ, ಇತ್ತೆ ರೆಡಿ ಉಂಡು, ಕೊರ್ಕ" ಎಂದರು ನಾರಾಯಣ ಭಟ್ಟರು.) ರೈಹಾನಳಿಗೆ ನಡೆಯುವುದೇ ಕಷ್ಟ..... ಸುಲೈಮಾನ್ ರಿಗೆ ಶ್ವಾಸಕೋಶದ ಸಮಸ್ಯೆ.....ಕ್ವಾಟರ್ಸಿನ ಅಡ್ರುರವರ ಮಗಳು ಬೇಬಿಗೆ ನಡೆಯಲು ಆಗುವುದಿಲ್ಲ.... ಎಲ್ಲಕ್ಕಿಂತ ನನಗೆ ಕಷ್ಟವಾದದ್ದು ಅಬೂಬಕ್ಕರ್ ರ ಮನೆಯಲ್ಲಿ. ಅವರ ಮನೆಯಲ್ಲಿ ಒಂದಲ್ಲ ಎರಡಲ್ಲ ಮೂರು ಮಕ್ಕಳಿದ್ದಾರೆ ಇಂಥವರು. ಹಿರಿಯವಳಿಗೆ ಸುಮಾರು ಇಪ್ಪತ್ತು. ಎರಡನೆಯವಳು ಸುಮಾರು ಹದಿನಾರು. ಮೂರನೆಯವ ಸುಮಾರು ಹತ್ತು. ಬುದ್ದಿಮಾಂದ್ಯರು. "ಒಂದು, ಎರಡು ಎಲ್ಲಿ ಮಾಡಬೇಕು ಅಂತ ಅವರಿಗೆ ತಿಳುವಳಿಕೆ ಇಲ್ಲ" ಎಂದರು ಆ ಮಕ್ಕಳ ತಾಯಿ. ದೇವರೇ...... ಪತಿ ಪತ್ನಿ ಡಾಕ್ಟರ ಹತ್ತಿರ ಹೋಗಿ ಪರೀಕ್ಷೆ ಮಾಡಿಸಿ, ಅದೇನೋ ಅಮೆರಿಕದವರೆಗೂ ಹೋಯಿತಂತೆ, ಅಂತೂ ಈಗ ಅವರಿಗೆ ಮತ್ತೆ ಎರಡು ಮಕ್ಕಳಾಗಿವೆ. ಇಬ್ಬರೂ ಆರೋಗ್ಯವಾಗಿದ್ದಾರೆ. ಬಂಟ್ವಾಳ ತಾಲೂಕಿನ ಇನ್ನೂ ಹಲವು ಭಾಗಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಆಗಿದೆ ಎಂದು ಹಲವರು ಹೇಳುವುದು ಕೇಳಿದ್ದೇನೆ. ಮುಖ್ಯವಾಗಿ ವೀರಕಂಬ ಮತ್ತು ಅಜ್ಜಿಬೆಟ್ಟು ಗ್ರಾಮಗಳಲ್ಲಿ ಸಿಂಪಡಣೆ ಆಗಿದೆ ಎಂದು ಹೇಳುತ್ತಾರೆ. ಸಿಂಪಡಣೆ ಆಗಿರುವುದು ಹೌದಾದರೆ, ಅಲ್ಲಿಯೂ ಇಂತಹ ಪ್ರಕರಣಗಳಿರುವ ಸಾಧ್ಯತೆ ಇದೆ. ಇರಲಿ. ಇದನ್ನಿನ್ನು ಮುಂದುವರಿಸುವುದಿಲ್ಲ. ಅನಾರೋಗ್ಯದ ಎಲ್ಲ ಪ್ರಕರಣಗಳನ್ನೂ ಎಂಡೋಸಲ್ಫಾನ್ ತಲೆಗೇ ಕಟ್ಟಿ, "ಸತ್ತ ಎಲ್ಲ ಹುಲಿಗಳನ್ನೂ ಉಲ್ಲಾಸ ಕಾರಂತರ ಖಾತೆಗೆ ಹಾಕುವುದು" ನನ್ನ ಉದ್ದೇಶವಲ್ಲ. ಮುಂದೊಂದು ದಿನ ಈ ಎಲ್ಲರನ್ನೂ ವೈದ್ಯರು ಪರೀಕ್ಷೆ ಮಾಡಬೇಕು. ಅವರ ಕಾಹಿಲೆಗೆ ಕಾರಣವನ್ನೂ ವೈದ್ಯರೇ ಹೇಳಬೇಕು. ಹಾಗೆ ವೈದ್ಯರು ಹೇಳಿದರೆ ಮಾತ್ರ ನ್ಯಾಯಾಲಯ ಒಪ್ಪುತ್ತದೆ ಹೊರತು ಅನ್ಯಥಾ ಅಲ್ಲ. ನನಗೆ ಕಾಣುವಂತೆ ಎಂಡೋಸಲ್ಫಾನಿನ ಬಹು ದೊಡ್ಡ ಅಪಾಯವೆಂದರೆ ಅದು ಮನುಷ್ಯರ ವಂಶವಾಹಿಯನ್ನು ವಿರೂಪಗೊಳಿಸುವುದು. ಮಕ್ಕಳು ಅಂಗವಿಕಲರಾಗುವುದು, ಬುದ್ಧಿಮಾಂದ್ಯತೆ ಮುಂತಾದ್ದಕ್ಕೆ ವಂಶವಾಹಿ ವಿರೂಪಗೊಳ್ಳುವುದೇ ಕಾರಣ. ನಾಗಾಸಾಕಿ, ಹಿರೋಶಿಮಾಗಳಲ್ಲಿ ಅಣುಬಾಂಬು ಬಿದ್ದಾಗ, ಚೆರ್ನೋಬಿಲ್ ಅಣುದುರಂತ ಸಂಭವಿಸಿದಾಗ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರ ವಂಶವಾಹಿಗಳು ವಿರೂಪಗೊಂಡಿದ್ದರೆ, ಮಕ್ಕಳಾಗದಂತೆ ಎಚ್ಚರಿಕೆ ವಹಿಸಲು ಅವರಿಗೆ ಸೂಚಿಸಲಾಯಿತಂತೆ. ಅದೇ ರೀತಿಯ ಎಚ್ಚರಿಕೆಯನ್ನು ಕರ್ನಾಟಕ ಸರ್ಕಾರವೂ ತೆಗೆದುಕೊಳ್ಳಬೇಕು; ಜನರ ವಂಶವಾಹಿಯನ್ನು ಉಚಿತವಾಗಿ ಪರೀಕ್ಷೆಗೊಳಪಡಿಸಿ, ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ಹುಟ್ಟದಂತೆ ಎಚ್ಚರಿಕೆ ವಹಿಸಬೇಕು ಎನ್ನುವುದು ಡಾ. ರವೀಂದ್ರನಾಥ ಶಾನುಭಾಗರ ಅಭಿಪ್ರಾಯ. ಕರ್ನಾಟಕ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಅಖಿಲ ಭಾರತದ ಮಟ್ಟದಲ್ಲೂ ಎಂಡೋಸಲ್ಫಾನನ್ನು ನಿಷೇಧಿಸಬೇಕೆಂಬ ದೊಡ್ಡ ಆಂದೋಲನವೇ ನಡೆಯುತ್ತಿದೆ. ಈ ಆಂದೋಲನವನ್ನು ಬೆಂಬಲಿಸಬೇಕೆನ್ನುವವರು ಕೇಂದ್ರ ಪರಿಸರ ಮಂತ್ರಿ ಜಯರಾಮ ರಮೇಶ್ ಅವರಿಗೆ Sri Jayaram Ramesh, Minister of Environment and Forest, Paryavaran Bhavan, CGO Complex, Lodhi Road, New Delhi - 110003 ಈ ವಿಳಾಸಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಪತ್ರ ಬರೆಯಬಹುದು ಅಥವಾ http://www.petitiononline.com/endoban/petition.html ಎಂಬ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು.

ಮಂಗಳವಾರ, ಮಾರ್ಚ್ 8, 2011

ನೇತ್ರಾವತಿ ತಿರುವು ಯೋಜನೆ: ತಕ್ಷಣಕ್ಕೆ ಅನ್ನಿಸಿದ್ದು:


ನೇತ್ರಾವತಿ ತಿರುವು ಯೋಜನೆಗೆ ಮತ್ತೆ ಜೀವ ಬಂದಿದೆ. ಈ ಯೋಜನೆಯನ್ನು ಜಾರಿಗೆ ಕೊಡುವ ಮೊದಲು ನಮ್ಮ ಸರಕಾರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು:
ಈ ಯೋಜನೆ ತುಮಕೂರು, ಕೋಲಾರ, ಚಿತ್ರದುರ್ಗ, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಹಾಗಿದ್ದರೆ,
೧. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಯಾವಾಗಿನಿಂದ ಪ್ರಾರಂಭವಾಯಿತು?
೨, ಅಭಾವ ಉಂಟಾಗಲು ಕಾರಣಗಳೇನು?
೩. ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳುವುದು ಸಾಧ್ಯವೇ?
೪. ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಮಾಡಿರುವ ಪ್ರಯತ್ನಗಳು ಯಾವುವು? ಅವುಗಳು ಫಲ ಕೊಟ್ಟಿಲ್ಲವೇ? ಯಾಕೆ?
೫. ಸಮಸ್ಯೆಯ ಪರಿಹಾರ ಹೇಗೆ?
ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಮೊದಲು ಕಂಡುಕೊಳ್ಳಬೇಕು. ಈ ಅಧ್ಯಯನದ ನಂತರವೂ ಹೊರಗಿನಿಂದ ನೀರು ತರುವುದು ಅನಿವಾರ್ಯ ಎಂದಾದರೆ ಮಾತ್ರ ಆ ಪ್ರಯತ್ನಕ್ಕೆ ಕೈ ಹಾಕಬಹುದು.
ಹಿಂದೊಬ್ಬಳು ಮುದುಕಿ ಇದ್ದಳಂತೆ. ಮನೆಯೊಳಗೆ ಸೂಜಿ ಕಳೆದುಕೊಂಡು, ಒಳಗೆ ಕತ್ತಲು, ಹೊರಗೆ ಬೆಳಕಿದೆ ಎಂದು, ಅಂಗಳಕ್ಕೆ ಬಂದು ಸೂಜಿ ಹುಡುಕಿದವಳು. ನಮ್ಮ ಕಥೆಯೂ ಹಂಗಾಗಬಾರದು. ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿ ಹುಡುಕೋಣ. ಸಿಗುವುದು ಸಾಧ್ಯ, ಸಿಗುತ್ತದೆ.
ಒಂದು ಉದಾಹರಣೆ: ಬೆಂಗಳೂರಿನಲ್ಲಿ ವೃಷಭಾವತಿ ಎಂಬ ನದಿ ಇತ್ತಂತೆ. ಅದೀಗ ದೊಡ್ಡ ಚರಂಡಿಯಾಗಿದೆ. ಒಂದು ಕಾಲಕ್ಕೆ (ಬಹಳ ಹಿಂದೇನೂ ಅಲ್ಲ. ಬಹುಶಃ ಐವತ್ತು ವರ್ಷಗಳ ಹಿಂದೆ) ಕುಡಿಯುವ ಸಿಹಿನೀರು ಕೊಡುತ್ತಿದ್ದ ನದಿ ಇಂದು ಕೊಳಚೆ ಹರಿಯುವ ಚರಂಡಿಯಾಗಿದ್ದರೆ, ಅದಕ್ಕೆ ನಾವೇ ಹೊಣೆ. ನಮ್ಮ ಮೊದಲ ಕರ್ತವ್ಯ ಆ ಚರಂಡಿಯನ್ನು ಹಿಂದೆ ಇದ್ದ ನದಿಯಾಗಿ ಪರಿವರ್ತಿಸುವುದು. ಬೆಂಗಳೂರಿನ ಕೆರೆಗಳ ನೀರನ್ನು ಕುಡಿಯಲಾಗದಂತೆ ಮಲಿನ ಮಾಡಿ, ಅಲ್ಲಿ ದೋಣಿಯಾಟವಾಡಿ ಮಜಾ ಮಾಡುವ, ಕೆರೆಯಂಗಳವನ್ನು ಕ್ರಿಕೆಟ್ ಮೈದಾನ ಮಾಡಿ ಹಗಲೂ ರಾತ್ರಿ ಕ್ರಿಕೆಟ್ ನಶೆಯಲ್ಲಿ ಮುಳುಗಿರುವ ಪಾಪಿಗಳು ನಾವು. ಅದಕ್ಕೆ ಪ್ರಾಯಶ್ಚಿತ್ತವನ್ನೂ ನಾವೇ ಮಾಡಿಕೊಳ್ಳಬೇಕು. ಈ ಮಾತು ಮೇಲೆ ಹೇಳಿದ ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದುಕೊಂಡಿದ್ದೇನೆ.

ಶನಿವಾರ, ಫೆಬ್ರವರಿ 26, 2011

ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ ಹೋದದ್ದರ ಒಳಗುಟ್ಟೇನು?

"ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ ತೀರ್ಪನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟಿಗೆ ಹೋಗಿದೆಯಷ್ಟೆ? ಇದರ ಒಳಗುಟ್ಟೇನು?
ಕೆಲವು ಸಮಯದಿಂದಲೂ ವಿದ್ಯಾ ಮೇಡಂ (ವಿದ್ಯಾ ದಿನಕರ್) "ಏನೋ ಗುಟ್ಟು ಇರಬೇಕು" ಎಂದು ಅನುಮಾನಿಸುತ್ತಲೇ ಇದ್ದರು. ಕಂಪೆನಿ ಹೈಕೋರ್ಟಿಗೆ ಹೋದರೂ ಹೋಗಬಹುದು ಎಂಬ ಅನುಮಾನ, ಆಯೋಗ ನಿರ್ದೇಶಿಸಿದ ಅವಧಿದೊಳಗೆ ಮಾಹಿತಿ ಸಿಗದಿದ್ದಾಗ, ನನಗೂ ಬಂದಿತ್ತು.
ನಾನು ಕೇಳಿದ ಮಾಹಿತಿ ನೀರಿಗೆ ಸಂಬಂಧಿಸಿದ್ದು. ಬಂಟ್ವಾಳ ತಾ. ಶಂಬೂರಿನಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಎ ಎಂ ಆರ್ ಕಂಪೆನಿ ಜಲವಿದ್ಯುತ್ತನ್ನು ತಯಾರಿಸುತ್ತಿದೆ. ಇದೇ ಆಣೆಕಟ್ಟಿನಿಂದ ನೀರನ್ನು ಸಾಗಿಸಲು ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್ ಇ ಜಡ್ ಕಂಪೆನಿ ನನಗೆ ತಿಳಿಸಿತ್ತು. ಆ ಒಪ್ಪಂದದ ಪ್ರತಿಯನ್ನು ಕೊಡುವಂತೆ ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದೆ. ಕಂಪೆನಿ ನನಗೆ ಒಪ್ಪಂದದ ಪ್ರತಿ ಕೊಡಲಿಲ್ಲ. ಈಗ ಹೈಕೋರ್ಟ್ ಎದುರಿಗೆ ಇರುವುದು ಇದೇ ವಿವಾದ.
ನೋಡೋಣ ಎಂದು ಮೊನ್ನೆ ನಾನು ಮತ್ತೊಂದು ಕಡೆಯಿಂದ ಒಂದು ಪ್ರಯತ್ನ ಮಾಡಿದೆ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ರವರ ಕಛೇರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ, ಮೂರು ಮಾಹಿತಿಗಳನ್ನು ಕೇಳಿದೆ:
೧. ಎಸ್ ಇ ಜಡ್ ಕಂಪೆನಿಗೆ ತನ್ನ ಆಣೆಕಟ್ಟಿನಿಂದ ನೀರು ಒದಗಿಸಲು ಎ ಎಂ ಆರ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?
೨. ಎ ಎಂ ಆರ್ ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆಯಲು ಎಸ್ ಇ ಜಡ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?
೩. ಒಂದು ವೇಳೆ ಅನುಮತಿ ನೀಡಿದ್ದರೆ, ಆ ಎರಡೂ ಕಂಪೆನಿಗಳ ನಡುವೆ ಈ ಬಗ್ಗೆ ಆಗಿರುವ ಒಪ್ಪಂದವನ್ನು ನೀವು ಅಂಗೀಕರಿಸಿದ್ದೀರಾ? ಆ ಒಪ್ಪಂದದ ಪ್ರತಿ.
25-02-2011ರಂದು ಅವರಿಂದ ಹೀಗೆ ಉತ್ತರ ಬಂದಿದೆ:
"..... ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಎ.ಎಂ.ಆರ್. ಕಂಪೆನಿಗೆ ಅದರ ಆಣೆಕಟ್ಟಿನಿಂದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು ಸರಬರಾಜು ಮಾಡಲು ಮತ್ತು ವಿಶೇಷ ಆರ್ಥಿಕ ವಲಯಕ್ಕೆ ಎ. ಎಂ. ಆರ್. ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆದುಕೊಳ್ಳಲು ಈ ವಿಭಾಗದಿಂದ ಅನುಮತಿ ನೀಡಿರುವುದಿಲ್ಲ. ಹಾಗೂ ಈ ಕುರಿತು ಯಾವುದೇ ಒಪ್ಪಂದವನ್ನು ಈ ವಿಭಾಗದಿಂದ ಮಾಡಿರುವುದಿಲ್ಲ"
ಎಂದರೆ ಎಸ್ ಇ ಜಡ್ ಕಂಪೆನಿ ನನಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾವಿಸಿರುವ ಒಪ್ಪಂದವು ನಿಜವಾಗಿ ಅಸ್ತಿತ್ವದಲ್ಲಿಯೇ ಇಲ್ಲವೆ? ( ಈ ನಡುವೆ ಎ. ಎಂ. ಆರ್. ಕಂಪೆನಿಯನ್ನು ಜರ್ಮನ್ ಮೂಲದ ಗ್ರೀನ್ ಕೇರ್ ಕಂಪೆನಿಗೆ ಮಾರಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ಆ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲ.) ಒಪ್ಪಂದವೇ ಇಲ್ಲದಿದ್ದರೆ ಯಾವ ಕೋರ್ಟು ಹೇಳಿದರೆ ತಾನೆ ಕಂಪೆನಿ ಅದನ್ನು ನನಗೆ ಕೊಡಲು ಸಾಧ್ಯ? ಮುಖ್ಯವಾಗಿ ಈ ಕಾರಣಕ್ಕಾಗಿಯೇ ಕಂಪೆನಿ ಕೋರ್ಟು ವ್ಯವಹಾರದಲ್ಲಿ ತೊಡಗಿರಬಹುದೆ? "ಹೇಗಾದರೂ ಒಮ್ಮೆ ಕೋರ್ಟಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡರೆ ಮತ್ತೆ ವರ್ಷಗಟ್ಟಲೆ ಪ್ರಕರಣವನ್ನು ಎಳೆಯಬಹುದು, ಮುಂದೊಂದು ದಿನ ಸಮಸ್ಯೆಯನ್ನು ಹೇಗೋ ಬಗೆಹರಿಸಿಕೊಳ್ಳಬಹುದು" ಎಂಬ ಕುರುಡು ಧೈರ್ಯದಿಂದ ಕಂಪೆನಿ ಹೀಗೆ ಮಾಡಿರಬಹುದೆ? ಜೊತೆಗೆ, ಕೋರ್ಟಿನಲ್ಲಿ ತಾನೇ ಗೆದ್ದರೆ, ಆಗ ಡಬಲ್ ಲಾಭ ಸಿಕ್ಕಿದಂತಾಯಿತಲ್ಲ. ಮತ್ತು ಅಲ್ಲಿಯವರೆಗೆ, ಮಾಹಿತಿ ಕೇಳುವವರಿಗೆಲ್ಲ ಇದೇ ನೆಪವೊಡ್ಡಿ ಮಾಹಿತಿಯನ್ನು ನಿರಾಕರಿಸಬಹುದಲ್ಲ? ಈ ದಿಸೆಯಲ್ಲಿ ಯೋಚನೆ ಮಾಡಿದರೆ, ಪ್ರಕರಣವನ್ನು ಕಂಪೆನಿ ಸುಪ್ರೀಂ ಕೋರ್ಟಿಗೆ ಕೊಂಡು ಹೋಗಲು ಯತ್ನಿಸಿದರೂ ಆಶ್ಚರ್ಯವಿಲ್ಲ ಎಂದು ನನಗೆ ಕಾಣುತ್ತದೆ.
ಒಪ್ಪಂದ ಇದೆಯೋ ಇಲ್ಲವೋ?
ನೇತ್ರಾವತಿ ನದಿಯ ನೀರು ಸಾರ್ವಜನಿಕ ಸಂಪತ್ತು. ಅದರ ಮೇಲೆ ಅಧಿಕಾರ ಇರುವುದು ಸರಕಾರಕ್ಕೆ. ಆದ್ದರಿಂದಲೇ, ಸರಕಾರದ ಒಪ್ಪಿಗೆ ಇಲ್ಲದೆ ಎರಡು ಖಾಸಗಿ ಕಂಪೆನಿಗಳು ನದಿಯ ನೀರಿನ ವಿಷಯವಾಗಿ ಯಾವ ಒಪ್ಪಂದವನ್ನೂ ಮಾಡಿಕೊಳ್ಳಲು ಬರುವುದಿಲ್ಲ. ಇಲ್ಲಿ ಸರಕಾರದ ಪರವಾಗಿ ಒಪ್ಪಿಗೆ ನೀಡುವ, ಒಪ್ಪಂದವನ್ನು ಅಂಗೀಕರಿಸುವ ಅಧಿಕಾರ ಇರುವುದು, ನನಗೆ ತಿಳಿದ ಮಟ್ಟಿಗೆ, ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ಅವರಿಗೆ. ("ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್"ನೊಂದಿಗೆ ಕರ್ನಾಟಕ ಸರಕಾರದ ಪರವಾಗಿ ಒಪ್ಪಂದ ಮಾಡಿಕೊಂಡಿರುವುದು ಅವರೇ).ಅವರಿಗೇ ಈ ಒಪ್ಪಂದದ ಬಗ್ಗೆ ಗೊತ್ತಿಲ್ಲ ಎಂದಾದ ಮೇಲೆ, "ಎ. ಎಂ. ಆರ್. ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂಬ ಎಸ್. ಇ. ಜಡ್. ಕಂಪೆನಿಯ ಮಾತನ್ನು ನಂಬುವುದು ಹೇಗೆ?
ಶಂಬೂರಿನ ಸಮೀಪ ಜಲವಿದ್ಯುತ್ ತಯಾರಿಸಲು ಮೂಲತಃ ಅನುಮತಿ ಮಂಜೂರಾದದ್ದು "ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್" ಎಂಬ ಸಂಸ್ಥೆಗೆ. ೨೦೦೬ರಲ್ಲಿ ಆ ಕಂಪೆನಿಗೆ ಅನುಮತಿ ನೀಡುವಾಗ ಸರಕಾರ ಹಾಕಿರುವ ಷರತ್ತುಗಳಲ್ಲಿ ಒಂದು ಹೀಗಿದೆ:
"2. ನೀರನ್ನು ಬಳಕೆಯೇತರ ಉಪಯೋಗಕ್ಕಾಗಿ (Non-consumptive) ಮಾತ್ರ ಬಳಸತಕ್ಕದ್ದು. ವಿದ್ಯುತ್ ಉತ್ಪಾದನೆಯ ನಂತರ ನೀರಾವರಿ, ನೀರು ಸರಬರಾಜು (consumptive) ಇಂತಹ ಬಳಕೆಯ ಉದ್ದೇಶಗಳಿಗೆ ನೀರನ್ನು ಬಳಸಬಾರದು"
ವಸ್ತುಸ್ಥಿತಿ ಹೀಗಿದ್ದರೂ, ಎಸ್ ಇ ಜಡ್ ಕಂಪೆನಿ ಈಗ್ಗೆ ಏಳು ತಿಂಗಳುಗಳ ಕೆಳಗೆ, ನೇತ್ರಾವತಿ ನದಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಅಳವಡಿಸುವ ಕೆಲಸಕ್ಕೆ ದೇಶೀ/ವಿದೇಶೀ ಕಂಪೆನಿಗಳಿಂದ ಟೆಂಡರ್ ಕರೆದಿದೆ! ಈ ಜಾಹೀರಾತಿನಲ್ಲಿ ನೇತ್ರಾವತಿಯ ಯಾವ ಭಾಗದಿಂದ ಪೈಪುಗಳನ್ನು ಅಳವಡಿಸಬೇಕಾಗುತ್ತದೆ ಎಂಬುದನ್ನೇನೂ ಸೂಚಿಸಿಲ್ಲ. "ನೇತ್ರಾವತಿ ನದಿಯಿಂದ" ಎಂದು ಮಾತ್ರ ಹೇಳಲಾಗಿದೆ. (ನೇತ್ರಾವತಿ ನದಿಗೆ ಈಗ ಬಂಟ್ವಾಳ ತಾಲೂಕಿನಲ್ಲಿ 3 ದೊಡ್ಡ ಅಣೆಕಟ್ಟುಗಳಿವೆ. 1. ಎಂ ಆರ್ ಪಿ ಎಲ್ ಕಂಪೆನಿಯದು, 2. ಎ.ಎಂ.ಆರ್. ಕಂಪೆನಿಯದು 3. ಮಂಗಳೂರು ಮಹಾನಗರ ಪಾಲಿಕೆಯದು).
ಉದಯವಾಣಿಯಲ್ಲಿ ಪ್ರಕಟವಾಗಿದ್ದ ಈ ಜಾಹೀರಾತಿನ ಪ್ರತಿಯನ್ನಿಟ್ಟು ನಾನು ಅರಣ್ಯ ಇಲಾಖೆಗೆ ಪತ್ರ ಬರೆದು, ಈ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಿದೆಯೇ ಎಂದು ಕೇಳಿದ್ದೆ. ತಾ. 4-10-2010ರಲ್ಲಿ ಇಲಾಖೆ ನನಗೆ ಹೀಗೆ ಉತ್ತರಿಸಿತ್ತು:
"ಎಮ್ ಎಸ್ ಇ ಝಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ, ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ...". ಇದರ ಅರ್ಥ ಪತ್ರಿಕೆಗಳಲ್ಲಿ ಪೈಪ್ ಅಳವಡಿಸುವ ಕೆಲಸಕ್ಕೆ ಟೆಂಡರ್ ಕರೆಯುವಾಗ ಕಂಪೆನಿ ಅರಣ್ಯ ಇಲಾಖೆಯಿಂದ ಮರಗಳನ್ನು ಕಡಿಯಲು ಅನುಮತಿ ಪಡೆದಿರಲಿಲ್ಲ! ಈ ವಿಷಯದಲ್ಲಿ ಇತ್ತೀಚಿನ ಬೆಳವಣಿಗೆ ತಿಳಿಯಲು ಇನ್ನು ಪತ್ರ ಬರೆಯಬೇಕು.
ಅರಣ್ಯ ಇಲಾಖೆಗೆ ಬರೆದಂತೆಯೇ, ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದಿದ್ದೆ. ಆ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿ, "ನೀರಿನ ಪೈಪುಗಳನ್ನು ಅಳವಡಿಸಲು ರಸ್ತೆ ಅಗೆತದ ಬಗ್ಗೆ" ದಿನಾಂಕ 22-5-10 ರಂದು ಕೆಳಕಂಡಂತೆ ಅನುಮತಿ ನೀಡಿದೆ:
೧. ಮಣಿಹಳ್ಳದಿಂದ ಬಂಟ್ವಾಳದವರೆಗೆ - 3.ಕಿ.ಮೀ.
೨. ಬಂಟ್ವಾಳದಿಂದ ಸೊರ್ನಾಡ್ ವರೆಗೆ - 5.7 ಕಿ.ಮೀ.
೩. ಸೊರ್ನಾಡಿನಿಂದ ಮೂಲರಪಟ್ನವರೆಗೆ - 5.8 ಕಿ.ಮೀ.
ಈ ಮಾಹಿತಿಯಿಂದಲೂ, ಎಸ್. ಇ. ಜಡ್. ಕಂಪೆನಿ ನೇತ್ರಾವತಿಯ ಯಾವ ಭಾಗದಿಂದ ನೀರೆತ್ತಲು ಹೊರಟಿದೆ ಎಂಬುದು ತಿಳಿಯುವುದಿಲ್ಲ. ಮಣಿಹಳ್ಳದಿಂದ ನೇತ್ರಾವತಿಯ ಕಡೆಗೆ ಹೋಗುವ ರಸ್ತೆ ಬಹುಶಃ ಜಿಲ್ಲಾ ಪಂಚಾಯತಿಗೆ ಸೇರಿದ್ದು. ಇನ್ನು ಅವರಿಂದ ಮಾಹಿತಿ ಪಡೆಯಬೇಕು. ನೋಡೋಣ.
ಹೈಕೋರ್ಟು ಮಾಹಿತಿ ಆಯೋಗದ ತೀರ್ಪಿಗೆ ಆರು ವಾರಗಳ ಅವಧಿಯ ಮಧ್ಯಂತರ ತಡೆಯಾಜ್ಞೆ ಕೊಟ್ಟಿತ್ತು. ಈ ಆರು ವಾರ ಮುಗಿದ ಮೇಲೆ ಕಂಪೆನಿಯ ಪರವಾಗಿ ಅದರ ಮುಖ್ಯಸ್ಥರು ಮಾಹಿತಿ ಆಯೋಗದೆದುರು ಹಾಜರಾಗಿ, ಹೈಕೋರ್ಟು ತಡೆಯಾಜ್ಞೆಯನ್ನು ಮತ್ತೂ ಎರಡು ವಾರಗಳಿಗೆ ವಿಸ್ತರಿಸಿರುವುದನ್ನು ತಿಳಿಸಿದ್ದರು. ಈಗ ಆ ಅವಧಿಯೂ ಮುಗಿದಿದೆ. ಇಂದು (25-02-2011) ಮಾಹಿತಿ ಆಯೋಗ ಪ್ರಕರಣವನ್ನು ಮತ್ತೆ ವಿಚಾರಣೆಗೆ ಎತ್ತಿಕೊಂಡಿದೆ. ವಿಚಾರಣೆಗೆ ನಾನು ಹೋಗಿರಲಿಲ್ಲ. ಹಾಗಾಗಿ ಫಲಿತಾಂಶ ಇನ್ನು ನನಗೆ ಗೊತ್ತಾಗಬೇಕಷ್ಟೆ.

ಭಾನುವಾರ, ಜನವರಿ 30, 2011

ಮಾಹಿತಿ ಆಯೋಗದ ತೀರ್ಪು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ!

"ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದೆ. ಈ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟು, ಮಾಹಿತಿ ಆಯೋಗದ ತೀರ್ಪಿಗೆ ಆರುವಾರಗಳ ತಡೆಯಾಜ್ನೆ ನೀಡಿದೆ. ಮಾಹಿತಿ ಆಯೋಗ ನೀಡಿದ ತೀರ್ಪನ್ನು ಈ ಹಿಂದೆಯೇ ಪ್ರಕಟಿಸಿದ್ದೇನೆ. ಈಗ ಈ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ, ಮಂಗಳೂರು ಎಸ್ ಇ ಜಡ್ ಕಂಪೆನಿಯ ಪರ ವಕೀಲರು ಏನು ವಾದ ಮಂಡಿಸಿದ್ದಾರೆ ಮತ್ತು ಅದಕ್ಕೆ ನನ್ನ ಪ್ರತಿವಾದ ಏನು ಎಂದು ನೋಡೋಣ:
ಈ ಪ್ರಕರಣದಲ್ಲಿ ತೀರ್ಮಾನವಾಗಬೇಕಾದ ಮುಖ್ಯ ಅಂಶ ಮಂಗಳೂರು ಎಸ್ ಇ ಜಡ್ ಕಂಪೆನಿಯು ಒಂದು ಸಾರ್ವಜನಿಕ ಪ್ರಾಧಿಕಾರ ಹೌದೇ ಅಲ್ಲವೇ ಎನ್ನುವುದು. ಅದು ಸಾರ್ವಜನಿಕ ಪ್ರಾಧಿಕಾರ ಹೌದು ಎಂದಾದರೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ, ಅಲ್ಲ ಎಂದಾದರೆ ಬರುವುದಿಲ್ಲ. ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸ್ಪಷ್ಟವಾಗಿ "Commission comes to the conclusion that M/s Mangalore SEZ Ltd., is a 'public authority' under section 2(h) of the Right to information Act, 2005" ಎಂದು ತೀರ್ಪು ನೀಡಿದೆ.
ಮಾಹಿತಿ ಹಕ್ಕು 2005ರ ಪ್ರಕಾರ ಸಾರ್ವಜನಿಕ ಪ್ರಾಧಿಕಾರ ಎಂದರೆ:
(h) "public authority" means any authority or body or institution of self- government established or constituted—
(a) by or under the Constitution;
(b) by any other law made by Parliament;
(c) by any other law made by State Legislature;
(d) by notification issued or order made by the appropriate Government,
and includes any—
(i) body owned, controlled or substantially financed;
(ii) non-Government organisation substantially financed,
directly or indirectly by funds provided by the appropriate Government;
ಈ ನಿಯಮಗಳ ವ್ಯಾಪ್ತಿಯೊಳಗೆ ಮಂಗಳೂರು ಎಸ್ ಇ ಜಡ್ ಕಂಪೆನಿ ಬರುವುದಿಲ್ಲ ಎನ್ನುವ ವಾದವನ್ನು ಮಂಡಿಸುತ್ತಾ ಹೈಕೋರ್ಟಿನ ವಕೀಲರು (ಶ್ರೀ ಪಿ.ಡಿ. ವಿಶ್ವನಾಥ್) ಹೀಗೆ ಹೇಳುತ್ತಾರೆ:
"The petitioner ( ಎಂದರೆ ಮಂಗಳೂರು ಎಸ್ ಇ ಜಡ್ ಕಂಪೆನಿ) is not established or constituted by or under the Constitution. The petitioner is not established or constituted either by any law made by the parliament or the state legislature or by any notification issued or order made by the Government. The petitioner is not a body owned or controlled or substantially financed by the Government. The Oil & Natural Gas Corporation Ltd (ONGC) is a Government Company and it is not the Central Government. The Karnataka Industrial Areas Development Board(KIADB) is a statutory corporation constituted under the Karnataka Industrial Areas Development Act and it is not a Government...."
ಮಂಗಳೂರು ಎಸ್ ಇ ಜಡ್ ಕಂಪೆನಿಯಲ್ಲಿ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲು ಒಟ್ಟು ಶೇ. 49; ಉಳಿದ ಶೇ. 51 ಐಎಲ್ & ಎಫ್ ಎಸ್ ಕಂಪೆನಿಯದು ಎಂಬುದು ಈ ಮೊದಲೇ ಸಾಬೀತಾಗಿದೆ. ಕರ್ನಾಟಕ ಮಾಹಿತಿ ಆಯೋಗ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳ ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲು ಎಂದು ಪರಿಗಣಿಸಿದೆ. ಈ ಎರಡೂ "ಸರಕಾರ" ಅಲ್ಲ; ಓಎನ್ ಜಿಸಿ ಒಂದು ಸರಕಾರಿ ಕಂಪೆನಿಯಾದರೆ, ಕಕೈಪ್ರಮಂ ಒಂದು ಸರಕಾರಿ ನಿಗಮ ಮಾತ್ರ, ಹಾಗಾಗಿ ಇವುಗಳ ಪಾಲನ್ನು ಸರಕಾರದ ಪಾಲು ಎಂದು ಪರಿಗಣಿಸುವಂತಿಲ್ಲ, ಹಾಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿ ಒಂದು ಸಾರ್ವಜನಿಕ ಪ್ರಾಧಿಕಾರ ಅಲ್ಲ ಎನ್ನುವುದು ಹೈಕೋರ್ಟ್ ವಕೀಲರ ವಾದ.
"ಶೇ. 49ರ ಪಾಲು 'ಗಣನೀಯ'ವಾದ ಪಾಲು ಅಲ್ಲ" ಎಂಬ ವಾದವನ್ನೇನೂ ಅವರು ಮಂಡಿಸಿಲ್ಲ.
ವಾದಕ್ಕಾಗಿ ಒಂದು ಕ್ಷಣ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವುಗಳ ಪಾಲು ನೇರವಾಗಿ ಸರಕಾರದ ಪಾಲು ಅಲ್ಲವೆಂದೇ ತಿಳಿಯೋಣ. ಆಗಲೂ ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ಕುಣಿಕೆಯಿಂದ ಉಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಾಹಿತಿ ಹಕ್ಕು 2005ರ 2(h) ಹೀಗೆ ಹೇಳುತ್ತದೆ:
"public authority" means any authority or body or institution of self- government established or constituted—
.........
.........
and includes any— .......
(i) body ........substantially financed;
.........
directly or indirectly by funds provided by the appropriate Government;
ಎಂದರೆ ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ.
ವಕೀಲರ ವಾದದ ಪ್ರಕಾರ ಮಂಗಳೂರು ಎಸ್ ಇ ಜಡ್ ಕಂಪೆನಿ ನೇರವಾಗಿ ಸರಕಾರದಿಂದ ಹಣವನ್ನು ಪಡೆದಿಲ್ಲ ಎಂಬುದನ್ನು ಒಪ್ಪಿದರೂ, ಪರೋಕ್ಷವಾಗಿ, ಕೇಂದ್ರ ಸರಕಾರದ ಕಂಪೆನಿಯಾದ ಓಎನ್ ಜಿಸಿಯಿಂದ ಮತ್ತು ಕರ್ನಾಟಕ ಸರಕಾರದ ನಿಗಮವಾದ ಕಕೈಪ್ರಮಂಡಳಿಯಿಂದ ಗಣನೀಯ ಪ್ರಮಾಣದ ಹಣ ಪಡೆದಿದೆ. ಹೀಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿಯು ನಿಸ್ಸಂದೇಹವಾಗಿ ಒಂದು ಸಾರ್ವಜನಿಕ ಪ್ರಾಧಿಕಾರವೇ ಆಗುತ್ತದೆ.
*******************************
ಕಾನೂನಿನಲ್ಲಿರುವ "ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ" ಎಂಬ ವಾಕ್ಯವನ್ನು ಕೊಂಚ ಹಿಂಜಿ ನೋಡಬೇಕಾದ ಅಗತ್ಯವಿದೆ. ಕಾನೂನು "Funds" ಎಂಬ ಪದವನ್ನು ಬಳಸಿರುವುದರಿಂದ "ಸರಕಾರವು ನೇರವಾಗಿ ಅಥವಾ ಪರೋಕ್ಷವಾಗಿ ಹಣ ಹೂಡಿದ್ದರೆ" ಎಂದೇ ಅರ್ಥ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ಸರಕಾರದ ಪಾಲು ಹಣದ ರೂಪದಲ್ಲಿರದೆ ವಸ್ತುರೂಪದಲ್ಲಿದ್ದರೂ ಸಹ ಅಂತಹ ನಿಕಾಯವು ಕಾನೂನಿನ ವ್ಯಾಪ್ತಿಗೆ ಏಕೆ ಬರಬಾರದು?
ಉದಾಹರಣೆಗೆ ಮಂಗಳೂರು ವಿ.ಆ.ವ. ಕಂಪೆನಿಗೆ ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ ಒಟ್ಟು 6.75 ಕೋಟಿ ಲೀಟರ್ ನೀರೆತ್ತಲು ಅನುಮತಿ ನೀಡಿದೆ. (ಈ ನೀರಿಗೆ ಕಂಪೆನಿ ಹಣ ಕೊಡಬೇಕಾಗಿದೆಯಾದರೂ ಅದು ತೀರ ನಿಕೃಷ್ಟ ಮೊತ್ತ) ಆದರೆ ಸದ್ಯದ ಕಾನೂನಿನಲ್ಲಿ ಸರಕಾರದ ಈ ಪಾಲನ್ನು ಪರಿಗಣಿಸಲು ಅವಕಾಶವಿಲ್ಲ. ಇದರಿಂದಾಗಿ ಕಾನೂನಿನ ಮೂಲ ಉದ್ದೇಶವೇ ನಿಷ್ಫಲವಾದಂತಾಗುತ್ತದೆ. ಆದ್ದರಿಂದ ಸರಕಾರವು ವಸ್ತುರೂಪದಲ್ಲಿ ಏನನ್ನಾದರೂ ತೊಡಗಿಸಿದ ಸಂದರ್ಭದಲ್ಲಿಯೂ, ಅಂತಹ ನಿಕಾಯವನ್ನು ಸಾರ್ವಜನಿಕ ಪ್ರಾಧಿಕಾರ ಎಂದೇ ಪರಿಗಣಿಸಬೇಕಾದ ಅಗತ್ಯವಿದೆ. (ಈ ವಿಷಯದಲ್ಲಿ ಈಗಾಗಲೇ ಯಾವುದಾದರೂ ಕೋರ್ಟಿನ ತೀರ್ಪು ಆಗಿರುವುದು ಸಾಧ್ಯ. ಅಂತಹ ತೀರ್ಪು ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿರಿ).
ಮಂಗಳೂರು ವಿ.ಆ.ವ. ಕಂಪೆನಿಯಲ್ಲೇನೋ ಸರಕಾರದ ಪಾಲು ನೇರವಾಗಿಯೋ ಪರೋಕ್ಷವಾಗಿಯೋ ಇದೆ. ಆದ್ದರಿಂದ ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರಬೇಕಾಗುತ್ತದೆ. ಆದರೆ ಇಂದು ಅಸ್ತಿತ್ವಕ್ಕೆ ಬರುತ್ತಿರುವ ಎಷ್ಟೋ ಖಾಸಗಿ ಎಸ್ ಇ ಜಡ್ ಕಂಪೆನಿಗಳು ಈ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ವಾಸ್ತವವಾಗಿ ಸರಕಾರಗಳು ಭೂಮಿಯನ್ನು ಅದರ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಇವುಗಳಿಗೆ ಹಸ್ತಾಂತರಿಸದೆ ಹೋದರೆ, ಇವು ಅಸ್ತಿತ್ವಕ್ಕೆ ಬರುವುದು ಸಾಧ್ಯವೇ ಇಲ್ಲ. ಹಾಗಾಗಿ ಪರೋಕ್ಷವಾಗಿ ಸರಕಾರದಿಂದ ಭೂಮಿಯನ್ನು ಪಡೆದಿರುವ ಕಾರಣಕ್ಕಾಗಿ ಈ ಖಾಸಗಿ ಕಂಪೆನಿಗಳನ್ನೂ ಸಹ ಮಾಹಿತಿ ಹಕ್ಕಿನ ವ್ಯಾಪ್ತಿಗೆ ತರುವುದು ಅಗತ್ಯವಿದೆ.