ಮಂಗಳವಾರ, ಜೂನ್ 22, 2010

ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ?

ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. "ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?" ಎಂಬ ಲೇಖನ ಬರೆದಾಗ ನೋಡಿದ್ದೆ. ಅಲ್ಲಿ ಕೊಟ್ಟಿದ್ದ ಕೆಲವು ಅಂಕಿಸಂಖ್ಯೆಗಳನ್ನು ಲೇಖನದಲ್ಲಿ ಬಳಸಿಕೊಂಡಿದ್ದೆ. ಅದೇ ನೆನಪಿನ ಮೇಲೆ ಮೊನ್ನೆ "ನಿಮ್ಮ ಕಾನೂನು ನಿಮಗಿರಲಿ......" ಲೇಖನದಲ್ಲಿ "ಕರ್ನಾಟಕ ಸರಕಾರ ದಿನಕ್ಕೆ ೬.೭೫ ಕೋಟಿ ಲೀಟರ್ ನೀರು ಕೊಡಲು ಒಪ್ಪಿಕೊಂಡಿದೆ" ಎಂದು ಬರೆದೆ. ನಿನ್ನೆ ಅಂದರೆ ೧೭-೦೬-೨೦೧೦ರಂದು ಯಾಕೋ ಕಂಪೆನಿಯ ವೆಬ್ ಸೈಟನ್ನು ಪುನಃ ನೋಡಬೇಕಾಯಿತು. ನೋಡಿದರೆ ನೀರಿನ ಕುರಿತಾದ ಕಂಪೆನಿಯ ಅಂಕಿಸಂಖ್ಯೆಗಳು ಬದಲಾಗಿಬಿಟ್ಟಿವೆ!
೧. ಒಟ್ಟು ಅಗತ್ಯ ೪೫ ಎಂಜಿಡಿ ನೀರು ಎಂಬುದೇನೋ ಮೊದಲಿನಂತೆಯೇ ಇದೆ. ಈ ಪೈಕಿ ೧೫ ಎಂಜಿಡಿ ನೀರನ್ನು ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ಒದಗಿಸಿಕೊಳ್ಳುತ್ತೇವೆ ಎಂದು ಹಿಂದಿನ ವೆಬ್ ಸೈಟಿನಲ್ಲಿ ಇತ್ತು. ಈಗ ಅದು ೨೫ ಎಂಜಿಡಿ ಆಗಿದೆ! ಎಂದರೆ ಈಗಿನ ಲೆಕ್ಕದ ಪ್ರಕಾರ ಈ ನದಿಗಳಿಂದ ಅದು ಎತ್ತುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ ೧೧.೨೫ ಕೋಟಿ ಲೀಟರುಗಳು!
೨೦೦೭ರ ಸರ್ಕಾರಿ ಆಜ್ಞೆಯಲ್ಲಿ "೧೫ ಎಂಜಿಡಿ ನೀರು ಎತ್ತಲು ಅನುಮತಿ ನೀಡಲಾಗಿದೆ" ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಈಗ ಹತ್ತು ಎಂಜಿಡಿ ಜಾಸ್ತಿ ಆದದ್ದು ಹೇಗೆ? ಸರಕಾರ ೨೫ ಎಂಜಿಡಿ ನೀರೆತ್ತಲು ಕಂಪೆನಿಗೆ ಹೊಸದಾಗಿ ಅನುಮತಿ ನೀಡಿದೆಯೆ? ಈ ಬಗ್ಗೆ ಮಾಹಿತಿ ಕೇಳಿ ಸಣ್ಣ ನೀರಾವರಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೇನೆ.
೨, ಇನ್ನೊಂದು ಬದಲಾವಣೆ ಎಂದರೆ ಮಳೆನೀರಿನ ಸಂಗ್ರಹದ ವಿಷಯ ಮಂಗಮಾಯ ಆಗಿರುವುದು! ಈ ಹಿಂದೆ, ೧೨ ಎಂಜಿಡಿ ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಒದಗಿಸಿಕೊಳ್ಳುವುದಾಗಿ ಕಂಪೆನಿ ಹೇಳಿತ್ತು. "ಸ್ವಾಧೀನ ಪಡಿಸಿಕೊಂಡ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ" ಮಾತನ್ನು ಆಗ ಕಂಪೆನಿ ಆಡಿತ್ತು.ಇದರ ಸಾಧ್ಯತೆಯ ಬಗ್ಗೆ ನನ್ನ ಲೇಖನದಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಸ್ವಾಧೀನ ಪಡಿಸಿಕೊಂಡ ಎಲ್ಲ ಭೂಮಿಯನ್ನೂ ಈಗ ಒಂದೇ ಲೆಕ್ಕ ತಟ್ಟು ಮಾಡಿದ್ದಾರಂತೆ. ಹಾಗಾಗಿ "ತಗ್ಗು ಪ್ರದೇಶ"ದ ಜೊತೆಗೇ ಮಳೆನೀರು ಸಂಗ್ರಹದ ಯೋಜನೆಯೂ ಮಾಯವಾಗಿರಬೇಕು!
೩. ಈಗಿನ ಲೆಕ್ಕಾಚಾರದ ಪ್ರಕಾರ ನದಿಗಳಿಂದ ೨೫ ಎಂಜಿಡಿ, ಮಂಗಳೂರಿನ ಗಲೀಜು ನೀರು ಸಂಸ್ಕರಿಸಿ ೧೦ ಎಂಜಿಡಿ ಎಂದಿದೆ. ಇನ್ನೂ ಬೇಕಾಗುವ ೧೦ ಎಂಜಿಡಿ ಎಲ್ಲಿಂದ ಬರುತ್ತದೆ ಎನ್ನುವುದಕ್ಕೆ ಯಾವ ವಿವರಣೆಯೂ ಇಲ್ಲ.
ವೆಬ್ ಸೈಟಿನಲ್ಲಿ, ಪತ್ರಿಕೆಯಲ್ಲಿ, ಕಂಪೆನಿಯ ಹೆಸರು ಹಾಕಿ "ಮಳೆ ನೀರು ಸಂಗ್ರಹಿಸುತ್ತೇವೆ" ಎಂದು ಎಲ್ಲರೂ ಓದುವಂತೆ ಪ್ರಕಟಿಸಿದ ಮೇಲೆ, ಅದು ಸಾರ್ವಜನಿಕರಿಗೆ ಕೊಟ್ಟ ವಾಗ್ದಾನವೇ ಆಯಿತು. ಮಳೆನೀರು ಸಂಗ್ರಹ ಮಾಡುತ್ತೇವೆಂದು ಮೊದಲು ಹೇಳಿದವರು, ಈಗ ಆ ಯೋಜನೆಯನ್ನು ಕೈ ಬಿಡುವುದು ಹೇಗೆ ಸಾಧ್ಯ? ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಕಂಪೆನಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ.
ನೇರವಾಗಿ ಕೇಳುವುದೇ ಸರಿ ಎಂದುಕೊಂಡು ಎಸ್ ಇ ಝಡ್ ಕಂಪೆನಿಗೆ ಸಮಸ್ಯೆ ವಿವರಿಸಿ ಸ್ಪಷ್ಟೀಕರಣ ಕೇಳಿ ಒಂದು ಮಿಂಚಂಚೆ ಕಳಿಸಿದೆ. ೨೧ರ ಮಂಗಳವಾರ ಮಧ್ಯಾಹ್ನ ಒಂದು ಫೋನು: "ನಾನು ದಿವಾಕರ್ ಅಂತ ಎಸ್ ಇ ಝಡ್ನಿಂದ ಮಾತಾಡುವುದು. ಇದು ನಮ್ಮ ವೆಬ್ ಸೈಟಿನಲ್ಲಿ ಮೊದಲು ಏನಂತ ಇತ್ತು ಸಾರ್?"
ನಾನು: ಮೊದಲು ಇದ್ದದ್ದು ೧೫ ಎಂಜಿಡಿ ನೇತ್ರಾವತಿ ಮತ್ತು ಗುರುಪುರ ನದಿಗಳಿಂದ, ೧೮ ಎಂಜಿಡಿ ಮಂಗಳೂರು ಎಸ್ ಟಿ ಪಿ ಯಿಂದ ಮತ್ತು ೧೨ ಎಂಜಿಡಿ ಮಳೆ ನೀರು ಸಂಗ್ರಹದಿಂದ ಅಂತ"
ದಿವಾಕರ್: ಓ ಹಾಗಿತ್ತ?
ನಾನು: ನನ್ನ ಹತ್ತಿರ ಅದರ ಪ್ರಿಂಟ್ ಔಟ್ ಇದೆ. ಉದಯವಾಣಿ ಜಾಹೀರಾತಿನಲ್ಲೂ ಹಾಗೇ ಇತ್ತು.
ದಿವಾಕರ್: ಸರಿ, ಹಾಗಾದರೆ ನಾನು ಚೆಕ್ ಮಾಡಿ ನಿಮಗೆ ಪುನಃ ಫೋನ್ ಮಾಡುತ್ತೇನೆ. ಮತ್ತೆ ಇದು ಮೊನ್ನೆ ಮಡಿಕೇರಿಯಲ್ಲಿ ಮಾಹಿತಿ ಹಕ್ಕಿನದು ಇತ್ತಲ್ಲ. ನಾವು ಕಂಪೆನಿಯಿಂದ ಒಂದು ಕಾಗದ ಬರೆದಿದ್ದೆವು ಅಲ್ಲಿಗೆ.
ನಾನು: ನಾನು ಹೋಗಿದ್ದೆ. ನನಗೆ ನಿಮ್ಮ ಕಾಗದ, ವಕೀಲರ ಅಭಿಪ್ರಾಯ ಸಿಕ್ಕಿದೆ. ಅದರ ವಿಷಯ ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ
ದಿವಾಕರ್: ನಿಮ್ಮ ಬ್ಲಾಗ್ ಯಾವುದು"
ನಾನು: ಇವೊತ್ತಿನ ಉದಯವಾಣಿ ಆರನೇ ಪುಟದಲ್ಲಿ ಹಾಕಿದ್ದಾರೆ ನೋಡಿ ವಿಳಾಸ
ದಿವಾಕರ್: ಸರಿ ಸರಿ ನೋಡುತ್ತೇನೆ
ಸುಮಾರು ಒಂದೂವರೆ ಗಂಟೆ ಕಳೆದ ಮೇಲೆ ಪುನಃ ಫೋನ್ ಬಂತು: "ನೀವು ಹೇಳಿದ್ದು ಸರಿ. ಅದು ಹಾಗೆಯೇ ಇರಬೇಕು. ವೆಬ್ ಸೈಟಿನಲ್ಲಿ ಸರಿ ಮಾಡುತ್ತೇವೆ
ನಾನು: ಸರಿ ಸರಿ. ನನಗೊಂದು ಮೇಲ್ ಕಳಿಸಿಬಿಡಿ
ದಿವಾಕರ್: ಇಲ್ಲ ಅದು ಕಳಿಸುವುದಿಲ್ಲ....
ನಾನು: ಸರಿ ಹಾಗಾದರೆ.
ದಿವಾಕರ್: ನಿಮ್ಮ ಬ್ಲಾಗ್ ನೋಡಿದೆ. ಲೇಖನ ಚೆನ್ನಾಗಿದೆ.
ನಾನು : ಥ್ಯಾಂಕ್ಸ್!
ಇವೊತ್ತು ಅಂದರೆ ೨೨ರ ಬುಧವಾರ ರಾತ್ರಿ ವೆಬ್ ಸೈಟ್ ನೋಡಿದೆ. ನೀರಿನ ವಿಷಯ ನಾಪತ್ತೆ! ಜೊತೆಗೆ ಕಂಪೆನಿಗೆ ಬೇಕಾಗುವ ವಿದ್ಯುತ್ ಎಷ್ಟು, ಅದಕ್ಕೆ ಏನು ವ್ಯವಸ್ಥೆ ಎಂಬ ಮಾಹಿತಿ ಇತ್ತು, ಅದೂ ನಾಪತ್ತೆ! ಹೇಗಾದರೂ ನನ್ನ ಹತ್ತಿರ ಅದರ ಪ್ರಿಂಟೌಟ್ ಇದೆ.

ಶುಕ್ರವಾರ, ಜೂನ್ 11, 2010

ನಿಮ್ಮ ಕಾನೂನು ನಿಮಗಿರಲಿ; ನೀರು, ಭೂಮಿ ನಮಗಿರಲಿ!


ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯನ್ನು ಅದರ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿದಾಗ "ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿತ್ತು. ಒಪ್ಪಂದದ ಪ್ರತಿಯನ್ನು ಕೇಳಿ ನಾನು ಅರ್ಜಿ ಸಲ್ಲಿಸಿದೆ. ಕಂಪೆನಿ ಅದನ್ನು ಕೊಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಮೊನ್ನೆ ೫-೬-೨೦೧೦ರಂದು ಮಡಿಕೇರಿಯಲ್ಲಿ ಮಾಹಿತಿ ಹಕ್ಕು ಆಯೋಗ ಈ ಬಗ್ಗೆ ವಿಚಾರಣೆ ಇಟ್ಟುಕೊಂಡಿತ್ತು. ನಾನು ಹಾಜರಾದೆ. ಕಂಪೆನಿಯ ಪರವಾಗಿ ಯಾರೂ ಬಂದಿರಲಿಲ್ಲ. ಆದರೆ, ಬರಹ ರೂಪದಲ್ಲಿ ಆಯೋಗಕ್ಕೆ ಒಂದು ಅರ್ಜಿ ಸಲ್ಲಿಸಿ ಕಂಪೆನಿಯನ್ನು ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವಂತೆ ವಿನಂತಿಸಿಕೊಂಡಿದ್ದರು. ಆಯೋಗದ ಅಧ್ಯಕ್ಷರು, "ಕಂಪೆನಿ ಸಲ್ಲಿಸಿದ ಅರ್ಜಿ ಹಾಗೂ ವಕೀಲರ ಅಭಿಪ್ರಾಯಗಳ ಯಥಾಪ್ರತಿಗಳು ನಿಮಗೆ ಬೇಕೆ?" ಎಂದು ಕೇಳಿದಾಗ ನಾನು "ದಯವಿಟ್ಟು ಕೊಡಿ" ಎಂದೆ. ಕೂಡಲೇ ಯಥಾಪ್ರತಿ ಮಾಡಿಸಿಕೊಟ್ಟರು, ಉಚಿತವಾಗಿ. ಹೀಗೆ ನಾನು ಹಾಜರಾದದ್ದು ಸಾರ್ಥಕವಾಯಿತು.
ಮಾಹಿತಿ ಆಯೋಗದ ಅಧ್ಯಕ್ಷರು "ಈಗ ನಾನು ಏನು ಮಾಡಲಿ?" ಎಂದು ನನ್ನನ್ನು ಕೇಳಿದರು. ನನ್ನ ತಲೆ ಓಡುವುದು ನಿಧಾನ. (ಅದು ಓಡಿದ್ದನ್ನು ನಾನು ಕಂಡೇ ಇಲ್ಲ ಎನ್ನುವ ಟೀಕಾಚಾರ್ಯರೂ ಇದ್ದಾರು - ಅಂಥವರ ಸಂತತಿ ಬೆಳೆಯಲಿ!). ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ. ಕಡೆಗೆ ಅವರೇ, "ನೋಡೋಣ. ಮೂರು ವರ್ಷದ ಬ್ಯಾಲೆನ್ಸ್ ಶೀಟ್ ಹಾಜರುಪಡಿಸಲು ಆಜ್ಞೆ ಮಾಡುತ್ತೇನೆ. ಅದರ ಆಧಾರದಲ್ಲಿ ತೀರ್ಮಾನಿಸೋಣ" ಎಂದರು. ನಾನು "ಆಗಲಿ" ಎಂದೆ. ಪ್ರಕರಣದ ವಿಚಾರಣೆ ನಡೆಯುವುದು ಇನ್ನು ನಾಲ್ಕು ತಿಂಗಳು ಬಿಟ್ಟು. ಅಲ್ಲಿಯವರೆಗೆ ನನ್ನ ತಲೆ ಓಡಿದಷ್ಟು ಓಡಿಸಲು ನನಗೆ ಪುರುಸೊತ್ತಿದೆ. ತಜ್ಞರ ಸಲಹೆ ಪಡೆಯಲೂ ಅವಕಾಶವಿದೆ.
ಓದುಗರ ಸಲಹೆಗಳಿಗೆ, ಮಾಹಿತಿಗೆ ಸ್ವಾಗತ. ಮಾಹಿತಿ ಹಕ್ಕು ಆಯೋಗಕ್ಕೆ ನಾನು ಸಲ್ಲಿಸಬೇಕೆಂದಿರುವ ಉತ್ತರ ವಕೀಲರ ಅಭಿಪ್ರಾಯಕ್ಕೆ ನಾನು ನೀಡಿರುವ ಪ್ರತಿಕ್ರಿಯೆಯಲ್ಲಿರುವ ಅಂಶಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಇನ್ನೂ ಸೇರಿಸಬಹುದಾದ್ದು ಇದ್ದರೆ, ತಿಳಿಸಿರಿ.
ಎಂ ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆ:
ಕಂಪೆನಿಯ ಹೇಳಿಕೆ ೧: ಮಾಹಿತಿ ಹಕ್ಕು ಕಾಯಿದೆಯು ಪ್ರತಿವಾದಿ ಕಂಪೆನಿಗೆ ಲಗಾವು ಆಗುವುದಿಲ್ಲ. ಮೊದಲು ಇದ್ದ ಕರ್ನಾಟಕದ ಕಾಯಿದೆಯಲ್ಲಿ ಬಳಸಲಾದ ವ್ಯಾಪಕವಾದ ಪರಿಭಾಷೆಯು ಕೇಂದ್ರದ ಕಾಯಿದೆಯಲ್ಲಿ ಇಲ್ಲದಿರುವ ಕಾರಣ, ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಎಂಬ ಕಂಪೆನಿಯು "ಸಾರ್ವಜನಿಕ ಪ್ರಾಧಿಕಾರ" ಆಗಲಾರದು. ಆದ ಕಾರಣ ಪಿರ್ಯಾದಿಯು ರದ್ದಾಗತಕ್ಕದ್ದು.
ನನ್ನ ವಿವರಣೆ: ಈ ಅಂಶವು ವಕೀಲರು ನೀಡಿರುವ ಅಭಿಪ್ರಾಯದಲ್ಲಿ ಇದೆ. ಹಾಗಾಗಿ ಅಲ್ಲಿ ಚರ್ಚಿಸಿದ್ದೇನೆ.
ಕಂಪೆನಿಯ ಹೇಳಿಕೆ ೨: ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಇವರು ಆರಂಭದಿಂದಲೂ ಮಾಹಿತಿಯನ್ನು ಸಾಧ್ಯವಾದ ಮಟ್ಟಿಗೆ ಒದಗಿಸುತ್ತಾ ಬಂದುದು ಬಹುಶಃ ತಪ್ಪು ಕಲ್ಪನೆಗೆ ಅವಕಾಶ ಆಗಿರಬೇಕು. ಪಾರದರ್ಶಕತೆಯ ದೃಷ್ಟಿಯಿಂದ ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತದವರು ಈ ರೀತಿ ವರ್ತಿಸಿದ್ದೇ ಹೊರತು ಮಾಹಿತಿ ಹಕ್ಕು ಕಾಯಿದೆಯು ತಮಗೆ ಲಗಾವಾಗುವುದೆಂಬ ಕಾರಣದಿಂದಲ್ಲ. ನಮ್ಮ ಕಂಪೆನಿಯು ಈ ಕುರಿತಾಗಿ ನುರಿತ ವಕೀಲರಿಂದ ಕಾನೂನಿನ ಅಭಿಪ್ರಾಯವನ್ನು ಪಡೆದಿತ್ತು. ಅದರ ಒಂದು ಪ್ರತಿಯನ್ನು ತಮ್ಮ ಅವಗಾಹನೆಗೆ ಈ ಉದಾಹರಣೆಯ ಜೊತೆಗೆ ಲಗತ್ತಿಸಿದ್ದೇವೆ.
ನನ್ನ ವಿವರಣೆ: ಪಾರದರ್ಶಕತೆಯ ದೃಷ್ಟಿಯಿಂದ ಈ ಮೊದಲು ಮಾಹಿತಿಗಳನ್ನು ಒದಗಿಸಲಾಗಿತ್ತಷ್ಟೆ. ಅದೇ ಉದಾತ್ತ ಧ್ಯೇಯವನ್ನು ಮುಂದುವರಿಸಿಕೊಂಡು ಹೋಗಿದ್ದರೆ, ಕಂಪೆನಿಯ ಬಗ್ಗೆ ಜನಸಾಮಾನ್ಯರಿಗೆ ಗೌರವ-ವಿಶ್ವಾಸಗಳು ಹೆಚ್ಚುತ್ತಿದ್ದವು. ಪ್ರಾರಂಭಿಸಿದ್ದ ಒಂದು ಸತ್ಸಂಪ್ರದಾಯವನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಟ್ಟದ್ದರಿಂದ ಕಂಪೆನಿಯ ವ್ಯವಹಾರಗಳಲ್ಲಿ ಮುಚ್ಚಿಟ್ಟುಕೊಳ್ಳುವಂಥದ್ದು ಏನೋ ಇದೆ ಎಂಬ ಅನುಮಾನ ಜನಸಾಮಾನ್ಯರಿಗೆ ಬರುವಂತಾಯಿತು.
ವಕೀಲರು ನೀಡಿರುವ ಕಾನೂನು ಅಭಿಪ್ರಾಯದ ಕುರಿತು ಮುಂದೆ ಪ್ರತಿಕ್ರಿಯೆ ನೀಡಿದ್ದೇನೆ.
ಕಂಪೆನಿಯ ಹೇಳಿಕೆ ೩: ಮಾಹಿತಿಯನ್ನು ಕೋರುವವರು ಅದನ್ನು ಪಡೆಯಲು ಯಾವುದಾದರೂ ಸರಿಯಾದ ಕಾರಣ ಬೇಕು. ಈ ಪ್ರಕರಣವನ್ನು ದಯವಿಟ್ಟು ಗಮನಿಸಿರಿ. ೬-೧೦-೨೦೦೯ರ ಉದಯವಾಣಿ ಪತ್ರಿಕೆಯಲ್ಲಿ ಬಂದ ಜಾಹೀರಾತಿಗೆ ಮತ್ತು ಅರ್ಜಿದಾರರಿಗೆ ಯಾವ ಸಂಬಂಧವೂ ಇಲ್ಲ. ಆ ಜಾಹೀರಾತು ಆರ್ಥಿಕ ವಲಯದ ಪ್ರಗತಿಗೆ ಸಂಬಂಧಿಸಿತ್ತು. ಅದರ ಒಂದು ಜೆರೋಕ್ಸ್ ಪ್ರತಿಯನ್ನು ಲಗತ್ತಿಸಿದ್ದೇವೆ. ಆದರೂ ಅವರು ಬರೆದ ಪತ್ರಕ್ಕೆ ನಾವು ಮಾಹಿತಿಯನ್ನು ನಮ್ಮ ಪತ್ರ ದಿನಾಂಕ ೧೪-೧೨-೨೦೦೯ರ ಪ್ರಕಾರ ಒದಗಿಸಿದೆವು.
ನನ್ನ ವಿವರಣೆ: ಮಾಹಿತಿ ಹಕ್ಕು ಕಾಯಿದೆಯಲ್ಲಿ ಮಾಹಿತಿ ಕೇಳಲು ಯಾವುದೇ ಕಾರಣ ನೀಡಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಕಾರಣ ನೀಡುವುದು ಬೇರೆ, ಕಾರಣ ಇರುವುದು ಬೇರೆ ಎಂದೇ ತಿಳಿಯೋಣ. ಕಂಪೆನಿ ಪತ್ರಿಕೆಯಲ್ಲಿ ಜಾಹೀರಾತು ನೀಡಿರುವುದು ಅದನ್ನು ಸಾರ್ವಜನಿಕರು ಓದಬೇಕೆಂಬ ಉದ್ದೇಶದಿಂದ. ಪ್ರಜಾಪ್ರಭುತ್ವ ಇರುವ ದೇಶದ ಒಬ್ಬ ಪ್ರಜೆಯಾಗಿ, ದೇಶದ ಆರ್ಥಿಕ ವಲಯದ ಪ್ರಗತಿಯು ನನಗೆ ಖಂಡಿತವಾಗಿಯೂ ಸಂಬಂಧಪಡುತ್ತದೆ. ಅದೇ ಕಾರಣಕ್ಕೆ ಈ ಜಾಹೀರಾತು ಸಹ ನನಗೆ ಸಂಬಂಧಪಡುತ್ತದೆ.
ಈ ಜಾಹೀರಾತಿನ ಆಧಾರದಲ್ಲಿ ನಾನು ಕೇಳಿರುವ ಮಾಹಿತಿಯು ಬಂಟ್ವಾಳ ಮತ್ತು ಮಂಗಳೂರಿನ ಜನರ ಕುಡಿಯುವ ನೀರಿಗೆ ಸಂಬಂಧಪಟ್ಟಿದೆ. ಕಂಪೆನಿಯು ನೀಡಿದ ಮಾಹಿತಿಯನ್ನು ವಿಶ್ಲೇಷಿಸಿ, ನಾನು ನನ್ನ ಬ್ಲಾಗಿನಲ್ಲಿ ಲೇಖನವನ್ನೂ ಪ್ರಕಟಿಸಿದ್ದೇನೆ. ಈ ಕುರಿತು ಒಂದು ವಿಚಾರಸಂಕಿರಣ ನಡೆಸಲು ಕೋರಿ ಮಂಗಳೂರಿನ ಮೇಯರ್ ರವರಿಗೆ ಒಂದು ಪತ್ರವನ್ನೂ ಬರೆದಿದ್ದೇನೆ. ವಾಸ್ತವವಾಗಿ ಇದೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯ. ಬಂಟ್ವಾಳ ಹಾಗೂ ಮಂಗಳೂರಿನ, ನೇತ್ರಾವತಿ ನದಿ ನೀರನ್ನು ಕುಡಿಯುವ ಎಲ್ಲ ಜನರಿಗೂ ನೇರವಾಗಿ ಸಂಬಂಧಪಡುವ ವಿಷಯ. ಆ ಎಲ್ಲರೂ ಈ ವಿಷಯದಲ್ಲಿ ಆಸಕ್ತಿ ತಳೆಯಬೇಕಾದ ಅಗತ್ಯವಿದೆ. ಬಂಟ್ವಾಳದಲ್ಲಿ ವಾಸಿಸುವ ನನಗೆ ಇದು ಖಂಡಿತವಾಗಿಯೂ ನೇರವಾಗಿ ಸಂಬಂಧಪಡುತ್ತದೆ.
ಇನ್ನೊಂದು ವಿಷಯ: ಯಾವುದೇ ಜಾಹೀರಾತು ಜನರನ್ನು ತಪ್ಪುದಾರಿಗೆ ಎಳೆಯುವಂತಿರಬಾರದು, ಅವರಿಗೆ ತಪ್ಪು ಮಾಹಿತಿಗಳನ್ನು ನೀಡಬಾರದು. ಯಾವುದಾದರೂ ಜಾಹೀರಾತು ಹೀಗೆ ಮಾಡಿದರೆ, ಅಂಥ ಜಾಹೀರಾತುಗಳ ಕುರಿತು Advertising Standarads Council of India ಎಂಬ ಸಂಸ್ಥೆಗೆ ಯಾರು ಬೇಕಾದರೂ ದೂರು ನೀಡಬಹುದು. ಚರ್ಚಿತ ಜಾಹೀರಾತಿನಲ್ಲಿ ಮಳೆ ನೀರು ಸಂಗ್ರಹದ ಕುರಿತಾದ ಮಾತುಗಳು ಯಾವ ಅಧ್ಯಯನವನ್ನೂ ಆಧರಿಸಿದವಲ್ಲ ಎಂಬುದನ್ನು ಕಂಪೆನಿಯೇ ಒಪ್ಪಿಕೊಂಡಿದೆ. ಇವು ಮಳೆ ನೀರು ಸಂಗ್ರಹದ ಹೆಸರಿನಲ್ಲಿ, ಜನಸಾಮಾನ್ಯರಲ್ಲಿ ಕಂಪೆನಿಯ ಕುರಿತು ಸದ್ಬಾವನೆ ಮೂಡಿಸುವ ಬೇರೆಯೇ ಉದ್ದೇಶ ಹೊಂದಿದಂತೆ ಭಾಸವಾಗುತ್ತದೆ. ಇದು ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಲ್ಲವೆ?
ಈ ಮುಂದಿನ ಕಂಪೆನಿಯ ಹೇಳಿಕೆಗಳಿಗೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ
೪. ಅರ್ಜಿದಾರರ ಪತ್ರದಲ್ಲಿ ೨ನೇ ಪ್ರಶ್ನೆ ಹೀಗಿತ್ತು: ಗುರುಪುರ ಮತ್ತು ನೇತ್ರಾವತಿಯಲ್ಲಿ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.
೫. ಇದಕ್ಕೆ ನಾವು ಕೊಟ್ಟ ಉತ್ತರ ಹೀಗಿತ್ತು. ಈಗಾಗಲೇ ನೇತ್ರಾವತಿ ನದಿಯಿಂದ ನೀರಿನ್ ಪೂರೈಕೆಗಾಗಿ ಎ.ಎಂ.ಆರ್. ಪವರ್ ಪ್ರೋಜೆಕ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಜಲ ಸಂಪನ್ಮೂಲ ವಿಭಾಗದಿಂದ ೨೦೦೭ರಲ್ಲಿ ಅನುಮತಿ ದೊರಕಿದ್ದು ಅದರ ಪ್ರತಿ ಲಗತ್ತಿಸಿದೆ
೬. ನಮ್ಮ ಬಳಿ ಇದ್ದು ಸರಕಾರದ ವತಿಯಿಂದ ದೊರಕಿದ ಅನುಮತಿಯನ್ನು ನಾವು ಅರ್ಜಿದಾರರಿಗೆ ಒದಗಿಸಿದ್ದೆವು. ಆದರೆ, ಎ ಎಂ ಆರ್ ಕಂಪೆನಿಯ ಜೊತೆ ಮಾಡಿದ ಒಪ್ಪಂದವು ಸಾರ್ವಜನಿಕರಿಗೆ ಅದರಲ್ಲೂ ಏನೂ ಸಂಬಂಧವಿಲ್ಲದ ಅರ್ಜಿದಾರರಿಗೆ ಒದಗಿಸುವ ಅಗತ್ಯ ಇಲ್ಲದ್ದರಿಂದ ಮತ್ತು ಆ ದಾಖಲೆಯು ಇನ್ನೊಬ್ಬ ವ್ಯಕ್ತಿಯು ನಮ್ಮ ಬಳಿ ಮಾಡಿದ ಒಪ್ಪಂದಕ್ಕೆ ಸಂಬಂಧಿಸಿದ್ದರಿಂದ ಅದರ ಪ್ರತಿಯನ್ನು ನಾವು ಕೊಡಲಿಲ್ಲ. ದಿನಾಂಕ ೧೮-೦೧-೨೦೧೦ರಂದು ಅರ್ಜಿದಾರರಿಗೆ ಉತ್ತರವನ್ನು ನೀಡಿದ್ದೇವೆ. ಇದು ನಮ್ಮ ಪ್ರಕಾರ ಸರಿಯಾದ ಕ್ರಮವೆಂದು ತಿಳಿಯುತ್ತೇವೆ.
೭. ಈಗಲೂ ಸಹ ಇದೇ ಮೇಲೆ ಬರೆದ ಕಾರಣಕ್ಕಾಗಿ ದಯವಿಟ್ಟು ಅರ್ಜಿಯನ್ನು ವಜಾ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. ಮಾಹಿತಿ ಹಕ್ಕು ಕಾಯಿದೆಯ ಕಲಂ ೮(ಡಿ) ಮತ್ತು (ಇ) ಎಂಬ್ ಉಪಕಲಂಗಳ ಪ್ರಕಾರ ಸದ್ರಿ ದಾಖಲೆಯನ್ನು (ಮಾಹಿತಿಯನ್ನು) ನೀಡುವುದು ಕಡ್ಡಾಯವಲ್ಲ.
ಮೇಲೆ ಬರೆದ ವಿವರವಾದ ಉತ್ತರವನ್ನು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಬೇಕಾಗಿ ಪ್ರಾರ್ಥಿಸುತ್ತೇವೆ.
***********************
ಈ ಮುಂದಿನದು ವಕೀಲರ ಅಭಿಪ್ರಾಯ:
M.V. Shanker Bhat, B.A.B.L.,
Advocate
H-3, II Floor, Ramabhavan Complex
Kodialbail, Mangalore.
ED& COO
Mangalore SEZ Ltd.
Muda Building
Urva Stores, Managalore-575006
Sir,
Sub: Opinion on query regarding applicability of Right to Information Act.
Ref: Your company's memorandum, Articles and certificate of incorportion dtd. 24-2-2006
1. The Memorandum dtd. 18-2-2006 as amended up to 18-7-08 relating to Mangalore SEZ Ltd shows that it is a public company limited by shares. It has authorised share capital of One Hundred Crores of Rs. 10/- value per share. Memorandum of Association of the company has been subscribed by ONGC representing MRPL, KIADB, Kanara Chamber of Commerce, and four individuals. In all 76200 shares were subscribed by them. KIADB has subscribed only 5000 shares. MRPL has subscribed 50000 shares. Chamber of Commerce has subscribed 20000 shares. Rest by the four individuals.
2. On the above facts the question is whether your company is Public Authority as defined in Sec.2(h) of the RTI Act. 2005.
3. Your company is not established by or under Constitution, or by law made by Parliament or State Legislature. Your company has not been notified as Public Authority by State or Central Government. Your company is not financed by State or Central Government either directly or indirectly. Even if participation of KIADB, which is an independent Board, is considered as indirect financing by State Government, its holding is very small compared to what has been subscribed as per Menorandum of Association. Therefore it would not be 'substantially financed by State Government'.
4. From the above analysis of facts with reference to the definition found in the Act, I am of the considered opinion that your company will not be covered by the RTI Act, 2005
Yours faithfully
(Sd)
ಕಂಪೆನಿಯು ನೀಡಿದ ಮಾಹಿತಿಯನ್ನು ಆಧರಿಸಿ ವಕೀಲರು ನೀಡಿರುವ ಮೇಲಿನ ಅಭಿಪ್ರಾಯ ಖಂಡಿತವಾಗಿಯೂ ಸರಿಯಾಗಿದೆ. ದುರದೃಷ್ಟವಶಾತ್ ಕಂಪೆನಿಯು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ವಕೀಲರ ಗಮನಕ್ಕೆ ತಂದಿಲ್ಲ. ತನ್ನ ಕಕ್ಷಿದಾರನು ತನ್ನಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ಬಂದರೆ - ಅದರಲ್ಲೂ ಪ್ರಕರಣವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದಾಗ - ಆ ಅನುಮಾನವನ್ನು ಪರಿಹರಿಸಿಕೊಳ್ಳುವುದು ವಕೀಲರ ಕರ್ತವ್ಯದ ಒಂದು ಭಾಗ ಎಂದು ನಾನು ಭಾವಿಸಿದ್ದೇನೆ. ಆ ಅಭಿಪ್ರಾಯ ತಪ್ಪೆ?
ಕಂಪೆನಿಯು ವಕೀಲರ ಗಮನಕ್ಕೆ ತಾರದ ಮಾಹಿತಿಗಳು ಈ ಕೆಳಗಿನಂತಿವೆ:
೧, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಬಗೆಯ ತೆರಿಗೆ ರಿಯಾಯತಿಗಳನ್ನು ವಿಶೇಷ ಆರ್ಥಿಕ ವಲಯಕ್ಕೆ ನೀಡಿವೆ. ಈ ರಿಯಾಯತಿಗಳು ಪ್ರಸ್ತುತ ಕಂಪೆನಿಗೂ ಅನ್ವಯವಾಗುತ್ತವೆ. ಈ ರಿಯಾಯತಿಗಳನ್ನು ನೀಡಲು ಬೇಕಾಗಿ ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಆದಾಯತೆರಿಗೆ ಮತ್ತಿತರ ಕೆಲವು ಕಾನೂನುಗಳಿಗೇ ತಿದ್ದುಪಡಿ ಮಾಡಲಾಗಿದೆ.
೨. ವಿಶೇಷ ಆರ್ಥಿಕ ವಲಯಕ್ಕೆ ಬೇಕಾದ ಒಟ್ಟು ಭೂಮಿ ಸುಮಾರು ೪೦೦೦ ಎಕರೆಗಳು. ಈ ಪೈಕಿ ಸುಮಾರು ೨೦೦೦ ಎಕ್ರೆಯಷ್ಟು ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರ ತೀವ್ರ ವಿರೋಧದ ನಡುವೆಯೂ, ಜಮೀನನ್ನು ಸ್ವಾಧೀನಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸುವಲ್ಲಿ ಕರ್ನಾಟಕ ರಾಜ್ಯ ಸರಕಾರವು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
೩. ಕಂಪೆನಿಗೆ ಪ್ರತಿದಿನ ೬.೭೫ ಕೋಟಿ ಲೀಟರು ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತಲು ರಾಜ್ಯ ಸರಕಾರವು ಅನುಮತಿ ನೀಡಿದೆ. ಈ ನೀರಿನ ದರ ೪೫ ಲಕ್ಷ ಲೀಟರಿಗೆ ರೂ. ೨೮೮-೯೦. (ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ದರ ೧೦೦೦ ಲೀಟರಿಗೆ ೨-೦೦ ರೂಪಾಯಿ.)
೪. ಕಂಪೆನಿಗೆ ಅಗತ್ಯವಿರುವಷ್ಟು ಪ್ರಮಾಣದ ವಿದ್ಯುತ್ತನ್ನು ಸರಬರಾಜು ಮಾಡಲು ಸಹ ಕರ್ನಾಟಕ ಸರಕಾರವು ಒಪ್ಪಿಕೊಂಡಿದೆ.
೫. ಮಂಗಳೂರು ಮಹಾನಗರ ಪಾಲಿಕೆಯು ಗಲೀಜು ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವ ಬಗ್ಗೆ ಎಂ ಎಸ್ ಇ. ಝಡ್ ಕಂಪೆನಿಯೊಂದಿಗೆ ಮೂವತ್ತು ವರ್ಷಗಳ ದೀರ್ಘಾವಧಿಗೆ ಅನ್ವಯಿಸುವ (೩೦:೭೦ ಅನುಪಾತ) ಒಂದು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಕರ್ನಾಟಕ ಸರ್ಕಾರವು ಕಂಪೆನಿಯ ಆಗುಹೋಗುಗಳಲ್ಲಿ ಗಣನೀಯ ಪಾತ್ರ ವಹಿಸಿರುವುದರ ದ್ಯೋತಕವಾಗಿದೆ.
ಈ ಮೇಲಿನ ಅಂಶಗಳನ್ನು ಪರಿಗಣಿಸಿದರೆ ಕಂಪೆನಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಪಾಲು "ಗಣನೀಯ"ವಾಗಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡುವುದು ನ್ಯಾಯವಲ್ಲ.