ಬುಧವಾರ, ನವೆಂಬರ್ 3, 2010

ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!

(ಪುತ್ತೂರಿನ ಡಾ ನಿತ್ಯಾನಂದ ಪೈಯವರು ವೈದ್ಯವೃತ್ತಿಯ ಜೊತೆಗೆ ಬಳಕೆದಾರರ ಚಳುವಳಿಯಲ್ಲೂ ತೀವ್ರವಾಗಿ ತೊಡಗಿಕೊಂಡಿರುವವರು. ಅವರ ಲೇಖನಗಳು ಉದಯವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿವೆ. ಪೈಗಳು ಮಹಾ ಛಲವಾದಿ. ಒಂದು ಸಮಸ್ಯೆಯ ಬೆನ್ನು ಹಿಡಿದರೆ ಫಕ್ಕನೆ ಬಿಡುವ ಪೈಕಿ ಅಲ್ಲ. ಪುತ್ತೂರಿನ ಕುಡ್ಸೆಂಪ್ ಕಾಮಗಾರಿಗಳ ಅನರ್ಥಗಳ ಕುರಿತು ಮತ್ತೆ ಮತ್ತೆ ಲೇಖನಗಳನ್ನು ಬರೆದು, ವ್ಯವಸ್ಥೆಗೆ ಮೂಗುದಾರ ಹಾಕಿದವರು ಅವರು. ಇಂಥವರೇ ಪ್ರಜಾಪ್ರಭುತ್ವದ ನಿಜವಾದ ರಕ್ಷಕರು.
31-10-2010ರ ಉದಯವಾಣಿಯ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿದೆ. ವಿದ್ಯುತ್ತಿನ ಸಮಸ್ಯೆ ಪರಿಹರಿಸಲೆಂದು ಪಶ್ಚಿಮ ಘಟ್ಟಗಳ ಅಮೂಲ್ಯ ಕಾಡುಗಳನ್ನು ನಾಶ ಮಾಡಲು ಕರ್ನಾಟಕ ಸರ್ಕಾರ ಹೊಂಚುಹಾಕುತ್ತಿದೆ. ಕಂಟ್ರಾಕ್ಟರುಗಳು ಜೆಸಿಬಿಗಳನ್ನು ತಯಾರಿಟ್ಟುಕೊಂಡು ತೆರೆಮರೆಯಲ್ಲಿ ಕಾಯುತ್ತಿದ್ದಾರೆ. ಅಧಿಕಾರಿಗಳಲ್ಲಿ ಕೆಲವರು ಲೋಕಾಯುಕ್ತರಿಗೆ ಸಿಕ್ಕದ ಹಾಗೆ ದುಡ್ಡು ಮುಚ್ಚಿಡಲು ಹೊಸ ಉಪಾಯಗಳನ್ನು ಹುಡುಕಿಟ್ಟುಕೊಂಡು ತಯಾರಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಮಸ್ಯೆಗೆ ಬೇರೊಂದು ಪರಿಹಾರ ಇರುವುದನ್ನು ಎತ್ತಿ ತೋರಿಸಿರುವುದಕ್ಕಾಗಿ ಈ ಲೇಖನ ನನಗೆ ಮಹತ್ವದ್ದಾಗಿ ಕಂಡಿದೆ. ಹಾಗಾಗಿ ಅದನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ. ಲೇಖನವನ್ನು ಈಗಿನ ಇಂಧನ ಮಂತ್ರಿ ಶೋಭಾ ಕರಂದ್ಲಾಜೆಯವರಿಗೂ ಕಳಿಸಿ, ಅವರ ಅಭಿಪ್ರಾಯ ಕೇಳಿದ್ದೇನೆ. ನಿಮ್ಮಲ್ಲೂ ಯಾರಿಗಾದರೂ ಹಾಗೆ ಮಾಡಬೇಕೆಂದು ಕಂಡರೆ, ಮಾಡಬಹುದು).
-ಎಚ್. ಸುಂದರ ರಾವ್)

ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇಸಗೆಯ ದಿನಗಳಲ್ಲಿ ಮಾತ್ರ ತಲೆದೋರುತ್ತಿದ್ದ ವಿದ್ಯುತ್ ಕ್ಷಾಮವು ಇತ್ತೀಚೆಗೆ ಮಳೆಗಾಲದ ದಿನಗಳಲ್ಲೂ ಉದ್ಭವಿಸಲಾರಂಭಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯದಲ್ಲಿನ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಅಲ್ಪ ಬೆಲೆಗೆ ಖರೀದಿಸದ ರಾಜ್ಯ ಸರಕಾರವು, ನೆರೆಯ ರಾಜ್ಯಗಳಿಂದ ದುಬಾರಿ ಬೆಲೆ ತೆತ್ತು ವಿದ್ಯುತ್ತನ್ನು ಖರೀದಿಸುತ್ತಿದೆ!
ಕಳೆದ ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯವು ವಿದ್ಯುತ್ ಕ್ಷಾಮದ ಸಮಸ್ಯೆಯಿಂದ ತತ್ತರಿಸುತ್ತಿದೆ. ಏಕೆಂದರೆ ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆಯ ಪ್ರಮಾಣವು ಉತ್ಪಾದನೆಯ ಪ್ರಮಾಣಕ್ಕಿಂತಲೂ ಸಾಕಷ್ಟು ಹೆಚ್ಚಾಗಿದೆ. ಇದಲ್ಲದೆ ರಾಜ್ಯದಲ್ಲಿರುವ ಹಳೆಯ ವಿದ್ಯುತ್ ಉತ್ಪಾದನಾ ಸ್ಥಾವರಗಳು ಪದೇ ಪದೇ ಕೆಟ್ಟು ಹೋಗುತ್ತಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣವು ಇನ್ನಷ್ಟು ಕಡಿಮೆಯಾಗುತ್ತಿದೆ. ಇಷ್ಟೆಲ್ಲಾ ಸಾಲದೆಂಬಂತೆ ವಿದ್ಯುತ್ತಿನ ಕೊರತೆ ಅತಿಯಾದ ಸಂದರ್ಭಗಳಲ್ಲಿ ಕೇಂದ್ರದ ವಿದ್ಯುತ್ ಗ್ರಿಡ್ ನಿಂದ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ಲಭಿಸಬೇಕಿದ್ದ ವಿದ್ಯುಚ್ಛಕ್ತಿಯಲ್ಲಿ ಗಣನೀಯ ಪ್ರಮಾಣದ ವಿದ್ಯುತ್ತನ್ನು ನೆರೆಯ ರಾಜ್ಯಗಳು ಕಬಳಿಸುತ್ತಿರುವುದರಿಂದ ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುತ್ತಿದೆ.
ರಾಜ್ಯದ ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆಗಳ ನಡುವಿನ ಕೊರತೆಯನ್ನು ತುಂಬಿಸಲು ಸರಕಾರವು ನೆರೆಯ ರಾಜ್ಯಗಳಿಂದ ಆವಶ್ಯಕ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಖರೀದಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಲು ಮೀನ ಮೇಷ ಎಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ರಾಜ್ಯ ಸರಕಾರವು ಇದೀಗ ಪ್ರತಿನಿತ್ಯ 1000 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ನೆರೆಯ ರಾಜ್ಯಗಳಿಂದ ಖರೀದಿಸುತ್ತಿದೆ. ವಿಶೇಷವೆಂದರೆ ನೆರೆಯ ರಾಜ್ಯಗಳು ನಮ್ಮ ರಾಜ್ಯದ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಅಲ್ಪಬೆಲೆಗೆ ಖರೀದಿಸುತ್ತಿವೆ!
ಇದೇ ವರ್ಷದ ಬೇಸಗೆಯ ದಿನಗಳಲ್ಲಿ ವಿದ್ಯುತ್ ಕ್ಷಾಮದ ಬಾಧೆ ಮಿತಿ ಮೀರಿದಾಗ ರಾಜ್ಯದಲ್ಲಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಕಡ್ಡಾಯವಾಗಿ ತನಗೆ ನೀಡಬೇಕೆಂದು ಸರಕಾರ ಆದೇಶಿಸಿತ್ತು. ಸರಕಾರದ ಈ ನಿಲುವು ಖಾಸಗಿ ಘಟಕಗಳ ಅಸಮಾಧಾನಕ್ಕೆ ಕಾರಣವೆನಿಸಿತ್ತು. ಏಕೆಂದರೆ ಈ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ವರ್ಷವಿಡೀ ಅಲ್ಪಬೆಲೆಗೆ ಪೂರೈಸುವ ಪ್ರಸ್ತಾವವನ್ನು ನಿರಾಕರಿಸಿರುವ ಸರಕಾರವು, ವಿದ್ಯುತ್ ಕ್ಷಾಮದ ದಿನಗಳಲ್ಲಿ ಮಾತ್ರ ತಮಗೆ ಬೇಕಾದಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸಲೇ ಬೇಕು ಎನ್ನುವುದೇ ಅಸಮಾಧಾನಕ್ಕೆ ಕಾರಣವೆನಿಸಿದೆ. ಸರಕಾರವು ಈ ಘಟಕಗಳಿಂದ ನಿರಂತರವಾಗಿ ವಿದ್ಯುಚ್ಛಕ್ತಿಯನ್ನು ಖರೀದಿಸಿದಲ್ಲಿ "ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುವುದು" ತಪ್ಪುತ್ತದೆ.
ಉದಾಹರಣೆಗೆ ಬಳ್ಳಾರಿಯ ತೋರಣಗಲ್ಲಿನಲ್ಲಿರುವ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು ಪ್ರತಿನಿತ್ಯ 1100 ಮೆ.ವ್ಯಾ. ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಉಕ್ಕಿನ ಕಾರ್ಖಾನೆಗೆ ಬೇಕಾಗುವ 400 ಮೆ.ವ್ಯಾ. ವಿದ್ಯುತ್ತನ್ನು ಬಳಸಿದ ಬಳಿಕ ಉಳಿದ 700 ಮೆ.ವ್ಯಾ. ವಿದ್ಯುತ್ತನ್ನು ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಿಗೆ ಕರ್ನಾಟಕದ ಗ್ರಿಡ್ ಮೂಲಕವೇ ಪೂರೈಕೆ ಮಾಡುತ್ತದೆ.
ಇದೀಗ ರಾಜ್ಯಸರಕಾರವು ನೆರೆಯ ರಾಜ್ಯಗಳಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 10 ರೂ.ನಂತೆ ಪಾವತಿಸುತ್ತಿದ್ದು ನಮ್ಮದೇ ರಾಜ್ಯದಲ್ಲಿರುವ ಜಿಂದಾಲ್ ಉಕ್ಕು ತಯಾರಿಕಾ ಘಟಕದೊಂದಿಗೆ ದೀರ್ಘಕಾಲೀನ ಒಪ್ಪಂದವನ್ನು ಮಾಡಿಕೊಂಡಲ್ಲಿ ಈ ಸಂಸ್ಥೆಯು ಪ್ರತಿ ಯೂನಿಟ್ಟಿಗೆ ಕೇವಲ 4 ರೂ.ನಂತೆ ವಿದ್ಯುತ್ ಪೂರೈಸಲು ಸಿದ್ಧವಿದೆ. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯ ನಿರ್ದೇಶಕರು ಹೇಳುವಂತೆ ರಾಜ್ಯ ಸರಕಾರವು ಬೇಸಗೆ ದಿನಗಳಲ್ಲಿ ಮಾತ್ರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸದೇ, ವರ್ಷವಿಡೀ ವಿದ್ಯುತ್ತನ್ನು ಖರೀದಿಸಲು ಸಿದ್ಧವಿದ್ದಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳು ಉಳಿತಾಯವಾಗಲಿದೆ. ಇಷ್ಟು ಮಾತ್ರವಲ್ಲ ಈ ಸಂಸ್ಥೆಯು ತನ್ನ ವಿದ್ಯುತ್ ಉತ್ಪಾದನೆಯನ್ನು ಇನ್ನೂ 600 ಮೆ.ವ್ಯಾ.ಗಳಷ್ಟು ಹೆಚ್ಚಿಸಲಿದ್ದು ಇದನ್ನು ರಾಜ್ಯ ಸರಕಾರಕ್ಕೆ ಪೂರೈಸಲು ಸಿದ್ಧವಿದೆ. ಪ್ರಸ್ತುತ ಈ ಸಂಸ್ಥೆಯು ನೆರೆಯ ರಾಜ್ಯಗಳಿಗೆ ಸಾಕಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸುತ್ತಿದ್ದರೂ ವಿದ್ಯುತ್ ರವಾನೆಯ ಸಂದರ್ಭದಲ್ಲಿ ಸುಮಾರು 200 ಮೆ.ವ್ಯಾ.ನಷ್ಟು ವಿದ್ಯುಚ್ಛಕ್ತಿಯು ನಷ್ಟವಾಗುತ್ತಿದೆ. ಆದರೆ ಈ ಹೆಚ್ಚುವರಿ ವಿದ್ಯುತ್ತನ್ನು ರಾಜ್ಯ ಸರಕಾರವೇ ಖರೀದಿಸಲು ಸಿದ್ಧವಿದ್ದಲ್ಲಿ, ರಾಜ್ಯ ಸರಕಾರಕ್ಕೆ 10 ರೂ.ಗಳಿಗೆ 2.5 ಯೂನಿಟ್ ವಿದ್ಯುಚ್ಛಕ್ತಿ ಲಭಿಸುವುದರೊಂದಿಗೆ ಸಂಸ್ಥೆಗೆ ಸಂಭವಿಸುತ್ತಿರುವ ನಷ್ಟವನ್ನೂ ತಡೆಗಟ್ಟಬಹುದಾಗಿದೆ.
ಉಕ್ಕು ತಯಾರಿಸುವ ಸಂದರ್ಭದಲ್ಲಿ ಕಲ್ಲಿದ್ದಲನ್ನು ಉರಿಸುವ ಕಾರ್ಖಾನೆಗಳು ಇದರಿಂದ ಉತ್ಪನ್ನವಾಗುವ ಉಷ್ಣತೆಯನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸುತ್ತವೆ. ರಾಜ್ಯದಲ್ಲಿ ಇರುವ ಇತರ ಕಬ್ಬಿಣದ ಕಾರ್ಖಾನೆಗಳು ಮತ್ತು ಜಾಗತಿಕ ಹೂಡಿಕೆದಾರರ ಸಮಾವೇಶದ ಫಲವಾಗಿ ರಾಜ್ಯದಲ್ಲಿ ಹೊಸತಾಗಿ ನಿರ್ಮಿತವಾಗಲಿರುವ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಮುಂದೆ ಉತ್ಪಾದಿಸಲಿರುವ ಹೆಚ್ಚುವರಿ ವಿದ್ಯುತ್ತನ್ನು ಸರಕಾರವು ನಿರಂತರವಾಗಿ ಖರೀದಿಸಿದಲ್ಲಿ, ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ನಿಶ್ಚಿತವಾಗಿ ಅಂತ್ಯಗೊಳ್ಳಲಿದೆ. ಜೊತೆಗೆ ನೂತನ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕಾಗಿ ರಾಜ್ಯ ಸರಕಾರಗಳು ವ್ಯಯಿಸಲೇಬೇಕಾದ ಸಹಸ್ರಾರು ಕೋಟಿ ರೂ.ಗಳು ಉಳಿತಾಯವಾಗಲಿದೆ. ರಾಜ್ಯ ಸರಕಾರವು ಇದೀಗ ನೆರೆಯ ರಾಜ್ಯಗಳಿಂದ 1000 ಮೆ.ವ್ಯಾ. ವಿದ್ಯುತ್ತನ್ನು ಖರೀದಿಸಲು ಬಳಸುತ್ತಿರುವ 350 ಕೋಟಿ ರೂ.ಗಳಲ್ಲೇ ಇದರ ಎರಡೂವರೆ ಪಟ್ಟು ಅಧಿಕ ವಿದ್ಯುಚ್ಛಕ್ತಿಯನ್ನು ರಾಜ್ಯದ ಉಕ್ಕಿನ ಕಾರ್ಖಾನೆಗಳಿಂದಲೇ ಖರೀದಿಸಬಹುದಾಗಿದೆ.
-ಡಾ. ಸಿ. ನಿತ್ಯಾನಂದ ಪೈ

3 ಕಾಮೆಂಟ್‌ಗಳು:

ಭಾಮತಿ ಹೇಳಿದರು...

ಓರ್ವ ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸಂಗತಿಯು, ಸರಕಾರಗಳಲ್ಲಿರುವ ಸಾವಿರ ಸಂಖ್ಯೆಯ ತಜ್ಞರಿಗೆ, ಅಧಿಕಾರಿಗಳಿಗೆ ತಿಳಿಯುವುದಿಲ್ಲವೇ?! ಬೇಕಂತಲೇ ಸಾರ್ವಜನಿಕ ಬೊಕ್ಕಸವನ್ನು ದುರ್ವ್ಯಯ ಮಾಡುವ ರೀತಿಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾರೆ. ಆಹಾರಬೆಳೆಗಳಿಗೆ ಬೆಳೆಗಾರರು ಕೋರುವ ಬೆಂಬಲ ಬೆಲೆ ನೀಡಲು ನಿರಾಕರಿಸುವ ಸರಕಾರ ಇದಕ್ಕಿಂತ ಹೆಚ್ಚಿನ ಬೆಲೆತೆತ್ತು (ನಮ್ಮಲ್ಲಿ ಬೇಕಷ್ಟು ಸಂಗ್ರಹ ಇರುವಾಗಲೂ)ಆಮದು ಮಾಡಿದ ಉದಾಹರಣೆಗಳಿಲ್ಲವೇ?
ಆದರೆ, ಇವೆಲ್ಲ ಅಂಕಿ-ಅಂಶ ಕಲೆ ಹಾಕಿ, ದಾಖಲೆ ಸಹಿತ ಮಂಡಿಸಿ, ಸರಕಾರವು ನ್ಯಾಯಪರ-ಜನಹಿತ-ರಾಷ್ಟ್ರಹಿತಕ್ಕೆ ಪೂರಕವಾದ ನೀತಿಗಳನ್ನು ಅನುಸರಿಸುವಂತೆ ಮಾಡುವುದು ಹೇಗೆ? ಯಾರು? ಅದಕ್ಕೂ ಮುನ್ನ, ನಾವು- ಈ ಮಹಾನ್ ದೇಶದ ಪ್ರಜಾಸಮೂಹ - ಪಕ್ಷರಾಜಕಾರಣವನ್ನು ಮೀರಿ ಬೆಳೆಯಬೇಕಾಗಿದೆ ಅಲ್ಲವೇ?

ಅನಾಮಧೇಯ ಹೇಳಿದರು...

ತುಂಬಾ ಉಪಯುಕ್ತ ಲೇಖನ. ಕುದುರೆಯನ್ನು ನೀರಿಗೆ ಎಳೆಯಬಹುದು, ಕುಡಿಯುವ ಹಾಗೆ ಮಾಡಲಸಾಧ್ಜ್ಯ ಎಂದು ದುಃಖಿಸುವ ಸ್ಥಿತಿ ನಮ್ಮದು.
ಅಶೋಕವರ್ಧನ

ಅನಾಮಧೇಯ ಹೇಳಿದರು...

ವಿದ್ಯುತ್ ಕ್ಷಾಮ ಇಲ್ಲ. ಇರುವುದು ಸದ್ಭುದ್ಧಿಯ ಕ್ಷಾಮ ಮಾತ್ರ. ವಿದ್ಯುತ್ ಖರೀದಿಯ ನೆಪದಲ್ಲಿ ಮೃಷ್ಟಾನ್ನ ಉಣ್ಣುತ್ತಿರುವವರು ನಿತ್ಯಾನಂದ ಪೈಯವರಿಗೆ ಅಭಿವೃದ್ಧಿ ವಿರೋಧಿ ಎನ್ನುವ ಪ್ರಶಸ್ತಿ ನೀಡಲು ತುದಿಗಾಲಲ್ಲಿ ನಿಂತಿರಬಹುದು.

ನಟೇಶ್