ಭಾನುವಾರ, ಸೆಪ್ಟೆಂಬರ್ 16, 2012

ಮೌನೀಶರ ಜೋಕುಗಳು


ಮಿತ್ರ ಮೌನೀಶ ಮಲ್ಯರು ಮೌನ ಮೋಹನ ಸಿಂಗರ ಹಾಗಲ್ಲ. ಪಟ ಪಟ ಮಾತಾಡುತ್ತಾರೆ. ಸಾವಯವ ಕೃಷಿ ಅವರ ಒಂದು ಆಸಕ್ತಿ. ಇವತ್ತು ಭಾನುವಾರ ಅವರ ತೋಟಕ್ಕೆ ಹೋಗಿದ್ದೆ. ನನ್ನ ಹಾಗೇ ಈ ಮೊದಲು ಬಂದವರು ಯಾರೋ ಕೇಳಿದರಂತೆ:
"ನೀವು ಅಡಿಕೆಯ ಬುಡಕ್ಕೆ ಕಾಳುಮೆಣಸು ನೆಟ್ಟಿದ್ದೀರಿ. ಅಡಿಕೆಗೆ ಕೊಟ್ಟ ಗೊಬ್ಬರವೆಲ್ಲ ಅದೇ ತಿನ್ನುವುದಿಲ್ಲವೆ?"
ಮೌನೀಶರ ಉತ್ತರ: "ನಾವು ಅಡಿಕೆಗೆ ಗೊಬ್ಬರ ಕೊಡುವುದೇ ಇಲ್ಲವಲ್ಲ!"
***
ಮೌನೀಶರಿಗೆ ಹಲಸೆಂದರೆ ಆಯಿತು. ಎಲ್ಲಿಂದಲೋ ಕೆಲವು ಗಮ್ ಲೆಸ್ (ಮೇಣ ಇಲ್ಲದ್ದು) ಹಲಸಿನ ಸಸಿ ತಂದಿದ್ದರಂತೆ. ಹೀಗೇ ಯಾರಿಗೋ ಕೇಳಿದವರಿಗೆ ಒಂದು ಸಸಿ ಕೊಟ್ಟರು. ಧರ್ಮಕ್ಕಲ್ಲ, ದುಡ್ಡಿಗೆ. ತಗೊಂಡವರಿಗೆ ಅನುಮಾನ.  ಕೇಳಿದರು:
"ಹಣ್ಣಾದಾಗ ಮೇಣ ಇದ್ದರೆ ಏನು ಮಾಡುವುದು?"
"ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರಾಯಿತು" ಮೌನೀಶರ ಸಲಹೆ.
***
ಅವರ ತೋಟದ ಆಚೆ ಈಚೆ ಕೆಲವು  ಹಣ್ಣಿನ ಮರಗಳಿವೆ. ನೇರಳೆ, ಪೇರಳೆ ಇತ್ಯಾದಿ. ಹಣ್ಣಾಗುವ ಕಾಲಕ್ಕೆ ಆಚೀಚೆಯ ತುಂಟ ಹುಡುಗರು ತೋಟಕ್ಕೆ ಧಾಳಿ ಇಡುತ್ತಾರೆ. ವರ್ಷಕ್ಕೆ ಒಬ್ಬರಿಗೋ ಇಬ್ಬರಿಗೋ ಕೈಗೋ ಕಾಲಿಗೋ ಫ್ರಾಕ್ಚರ್ ಆಗಿ ಬ್ಯಾಂಡೇಜ್ ಬೀಳುವುದು ಸಾಮಾನ್ಯ. ಆದರೆ ಅಂಥವರು ಬ್ಯಾಂಡೇಜ್ ಹಾಕಿಕೊಂಡರೂ ತೋಟಕ್ಕೆ ಬರುವುದು ಬಿಡುವುದಿಲ್ಲ.
"ಬಂದೇನು ಮಾಡುತ್ತಾರೆ?" ನಾನು ಕೇಳಿದೆ.
"ಮರ ಹತ್ತಿದವರಿಗೆ ಡೈರೆಕ್ಷನ್ ಕೊಡುತ್ತಾರೆ!"

ಭಾನುವಾರ, ಸೆಪ್ಟೆಂಬರ್ 9, 2012



ಬೇಲಿ ಹಾರುವ ಹೋರಿಯ ಕತ್ತಿಗೆ ನ್ಯಾಯಾಲಯದ  ಕುಂಟೆ

ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ

ಕೇಸು ಕೋರ್ಟಿಗೆ ಒಯ್ದರು

ಕೋರ್ಟು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನು, ತಾಲ್ಲೂಕಾಫೀಸು ಇಂಥ ಕಡೆಗೆಲ್ಲ ಹೋಗಲು ಸಿಕ್ಕದ ಹಾಗೆ ನಡೆಸಿಬಿಡು ಅಂತ ನಂಬದ ದೇವರನ್ನು ನಾನು ಆಗಾಗ ಪ್ರಾರ್ಥಿಸುತ್ತೇನೆ. ಯಾಕೆಂದರೆ ಅವೆಲ್ಲ ನಮ್ಮ ಕೈಯಲ್ಲಿಲ್ಲವಲ್ಲ. ನನ್ನ ಪ್ರಾರ್ಥನೆ ಫಲ ಕೊಡಲಿಲ್ಲ. ಮಾಹಿತಿ ಹಕ್ಕಿನಲ್ಲಿ ಮಂಗಳೂರಿನ ಎಸ್ ಇ ಜಡ್ ಕಂಪೆನಿಗೆ ಒಂದು ಅರ್ಜಿ ಹಾಕಿದ್ದೆ. ನಮ್ಮ ಬಂಟ್ವಾಳದ ಸರಪಾಡಿಯ ಹತ್ತಿರ ಎ ಎಂ ಆರ್ ಎಂಬ ಕಿರು ಜಲವಿದ್ಯುತ್ ತಯಾರಿಸುವ ಕಂಪೆನಿ ನೇತ್ರಾವತಿಗೆ ಒಂದು ಕಟ್ಟ ಹಾಕಿದೆ. ಎಸ್ ಇ ಜಡ್ ಕಂಪೆನಿ ಬಜ್ಪೆ ಸಮೀಪದ ತನ್ನ ಕೈಗಾರಿಕಾ ನೆಲೆಗೆ ಈ ಕಟ್ಟದಿಂದಲೇ ನೀರು ಕೊಂಡೊಯ್ಯುತ್ತದೆ ಎಂದು ನನಗೆ ಗೊತ್ತಾಗಿತ್ತು. ಹಾಗಿದ್ದರೆ ಈ ಎರಡು ಕಂಪೆನಿಗಳ ನಡುವೆ ಏನು ಒಪ್ಪಂದ ಆಗಿದೆ ಎಂದು ತಿಳಿದುಕೊಳ್ಳಬೇಕು ತಾನೆ? (ಯಾಕೆ? ಯಾಕೆ ತಿಳಿದುಕೊಳ್ಳಬೇಕು? ನಿಮಗೆ ಏನು ಸಂಬಂಧ? ಎಂದೆಲ್ಲ ಕಂಪೆನಿ ಕೇಳಿತು. ಆದರೆ ನದಿ ನೀರಿಗೆ ದೊಣೆನಾಯಕನ ಅಪ್ಪಣೆಯೆ?) ಅದಕ್ಕೇ ಮಾಹಿತಿ ಹಕ್ಕಿನ ಅನ್ವಯ  ಅರ್ಜಿ  ಹಾಕಿದೆ. ಇದಕ್ಕಿಂತ ಮುಂಚೆ ಕೇಳಿದ ಮಾಹಿತಿಯನ್ನು ಕೊಡುತ್ತಿದ್ದ ಕಂಪೆನಿ ಈಗ ಯಾಕೋ ವರಸೆ ಬದಲಿಸಿತು.ಮಾಹಿತಿ ಕೊಡಲಿಲ್ಲ. ಉಲ್ಟಾ ಮಾತಾಡಿತು. ನಾನೂ ಬಿಡಲಿಲ್ಲ, ಮಾಹಿತಿ ಆಯೋಗಕ್ಕೆ ದೂರು ಕೊಟ್ಟೆ. ವಿಚಾರಣೆ ನಡೆಯಿತು. ಮಾಹಿತಿ ಆಯೋಗ ನಾನು ಕೇಳಿದ ಮಾಹಿತಿ ಕೊಡುವಂತೆ ಕಂಪೆನಿಗೆ ನಿರ್ದೇಶನ ಕೊಟ್ಟಿತು. ಆದರೆ ಕಂಪೆನಿ ನನಗೆ ಮಾಹಿತಿ ಕೊಡಲಿಲ್ಲ, ಬದಲಿಗೆ ಹೈಕೋರ್ಟಿನಲ್ಲಿ ಒಂದು ಪಿಟಿಷನ್ ಜಡಿಯಿತು. ಎದುರು ಪಾರ್ಟಿಯಾಗಿ ಒಂದನೇ ಮಾಹಿತಿ ಆಯೋಗ, ಎರಡನೇ ನಾನು! ಹೀಗೆ ನಾನು ಹೋಗದಿದ್ದರೂ, ನನ್ನ ಹೆಸರು ಹೈಕೋರ್ಟಿಗೆ ಹೋದ ಕತೆ.

ದಾಖಲೆ ಓಕೆ ವಕೀಲರು ಯಾಕೆ?

ಆಯಿತು ಕೇಸು ಕೋರ್ಟಿಗೆ ಹೋದಮೇಲೆ ನನ್ನ ಪರವಾಗಿ ವಾದ ಮಾಡಲು ಯಾರಾದರೊಬ್ಬ ವಕೀಲರನ್ನು ನೇಮಿಸಬೇಕಲ್ಲ? ನಾನು ಶಸ್ತ್ರ ಕೆಳಗಿಟ್ಟೆ. ಬೇಕಾದ್ದಾಗಲಿ, ನಾನಂತೂ ವಕೀಲರನ್ನು ಇಡುವುದಿಲ್ಲ. ಎಷ್ಟು ಮಾಡಲು ನನ್ನಿಂದ ಸಾಧ್ಯವೋ ಅಷ್ಟು ಮಾಡಿದ್ದೇನೆ, ಇನ್ನು ಬೇಕಾದ್ದಾಗಲಿ, ಕೇಸು ಗುಣ ಆಗಲಿ, ಪಡ್ಚ ಆಗಲಿ, ವಕೀಲರನ್ನಿಟ್ಟು ಅವರಿಗೆ ದುಡ್ಡು ಸುರಿಯುವುದು, ಅವರು ಕೇಳಿದ ದಾಖಲೆ ಒಟ್ಟು ಮಾಡಲು ಓಡಾಡುವುದು ಇವೆಲ್ಲ ನನ್ನಿಂದ ಸಾಧ್ಯವೇ ಇಲ್ಲ ಅಂತ ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡೆ. ಈ ನಡುವೆ ಒಂದು ದಿನ ವಿದ್ಯಾ ದಿನಕರ್ ನನ್ನ ಹತ್ತಿರ ಜಗಳಕ್ಕೇ ಬಂದರು. ನೀವು ವಕೀಲರನ್ನು ಇಡುವುದಿಲ್ಲ ಎಂದಾದರೆ, ಇಲ್ಲಿಯವರೆಗೆ ತಂದದ್ದು ಯಾಕೆ, ಲಂಗು ಲೊಟ್ಟೆ ಅಂತೆಲ್ಲ ರೋಪು ಹಾಕಿದರು. ನಾನು ಹಂದಾಡಲಿಲ್ಲ ನನ್ನಿಂದ ಕೂಡಿದಷ್ಟು ನಾನು ಮಾಡುವುದು, ಅದರಿಂದ ಹೆಚ್ಚಿಂದು ನಾನು ಮಾಡಲಾರೆ ಅಂತ ಗಟ್ಟಿ ಕೂತುಬಿಟ್ಟೆ. ಕಡೆಗೆ ಅವರೇ ಬೆಂಗಳೂರಿನಲ್ಲಿ ಯಾರನ್ನೋ ಹಿಡಿದು, ಒಬ್ಬ ವಕೀಲಮ್ಮನನ್ನು ಗೊತ್ತು ಮಾಡಿದರು. ಆದರೆ ಅದು ಪ್ರಯೋಜನವಾಗಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ, ಆ ವಕೀಲಮ್ಮ ಕೇಸಿನಿಂದ ಹಿಂದೆ ಸರಿದರು.
ಹೀಗೆ, ಕೋರ್ಟಿನಲ್ಲಿ ನಮ್ಮ ಪರವಾಗಿ ವಾದ ಮಾಡಲು ಆಯೋಗದ ವಕೀಲರು ಮಾತ್ರ ಉಳಿದರು.

ಕ್ಷುದ್ರವಲ್ಲದ್ದು ಗಣನೀಯ!

ಆದರೆ ನನಗೆ ಒಂದು ಧೈರ್ಯ ಇತ್ತು. ಆಯೋಗ ವಿಚಾರಣೆ ಮಾಡಿದಾಗಲೇ ಬೇಕಾದ ದಾಖಲೆಗಳೆಲ್ಲ ಸಂಗ್ರಹವಾಗಿತ್ತು. ಆಯೋಗದವರೇ ಕಂಪೆನಿಗೆ ನೋಟೀಸು ಕೊಟ್ಟು ಅದರ ಮೂರು ವರ್ಷದ ಬ್ಯಾಲೆನ್ಸ್ ಷೀಟ್ ತರಿಸಿದ್ದರು. ನಾನೂ ಕೆಲವು ದಾಖಲೆಗಳನ್ನು ಒದಗಿಸಿದ್ದೆ. (ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ಮತ್ತೊಂದು ತೀರ್ಪನ್ನು ವಿದ್ಯಾ ಮೇಡಂ ವಕೀಲಮ್ಮನ ಗಮನಕ್ಕೆ ತಂದಿದ್ದರಂತೆ. ಅದು ನನಗೆ ಮೊನ್ನೆಯಷ್ಟೆ ಗೊತ್ತಾಗಿದ್ದು) ಹೀಗೆ ದಾಖಲೆ ಲೆಕ್ಕದಲ್ಲಿ ನಮ್ಮ ಪಕ್ಷ ಬಲವಾಗಿಯೇ ಇತ್ತು. ಮತ್ತು ಇದೇನು ದೊಡ್ಡ ಕುಂಬಳಕಾಯಿ ಕೇಸಲ್ಲ. ಕಂಪೆನಿಯ ವಾದ ಮಾಹಿತಿ ಹಕ್ಕು ೨೦೦೫ ತನಗೆ ಅನ್ವಯವಾಗುವುದಿಲ್ಲ, ಆದ್ದರಿಂದ ತನ್ನನ್ನು ಮಾಹಿತಿಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು. ನಮ್ಮ ವಾದ ಕಂಪೆನಿ ಮಾಹಿತಿಹಕ್ಕಿನ ವ್ಯಾಪ್ತಿಯ ಒಳಗಿದೆ ಎಂದು. ಮಾಹಿತಿ ಹಕ್ಕು ಕಾನೂನಿನ ವಿವರಣೆಯಂತೆ ಯಾವುದಾದರೊಂದು ಸಂಸ್ಥೆ/ಕಂಪೆನಿಯಲ್ಲಿ ಸರಕಾರ ನೇರವಾಗಿ ಅಥವಾ ಪರೋಕ್ಷವಾಗಿ  ಗಣನೀಯ ಪ್ರಮಾಣದ ಹಣ ತೊಡಗಿಸಿದ್ದರೆ, ಅಂಥ ಕಂಪೆನಿ/ಸಂಸ್ಥೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಹಾಗಾದರೆ ಗಣನೀಯ ಎಂದರೆ ಏನು? ಇಂಗ್ಲಿಷಿನಲ್ಲಿ ಸಬ್ ಸ್ಟ್ಯಾನ್ಷಿಯಲ್  ಎಂಬ ಶಬ್ದ ಹಾಕಿದ್ದಾರೆ. ಸಬ್ ಸ್ಟ್ಯಾನ್ಷಿಯಲ್   ಎಂದರೆ? ಶೇ. ೧೦ ಎಂದೋ, ಶೇ. ೫೦ ಎಂದೋ ಹೇಳಿದರೆ ನಿರ್ದಿಷ್ಟವಾಗಿ ಹೇಳಿದಂತಾಗುತ್ತಿತ್ತು, ಆಗ ಸಮಸ್ಯೆ ಇರಲಿಲ್ಲ. ಇಲ್ಲಿ ಹಾಗಲ್ಲ, ಸಬ್ ಸ್ಟ್ಯಾನ್ಷಿಯಲ್   ಎಂದುಬಿಟ್ಟಿದೆ ಕಾನೂನು! ಅದಕ್ಕೆ ವಿವರಣೆ ಹೀಗಂತೆ: ಯಾವುದು ಕ್ಷುದ್ರವಲ್ಲವೋ ಅದು ಗಣನೀಯ! ಟ್ರಿವಿಯಲ್ ಅಲ್ಲದ್ದು ಸಬ್ ಸ್ಟ್ಯಾನ್ಷಿಯಲ್! ಇದು ತೀರ್ಪಿನಲ್ಲೇ ಇದೆ.

ನಮಗೇ ಗುಣವಾಯಿತು!

ನಮ್ಮ ಈ ಕಂಪೆನಿಯಲ್ಲಿ ಕರ್ನಾಟಕ ಸರಕಾರದ್ದು ಶೇ. 23 ಮತ್ತು ಕೇಂದ್ರದ್ದು ಶೇ. 26 ಬಂಡವಾಳ ಇದೆ ಎನ್ನುವುದಕ್ಕೆ ದಾಖಲೆಗಳಿದ್ದವು. ಹಾಗಾಗಿ ವಕೀಲರುಗಳಿಗೆ ತಲೆ ತಲೆ ಕುಟ್ಟಲು (ತರ್ಕವೆಂಬುದು ತಗರ ಹೋರಟೆ-ಅಲ್ಲಮ ಪ್ರಭು) ಇಲ್ಲಿ ಹೆಚ್ಚು ಅವಕಾಶ ಇರಲಿಲ್ಲ. ಕೇಸು ಖಂಡಿತ ನಮಗೆ ಗುಣವಾಗುತ್ತದೆ ಅಂತ ನನಗೆ ವಿಶ್ವಾಸ ಇತ್ತು. ಆದರೆ ಪ್ರಶ್ನೆ ಇದ್ದದ್ದು ಸಮಯದ್ದು. ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಲು  ನಮ್ಮದೇನು ಯಡಿಯೂರಪ್ಪನವರ ನಿರೀಕ್ಷಣಾ ಜಾಮೀನು ಪ್ರಕರಣವೆ? ವರ್ಷಗಟ್ಟಲೆ ಕೋರ್ಟಿನಲ್ಲಿ ಧೂಳು ಪೇರಿಸಿಕೊಳ್ಳುತ್ತಾ ಬಿದ್ದು ಬಿಟ್ಟರೆ ಏನು ಗತಿ?
ಹಾಳು ಬಡಿದು ಹೋಗಲಿ ಅಂತ ಅದರ ಆಲೋಚನೆ ಬಿಟ್ಟೆ. ಅಂತರ್ಜಾಲದಲ್ಲಿ ಆಗಾಗ ತೆಗೆದು ನೋಡುವುದು, ನೋಡಿದಾಗೆಲ್ಲ ಕೇಸ್ ಪೆಂಡಿಂಗ್ ಅಂತ ಇರುವುದನ್ನು ಕಂಡು ಸುಮ್ಮನಾಗುವುದು ಹೀಗೇ ನಡೆಯುತ್ತಿತ್ತು ಕಳೆದ ಸುಮಾರು ಒಂದೂವರೆ ವರ್ಷದಿಂದ.  ಮೊನ್ನೆ ಒಂದು ದಿನ ನೋಡುತ್ತೇನೆ ಒಂದು ಶಬ್ದ ಬದಲಾಗಿಬಿಟ್ಟಿದೆ: ಕೇಸ್ ಪೆಂಡಿಂಗ್ ಹೋಗಿ ಕೇಸ್ ಡಿಸ್ಪೋಸ್ಡ್ ಆಗಿದೆ! ಶಭಾಷ್!  ಮತ್ತೊಂದು ಚೌಕದಲ್ಲಿ ಕೇಸು ಡಿಸ್ಮಿಸ್ ಆಗಿದೆ ಎಂತಲೂ ಇತ್ತು. ಹಾಗಿದ್ದರೆ ನಮಗೇ ಗುಣ ಅಂತ ಗೊತ್ತಾದರೂ ಸಾಯಂಕಾಲದವರೆಗೂ ಕಾದು ಗೆಳೆಯರೂ ವಕೀಲರೂ ಆದ ಕಜೆ ರಾಮಚಂದ್ರ ಭಟ್ಟರಿಗೆ ಫೋನಿಸಿದೆ. ಅವರ ತಮ್ಮ ನರಸಿಂಹ ಭಟ್ಟರು (ಅವರೂ ವಕೀಲರೇ) ಸಿಕ್ಕಿದರು. ಅಪೀಲು ಮಾಡಿದ್ದು ಯಾರು? ಅಂದರು. ಕಂಪೆನಿ. ಹಾಗಿದ್ದರೆ ಅಪೀಲು ವಜಾ ಆಯಿತು, ನೀವೇ ಗೆದ್ದ ಹಾಗೆ ಎಂದರು. ನ್ಯಾಯಾಧೀಶರು ಬೇಲಿ ಹಾರುವ ಹೋರಿಯ ಕುತ್ತಿಗೆಗೆ ಕುಂಟೆ ಕಟ್ಟಿದ್ದರು. ಮಹಾತ್ಮಾ ಗಾಂಧೀಕೀ ಜೈ!
ಇಷ್ಟಾದರೂ ತೀರ್ಪಿನ ಪ್ರತಿ ಇಲ್ಲದೆ ಏನೂ ಮಾಡುವಂತಿಲ್ಲ. ಅಂತರ್ಜಾಲದಲ್ಲಿ ಹುಡುಕಿದೆ. ಎಷ್ಟು ಪರಡಿದರೂ ಪ್ರಯೋಜನ ಆಗಲಿಲ್ಲ. ಬೆಂಗಳೂರಲ್ಲಿ ನನ್ನ ಬಂಧು ಒಬ್ಬರು ಹೈಕೋರ್ಟ್ ವಕೀಲರಿದ್ದಾರೆ. ಅವರಿಗೆ ಫೋನ್ ಮಾಡಿದೆ. ಅವರು ಎಲ್ಲ ವಿವರಿಸಿ ಹೇಳಿದರು. ಕೇಸಿನ ನಂಬರು ತೆಗೆದುಕೊಂಡು ಅವರೇ ನೋಡಿ ಹೇಳಿದರು. "ತೀರ್ಪಿನ ದೃಢೀಕೃತ ಪ್ರತಿಗೆ ಎರಡೂ ಕಡೆಯ ವಕೀಲರು ಅರ್ಜಿ ಹಾಕಿರುತ್ತಾರೆ. ಅವರು ಅಲ್ಲಿ ಪೂರ್ತಿ ದುಡ್ಡು ಕಟ್ಟಿದ ಮೇಲೆ ತೀರ್ಪು ಇಂಟರ್ನೆಟ್ಟಿನಲ್ಲಿ ಬೀಳುತ್ತದೆ. ಮತ್ತೆ ನೀವು ಓದಬಹುದು" ಮತ್ತೆರಡು ದಿನ ಹೋಯಿತು. ವಿಷಯ ತಿಳಿಸಿ ವಿದ್ಯಾ ಮೇಡಂಗೆ ಮೊದಲೇ ಫೋನ್ ಮಾಡಿದ್ದೆ. ಅವರೂ ವಿಚಾರಿಸಿದ್ದರು. ಇಷ್ಟರಲ್ಲಿ ಆಯೋಗದ ಕಡೆಯ ವಕೀಲರು ದುಡ್ಡು ಕಟ್ಟಿ ತೀರ್ಪಿನ ಪ್ರತಿ ಪಡೆದರು. ಹಾಗಾಗಿ ತೀರ್ಪು ಇಂಟರ್ನೆಟ್ಟಿಗೆ ಬಿತ್ತು. ಸಾರ್ವಜನಿಕ ಆಸ್ತಿಯಾಯಿತು. ನಾನೂ ನೋಡಿದೆ. ನನಗೆ ಗೊತ್ತಿದ್ದ ಒಂದೆರಡು ಪತ್ರಿಕೆಗೆ ಕಳಿಸಿದೆ. ವಿದ್ಯಾ ಮೇಡಂ ಎಲ್ಲಾ ಪತ್ರಿಕೆಗಳಿಗೂ ತೀರ್ಪು ಕಳಿಸಿಕೊಟ್ಟರು. ಮತ್ತೆರಡು ದಿನದಲ್ಲಿ ಪತ್ರಿಕೆಗಳಲ್ಲಿ  ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ ಎಂಬ ಸುದ್ದಿ ಪ್ರಕಟವಾಗತೊಡಗಿತು. ಎಲ್ಲಾ ಮುಖ್ಯ  ಇಂಗ್ಲಿಷ್ ದೈನಿಕಗಳೂ ಸುದ್ದಿಯನ್ನು ಪ್ರಕಟಿಸಿದವು. ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಮಾತ್ರ ಕಡಿಮೆ. ಪ್ರಜಾವಾಣಿ  ವರದಿ ಮಾಡಿತು. ಕರಾವಳಿ ಅಲೆಯಲ್ಲೂ ಪ್ರಕಟವಾಗಿದೆ ಎಂದು ಮಿತ್ರ ವಿಶ್ವನಾಥರು ಹೇಳಿದರು.

ತೀರ್ಪಿನ ಮುಖ್ಯಾಂಶಗಳು

ತೀರ್ಪಿನ ಕೆಲವು ಅಂಶಗಳು ಮಾಹಿತಿ ಹಕ್ಕು ಕಾನೂನಿನ ಕೆಲವು ಅಸ್ಪಷ್ಟ ಅಂಶಗಳನ್ನು ಹೆಚ್ಚು ಸ್ಪಷ್ಟಪಡಿಸಿರುವುದು ಪ್ರಜೆಗಳಿಗೆ ಆಗಿರುವ ದೊಡ್ಡ ಲಾಭ. ಗಣನೀಯ (ಸಬ್ ಸ್ಟ್ಯಾನ್ಷಿಯಲ್) ಎಂಬುದಕ್ಕೆ  ನ್ಯಾಯಾಧೀಶರು ಕೊಟ್ಟಿರುವ ವಿವರಣೆಯನ್ನು ಮೇಲೆ ಹೇಳಿದ್ದೇನೆ. ಇದರೊಂದಿಗೆ ಇನ್ನೊಂದು ಅಂಶವೂ ಇದೆ: ಗಣನೀಯ ಎಂದರೇನು ಎಂಬುದನ್ನು ವಿವರಿಸಿದ ಮುಂದಿನ ಸಾಲಿನಲ್ಲಿಯೇ ನ್ಯಾಯಾಧೀಶರು ಹೀಗೆ ಹೇಳಿದ್ದಾರೆ: "It need not necessarily be by a cash flow but also by any other kind". ಎಂದರೆ ಸರಕಾರ ಯಾವುದೇ ಸಂಸ್ಥೆಯಲ್ಲಿ ಹಣದ ರೂಪದಲ್ಲಿಯೇ ತನ್ನನ್ನು ತೊಡಗಿಸಿಕೊಂಡ ಪ್ರಕರಣದಲ್ಲಿ ಮಾತ್ರ ಅಲ್ಲ, ವಸ್ತುವಿನ ರೂಪದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ ಎಂದಾಯಿತು. ಅಂದರೆ ಈಗ ಸಾಮಾನ್ಯವಾಗಿ ಯಾವ ಕಂಪೆನಿಗಳು ಮಾಹಿತಿ ಹಕ್ಕಿನಲ್ಲಿ ಬರುವುದಿಲ್ಲ ಎಂದು ಭಾವಿಸಲಾಗಿದೆಯೋ ಆ ಕಂಪೆನಿಗಳಿಗೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ! ಉದಾಹರಣೆಗೆ ಒಂದು ಕಿರು ಜಲವಿದ್ಯುತ್ ತಯಾರಿಕಾ ಕಂಪೆನಿಯನ್ನು ತೆಗೆದುಕೊಂಡರೆ, ಆ ಕಂಪೆನಿ ಸರಕಾರಕ್ಕೆ ಸೇರಿದ ನದಿಗೆ ಅಣೆಕಟ್ಟು ಹಾಕಿರುತ್ತದೆ. ನದಿ ಮತ್ತು ಅಣೆಕಟ್ಟು ಇರುವ ಸ್ಥಳ ಸರಕಾರದ್ದಾದ್ದರಿಂದ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಅರ್ಥ ಮಾಡುವುದು ಸಾಧ್ಯವಿದೆ. (ಕಿರು ಜಲ ವಿದ್ಯುತ್ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಸರಕಾರದ ಸಬ್ಸಿಡಿಯನ್ನು ತೆಗೆದುಕೊಳ್ಳುವುದರಿಂದ, ಆ ಕಾರಣಕ್ಕೂ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುವುದು ಸಾಧ್ಯವಿದೆ). ಸರಕಾರದ ಮೂಲಕ ಭೂಮಿಯನ್ನೂ, ತೆರಿಗೆ ರಿಯಾಯತಿಯನ್ನೂ ಪಡೆದುಕೊಂಡ ಇನ್ಫೋಸಿಸ್ ಮುಂತಾದ ಖಾಸಗಿ ಕಂಪೆನಿಗಳೂ ಇದೇ ಕಾರಣಕ್ಕೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತವೆಯೇ ಎಂಬುದನ್ನೂ ಈ ತೀರ್ಪಿನ ಹಿನ್ನೆಲೆಯಲ್ಲಿ ಪರಿಶೀಲಿಸಬಹುದಾಗಿದೆ.

ಭಾನುವಾರ, ಏಪ್ರಿಲ್ 15, 2012

ರಾಜರೆಂಬರುಮೊಳರೆ?

(ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಶಿವಕೋಟ್ಯಾಚಾರ್ಯ ಎಂಬುವವನು ವಡ್ಡಾರಾಧನೆ ಎಂಬ ಕೃತಿ ರಚಿಸಿದ್ದಾನೆ. ಅದರಲ್ಲಿ ಹಲವಾರು ಕಥೆಗಳಿವೆ. ಸುಕುಮಾರಸ್ವಾಮಿಯ ಕಥೆ ಅವುಗಳಲ್ಲಿ ಒಂದು. ಸುಕುಮಾರ ಸ್ವಾಮಿ ದೊಡ್ಡ ಶ್ರೀಮಂತ. ಒಂದು ದಿನ ಅವನು ಎಂದಿನಂತೆ ತನ್ನ ಮನೆಯ ಮಹಡಿಯಲ್ಲಿ ವಿಶ್ರಮಿಸಿದ್ದ. ಆಗ ದೂತನೊಬ್ಬ ಬಂದು ಅವನಿಗೆ ಹೇಳಿದ. "ಸ್ವಾಮೀ ನಿಮ್ಮನ್ನು ನೋಡಲು ಮಹಾರಾಜರು ಬಂದಿದ್ದಾರೆ. ಅವರನ್ನು ನೋಡಲು ನೀವು ಕೆಳಗೆ ಬರಬೇಕು" ಸುಕುಮಾರಸ್ವಾಮಿ ಆಶ್ಚರ್ಯದಿಂದ ಕೇಳಿದನಂತೆ: ರಾಜರು ಅಂತ ಇರುತ್ತಾರೆಯೆ? (ರಾಜರೆಂಬರುಮೊಳರೆ?)
ಎಂ. ಎಸ್. ಇ. ಜಡ್ ನಂತಹ ದೊಡ್ಡ ದೊಡ್ಡ ಕಂಪೆನಿಗಳೂ ಇಂದು ಸುಕುಮಾರಸ್ವಾಮಿಯ ಹಾಗೆ "ಸರ್ಕಾರ ಅಂತ ಇರುತ್ತದೆಯೆ" ಎಂದು ಕೇಳಿದರೆ ಆಶ್ಚರ್ಯವಿಲ್ಲ ಅಲ್ಲವೆ?)
ಖಾಸಗಿ ಮಾಲಿಕತ್ವದ ಎಂ. ಎಸ್. ಇ. ಜಡ್. ಕಂಪೆನಿಗೆ ನೇತ್ರಾವತಿಯಿಂದ ನೀರೆತ್ತಲು ಅನುಮತಿ ನೀಡುವಾಗ ಸರಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಆ ಪೈಕಿ ಒಂದು ಷರತ್ತಿನ ಪ್ರಕಾರ ನೀರೆತ್ತುವ ಕಾಮಗಾರಿ (ಪೈಪ್ ಲೈನ್ ಅಳವಡಿಕೆ ಇತ್ಯಾದಿ ಕಾಮಗಾರಿಗಳು) ಪ್ರಾರಂಭಿಸುವ ಮೊದಲು ಕಂಪೆನಿ ಸಣ್ಣ ನೀರಾವರಿ ಇಲಾಖೆಯ ಸಂಬಂಧಪಟ್ಟ ಕಾರ್ಯಕಾರಿ ಎಂಜಿನಿಯರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಕಂಪೆನಿ ನೀರೆತ್ತುವ ಕಾಮಗಾರಿ ಪ್ರಾರಂಭಿಸಿ ಏಳೆಂಟು ತಿಂಗಳುಗಳೇ ಕಳೆದುಹೋಗಿವೆ. ೧೫ ಎಂಜಿಡಿ ನೀರೆತ್ತಲು ೩೦ ಎಂಜಿಡಿ ನೀರೆತ್ತುವ ಸಾಮರ್ಥ್ಯದ ಪೈಪುಗಳನ್ನು ಕಿಲೋಮೀಟರುಗಟ್ಟಳೆ ಅಳವಡಿಸಿಯೂ ಆಗಿದೆ. ಸರಪಾಡಿಯ ಹತ್ತಿರ ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕಾಮಗಾರಿಯನ್ನೂ ಪ್ರಾರಂಭಿಸಿ ಆಗಿದೆ. ಆದರೆ ಅದು ಸಣ್ಣ ನೀರಾವರಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆಯೆ?
ಷರತ್ತಿನಲ್ಲಿ ಹೇಳಲಾದ "ಸಂಬಂಧಪಟ್ಟ" ಕಾರ್ಯಕಾರಿ ಎಂಜಿನಿಯರ್ ಎಂದರೆ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರೇ ಎಂದು ನನ್ನಷ್ಟಕ್ಕೆ ನಾನು ಭಾವಿಸಿಕೊಂಡೆ. ಅದಕ್ಕೆ ಕಾರಣ ಇತ್ತು. ಹಿಂದೆ ಎಂ ಆರ್ ಪಿ ಎಲ್ ಸಂಸ್ಥೆಗೆ ನೀರು ನೀಡುವ ಬಗ್ಗೆ ಆದ ಒಪ್ಪಂದಕ್ಕೆ ಮಂಗಳೂರಿನ ಕಾರ್ಯಕಾರಿ ಎಂಜಿನಿಯರರೇ ಸರಕಾರದ ಪರವಾಗಿ ಸಹಿ ಮಾಡಿದ್ದರು. ಹಾಗಾಗಿ ನಾನು ಅವರಿಗೆ "ಸರಕಾರಿ ಆದೇಶದಂತೆ, ಮಾಡಿಕೊಂಡಿರುವ ಒಪ್ಪಂದದ ಪ್ರತಿ ಕೊಡುವಂತೆ" ಮಾಹಿತಿ ಹಕ್ಕಿನ ಅನ್ವಯ ಅರ್ಜಿ ಕೊಟ್ಟೆ. "ನಮ್ಮ ವಿಭಾಗಕ್ಕೆ ಈ ವಿಷಯ ಸಂಬಂಧಪಡುವುದಿಲ್ಲವಾದ್ದರಿಂದ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ" ಎಂದು ಅವರು ಉತ್ತರಿಸಿದರು. ಇಷ್ಟಕ್ಕೆ ಒಂದು ತಿಂಗಳು ಕಳೆಯಿತು. "ಸ್ವಾಮೀ, ನೀವಲ್ಲದಿದ್ದರೆ, ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ನನ್ನ ಅರ್ಜಿ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಅಂತ ಅವರನ್ನು ಎಜುಕೇಟ್ ಮಾಡಬೇಕಾಯಿತು. ಮಾಡಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ಕಳಿಸಿ, "ನೇತ್ರಾವತಿ ನದಿಯ ಉಸ್ತುವಾರಿ ನಿಮಗೆ ಇರುವುದರಿಂದ ಅರ್ಜಿಯನ್ನು ನಿಮಗೆ ಕಳಿಸಿಕೊಡಲಾಗಿದೆ; ಅರ್ಜಿದಾರರಿಗೆ ಮಾಹಿತಿ ನೀಡಿರಿ" ಎಂದರು. ಆಗಲಪ್ಪ! ಒಂದು ಹೊಸ ವಿಷಯ ಗೊತ್ತಾಯಿತು! ನಮ್ಮ ನೇತ್ರಾವತಿ ನದಿಗೂ ಒಬ್ಬ "ಉಸ್ತುವಾರಿ" ಇದ್ದಾರೆ! ತುಂಬ ಸಂತೋಷವಾಯಿತು. ಅವರು ಕೆಲವು ದಿನ ಕಳೆದು ಉತ್ತರಿಸಿದರು: "ಈ ವಿಭಾಗದಿಂದ ಎಂ. ಎಸ್. ಇ. ಜಡ್. ಕಂಪೆನಿಯೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ". ಆಫೀಸಿಗೆ ಸಂಬಂಧಿಸಿದ ಕಾನೂನುಗಳನ್ನು ತಿಳಿದುಕೊಳ್ಳುವ ಅಭ್ಯಾಸವನ್ನು ಎಂದೋ ಗುಡ್ಡಕ್ಕೆ ಹೊಡೆದಿರುವ ಇಂಥವರನ್ನು ಎಜುಕೇಟ್ ಮಾಡಲು ಯತ್ನಿಸುವ ನಾನೊಬ್ಬ ದಡ್ಡ ಎಂದು ನನ್ನನ್ನು ನಾನೇ ಬೈದುಕೊಂಡು, ಮಾಹಿತಿ ಹಕ್ಕು ಆಯೋಗಕ್ಕೆ ಒಂದು ದೂರು ಸಲ್ಲಿಸಿದೆ. ಸುಮಾರು ಆರು ತಿಂಗಳ ನಂತರ ಕಳೆದ ಐದನೇ ತಾರೀಖು (೫-೪-೨೦೧೨) ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಆಯೋಗದ ಎದುರು ಪ್ರಕರಣ ವಿಚಾರಣೆಗೆ ಬಂತು. ನನ್ನ ಫಿರ್ಯಾದಿಯಲ್ಲಿ ಎದುರು ಪಕ್ಷವಾಗಿ ಮಂಗಳೂರು ಹಾಗೂ ಹಾಸನ ಎರಡೂ ಕಾರ್ಯಕಾರಿ ಎಂಜಿನಿಯರುಗಳನ್ನು ತೋರಿಸಿದ್ದೆ. ಆದರೆ ಆಯೋಗದವರು ಮಂಗಳೂರಿನವರಿಗೆ ಮಾತ್ರ ನೋಟೀಸು ಕೊಟ್ಟಿದ್ದರು. ಹಾಗಾಗಿ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರು ಮಾತ್ರ ವಿಚಾರಣೆಗೆ ಹಾಜರಾದರು.

ಬೆಂಗಳೂರಿನಲ್ಲಿ ಈಗ ಮಾಹಿತಿ ಆಯೋಗದ ಕಛೇರಿ ಎರಡು ಕಡೆ ಆಗಿದೆ. ಒಂದು ಮೊದಲಿದ್ದಲ್ಲಿಯೇ: ಬಹು ಮಹಡಿ ಕಟ್ಟಡದಲ್ಲಿ. ಮತ್ತೊಂದು ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ ಕಟ್ಟಡದಲ್ಲಿ. ನನಗೆ ಹೋಗಬೇಕಾಗಿದ್ದು ಮಿಥಿಕ್ ಸೊಸೈಟಿಗೆ. ಬೆಳಗ್ಗೆ ಹನ್ನೊಂದು ಗಂಟೆಗೆ ವಿಚಾರಣೆ ಶುರು. ನಾನು ಹತ್ತು ಗಂಟೆಯ ಹೊತ್ತಿಗೇ ಅಲ್ಲಿ ಹಾಜರಾದೆ. ಮಾಹಿತಿ ಹಕ್ಕು ಸಂಸ್ಥೆಗೆ ಬಹುಷಃ ಕೇಂದ್ರ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಕಚೇರಿಯನ್ನು ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಸಾಮಾನ್ಯವಾಗಿ ನಮ್ಮ ಸರಕಾರಿ ಕಚೇರಿಗಳಿಗಿರುವ ಒಂದು ಜೋಬದ್ರ ಕಳೆ ಈ ಕಛೇರಿಗೆ ಇಲ್ಲ. ಹೆಚ್ಚು ಗಲಾಟೆ ಇಲ್ಲ. ಆಸನ ವ್ಯವಸ್ಥೆ, ಟಾಯ್ಲೆಟ್ ಇತ್ಯಾದಿಗಳು ಸಾಕಷ್ಟು ಚೆನ್ನಾಗಿವೆ. ಇಡೀ ವಾತಾವರಣ ಸ್ವಚ್ಛವಾಗಿದೆ.
ನಾನು ಹೋದಾಗ ತರುಣನೊಬ್ಬ ಎದುರು ಕೂತಿದ್ದ. ಹೀಗೇ ಮಾತಾಡಿಸಿದಾಗ ಅವನು ಬಂದಿದ್ದೂ ಬಿ.ಸಿ.ರೋಡಿನಿಂದಲೇ ಎಂದು ಗೊತ್ತಾಯಿತು. ಅಕ್ಷರ ದಾಸೋಹವೋ ಯಾವುದೋ ವಿಷಯದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೋ ಅವರ ಪರವಾಗಿಯೋ ಬಂದಿದ್ದ. "ಈಗೆಲ್ಲ ಮಾಹಿತಿ ಹಕ್ಕು ಮಿಸ್ ಯೂಸ್ ಆಗುವುದೇ ಜಾಸ್ತಿ. ಅಲ್ಲಿಂದ ಇಲ್ಲಿಗೆ ಬರಲಿಕ್ಕೆ ಎಷ್ಟು ಖರ್ಚು! ಎಲ್ಲ ವೇಸ್ಟ್" ಎಂದು ಗುರುಗುಟ್ಟಿದ. ಆಮೇಲೂ ಒಂದಿಬ್ಬರು ಸರಕಾರಿ ಅಧಿಕಾರಿಗಳು ಅದೇ ಅಭಿಪ್ರಾಯ ಕೊಟ್ಟದ್ದರಿಂದ, ಸರಕಾರಿ ವಲಯದಲ್ಲಿ ಮಾಹಿತಿ ಹಕ್ಕಿನ ಕುರಿತು ಏನು ಅಭಿಪ್ರಾಯ ಇದೆ ಎನ್ನುವುದಕ್ಕೆ ಇದನ್ನು ಹೇಳಿದೆ. ಮಾಹಿತಿ ಹಕ್ಕು ಅಧಿಕಾರಿಗಳ ಬಾಲ ತಿರುಚಲು ಜನಸಾಮಾನ್ಯರ ಕೈಗೆ ಸಿಕ್ಕ ಅತ್ಯುತ್ತಮ ಅಸ್ತ್ರವಾಗಿಬಿಟ್ಟಿದೆ. ಹಾಗಾಗಿ ಇಷ್ಟು ವರ್ಷ ಪ್ರಶ್ನೆ ಮಾಡುವವರೇ ಇಲ್ಲದೆ, ದರ್ಬಾರು ಮಾಡಿಕೊಂಡೇ ಕಾಲ ಕಳೆದ ಅನೇಕ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಎಂದರೆ ಮುಖ ಗಂಟಾಗುತ್ತದೆ, ಬಿಪಿ ಏರುತ್ತದೆ. ಜನಸಾಮಾನ್ಯರು ಮಾತ್ರ ಮೀಸೆಯೊಳಗೇ ನಗುತ್ತ, ಈ ಅಸ್ತ್ರವನ್ನು ದುರುಪಯೋಗವೋ ಮತ್ತೊಂದೋ ನೋಡದೆ ಅಧಿಕಾರಿಗಳ ಮೇಲೆ ಪ್ರಯೋಗಿಸುತ್ತಲೇ ಇದ್ದಾರೆ. ( ಬಾಲ ತಿರುಚುವುದು: ಮಲಗಿರುವ ದನ, ಎಮ್ಮೆಗಳನ್ನು ಎಬ್ಬಿಸಲು ಪ್ರಯೋಗಿಸುವ ಸುಲಭ ಉಪಾಯ. ಬಾಲ ಹಿಡಿದು ತಿರುಪಿದರೆ ಅವಕ್ಕೆ ಪಾಪ, ಅಸಾಧ್ಯ ನೋವಾಗುತ್ತದೆ. ಕೂಡಲೇ ಎದ್ದು ನಿಲ್ಲುವುದು ಅನಿವಾರ್ಯವಾಗುತ್ತದೆ.)

ನನ್ನ ಅರ್ಜಿಯ ಕುರಿತಂತೆ ಆಯೋಗದ ಎದುರು ವಿಚಾರಣೆಗೆ ಇದ್ದದ್ದು ಅರ್ಜಿದಾರರಿಗೆ ಕೇಳಿದ ಮಾಹಿತಿ ಕೊಡಲಾಗಿದೆಯೇ ಇಲ್ಲವೇ ಎಂಬ ಪ್ರಶ್ನೆ. ಕಾಮಗಾರಿ ಈಗಾಗಲೇ ಶುರುವಾಗಿದೆ ಎಂಬುದಕ್ಕೆ ನನ್ನ ಹತ್ತಿರ ದಾಖಲೆ ಇತ್ತು. ಆ ದಾಖಲೆಯದೇ ಒಂದು ಕಥೆ. ಚುಟುಕಾಗಿ ಹೇಳಿಬಿಡುತ್ತೇನೆ: ಎಸ್. ಇ. ಜಡ್. ಕಂಪೆನಿಯವರು ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕೆಲಸ ಶುರು ಮಾಡಿದಾಗ ನಾವು ಕೆಲವರು ಅಲ್ಲಿ ಹೋಗಿ ನೋಡಿ ಬಂದಿದ್ದೆವು. ನದಿಯ ದಂಡೆಯ ಈ ಜಾಗದಲ್ಲಿ ಮರ ಕಡಿದಿರುವುದನ್ನೇ ಹಿಡಿದು ನಾನು ಅರಣ್ಯ ಇಲಾಖೆಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಕೊಟ್ಟಿದ್ದೆ. ಅವರ ಉತ್ತರದಲ್ಲಿ "ಅದು ಸರಕಾರಕ್ಕೆ ಸೇರಿದ ಭೂಮಿ" ಎಂದಿತ್ತು. ನಾನು ಅಲ್ಲಿಗೆ ಬಿಡದೆ ಬಂಟವಾಳದ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದೆ. ಅವರೂ ಸಹ ಆ ಭೂಮಿ ಸರಕಾರದ್ದೇ ಎಂದರು. ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಸ್. ಇ. ಜಡ್. ಕಂಪೆನಿ ಹೌದೆಂದೂ ಹೇಳಿದರು. ಕಾಮಗಾರಿ ಶುರುವಾಗಿರುವುದಕ್ಕೆ ಆಧಾರವಾಗಿ ಮಾಹಿತಿ ಹಕ್ಕು ಆಯೋಗದ ಎದುರು ನಾನು ಅದೇ ದಾಖಲೆಯನ್ನಿಟ್ಟಿದ್ದೆ.

ತಹಸೀಲ್ದಾರರಿಗೆ ಕೊಟ್ಟ ಈ ಅರ್ಜಿಯ ಬಗ್ಗೆ ಒಂದು ಹಂತದಲ್ಲಿ ನಾನು ಮಂಗಳೂರಿನ ಅಸಿಸ್ಟೆಂಟ್ ಕಮಿಷನರ್ ರವರಿಗೆ ಮೇಲ್ಮನವಿ ಸಲ್ಲಿಸಿದ್ದೆ. ದೂರು ವಿಚಾರಣೆಗೆ ಬಂದಾಗ, "ತಹಸೀಲ್ದಾರರಿಗೆ ದಂಡ ವಿಧಿಸಬೇಕು" ಎಂದು ನಾನು ಸಹಾಯಕ ಕಮಿಷನರ್ ಹತ್ತಿರ ವಿನಂತಿಸಿದೆ. ಅದಕ್ಕವರು "ದಂಡ ವಿಧಿಸಿದರೆ ತಹಸೀಲ್ದಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಷ್ಟೇ" ಎಂದು ಉತ್ತರಿಸಿದ್ದರು! ಅದಾದ ಕೆಲವೇ ಸಮಯದಲ್ಲಿ ಈ ತಹಸೀಲ್ದಾರರು ಲಂಚ ತೆಗೆದುಕೊಂಡರೆಂಬ ಕಾರಣಕ್ಕೆ ಲೋಕಾಯುಕ್ತ ಪೋಲೀಸರು ಅವರನ್ನು ಬಂಧಿಸಿದರು. ದೇವರು ದೊಡ್ಡವನು. ಈವರೆಗೂ ಯಾವ ದುರದೃಷ್ಟಕರ ಸುದ್ದಿಯೂ ಬಂದಿಲ್ಲ.

ದಾರಿ ತಪ್ಪಿತು, ಕ್ಷಮಿಸಿ. ಮಾಹಿತಿ ಹಕ್ಕು ಆಯುಕ್ತರು ವಿಚಾರಣೆ ನಡೆಸಿ, ನಾನು ಕೇಳಿದ ಮಾಹಿತಿಯನ್ನು ಕೊಡುವಂತೆ ಹಾಸನದ ಜಲಮಾಪನ ವಿಭಾಗಕ್ಕೆ ನಿರ್ದೇಶಿಸುವ ತೀರ್ಪು ಬರೆಸಿದರು.(ಅದರ ಪ್ರತಿ ಇನ್ನೂ ನನ್ನ ಕೈಗೆ ಬಂದಿಲ್ಲ). "ನೀವು ಸರಕಾರಿ ಆಜ್ಞೆಗೆ ಸಹಿ ಹಾಕಿರುವ ಅಧಿಕಾರಿಗೇ ನೇರವಾಗಿ ಅರ್ಜಿ ಸಲ್ಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ" ಎಂದು ಮಾಹಿತಿ ಹಕ್ಕು ಆಯುಕ್ತರು ನನಗೆ ಹೇಳಿದರು. ಅದೂ ಸರಿಯೇ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಅವರಿಗೆ ಈ ವಿಷಯ ಸಂಬಂಧಪಟ್ಟಿದೆ ಎಂದು ನಾನು ನನ್ನಷ್ಟಕ್ಕೆ ತಿಳಿದದ್ದು ತಪ್ಪಾಯಿತು. ವಾಸ್ತವವಾಗಿ ಅದೂ ಪೂರ್ತಿ ತಪ್ಪಲ್ಲ. ಆ ಜವಾಬ್ದಾರಿ ಮೊದಲು ಮಂಗಳೂರಿನವರಿಗೇ ಇತ್ತಂತೆ. ಇತ್ತೀಚೆಗೆ ಆಡಳಿತದ ಕಾರಣಕ್ಕೋ ಮತ್ತಾವುದೋ ಕಾರಣಕ್ಕೋ ಆ ಜವಾಬ್ದಾರಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ವರ್ಗಾಯಿಸಿದ್ದಾರಂತೆ.

ಈ ನಡುವೆ ನನಗೆ ಸಿಕ್ಕಿದ ಒಂದು ಅನಧಿಕೃತ ಮಾಹಿತಿಯ ಪ್ರಕಾರ, ಅಂಥ ಯಾವುದೇ ಒಪ್ಪಂದವೂ ಈವರೆಗೆ ಆಗಿಲ್ಲವಂತೆ! ನೋಡೋಣ, ಪ್ರಕರಣ ಎಲ್ಲಿಗೆ ಮುಟ್ಟುತ್ತದೆ ಎಂದು.

ಶುಕ್ರವಾರ, ಆಗಸ್ಟ್ 5, 2011

ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?

ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ "ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ" ಎಂಬ ಸುದ್ದಿಗಳು ಪ್ರಕಟವಾದವು. "ವಂಶ" ಪತ್ರಿಕೆಯ ಮಿತ್ರರನ್ನು "ನಮ ಒರ ಪೋದು ತೂದು ಬರ್ಕನ?" (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ.
ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.
ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ.
ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.
ಹಿನ್ನೆಲೆ:
2007 ರಲ್ಲಿಯೇ ಕರ್ನಾಟಕ ಸರ್ಕಾರ ಎಮ್ ಎಸ್ ಇ ಜಡ್ ಕಂಪೆನಿಗೆ "ನೇತ್ರಾವತಿ ಹಾಗೂ ಗುರುಪುರ ನದಿಗಳ ಮೇಲೆ ಗುರುತಿಸಲಾಗಿರುವ ಸ್ಥಳಗಳಲ್ಲಿ 4 ಬ್ಯಾರೇಜ್ ಗಳನ್ನು ನಿರ್ಮಿಸುವ ಮೂಲಕ ಸೂಕ್ತವಾಗಿ ನೀರನ್ನು ಸಂಗ್ರಹಿಸಿ ದಿನಂಪ್ರತಿ 15 ಎಂಜಿಡಿ ನೀರನ್ನು ಬಳಸಲು" 19 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಸರಕಾರ ನೀಡಿರುವ ಈ ಅನುಮತಿಯ ಆಧಾರದಲ್ಲಿಯೇ ಈಗ ಕಂಪೆನಿಯು ಕಾಮಗಾರಿಯನ್ನು ಪ್ರಾರಂಭಿಸಿದೆ ಎಂಬುದು ಸ್ಪಷ್ಟ. ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಕಾಮಗಾರಿ ಪ್ರಾರಂಭಿಸುವ ಮುನ್ನ ಸರಕಾರ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಪಾಲಿಸಿದೆಯೇ ಇಲ್ಲವೇ, ಒಂದು ವೇಳೆ ಇಲ್ಲದಿದ್ದರೆ, ಈ ಷರತ್ತುಗಳು ಅನುಷ್ಠಾನವಾಗುವಂತೆ ಮಾಡಬೇಕಾದ ಜವಾಬ್ದಾರಿ ಯಾರದ್ದು, ಅವರು ಏನು ಮಾಡುತ್ತಿದ್ದಾರೆ ಎನ್ನುವುದು.
ಅನುಷ್ಠಾನದ ದುರಂತ ಕತೆ
ಸರಕಾರ ಷರತ್ತುಗಳನ್ನೇನೋ ವಿಧಿಸಿದೆ. ಅದನ್ನು ಕಂಪೆನಿ ಪಾಲಿಸಬೇಕು, ಪಾಲಿಸುತ್ತದೆ ಎನ್ನುವುದು ಸಾಮಾನ್ಯ ತಿಳುವಳಿಕೆ. ಒಂದು ವೇಳೆ ಪಾಲಿಸದಿದ್ದರೆ? ಪಾಲಿಸದಿದ್ದರೆ, ಅಂತಿಮವಾಗಿ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರಜೆಗಳದ್ದೇ. ಏಕೆಂದರೆ ಅಂತಿಮವಾಗಿ ಪೆಟ್ಟು ತಿನ್ನುವವರು ಅವರೇ. ಆದರೂ, ಸರಕಾರ ಎಂಬ ಒಂದು ವ್ಯವಸ್ಥೆ ಇದೆ, ಅಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಧಿಕಾರಿಗಳನ್ನು ಸಂಬಳ ಕೊಟ್ಟು ನೇಮಿಸಲಾಗಿದೆ ಎಂಬುದರಿಂದ ಈ ಅಧಿಕಾರಿಗಳು ಹೇಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಲೇಬೇಕು.
2010 ರ ಸೆಪ್ಟೆಂಬರಿನಲ್ಲಿಯೋ ಏನೋ ಪತ್ರಿಕೆಗಳಲ್ಲಿ ಎಮ್ ಎಸ್ ಇ ಜಡ್ ನೇತ್ರಾವತಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿಗಾಗಿ ಟೆಂಡರು ಕರೆದಿತ್ತು. ಟೆಂಡರು ಕರೆಯುವುದೆಂದರೆ ಪೂರ್ವಭಾವಿ ತಯಾರಿಗಳು ಮುಗಿದಿವೆ ಎಂದೇ ಅರ್ಥ. ಸರಕಾರ ವಿಧಿಸಿದ 19 ಷರತ್ತುಗಳಲ್ಲಿ ಮುಖ್ಯವಾಗಿ ಮೂರು ಷರತ್ತುಗಳನ್ನು ನೋಡೋಣ:
1. ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು
2. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು. (ಇಲ್ಲಿ ಕುಮಾರಧಾರಾ ಅಲ್ಲ, ಗುರುಪುರ ನದಿ ಎಂದಾಗಬೇಕು)
3. ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು.
ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ: ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು
ಮಂಗಳೂರು ವಿ. ಆ. ವ. ಕಂಪೆನಿ ತನ್ನನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡಬೇಕೆಂದು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿ ತತ್ಕಾಲಕ್ಕೆ ತನ್ನ ವ್ಯವಹಾರಗಳನ್ನು ನಿಗೂಢವಾಗಿ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದರಿಂದಾಗಿ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವುದು ನನಗೆ ಅನಿವಾರ್ಯವಾಯಿತು.ನಾನು ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದೆ. ಏನು ಬರೆದರೂ, ಹೇಗೆ ಬರೆದರೂ ಅವರದ್ದು ಒಂದೇ ಹಟ: "ಕಂಪೆನಿ ಇಲ್ಲಿಯವರೆಗೂ ನಮ್ಮಿಂದ ಅನುಮತಿ ಕೇಳಿಲ್ಲ. ಅದು ಕೇಳಲಿ, ಆಗ ಅದನ್ನು ನಾವು ಪರಿಶೀಲಿಸುತ್ತೇವೆ". ಇಂಥ ಹೋರಾಟಗಳಲ್ಲಿ ನನಗಿಂತಲೂ ಆಳವಾಗಿ ತೊಡಗಿಕೊಂಡಿರುವ ಮಿತ್ರರೊಬ್ಬರ ಹತ್ತಿರ ಏನು ಮಾಡಬಹುದೆಂದು ಚರ್ಚಿಸಿದೆ. ಅವರೆಂದರು: "ಇಲಾಖೆಯಲ್ಲಿ ನಾನಿದ್ದರೆ ನಾನೂ ನಿಮಗೆ ಹಾಗೇ ಉತ್ತರಿಸುತ್ತಿದ್ದೆ". (ಸುಬ್ರಹ್ಮಣ್ಯದ ಪ್ರಕರಣದಲ್ಲಿ ನಾನು ಹೋರಾಟವನ್ನು ಅರ್ಧಕ್ಕೆ ಬಿಟ್ಟೆನೆಂದು ಅವರಿಗೆ ಅನ್ನಿಸಿರಬೇಕು. ಕೋರ್ಟಿಗೆ ಹೋಗಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುವವರೆಗೂ ಬಿಡಬಾರದು ಎಂಬುದು ಅವರ ದೃಷ್ಟಿಕೋನ. ನನಗೆ ಕೋರ್ಟಿನ ವ್ಯವಹಾರದ ಬಗ್ಗೆ ಭಯಂಕರ ಜಿಗುಪ್ಸೆ; ಅಷ್ಟೇ ಅಲ್ಲ, ವಕೀಲರಿಗೆ ಸುರಿಯಲು ನನ್ನ ಹತ್ತಿರ ಹಣವೂ ಇಲ್ಲ. ಇತ್ತ ಮರಗಳೇ ನಾಶವಾದ ಮೇಲೆ ಯಾರಿಗೆ ಶಿಕ್ಷೆಯಾಗಿ ಏನು ಪ್ರಯೋಜನ?) ನನಗೆ ಆ ಕ್ಷಣಕ್ಕೆ ಹೋರಾಟದ ಉತ್ಸಾಹ ಉಡುಗಿತು. ಕ್ರಮೇಣ, "ನನ್ನ ದಾರಿ ನನಗೆ" ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ನನ್ನ ಪರಿಚಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಹತ್ತಿರ ಸಮಸ್ಯೆಯನ್ನು ಹೇಳಿ ಪ್ರಶ್ನೆ ಇಟ್ಟೆ: "ಇಂಥ ಪ್ರಕರಣಗಳಲ್ಲಿ ನಾನು ಕೊಟ್ಟ ಮಾಹಿತಿಯ ಆಧಾರದಲ್ಲಿ ಇಲಾಖೆ ಸ್ವಯಂಪ್ರೇರಿತವಾಗಿ ಮುಂದುವರಿಯುವುದು ಸಾಧ್ಯವಿಲ್ಲವೆ?" "ಸಾಧ್ಯ" ಎಂದರು ಅವರು. ಮನಸ್ಸಿಗೆ ಧೈರ್ಯವಾಯಿತು.
ಆರಣ್ಯ ಇಲಾಖೆಗೆ ಕೊಟ್ಟ ದೂರಿನ ಪರಿಣಾಮ: ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ!
ಇಲಾಖೆಯೊಂದಿಗೆ ನನ್ನ ತಕರಾರು ಮುಂದುವರಿಯುತ್ತಿದ್ದಂತೆ, ಪತ್ರಿಕೆಗಳಲ್ಲಿ "ಎಂ ಎಸ್ ಇ ಜಡ್ ಕಂಪೆನಿಯ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ" ಎಂಬ ಸುದ್ದಿ ಪ್ರಕಟವಾಯಿತು. ಮೊದಲೇ ವಿವರಿಸಿದಂತೆ ಸ್ಥಳಕ್ಕೆ ಹೋಗಿ ನೋಡಿಬಂದು ಬಂಟ್ವಾಳದ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದೆ. ಜೊತೆಗೆ ಪತ್ರಿಕಾವರದಿಯನ್ನೂ ಇಟ್ಟಿದ್ದೆ. ಅವರಿಂದ ಉತ್ತರ ಬಂತು:".... ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಸರಕಾರಿ ಜಾಗದಿಂದ ಅನುಮತಿ ಇಲ್ಲದೆ ಸಣ್ಣಪುಟ್ಟ ಗಿಡಮರಗಳನ್ನು ಕಡಿದಿರುವ ಬಗ್ಗೆ ಶ್ರೀ ಸೀತಾರಾಮ ಶೆಟ್ಟಿ..... ಇವರ ವಿರುದ್ಧ..... ತಕ್ಷೀರು ದಾಖಲಿಸಲಾಗಿದೆ"
ಕಾಮಗಾರಿ ನಡೆಸುತ್ತಿರುವುದು ಮಂ ವಿ ಆ ವ ಕಂಪೆನಿ ಎಂಬುದಕ್ಕೆ ನಾನು ಸಾಕ್ಷಿ ಒದಗಿಸಿದ್ದರೂ, ತಕ್ಷೀರು ಬಿದ್ದದ್ದು ಸೀತಾರಾಮ ಶೆಟ್ಟರ ಮೇಲೆ. ಇರಲಿ. ಅದನ್ನು ಮುಂದೆ ನೋಡೋಣ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು "ಸಣ್ಣ ಪುಟ್ಟ ಗಿಡಮರಗಳ್ನ್ನು ಕಡಿಯಲಾಗಿದೆ" ಎಂದು ಸ್ವತಃ ಅರಣ್ಯಾಧಿಕಾರಿಯೇ ಹೇಳುತ್ತಿರುವುದು! ಯಾವ ಆಧಾರದಲ್ಲಿ ಅವರಿದನ್ನು ಹೇಳುತ್ತಿದ್ದಾರೆ? ಆ ಸ್ಥಳದಲ್ಲಿ ದೊಡ್ದ ಮರಗಳಿದ್ದು ಅವುಗಳನ್ನು ಯಾರಾದರೂ ಅಲ್ಲಿಂದ ಸಾಗಿಸಿರಬಾರದು ಯಾಕೆ? ಈ ಬಗ್ಗೆ ತನಿಖೆಯನ್ನು ಯಾರು ಮಾಡಿದ್ದಾರೆ? ಯಾರ ಮೇಲೆ ತಕ್ಷೀರು ದಾಖಲಿಸಿದ್ದಾರೋ ಅವರು "ಸಣ್ಣ ಪುಟ್ಟ ಗಿಡಮರಗಳನ್ನು ಕಡಿದಿದ್ದಾರೆ" ಎಂದು ಹೇಳುವ ಮೂಲಕ ಅವರು ಅಂಥಾ ದೊಡ್ಡ ಅಪರಾಧವನ್ನೇನೂ ಮಾಡಿಲ್ಲ ಎಂದು ಸೂಚಿಸಿ, ತಮ್ಮನ್ನೂ, ಯಾರಮೇಲೆ ತಕ್ಷೀರು ದಾಖಲಾಗಿದೆಯೋ ಅವರನ್ನೂ ಏಕಕಾಲದಲ್ಲಿ ರಕ್ಷಿಸಿಕೊಳ್ಳುವ ಉಪಾಯವಾಗಿ ಇದು ಕಾಣುವುದಿಲ್ಲವೆ?.
ಇನ್ನು "ಕಡಿಯಲಾಗಿದೆ" ಎಂದರೇನರ್ಥ? ನಾವು ತೆಗೆದ ಫೋಟೋಗಳು ಸ್ಪಷ್ಟವಾಗಿ ತೋರಿಸುತ್ತಿವೆ ಅಲ್ಲಿ ಜೆಸಿಬಿ ಬಳಸಿ ಮರಗಳನ್ನು ಬೇರು ಸಮೇತ ಮಗುಚಲಾಗಿದೆ ಎಂಬುದನ್ನು. ಅಲ್ಲಿ ಜೆಸಿಬಿ ಕಾರ್ಯಾಚರಿಸುತ್ತಿರುವುದನ್ನು ಮುಚ್ಚಿ ಹಾಕಲು "ಕಡಿಯಲಾಗಿದೆ" ಎಂಬ ಶಬ್ದವನ್ನು ಅಧಿಕಾರಿ ಬಳಸುತ್ತಿದ್ದಾರೆಯೆ? ಏಕೆಂದರೆ ಕಡಿಯಲಾಗಿದೆ ಎಂದರೆ ಯಾವ ರಗಳೆಯೂ ಇಲ್ಲ. ಜೆಸಿಬಿ ಬಳಸಿ ಉರುಳಿಸಲಾಗಿದೆ ಎಂದರೆ ಜೆಸಿಬಿ ಯಾರದ್ದು, ಅದು ಸ್ಥಳದಲ್ಲಿ ಇತ್ತೆ, ಅದನ್ನು ಯಾಕೆ ಜಪ್ತು ಮಾಡಲಿಲ್ಲ ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕಾಗುತ್ತದೆ. ಕಡಿಯಲಾಗಿದೆ ಎಂದು ಬಿಟ್ಟರೆ ಆ ರಗಳೆಯೇ ಇಲ್ಲ ತಾನೆ?

ಇನ್ನು "ತಕ್ಷೀರಿ"ನ ಕತೆ ಏನು? ತಕ್ಷೀರು ಹಾಕಿಸಿಕೊಂಡ ಶ್ರೀ ಸೀತಾರಾಮ ಶೆಟ್ಟರನ್ನು ನಾನು ಮಾತಾಡಿಸಿದೆ. ಅವರು ಕೃಷಿಕರು, ಜೊತೆಗೆ ಕಾಂಗ್ರೆಸ್ ಪಕ್ಷದವರು. ರಾಜಕೀಯದಲ್ಲಿ ನುರಿತವರು. ಅವರ ಮನೆ ಅಲ್ಲೇ ಹತ್ತಿರ ಇದೆಯಂತೆ. "ತಕ್ಷೀರಿ"ಗೆ ಅವರ ವಿವರಣೆ ಹೀಗೆ: "ಅಲ್ಲಿ ಮರಗಳನ್ನು ಕಡಿದಿದ್ದೇನೆ ಎಂದು ನನಗೆ ದಂಡ ಹಾಕುತ್ತಾರೆ. (ನಾನು ಒಂದು ಮರವನ್ನೂ ಕಡಿಯಲಿಲ್ಲ.) ಅಷ್ಟನ್ನು ನಾನು ಕಟ್ಟಬೇಕು. ನಂತರ ಫೈಲು ಮೇಲೆ ಡಿ ಎಫ್ ಓಗೆ ಹೋಗುತ್ತದೆ. ಅಲ್ಲಿ ಅವರು "ದಂಡ ಹಾಕಿದ್ದು ಕಡಿಮೆಯಾಯಿತು" ಅಂತ ಹೇಳಿ ಸ್ವಲ್ಪ ಜಾಸ್ತಿ ದಂಡ ಹಾಕುತ್ತಾರೆ. ಅಷ್ಟು ದಂಡ ಕಟ್ಟಿದರಾಯಿತು". ಇಷ್ಟಾದರೆ ತಕ್ಷೀರಿನ ಕತೆ ಮುಗಿಯಿತು! ಉರುಳಿದ ಮರಗಳ ಕತೆ ಏನು? ಬದಲಿಗೆ ಬೇರೆ ಸಸಿಗಳನ್ನು ಎಲ್ಲಿಯಾದರೂ ನೆಡುತ್ತಾರೆಯೆ? ಯಾರು ಕೇಳುವವರು? ( ಈ ಪ್ರಕರಣದಲ್ಲಿ ನಾನು ಕೇಳಿದ್ದೇನೆ. ನೋಡೋಣ ಏನು ಉತ್ತರ ಬರುತ್ತದೋ ಅಂತ)
ಕಾಣದ ಕೈಯ ಕಾರುಭಾರು?
ಪತ್ರಿಕಾವರದಿ ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಂ ಎಸ್ ಇ ಜಡ್ ಕಂಪೆನಿ ಎಂದು ಸ್ಪಷ್ಟವಾಗಿಯೇ ಹೇಳಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ಸ್ವಲ್ಪ ಸ್ಥಳ ಪರಿಶೀಲನೆ ಮಾಡಿದ್ದರೆ, ಮರ ಉರುಳಿಸಿರುವುದಲ್ಲದೆ, ಬಂಡೆಗಳನ್ನು (ಬಹುಶಃ ಡೈನಮೈಟ್ ಬಳಸಿ) ಒಡೆದಿರುವುದು, ಯಂತ್ರಗಳ ಮೂಲಕ ಹೊಳೆಯ ಬದಿಯಲ್ಲಿ ಗುಂಡಿ ತೆಗೆಯುತ್ತಿರುವುದು ಇದೆಲ್ಲ ಕಂಡೇ ಕಾಣುತ್ತಿತ್ತು.



ಸೀತಾರಾಮ ಶೆಟ್ಟರಂಥ ರೈತರೊಬ್ಬರು ನಡೆಸಿರುವ ಕಾರುಭಾರು ಇದಲ್ಲ ಎಂದು ಯಾರಿಗೂ ಅರ್ಥವಾಗುವಂತಿತ್ತು. ನಮ್ಮ ಅರಣ್ಯ ಅಧಿಕಾರಿಗಳಿಗೆ, ಪಾಪ, ಇದ್ಯಾವುದೂ ಕಾಣಲೇ ಇಲ್ಲ! ಯಾವ ಶಕ್ತಿ ಇದೆಲ್ಲ ಕಾಣದಂತೆ ಅವರ ಕಣ್ಣು ಕಟ್ಟಿತೋ? ಇದನ್ನೆಲ್ಲ ನೋಡದಂತೆ ಅವರನ್ನು ತಡೆಹಿಡಿಯಿತೋ? ಸೀತಾರಾಮ ಶೆಟ್ಟರ ಮೇಲೆ ತಕ್ಷೀರು ಬಿತ್ತೇ ಬಿತ್ತು.
ವೃಕ್ಷವನು ಕಡಿದವನು ಭಿಕ್ಷೆಯನು ಬೇಡುವನು
ಇದೊಂದು ಅರಣ್ಯ ಇಲಾಖೆಯ ನುಡಿಮುತ್ತು. ಎಂ ಎಸ್ ಇ ಜಡ್ ಕಂಪೆನಿ ತನ್ನ ಪೈಪ್ ಲೈನ್ ಕಾಮಗಾರಿಗಾಗಿ ಮರಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದೂ, ಮರಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದೂ ನಾನು ಸಾಕಷ್ಟು ಮೊದಲೇ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೆ. ಸಾಕಷ್ಟು ಪತ್ರಗಳನ್ನು ಬರೆದಿದ್ದೆ. ಕಂಪೆನಿ ಕರೆದಿದ್ದ ಟೆಂಡರಿನ ಪ್ರತಿ, ಅದು ಪೈಪುಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರುವುದರ ದಾಖಲೆ ಇದೆಲ್ಲವನ್ನೂ ಅವರ ಗಮನಕ್ಕೆ ತಂದಿದ್ದೆ. ಇಷ್ಟು ಮಾಡಿದ್ದಕ್ಕೆ ಇಲಾಖೆ ನನ್ನನ್ನು ಅಭಿನಂದಿಸಲು ಮರೆಯಲಿಲ್ಲ. ಆದರೆ ಮಾಡಬೇಕಾದ ಕೆಲಸ ಮಾತ್ರ ಮಾಡಲಿಲ್ಲ. ದೇಶದ ದುರದೃಷ್ಟ, ಅಧಿಕಾರಿಗಳಿಗೆ ಮರಗಳ ರಕ್ಷಣೆಗಿಂತ ಇಲಾಖೆಯ ಪ್ರತಿಷ್ಠೆಯ ರಕ್ಷಣೆ ಹೆಚ್ಚು ಮುಖ್ಯವಾಯಿತು. ಹೀಗಾಗಿ ಬೊಳ್ಳಾಜೆಯ ಹಲವು ಮರಗಳು ಅಕಾಲ ಮರಣಕ್ಕೀಡಾದವು. ಅರಣ್ಯ ಅಧಿಕಾರಿಗಳ ಪ್ರತಿಷ್ಠಾಪೂಜಕ ನಿಲುವೇ ಈ ಮರಗಳ ಸಾವಿಗೆ ನೇರ ಕಾರಣ ಹೊರತು ಬೇರೇನೂ ಅಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಭಿಕ್ಷೆ ಬೇಡಬೇಕಾದವರು ಯಾರು ಎಂದು ಅವರೇ ತೀರ್ಮಾನಿಸಲಿ.ಇನ್ನು ಮುಂದೆ ಕಂಪೆನಿ ನಾಶ ಮಾಡಲಿರುವ ಮರಗಳನ್ನಾದರೂ ಉಳಿಸಲು ಕ್ರಮ ಕೈಗೊಂಡು ತಮ್ಮ ನುಡಿಮುತ್ತಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲಿ
ಸಣ್ಣ ನೀರಾವರಿ ವಿಭಾಗ ಎಂಬ ಚಂಡಿ ಕಂಬಳಿ
ಅರಣ್ಯ ಇಲಾಖೆಯ ಕತೆ ಹೀಗಾದರೆ ಸಣ್ಣ ನೀರಾವರಿಯದು ಇನ್ನೊಂದೇ ಕತೆ. ಪೈಪ್ ಲೈನ್ ಕಾಮಗಾರಿಯ ಕುರಿತಂತೆ ಬಹು ಮುಖ್ಯ ಜವಾಬ್ದಾರಿ ಇರುವುದು ಇದೇ ಇಲಾಖೆಗೆ. ಏಕೆಂದರೆ ಸರಕಾರಿ ಆದೇಶ ಸ್ಪಷ್ಟವಾಗಿ ಹೇಳುತ್ತದೆ: "ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು"
ನಾನು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಅಭಿಯಂತರರಿಗೆ ("ಅಭಿಯಂತರ" ಎಂದು ಬರೆಯುವಾಗೆಲ್ಲ ನನಗೆ "ಬೆಂತರ" ಶಬ್ದ ನೆನಪಾಗುತ್ತದೆ. ಬೆಂತರ ಎಂದರೆ ಭೂತ. ನಿಜವಾಗಿ ಅಭಿಯಂತ ಎಂದಿರಬೇಕಾದ್ದನ್ನು ನಮ್ಮ ಅಧಿಕಾರಿಗಳು ಅಭಿಯಂತರ ಮಾಡಿಕೊಂಡಿದ್ದಾರೆ! ನನ್ನ ಅಭ್ಯಂತರ ಇಲ್ಲ ಅನ್ನಿ.) ಮಾಹಿತಿ ಹಕ್ಕಿನಲ್ಲಿ ಅರ್ಜಿ ಕೊಟ್ಟೆ: "ಸರಕಾರಿ ಆದೇಶ ಹೀಗೆ ಹೇಳುತ್ತಿದೆ; ನೀವು ಎಂ ಎಸ್ ಇ ಜಡ್ ನೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಮುಚ್ಚಳಿಕೆ ಬರೆಸಿಕೊಂಡಿದ್ದೀರಾ? ಏಕೆಂದರೆ ಕಾಮಗಾರಿ ಪ್ರಾರಂಭವಾಗಿಬಿಟ್ಟಿದೆ" ಅಲ್ಲಿಂದ ಉತ್ತರ ಬಂತು: "... ಮಂಗಳೂರು ಎಸ್ ಇ ಜಡ್ ಕಂಪೆನಿಯೊಂದಿಗೆ ಈ ವಿಭಾಗದಿಂದ ಯಾವುದೇ ಕರಾರನ್ನು ಕೈಗೊಂಡಿರುವುದಿಲ್ಲ. ಹಾಗೂ ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಾರದಿರುವ ಕಾರಣ ಈ ವಿಷಯದಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ"
ನಿಮ್ಮ ಹೆಚ್ಚಿನ ಪತ್ರಗಳಿಗೆ ಇಲಾಖೆಯಿಂದ ಇಂಥ ಉತ್ತರ ಬರದಿದ್ದರೆ ಅದು ಸರಕಾರಿ ಇಲಾಖೆಯೇ ಅಲ್ಲ! "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀವು ಅಲ್ಲಿ ಹೋಗಿ, ಇಲ್ಲಿ ಕೇಳಿ" ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳೇ ನಮ್ಮ ಎಲ್ಲ ಸರಕಾರಿ ಕಚೇರಿಗಳಲ್ಲಿ ತುಂಬಿ ಹೋಗಿದ್ದಾರೆ. ಇದನ್ನು ತಿಳಿದೇ ಮಾಹಿತಿ ಹಕ್ಕು 2005 ಕಾನೂನು "ಅರ್ಜಿಯು ನಿಮಗೆ ಸಂಬಂಧಪಡದೆ ಇದ್ದಲ್ಲಿ ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಎಂದು ವಿಧಿಸಿ ಇಂಥ ಅಧಿಕಾರಿಗಳ ಹೆಡೆಮುರಿ ಕಟ್ಟಿದೆ. ಆದರೆ ಹೆಚ್ಚಿನ ಅಧಿಕಾರಿಗಳಿಗೆ, ಅವರು ಯಾವ ಮಟ್ಟದ ಅಧಿಕಾರಿಯೇ ಆಗಿರಲಿ, ಈ ನಿಯಮದ ಅರಿವೇ ಇಲ್ಲ.
ಸಣ್ಣ ನೀರಾವರಿ ವಿಭಾಗಕ್ಕೆ ಸರಕಾರದ ಅದೇಶವನ್ನು ಉದ್ಧರಿಸಿ ಪುನಃ ಬರೆದೆ: "ನಿಮಗೆ ಸಂಬಂಧಪಡದಿದ್ದರೆ ಯಾರಿಗೆ ಸಂಬಂಧ ಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ. ನೀವು ಹಾಗೆ ಮಾಡದಿದ್ದಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಕೊಡುವುದು ನನಗೆ ಅನಿವಾರ್ಯವಾಗುತ್ತದೆ. ನಿಮ್ಮ ಉತ್ತರಕ್ಕಾಗಿ ಇನ್ನೂ ಹತ್ತು ದಿನಗಳು ಕಾಯುತ್ತೇನೆ" ಎಂದು.
ಈ ಲೇಖನ ಬರೆಯುತ್ತಿದ್ದಂತೆ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರರ ಉತ್ತರ ಬಂದಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗದ ಕಾರ್ಯಕಾರಿ ಎಂಜಿನಿಯರರಿಗೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ನನಗೆ ಹೀಗೆ ಸಲಹೆ ನೀಡಿದ್ದಾರೆ: "... ಈ ಕಛೇರಿಗೆ ವಿಷಯವು ಯಾವ ಕಛೇರಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಿಖರವಾಗಿ ತಿಳಿದಿರದ ಕಾರಣ ಜಲಸಂಪನ್ಮೂಲ ಇಲಾಖೆಯೊಡನೆ ಸಂಪರ್ಕಿಸುವಂತೆ ಕೋರಿದೆ".
"ನಮಗೆ ಗೊತ್ತಿಲ್ಲ, ನಮ್ಮನ್ನು ಕೇಳಬೇಡಿ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಓ ಅಗೋ ಅವರನ್ನು ಕೇಳಿನೋಡಿ" ಇಂಥ ಉತ್ತರಗಳು ನಮ್ಮ ಅಧಿಕಾರಿಗಳಿಗೆ ರಕ್ತಗತವಾಗಿ ಹೋಗಿರುವುದಕ್ಕೆ ಮತ್ತೊಂದು ಉದಾಹರಣೆ ಇದು. ಗೊತ್ತಿಲ್ಲ ಸರಿ. ತಿಳಿದುಕೊಳ್ಳಲು ಸಾಧ್ಯವಿಲ್ಲವೆ? ಮಂಗಳೂರಿನ ಕಾರ್ಯಕಾರಿ ಎಂಜಿನಿಯರರ ಕಛೇರಿಯಲ್ಲಿ ಫೋನ್ ಸೌಲಭ್ಯ ಇಲ್ಲವೆ? (ಈಗಂತೂ ಸರಕಾರವೇ ತನ್ನ ಹಲವು ಅಧಿಕಾರಿಗಳಿಗೆ ಮೊಬೈಲ್ ಫೋನ್ ಸೌಲಭ್ಯ ಒದಗಿಸಿರುವುದಾಗಿ ಕೇಳಿದ್ದೇನೆ). ತಮ್ಮದೇ ಇಲಾಖೆಯಲ್ಲಿ ಯಾರನ್ನು ವಿಚಾರಿಸಿದರೆ ಈ ವಿಷಯ ತಿಳಿಯಬಹುದು ಎಂಬುದೂ ಅವರಿಗೆ ಗೊತ್ತಿಲ್ಲವೆ? ಕೆಲಸ ಮಾಡದೆ ಇರುವುದಕ್ಕೆ ಕಾರಣ ಹುಡುಕುವ ವಿಷಯದಲ್ಲಿ ಗೌರವ ಡಾಕ್ಟರೇಟ್ ಇದ್ದರೆ ಅದನ್ನು ಮೊದಾಲು ಇಂಥವರಿಗೆ ಕೊಡಬಹುದೆಂದು ಕಾಣುತ್ತದೆ.
ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ನನಗೆ ಸಲಹೆ ಕೊಡುತ್ತಿದ್ದಾರಷ್ಟೆ? ಯಾವ ಜಲಸಂಪನ್ಮೂಲ ಇಲಾಖೆ? ಅದರ ವಿಳಾಸ ಏನು? ಸಂಪರ್ಕಿಸಬೇಕಾದ ಅಧಿಕಾರಿ ಯಾರು? "ಜಲ ಸಂಪನ್ಮೂಲ ಇಲಾಖೆ" ಎಂದು ವಿಳಾಸ ಬರೆದು ಅಂಚೆಗೆ ಹಾಕಿದರೆ ಅಂಚೆಯವರು ಅದನ್ನು ಯಾರಿಗೆ ತಲುಪಿಸಬೇಕು? ಇಷ್ಟಕ್ಕೂ ಅವರು ಹೇಳುತ್ತಿರುವ ಜಲಸಂಪನ್ಮೂಲ ಇಲಾಖೆಯನ್ನು ಅವರೇ ಸಂಪರ್ಕಿಸಿ ನನಗೆ ಮಾಹಿತಿ ಯಾಕೆ ಕೊಡಬಾರದು?
ಅದಿರಲಿ. ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸಬೇಕೆಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಕಳೆದ ಜೂನ್ ತಿಂಗಳಿನಲ್ಲಿಯೇ, ಈ ವಿಷಯದಲ್ಲಿ ಮಾಹಿತಿ ಕೋರಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಅರ್ಜಿ ಹಾಕಿದ್ದೆ. ಅವರ ಪರವಾಗಿ ಬೇರೊಬ್ಬರು ಅಧಿಕಾರಿ ಹೀಗೆ ಉತ್ತರ ಬರೆದರು: ".......ತಾವು ಅಪೇಕ್ಷಿಸಿರುವ.... ಮಾಹಿತಿಯನ್ನು ಮಂಗಳೂರು ವಿಶೇಷ ಅರ್ಥಿಕ ವಲಯ ಸಂಸ್ಥೆಯಿಂದಲೇ ನೇರವಾಗಿ ಪಡೆದುಕೊಳ್ಳಬಹುದೆಂದು ಈ ಮೂಲಕ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ". ಇವರು ಕರ್ನಾಟಕ ಸರಕಾರದ ಇಲಾಖಾ ಕಾರ್ಯದರ್ಶಿ. ಬಹುಶಃ ಐ.ಎ.ಎಸ್. ಮಾಡಿರುವವರು. ಇವರಿಗೆ ಮಾಹಿತಿ ಹಕ್ಕಿನ ಪಾಠ ನನ್ನಂಥವರು ಮಾಡಬೇಕಾಗಿದೆ. ಏನು ಮಾಡುವುದು?
"ಸಾರ್ವಜನಿಕ ಸೇವಕ"ರಾದ ಈ ಆಧುನಿಕ ಮಹಾರಾಜರುಗಳೊಂದಿಗೆ ವ್ಯವಹರಿಸುವುದು ಕಷ್ಟ, ಕಡುಕಷ್ಟ.
ಸೆರೆ ಬಿಟ್ಟಲ್ಲಿ ಉಳಿ ಇಳಿಸುವ ಚಾಣಕ್ಯ: ಎಂ ಎಸ್ ಇ ಜಡ್ ಕಂಪೆನಿ
ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ ನೀರೆತ್ತಲು ಸರ್ಕಾರ ಕಂಪೆನಿಗೆ ಅನುಮತಿ ನೀಡಿದ್ದು 2007ರಲ್ಲಿ. ಆಗ ಕಂಪೆನಿ ನಾಲ್ಕು ಸಾವಿರ ಎಕ್ರೆ ಜಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಯೋಜನೆ ಇತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಸರಕಾರ 1998 ಎಕ್ರೆ ಜಮೀನನ್ನು ಡಿನೋಟಿಫೈ ಮಾಡಿದೆ. ಹೀಗಾಗಿ ಈಗ ಎರಡುಸಾವಿರ ಚಿಲ್ಲರೆ ಎಕ್ರೆಯಲ್ಲಿ ಮಾತ್ರ ಕಂಪೆನಿಯ ಉದ್ಯಮಗಳು ಸ್ಥಾಪನೆಗೊಳ್ಳಬೇಕು. ಜಮೀನು ನಾಲ್ಕು ಸಾವಿರ ಎಕ್ರೆ ಎಂದಿದ್ದ ಕಾಲದಲ್ಲಿ ಕಂಪೆನಿ ತನ್ನ ನೀರಿನ ವ್ಯವಸ್ಥೆಯ ಚಿತ್ರಣವನ್ನು ಹೀಗೆ ನೀಡಿತ್ತು:
ಒಟ್ಟು ಅಗತ್ಯ: 45 ಎಂಜಿಡಿ;
ಪೂರೈಕೆ:
ಮಂಗಳೂರು ಕೊಳಚೆ ನೀರು ಶುದ್ಧೀಕರಣದಿಂದ 18 ಎಂಜಿಡಿ,
ಮಳೆನೀರು ಸಂಗ್ರಹದಿಂದ 12 ಎಂಜಿಡಿ
ನೇತ್ರಾವತಿ, ಗುರುಪುರ ನದಿಗಳಿಂದ 15 ಎಂಜಿಡಿ.
ಬದಲಾದ ಸನ್ನಿವೇಶದಲ್ಲಿ ಇದರ ಅರ್ಧ ನೀರು ಹೇಗೂ ಸಾಕಷ್ಟೆ. ಎಂದರೆ 22.5 ಎಂಜಿಡಿ. ಇಷ್ಟು ನೀರನ್ನು ಕೊಳಚೆನೀರು ಶುದ್ಧೀಕರಣದಿಂದ ಮತ್ತು ಮಳೆನೀರು ಸಂಗ್ರಹದಿಂದ ಧಾರಾಳವಾಗಿ ಒದಗಿಸಿಕೊಳ್ಳಬಹುದು. ಹಾಗಾಗಿ ನಿಜವಾಗಿ ನೇತ್ರಾವತಿಯಿಂದ ನೀರೆತ್ತುವ ಅಗತ್ಯವೇ ಕಂಪೆನಿಗೆ ಇಲ್ಲ. ಹೀಗಿದ್ದರೂ ಕಂಪೆನಿ ತನ್ನ ಕೈಗಾರಿಕಾ ನೆಲೆಯಿಂದ ಸುಮಾರು 35 ಕಿ.ಮೀ. ದೂರಕ್ಕೆ 1400 ಮಿ.ಮೀ. ವ್ಯಾಸದ ಪೈಪ್ ಲೈನ್ ಅಳವಡಿಸುವ ಕೋಟಿಗಟ್ಟಲೆ ರೂಪಾಯಿ ಕಾಮಗಾರಿಯನ್ನು ಪ್ರಾರಂಭಿಸಿಬಿಟ್ಟಿದೆ. ಈ ವೃಥಾ ಖರ್ಚಿನ ಕೆಲಸವನ್ನು ಕಂಪೆನಿ ಯಾಕಾದರೂ ಕೈಗೊಂಡಿರಬಹುದು?
ಕಾರಣಗಳನ್ನು ಊಹಿಸಲು ಸಾಧ್ಯವಿದೆ. ನಮ್ಮ ನೇತ್ರಾವತಿ ನದಿಯ ನೀರು - ಗಾದೆಯೇ ಇದೆಯಲ್ಲ, ಹೊಳೆನೀರಿಗೆ ದೊಣೆ ನಾಯಕನ ಅಪ್ಪಣೆಯೆ? ಅಂತ - ಅಕ್ಷರಶಃ ಹೇಳುವವರು ಕೇಳುವವರೇ ಇಲ್ಲದ ವಸ್ತುವಾಗಿಬಿಟ್ಟಿದೆ. ಸಾಪೇಕ್ಷವಾಗಿ ಉತ್ತಮ ಗುಣಮಟ್ಟದ್ದು ಎಂದೇ ಹೇಳಬಹುದಾದ ನೇತ್ರಾವತಿ ನೀರಿನ ವಿಷಯದಲ್ಲಿ ಸರಕಾರ "ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ" ಎಂಬಂತೆ ನಡೆದುಕೊಳ್ಳುತ್ತಿರುವುದು ಕಂಪೆನಿಯ ಪಾಲಿಗೆ ದೊಡ್ಡ ವರದಾನವಾಗಿದೆ. ಒಂದು ಸಲ ಹೇಗಾದರೂ ಮಾಡಿ ನದಿಯಿಂದ ಪೈಪ್ ಲೈನಿಗೆ ನೀರು ಹತ್ತಿಸಿದರಾಯಿತು; ನಂತರ ನೇತ್ರಾವತಿಯನ್ನು ಮುಡಿ ಹಿಡಿದು ತನ್ನ ಅರಮನೆಗೆ ಎಳೆದುಕೊಂಡು ಹೋಗಬಹುದು, ರಕ್ಷಣೆಗೆ ಬರುವವರು ಯಾರೂ ಇಲ್ಲ ಎಂದು ಕಂಪೆನಿಗೆ ಗೊತ್ತಿದೆ. ನಿರಂತರವಾಗಿ ಧಂಡಿಯಾಗಿ ಉತ್ತಮ ಗುಣಮಟ್ಟದ ನೀರು ಅತ್ಯಂತ ಕಡಿಮೆ ದರಕ್ಕೆ ಸಿಗುವುದಾದರೆ ಯಾರಿಗೆ ಬೇಡ? ಆಫೀಸರುಗಳ ಮನೆಯಲ್ಲಿ ನಾಲ್ಕು ನಾಲ್ಕು ಬಚ್ಚಲು ಮನೆಗಳನ್ನು ಕಟ್ಟಿಸಬಹುದು, ಒಂದೊಂದರಲ್ಲೂ ಟಬ್ ಅಳವಡಿಸಬಹುದು, ಕ್ಯಾಂಪಸ್ಸಿಗೆ ಬಂದವರ ಕಣ್ಣು ತಂಪಾಗುವಂತೆ ಅಲ್ಲಲ್ಲಿ ಸರೋವರಗಳನ್ನೇ ನಿರ್ಮಿಸಬಹುದು, ನಿರಂತರ ನೀರು ಚಿಮ್ಮುವ ಕಾರಂಜಿಗಳನ್ನು ನಿರ್ಮಿಸಿ, ರಾತ್ರಿವೇಳೆ ಅವುಗಳಿಗೆ ದೀಪಾಲಂಕಾರ ಮಾಡಬಹುದು - ಅಲ್ಲವೆ?
ಯಾಕೆ ಹೇಳುತ್ತಿದ್ದೇನೆಂದರೆ, ಒಮ್ಮೆ ನೀರು ಹೋಗಲು ಶುರುವಾಯಿತೆಂದರೆ ಕತ್ತಿ, ಕುಂಬಳಕಾಯಿ ಎರಡನ್ನೂ ಕಂಪೆನಿಯ ಕೈಯಲ್ಲೇ ಕೊಟ್ಟುಬಿಡುತ್ತದೆ ಸರಕಾರ. ಕಂಪೆನಿ ಎತ್ತುವ ನೀರಿಗೆ ಮೀಟರ್ ಹಾಕುವುದು ಸರಕಾರವಲ್ಲ, ಕಂಪೆನಿಯೇ! ಎಲ್ಲಾದರೂ ಕೇಳಿದ್ದೀರಾ ಇಂಥ ಅವಿವೇಕವನ್ನು? ಅಂಗಡಿಗೆ ಹೋದರೆ ತಕ್ಕಡಿ ವ್ಯಾಪಾರಸ್ಥನದು; ಕರೆಂಟಿನ ಮೀಟರ್ ಮೆಸ್ಕಾಮಿನದು; ದೂರವಾಣಿ ಮೀಟರ್ ಇಲಾಖೆಯದು. ಕರ್ನಾಟಕ ಸರ್ಕಾರ ಮಾತ್ರ ನೀರಿನ ಮೀಟರನ್ನು ಹಾಕಲು, ನೋಡಿಕೊಳ್ಳಲು ಕಂಪೆನಿಗೇ ವಹಿಸಿಬಿಡುತ್ತದೆ. ನಂತರ ಕಂಪೆನಿ ಕೊಟ್ಟದ್ದೇ ಲೆಕ್ಕ, ಕಟ್ಟಿದ್ದೇ ದುಡ್ಡು!
"ಸರಕಾರ ಇಂತಿಷ್ಟೇ ನೀರು ಎತ್ತಬೇಕೆಂದು ವಿಧಿಸಿದೆ, ಅದಕ್ಕಿಂತ ಜಾಸ್ತಿ ನೀರು ನಾವು ಎತ್ತುವಂತೆಯೇ ಇಲ್ಲ, ನೀರಿನ ಮೀಟರನ್ನು ಸರಕಾರಿ ಅಧಿಕಾರಿಗಳು ಆಗಿಂದಾಗ್ಗೆ ತನಿಖೆ ಮಾಡುತ್ತಾರೆ, ನೀವು ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ" ಎಂದು ಕಂಪೆನಿ ನನ್ನ ಮಾತನ್ನು ತಳ್ಳಿಹಾಕಬಹುದು. ಹಾಗಿದ್ದರೆ ಎಷ್ಟು ನೀರೆತ್ತಲು ಸರಕಾರ ಅನುಮತಿ ಕೊಟ್ಟಿದೆಯೋ ಅಷ್ಟೇ ಸಾಮರ್ಥ್ಯದ ಪೈಪ್ ಲೈನ್ ಹಾಕಬಹುದಲ್ಲ? ನೇತ್ರಾವತಿಯಿಂದ ಅನುಮತಿ ಇರುವುದು ನಿಜವಾಗಿ 12.5 ಎಂಜಿಡಿ ಮಾತ್ರ. ಹಾಗಿರುವಾಗ ಪೈಪ್ ಲೈನ್ ಸಹ ಅಷ್ಟೇ ಸಾಮರ್ಥ್ಯದ್ದಿರಬೇಕಲ್ಲವೆ? ಕಂಪೆನಿ ಹಾಕುತ್ತಿರುವ ಪೈಪ್ ಲೈನ್ ಸಾಮರ್ಥ್ಯ ಎಷ್ಟು?
ಈ ಪ್ರಶ್ನೆ ನಿಜವಾಗಿ ನನ್ನ ತಲೆಗೆ ಹೋಗಿರಲಿಲ್ಲ. ಬೇರೆ ಯಾವುದೋ ಒಂದು ದಾಖಲೆಗಾಗಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದೆ. ಅವರು ಆ ದಾಖಲೆಯನ್ನು ಕೊಡುವಾಗ ಜೊತೆಗೆ ಇನ್ನೊಂದು ದಾಖಲೆಯನ್ನು ಲಗತ್ತಿಸಿದ್ದರು. ಆ ಇನ್ನೊಂದು ದಾಖಲೆ ಇಲಾಖೆ ಕಂಪೆನಿಗೆ ಮೂಲರಪಟ್ನದಲ್ಲಿ ಪೈಪ್ ಲೈನನ್ನು ಗುರುಪುರ ನದಿ ದಾಟಿಸಲು ಕೊಟ್ಟ ಅನುಮತಿಯಾಗಿತ್ತು. ಅದರಲ್ಲಿ ಸ್ಪಷ್ಟವಾಗಿ ಹೇಳಿತ್ತು: ಕಂಪೆನಿಗೆ 30 ಎಂಜಿಡಿ ಸಾಮರ್ಥ್ಯದ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು!
ನಾನು ಕೂಡಲೇ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೇಳಿದೆ: ಇದು ಹೇಗೆ ಸಾಧ್ಯ? ಎಂದು. ಅವರ ಉತ್ತರ ಎಂದಿನ ಸರಕಾರಿ ಶೈಲಿಯಲ್ಲಿ: ತಾಂತ್ರಿಕ ಇಲಾಖೆಯ ಶಿಫಾರಸಿನಂತೆ ನಾವು ಮಾಡಿದ್ದೇವೆ (ಎಂದರೆ "ನಾವು ಜವಾಬ್ದಾರರಲ್ಲ"). ತಾಂತ್ರಿಕ ಇಲಾಖೆಗೆ ಬರೆದೆ. ಸುಮಾರು ಒಂದು ತಿಂಗಳಾದರೂ ಉತ್ತರ ಕೊಡಲಿಲ್ಲ. ಮೊನ್ನೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದ್ದೇನೆ. ಏನು ಹೇಳುತ್ತಾರೋ ನೋಡೋಣ.
ಅದಿರಲಿ, ಕಂಪೆನಿ ಎಷ್ಟು ಪ್ರಮಾಣದ ನೀರಿಗೆ ಹೊಂಚು ಹಾಕುತ್ತಿದೆ ಎಂಬುದಂತೂ ಇದರಿಂದ ಸ್ಪಷ್ಟ ತಾನೆ? ಮಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವ ಮಹಾ ನಗರ ಪಾಲಿಕೆ ಈ ವಿಷಯದಲ್ಲಿ ಮೊದಲು ಆಸಕ್ತಿ ತೆಗೆದುಕೊಳ್ಳಬೇಕಿತ್ತು. ಎಂ ಎಸ್ ಇ ಜಡ್ ಕಂಪೆನಿಯ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಆದರೆ, ಅದು ಹೊಸದೊಂದು ಅಣೆಕಟ್ಟು ನಿರ್ಮಿಸಿ ಮಂಗಳೂರಿಗರಿಗೆ ನೀರು ಕೊಡುವ ಉತ್ಸಾಹದಲ್ಲಿ, ತನ್ನ ನೀರಿನ ಮೂಲಕ್ಕೇ ಕನ್ನ ಬೀಳುತ್ತಿರುವುದನ್ನು ಕಾಣುತ್ತಿಲ್ಲ. ಈಗಲಾದರೂ ಏನಾದರೋ ಮಾಡುತ್ತದೋ ನೋಡೋಣ.
ಮಂಗಳೂರಿನ, ನೇತ್ರಾವತಿ ನೀರು ಕುಡಿಯುತ್ತಿರವ ಜನ ಈ ವಿದ್ಯಮಾನಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆಂದು ಆಶಿಸುತ್ತೇನೆ.

ಭಾನುವಾರ, ಜೂನ್ 12, 2011

ನೇತ್ರಾವತಿ ತಿರುವು ಯೋಜನೆ: ಎತ್ತಿನಹೊಳೆಯಿಂದ ಪ್ರಾರಂಭ?

ಕಳೆದ ವರ್ಷದ (2010) ಕರ್ನಾಟಕ ಸರ್ಕಾರದ ಬಜೆಟ್ಟಿನಲ್ಲಿ ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರನ್ನು ತಿರುಗಿಸುವ ಯೋಜನೆಯ ಪ್ರಸ್ತಾವವಿತ್ತು. ಈವರೆಗೂ ನೇತ್ರಾವತಿಯನ್ನು ತಿರುಗಿಸುವ ಮಾತಾಡುತ್ತಿದ್ದವರು ಈಗ ಎತ್ತಿನಹೊಳೆ ತಿರುಗಿಸುವ ಬಗ್ಗೆ ಮಾತಾಡಲು ಶುರು ಮಾಡಿದ್ದರು. ಬಜೆಟ್ಟಿನಲ್ಲಿ ಹುಡುಕಿ ನೋಡಿದಾಗ ಅಲ್ಲಿ ಹೀಗಿತ್ತು:
"107) ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ. ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."

ಈ ಯೋಜನೆಯ ಮಾಹಿತಿ ಕೇಳಿ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮಕ್ಕೆ ಅರ್ಜಿ ಹಾಕಿದೆ. ಬೆಂಗಳೂರಿನವರು ಅದನ್ನು ಚಿತ್ರದುರ್ಗದ ಕನೀನಿನಿಗೆ ಕಳಿಸಿದರು. ಅಂತೂ ನನಗೆ ಶಿರಾದ ಕನೀನಿನಿಯವರಿಂದ ಮಾಹಿತಿ ಶುಲ್ಕ ಕಳಿಸಲು ಪತ್ರ ಬಂತು. ಅಲ್ಲಿಂದ ಬಂದ ಮಾಹಿತಿಯಲ್ಲಿ ವಿವರಣೆಯೊಂದಿಗೆ ಕೋಷ್ಟಕಗಳು, ನಕ್ಷೆಗಳು ಎಲ್ಲವೂ ಇವೆ. ಈ ಸಾಧ್ಯತಾ ವರದಿಯನ್ನು ತಯಾರಿಸಿದವರು ಬೆಂಗಳೂರಿನ ಇ ಐ ಟೆಕ್ನಾಲಜೀಸ್ ಪ್ರೈವೇಟ್ ಲಿ. ಎಂಬ ಸಂಸ್ಥೆ. ಮುಂದೆ ವರದಿಯ ಪ್ರಸ್ತುತವಾದ ಭಾಗವನ್ನು ಮಾತ್ರ ಅನುವಾದಿಸಿ ಕೊಟ್ಟಿದ್ದೇನೆ:

ಪಶ್ಚಿಮದ ಸಕಲೇಶಪುರದಿಂದ ಪೂರ್ವದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೆರೆನೀರನ್ನು ತಿರುಗಿಸುವ ಯೋಜನೆ

ಕರ್ನಾಟಕವು ವಿಸ್ತಾರದಲ್ಲಿ ದೇಶದ ಎಂಟನೇ ರಾಜ್ಯ. ಅದರ ವಿಸ್ತಾರ 1,91,976 ಚ.ಕಿ.ಮೀ.ಗಳು. (ಒಂದು ಚದರ ಕಿಲೋ ಮೀಟರ್ ಎಂದರೆ ಸುಮಾರು 247 ಎಕ್ರೆ-ಅನು.) 2001ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆ ಐದು ಕೋಟಿ ಇಪ್ಪತ್ತೆಂಟು ಲಕ್ಷ. (2011ರ ಜನಗಣತಿಯಂತೆ ಇದು ಆರು ಕೋಟಿ ಹನ್ನೊಂದು ಲಕ್ಷ-ಅನು.) ರಾಜ್ಯದ ಮುಖ್ಯ ನದಿಗಳು ವರ್ಷಪೂರ್ತಿ ಹರಿಯುವ ಕೃಷ್ಣಾ, ತುಂಗಾ, ಭದ್ರಾ, ಕಾವೇರಿ ಹಾಗೂ ಹದಿಮೂರು ಪಶ್ಚಿಮ ವಾಹಿನಿ ನದಿಗಳು. (ಪಶ್ಚಿಮವಾಹಿನಿಗಳೆಂದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಇಳಿದು, ಅರಬೀ ಸಮುದ್ರ ಸೇರುವ ನದಿಗಳು. ಉದಾ: ನೇತ್ರಾವತಿ, ಶರಾವತಿ, ಅಘನಾಶಿನಿ ಮುಂತಾದವು-ಅನು.) ರಾಜ್ಯದ ಪೂರ್ವ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಅತಿ ಕಡಿಮೆ ಎಂದರೆ ವರ್ಷಕ್ಕೆ 400 ಮಿ.ಮೀ.ಗಳಾದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದು ವರ್ಷಕ್ಕೆ 6500 ಮಿ.ಮೀ.ವರೆಗೂ ಇದೆ. ಈ ಮಳೆಯ ಪ್ರಮಾಣ ಸಹ ನಂಬಿಕೆಗೆ ಅರ್ಹವಾದದ್ದಲ್ಲ. ಅನೇಕ ಜಿಲ್ಲೆಗಳು, ತಾಲೂಕುಗಳು ಕೇವಲ ಮಳೆನೆರಳಿನ ಪ್ರದೇಶಗಳಾಗಿವೆ. ಇಂಥ ಕಡೆ ನೀರಿನ ತೀವ್ರ ಅಭಾವವಿದೆ. ಈ ಭಾಗಗಳಿಗೆ, ಕೃಷಿಗೆ ಬಿಡಿ, ಕುಡಿಯಲು ನೀರಿನ ವ್ಯವಸ್ಥೆ ಮಾಡುವುದೂ ಒಂದು ದೊಡ್ಡ ಸವಾಲೇ ಸರಿ.

ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು. ಅಗಾಧಪ್ರಮಾಣದಲ್ಲಿ ಅಂತರ್ಜಲಕ್ಕೆ ಕನ್ನ ಹಾಕಿದ್ದರಿಂದಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಿತು. ನೀರಿನ ಗುಣಮಟ್ಟವೂ ಸಹ ಕಡಿಮೆಯಾಯಿತು.
ಈ ದೃಷ್ಟಿಯಿಂದ, ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಹಾನಿಗೊಳಗಾದ ಪ್ರದೇಶಗಳೆಂದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು. ಕರ್ನಾಟಕ ಸರ್ಕಾರವು ಈ ಎರಡು ಜಿಲ್ಲೆಗಳ ನೀರಿನ ಅಗತ್ಯವನ್ನು ಪೂರೈಸಲು ಸೂಕ್ತವೂ, ಸುಸ್ಥಿರವೂ ಆದ ನೀರಿನ ಮೂಲವನ್ನು ಗುರುತಿಸುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ನಿರ್ದೇಶನ ನೀಡಿತು.

ಕರ್ನಾಟಕ ನೀರಾವರಿ ನಿಗಮವು ಇ ಐ ಟೆಕ್ನಾಲಜೀಸ್ ಲಿ., ಬೆಂಗಳೂರು ಇವರಿಗೆ, ಈ ಬಗ್ಗೆ ಒಂದು ಸಾಧ್ಯತಾ ಅಧ್ಯಯನ ಮಾಡಿ, ನೀರಿನ ಮೂಲವನ್ನು ಗುರುತಿಸುವ, ಯೋಜನೆಗೆ ಒಂದು ಪೂರ್ವಭಾವಿ ಚೌಕಟ್ಟನ್ನು ಒದಗಿಸುವ, ಹೆಚ್ಚಿನ ಅಧ್ಯಯನದ ಖರ್ಚನ್ನು ಅಂದಾಜು ಮಾಡುವ ಮುಂತಾದ ಕೆಲಸಗಳನ್ನು ವಹಿಸಿಕೊಟ್ಟಿತು.

1. ಸ್ಥಳ:ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಕರ್ನಾಟಕದ ದಕ್ಷಿಣಪೂರ್ವ ಭಾಗದಲ್ಲಿವೆ. ಇವು ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಗಡಿಗಳನ್ನು ಹಂಚಿಕೊಂಡಿವೆ. ಈ ಎರಡೂ ಜಿಲ್ಲೆಗಳು ಕಾವೇರಿ, ಪಾಲಾರ್ ಹಾಗೂ ಪೆನ್ನಾರ್ ನದಿಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿವೆ. ಈ ಜಿಲ್ಲೆಗಳಿಗೆ ಕಾವೇರಿ ನದಿಯಿಂದ ನೀರು ಪೂರೈಸುವ ಯಾವ ಯೋಜನೆಯೂ ಇಲ್ಲ. ಏಕೆಂದರೆ ಕಾವೇರಿಯ ನೀರು ನೀರಾವರಿ ಹಾಗೂ ದಿನದಿನವೂ ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಮೀಸಲಾಗಿದೆ.
ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೇ ಇರುವ, ನಂಬಲರ್ಹವೂ, ಸುಸ್ಥಿರವೂ ಆದ ನೀರಿನ ಮೂಲವೆಂದರೆ ಪಶ್ಚಿಮ ವಾಹಿನಿ ನದಿಗಳು. ಆದ್ದರಿಂದ ಅಲ್ಲಿಂದ ನೀರನ್ನು ಸಾಗಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ.

2. ಪಶ್ಚಿಮ ವಾಹಿನಿ ನದಿಗಳು:ಕರ್ನಾಟಕದ ಎಲ್ಲ ನದಿಗಳಿಂದ ದೊರೆಯುವ ವಾರ್ಷಿಕ ನೀರಿನ ಪ್ರಮಾಣ 3440 ಟಿಎಂಸಿ (ಟಿಎಂಸಿ ಎನ್ನುವುದನ್ನು ಯಾವಾಗಲೂ ಟಿಎಂಸಿ ಅಡಿ ಅಥವಾ ಟಿಎಂಸಿ ಮೀಟರುಗಳಲ್ಲಿ ಹೇಳಬೇಕು. ಒಂದು ಟಿಎಂಸಿ ಅಡಿ ಎಂದರೆ ಸಾವಿರ ದಶಲಕ್ಷ ಘನ ಅಡಿ ನೀರು ಎಂದರ್ಥ. ಒಂದು ಘನ ಅಡಿ ಎಂದರೆ 28 ಲೀಟರ್ ನೀರು. ಇಲ್ಲಿ ಟಿಎಂಸಿ ಅಡಿ ಎಂದು ಇಟ್ಟುಕೊಳ್ಳಲಾಗಿದೆ.-ಅನು.) ಈ ಪೈಕಿ ಪಶ್ಚಿಮವಾಹಿನಿ ನದಿಗಳದೇ ಸಿಂಹಪಾಲು: 2000 ಟಿಎಂಸಿ ಅಡಿ. ಕಿರಿದಾದ ಸಮುದ್ರತೀರದಲ್ಲಿ ಈ ನದಿಗಳು ಹರಿಯುವುದರಿಂದ, ಇದರ ಹೆಚ್ಚಿನ ಭಾಗ ಯಾವುದೇ ಉಪಯೋಗವಿಲ್ಲದೆ ಸಮುದ್ರವನ್ನು ಸೇರುತ್ತಿದೆ.
ಪಶ್ಚಿಮ ಘಟ್ಟಗಳ ಎತ್ತರವು ಒಡ್ಡುವ ಸವಾಲಿನಿಂದಾಗಿ, ಈ ನೀರನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ತಾಂತ್ರಿಕವಾಗಿಯಾಗಲಿ, ಆರ್ಥಿಕವಾಗಿಯಾಗಲಿ ಸಾಧ್ಯವಲ್ಲ. ಹೀಗಾಗಿ ಇಲ್ಲಿ ಪಶ್ಚಿಮ ಘಟ್ಟಗಳ ಎತ್ತರ ಪ್ರದೇಶದಿಂದ ಕೇವಲ ಶೇ. 0.54 ಭಾಗ ನೀರನ್ನು ಮಾತ್ರ ಪೂರ್ವಕ್ಕೆ ತಿರುಗಿಸಲು ಯೋಜಿಸಲಾಗಿದೆ.

ಪಶ್ಚಿಮದಿಂದ ಪೂರ್ವಕ್ಕೆ ನೀರನ್ನು ಸಾಗಿಸುವ ಈ ಯೋಜನೆಯು ಅತ್ಯಂತ ವಿಶಿಷ್ವವಾದುದು. ಏಕೆಂದರೆ, ಅತ್ಯಂತ ಕಡಿಮೆ ಅವಧಿಯಲ್ಲಿ, ಬಹು ದೊಡ್ದ ಪ್ರಮಾಣದ ನೀರನ್ನು ಅತಿ ಎತ್ತರಕ್ಕೆ ಪಂಪ್ ಮಾಡುವ ಮೂಲಕ ಅಥವಾ ದೀರ್ಘ ಸುರಂಗಗಳ ಮೂಲಕ ಸಾಗಿಸಲು ಇಲ್ಲಿ ಉದ್ದೇಶಿಸಿದೆ.

ಈ ಯೋಜನೆಯಿಂದ ನೀರು ಪಡೆಯಲಿರುವ ಪ್ರದೇಶಗಳು ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕೂಡಲೇ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡದಿದ್ದರೆ, ಈ ಪ್ರದೇಶಗಳು ಬರದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇತ್ತ ಪಶ್ಚಿಮ ಘಟ್ಟಗಳು ಅತ್ಯಂತ ಮುಖ್ಯವೂ, ಪರಿಸರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವೂ ಆದ ಪ್ರದೇಶಗಳಾಗಿವೆ. ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ. ಪ್ರಸಕ್ತ ಯೋಜನೆಯನ್ನು ಪಶ್ಚಿಮ ಘಟ್ಟಗಳಲ್ಲಿ ದೊರೆಯುವ ನೀರಿನ ಪ್ರಮಾಣದ ಕೇವಲ ಶೇ.0.54 ರಷ್ಟನ್ನು ಮಾತ್ರ, ಯಾವ ನೆಚ್ಚಬಹುದಾದ ನೀರಿನ ಮೂಲವೂ ಇಲ್ಲದ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಬಳಸಿಕೊಳ್ಳಲು ಅತ್ಯಂತ ಎಚ್ಚರಿಕೆಯಿಂದ ರೂಪಿಸಲಾಗಿದೆ. ಟ್ರಿಬ್ಯುನಲ್ ಹಾಗೂ ಇತರ ಅಡ್ಡಿಗಳಿರುವುದರಿಂದ, ಈ ಪ್ರದೇಶಕ್ಕೆ ಹತ್ತಿರದ ಇತರ ಯಾವುದೇ ನದಿಗಳ ನೀರನ್ನು ತರುವುದು ಸಾಧ್ಯವೇ ಇಲ್ಲ ಎಂಬುದನ್ನು ಗಮನಿಸಬೇಕು. ಇದೂ ಅಲ್ಲದೆ ಈ ಪ್ರದೇಶಗಳ ಅಂತರ್ಜಲ ಮಟ್ಟವು ಸಂಪೂರ್ಣವಾಗಿ ಪಾತಾಳಕ್ಕಿಳಿದಿದೆ.

ಆದ್ದರಿಂದ ಪಶ್ಚಿಮ ಘಟ್ಟಗಳ ಒಟ್ಟು ಇಳುವರಿಯ ಶೇ. 0.54 ಭಾಗ ನೀರನ್ನು ಬಳಸಿಕೊಳ್ಳುವ ಈ ಯೋಜನೆ, ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದು, ಇದಕ್ಕೆ ಯಾವುದೇ ಟ್ರಿಬ್ಯುನಲ್ ಇತ್ಯಾದಿ ಅಡ್ಡಿಗಳಿಲ್ಲದ್ದರಿಂದ, ಇದನ್ನು ತಾಂತ್ರಿಕವಾಗಿ ಸಾಧ್ಯವಿರುವ ಯೋಜನೆ ಎಂದು ಪರಿಗಣಿಸಲಾಗಿದೆ.


ಯೋಜನೆಯ ವಿಶ್ಲೇಷಣೆ:ಸಾಧ್ಯತಾವರದಿಯ ಕೆಲವು ಅಂಶಗಳನ್ನು ಹೀಗೆ ವಿಶ್ಲೇಷಿಸಬಹುದು:

"ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು".
ಈ ಭಾಗದಲ್ಲಿ ನದಿಗಳೇ ಇಲ್ಲ ಎಂದು ಹೇಳುವಂತಿಲ್ಲ. ಚಿಕ್ಕಬಳ್ಳಾಪುರ ನಂದಿಬೆಟ್ಟಕ್ಕೆ ಹತ್ತಿರದಲ್ಲಿದೆ. ಅಲ್ಲಿ ಹುಟ್ಟುವ ಅರ್ಕಾವತಿ ಚಿಕ್ಕಬಳ್ಳಾಪುರದ ಮೂಲಕವೇ ಹರಿಯುತ್ತದೆ. ಕೋಲಾರದಲ್ಲಿಯೂ ಪಾಲಾರ್, ಪೆನ್ನಾರ್ ಇತ್ಯಾದಿ ನದಿಗಳಿವೆ. ಆದರೆ, ಈ ಜಿಲ್ಲೆಗಳ ಜನರು ಹಿಂದಿನ ಕಾಲದಿಂದಲೂ ನೀರಿಗಾಗಿ ಮುಖ್ಯವಾಗಿ ಆಶ್ರಯಿಸಿದ್ದು ನದಿಗಳಿಗಿಂತ ಮುಖ್ಯವಾಗಿ ಕೆರೆಗಳನ್ನು. ಕೋಲಾರ ಜಿಲ್ಲೆಯಂತೂ ಕೆರೆಗಳಿಗೆ ಪ್ರಸಿದ್ಧವಾಗಿದೆ. ಹೀಗಿದ್ದೂ ಸಹ ಕೆರೆಗಳ ಸುದ್ದಿಯನ್ನೇ ತೆಗೆಯದೆ, ನೀರಿನ ಸಮಸ್ಯೆಯ ಮೂಲವನ್ನು ಗುರುತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಈ ಜಿಲ್ಲೆಗಳ ಕೆರೆಗಳ ಕಥೆ ಏನಾಗಿದೆ? 1970 ರ ನಂತರದ ದಶಕಗಳಲ್ಲಿ ಬೋರ್ ವೆಲ್ ಗಳ ಸಂಖ್ಯೆ ಕೋಲಾರ ಜಿಲ್ಲೆಯಲ್ಲಂತೂ ಅಗಾಧವಾಗಿ ಹೆಚ್ಚಿದೆ. ಚಿಕ್ಕಬಳ್ಳಾಪುರದಲ್ಲಿಯೂ ಇದೇ ಸ್ಥಿತಿ ಎಂದುಕೊಂಡಿದ್ದೇನೆ. ಕೆರೆಗಳನ್ನೂ, ಅವುಗಳ ನಿರ್ವಹಣಾ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇ ಸಮಸ್ಯೆಗೆ ಕಾರಣವಿರಬಹುದೆ? ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದಲ್ಲಿ ಸಮಸ್ಯೆಗೆ ಬೇರೆಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು.
"ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ".
ವರದಿಯು ನೀರಿನ ಸಮಸ್ಯೆಯ ಮೂಲವನ್ನು ಅತ್ಯಂತ ನಿಖರವಾಗಿ ಗುರುತಿಸಿದೆ. ದುರದೃಷ್ಟವಶಾತ್ ಅದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಲು ಅದು ತಯಾರಿಲ್ಲ. ಕೈಗಾರಿಕೀಕರಣ ಹಾಗೂ ನಗರೀಕರಣಗಳೇ ನೀರಿನ ಸಮಸ್ಯೆಯ ಮೂಲ ಎನ್ನುವುದಾದರೆ, ಒಂದು ಕಡೆ ನೀರನ್ನೂ ಮತ್ತೊಂದು ಕಡೆ ಕೈಗಾರಿಕೀಕರಣ ಹಾಗೂ ನಗರೀಕರಣವನ್ನೂ ಇಟ್ಟು, ಈ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗೆ ಸಕಲೇಶಪುರದಲ್ಲಿ ಪರಿಹಾರ ಹುಡುಕುವುದು, ಹುಲಿ ತನ್ನ ಗಾಯಕ್ಕೆ ಮದ್ದು ಮಾಡಿಕೊಂಡ ಹಾಗೆಯೇ.
ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ:
ಯಾವ ಯಾವ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ ಎಂದು ತಿಳಿಸಲಾಗಿಲ್ಲ. ವರದಿ ತಯಾರಿಸುವಾಗ, ಅಧ್ಯಯನ ಮಾಡಿದ ಎಲ್ಲ ಸಾಧ್ಯತೆಗಳನ್ನೂ ನಮೂದಿಸಿ ಅವುಗಳ ಪೈಕಿ ಯಾವುದಾದರೊಂದನ್ನು ಆರಿಸಿಕೊಂಡದ್ದಕ್ಕೆ ಮತ್ತು ಉಳಿದವನ್ನು ಕೈ ಬಿಟ್ಟಿದ್ದಕ್ಕೆ ಸಕಾರಣ ವಿವರಣೆ ನೀಡುವುದು ಅಗತ್ಯ. ಹಾಗೆ ಮಾಡದಿದ್ದರೆ ವರದಿ ಅಪೂರ್ಣವಾದಂತೆ.
"ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ."
ಸಾಧ್ಯತಾವರದಿ ತಯಾರಿಸಿದವರು ಪಶ್ಚಿಮ ಘಟ್ಟದ ಬಗ್ಗೆ ಆದಷ್ಟೂ ಎಚ್ಚರಿಕೆ ವಹಿಸಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತನ್ನ ಬಜೆಟ್ಟಿನಲ್ಲಿ ಹೇಳಿರುವುದನ್ನು ನೋಡಿ: "ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು." "ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."
*****************
ಮೊನ್ನೆ - ಆಶೋಕವರ್ಧನ್, ನಿರೇನ್ ಜೈನ್, ನಾನು ಮುಂತಾಗಿ ಹತ್ತು ಜನ - ಈ ಯೋಜನಾಸ್ಥಳಕ್ಕೆ ಹೋಗಿ ಬಂದೆವು.
ಸಕಲೇಶಪುರದಿಂದ ಗುಂಡ್ಯಕ್ಕೆ ಬರುವ ರಸ್ತೆಯಲ್ಲಿ ಮಾರೇನಹಳ್ಳಿ ಸಿಕ್ಕುತ್ತದೆ. ಇಲ್ಲಿ ಬಲಕ್ಕೆ ಒಂದು ರಸ್ತೆ ತಿರುಗುತ್ತದೆ. ಅದರಲ್ಲಿ ಹೋದರೆ, ಅಲ್ಸರ್ಮನೆ, ಗುಡಾಣಕೆರೆ, ಕಾಡಮನೆ ಎಸ್ಟೇಟ್ ಮುಂತಾದ ಪ್ರದೇಶಗಳಿಗೆ ಹೋಗಬಹುದು. ( ಈ ಪ್ರವಾಸದ ಬಗ್ಗೆ ಅಶೋಕವರ್ಧನರು ತಮ್ಮ ಎಂದಿನ "ನಾರೀಕೇಳ ಶೈಲಿ"ಯಲ್ಲಿ ಲೇಖನ ಬರೆಯುತ್ತಾರೆ ಎಂದು ಹಾರೈಸುತ್ತೇನೆ!). ಎತ್ತಿನ ಹೊಳೆಯೂ, ಅದರ ಎರಡು ಚಿಕ್ಕ ಉಪನದಿಗಳೂ ಸುಮಾರಿಗೆ ಇದೇ ಪ್ರದೇಶದಲ್ಲಿ ಹುಟ್ಟಿ ಹರಿಯುತ್ತವೆ.(ಇವೇ ಮುಂದೆ ಒಟ್ಟಾಗಿ ಕೆಂಪುಹೊಳೆ, ಗುಂಡ್ಯ ಹೊಳೆ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಇದು ಕುಮಾರಧಾರೆಯ ಉಪನದಿ. ಧರ್ಮಸ್ಥಳದ ಮೂಲಕ ಹರಿಯುವ ನೇತ್ರಾವತಿಯ ಉಪನದಿಯಲ್ಲ. ನೇತ್ರಾವತಿಗೆ ಇದು ಸೇರುವುದು ಉಪ್ಪಿನಂಗಡಿಯಲ್ಲಿ.) ಒಟ್ಟು ಮೂರು ಅಣೆಕಟ್ಟುಗಳನ್ನು ನಿರ್ಮಿಸಿ ಎತ್ತಿನಹೊಳೆಯಿಂದ ನೀರೆತ್ತುವ ಯೋಜನೆ ಕಾರ್ಯಗತ ಮಾಡುವ ಉದ್ದೇಶ ಇರುವುದು ಈ ಪ್ರದೇಶದಲ್ಲಿಯೇ.

ಅಲ್ಲೆಲ್ಲ ತಿರುಗಾಡಲು ನಮ್ಮ ಜೊತೆ ಬಂದಿದ್ದ ಸ್ಥಳೀಯರಾದ ಹೇಮಂತಕುಮಾರ್ ಹೇಳಿದರು: "ಆ ಕಡೆ ನಮ್ಮ ತೋಟ ಇದೆ. ನಾನು ಅಲ್ಲಿ ಹೋಗುವುದನ್ನೇ ಬಿಟ್ಟಿದ್ದೇನೆ. ಆನೆ ಬರ್ತಾವೆ ಮಾರಾಯ್ರೆ. ಹೆದ್ರಿಕೆ ಆಗ್ತದೆ."

(ಆನೆ ಮರಕ್ಕೆ ಬೆನ್ನು ತಿಕ್ಕಿದ್ದರ ಗುರುತು.-ಅಶೋಕವರ್ಧನರ ಫೋಟೋ.)
ಅಂದರೆ ಈ ಪ್ರದೇಶದಲ್ಲಿ ಯೋಜನೆ ಕಾರ್ಯಗತವಾದರೆ ಅಲ್ಲಿರುವ ಆನೆಗಳು ಬೇರೆ ಜಾಗ ನೋಡಿಕೊಳ್ಳಬೇಕು. "ತೊಂದರೆ ಇಲ್ಲಪ್ಪ, ಹತ್ತಿರವೇ ಸಕಲೇಶಪುರ ಇದೆ, ಅಲ್ಲಿಗೆ ಬಂದು ಇರ್ತಾವೆ. ಮೊನ್ನೆ ಮೈಸೂರಿಗೆ ಬಂದಿದ್ದವಲ್ಲ ಹಾಗೇ" ಅಂದಾರು ನಮ್ಮ ಯೋಜನಾಕರ್ತರು. ಆದರೆ ಸಕಲೇಶಪುರದ ಜನ ಇದಕ್ಕೆ ಒಪ್ಪಿಗೆ ಕೊಡುತ್ತಾರೋ ಗೊತ್ತಿಲ್ಲ!

******************
"ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ" ಎಂದು ಬಜೆಟ್ಟಿನಲ್ಲಿ ಹೇಳಿದೆಯಷ್ಟೆ. ಈ ಮಾಹಿತಿಯನ್ನು ನೀಡುವಂತೆ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಅರ್ಜಿ ಕೊಟ್ಟಿದ್ದೆ. ಅಲ್ಲಿಂದ ಬಂದ ಉತ್ತರ ಹೀಗಿದೆ:
"ಮೆ. ಎನ್. ಆರ್.ಎಸ್.ಸಿ. (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್) ಸಂಸ್ಥೆಗೆ ಸರ್ವೆ ಸಮೀಕ್ಷೆ ಮತ್ತು ವಿವರವಾದ ಯೋಜನಾ ವರದಿಯ ತಯಾರಿಕೆ ಕಾರ್ಯವನ್ನು ಕೈಗೊಳ್ಳಲು ವಹಿಸಿಕೊಡಲಾಗಿತ್ತು. ಆದರೆ ಮೆ. ಎನ್. ಆರ್. ಎಸ್. ಸಿ.ರವರು ALTM ಸರ್ವೆ ಮಾಡಿ ಅದರ ಕಚ್ಚಾ ಮಾಹಿತಿಯನ್ನು ಸಲ್ಲಿಸಿದ್ದು, ವಿವರವಾದ ಯೋಜನಾವರದಿಯನ್ನು (DPR) ತಯಾರು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿರುವುದರಿಂದ DPR ನ್ನು ಬೇರೆ ಸಂಸ್ಥೆಯಿಂದ ತಯಾರಿಸಲು ಕ್ರಮ ಜರುಗಿಸಲಾಗುತ್ತಿದೆ.
ಸದರಿ ಯೋಜನೆಯ ಮಾಲಾ ಕಾಲುವೆಗಳಿಗೆ ಸಂಬಂಧಿಸಿದಂತೆ ಮೆ: ಎನ್. ಆರ್. ಎಸ್. ಸಿ. ಸಂಸ್ಥೆ, ಹೈದ್ರಾಬಾದ್ ಇವರು ALTM ಸರ್ವೆ ಕೈಗೊಂಡು ಸರ್ವೆಯ ಕಚ್ಚಾ ಮಾಹಿತಿಯನ್ನು ಕೆಲವೊಂದು ಸಾಫ್ಟ್ ವೇರಿನಲ್ಲಿ ಮಾತ್ರ ವೀಕ್ಷಿಸಬಹುದಾದಂತಹ ರೂಪದ (Format ನಲ್ಲಿ) ತಾಂತ್ರಿಕ ಮಾಹಿತಿಯನ್ನು ನೀಡಿರುತ್ತಾರೆ. ಈ ಮಾಹಿತಿಯನ್ನು ಸಂಸ್ಕರಿಸಿ ಸದರಿ ಯೋಜನೆಯ ವಿವರವಾದ ಯೋಜನಾವರದಿಯನ್ನು ತಯಾರಿಸಲು ಹಾಗೂ ಸೇವಾ ಕಾಲುವೆಯ ಸರ್ವೆ ಕಾರ್ಯವನ್ನು ಕೈಗೊಳ್ಳಲು ಕ್ರಮ ಜರುಗಿಸಲಾಗುತ್ತಿದೆ. ಮೆ: ಎನ್. ಆರ್. ಎಸ್. ಸಿ. ಸಂಸ್ಥೆಯವರು ಯೋಜನೆಯ ಯಾವುದೇ ಸಂಪೂರ್ಣ ವರದಿಯನ್ನು ನೀಡಿರುವುದಿಲ್ಲ"
ಇದರ ಅರ್ಥ ಸ್ಪಷ್ಟ: ಶ್ರೀ ಪರಮಶಿವಯ್ಯನವರ ವರದಿಯನ್ನು ಆಧರಿಸಿದ ಯೋಜನೆ ಸರಕಾರಿ ವೇಗದಲ್ಲಿಯೇ ಆದರೂ ಮುಂದುವರಿಯುತ್ತಿದೆ. ಒಂದಲ್ಲ ಒಂದು ದಿನ ಅದು ಪಶ್ಚಿಮ ಘಟ್ಟಗಳ ಮೇಲೆ ಎರಗುವುದು ನಿಶ್ಚಿತ.
*****************
ಬಯಲುಸೀಮೆಯ ನೀರಿನ ಸಮಸ್ಯೆಗೆ ಪರಿಹಾರ ಏನು? "ಕಣಜ" (www.kanaja.in)ದಲ್ಲಿ ಪ್ರಕಟವಾಗಿರುವ ಶ್ರಿ ಮಲ್ಲಿಕಾರ್ಜುನ ಹೊಸಪಾಳ್ಯ ಇವರ ಲೇಖನವನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. "ಕಣಜ" ಹಾಗೂ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಇವರಿಗೆ ನಾನು ಆಭಾರಿ.
"ಜಲ ಜೀವನಿ" : ಸಾವಿರಾರು ಎಕರೆ ಒಣಭೂಮಿಗೆ ಆಸರೆಯಾದ ಕಿರು ಜಲಾನಯನ ಯೋಜನೆ:
ನಂದಿಹಳ್ಳಿಯ ರಂಗನಾಥ್ ತಮ್ಮ ಹೊಲದಲ್ಲಿದ್ದ ಸುಮಾರು 70 ಹುಣಸೆ ಮರಗಳನ್ನು ಕಡಿಸಿ ಹಾಕುವ ಯೋಚನೆ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಇವರ ಹೊಲದಲ್ಲಿ 150 ಹುಣಸೆ ಮರಗಳಿದ್ದವು. ಎಲ್ಲಾ ಅವರ ತಂದೆಯ ಕಾಲದಲ್ಲಿ ನೆಟ್ಟವು. ಮುಂಚೆ ಉತ್ತಮ ಇಳುವರಿ ನೀಡುತ್ತಿದ್ದ ಅವು ಸ್ವಲ್ಪ ವರ್ಷಗಳಿಂದೀಚೆಗೆ ಮಂಕಾಗಿ ಎಲೆಗಳೆಲ್ಲಾ ಉದುರಿ ಬೋಳು-ಬೋಳಾಗಿ ನಿಂತಿದ್ದವು. ಫಸಲೇ ಬಿಡುತ್ತಿರಲಿಲ್ಲ, ಹಾಗಾಗಿ ರಂಗನಾಥ್ 2004 ರಲ್ಲಿ 70 ಗಿಡಗಳನ್ನು ಕಡಿಸಿ ಮಾರಿದ್ದರು. ಉಳಿದ ಗಿಡಗಳನ್ನು ಈ ವರ್ಷ ಮಾರಿ ಕೈತೊಳೆದುಕೊಳ್ಳಬೇಕೆಂಬುದು ಅವರ ಯೋಚನೆಯಾಗಿತ್ತು. ಅವರೊಬ್ಬರೇ ಅಲ್ಲದೆ ಅವರ ಗ್ರಾಮದ ಬಹುತೇಕ ರೈತರು ಇದೇ ಹಾದಿಯಲ್ಲಿದ್ದರು. ನಾಲ್ಕೈದು ವರ್ಷಗಳ ಹಿಂದೆ ಉತ್ತಮ ಇಳುವರಿ ನೀಡುತ್ತಿದ್ದ ಹುಣಸೆ ಮರಗಳು ಕ್ರಮೇಣ ಬರಲಾಗಿಹೋಗಿದ್ದವು. ಇದಕ್ಕೆ ಕಾರಣ ಮಳೆಯ ಪ್ರಮಾಣದ ಗಣನೀಯ ಕುಸಿತ. ಬತ್ತಿದ ಅಂತರ್ಜಲ, ಒಣಗಿದ ಕೊಳವೆ ಬಾವಿಗಳು, ಫಲವತ್ತಾದ ಮೇಲ್ಮಣ್ಣು ಸವಕಳಿಯಿಂದ ಬರಡಾದ ಭೂಮಿ. ಬರಕ್ಕೆ ತಡೆದುಕೊಳ್ಳುವ ಗುಣವುಳ್ಳ ಹುಣಸೆಯೇ ಒಣಗುವ ಹಂತಕ್ಕೆ ತಲುಪಿತೆಂದರೆ ಇನ್ನು ಅಡಿಕೆ, ತೆಂಗು ಮತ್ತು ಇತರ ಫಸಲುಗಳ ಸ್ಥಿತಿಯನ್ನು ಊಹಿಸಬಹುದು.
ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ಕೃಷಿ ಉತ್ಪಾದಕತೆಯಲ್ಲಿಯೂ ಇಳಿತ, ಜೀವನ ನಿರ್ವಹಣೆಗೆ ಕಂಟಕ. ಈ ನಷ್ಟವನ್ನು ತುಂಬಿಕೊಳ್ಳಲು ರೈತರು ಹುಣಸೆ ಗಿಡಗಳನ್ನು ಮಾರಿ ಜೀವನ ನಿರ್ವಹಿಸುವ ಮಟ್ಟಕ್ಕೆ ಹೋಗಿದ್ದರು. ಇದು 2005ನೇ ಇಸವಿಯ ಮುಕ್ತಾಯ ಮತ್ತು 2006ನೇ ಇಸವಿಯ ಆರಂಭ ಕಾಲದಲ್ಲಿದ್ದ ಪರಿಸ್ತಿತಿ. ರಂಗನಾಥ್ ತಮ್ಮ ಹುಣಸೆ ಮರಗಳನ್ನು ಕಡಿಯುವ ಯೋಚನೆ ಮಾಡುತ್ತಿದ್ದುದು ಇದೇ ಅವಧಿಯಲ್ಲಿ.
ಆದರೆ 2007ರ ಮುಕ್ತಾಯ ಮತ್ತು 2008 ರ ಆರಂಭ ಕಾಲಕ್ಕೆ ನಂದಿಹಳ್ಳಿಯ ಚಿತ್ರಣ ಸಂಪೂರ್ಣ ಬದಲು. ಈಗ ಅಲ್ಲಿ ಹುಣಸೆ ಮರಗಳು ಕೊಂಬೆ-ರೆಂಬೆಗಳಲ್ಲೆಲ್ಲಾ ಕಾಯಿ ತೂಗುತ್ತಾ ನಿಂತಿವೆ. ಸಂಪೂರ್ಣ ನಿಂತೇ ಹೋಗಿದ್ದ ಎಷ್ಟೋ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಅಂತರ್ಜಲ ಮೇಲೇರಿದೆ. ಆಹಾರ ಬೆಳೆ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಮಟ್ಟ ಹೆಚ್ಚಾಗಿದೆ.
ನಂದಿಹಳ್ಳಿಯ ರಂಗನಾಥ್ ಮತ್ತು ಅನೇಕ ರೈತರು ಹುಣಸೆ ಮರಗಳನ್ನು ಕಡಿದು ಮಾರಾಟ ಮಾಡಿದ್ದಕ್ಕಾಗಿ ಈಗ ಪೇಚಾಡುತ್ತಿದ್ದಾರೆ.
ಈ ಬದಲಾವಣೆಗೆ ಕಾರಣವಾದದ್ದು ಬರ್ಡ್-ಕೆ ಸಂಸ್ಥೆಯ "ಜಲ ಜೀವನಿ" ಯೋಜನೆ. ಕೇವಲ ಎರಡೂವರೆ ವರ್ಷದಲ್ಲಿ 11 ಹಳ್ಳಿಗಳ ಸಾವಿರಾರು ಕುಟುಂಬಗಳಲ್ಲಿ ಆತ್ಮ ವಿಶಾಸವನ್ನು ಮರಳಿಸಿದ ವಿಶಿಷ್ಟ ಯೋಜನೆ ಇದು. ಯೋಜನೆ ಅಡಿಯಲ್ಲಿ ಇಂದು ಎರಡೂವರೆ ಸಾವಿರ ಹೆಕ್ಟೇರ್ ಗೂ ಅಧಿಕ ಭೂಮಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗಿದೆ.
ಯೋಜನಾ ಪ್ರದೇಶ
ದಕ್ಷಿಣ ಕರ್ನಾಟಕ ವ್ಯಾಪ್ತಿಯ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹಾಲ್ದೊಡ್ಡೇರಿ ಕೆರೆ ಕಿರು ಜಲಾನಯನ ಪ್ರದೇಶವು ಬಹುತೇಕ ಒಣ ಭೂಮಿ. ಸದಾ ಬರಕ್ಕೆ ಎದೆಯೊಡ್ಡುವ ಪ್ರದೇಶ. ನಿಶ್ಚಿತ ಮಳೆ ಭರವಸೆ ಇಲ್ಲ. ವಾರ್ಷಿಕ ಸರಾಸರಿ ಮಳೆ ಕೇವಲ 443.8 ಮಿ.ಮೀ. ತುಮಕೂರು ಜಿಲ್ಲಾ ಕೇಂದ್ರದಿಂದ ಅಂದಾಜು 100 ಕಿ.ಮೀ. ದೂರದಲ್ಲಿದೆ. ಈ ಜಲಾನಯನ ಪ್ರದೇಶವು 2869.5 ಹೆಕ್ಟೇರ್ ವ್ಯಾಪ್ತಿಯಿದ್ದು 11 ಹಳ್ಳಿಗಳನ್ನೊಳಗೊಂಡಿದೆ. ಅವುಗಳೆಂದರೆ; ಗಿಡದಾಗಲಹಳ್ಳಿ, ಬೊರಾಗುಂಟೆ, ವೀರಣ್ಣನಹಳ್ಳಿ, ಕೆ.ಟಿ.ಹಳ್ಳಿ, ಸೀಬಿನಯನಪಾಳ್ಯ,(ಎಲ್ಲವೂ ಮಧುಗಿರಿ ತಾಲ್ಲೂಕು) ಕಬ್ಬಿಗೆರೆ, ಚಿಕ್ಕಣ್ಣನಹಳ್ಳಿ, ಅಜ್ಜೇನಹಳ್ಳಿ, ಮರಾಠಿಗರಪಾಳ್ಯ, (ಎಲ್ಲವೂ ಕೊರಟಗೆರೆ ತಾಲ್ಲೂಕು )ನಂದಿಹಳ್ಳಿ ಮತ್ತು ಬಿಸಾಡಿಹಳ್ಳಿ.(ತುಮಕೂರು ತಾಲ್ಲೂಕು.)
ಯೋಜನಾ ಪ್ರದೇಶದ ಆಯ್ಕೆಗೆ ಕಾರಣಗಳು.
ಬರ್ಡ್-ಕೆ ಸಂಸ್ಥೆಯು ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಇಲ್ಲಿದ್ದಂತಹ ಮಣ್ಣು ಮತ್ತು ನೀರಿನ ಸಮಸ್ಯೆಗಳು. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾರೆ,
1. ವಿಪರೀತ ಮಣ್ಣಿನ ಸವಕಳಿ: ಈ ಪ್ರದೇಶದಲ್ಲಿ ವಿಪರೀತ ಮಣ್ಣು ಸವಕಳಿ ಸಮಸ್ಯೆಯಿಂದಾಗಿ ಮಣ್ಣಿನ ರಚನೆ ಹಾಳಾಗಿ ಅದರ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ ಕುಂಠಿತವಾಗಿತ್ತು. ಕೃಷಿಗೊಳಪಡುವ ಭೂಮಿಯು 60 ರಿಂದ 90 ಸೆಂಟಿಮೀಟರ್ ಆಳವಿದ್ದು ಮರಳು ಮಿಶ್ರಿತ ಕೆಂಪು ಮಣ್ಣಾಗಿದೆ. ಬಹುತೇಕ ಮಣ್ಣು ದ್ವಿತೀಯ ಮತ್ತು ತೃತೀಯ ದರ್ಜೆಯದಾಗಿರುವುದರಿಂದ ಇದರ ಸುಧಾರಣೆಗಾಗಿ ಹಲವಾರು ರೀತಿಯ ಉಪಚಾರಗಳ ಅವಶ್ಯಕತೆ ಇತ್ತು. ಮಣ್ಣು ಈ ರೀತಿ ಸಡಿಲವಾಗಿದ್ದುದರಿಂದ ಸಹಜವಾಗಿಯೇ ಸವಕಳಿಗೆ ತುತ್ತಾಗುತ್ತಿತ್ತು. ಜಲಾನಯನದ ಮೇಲ್ಬಾಗದಲ್ಲಿ ಮಣ್ಣು ಹಿಡಿದಿಡುವ ಗಿಡ-ಮರ, ಅಥವಾ ಹುಲ್ಲುಗಾವಲುಗಳು ಇಲ್ಲದಿರುವುದರಿಂದ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು.
2. ಸಾರವಿಲ್ಲದ ಮಣ್ಣು: ಫಲವತ್ತಾದ ಮೇಲ್ಮಣ್ಣು ವರ್ಷಗಟ್ಟಲೆ ಸವೆದು ಹೋಗಿ ಉಳಿದಂತಹ ಮಣ್ಣು ಹೆಚ್ಚು-ಕಡಿಮೆ ನಿರ್ಜೀವ ಹಂತ ತಲುಪಿತ್ತು. ಈ ಮಣ್ಣಿನಲ್ಲಿ ಯಾವ ಬೆಳೆ ಇಟ್ಟರೂ ಸರಿಯಾದ ಇಳುವರಿ ಬರುತ್ತಿರಲಿಲ್ಲ. ಅಲ್ಲದೆ ವಿಪರೀತ ರಾಸಾಯನಿಕಗಳ ಬಳಕೆ, ನೀರಾವರಿ ಸೌಲಭ್ಯಗಳ ಕೊರತೆ, ಅಸಮರ್ಪಕ ಬೆಳೆ ಪದ್ಧತಿಗಳೂ ಸಹ ಮಣ್ಣಿನ ಉತ್ಪಾದಕತೆ ಕುಂಠಿತವಾಗಲು ಕಾರಣಗಳಾಗಿದ್ದವು.
3. ನೀರಿನ ಕೊರತೆ: ಮತ್ತೊಂದು ಮುಖ್ಯ ಸಮಸ್ಯೆ ನೀರಿನ ಅಲಭ್ಯತೆ. ಕೃಷಿಗೆ ಮತ್ತು ಕುಡಿಯುವ ನೀರಿಗಾಗಿ ಜನರ ಪರದಾಟ ಹೇಳತೀರದಾಗಿತ್ತು. ಎಷ್ಟೋ ಕೊಳವೆ ಬಾವಿಗಳು ಒಣಗಿಹೋಗಿದ್ದರೆ, ಉಳಿದವು ಅಲ್ಪ-ಸ್ವಲ್ಪ ನೀರು ಹರಿಸುತ್ತಾ ಕುಟುಕು ಜೀವ ಉಳಿಸಿಕೊಂಡಿದ್ದವು. ಸದಾ ರಿಪೇರಿಗೆ ಬರುತ್ತಿದ್ದ ಅವುಗಳನ್ನು ನಿರ್ವಹಿಸುವುದೇ ರೈತರಿಗೆ ಕಷ್ಟವಾಗಿತ್ತು. ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿಗೆ ಕೊಳವೆ ಬಾವಿ ನೀರೇ ಅಸರೆ, ಆದರೆ ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಸುರಕ್ಷಿತತೆ ಮತ್ತು ನೈರ್ಮಲ್ಯತೆಯೇ ಇಲ್ಲವಾಗಿತ್ತು.
4. ಕೃಷಿ ಕ್ಷೇತ್ರದ ಅವಗಣನೆ: ಮಣ್ಣಿನ ಸವಕಳಿಯಿಂದ ಕೃಷಿ ಉತ್ಪಾದಕತೆ ಒಂದೆಡೆ ಕಡಿಮೆಯಾಗಿದ್ದರೆ ಮತ್ತೊಂದೆಡೆ ಏಕ ಬೆಳೆ ಪದ್ಧತಿ ಅನುಸರಣೆ, ಕೀಟ-ರೋಗಗಳ ಹಾವಳಿ, ನೂತನ ತಾಂತ್ರಿಕತೆಗಳ ಬಗ್ಗೆ ಅಜ್ಞಾನ. ಮುಂತಾದವುಗಳಿಂದ ಕೃಷಿ ದುಬಾರಿಯಾಗಿತ್ತು. ಲಾಭಕ್ಕಿಂತ ಖರ್ಚೇ ಹೆಚ್ಚಾಗಿ ರೈತರು ಬೇಸಾಯದಿಂದ ವಿಮುಖರಾಗುವ ಮನಸ್ತಿತಿಯಲ್ಲಿದ್ದರು.
ಇವುಗಳಲ್ಲದೆ, ಬಡತನ, ಅಪೌಷ್ಠಿಕತೆ, ಜನರ ಸಾಮಾಜಿಕ-ಆರ್ಥಿಕ ಹಿನ್ನಡೆ, ನಿರುದ್ಯೋಗ, ಅರೆ ಉದ್ಯೋಗ ಮುಂತಾದ ಅನೇಕ ಸಮಸ್ಯೆಗಳು ಇಲ್ಲಿದ್ದುದರಿಂದ ಬರ್ಡ್-ಕೆ ಸಂಸ್ಥೆಯು "ಜಲ ಜೀವನಿ" ಯೋಜನೆಯನ್ನು ಹಮ್ಮಿಕೊಂಡಿತು.
ಮೇಲ್ಕಂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೊಪಿಸಿ ರೈತರಲ್ಲಿ ಆತ್ಮ ವಿಶ್ವಾಸ ವೃದ್ಧಿಸಲು ಸಂಸ್ಥೆಯು ಹಲವಾರು ಚಟುವಟಿಕೆಗಳ ಮೂಲಕ ಕಾರ್ಯೋನ್ಮುಖವಾಯಿತು. ಈ ಚಟುವಟಿಕೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.
1. ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ
2. ಸಮುದಾಯದ ಸಾಮಾಜಿಕ, ಆರ್ಥಿಕ ಮಟ್ಟದ ಅಭಿವೃದ್ಧಿ, ತರಬೇತಿ ಮತ್ತು ಸಂಘಟನೆ.
ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಜಲ ಸಂಪನ್ಮೂಲಗಳನ್ನು ವೃದ್ಧಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಹೊಂದಿಕೆಯಾಗುವ ವಿಧಾನಗಳ ಅಳವಡಿಕೆ ಗಮನಿಸಬೇಕಾದ ಅಂಶ. ಪ್ರತಿಯೊಂದು ವಿಧಾನವೂ ಏಕಕಾಲಕ್ಕೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವಂತಹವು. ಕೆಲವು ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ.
1. ಹರಿವ ನೀರನ್ನು ಕಟ್ಟಿಹಾಕುವ ಉದಿ-ಬದುಗಳು: ಮೊದಲೇ ಹೇಳಿದಂತೆ ಹಾಲ್ದೊಡ್ಡೇರಿ ಜಲಾನಯನ ಪ್ರದೇಶವು ಏರು-ತಗ್ಗುಗಳಿಂದ ಕೂಡಿದ್ದು ಬಹುತೇಕ ಎರಡು ಮತ್ತು ಮೂರನೇ ದರ್ಜೆಯ ಮಣ್ಣುಳ್ಳದ್ದಾಗಿದೆ. ವಿಪರ್ಯಾಸವೆಂದರೆ, ಬೇಸಾಯಕ್ಕೊಳಪಡುವ ಭೂಮಿಗೆ ಅತ್ಯಗತ್ಯವಾಗಿ ಬೇಕಾದ ಉದಿ-ಬದುಗಳೇ ಇಲ್ಲ. ಈ ಅಂಶವನ್ನು ಮನಗಂಡ ಸಂಸ್ಥೆ ಪ್ರತಿ ಹೆಕ್ಟೇರ್ ಗೆ 75 ಕ್ಯುಬಿಕ್ ಮೀಟರ್ ನಷ್ಟು ಉದಿ-ಬದು ಹಾಕಲು ತೀರ್ಮಾನಿಸಿತು. ಇಷ್ಟು ಅಳತೆಯಲ್ಲಿ ಪ್ರತಿ ಸಲ 1500 ಲೀಟರ್ ನೀರು ಸಂಗ್ರಹ ಸಾಧ್ಯ. ಮಣ್ಣು ಸವಕಳಿ ತಡೆಗೆ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ ಎಂಬುದು ಕಬ್ಬಿಗೆರೆಯ ಹನುಮಂತಪ್ಪನವರ ಅನುಭವ. ಬದುಗಳ ಮೇಲೆ ಹೆಮಟ ಹುಲ್ಲನ್ನು ಬೆಳೆಯಲು ಯೋಜನೆಯಿಂದ ಉತ್ತೇಜನ ನೀಡಿರುವುದಲ್ಲದೆ ಬೀಜಗಳನ್ನೂ ಸಹ ಪೂರೈಸಲಾಗಿದೆ, ಇದರಿಂದ ಬದುಗಳು ಭದ್ರಗೊಳ್ಳುವುದಲ್ಲದೆ ರೈತರಿಗೆ ಉತ್ತಮ ಮೇವು ಲಭ್ಯವಾಗುತ್ತದೆ. ಅಲ್ಲದೆ ಈ ಬದುಗಳ ಮೇಲೆ ವಿವಿಧ ರೀತಿಯ ಕಾಡುಗಿಡಗಳನ್ನು ಬೆಳೆಸಲಾಗುತ್ತಿದೆ. ಯೋಜನೆಯು ಸಮುದಾಯ ಸಹಭಾಗಿತ್ವ ತತ್ವವನ್ನಾಧರಿಸಿದ್ದು ಈ ಉದಿ-ಬದು ಚಟುವಟಿಕೆಗೆ ಆಯಾ ಜಮೀನಿನ ಮಾಲೀಕರು ಶೇ 50 ರಷ್ಟು ವಂತಿಕೆ ಭರಿಸಬೇಕು, ಈ ನಿಯಮಕ್ಕೆ ಎಲ್ಲಾ ಹಳ್ಳಿಗಳ ರೈತರೂ ಅಕ್ಷರಶಃ ಒಪ್ಪಿರುವುದಲ್ಲದೆ ತಾವೇ ಖುದ್ದಾಗಿ ನಿಂತು ತಮ್ಮ-ತಮ್ಮ ಹೊಲಗಳಿಗೆ ಉದಿ-ಬದು ಹಾಕಿಸಿಕೊಂಡಿದ್ದಾರೆ.
2. ಇಂಗು ಹೊಂಡಗಳು: ಜಲಾನಯನ ಪ್ರದೇಶದಲ್ಲಿ ಪ್ರತಿ 2-3 ಹೆಕ್ಟೇರ್ ಗೆ ಒಂದರಂತೆ ಸರಣಿಯೋಪಾದಿಯಲ್ಲಿ ಇಂಗು ಹೊಂಡಗಳನ್ನು ತೆಗೆಯಲಾಗಿದೆ. ಉದಿ-ಬದುಗಳ ಮೂಲಕ ಪ್ರತಿಯೊಂದು ಗುಂಡಿಗೂ ಸಂಪರ್ಕವೇರ್ಪಡುವಂತೆ ಮಾಡಲಾಗಿರುವುದು ವಿಶೇಷ. ಉದಿ-ಬದುಗಳನ್ನು ತುಂಬಿ ಹೆಚ್ಚಾದ ನೀರು ಸಾಗಿ ಬಂದು ಈ ಹೊಂಡಗಳಲ್ಲಿ ಶೇಖರಗೊಳ್ಳುತ್ತದೆ. "30 ಅಡಿ ಅಗಲ, 30 ಅಡಿ ಉದ್ದ ಮತ್ತು 10 ಅಡಿ ಆಳದ ಗುಂಡಿಯೊಂದು ಪ್ರತಿಬಾರಿ ತುಂಬಿದಾಗ ಒಂದೂವರೆ ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ" ಎನ್ನುತ್ತಾರೆ ಯೋಜನೆಯ ಹಿರಿಯ ವಲಯ ಕಾರ್ಯಕ್ರಮ ಅಧಿಕಾರಿ ಧನಂಜಯ ಟಿ.ಎಸ್.
ಪ್ರಸ್ತುತ ಯೋಜನಾ ಪ್ರದೇಶದಲ್ಲಿ 200 ಇಂಗು ಹೊಂಡಗಳಿದ್ದು ನೀರು ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ಸಲ್ಲಿಸಿವೆ. ಈ ಹೊಂಡಗಳಲ್ಲಿ ದೀರ್ಘಕಾಲ ನೀರು ಸಂಗ್ರಹವಾಗಿ ನಿಧಾನವಾಗಿ ನೆಲದಲ್ಲಿ ಇಂಗುತ್ತದೆ. ಈ ಸಂಗ್ರಹಿತ ನೀರನ್ನು ರೈತರು ತರಕಾರಿ, ಹೂವಿನ ತೋಟಗಳಿಗೆ ಕೈನೀರು ಹಾಕಲು ಬಳಸುತ್ತಿದ್ದಾರೆ.
3. ಹೂಳು ತೆಗೆಯುವುದು: ಈ ಜಲಾನಯನ ಪ್ರದೇಶದಲ್ಲಿ 17 ಚೆಕ್ ಡ್ಯಾಮ್ ಗಳು, 16 ಗೋಕಟ್ಟೆಗಳು ಮತ್ತು ಒಂದೆರಡು ಇತರ ನೀರಿನ ಕುಂಟೆಗಳಿರುವುದನ್ನು ಯೋಜನೆಯು ಗುರುತಿಸಿತು. ಇವು ಬಹಳ ವರ್ಷಗಳ ಹಿಂದೆ ಜನರ ಸಹಭಾಗಿತ್ವ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ನಿರ್ಮಾಣವಾಗಿದ್ದು, ಪ್ರಸ್ತುತ ಹೂಳು ತುಂಬಿ ಹಾಳಾಗಿದ್ದವು. ಅವುಗಳ ನೀರು ಹಿಡಿದಿಡುವ ಸಾಮರ್ಥ್ಯ ಕುಂಠಿತಗೊಂಡಿತ್ತು. ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ವೃದ್ಧಿಸಲು, ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ರಚನೆಗಳ ಹೂಳೆತ್ತುವಿಕೆಗೆ ಜನರ ಮನವೊಲಿಸಲಾಯಿತು. ಬಹುತೇಕ ಸರ್ಕಾರೀ ಜಮೀನಿನಲ್ಲಿದ್ದ ಇವುಗಳಲ್ಲಿ ಬೃಹತ್ ಪ್ರಮಾಣದ ಹೂಳು ಶೇಖರವಾಗಿತ್ತು. ಅತ್ಯಂತ ಫಲವತ್ತಾಗಿದ್ದ ಈ ಮಣ್ಣನ್ನು ತಮ್ಮ ಹೊಲಗಳಿಗೆ ಸಾಗಿಸಲು ರೈತರು ಉತ್ಸಾಹದಿಂದಲೇ ಮುಂದೆ ಬಂದರು. ಹೂಳು ತೆಗೆದ ಪರಿಣಾಮ ಅಪಾರ ಪ್ರಮಾಣದ ನೀರು ಈ ರಚನೆಗಳಲ್ಲಿ ಶೇಖರಣೆಗೊಂಡು ಸುತ್ತ-ಮುತ್ತಲ ವಿಶಾಲ ಭೂಮಿಗೆ ತಂಪೆರೆಯುತ್ತಿವೆ ಹಾಗೂ ಕೊಳವೆಬಾವಿಗಳಿಗೆ ನೀರಿನ ಸೆಲೆಯಾಗಿವೆ.
ಗೋಕಟ್ಟೆ ಮತ್ತು ಚೆಕ್ ಡ್ಯಾಮ್ ಗಳ ಆಸು-ಪಾಸಿನಲ್ಲಿದ್ದ ಮರವಳಿಗೆ- ಅದರಲ್ಲಿಯೂ ಹುಣಸೆ ಮರಗಳಿಗೆ ಇದರಿಂದ ಮರುಜನ್ಮ ಬಂದಂತಾಗಿದೆ ಎನ್ನುತ್ತಾರೆ ಇಲ್ಲಿನ ರೈತರು. ನಂದಿಹಳ್ಳಿಯ ರಂಗನಾಥ್ ತಮ್ಮ ಜಮೀನಿನಲ್ಲಿ ಫಲಭರಿತ ಹುಣಸೆಮರವನ್ನು ತೋರಿಸಿ ಅದರ ಪಕ್ಕದಲ್ಲಿದ್ದ ಚೆಕ್ ಡ್ಯಾಮ್ ನಲ್ಲಿ ಹೂಳು ತೆಗೆದದ್ದರಿಂದ ನೀರು ನಿಂತ ಪರಿಣಾಮ ಇದು ಎನ್ನುತ್ತಾರೆ.
೪. ಸಮುದಾಯ ಕೊಳವೆ ಬಾವಿ ಮರುಪೂರಣ: ಇದೊಂದು ವಿಶಿಷ್ಟ ಪ್ರಯತ್ನ. ಇದೇ ಯೋಜನಾ ವ್ಯಾಪ್ತಿಯಲ್ಲಿ ಹಿಂದೆ "ಬೆರಿ"(ಹಸಿರು ಶಕ್ತಿ ) ಯೋಜನೆಯಡಿಯಲ್ಲಿ ಸಮುದಾಯ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಉದ್ದೇಶ 5-6 ಬಡ ರೈತರಿಗೆ ಒಂದೇ ಕೊಳವೆ ಬಾವಿಯ ನೀರನ್ನು ಸರದಿಯಂತೆ ಒದಗಿಸುವುದು. ಆ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ಮೂಲಕ ಅವುಗಳ ಕಾರ್ಯ ಕ್ಷಮತೆಯನ್ನು ನಿರಂತರವಾಗಿಸುವುದು ಈ ಚಟುವಟಿಕೆಯ ಉದ್ದೇಶ. ಅಂದಾಜು 18 ಸಮುದಾಯ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ವ್ಯವಸ್ತೆಯಾಗಿದೆ. ಪ್ರತಿಯೊಂದು ಸಮುದಾಯ ಕೊಳವೆ ಬಾವಿಯ ಕೇಸಿಂಗ್ ಪೈಪಿನ ಸುತ್ತ 11 ಅಡಿ ಉದ್ದ 11 ಅಡಿ ಅಗಲ ಮತ್ತು 10 ಅಡಿ ಆಳದ ಗುಂಡಿ ತೆಗೆದು, ಪದರ-ಪದರವಾಗಿ ದಪ್ಪ ಜಲ್ಲಿ ,ಸಣ್ಣ ಜಲ್ಲಿಯನ್ನು ಹಾಕುತ್ತಾ ಬಂದು ಕೊನೆಯಲ್ಲಿ ಜಾಲರಿಯನ್ನು ಹಾಸಿ ಅದರ ಮೇಲೆ ಒಂದು ಪದರ ಮರಳು ಹಾಕಲಾಗುತ್ತದೆ. ಸುತ್ತಲೂ ಸಿಮೆಂಟಿನ ಕಟ್ಟೆ ಮಾಡಿ ಮಳೆ ಬಂದಾಗ ಅಕ್ಕ-ಪಕ್ಕದ ನೀರು ಆ ಕಟ್ಟೆಗೆ ಹಾಯುವಂತೆ ದಾರಿ ಕಲ್ಪಿಸಲಾಗುತ್ತದೆ. ಮಳೆ ನೀರು ಈ ಮೂಲಕ ನೆಲದಲ್ಲಿ ಹಿಂಗಿ ಕೊಳವೆ ಬಾವಿಗೆ ನೀರಿನ ಮೂಲವಾಗುತ್ತದೆ. ಕಬ್ಬಿಗೆರೆ ಮರಾಠಿಪಾಳ್ಯದ ಸಮುದಾಯ ಕೊಳವೆಬಾವಿಗೆ 6 ಜನ ಫಲಾನುಭವಿಗಳಿದ್ದು ತಲಾ ಅರ್ಧ ಎಕರೆ ಜಮೀನಿಗೆ ನೀರು ಪಡೆಯುತ್ತಿದ್ದಾರೆ.
ಈ ಚಟುವಟಿಕೆಗಳಿಗೆ ಪೂರಕವಾಗಿ ಇಳಿಜಾರುಗಳಲ್ಲಿ ಹೆಚ್ಚಿನ ಕೊರಕಲನ್ನು ತಡೆಯಲು ತಡೆಗೋಡೆಗಳ ನಿರ್ಮಾಣ, ಮಣ್ಣು ಹಿಡಿದಿಡಲು ಕತ್ತಾಳೆ ತಡೆಗಳ ನೆಡುವಿಕೆ, ಉದಿ-ಬದುಗಳಲ್ಲಿ ತುಂಬಿ ಹೆಚ್ಚಾದ ನೀರು ಸರಾಗವಾಗಿ ಹರಿಯಲು ಕಲ್ಲಿನ ಕೊಡಿಗಳ ನಿರ್ಮಾಣ, ತೆರೆದ ಬಾವಿಗಳಿಗೆ ಹಳ್ಳದ ನೀರಿನ ಸಂಪರ್ಕ ಕಲ್ಪಿಸಿ ಮರುಪೂರಣ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿತಗೊಳಿಸಲು ಸಾವಯವ ಪ್ರಾತ್ಯಕ್ಷಿಕೆಗಳು, ಇದಕ್ಕೆ ಪೂರಕವಾಗಿ ಎರೆಹುಳು ತೊಟ್ಟಿಗಳ ನಿರ್ಮಾಣಕ್ಕೆ ಉತ್ತೇಜನ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಗ್ರ ಮಣ್ಣು-ನೀರು ಸಂರಕ್ಷಣೆ ಮಾಡಲಾಗಿದೆ. ಪ್ರತಿಯೊಂದು ಚಟುವಟಿಕೆಯೂ ಸಹ ಪರಸ್ಪರ ಪೂರಕವಾಗಿವೆ. ಅದೇ ರೀತಿ ಅವುಗಳನ್ನು ಸಂಯೋಜಿಸಲಾಗಿದೆ.
ಈ ಎಲ್ಲಾ ಚಟುವಟಿಕೆಗಳು ಸಕಾಲದಲ್ಲಿ ಅನುಷ್ಠಾನಗೊಂಡು ನಿರೀಕ್ಷಿತ ಫಲಿತಾಂಶ ಬರಲು ಸಮುದಾಯ ಸಹಕಾರ ಅತ್ಯಂತ ಮುಖ್ಯ. ಅವರ ಮನವೊಲಿಸಿ, ಸಂಘಟನೆ ಮಾಡಲು ಸಂಸ್ಥೆಯು ನಿರಂತರ ಸಂಪರ್ಕ, ಪ್ರತಿಯೊಬ್ಬ ರೈತರ ಜೊತೆ ವೈಯಕ್ತಿಕ ಸಂಬಂಧ, ಗುಂಪು ಸಭೆಗಳು, ಶೈಕ್ಷಣಿಕ ಪ್ರವಾಸ ಮುಂತಾದ ಅನೇಕ ಮಾರ್ಗಗಳನ್ನು ಅನುಸರಿಸಿದೆ.
ಕಣ್ಣ ಮುಂದಿರುವ ಪರಿಣಾಮಗಳು: ಇಷ್ಟೆಲ್ಲಾ ಚಟುವಟಿಕೆಗಳ ಅನುಷ್ಠಾನ, ಸಮುದಾಯದ ಕೈಜೋಡಿಸುವಿಕೆಯಿಂದ ಉಂಟಾಗಿರುವ ಪರಿಣಾಮ ಅದ್ಭುತ. ಅದು ಯೋಜನಾ ಪ್ರದೇಶದಲ್ಲಿ ಕಾಣುವ ಹಸಿರು, ಫಲಭರಿತ ಹುಣಸೆ ಮರಗಳು, ಮೇಲೇರಿರುವ ನೀರಿನ ಮಟ್ಟ ಮತ್ತು ರೈತಾಪಿಗಳ ವಿಶ್ವಾಸಭರಿತ ಮಾತಿನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕೆಲವು ಅಂಶಗಳನ್ನು ನೋಡುವುದಾದರೆ;
1. ಕೊಳವೆಬಾವಿಗಳಿಗೆ ಮರುಜೀವ: ಯೋಜನೆ ಆರಂಭಕ್ಕೆ ಮುನ್ನ ಇಲ್ಲಿ ಅಂತರ್ಜಲ ಮಟ್ಟ 350 ರಿಂದ 400 ಅಡಿಗಳಿಗಿಳಿದಿತ್ತು, ಈಗ 200 ಅಡಿ ಅಳದಲ್ಲಿಯೇ ನೀರು ಲಭ್ಯವಾಗುತ್ತಿದೆ. ಚಿಕ್ಕಣ್ಣನಹಳ್ಳಿಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಕೊಳವೆ ಬಾವಿಯೊಂದು ಯೋಜನಾ ಅನುಷ್ಠಾನದ ನಂತರ ಮತ್ತೆ ನೀರು ಹರಿಸುತ್ತಿದೆ. ನಂದಿಹಳ್ಳಿಯ ಯಂಜೇರಪ್ಪನವರು 1996ರಲ್ಲಿ ತೆಗೆಸಿದ ಕೊಳವೆ ಬಾವಿ ಆರಂಭದಲ್ಲಿ 2.5 ಇಂಚು ನೀರು ಕೊಡುತ್ತಿತ್ತು. ಕ್ರಮೇಣ ಕಡಿಮೆಯಾಗುತ್ತಾ ಬಂದು 2005 ರಲ್ಲಿ ಕೇವಲ ಅರ್ಧ ಇಂಚಿಗಿಳಿಯಿತು. ಜಲ ಜೀವನಿ ಯೋಜನೆಯಡಿಯಲ್ಲಿ ಇವರು ತಮ್ಮ 10 ಎಕರೆ ಭೂಮಿಯಲ್ಲಿ ಉದಿ-ಬದು ಹಾಕಿಸಿ, 2 ಇಂಗು ಹೊಂಡಗಳನ್ನು ತೆಗೆಸಿದ ಪರಿಣಾಮ ಈಗ ಮತ್ತೆ 2.5 ಇಂಚು ನೀರು ಲಭ್ಯವಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯಂಜೇರಪ್ಪ ಮತ್ತೆರಡು ಇಂಗು ಹೊಂಡ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ನಂದಿಹಳ್ಳಿ ಗ್ರಾಮದ ರಂಗನಾಥ್ ರವರದೂ ಸಹ ಇದೇ ರೀತಿಯ ಅನುಭವ. ಇವರ 2 ಕೊಳವೆಬಾವಿಗಳಲ್ಲಿ ನೀರು ಬಿಟ್ಟೂ-ಬಿಟ್ಟೂ ಬರುತ್ತಿದ್ದುದು ಜಲ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡ ನಂತರ ಉತ್ತಮ ನೀರು ಕೊಡುತ್ತಿವೆ.
"ನಮ್ಮೂರಿನ ಪ್ರತಿಯೊಬ್ಬರೂ ಉದಿ-ಬದು ಹಾಕಿ, ಇಂಗು ಹೊಂಡ ತೆಗೆದು, ಗೋಕಟ್ಟೆಗಳಲ್ಲಿ ಹೂಳು ತೆಗೆದದ್ದರಿಂದ ನಮ್ಮೂರ ಹೊಲಗಳಿಂದ ಒಂದು ಹನಿ ನೀರು ಪಕ್ಕದ ಕೆರೆಗೆ ಹೋಗಿಲ್ಲ, ಹಾಗಾಗಿ ಆ ಕೆರೆ ಈ ಸಲ ತುಂಬಲೇ ಇಲ್ಲ" ಎಂದು ಬಾಯ್ತುಂಬಾ ನಗುತ್ತಾರೆ ಇದೇ ಗ್ರಾಮದ ಪುಟ್ಟರಂಗಯ್ಯ.
2. ಫಸಲಿನ ಇಳುವರಿ ಹೆಚ್ಚಳ: ಇದು ಮತ್ತೊಂದು ಗಮನಿಸಬೇಕಾದ ಪರಿಣಾಮ. ಆಹಾರ ಬೆಳೆಗಳಾದ ರಾಗಿ, ಭತ್ತ ಹಾಗೂ ಉಳಿದ ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿದೆ. ಉದಾಹರಣೆಗೆ ರಾಗಿಯಲ್ಲಿ 7-8 ಚೀಲ ಇದ್ದ ಇಳುವರಿ ಸರಾಸರಿ 2 ಚೀಲಗಳಷ್ಟು ಹೆಚ್ಚಾಗಿದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಹುಣಸೆ ಮರಗಳ ಇಳುವರಿ ಸಹ ಹೆಚ್ಚಿದೆ. ಸಿದ್ದಮ್ಮ ಎಂಬುವರ 3 ಹುಣಸೆ ಮರಗಳು ಪೂರಾ ಒಣಗಿದಂತಾಗಿದ್ದವು ಯೋಜನೆ ನಂತರ ಯಥಾಸ್ತಿತಿ ಇಳುವರಿ ನೀಡುತ್ತಿವೆ. ನಂದಿಹಳ್ಳಿಯ ರಂಗನಾಥ್ ರವರು ಹೇಳುವಂತೆ "ಮುಂಚೆ 7-8 ಕ್ವಿಂಟಾಲ್ ಇಳುವರಿ ನೀಡುತ್ತಿದ್ದ ಮರಗಳಲ್ಲಿ ಕಳೆದ ವರ್ಷ (2007) 10-12 ಕ್ವಿಂಟಾಲ್ ಇಳುವರಿ ಬಂದಿತ್ತು, ಈ ವರ್ಷ (2008) 15-16 ಕ್ವಿಂಟಾಲ್ ಇಳುವರಿ ನಿರೀಕ್ಷಿಸುತ್ತಿದ್ದೇವೆ."
3. ಕೈತುಂಬಾ ಕೆಲಸ: ಯೋಜನೆಯಲ್ಲಿ ಬಹುತೇಕ ಚಟುವಟಿಕೆಗಳು ಮಾನವಶ್ರಮವನ್ನು ಆಧರಿಸಿರುವುದರಿಂದ ಸತತವಾಗಿ ಕೆಲಸದ ಅವಕಾಶ ಲಭಿಸಿದೆ. ಕೇವಲ ಆರು ತಿಂಗಳು ಕೃಷಿ ಕೆಲಸ ನಿರ್ವಹಿಸಿ ಆ ನಂತರ ಕೆಲಸವಿಲ್ಲದೆ ಇರುತ್ತಿದ್ದ ರೈತ ಕುಟುಂಬಗಳಿಗೆ ಆ ಅವಧಿಯಲ್ಲಿ ಕೆಲಸ ಲಭ್ಯವಾಗಿದೆ, ಜೊತೆಗೆ ಕೃಷಿ ಕಾರ್ಮಿಕರಿಗಂತೂ ವರ್ಷವಿಡೀ ಕೆಲಸ ಸಿಕ್ಕಿದೆ. ಇದು ಎಲ್ಲ ವರ್ಗದವರ ಆರ್ಥಿಕ ಪರಿಸ್ತಿತಿ ಉತ್ತಮಗೊಳ್ಳಲು ಸಹಾಯಕವಾಗಿದೆ. ಉದಿ-ಬದು ಹಾಕುವ ಚಟುವಟಿಕೆ ಎಲ್ಲರಿಗೂ ಹೆಚ್ಚು ಕಾಲ ಕೆಲಸ ಒದಗಿಸಿದ್ದು, ಕಲ್ಲುಕೋಡಿ, ಗಲ್ಲಿಪ್ಲಗ್, ಎರೆಹುಳು ತೊಟ್ಟಿ ನಿರ್ಮಾಣ, ಕೊಳವೆ ಬಾವಿ ಮರುಪೂರಣದಂತಹ ಚಟುವಟಿಕೆಗಳು ವಿಶೇಷವಾಗಿ ಬೋವಿಗಳಿಗೆ ಮತ್ತು ಗಾರೆ ಕೆಲಸದವರಿಗೆ ಕೆಲಸ ಒದಗಿಸಿವೆ.
4. ಶಾಲಾ ಮಕ್ಕಳಿಗೆ ನೀರ ಅರಿವು: ಯೋಜನಾ ವ್ಯಾಪ್ತಿಯಲ್ಲಿ ಬರುವ ಕಬ್ಬಿಗೆರೆಯ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಈಗ ನೀರ ನೆಮ್ಮದಿ. ವರ್ಷ ಪೂರ್ತಿ ಮಳೆ ನೀರು ಕುಡಿಯುವ ಅವಕಾಶವನ್ನು ಜಲ ಜೀವನಿ ಯೋಜನೆ ಕಲ್ಪಿಸಿದೆ. 135 ವಿದ್ಯಾರ್ಥಿಗಳು ಮತ್ತು 16 ಬೋಧಕ ಮತು ಬೋಧಕೇತರ ಸಿಬ್ಬಂದಿಗಳಿರುವ ಶಾಲೆಗೆ 10 ಸಾವಿರ ಲೀಟರ್ ಸಾಮರ್ಥ್ಯದ ಎರಡು ಮಳೆ ನೀರು ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿದ್ದು, ಇದರ ಉಸ್ತುವಾರಿಯನ್ನು ಮಕ್ಕಳಿಗೇ ವಹಿಸಲಾಗಿದೆ. ಶಾಲೆಯ ಸುತ್ತ-ಮುತ್ತ ಉದಿ-ಬದು, ಗಲ್ಲಿ ಪ್ಲಗ್ ಮುಂತಾದ ನೀರು ಸಂರಕ್ಷಣಾ ರಚನೆಗಳನ್ನು ನಿರ್ಮಿಸಿ ಮಕ್ಕಳಿಗೆ ನೀರ ಪಾಠ ಹೇಳಿಕೊಡಲಾಗುತ್ತಿದೆ. ಅಲ್ಲದೆ ಶಾಲೆಯ ಆವರಣದಲ್ಲಿ ಔಷಧಿ ತೋಟ ಮತ್ತು ತರಕಾರಿ ತೋಟಗಳನ್ನೂ ಬೆಳೆಸಲಾಗುತ್ತಿದೆ. ಮಕ್ಕಳಿಗೆ ಕಂಪ್ಯೂಟರ್ ಜ್ಞಾನದ ಅವಶ್ಯಕತೆಯನ್ನು ಮನಗಂಡು ಅದರ ವ್ಯವಸ್ಥೆಯನ್ನೂ ಯೋಜನಾ ವತಿಯಿಂದ ಸಹ ಮಾಡಲಾಗಿದೆ. ಈಗ ಕಬ್ಬಿಗೆರೆ ಶಾಲೆ ಉಳಿದ ಶಾಲೆಗಳಿಗೆ ಮಾದರಿ. ಈ ಎಲ್ಲಾ ಚಟುವಟಿಕೆಗಳಿಗೆ ಶಾಲಾ ಸಿಬ್ಬಂದಿಗಳ ನೆರವು ಮತ್ತು ಒತ್ತಾಸೆಗಳೂ ಸಹ ಉತ್ತಮವಾಗಿವೆ ಎನ್ನುತ್ತಾರೆ ಯೋಜನೆಯ ಅಧಿಕಾರಿ ಫಕೀರ ಸ್ವಾಮಿ.
ಒಟ್ಟಾರೆ ಹೇಳಬೇಕೆಂದರೆ "ಜಲಜೀವನಿಯು" ಕಿರು ಜಲಾನಯನ ಯೋಜನೆಗಳಿಗೊಂದು ಉತ್ತಮ ಮಾದರಿ. ಕಾರ್ಯಕ್ರಮಗಳ ಆಯ್ಕೆ, ಅವುಗಳ ವ್ಯವಸ್ತಿತ ಸಂಯೋಜನೆ ಹಾಗೂ ಸಕಾಲದಲ್ಲಿ ಅನುಷ್ಠಾನಗೊಳಿಸಿರುವ ರೀತಿ ಅನುಕರಣ ಯೋಗ್ಯ. ಬರ್ಡ್-ಕೆ ಸಂಸ್ಥೆಯ ಹಿಂದಿನ ಅನುಭವ ಮತು ಬದ್ಧತೆ ಕ್ಷಿಪ್ರ ಗತಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಅಪಾರ ನೆರವಾಗಿದೆ. ಹಾಲ್ದೋಡ್ಡೇರಿ ಜಲಾನಯನ ಪ್ರದೇಶದಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೊಂಡು ಯಶಸ್ವಿಯಾದ ಇದನ್ನು ಈ ವರ್ಷದಿಂದ (2008) ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಅಳವಡಿಸಲು ಸಿದ್ಧತೆಗಳು ನಡೆದಿವೆ.
"ಜಲಜೀವನಿ"ಎಂಬ ಹೆಸರೂ ಸಹ ಅರ್ಥಪೂರ್ಣವಾದುದು. ಎಲ್ಲರ ಜೀವನಕ್ಕೆ ಜಲವೇ ಅತ್ಯಂತ ಮೂಲಭೂತ ಅಂಶವಾಗಿರುವುದರಿಂದ ಅದನ್ನು ಕಾಪಾಡುವುದು ಮತ್ತು ಅಭಿವೃದ್ಧಿಪಡಿಸುವ ಯೋಜನೆಯ ಆಶಯಗಳೆಲ್ಲವೂ ಹೆಸರಿನಲ್ಲೇ ಅಡಗಿದೆ.

ಶನಿವಾರ, ಮೇ 21, 2011

3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ

ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ" ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು.
ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ, ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ ನಮ್ಮ ದಡ್ಡತನಕ್ಕಾಗಿ ನಾನು ಮರುಗಿದ್ದೇನೆ. ಹಾಗಾಗಿ ಈ ಕೇಂದ್ರದ ಬಗ್ಗೆ ನನಗೆ ಕುತೂಹಲ ಬಂತು. ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಿದೆ. ನಾನು ಕೇಳಿದ ಮಾಹಿತಿಗಳೂ, ಅದಕ್ಕೆ ಬಂದ ಉತ್ತರವೂ ಹೀಗಿದೆ:

೧. ಈ ಕೇಂದ್ರ ಹಾಕಿಕೊಂಡಿರುವ ಕಾರ್ಯ ಯೋಜನೆಗಳೇನು?

ನಾಗರೀಕರಲ್ಲಿ ಮಳೆನೀರು ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ ಬಗ್ಗೆ ಜಾಗೃತಿ ನೀಡುವುದು, ಮಳೆ ನೀರು ಕೊಯ್ಲು ಮಾದರಿಗಳನ್ನು ನಾಗರಿಕರ ವೀಕ್ಷಣೆಗೆ ನಿರ್ಮಿಸಲಾಗಿದೆ. ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾಹಿತಿ ಒದಗಿಸುವುದು.

೨. ಕೇಂದ್ರವು ಪ್ರತಿತಿಂಗಳು ತನ್ನ ಕಾರ್ಯವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುತ್ತದೆಯೇ?
ಮೇಲಧಿಕಾರಿಗಳಿಗೆ ಸಲ್ಲಿಸುತ್ತಿದೆ

೩. ಈ ಕೇಂದ್ರದ ಒಟ್ಟು ಸಿಬ್ಬಂದಿಗಳ ಸಂಖ್ಯೆ, ಅವರ ಹುದ್ದೆ ಮತ್ತು ವೇತನದ ವಿವರ

ಒಬ್ಬ ಕಿರಿಯ ಅಭಿಯಂತರರನ್ನು ನಿಯೋಜಿಸಲಾಗಿದೆ. ರೂ. ೧೧,೦೦೦/- ಮತ್ತು ಇತರೆ ಭತ್ಯೆಗಳು

೪.ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚು

ಸುಮಾರು 3 ಕೋಟಿ ರೂಪಾಯಿಗಳು

೫. ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚನ್ನು ಯಾವ ನಿಧಿಯಿಂದ ಭರಿಸಲಾಗಿದೆ?
ಮಂಡಳಿಯ ನಿಧಿಯಿಂದ ಭರಿಸಲಾಗಿದೆ.

ಈ ಸಂಸ್ಥೆಯ ಬಗ್ಗೆ ಈಗ ನಾನು ಏನೂ ಬರೆಯಲಾರೆ. ಇದನ್ನು ಬೆಂಗಳೂರಿನ ಮತ್ತು ಇತರ ಊರುಗಳ ಜನ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಮಾಹಿತಿಯನ್ನು ಓದಿದ ಯಾರಿಗಾದರೂ, ಏನಾದರೂ ಹೇಳಬೇಕೆನಿಸಿದರೆ, ಖಂಡಿತಾ ಹೇಳಿ.

ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ

(ನೀನಾಸಂ ಉಡುಪಿಯಲ್ಲಿ ಆಡಿದ ನಾಟಕ "ನೀರ ನಿಲುತಾಣ"ದ ಕುರಿತ ಚರ್ಚೆಯಲ್ಲಿ ಶ್ರೀ ನರೇಂದ್ರ ಪೈಗಳು "ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು." ಎಂದು ಹೇಳಿದ್ದರು. ಇದು ಅದಕ್ಕೆ ಉತ್ತರವಾಗಿ ಬರೆದದ್ದು. "ಅವಧಿ"ಯಲ್ಲಿ ಪ್ರಕಟವಾಗದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.)
ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಂಡೇ ಬದುಕುತ್ತಿದ್ದೇವೆ. ಆದರೆ, ನಾನು ಮೈಕಿನ ಈ ಕಿರಿಕಿರಿಯಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ನಾಟಕದ ಪ್ರಯೋಗವನ್ನು ಮಾತ್ರ ಅಲ್ಲ, ಮೈಕನ್ನು ಸಹ "ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರ ಪೈಕಿ" ಅಲ್ಲ.
ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು ಸಾಧ್ಯವಿಲ್ಲ. ಅದೂ ಅಲ್ಲದೆ, ಹಾಗೆ ಮಾಡಿದರೆ ಮೈಕಿನ ಗಲಾಟೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಂಭವವೇ ಜಾಸ್ತಿ. ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಕೊಡಬೇಕು. ಇದು ಇನ್ನೂ ದೊಡ್ಡ ರಗಳೆ. ನಮ್ಮ ದೇಶದಲ್ಲಿ ಇದೂ ಸಾಧ್ಯವಿಲ್ಲ. ಮತ್ತೆ? ಫ್ಯಾನಿನ ವೇಗ ಹೆಚ್ಚಿಸಿ, ಸಾಧ್ಯವಾದಷ್ಟೂ ಜೋರಾಗಿ ಶಬ್ದ ಆಗುವಂತೆ ಮಾಡಿ, ಮೈಕ್ ಶಬ್ದ ಬರುವ ಕಡೆಯ ಕಿಟಿಕಿ ಬಾಗಿಲು ಹಾಕಿ, ಮೈಕ್ ಹಾಕಿದವರಿಗೆ ಸಹಸ್ರನಾಮ ಅರ್ಚನೆ ಮಾಡುತ್ತಾ ಮಲಗಿಬಿಡಿ! ಮತ್ತೆ? ಮತ್ತೆ ಬೇರೆ ಯಾರಾದರೂ ನಿಮ್ಮ ಕಷ್ಟ ಕೇಳುವವರು ಸಿಕ್ಕಿದರೆ ನಿಮ್ಮ ತಲೆನೋವು ಅವರಿಗೆ ದಾಟಿಸಿ. ಅಲ್ಲಿಗೆ ಸಮಸ್ಯೆ ಪರಿಹಾರವಾಯಿತು! ಮಗನೋ ಮಗಳೋ ಎರಡನೇ ಪಿಯುಸಿ ಪರೀಕ್ಷೆ ಕಟ್ಟಿದ್ದರೆ ಏನು ಮಾಡುತ್ತೀರಿ? ಕೂತಲ್ಲಿಯೇ ರಕ್ತದೊತ್ತಡ ಹೆಚ್ಚಿಸಿಕೊಳ್ಳಿ!
ಏನು ಮಾಡುವುದು? ಏನು ಪರಿಹಾರ? ಕೆಲವು ವರ್ಷಗಳ ಕೆಳಗೆ ನಾನು ನಮ್ಮ ತಾಲೂಕಿನ ಹಳ್ಳಿಯೊಂದರಲ್ಲಿ ಅದೆಷ್ಟೋ ದಿನಗಳ ಅಖಂಡ ಭಜನೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೊಬ್ಬರನ್ನು ಕೇಳಿದೆ:"ನೀವು ಭಜನೆಗೆ ಮೈಕ್ ಯಾಕೆ ಹಾಕುತ್ತೀರಿ?" (ಹೀಗೆ ಪ್ರಶ್ನೆ ಕೇಳುವುದು ತುಂಬ ಅಪಾಯಕಾರಿ. ನಾನು ಮೊದಲೇ ಬೇರೆ ಪೀಠಿಕೆ ಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ). ಅವರು ನನಗೆ ಭಜನೆಯ ಮಹತ್ವವನ್ನೂ, "ಭಜನೆಯಿದ್ದಲ್ಲಿ ವಿಭಜನೆ ಇಲ್ಲ" ಎಂಬ ತತ್ವವನ್ನೂ ವಿವರಿಸಿ ಹೇಳಿದರು. ನಾನು ಎಲ್ಲವನ್ನೂ ಸಮಾಧಾನದಿಂದ ಕೇಳಿ, "ಅದೆಲ್ಲ ಸರಿಯೇ. ಆದರೆ ಮೈಕ್ ಯಾಕೆ? ಅದಿಲ್ಲದೇ ಭಜನೆ ಮಾಡಬಹುದಲ್ಲ?" ಎಂದೆ. ಆಗ ಅವರು " ಓ ಅದಾ? ಅದು ನೋಡಿ, ಮೈಕ್ ಇಲ್ಲದಿದ್ದರೆ ಭಜನೆ ಮಾಡುವವರಿಗೆ ಉಮೇದೇ ಬರುವುದಿಲ್ಲ" ಎಂದರು. ನನಗೆ ಶಬ್ದಮಾಲಿನ್ಯದ ವಿಷಯದಲ್ಲಿ ಒಂದು ಭಾಷಣ ಮಾಡುವ ಜವಾಬ್ದಾರಿ ಇದ್ದುದರಿಂದ, ನಾನು ಇನ್ನೂ ಹಲವರನ್ನು ಈ ಪ್ರಶ್ನೆ ಕೇಳಿದೆ. ಯಾರೂ ಸಮರ್ಪಕ ಉತ್ತರ ಕೊಡುವುದಿಲ್ಲ. ಆದರೆ, ಈ ಪ್ರಶ್ನೆ ಕೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ..
ಹಲವು ವರ್ಷಗಳ ಕೆಳಗೆ, ಉಡುಪಿಯಲ್ಲಿ ಕ.ಸಾ.ಪ. ಒಂದು ಸಮ್ಮೇಳನ ನಡೆಸಿದಾಗ ಅದಕ್ಕೆ ಪ್ರತಿ ಎಂಬಂತೆ ಅಲ್ಲಿಯೇ ಮತ್ತೊಂದು ಸಮ್ಮೇಳನವೂ ನಡೆಯಿತು. ನಾನು ಅದಕ್ಕೆ ಹೋಗಿದ್ದೆ. ಜಿ. ರಾಜಶೇಖರ ಈ ಪ್ರತಿ ಸಮ್ಮೇಳನದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮ್ಮೇಳನ ಮುಗಿಸಿ ಬಂದ ನಾನು ಅದರ ಕುರಿತಂತೆ ಅವರಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ, ಊರಿಗೆಲ್ಲ ಕೇಳುವಂತೆ ಮೈಕ್ ಹಾಕಿದ ಕ್ರಮದ ಬಗ್ಗೆ ಆಕ್ಷೇಪಿಸಿದ್ದೆ. ಅವರು ನಾನು ಎತ್ತಿದ ಹಲವು ಸಂದೇಹಗಳಿಗೆ ಉತ್ತರ ಕೊಟ್ಟರು. ಮೈಕಿನ ಬಗ್ಗೆ ಮೌನ ವಹಿಸಿದರು. ಎಂಥೆಂಥ ಸೂಕ್ಷ್ಮವಾಗಿ ಆಲೋಚಿಸಬಲ್ಲವರೂ ಸಹ ಮೈಕ್ ಬಳಕೆಯ ಬಗ್ಗೆ ಹೇಗೆ ಒಂದು ನಿರ್ಲಿಪ್ತಿ ಬೆಳಸಿಕೊಂಡು ಬಿಟ್ಟಿರುತ್ತಾರೆ ಎಂಬುದಕ್ಕೆ ಇದನ್ನು ಹೇಳಿದೆ ಅಷ್ಟೆ.
ಬಂಟ್ವಾಳದಲ್ಲಿ ವಂಶ ಎಂಬ ಪತ್ರಿಕೆ ಇದೆ. ಈ ಪತ್ರಿಕೆಯ ಸಂಪಾದಕ ವರ್ಗದವರೊಂದಿಗೆ ನಾನೂ ಸೇರಿಕೊಂಡು ನಮ್ಮೂರಿನ ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ಸಂದರ್ಶನಕ್ಕಾಗಿ ಹೋಗಿದ್ದೆವು. ಪೋಲೀಸಿನವರ ಪ್ರಕಾರ, ಮೈಕು ಒಂದು ಸಮಸ್ಯೆಯೇ ಅಲ್ಲ. ಅದನ್ನು ಬಳಸುವವರೆಲ್ಲ ಸರಿಯಾದ ಲೈಸೆನ್ಸ್ ಪಡೆದೇ ಬಳಸುತ್ತಿದ್ದಾರೆ! ಸಮಸ್ಯೆಯೇ ಅಲ್ಲದ ಮೇಲೆ ಪರಿಹಾರದ ಮಾತೆಲ್ಲಿ ಬಂತು?
ಮಾಹಿತಿ ಹಕ್ಕು ಬಂದನಂತರ ಅದರ ಮೂಲಕ ಈ ಸಮಸ್ಯೆಗೆ ಏನಾದರೂ ಮದ್ದರೆಯಲು ಸಾಧ್ಯವೇ ಎಂದು ಯೋಚಿಸಿದೆ. ದಾರಿ ಕಾಣಲಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಹೀಗೊಂದು ಪತ್ರ ಬರೆದೆ:

ವಿಷಯ: ಧ್ವನಿವರ್ಧಕ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಬಗ್ಗೆ
ಧ್ವನಿವರ್ಧಕಗಳು ಉಂಟು ಮಾಡುವ ಶಬ್ದಮಾಲಿನ್ಯದಿಂದ ಅನೇಕ ನಾಗರಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಸೂಕ್ತ ಮಾಹಿತಿಯ ಕೊರತೆಯಿಂದ ಅಂಥವರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಾಗ, ಅನುಮತಿ ಪಡೆದವರು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡುವಂತೆ ಅವರಿಗೆ ಸೂಚಿಸಬೇಕಾಗಿ ಕೋರುತ್ತೇನೆ.
೧. ಧ್ವನಿವರ್ಧಕ ಬಳಸಲು ಅನುಮತಿ ಪಡೆದವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ
೨. ಬಳಸುವ ಧ್ವನಿವರ್ಧಕಗಳ ಸಂಖ್ಯೆ ಮತ್ತು ಅವುಗಳನ್ನು ಬಳಸುವ ಸ್ಥಳ
೩. ಧ್ವನಿವರ್ಧಕಗಳನ್ನು ಬಳಸುವ ಅವಧಿ (ಯಾವ ತಾರೀಕಿನಿಂದ ಯಾವ ತಾರೀಕಿನವರೆಗೆ ಮತ್ತು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ)
೪. ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ದೂರು ನೀಡಬಹುದಾದ ಅಧಿಕಾರಿಯ ಪದನಾಮ ಮತ್ತು ಮೊಬೈಲ್ ಸಂಖ್ಯೆ/ಸ್ಥಿರ ದೂರವಾಣಿ ಸಂಖ್ಯೆ
(ಯಾವುದೇ ಕಾರ್ಯಕ್ರಮ ಮಾಡುವವರು ತಮ್ಮ ಕಾರ್ಯಕ್ರಮದ ಬಗ್ಗೆ ಕರಪತ್ರ ಅಥವಾ ಆಮಂತ್ರಣವನ್ನು ಮುದ್ರಿಸುತ್ತಾರೆ. ಅದರಲ್ಲಿಯೇ ಈ ಮಾಹಿತಿಗಳನ್ನು ಮುದ್ರಿಸತಕ್ಕದ್ದೆಂದು ಅವರಿಗೆ ಸೂಚಿಸಬಹುದು. ಜೊತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಈ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಬಹುದು.)
ಮೇಲ್ಕಂಡ ಕ್ರಮವನ್ನು ಕೈಗೊಂಡಲ್ಲಿ ಸಾರ್ವಜನಿಕರು ತಮಗೆ ಧ್ವನಿವರ್ಧಕದ ಬಳಕೆಯಿಂದ ಕಿರಿಕಿರಿಯಾದರೆ ಕೂಡಲೇ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ.
ಈ ಪತ್ರಕ್ಕೆ ತಮ್ಮಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತೇನೆ.

ಜಿಲ್ಲಾಧಿಕಾರಿಗಳು "ಸೂಕ್ತ ಹಿಂಬರಹ ನೀಡುವುದು" ಎಂದು ಟಿಪ್ಪಣಿ ಹಾಕಿ, ಪತ್ರವನ್ನು ಎಸ್ ಪಿಯವರ ಆಫೀಸಿಗೆ ಕಳಿಸಿದ್ದಾರೆ.ಅಲ್ಲಿಂದ ಉತ್ತರ ಬಂದಿಲ್ಲ. ಒಂದು ನೆನಪೋಲೆ ಬರೆದಿದ್ದೇನೆ. ಆದರೂ ಉತ್ತರ ಬಂದಿಲ್ಲ. ಇನ್ನೊಂದು ನೆನಪೋಲೆ ಬರೆಯುವ ಸಮಯ ಆಗಿದೆ. ಬರೆಯುತ್ತೇನೆ. ಈ ಹಂತದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವುದನ್ನೂ ಪರಿಶೀಲಿಸಬಹುದು.
ಓದುಗರಿಂದ ಕೂಡಲೇ ಬರುವ ಪ್ರತಿಕ್ರಿಯೆ "ಹೀಗೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ" ಎಂಬುದು. ಅಂಥವರಿಗೆ ನನ್ನ ಪ್ರಶ್ನೆ: "ಬರೆದು ನೋಡಿದ್ದೀರಾ?" ಏನೂ ಮಾಡದಿರುವುದಕ್ಕಿಂತ ಹೀಗೆ ಮಾಡುವುದು ಉತ್ತಮ ಅಲ್ಲವೆ? ಇದು ಪ್ರಜಾಪ್ರಭುತ್ವ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅಣ್ಣಾ ಹಜಾರೆಯಂಥವರಿಂದ ನಮಗೊಂದು ನೈತಿಕ ಬೆಂಬಲಕ್ಕಿಂತ ಹೆಚ್ಚೇನೂ ಸಿಗುವುದು ಸಾಧ್ಯವಿಲ್ಲ.