ಶನಿವಾರ, ಅಕ್ಟೋಬರ್ 19, 2013

ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು



ಬಹಳ ದಿನಗಳಿಂದಲೂ ಎತ್ತಿನಹೊಳೆ ಯೋಜನೆಯ ಕುರಿತು ಒಂದು ಲೇಖನವನ್ನು ಬರೆಯಬೇಕೆಂದು ಯೋಚಿಸುತ್ತಲೇ ಇದ್ದೇನೆ. ದಾಖಲೆಗಳ ಕೊರತೆಯಿಂದಾಗಿ ಬರೆಯುವುದನ್ನು ಮುಂದೆ ಹಾಕುತ್ತಲೇ ಬಂದೆ.  ಆದರೆ ಈಗ, ದಾಖಲೆಗಳ ಸಂಗ್ರಹ ಮುಗಿಯುವ ಕೆಲಸವಲ್ಲ ಎನ್ನಿಸುತ್ತಿದೆ. ಹಾಗಾಗಿ ಇನ್ನೂ  ತಡಮಾಡುವುದು ಬೇಡ,  ಇರುವಷ್ಟು ದಾಖಲೆಗಳನ್ನು ಆಧರಿಸಿ ಬರೆದುಬಿಡುವುದು, ಮುಂದೆ ದಾಖಲೆಗಳು ಸಿಕ್ಕಿದರೆ, ಅವನ್ನು ಸೇರಿಸಬಹುದು ಎಂದುಕೊಂಡು ಬರೆಯುತ್ತಿದ್ದೇನೆ.
ಎತ್ತಿನಹೊಳೆಯಿಂದ ನೀರು ಸಾಗಿಸುವ ಯೋಜನೆಗೆ ಮೂಲಕಾರಣ ಮನುಷ್ಯನ ದುರಾಸೆ ಮತ್ತು ಮೂರ್ಖತನ; ಮೂಲಪ್ರೇರಣೆ ಜಿ.ಎಸ್. ಪರಮಶಿವಯ್ಯನವರ ನೇತ್ರಾವತಿ ತಿರುವು ಯೋಜನೆ.
ಮೂಲಸಮಸ್ಯೆ ಇರುವುದು ನೀರಿನದಷ್ಟೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮೊದಲಾದ ಜಿಲ್ಲೆಗಳಲ್ಲಿ ನೀರಿನ ಬರ ನೀಗಿಸುವುದು ಸರಕಾರದ ಮುಂದಿರುವ ಬಹು ದೊಡ್ಡ ಸವಾಲು. ಈ ಸವಾಲನ್ನು ಉತ್ತರಿಸುವುದಕ್ಕೂ, ಅಲ್ಲಿನ ಜನರ ಓಟಿಗೂ ನಿಕಟ ಸಂಬಂಧ ಏರ್ಪಟ್ಟಿದೆ. ಸಮಸ್ಯೆಯ ಪರಿಹಾರಕ್ಕಾಗಿ ತಾವೇನು ಮಾಡಿದ್ದೇವೆ ಎಂಬುದನ್ನು ಜನರಿಗೆ ವಿವರಿಸಬೇಕಾದ, ಅವರ ಸಿಟ್ಟನ್ನು ಎದುರಿಸಬೇಕಾದ ಇಕ್ಕಟ್ಟಿನ ಸ್ಥಿತಿಗೆ ಅಲ್ಲಿನ ರಾಜಕಾರಣಿಗಳು ಸಿಕ್ಕಿಕೊಂಡಿದ್ದಾರೆ. ಹಾಗಾಗಿ "ಏನಾದರೊಂದನ್ನು" ಮಾಡಿ, ಹಾಗೆ ಮಾಡಿದ್ದನ್ನು ಎದುರಿಟ್ಟು ಜನರ ಸಿಟ್ಟಿನಿಂದ, ಪೆಟ್ಟಿನಿಂದ ತಪ್ಪಿಸಿಕೊಳ್ಳುವುದು ರಾಜಕಾರಣಿಗಳಿಗೆ ಅನಿವಾರ್ಯವಾಗಿದೆ. ನೀರಿಗಾಗಿ ಏನು ಬೇಕಾದರೂ ಮಾಡಲು ಅಲ್ಲಿನ ರಾಜಕಾರಣಿಗಳು ಸಿದ್ಧರಾಗಿರುವುದಕ್ಕೆ, ಜೀವಕ್ಕಿಂತ ಪ್ರಿಯವಾದ ತಮ್ಮ ಹಕ್ಕಿನ ಕುರ್ಚಿಗಳನ್ನು ದಕ್ಷಿಣ ಕನ್ನಡದ ವೀರಪ್ಪ ಮೊಯ್ಲಿಯವರಿಗೆ ಯು.ಟಿ. ಖಾದರರಿಗೆ  ಬಿಟ್ಟುಕೊಟ್ಟಿರುವುದೇ ಸಾಕ್ಷಿ.   ಹಾಗೆ ಮಾಡಿ  ಅವರು "ಎತ್ತಿನಹೊಳೆ" ಎಂಬ ಆಗದಹೋಗದ ಯೋಜನೆಗೆ ಬರಬಹುದಾದ ಪ್ರತಿರೋಧವನ್ನು  ದುರ್ಬಲಗೊಳಿಸಲು ವ್ಯೂಹ ರಚಿಸಿದ್ದಾರೆ, ತಕ್ಕಮಟ್ಟಿಗೆ ಯಶಸ್ಸನ್ನೂ ಗಳಿಸಿದ್ದಾರೆ.
ನನ್ನ ಅನುಭವಕ್ಕೆ ಬಂದಂತೆ ಈ ಪ್ರದೇಶಗಳ ಜನ ನೀರಿನ ಸಮಸ್ಯೆಯಿಂದಾಗಿ ಸಂಪೂರ್ಣ ದಿಕ್ಕೆಟ್ಟಿದ್ದಾರೆ. ಯಾರು ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರಿಲ್ಲ. "ನೀವು ಏನು ಬೇಕಾದರೂ ಹೇಳಿ. ಏನು ಬೇಕಾದರೂ ಮಾಡಿ. ನಮಗೆ ನೀರಿಲ್ಲ. ನೀರು ಬೇಕು. ನೀರು ಕೊಡಿ" ಇದು ಅಲ್ಲಿಯ ಜನರ ಹೊಟ್ಟೆ ಸಂಕಟದ ಮಾತಾಗಿ ಹೋಗಿದೆ. ಸೋತವರನ್ನು ಸಮಾಧಾನ ಮಾಡುವುದು ತುಂಬಾ ಕಷ್ಟ. ನೀವು ಹೇಗೆ ಹೇಳಿದರೂ, ಏನು ಹೇಳಿದರೂ, ಅವರು ಅದನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ.
ಆದರೆ ಸಮಸ್ಯೆಯನ್ನು ವಿಶ್ಲೇಷಿಸದೆ, ಅದರ ಕಾರಣಗಳನ್ನು ಗುರುತಿಸದೆ ಪರಿಹಾರ ಹುಡುಕುವುದೆಂತು? 


ಸಮಸ್ಯೆಯ ಪ್ರಾರಂಭ: ತಂತ್ರಜ್ಞಾನದ ದುರಹಂಕಾರ


ಈ ಸಮಸ್ಯೆಯ ಪ್ರಾರಂಭ ಬಿಂದು ಕೊಳವೆ ಬಾವಿಯ ತಂತ್ರಜ್ಞಾನ. ಸುಮಾರು ನಲವತ್ತು - ಐವತ್ತು ವರ್ಷಗಳ ಹಿಂದೆ ಕೊಳವೆ ಬಾವಿಗಳನ್ನು ಕೊರೆದು ನೆಲದಾಳದಿಂದ ನೀರನ್ನು ಮೇಲೆತ್ತುವ ಹೊಸ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಗೆ ಬಂತು. ಒಂದು ಕಡೆ ಕೊಳವೆಬಾವಿಗಳನ್ನು ಕೊರೆಯುವ ಯಂತ್ರಗಳನ್ನು ತಯಾರಿಸುವ ಕಂಪೆನಿಗಳು ಹುಟ್ಟಿಕೊಂಡು ಭರಾಟೆಯಿಂದ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದವು. ಆ ಯಂತ್ರಗಳ ತಯಾರಿಕೆಗಾಗಿ (ಮತ್ತು ಇದೇ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಆಗುತ್ತಿದ್ದ ಬಹುಮುಖೀ "ಅಭಿವೃದ್ಧಿ"ಗಾಗಿ) ಕಬ್ಬಿಣ ಇತ್ಯಾದಿ ಲೋಹಗಳ ಅಗತ್ಯ ಬಿತ್ತು. ಸರಿ, ಗಣಿಗಾರಿಕೆ ಬೆಳೆಯಿತು. ಅದಿರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಲಾರಿ, ಟಿಪ್ಪರ್ ಮುಂತಾದ ವಾಹನಗಳನ್ನು ತಯಾರಿಸಬೇಕಾಯಿತು. ಅದಿರಿನ ಅಗತ್ಯ ಹೆಚ್ಚಾಯಿತು. ಗಣಿಗಾರಿಕೆ ಬೆಳೆಯಿತು. ಆ ಕೆಲಸಕ್ಕೂ ಯಂತ್ರಗಳ ಅಗತ್ಯ ಬಿತ್ತು. ಈ ಯಂತ್ರಗಳ ಬಳಕೆಗೆ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಬೇಕಾಯಿತು. ಸರಿ, ಡೀಸೆಲ್ ಆಮದು ಹೆಚ್ಚಿತು. (ಜೊತೆಗೇ ನಮ್ಮ ಪರಾವಲಂಬನೆ ಹೆಚ್ಚಿತು. ಆದರೆ ಅಭಿವೃದ್ಧಿಯ ಅಮಲಿನಲ್ಲಿ ಇದನ್ನು ಗಮನಿಸಲು ಯಾರೂ ಸಿದ್ಧರಿರಲಿಲ್ಲ. ಏಕೆಂದರೆ ಅದನ್ನು ಅವರು ಅಭಿವೃದ್ಧಿ ಎಂದು ಪರಿಗಣಿಸಿದ್ದರು). ಯಂತ್ರಗಳ, ವಾಹನಗಳ ವಿತರಕರು ಊರೂರಿನಲ್ಲಿ ಹುಟ್ಟಿಕೊಂಡರು. ವ್ಯಾಪಾರ, ವಹಿವಾಟು ಹೆಚ್ಚಿತು. ಉದ್ಯೋಗಗಳ ಸೃಷ್ಟಿಯಾಯಿತು.

ಇತ್ತ ಊರೂರುಗಳಲ್ಲಿ ನೆಲದಾಳದಿಂದ ನೀರೆತ್ತುವ ಕೆಲಸ ಭರಾಟೆಯಿಂದ ಪ್ರಾರಂಭವಾಯಿತು. ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದುದರಿಂದ ಸುತ್ತಮುತ್ತಲಿನ ಊರುಗಳಿಗೆ ಅದು ಬಹುದೊಡ್ಡ ಮಾರುಕಟ್ಟೆಯಾಗಿತ್ತು. ಏನು ಬೆಳೆದರೂ, ಎಷ್ಟು ಬೆಳೆದರೂ ಬೆಂಗಳೂರಿನಲ್ಲಿ ಬೇಡಿಕೆ ಇದ್ದೇ ಇತ್ತು. ಬೆಂಗಳೂರಿನ ಸುತ್ತಮುತ್ತಲ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರುಗಳ ಜನ ಬೆಂಗಳೂರಿನ ಬೇಡಿಕೆಗಳನ್ನು ಪೂರೈಸಿ, ದುಡ್ಡು ಸಂಪಾದಿಸುವ ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡರು. ಭೂಮಿಯ ಮಾಲಕರಿಗಂತೂ ಬೆಂಗಳೂರು ಹಲವು ರೂಪದಲ್ಲಿ ವರದಾನವಾಯಿತು. ಹೇಗೂ ಕೊಳವೆ ಬಾವಿಗಳಿಂದ ಧಾರಾಳವಾಗಿ ನೀರು ಸಿಕ್ಕುತ್ತಿದ್ದುದರಿಂದ ನೀರಿಗಾಗಿ ಪಾರಂಪರಿಕವಾಗಿ ಜನರು ಅವಲಂಬಿಸಿದ್ದ ಕೆರೆಗಳು ಕ್ರಮೇಣ ನಿಷ್ಪ್ರಯೋಜಕವಾದವು . ನಗರೀಕರಣ ಹೆಚ್ಚಿದಂತೆ, ಸಾರ್ವಜನಿಕ ಆಸ್ತಿಯಾಗಿದ್ದ ಕೆರೆದಳಗಳನ್ನು ಬಲಾಢ್ಯರು ಅತಿಕ್ರಮಿಸಿಕೊಂಡರು. ಕೆರೆಗಳು ನಿಧಾನವಾಗಿ ನಾಮಾವಶೇಷಗೊಂಡವು. ಕೆರೆಗಳೊಂದಿಗೆ ಬೆಳೆದು ಬಂದಿದ್ದ  ಒಂದು ಸಂಸ್ಕೃತಿಯೇ ನಾಶವಾಗಿಹೋಯಿತು. ಮೊದಲಿನ ಕೆಲವು ವರ್ಷ ಕೊಳವೆ ಬಾವಿಗಳು ಧಾರಾಳ ನೀರು ಕೊಟ್ಟಿದ್ದರಿಂದಾಗಿ, ಆ ನೀರಿಗೆ ಅನುಸಾರವಾದ ಹೊಸ ಜೀವನಶೈಲಿಯನ್ನು ಜನ (ಮುಖ್ಯವಾಗಿ ಶ್ರೀಮಂತರು) ರೂಪಿಸಿಕೊಂಡರು. 
ಮನೆಯ ಒಳಗೂ, ಹೊರಗೆ ಕೃಷಿಭೂಮಿಯಲ್ಲೂ ನೀರಿನ ಬಳಕೆಯಲ್ಲಿ ಒಂದು ಕ್ರಾಂತಿಯೇ ಆಗಿಹೋಯಿತು. ಪಾರಂಪರಿಕವಾಗಿ ಈ ಭಾಗಗಳಲ್ಲಿ ಬೆಳೆಯುತ್ತಿದ್ದ ರಾಗಿ ಇತ್ಯಾದಿ ಕಡಿಮೆ ನೀರು ಬೇಡುವ ಬೆಳೆಗಳು ಮೂಲೆಗೆ ಬಿದ್ದವು. ಅಗಾಧ ನೀರು ಬೇಡುವ ವಾಣಿಜ್ಯಬೆಳೆಗಳು ಅ ಸ್ಥಾನವನ್ನು ಆಕ್ರಮಿಸಿಕೊಂಡವು. ಬೆಂಗಳೂರಿನಲ್ಲಿ ಹೊಸ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದವು.  ಆ ಕಟ್ಟಡಗಳ ಸ್ಲಾಬ್ ಗಳನ್ನು ಹಾಕುವಾಗ ಬುಡದಲ್ಲಿ ಆಧಾರಕ್ಕೆ ಕೊಡಲು ಮರದ ಗೂಟಗಳು ಬೇಕಾದವು. ಬೆಂಗಳೂರಿನ ಸುತ್ತಮುತ್ತಲಿನ ಜಮೀನಿದ್ದ ಜನ ನೀಲಗಿರಿ ಮರಗಳನ್ನು ಬೆಳೆದು ದೇಶದ ಅಭಿವೃದ್ಧಿಗೆ ಊರುಗೋಲಾದರು. ಬೆಂಗಳೂರಿನ ಸುತ್ತಲ ಎಲ್ಲ ಊರುಗಳಲ್ಲೂ  ಜನ  ಬೆಂಗಳೂರಿಗಾಗಿ  ಟೊಮೇಟೋ ಬೆಳೆದರು.  ಇದೆಲ್ಲ ಕೆಲಕಾಲ ಚೆನ್ನಾಗಿಯೇ ನಡೆಯಿತು. ಬಹುಶಃ ರೈತರು ಕೆಲವು ಕಾಲ ಚೆನ್ನಾಗಿಯೇ ದುಡ್ಡು ಮಾಡಿದರು.

ಕೃಷಿ ಮಾತ್ರವಲ್ಲ, ಬೆಳೆಯುತ್ತಿದ್ದ ಬೆಂಗಳೂರಿಗೆ ಕಟ್ಟಡ ಕಟ್ಟಲು ಮೂಲಸಾಮಗ್ರಿಗಳು ಬೇಕಾಗಿದ್ದವು. ಕಪ್ಪುಕಲ್ಲು (ಗ್ರಾನೈಟ್) ಬೆಂಗಳೂರಿನ ಸುತ್ತಮುತ್ತಲಿನ ಅನೇಕ ಊರುಗಳಲ್ಲಿ ಧಾರಾಳವಾಗಿ ದೊರೆಯುತ್ತಿತ್ತು. ನಂದಿಬೆಟ್ಟದ ಇಳಿಜಾರಿನಲ್ಲಿ, ಅಂಥದೇ ಇನ್ನೆಷ್ಟೋ ಬೆಟ್ಟಗಳಲ್ಲಿ ಅಂಥ ಕಪ್ಪು ಕಲ್ಲುಗಳ ಸಂದಿನಿಂದ ಮೆಲ್ಲನೆ ನೀರು ಒಸರಿ, ಕೊನೆಗೆ ಅರ್ಕಾವತಿಯೋ, ಕುಮುದ್ವತಿಯೋ, ಪಾಲಾರೋ, ದಕ್ಷಿಣ ಪಿನಾಕಿನಿಯೋ, ಉತ್ತರ ಪಿನಾಕಿನಿಯೋ ಇನ್ನಾವುದೋ ಹೊಳೆಯೋ ರೂಪುಗೊಳ್ಳುತ್ತಿತ್ತು. ಆದರೆ ನೀರಿಗೆ ಹೇಗೂ ಬೋರ್ ವೆಲ್ ಇದೆ, ಇನ್ನು ನದಿಗಳಿಂದಾಗಬೇಕಾದ್ದೇನು? ಬಂಡೆ, ಬೆಟ್ಟಗಳನ್ನು ಉಳಿಸಿ ಆಗಬೇಕಾದ್ದೇನು? ನದಿಗಳ ಜಲಾನಯನ ಪ್ರದೇಶದಲ್ಲಿ ಕಪ್ಪುಕಲ್ಲಿನ ಗಣಿಗಾರಿಕೆ ಯಾವ ಅಡೆತಡೆಯೂ ಇಲ್ಲದೆ ನಡೆಯಿತು. ಅಧಿಕೃತ ಗಣಿ ಒಂದಾದರೆ ಅನಧಿಕೃತ ಹತ್ತು. ಕೇಳುವವರು ಯಾರು? ಈಗ ಎಲ್ಲಿ ಕೇಳಿದರೂ ಡೈನಮೈಟಿನ ಸದ್ದು, ಲಾರಿಗಳು ಅತ್ತಿತ್ತ ಓಡಾಡುವ ಭರಾಟೆ. ಎಲ್ಲರ ಕೈಯಲ್ಲೂ ಹಣ, ಎಂಥ ಚಿಕ್ಕ ಹಳ್ಳಿಯಲ್ಲೂ ಒಂದು ಬಾರು. (ಇದು ಬೆಂಗಳೂರಿನ ಸುತ್ತಮುತ್ತಲಿಗೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ; ಬಹುಶಃ ಅಖಿಲ ಭಾರತ ವಿದ್ಯಮಾನ. ದ.ಕ.ಜಿಲ್ಲೆಯವರೂ ಇದರಲ್ಲಿ ಹಿಂದೆ ಬಿದ್ದಿಲ್ಲ.)
ಬರೀ ಕಪ್ಪು ಕಲ್ಲು ಸಾಕೆ? ಕಟ್ಟಡ ಕಟ್ಟಲು ಮರಳು ಬೇಡವೆ? ಸರಿ, ಮೊದಮೊದಲಿಗೆ ನದಿಗಳ ಪಾತ್ರದಲ್ಲಿ ಮರಳು ತೆಗೆದರು. ಬೆಂಗಳೂರಿಗೆ ಅದು ಲೆಕ್ಕಕ್ಕೇ ಸಿಗಲಿಲ್ಲ. ಎಷ್ಟು ಮರಳಿದ್ದರೂ, ಇನ್ನೂ ಬೇಕು, ಇನ್ನೂ ಬರಲಿ ಎಂಬ ಮಾತೇ ಎಲ್ಲ ಕಡೆ. ಮರಳಿನ ವ್ಯವಹಾರ ಬೃಹತ್ತಾದ ಒಂದು ಲಾಬಿಯಾಗಿ ಬೆಳೆಯಿತು. ನದಿಯ ಬದಿಯ ಮರಳು ಪೂರ್ತಿ ಖಾಲಿ ಎಂದಾದಾಗ, ಜನ ನದಿಯ ಬದಿಯ ತಮ್ಮ ಸ್ವಂತ ಜಮೀನಿನ ಮಣ್ಣನ್ನು ಕೇರಿ ಅದರಿಂದ ಮರಳು ಹೊರಡಿಸುವ ಹೊಸ "ತಂತ್ರಜ್ಞಾನ"ಕ್ಕೆ ಮೊರೆಹೋದರು. ನದಿಯ ದಂಡೆಗಳು, ನದಿಯ ಬದಿಯ ಜಮೀನುಗಳು ಹೀಗೆ ಬೆಂಗಳೂರಿನ ಸುಂದರ ಕಟ್ಟಡಗಳಾಗಿ ರೂಪುಗೊಳ್ಳುತ್ತಿದ್ದಂತೆ, ಹರಿಯುತ್ತಿದ್ದ ನದಿಗಳು ನಿಧಾನವಾಗಿ ತಮ್ಮ ಹರಿವನ್ನು ನಿಲ್ಲಿಸಿ ಮೌನವಾದವು. ಆದರೆ ಇದನ್ನು ಗುರುತಿಸುವವರು ಯಾರು? ಗುರುತಿಸಿ ಹೇಳುವವರು ಇರಲೇ ಇಲ್ಲವೆಂದಲ್ಲ, ಅವರ ಮಾತು ಅರಣ್ಯರೋದನವಾಯಿತು ಅಷ್ಟೆ.
ಹೀಗೆ ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಊರುಗಳ ಜನ "ಅಭಿವೃದ್ಧಿ"ಗೊಂಡರು. 

ಆದರೆ ಈ ಸಮೃದ್ಧಿಯ ಹಿಂದೆಯೇ ನೀರಿನ ಬರದ ರಾಕ್ಷಸ ನಿಧಾನವಾಗಿ ತನ್ನ ಕೈಯನ್ನು ಚಾಚುತ್ತಿದ್ದ. ಕೊಳವೆ ಬಾವಿಗಳು ಕ್ರಮೇಣ ಮೊದಲಿನಂತೆ ನೀರು ಕೊಡುವುದನ್ನು ನಿಲ್ಲಿಸಿದವು. ನೆಲದ ಹೊಟ್ಟೆಯೊಳಗೆ ಆ ನೀರು ಎಷ್ಟು ಕೋಟಿ ವರ್ಷಗಳಿಂದ ಸಂಗ್ರಹಗೊಂಡಿತ್ತೋ ಯಾರಿಗೆ ಗೊತ್ತು? ಕೇವಲ ಮೂವತ್ತು ನಲವತ್ತು ವರ್ಷಗಳಲ್ಲಿ ನಾವದನ್ನು ನೋಟುಗಳಾಗಿ ಪರಿವರ್ತಿಸಿಕೊಂಡೆವು ಮತ್ತು ಅದನ್ನು "ಅಭಿವೃದ್ಧಿ" ಎಂದು ಕರೆದೆವು! ಪರಿಸ್ಥಿತಿ ಈಗ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ನಾನು ವಿವರಿಸಿ ಹೇಳಬೇಕಿಲ್ಲ. ನಮ್ಮ "ತಂತ್ರಜ್ಞಾನ" ನಮ್ಮನ್ನೀಗ ಅತಂತ್ರರನ್ನಾಗಿಸಿದೆ. ಇನ್ನು ಮುಂದೆ ದಾರಿ ಇಲ್ಲ ಎಂಬಲ್ಲಿಗೆ ನಾವು ತಲುಪಿದ್ದೇವೆ. ಕೆರೆಯ ಕಡೆಗೆ ಹಿಂದೆ ಹೋಗಲು ನಾವು ತಯಾರಿಲ್ಲ. ನಮ್ಮ ನದಿಗಳು ಸತ್ತುಹೋಗಿವೆ. ಕೊಳವೆಬಾವಿ ನಮ್ಮ ಕೈಬಿಟ್ಟಿದೆ.  ನಮ್ಮ ಕೈಯಲ್ಲಿ ಹಣವೇನೋ ಇದೆ. ಸರಕಾರ ನೀರಿಗಾಗಿ ಸಾವಿರ ಸಾವಿರ ಕೋಟಿಗಳನ್ನು ಚೆಲ್ಲಲು ತಯಾರಿದೆ. ಆದರೆ ನೀರೆಲ್ಲಿದೆ?
********************
ಬ್ರಿಟಿಷರ ಕಾಲದಲ್ಲಿ ಅಂದರೆ 1901-03ರ ಅವಧಿಯಲ್ಲಿ ದಕ್ಷಿಣಭಾರತದ ನೀರಾವರಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ "ದಕ್ಷಿಣಭಾರತದ ನೀರಾವರಿ ವರದಿ" ಯನ್ನು ಪ್ರಕಟಿಸಲಾಗಿದೆಯೆಂದು  ತಿಳಿದವರು ಹೇಳುತ್ತಾರೆ. ಅದರಲ್ಲೆಲ್ಲೋ ಒಂದು ಕಡೆ ಹೇಳಿದ್ದಾರಂತೆ: "ಬೆಂಗಳೂರು, ಕೋಲಾರಗಳಲ್ಲಿ ಮೂರು - ನಾಲ್ಕು ಅಡಿ ಅಗೆದರೆ ಭೂಮಿಯಲ್ಲಿ ನೀರು ಸಿಗುತ್ತದೆ"!
ಹಾಗಿದ್ದರೆ  ಕಳೆದೊಂದು ಶತಮಾನದಲ್ಲಿ ನಾವು ಎಲ್ಲಿಂದ ಎಲ್ಲಿಗೆ ಮುಟ್ಟಿದೆವು!
************************
"ನೀರೆಲ್ಲಿದೆ"? ಎಂಬ ಪ್ರಶ್ನೆಗೆ ಉತ್ತರ ಕೊಡುವ, ಕನ್ನಂಬಾಡಿ ಕಟ್ಟಿದ ವಿಶ್ವೇಶ್ವರಯ್ಯನವರನ್ನೂ ಮೀರಬಯಸುವ, ಶ್ರೀ ಜಿ.ಎಸ್. ಪರಮಶಿವಯ್ಯನವರಂಥ ಎಂಜಿನಿಯರುಗಳು ನಮ್ಮಲ್ಲಿದ್ದಾರೆ. ಅವರು ಮತ್ತು ಅವರಂಥವರು ಪಶ್ಚಿಮಘಟ್ಟಗಳ ನೆತ್ತಿಯ ಮೇಲೆ ಬಿದ್ದು, "ವ್ಯರ್ಥವಾಗಿ ಸಮುದ್ರ ಸೇರುವ" ಸಾವಿರಾರು ಟಿಎಂಸಿ ಮಳೆನೀರನ್ನು ಬಯಲುಸೀಮೆಗೆ ಸಾಗಿಸಲು ಯೋಜನೆಗಳನ್ನು ರೂಪಿಸುತ್ತಾರೆ. ಅಂಥವರು, ರೂಪುಗೊಳ್ಳಲು  ಕೋಟಿ ಕೋಟಿ ವರ್ಷಗಳನ್ನು ತೆಗೆದುಕೊಂಡು ಸುತ್ತು ಹೊಡೆಯುತ್ತಿರುವ ಪರಿಸರದ ಸರ್ವವ್ಯಾಪಿ ಮಹಾಚಕ್ರವನ್ನು ಕೇವಲ ಎಂಟು ಹತ್ತು ವರ್ಷಗಳಲ್ಲಿ  ಜೆಸಿಬಿ, ಕ್ರೇನುಗಳಂಥ ಚಿತ್ರವಿಚಿತ್ರ ಯಂತ್ರಗಳನ್ನು ಬಳಸಿ, ಉಪಗ್ರಹಗಳ ಸಹಾಯದಿಂದ, ಕಂಪ್ಯೂಟರುಗಳ ಸಹಾಯದಿಂದ ಮಾಡಿದ ಸೂಕ್ಷ್ಮಾತಿಸೂಕ್ಷ್ಮ ಲೆಕ್ಕಾಚಾರಗಳನ್ನು ಬಳಸಿ ಹಿಮ್ಮುಖವಾಗಿ ತಿರುಗಿಸುವ ದುಸ್ಸಾಹಸದ ಮಾತಾಡುತ್ತಿದ್ದಾರೆ. ಆದರೆ ಹೀಗೆ ಮಾತಾಡುವಾಗ, ಕೊಳವೆಬಾವಿಯ ತಂತ್ರಜ್ಞಾನ ನಮ್ಮನ್ನು ಮುಚ್ಚಿದ ದಾರಿಯ ತುದಿಗೆ ತಂದು ನಿಲ್ಲಿಸಿರುವುದನ್ನು  ಮರೆಯುತ್ತಾರೆ. ಪಶ್ಚಿಮಘಟ್ಟಗಳ ದಟ್ಟ ಕಾಡುಗಳ ನಡುವಿನ ಯಾವುದೋ ಒಂದು ಅಜ್ಞಾತ ಮೂಲೆಯಲ್ಲಿ ಕಳ ಕಳ ಸದ್ದು ಮಾಡುತ್ತಾ ಹರಿಯುವ ಕಿರುತೊರೆಯ ದಂಡೆಯಲ್ಲಿ, ಮಧ್ಯರಾತ್ರಿಯ ಕಪ್ಪುಕತ್ತಲಿನಲ್ಲಿ, ತಲೆಯಮೇಲೆ ಸುರಿಯುತ್ತಿರುವ ಮುಗಿಯುವುದೇ ಇಲ್ಲವೇನೋ ಎಂಬಂಥ ಮಳೆಯನ್ನು ಆನಂದಿಸುತ್ತಾ ಕುಳಿತು ವಟರ್ ವಟರ್ ಎಂದು ವಟಗುಟ್ಟುವ ಸಣ್ಣದೊಂದು ಕಪ್ಪೆಗೂ, ಇಡೀ ವಿಶ್ವದ ಪರಿಸರ ವ್ಯವಸ್ಥೆಗೂ, ಬಿಡಿಸಲಾಗದ  ನಂಟು ಇದೆಯೆಂದು ಯಾರಾದರೂ ಹೇಳಿದರೆ  ತಂತ್ರಜ್ಞಾನದ ಮತ್ತೇರಿದ ಈ ದುರಹಂಕಾರಿಗಳು ಗಹಗಹಿಸಿ ನಗುತ್ತಾರೆ! ದುರದೃಷ್ಟವಶಾತ್, ಆಧುನಿಕ ತಂತ್ರಜ್ಞಾನ ಸೃಷ್ಟಿಸಿರುವ ಕಣ್ಣು ಕೋರೈಸುವ ಬೆಳಕು ಅವರನ್ನು ಕುರುಡರನ್ನಾಗಿಸಿದೆ. "ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲುದು, ದುರಾಸೆಯನ್ನಲ್ಲ" ಎಂಬ ಗಾಂಧೀಜಿಯ ಮಾತುಗಳು ಅಂಥವರಿಗೆ ಕರಟುಪುರಾಣವಾಗಿ ಕೇಳುತ್ತವೆ.
ಹೀಗೆ ನಮ್ಮ ತಂತ್ರಜ್ಞಾನದ ದುರಹಂಕಾರ ಪಾತಾಳದಲ್ಲಿದ್ದ ಅಂತರ್ಜಲ ನಿಧಿಯನ್ನು ಬರಿದುಗೊಳಿಸಿ ಈಗ ಆಕಾಶದಿಂದ ಪಶ್ಚಿಮಘಟ್ಟಗಳ ನೆತ್ತಿಯ ಮೇಲೆ  ಬೀಳುವ ಮಳೆಯೆಂಬ ನಿಧಿಯ ಕಡೆಗೆ ತನ್ನ ಕರಾಳಹಸ್ತವನ್ನು ಚಾಚಿದೆ.

ಎತ್ತಿನಹೊಳೆಯಲ್ಲಿ ನೀರೆಷ್ಟು?


ಕರ್ನಾಟಕ ಸರಕಾರ ನೇತ್ರಾವತಿ ನದಿ ತಿರುವು ಯೋಜನೆಗೆ ಎತ್ತಿನಹೊಳೆ ಯೋಜನೆ ಎಂಬ ಹೆಸರಿನಲ್ಲಿ ಅಡಿಪಾಯ ಹಾಕಿದೆ. "ಕುಡಿಯುವ ನೀರಿನ ಯೋಜನೆ" ಎಂಬ ನೆಪದಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳಿಂದ ಸುಲಭವಾಗಿ ನುಣುಚಿಕೊಂಡಿರುವ ಈ ಯೋಜನೆಯನ್ನು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನೀನಿನಿಗೆ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ವಹಿಸಲಾಗಿದೆ. (ಕರ್ನಾಟಕದಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನ ಯೋಜನೆಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಗತಗೊಳಿಸುತ್ತದೆ). ಕನೀನಿನಿ ಈ ಯೋಜನೆಯ ಸಾಧ್ಯತಾವರದಿಯನ್ನು ಇ. ಐ. ಟೆಕ್ನಾಲಜೀಸ್ ಎಂಬ ಖಾಸಗಿ ಸಂಸ್ಥೆಯಿಂದ ಮಾಡಿಸಿದೆ.
ನೇತ್ರಾವತಿ ನದಿ ತಿರುಗಿಸುವ ಈ ಯೋಜನೆಗೆ ಕನೀನಿನಿಯ ನಾಮಕರಣ: Diversion of flood water from Sakaleshpura (west) to Kolar/Chikkaballapura (east). ಯೋಜನೆಯ ಪ್ರಕಾರ ನೀರಿನ ಲಭ್ಯತೆ 24.01 ಟಿಎಂಸಿ. ಕನೀನಿನಿ ಈ ಪ್ರಮಾಣವನ್ನು ನಿರ್ಧರಿಸಿರುವುದನ್ನು ಹೀಗೆ ವಿವರಿಸಿದೆ: (ಕನೀನಿನಿಯ DPR-2012)
"The streams considered in the Yettinahole subbasin are not gauged. It is therefore necessary to use indirect methods to arrive at the flows at each of the weirs. Since the main river Nethravati is being gauged at Bantwal since 1971, a reasonable approach is to derive the  required flows from the Bantwal flows pro-rata with respect to catchment area and rainfall. The catchment area of Nethravati at Bantwal is 3181 Sq.Kms. Catchment areas of the streams considered at the respective weirs are shown in Table 4.2. The Nethravathi catchment average annual rainfall is 4658 mm. The average annual rainfall of the region in which the weirs are situated is 6280mm. This latter figure has been arrived at based on rainfall records maintained by private planters. Though the exposure conditions of the private rain gauges are not known, the rainfall average of 6280 mm appears reasonable, considering that the region is situated near the crest of the ghats, where rainfall of similar magnitude has been recorded elsewhere. Thus, if the Nethravati gauged flow at Bantwal for a given period of say 10 days is Qm, the flows for the same period at the three weirs can be calculated by the formula

                                                    Q=C.A./3181 x 6280/4658 x Qm

Where Q is the flows at specified weir and C.A. represents the catchment area of the respective weir."

ಕನೀನಿನಿಯ ಈ ವಿವರಣೆಯನ್ನು ಕೊಂಚ ಪರಿಶೀಲಿಸಿ ನೋಡೋಣ:
1. ಮೊದಲಿಗೆ "The streams considered in the Yettinahole subbasin are not gauged" ಎಂದು ಕನೀನಿನಿ ಹೇಳುತ್ತಿರುವುದು ತಪ್ಪು. 18-06-2012ರಲ್ಲಿ ಅಧೀಕ್ಷಕ ಎಂಜಿನಿಯರ್, ಜಲವಿಜ್ಞಾನ ಘಟಕ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರು ಎತ್ತಿನಹೊಳೆಯಲ್ಲಿ ದೊರೆಯುವ ನೀರಿನ ಪ್ರಮಾಣದ ಅಧ್ಯಯನ ವರದಿಯನ್ನು ಜ. ಅ. ಸಂ.ಯ ಮುಖ್ಯ ಎಂಜಿನಿಯರರಿಗೆ ಸಲ್ಲಿಸುತ್ತಾ "ಎತ್ತಿನಹೊಳೆ ಪ್ರದೇಶದಲ್ಲಿ ಕಾಡುಮನೆ ಹಳ್ಳಕ್ಕೆ ಕಾಡುಮನೆ ಹತ್ತಿರ ಮತ್ತು ಎತ್ತಿನಹೊಳೆಗೆ ಹಾರ್ಲೆ ಎಸ್ಟೇಟ್ ಹತ್ತಿರ ಈ ಸಂಸ್ಥೆಯಡಿಯಲ್ಲಿ 1976-77ರಿಂದ ನದಿ ಮಾಪನವನ್ನು ಮಾಡುತ್ತಿದ್ದು, ಈ ಮಾಪನಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ಸಂಬಂಧಿಸಿದ ಅಧೀಕ್ಷಕ ಇಂಜಿನಿಯರ್........ರವರಿಗೆ ಪತ್ರ ಬರೆಯಲಾಗಿದೆ..." ಎನ್ನುತ್ತಾರೆ. ಮಾಪನಗಳು ಸರಿ ಇಲ್ಲದಿದ್ದರೆ ಅದು ತನಿಖೆಯಾಗಬೇಕಾದ ಬೇರೆಯೇ ವಿಷಯ. ಆದರೆ ನದಿಯನ್ನು ಮಾಪನ ಮಾಡಲಾಗುತ್ತಿದೆ ಎಂಬ ವಿಷಯವೇ ಕನೀನಿನಿಗೆ ತಿಳಿಯದಿರುವುದು ಅದರ  ವರದಿಯ ವಿಶ್ವಾಸಾರ್ಹತೆಯ ಬುಡವನ್ನೇ  ಅಲುಗಿಸುತ್ತದೆ.
2. "The average rainfall of the region in which the weirs are situated is 6280mm. This latter figure has been arrived at based on rainfall records maintained by private planters".  
ಕನೀನಿನಿಯ ಈ ಮಳೆಯ ಲೆಕ್ಕಾಚಾರ ಕೇವಲ ಅವೈಜ್ಞಾನಿಕ. ಅಷ್ಟೇ ಅಲ್ಲ, ಅದೊಂದು ತಪ್ಪು ಮಾಹಿತಿ. ಇಡೀ ಯೋಜನೆ ಈ ಮಾಹಿತಿಯ ಮೇಲೆ ನಿಂತಿರುವುದರಿಂದ ಈ ಮಾಹಿತಿಯನ್ನು ಆಧರಿಸಿ ವರದಿಯನ್ನು ತಯಾರಿಸಿರುವುದರ ಉದ್ದೇಶ ಕನೀನಿನಿ, ರಾಜಕಾರಣಿಗಳು ಮತ್ತು ಕಂಟ್ರಾಕ್ಟರುಗಳು  ಸೇರಿ ರಾಜ್ಯದ ಖಜಾನೆಯನ್ನು ಕೊಳ್ಳೆ ಹೊಡೆಯುವುದೇ ಹೊರತು ಬಯಲುಸೀಮೆಯ ಜನರಿಗೆ ನೀರು ಕೊಡುವುದಲ್ಲ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ.
ಹಾಗಾದರೆ ಈ "6280" ಎಲ್ಲಿಂದ ಬಂತು? ಖಾಸಗಿ ಪ್ಲಾಂಟರುಗಳ ಮಾಪನಕೇಂದ್ರಗಳಿಂದ ಈ ಮಾಹಿತಿಯನ್ನು ಪಡೆದಿದ್ದೇವೆ ಎಂಬುದು ಕನೀನಿನಿಯ ಹೇಳಿಕೆಯಷ್ಟೆ? ಅಂಥ ಮೂರು ಖಾಸಗಿ ಪ್ಲಾಂಟರುಗಳ ಮಾಪನದ ಅಂಕಿಅಂಶಗಳು ವರದಿಯಲ್ಲಿ ಇವೆ. 
1. ಶ್ರೀ ಡಿ.ಪಿ. ಕಲ್ಲಪ್ಪನವರ ಕೊಟ್ಟನಹಳ್ಳಿ ಖಾಸಗಿ ಮಳೆಮಾಪನ ಕೇಂದ್ರ - 6030 ಮಿಮೀ
2. ಶ್ರೀ ಸಿದ್ದೇಗೌಡರ ಹೊಂಗಡಹಳ್ಳ ಮಳೆಮಾಪನ ಕೇಂದ್ರ  - 6060  ಮಿಮೀ
3. ಕಾಡಮನೆ ಕಾಫಿ ಎಸ್ಟೇಟ್ ಕಂಪೆನಿಯ ಮಳೆಮಾಪನ ಕೇಂದ್ರ. - 6540 ಮಿಮೀ
ಕಾಕತಾಳೀಯವೋ ಎಂಬಂತೆ, ಶ್ರೀ ಜಿ.ಎಸ್. ಪರಮಶಿವಯ್ಯನವರು 2001ರಲ್ಲಿ ಪ್ರಕಟಿಸಿರುವ "Scheme for diversion of Netravathy river water to east" ಎಂಬ ವರದಿಯಲ್ಲೂ ಯಥಾವತ್ತಾಗಿ ಇದೇ ಅಂಕಿಅಂಶಗಳಿವೆ. ಪರಮಶಿವಯ್ಯನವರ ವರದಿಯಲ್ಲಿ ಯಾವ ಅವಧಿಯ ಅಂಕಿಅಂಶಗಳಿವೆಯೋ ಅದೇ ಅವಧಿಯ ಅಂಕಿ ಅಂಶಗಳೇ ಇಲ್ಲೂ ಇವೆ.
ಆದರೆ ಒಂದು ಮುಖ್ಯ ವ್ಯತ್ಯಾಸವಿದೆ: ಪರಮಶಿವಯ್ಯನವರ ವರದಿಯಲ್ಲಿ ಒಟ್ಟು ನಾಲ್ಕು ಖಾಸಗಿ ಮಾಪನ ಕೇಂದ್ರಗಳ ಅಂಕಿ ಅಂಶಗಳಿವೆ. ಕನೀನಿನಿಯ ವರದಿಯಲ್ಲಿ ಮೂರು ಕೇಂದ್ರಗಳ ಅಂಕಿ ಅಂಶ ಮಾತ್ರ ಇದೆ. ಮಾಯವಾಗಿರುವ ಅಂಕಿಅಂಶವೆಂದರೆ ಶ್ರೀ ಪಿ.ಬಿ. ಜಾನ್ ಎಂಬುವರ ಹೆಗ್ಗದ್ದೆ ಎಸ್ಟೇಟಿನ ಖಾಸಗಿ ಮಳೆಮಾಪನ ಕೇಂದ್ರದ್ದು. (ಈ ಮಳೆಮಾಪನಕೇಂದ್ರವೂ ಎತ್ತಿನಹೊಳೆ ಯೋಜನೆಯ ವ್ಯಾಪ್ತಿಯಲ್ಲೇ ಇದೆ). ಹೀಗೆ ಮಾಯವಾಗಲು ಕಾರಣ ಏನಿರಬಹುದು?
ಮೊದಲಿನ ಮೂರು ಮಳೆಮಾಪನ ಕೇಂದ್ರಗಳಲ್ಲಿ ಕ್ರಮವಾಗಿ ವರ್ಷಕ್ಕೆ 6030, 6060 ಮತ್ತು 6540 ಮಿಮೀ. ಮಳೆ ದಾಖಲಾಗಿದ್ದರೆ ನಾಲ್ಕನೇ ಕೇಂದ್ರದಲ್ಲಿ ದಾಖಲಾಗಿರುವುದು 4150 ಮಿಮೀ ಮಳೆ ಮಾತ್ರ.  ಕನೀನಿನಿ ಈ ಕೇಂದ್ರವನ್ನು ಬಿಟ್ಟುಬಿಡಲು ಇದೇ ಕಾರಣ ಇರಲಾರದೆ?
ಇರಲಿ. ಪರಿಗಣಿಸಿರುವ ಮೂರು ಖಾಸಗಿ ಮಳೆಮಾಪನ ಕೇಂದ್ರಗಳ ಸರಾಸರಿ ಮಳೆ 6280 ಎನ್ನುವುದು ಕನೀನಿನಿಯ ಲೆಕ್ಕ. ಸರಾಸರಿ ತೆಗೆಯೋಣ: ಮೂರೂ ಸಂಖ್ಯೆಗಳನ್ನು ಕೂಡಿಸಿದರೆ 18630. ಇದನ್ನು ಮೂರರಿಂದ ಭಾಗಿಸಿದರೆ  6210.  ಹಾಗಿದ್ದರೆ 6280 ಎಲ್ಲಿಂದ ಬಂತು? ಕನೀನಿನಿಯ ಎಂಜಿನಿಯರುಗಳೇ ಹೇಳಬೇಕು.
ಪರಮಶಿವಯ್ಯನವರು ಕೊಟ್ಟಿರುವ ನಾಲ್ಕು ಮಳೆಮಾಪನ ಕೇಂದ್ರಗಳ  ಪೈಕಿ ಒಂದನ್ನು ಬಿಟ್ಟುಬಿಡಲು ಕಾರಣವೇ ಇಲ್ಲ. ಏಕೆಂದರೆ ಆ ಕೇಂದ್ರವೂ ಸಹ ಎತ್ತಿನಹೊಳೆ ಯೋಜನಾವ್ಯಾಪ್ತಿಯಲ್ಲೇ ಬರುತ್ತದೆ. ಹಾಗಾಗಿ ಅದನ್ನು ಸೇರಿಸಿಯೇ ಈ ಭಾಗದ ಮಳೆಯ ಲೆಕ್ಕಾಚಾರ ಹಾಕಬೇಕಾಗುತ್ತದೆ. ಹಾಗೆ ಮಾಡಿದಾಗ ಈ ಪ್ರದೇಶದ ಸರಾಸರಿ ಮಳೆ 5695 ಮಿಮೀಗಳು ಮಾತ್ರ.
ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರರು 18-10-12ರಂದು ಕೇಂದ್ರಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಗೆ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಒಂದು ಪತ್ರ ಬರೆದಿದ್ದಾರೆ. ಅದರ ವಿಷಯ: Clarification on the requirement of Environmental clearance based on EIA notification 2006, and its amendments. ಈ ಪತ್ರದಲ್ಲಿ ಅವರು ಹೀಗೆ ಹೇಳುತ್ತಾರೆ: "The intensity of rainfall in the Western Ghats is very high and it is in the range of above 6500 mm at higher altitudes".  ತಾವೇ ತಯಾರಿಸಿದ ವರದಿಯಲ್ಲಿ ಈ ಭಾಗದ ಮಳೆಯ ಸರಾಸರಿ ಪ್ರಮಾಣ 6280 ಎಂದವರು, ಕೇಂದ್ರ ಸರ್ಕಾರಕ್ಕೆ ಬರೆಯುವಾಗ ಪಶ್ಚಿಮಘಟ್ಟಗಳ ಎತ್ತರಪ್ರದೇಶದಲ್ಲಿ 6500 ಮಿ.ಮೀ.ಗಿಂತಲೂ ಹೆಚ್ಚು ಮಳೆ ಬೀಳುತ್ತದೆ ಎಂದು ಯಾಕೆ ಬರೆದರು? ಈ ವಾಕ್ಯದ ಪ್ರಸ್ತುತತೆ ಏನು? ಎತ್ತಿನಹೊಳೆಯ ಯೋಜನೆಯ ಕುರಿತು ಬರೆದ ಪತ್ರದಲ್ಲಿ ಅದರ ಯೋಜನಾಪ್ರದೇಶದ ಮಳೆಯ ಪ್ರಮಾಣವನ್ನು ಬೇಕಾದರೆ ದಾಖಲಿಸಬಹುದೇ ಹೊರತು, ಇಡೀ ಪಶ್ಚಿಮಘಟ್ಟಗಳ ಎತ್ತರ ಪ್ರದೇಶದ ಮಳೆಯ ಕುರಿತ ಪ್ರಸ್ತಾವ ಯಾಕೆ? ಇಷ್ಟಕ್ಕೂ ಪಶ್ಚಿಮ ಘಟ್ಟಗಳ ಎತ್ತರ ಪ್ರದೇಶಗಳಲ್ಲಿ 6500 ಮಿಮೀ ಮಳೆ ಬೀಳುತ್ತದೆ ಎಂಬ ಬಗ್ಗೆ ದಾಖಲೆಗಳೇನಾದರೂ ಇವೆಯೇ?

ಮಳೆಯ ಪ್ರಮಾಣ: ವಾಸ್ತವ ಏನು?


ಈ ಪ್ರದೇಶದ ಮಳೆಯ ಅಂಕಿ ಅಂಶಗಳಿಗಾಗಿ ಖಾಸಗಿಯವರ ಮಳೆಮಾಪನ ಕೇಂದ್ರಗಳನ್ನು ಕನೀನಿನಿ ಅವಲಂಬಿಸಿರುವುದು ತುಂಬಾ ಕುತೂಹಲಕಾರಿಯಾಗಿದೆ. ಖಾಸಗಿಯವರ ಪೈಕಿ ಇಬ್ಬರ  ಅಂಕಿಅಂಶಗಳು1979-80 ಹಾಗೂ 1990-91ರ ನಡುವಿನ 12 ವರ್ಷಗಳದ್ದಾದರೆ, ಮತ್ತೊಬ್ಬರದ್ದು 1985-86 ಮತ್ತು 1999-2000ದ ನಡುವಿನ 15 ವರ್ಷಗಳ ಅವಧಿಯದು. ಆದರೆ, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಪ್ರದೇಶದ ಕಳೆದ ಸುಮಾರು 22 ವರ್ಷಗಳ ಮಳೆಮಾಪನದ ಅಂಕಿ ಅಂಶಗಳು ಜಲಸಂಪನ್ಮೂಲ ಇಲಾಖೆಯಲ್ಲಿ ಲಭ್ಯವಿದೆ. ಹಾಗಿದ್ದರೂ ಕನೀನಿನಿ ಯಾಕೆ ಆ ಅಂಕಿ ಅಂಶಗಳನ್ನು ಬಳಸಿಕೊಳ್ಳಲಿಲ್ಲ? ಯಾಕೆ ಖಾಸಗಿ ಮಳೆಮಾಪನ ಕೇಂದ್ರಗಳ ಅಂಕಿಅಂಶಗಳಿಗೆ ಮೊರೆಹೋಯಿತು? ವರದಿಯನ್ನು ತಯಾರಿಸಿದ ಕನೀನಿನಿಯ ಎಂಜಿನಿಯರುಗಳೇ ಇದಕ್ಕೆ ಉತ್ತರ ಹೇಳಬೇಕು. ಕನೀನಿನಿ ಹೇಳುತ್ತಿರುವ ಮಳೆಯ ಪ್ರಮಾಣಕ್ಕೂ, ಸರಕಾರದ ಮಳೆ ಲೆಕ್ಕಕ್ಕೂ ಅಗಾಧ ವ್ಯತ್ಯಾಸ ಇರುವುದರಿಂದ ಮಳೆಯ ವಾಸ್ತವ ಪ್ರಮಾಣ ಎಷ್ಟು ಎಂಬುದನ್ನು ಚರ್ಚಿಸಲೇ ಬೇಕಾಗುತ್ತದೆ.
(ಕನೀನಿನಿ ಖಾಸಗಿಯವರ ಮಳೆಮಾಪನದ ಅಂಕಿಅಂಶಗಳನ್ನು ಯಾಕೆ ಬಳಸಿಕೊಂಡಿತೆಂದು  ಊಹಿಸಲು ಸಾಧ್ಯವಿದೆ: ಮೇಲೆ ಉಲ್ಲೇಖಿಸಿರುವ ಪರಮಶಿವಯ್ಯನವರ ವರದಿಯ ಆರನೇ ಅಧ್ಯಾಯದ ಪ್ರಾರಂಭದಲ್ಲಿ ಎತ್ತಿನಹೊಳೆಯ ಯೋಜನಾಪ್ರದೇಶದ ಮಳೆ ಮಾಹಿತಿ ಕುರಿತು ಹೀಗೆ ಹೇಳಿದ್ದಾರೆ: "There are no Govt. Rain gauge statements in the catchment areas of all the 3 resources of water proposed to be utilised in this Scheme. There is one River gauge readings for Bhadra River at Malleshwara. ಕನೀನಿನಿಯ ವರದಿ ಕುರುಡಾಗಿ ಪರಮಶಿವಯ್ಯನವರನ್ನು ಅನುಸರಿಸಿರುವುದು ಸಾಧ್ಯ) 

ಜಲವಿಜ್ಞಾನ ಘಟಕದ ಭಿನ್ನರಾಗ

ಕನೀನಿನಿ ಎತ್ತಿನಹೊಳೆ ಯೋಜನೆಯ ಕುರಿತಂತೆ ಯೋಜನಾವರದಿಯನ್ನು ತಯಾರಿಸಿ  ಸರಕಾರಕ್ಕೆ ಸಲ್ಲಿಸಿತು. ಸರಕಾರ ಆ ವರದಿಯನ್ನು ಅಧ್ಯಯನ ಮಾಡಿ ವರದಿಯ ಮೇಲೆ ವರದಿ ಕೊಡುವಂತೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರರಿಗೆ ಸೂಚಿಸಿತು. ಅವರು ಅದನ್ನು ಸಂಬಂಧಿಸಿದ ಹಲವು ವಿಭಾಗಗಳಿಗೆ ಕಳಿಸಿ, ಆ ವಿಭಾಗಗಳ ವರದಿ ಕೇಳಿದರು. ಅವುಗಳ ಪೈಕಿ ಒಂದು ವಿಭಾಗವೇ ಜಲವಿಜ್ಞಾನ ಘಟಕ. ಈ ವಿಭಾಗವು ಯೋಜನಾಪ್ರದೇಶದಲ್ಲಿ ದೊರೆಯಬಹುದಾದ ನೀರಿನ ಪ್ರಮಾಣವನ್ನು ತನ್ನದೇ ಮಳೆಯ ಅಂಕಿಅಂಶಗಳ ಮೇಲೆ ತನ್ನದೇ ಕ್ರಮದಲ್ಲಿ ಲೆಕ್ಕ ಮಾಡಿ ಪ್ರತ್ಯೇಕವಾದ ಒಂದು ವರದಿಯನ್ನೇ 21-06-2012 ರಂದು ಮುಖ್ಯ ಎಂಜಿನಿಯರರಿಗೆ ಒಪ್ಪಿಸಿತು.
ಈ ವರದಿಯಲ್ಲಿ ಸರಕಾರವು  ಪರಿಗಣಿಸಲೇ ಬೇಕಾದ ಹಲವು ಅಂಶಗಳಿವೆ:
1. ಜಲವಿಜ್ಞಾನ ಘಟಕದ ಅಂಕಿ ಅಂಶಗಳ ಪ್ರಕಾರ ಎತ್ತಿನಹೊಳೆ ಯೋಜನಾಪ್ರದೇಶದಲ್ಲಿ ಬೀಳುವ ಮಳೆಯ ಸರಾಸರಿ ಪ್ರಮಾಣ  ಕೇವಲ 3072 ಮಿ.ಮೀ.! ಲಭ್ಯನೀರಿನ ಪ್ರಮಾಣ ಮಳೆಯನ್ನವಲಂಬಿಸಿದರೆ   ಕೇವಲ 15.019 ಟಿಎಂಸಿ!
2. ಘಟಕವು pro rata ಆಧಾರದಲ್ಲಿಯೂ ಲಭ್ಯನೀರಿನ ಪ್ರಮಾಣವನ್ನು ಲೆಕ್ಕ ಹಾಕಿದೆ. ಕೇಂದ್ರೀಯ ಜಲ ಆಯೋಗದವರು (CWC-Central water commission) ಕಳೆದ 40 ವರ್ಷಗಳಿಂದ ಬಂಟ್ವಾಳದ ಸಮೀಪ ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಅಳೆಯುತ್ತಿದ್ದಾರೆ. prorata ಆಧಾರದ ಲೆಕ್ಕಾಚಾರ ಇದರ ಅಂಕಿಸಂಖ್ಯೆಗಳನ್ನು ಅವಲಂಬಿಸಿದೆ. ಇದರ ಪ್ರಕಾರ ಲಭ್ಯನೀರಿನ ಪ್ರಮಾಣ: 21.856 ಟಿಎಂಸಿ.
ಈ ಲೆಕ್ಕಾಚಾರವನ್ನು ನೀಡಿದನಂತರ ಜಲವಿಜ್ಞಾನಘಟಕದ ಅಧೀಕ್ಷಕ ಎಂಜಿನಿಯರರು ತನ್ನ ವರದಿಯ ಕೊನೆಯ ಪ್ಯಾರಾವನ್ನು ಹೀಗೆ ಮುಗಿಸುತ್ತಾರೆ: "ಹೀಗೆ ಮೇಲೆ ಲೆಕ್ಕಾಚಾರ ಮಾಡಿದ ಇಳುವರಿಯನ್ನು ಉದ್ದೇಶಿತ ಯೋಜನೆಗೆ ಬಳಸುವ ಮುನ್ನ ಸದರಿ ಯೋಜನೆಗಳ ಮೇಲ್ಭಾಗ ಮತ್ತು ಕೆಳಭಾಗದ ಬಳಕೆ / ಅವಶ್ಯಕತೆಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ."
"ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ" ಯೋಜನೆಯನ್ನು ಕಾರ್ಯಗತ ಮಾಡುವುದಾಗಿ ಮತ್ತೆ ಮತ್ತೆ ಹೇಳಿಕೊಳ್ಳುವ ಕನೀನಿನಿ ಪ್ರವಾಹದ ನೀರು ಎಷ್ಟು ಸಿಕ್ಕರೆ ಅಷ್ಟನ್ನೂ ಬಳಿದು ಸಾಗಿಸಬಹುದೆಂಬ ನಿಲುವನ್ನು ತಳೆದರೆ ಜಲವಿಜ್ಞಾನದ  ಅಧೀಕ್ಷಕ ಎಂಜಿನಿಯರರು ಕೊನೆಯ ಪಕ್ಷ "ಮೇಲ್ಭಾಗ ಮತ್ತು ಕೆಳಭಾಗದ ಬಳಕೆ / ಅವಶ್ಯಕತೆಗಳನ್ನು ಪರಿಗಣಿಸುವುದು ಅಗತ್ಯ" ಎಂಬ ಎಚ್ಚರಿಕೆಯನ್ನಾದರೂ ವಹಿಸುತ್ತಾರೆ. ಈ ಸಲಹೆಯನ್ನು ಸರಕಾರವು ಪರಿಗಣಿಸಿದರೆ, ಎತ್ತಿನಹೊಳೆ ಯೋಜನೆಗೆ ಲಭ್ಯನೀರಿನ ಪ್ರಮಾಣವು ಇನ್ನೂ ಕಡಿಮೆಯಾಗುವ ಎಲ್ಲ ಸಾಧ್ಯತೆಯೂ ಇದೆ.
ತನ್ನ ವರದಿಯಲ್ಲಿ ಅ.ಎಂಜಿನಿಯರರು "ಬಂಟ್ವಾಳ ಪಟ್ಟಣದ ಹತ್ತಿರ ನೇತ್ರಾವತಿ ನದಿ....... ಮಾಪನ ಮಾಹಿತಿಗಳು ಲಭ್ಯವಿದ್ದು ಈ ಮಾಹಿತಿಗಳನ್ನು ಪರಿಗಣಿಸುವುದು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ" ಎಂದಿದ್ದಾರೆ. ಯೋಜನಾಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಆಧರಿಸಿದ ಲೆಕ್ಕಾಚಾರಕ್ಕಿಂತ, ಬಂಟ್ವಾಳ ಸಮೀಪದ ನೇತ್ರಾವತಿ ನದಿ ಮಾಪನದ ಅಂಕಿಅಂಶಗಳನ್ನಾಧರಿಸಿದ ಲೆಕ್ಕಾಚಾರವೇ ಹೆಚ್ಚು ಅವಲಂಬನಾರ್ಹ ಎಂಬ ತೀರ್ಮಾನಕ್ಕೆ ಬರಲು ಕಾರಣಗಳನ್ನು ಮಾತ್ರ ಅವರು ಕೊಡುವುದಿಲ್ಲ.

ಮಳೆಯ ಪ್ರಮಾಣದ ಗೊಂದಲ: ಕೆಲವು ಅಂಕಿಅಂಶಗಳು

1. ಕನೀನಿನಿಯ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರ್ ದೆಹಲಿಗೆ ಬರೆದ ಪತ್ರದಲ್ಲಿ: 6500 ಮಿ.ಮೀ.
2. ಕನೀನಿನಿಯ ಯೋಜನಾ ವರದಿಯಲ್ಲಿ: 6280 ಮಿ.ಮೀ
3. ಕನೀನಿನಿಯ ತಪ್ಪು ಲೆಕ್ಕಾಚಾರವನ್ನು ತಿದ್ದಿದಾಗ: 6210 ಮಿ.ಮೀ
4. ನಾಲ್ಕೂ ಖಾಸಗಿ ಮಳೆಮಾಪನ ಕೇಂದ್ರಗಳನ್ನು ಪರಿಗಣಿಸಿದಾಗ : 5695 ಮಿ.ಮೀ
5. ಜಲಸಂಪನ್ಮೂಲ ಇಲಾಖೆಯ 22 ವರ್ಷಗಳ ಅಂಕಿಅಂಶದ ಸರಾಸರಿ: 3072 ಮಿ.ಮೀ.
6.  http://www.samsamwater.com/climate/ ಎಂಬ ಜಾಲತಾಣದ ಪ್ರಕಾರ ಸುಮಾರು 3000 ಮಿ.ಮೀ. 

ಯೋಜನೆಗೆ ಸಾವಿರಾರು ಕೋಟಿ ರೂ.ಗಳನ್ನು ತೊಡಗಿಸುವ ಮೊದಲು ಈ ಗೊಂದಲವನ್ನು ಪರಿಹರಿಸಿಕೊಳ್ಳುವುದು ಅಗತ್ಯವಲ್ಲವೆ?

ಶಿಷ್ಟಾಚಾರ ಉಲ್ಲಂಘಿಸಿದ ಸರ್ಕಾರದ ಆಡಳಿತಾತ್ಮಕ ಅನುಮತಿ?

ಅತ್ಯಂತ ಆಶ್ಚರ್ಯಕರವಾಗಿ ಈ ಹಂತದಲ್ಲಿ ಒಂದು ಬೆಳವಣಿಗೆ ನಡೆದು ಹೋಗುತ್ತದೆ: ಯೋಜನೆಯ ಕುರಿತಂತೆ ಜಲಸಂಪನ್ಮೂಲ ಇಲಾಖೆಯು ತನ್ನ ಅಧ್ಯಯನವನ್ನು ಇನ್ನೂ ಮುಂದುವರಿಸಿರುವಂತೆಯೇ, ಅದರ ಅಭಿಪ್ರಾಯಕ್ಕೆ ಕಾಯದೆ, ಕೇವಲ ಕನೀನಿನಿಯ ಯೋಜನಾವರದಿಯನ್ನು ಪರಿಗಣಿಸಿ, ತಾ. 13-07-2012ರಲ್ಲಿ ಸರ್ಕಾರವು ಎತ್ತಿನಹೊಳೆ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡುತ್ತದೆ!
ಈ ಸೌಭಾಗ್ಯಕ್ಕೆ ಯೋಜನೆಯ ಬಗ್ಗೆ  ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯವನ್ನು ಕೇಳಿದ್ದಾದರೂ ಯಾತಕ್ಕೆ ಎಂಬ ಪ್ರಶ್ನೆಗೆ ಸರಕಾರವೇ ಉತ್ತರಿಸಬೇಕಾಗುತ್ತದೆ.
ಇಲ್ಲಿ ಒಂದು ಸ್ಪಷ್ಟೀಕರಣ ಅಗತ್ಯ. 21-05-2012ರಲ್ಲಿ ಸರಕಾರವು ಜ.ಸಂ.ಇಲಾಖೆಯ ಮುಖ್ಯ ಎಂಜಿನಿಯರರಿಗೆ ಬರೆದ ಪತ್ರದ ವಿಷಯ ಇದು: "ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನಹೊಳೆ ಯೋಜನೆ ಮೂಲಕ ಎತ್ತಲಾಗುವ 24.01 ಟಿಎಂಸಿ ಪ್ರವಾಹದ ನೀರನ್ನು ಬರಪೀಡಿತ ಪ್ರದೇಶಗಳಿಗೆ ಹಂಚಿಕೆ ಮಾಡುವ ಕುರಿತು". ಈ ವಿಷಯಕ್ಕೆ ಸಂಬಂಧಿಸಿದಂತೆ ತಾ. 07-07-2012ರಲ್ಲಿಯೇ - ಎಂದರೆ ಸರ್ಕಾರ ಯೋಜನೆಗೆ ಆಡಳಿತಾತ್ಮಕ ಅನುಮತಿ ನೀಡುವ ಮೊದಲೇ - ಮುಖ್ಯ ಎಂಜಿನಿಯರರು ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ಜ.ಸಂ.ಅ. ಸಂಸ್ಥೆಯ  ಮುಖ್ಯ ಎಂಜಿನಿಯರರು ತಾ. 02-06-2012ರಲ್ಲಿ ಜಲವಿಜ್ಞಾನ ಘಟಕದ ಅಧೀಕ್ಷಕ ಎಂಜಿನಿಯರರಿಗೆ ಬರೆದ ಪತ್ರದ ವಿಷಯ ಮೇಲಿನಂತೆಯೇ ಆಗಿದ್ದರೂ, ಅದರಲ್ಲಿ "ಉಲ್ಲೇಖ: 1. ಸರ್ಕಾರದ ಪತ್ರ ಸಂ: ಜಸಂಇ 44 ವಿಬ್ಯಾಇ 2011, ದಿನಾಂಕ: 18-10-2011" ಎಂದಿದೆ ಮತ್ತು ಪತ್ರದ ಮೊದಲನೇ ವಾಕ್ಯ ಹೀಗಿದೆ: "ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರ ಪತ್ರದಲ್ಲಿ ಮೇಲಿನ ಯೋಜನೆಯ ಬಗ್ಗೆ ಪರಿಶೀಲಿಸಿ, ಅಭಿಪ್ರಾಯವನ್ನು ಸಲ್ಲಿಸುವಂತೆ ಸರ್ಕಾರವು ಸೂಚನೆ ನೀಡಿರುತ್ತದೆ"  (18-10-2011ರ ಪತ್ರದ ಪ್ರತಿ ನನ್ನ ಹತ್ತಿರ ಇಲ್ಲ.-ಲೇ.). ಎಂದರೆ ನೀರಿನ ಹಂಚಿಕೆಯ ಬಗ್ಗೆ ಮಾತ್ರವಲ್ಲ, ಇಡೀ ಯೋಜನೆಯ ಬಗ್ಗೆಯೇ ಸರಕಾರವು ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯ ಕೇಳಿತ್ತೆಂಬುದನ್ನು ಗಮನಿಸಬೇಕು.

ಮುಂದುವರಿದ ಜಲಸಂಪನ್ಮೂಲ ಇಲಾಖೆಯ ಅಧ್ಯಯನ

ಇತ್ತ ಜಲಸಂಪನ್ಮೂಲ ಇಲಾಖೆ ತನ್ನ ಕೆಲಸವನ್ನು ಮಾತ್ರ ನಿಲ್ಲಿಸುವುದಿಲ್ಲ. ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿ ಆಗಿದ್ದರೂ,  ತಾ. 27-07-2012ರಲ್ಲಿ ಮುಖ್ಯ ಎಂಜಿನಿಯರರು ಜಲವಿಜ್ಞಾನ ಘಟಕದ ಅಧೀಕ್ಷಕ ಎಂಜಿನಿಯರರ ವರದಿಯ ಲೋಪದೋಷಗಳನ್ನು ಎತ್ತಿತೋರಿಸಿ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದು, (ಆಂತರಿಕ ಟಿಪ್ಪಣಿ) ವರದಿಯನ್ನು ಪರಿಷ್ಕರಿಸಿ ಹೊಸದಾಗಿ ಸಲ್ಲಿಸುವಂತೆ  ಸೂಚಿಸುತ್ತಾರೆ. ಮುಖ್ಯ ಎಂಜಿನಿಯರರ ಈ ಆಂತರಿಕ ಟಿಪ್ಪಣಿಯ ಸಾರಾಂಶವನ್ನು ಮಾತ್ರ ಕೊಟ್ಟರೆ ನನಗೆ ತೃಪ್ತಿ ಇಲ್ಲ. ಹಾಗಾಗಿ ಮೂಲದಾಖಲೆಯ ಎಲ್ಲ ನಾಲ್ಕು ಪುಟಗಳನ್ನು ಮುಂದೆ ಕೊಟ್ಟಿದ್ದೇನೆ:



ದುರದೃಷ್ಟವಶಾತ್ ಜಲವಿಜ್ಞಾನದ ಅಧೀಕ್ಷಕ ಎಂಜಿನಿಯರರು ಮುಖ್ಯ ಎಂಜಿನಿಯರರ ಈ ಯಾವ ತಕರಾರುಗಳಿಗೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ದಿ. 29-08-2012ರಂದು,   ಈ ಹಿಂದಿನ ವರದಿಗೆ ಕೇವಲ ಒಂದು ಪ್ಯಾರಾವನ್ನು ಹೊಸದಾಗಿ ಸೇರಿಸಿ, ತನ್ನ ಕೆಲಸವನ್ನು ಮುಗಿಸುತ್ತಾರೆ. ಆ ಪ್ಯಾರಾ ಹೀಗಿದೆ:
"ಮೇಲೆ ತಿಳಿಸಿದಂತೆ ಪ್ರಸ್ತಾವಿತ ಎತ್ತಿನಹೊಳೆ ಯೋಜನೆಯು C.W.C. ಗೇಜಿಂಗ್ ಕೇಂದ್ರದಿಂದ 85 ಕಿ.ಮೀ. ಮೇಲ್ಭಾಗದಲ್ಲಿರುವುದರಿಂದ ಸಾಮಾನ್ಯವಾಗಿ ಶೇ. 10ರಿಂದ 15%ರಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಲೆಕ್ಕಾಚಾರ ಮಾಡಿರುವ 21.856 ಟಿಎಂಸಿಗೆ ಶೇ.10ರಿಂದ 15%ರಷ್ಟು ಹೆಚ್ಚುವರಿ ನೀರಿನ ಲಭ್ಯತೆಯನ್ನು ಪರಿಗಣಿಸಬಹುದಾಗಿದೆ."
ಹೀಗೆ ಎತ್ತಿನಹೊಳೆಯ ಲಭ್ಯನೀರಿನ ಪ್ರಮಾಣ ಎನ್ನುವುದು ಸಂಪೂರ್ಣವಾಗಿ ಗೊಂದಲದ ಗೂಡಾಗಿ ಹೋಗಿದೆ. ಹಾಗಾಗಿ ಲಭ್ಯನೀರಿನ ಪ್ರಮಾಣವನ್ನು ನಿಖರವಾಗಿ ಖಚಿತಪಡಿಸಿಕೊಳ್ಳದೆ ಯೋಜನೆಯನ್ನು ಮುಂದುವರಿಸಿದರೆ ಅದು ಕುಡಿಯುವ ನೀರು ಒದಗಿಸುವುದಕ್ಕಿಂತ ಬೇರೆಯೇ ಆದ ಉದ್ದೇಶ ಹೊಂದಿದೆ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ.

ಎತ್ತಿನಹೊಳೆ ಯೋಜನೆ: ಕಾವೇರಿ ಜಲವಿವಾದ ತಜ್ಞರ ಅಭಿಮತ

ಎತ್ತಿನಹೊಳೆಯ ಕುರಿತಂತೆ ಕಾವೇರಿ ಜಲ ವಿವಾದ ತಜ್ಞರ ಅಭಿಪ್ರಾಯವನ್ನು ಅತ್ಯಂತ ನೋವಿನಿಂದ, ವಿಷಾದದಿಂದ ನಾನಿಲ್ಲಿ ಪ್ರಸ್ತಾವಿಸುತ್ತಿದ್ದೇನೆ. ತಜ್ಞರ ಈ ಅಭಿಪ್ರಾಯವು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುತ್ತಿರುವವರಿಗೆ ಅನುಕೂಲಕರವಾಗಿದೆ ಎನ್ನುವುದು ನಿಜ. ಆದರೆ, ನನಗೆ ಇದು ಖಂಡಿತಾ ಸಂತೋಷದ ವಿಷಯವಲ್ಲ. ಕಾವೇರಿ ವಿವಾದವು ಕನ್ನಡಿಗರನ್ನು ಹೇಗೆ ಅಸಹಾಯಕರನ್ನಾಗಿಸಿಬಿಟ್ಟಿದೆ ಎಂಬುದನ್ನು ಯೋಚಿಸಿದಾಗಲೆಲ್ಲ ನನಗೆ ಮೈಪರಚಿಕೊಳ್ಳುವಂತಾಗುತ್ತದೆ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತಜ್ಞರ ಈ ಅಭಿಪ್ರಾಯವನ್ನು ಪರಿಗಣಿಸುವುದು ಅನಿವಾರ್ಯ ಎಂಬುದರಿಂದ ಮಾತ್ರ ನಾನು ಇಲ್ಲಿ ಇದನ್ನು ಪ್ರಸ್ತಾವಿಸುತ್ತಿದ್ದೇನೆ.  ಸರ್ಕಾರವು ಯೋಜನೆಗೆ ಆಡಳಿತಾತ್ಮಕ ಅನುಮತಿ ನೀಡುವ ಮೊದಲೇ ತಜ್ಞರ ಈ ಅಭಿಪ್ರಾಯವು ಸರಕಾರಕ್ಕೆ ಗೊತ್ತಿತ್ತು ಎಂಬುದನ್ನೂ, ಇದು ಈ ಯೋಜನೆಗೆ ಮಾತ್ರ ಸೀಮಿತವಾಗದೆ, ಪರದೆಯ ಹಿಂದೆ ವೇಷ ಕಟ್ಟಿಕೊಂಡು ರಂಗ ಪ್ರವೇಶಿಸಲು ಕಾಯುತ್ತಿರುವ ಶ್ರೀ ಜಿ.ಎಸ್. ಪರಮಶಿವಯ್ಯನವರ ಅಸಂಖ್ಯ ಯೋಜನೆಗಳಿಗೂ ಅಡ್ಡಗಾಲಿಡುತ್ತಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು..



ಕನೀನಿನಿಯ ಭದ್ರಾ ಮೇಲ್ದಂಡೆ ವಲಯದ ಮುಖ್ಯ ಎಂಜಿನಿಯರರು ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ 24.01ಟಿಎಂಸಿ ನೀರಿನ ಹಂಚಿಕೆಯ ಕುರಿತಂತೆ ಒಂದು ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಅದರ ಕೊನೆಯಭಾಗದಲ್ಲಿ : ".....ಸದರಿ ಯೋಜನೆಯಿಂದ ರಾಜ್ಯದ ಪಾಲಾರ್ ಹಾಗೂ ಪೆನ್ನಾರ್ ಕಣಿವೆಗಳಲ್ಲಿ ಬರುವ ಪ್ರದೇಶಗಳಲ್ಲಿ ಒಟ್ಟು 503 ಕೆರೆಗಳಿಗೆ ಶೇ. 60ರಷ್ಟು ನೀರನ್ನು ಅಂತರ್ಜಲ ಮರುಪೂರಣಕ್ಕಾಗಿ ತುಂಬಿಸುವುದು ಹಾಗೂ ಕುಡಿಯುವ ನೀರಿನ ಸಲುವಾಗಿ 18.077 ಟಿಎಂಸಿಯಷ್ಟು ನೀರನ್ನು ಪ್ರದೇಶವಾರು ಹಂಚಿಕೆ ಮಾಡುವ ಕುರಿತು ಪ್ರಸ್ತಾವನೆಯನ್ನು......" ಎಂದು ಹೇಳಲಾಗಿದೆ.
ಕಾನೂನುತಜ್ಞರ ಅಭಿಪ್ರಾಯ ಗೊತ್ತಿದ್ದೂ, ಎತ್ತಿನಹೊಳೆ ಯೋಜನೆಯನ್ನು ಮುಂದುವರಿಸುತ್ತೇವೆ ಎಂದು ಹೇಳುವುದು ಬಹು ದೊಡ್ಡ ದುಸ್ಸಾಹಸವಾಗುತ್ತದೆ.

1892 ರ ಒಪ್ಪಂದ: 

"ಕರ್ನಾಟಕ ಜನಪರ ವೇದಿಕೆ" ಎಂಬ ಸಂಘಟನೆಯು ಕಾವೇರಿ ವಿವಾದದ ಕುರಿತಂತೆ ಕನ್ನಡದಲ್ಲಿ ಒಂದು ಪುಸ್ತಕವನ್ನು ಪ್ರಕಟಿಸಿದೆ. ನನಗೆ ಗೊತ್ತಿರುವ ಮಟ್ಟಿಗೆ ಕನ್ನಡದಲ್ಲಿ ಇದು ಕಾವೇರಿ ವಿವಾದದ ಕುರಿತು ಅನೇಕ ಮಾಹಿತಿಗಳನ್ನೂ, ಅತ್ಯುತ್ತಮ ವಿಶ್ಲೇಷಣೆಯನ್ನೂ ಒಳಗೊಂಡ ಪುಸ್ತಕ. ಈ ಪುಸ್ತಕದಲ್ಲಿ  1892 ರ ಒಪ್ಪಂದವನ್ನು ಹೀಗೆ ವಿವರಿಸಿದ್ದಾರೆ:
" ಈ ಒಪ್ಪಂದವು ಬಹಳ ಮುಖ್ಯವಾಗಿ ಮದ್ರಾಸ್ ಸರ್ಕಾರದ ಅನುಮತಿಯಿಲ್ಲದೆ, ಮೈಸೂರು ಸಂಸ್ಥಾನವು ಕಾವೇರಿ ಮತ್ತು ಅದರ ಸೂಚಿತ ಉಪನದಿಗಳು ಹಾಗೂ ತುಂಗಭದ್ರಾ ನದಿಯ ಸೂಚಿತ ಭಾಗಗಳಲ್ಲಿ ಯಾವುದೇ ಹೊಸ ನೀರಾವರಿ ಕಾಮಗಾರಿಯನ್ನು ಕೈಗೊಳ್ಳಬಾರದು ಎಂದು ಹೇಳುತ್ತದೆ.
ಹಾಗೆಯೇ ಈಗಾಗಲೇ ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿರುವ ನೀರಾವರಿಗೆ ತೊಂದರೆ ಕೊಡದ ಹೊರತು, ಮದ್ರಾಸು ಅನುಮತಿಯನ್ನು ನಿರಾಕರಿಸಬಾರದು ಎಂದೂ ಹೇಳುತ್ತದೆ. ಆದರೆ ಮದ್ರಾಸು ಸರ್ಕಾರ ಇನ್ನು ಮುಂದೆ ಕೈಗೊಳ್ಳಬಹುದಾದ ನೀರಾವರಿ ಯೋಜನೆಗಳ ಬಗ್ಗೆ ಇದು ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ ಮತ್ತು ಎರಡೂ ಪ್ರದೇಶಗಳ ನಡುವೆ ನೀರಿನ ಹಂಚಿಕೆಯ ಕುರಿತು ಯಾವುದೇ ಸೂತ್ರವನ್ನು ಮುಂದಿಡುವುದಿಲ್ಲ. ಬದಲಿಗೆ ಮೈಸೂರು ಸಂಸ್ಥಾನದ ಮೇಲೆ ಮಾತ್ರ ಏಕಪಕ್ಷೀಯ ನಿರ್ಬಂಧವನ್ನು ಹೇರಲಾಗಿದೆ. ಈ ಕರಾರಿನ ಹೆಸರೇ ಅದರ ಸ್ವಭಾವವನ್ನು ಸೂಚಿಸುತ್ತದೆ: "Rules defining the limits within which no new irrigation works are to be constructed by Mysore state without previous reference to Madras Government". ಅಂದರೆ "ಮದ್ರಾಸು ಸರ್ಕಾರದ ಪೂರ್ವ ಅನುಮತಿಯಿಲ್ಲದೆ ಮೈಸೂರು ರಾಜ್ಯ ಯಾವುದೇ ಹೊಸ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಬಾರದೆಂಬ ಮಿತಿಯನ್ನು ವಿಧಿಸುವ ನಿಯಮ". ಇದಕ್ಕೆ ನಮ್ಮ 'ಮಹಾರಾಜ'ರು ಸಹಿ ಮಾಡಿದ್ದರು!"

ನೀರಿನ ಸಮಸ್ಯೆಗೆ ಪರಿಹಾರವೇನು?

ಜಲಸಂಪನ್ಮೂಲ ಇಲಾಖೆಯ ಜಾಲತಾಣದಲ್ಲಿ ಮಾಹಿತಿ ಹಕ್ಕಿನ ಅಡಿ ಕೆಲವು ವಿವರಗಳನ್ನು ಕೊಡಲಾಗಿದೆ. http://waterresources.kar.nic.in/File0001.PDF ಎಂಬ ಫೈಲಿನ ಏಳನೇ ಪುಟದಲ್ಲಿ "ಕರ್ನಾಟಕ ಜಲಸಂಪನ್ಮೂಲ ಪ್ರಾಧಿಕಾರ" ಎಂಬ ಸಂಸ್ಥೆಯೊಂದರ ವಿವರಗಳಿವೆ. ಈ ಸಂಸ್ಥೆಯ ಉದ್ದೇಶ ಇತ್ಯಾದಿಗಳು ಅದರಲ್ಲಿ ಇಲ್ಲ. ಆದರೆ ಆಶ್ಚರ್ಯಕರವೆನ್ನುವಂತೆ ಈ ಸಂಸ್ಥೆಯ ಸದಸ್ಯರ ಪಟ್ಟಿಯಲ್ಲಿ ಶ್ರೀ ಪಡ್ರೆ, ಶ್ರೀಮತಿ ರೋಹಿಣಿ ನಿಲೇಕಣಿ ಮುಂತಾದ ಹೆಸರುಗಳಿವೆ. ಹಾಗಿದ್ದರೆ ಸರಕಾರಕ್ಕೆ ನೀರಿನ ಕ್ಷೇತ್ರದಲ್ಲಿ  ಯಾರು ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ ಎನ್ನುವುದು ತಿಳಿದಿದೆ ಎಂದಂತಾಯಿತು. ಬಯಲುಸೀಮೆಯ ನೀರಿನ ಸಮಸ್ಯೆಯ ಪರಿಹಾರಕ್ಕೆ, ಸ್ವಂತಕ್ಕೆ ಯಾವ ಲಾಭವೂ ಇಲ್ಲದೆ ಕೇವಲ ದೇಶದ ಹಿತದೃಷ್ಟಿಯನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿರುವ ಇಂಥವರ ಮತ್ತು ಇವರು ಸೂಚಿಸಬಹುದಾದ ಇತರರ  ಸಲಹೆಗಳನ್ನು ಸರಕಾರ ಪಡೆದರೆ, ಈ ಸಮಸ್ಯೆಗೆ ಖಂಡಿತ ಪರಿಹಾರ ಸಿಕ್ಕುತ್ತದೆ. 

ಸೋಮವಾರ, ಅಕ್ಟೋಬರ್ 14, 2013


ನೇತ್ರಾವತಿಯ ನೀರು:

ಕೊಟ್ಟದ್ದು ಸಾಲದು - ಇನ್ನೂ ಕೊಡಿ
-ಮಂಗಳೂರು ಎಸ್ ಇ ಜಡ್ ಕಂಪೆನಿ

ಈಗಾಗಲೇ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ (ನೇತ್ರಾವತಿ 12.5 + ಗುರುಪುರ 2.5) ನೀರೆತ್ತಲು ಅನುಮತಿ ಪಡೆದಿರುವ ಎಂ ಎಸ್ ಇ ಜಡ್ ಕಂಪೆನಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಮೊದಲೇ ನೇತ್ರಾವತಿ ನದಿಯಿಂದ ಒಟ್ಟು 27 ಎಂಜಿಡಿ ನೀರೆತ್ತಲು ಸರಕಾರದ ಮುಂದೆ ಹೊಸ ಬೇಡಿಕೆ ಮಂಡಿಸಿದೆ.
(1 ಎಂಜಿಡಿ= ದಿನಕ್ಕೆ 45 ಲಕ್ಷ ಲೀಟರು).
ಕಂಪೆನಿ ಈ ಬೇಡಿಕೆಯನ್ನು ಮಂಡಿಸಿರುವುದು 31-08-2012ರಲ್ಲಿ. ಸರ್ಕಾರ ಕಂಪೆನಿಯ ಅರ್ಜಿಯ ಬಗ್ಗೆ ವರದಿ ನೀಡಲು ಸೂಚಿಸಿ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರರಿಗೆ ಪತ್ರ ಬರೆದಿದೆ. ಅವರು ಮೈಸೂರಿನ ಅಧೀಕ್ಷಕ ಎಂಜಿನಿಯರರಿಗೆ ಅದನ್ನು ಕಳಿಸಿ, ಒಂದಲ್ಲ ಎರಡು ಪತ್ರಗಳನ್ನು ಬರೆದಿದ್ದಾರೆ. ಇಷ್ಟು ವಿದ್ಯಮಾನಗಳು ಸರಕಾರದ ಮಟ್ಟದಲ್ಲಿ ಕೇವಲ ಒಂದೂವರೆ ತಿಂಗಳಿನಲ್ಲಿ ನಡೆದು ಹೋಗಿವೆ. ಈ ಪತ್ರದ ಪ್ರತಿಗಳು ಕಾರ್ಯಪಾಲಕ ಎಂಜಿನಿಯರ್, ಜಲಮಾಪನ ವಿಭಾಗ, ಹಾಸನ ಇವರಿಗೂ 'ಸೂಕ್ತಕ್ರಮ'ಕ್ಕಾಗಿ ಹೋಗಿರುವುದರಿಂದ ಅಂತಿಮವಾಗಿ ಈ ವಿಷಯದಲ್ಲಿ ವರದಿ ಕೊಡಬೇಕಾದವರು ಅವರೇ ಎಂದು ಭಾವಿಸಬಹುದು. ಅಥವಾ ಅವರು ಸ. ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಈ ಕೆಲಸವನ್ನು ವಹಿಸಲೂಬಹುದು.
ಕಾರ್ಯಪಾಲಕ ಎಂಜಿನಿಯರರ ವರದಿ ಈಗಾಗಲೇ ಸರಕಾರದ ಕೈಸೇರಿದೆಯೇ, ಅವರು ವರದಿ ತಯಾರಿಸಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇಲಾಖೆಯ ವೆಬ್ ಸೈಟಿನಲ್ಲಿ ಸಂಬಂಧಿಸಿದ ಕಡತ "ಚಾಲ್ತಿಯಲ್ಲಿದೆ" ಎಂದಿರುವುದರಿಂದ ಮತ್ತು ಸುಮಾರು ಹದಿನೈದು ದಿನಗಳ ಹಿಂದಿನವರೆಗೂ ಕಡತದಲ್ಲಿ ಅಂಥ ವರದಿ ಇರಲಿಲ್ಲವಾದ್ದರಿಂದ ವರದಿ ಇನ್ನೂ ಒಪ್ಪಿಸಲಾಗಿಲ್ಲ ಎಂದು ಭಾವಿಸಲು ಅವಕಾಶವಿದೆ. ಆದರೆ ಅವರ ವರದಿ ಯಾವಾಗ ಬೇಕಾದರೂ ಸಲ್ಲಿಕೆಯಾಗಬಹುದು ಮತ್ತು ಅದನ್ನು ಆಧರಿಸಿ ಸರಕಾರ ಎಂ ಎಸ್ ಇ ಜಡ್ ಕಂಪೆನಿಗೆ ನೀರು ಕೊಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬಹುದು.
ಎಂ ಎಸ್ ಇ ಜಡ್ ಕಂಪೆನಿ ತನ್ನ ಬೇಡಿಕೆಗೆ ಆಧಾರವಾಗಿ ಸುರತ್ಕಲ್ಲಿನ ಎನ್ ಐ ಟಿ ಕೆಯ ಅಪ್ಲೈಡ್ ಮೆಕ್ಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್ ವಿಭಾಗದ ಪ್ರೊ. ಎಸ್. ಜಿ. ಮಯ್ಯರು ಮಾಡಿದ ಅಧ್ಯಯನ ವರದಿಯನ್ನು ಲಗತ್ತಿಸಿದೆ. ಈ ವರದಿಯ ಪ್ರಕಾರ ಅಗತ್ಯಪ್ರಮಾಣದ ನೀರು ನೇತ್ರಾವತಿಯ ಅಣೆಕಟ್ಟುಗಳಲ್ಲಿ ಲಭ್ಯವಿದೆ.
ಕಂಪೆನಿಯು ನೇತ್ರಾವತಿ ನದಿಯಿಂದ ನೀರೆತ್ತಲು ಕಾಮಗಾರಿ ಪ್ರಾರಂಭಿಸಿ ಪೈಪುಗಳನ್ನು ಅಳವಡಿಸತೊಡಗಿದಾಗ, 15 ಎಂಜಿಡಿ ನೀರು ಸಾಗಿಸಲು ಅನುಮತಿ ಪಡೆದಿದ್ದರೂ, ಅದರ ಎರಡರಷ್ಟು ಎಂದರೆ 30 ಎಂಜಿಡಿ ನೀರು ಸಾಗಿಸುವ ಸಾಮರ್ಥ್ಯದ ಪೈಪುಗಳನ್ನು ಅಳವಡಿಸಿದ್ದು ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾಗಿ, ಮಂಗಳೂರಿನ ಜನತೆಯಲ್ಲಿ ಆತಂಕ, ಅನುಮಾನಗಳನ್ನು ಸೃಷ್ಟಿಸಿತ್ತು. ಆ  ಅನುಮಾನ ಈಗ ನಿಜವಾಗುವಂತೆ ತೋರುತ್ತಿದೆ.

ಎಂ ಎಸ್ ಇ ಜಡ್ ಕಂಪೆನಿಯ ನೀರಿನ ಬೇಡಿಕೆ ಪೂರೈಕೆಗಳ ವಸ್ತುಸ್ಥಿತಿ:

2007ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಸರಕಾರವು ಎಂ ಎಸ್ ಇ ಜಡ್ ಕಂಪೆನಿಗೆ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಬೇಸಗೆಯ 90 ದಿನಗಳಲ್ಲಿ ಒಟ್ಟು 15 ಎಂಜಿಡಿ ನೀರೆತ್ತಲು ಅನುಮತಿ ನೀಡಿದೆ. ಇದಲ್ಲದೆ ಕಂಪೆನಿಯು ಮಂಗಳೂರು ಮಹಾನಗರಪಾಲಿಕೆಯೊಂದಿಗೆ ಕೊಳಚೆನೀರನ್ನು ಶುದ್ಧೀಕರಿಸಿ ಬಳಸುವ ಕುರಿತಂತೆ ಒಂದು ಒಪ್ಪಂದವನ್ನು ಮಾಡಿಕೊಂಡಿದೆ. 2009ರ ಅಕ್ಟೋಬರ್ ತಿಂಗಳಿನಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಎಂ ಎಸ್ ಇ ಜಡ್ ಕಂಪೆನಿಯ ಒಂದು ಪರಿಚಯ ಲೇಖನ (ಜಾಹೀರಾತು?)ದಲ್ಲಿ "ಮಂಗಳೂರು ಆರ್ಥಿಕ ವಲಯ ನಿಯಮಿತಕ್ಕೆ ನೀರಿನ ಮೂಲ"ವನ್ನು ಹೀಗೆ ವಿವರಿಸಿದೆ:
* 18 ಎಂಜಿಡಿಯಷ್ಟು ನೀರನ್ನು ಮಂಗಳೂರು ಮ.ನ.ಪಾ. ಕೊಳಚೆ ನೀರು ಸಂಸ್ಕರಣ ಘಟಕಗಳ ಮೂಲಕ ಸಂಸ್ಕರಿಸಿ ಬಳಸುತ್ತದೆ
* 15 ಎಂಜಿಡಿಯಷ್ಟು ನೀರನ್ನು ಗುರುಪುರ ಮತ್ತು ನೇತ್ರಾವತಿಯ ಕಿಂಡಿ ಅಣೆಕಟ್ಟಿನ ಮೂಲಕ ಪಡೆಯುವ ಯೋಜನೆ ಇದೆ
* 12 ಎಂಜಿಡಿಯಷ್ಟು ನೀರನ್ನು ನೈಸರ್ಗಿಕ ಅಣೆಕಟ್ಟುಗಳ ಮೂಲಕ ಮಳೆನೀರು ಕೊಯ್ಲು ಮಾಡಿ ತನ್ನ ಸಂಗ್ರಹಾಗಾರದಲ್ಲಿ ಶೇಖರಿಸಿ ಉಪಯೋಗಿಸುವ ವ್ಯವಸ್ಥೆ ಮಾಡಲಾಗುತ್ತದೆ.
2008ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 1800 ಎಕ್ರೆ ಜಾಗದಲ್ಲಿ ಎಂ ಎಸ್ ಇ ಜಡ್ ಮೊದಲ ಹಂತದ ಸ್ಥಾಪನೆಗೆ ಅನುಮತಿ ನೀಡಿದೆ. ಈ ಅನುಮತಿಯಲ್ಲಿ ಮಂಡಳಿಯು "ಎಂ ಎಸ್ ಇ ಜಡ್ ಮೊದಲ ಹಂತದ ನೀರಿನ ಬಳಕೆಯು 37 ಎಂಜಿಡಿಯನ್ನು ಮೀರತಕ್ಕದ್ದಲ್ಲ" ಎಂದು ವಿಧಿಸಿ ನೀರಿನ ಮೂಲಗಳನ್ನು ಹೀಗೆ ಗುರುತಿಸಿದೆ: ನೇತ್ರಾವತಿ ಮತ್ತು ಗುರುಪುರ ನದಿಗಳು; ಕಾವೂರು, ಬಜಾಲ್ ಮತ್ತು ಸುರತ್ಕಲ್ಲಿನ ಕೊಳಚೆ ನೀರು ಸಂಸ್ಕರಣಾ ಘಟಕಗಳು ಮತ್ತು ಎಂ ಎಸ್ ಇ ಜಡ್ ನ ಆವರಣದೊಳಗಿನ ಸಂಗ್ರಹಾಗಾರಗಳು.
ಕಂಪೆನಿಯ Environmental Impact Assessment ಮಾಡಿರುವ NEERI  ಸಹ ತನ್ನ ವರದಿಯಲ್ಲಿ "ಕಂಪೆನಿಯು ತನ್ನ ಆವರಣದೊಳಗೆ 165 ಎಕ್ರೆ ವಿಸ್ತಾರದ ಒಂದು ಸ್ಥಳವನ್ನು ಗುರುತಿಸಿದೆ. ಇಲ್ಲಿ ಒಡ್ಡುಗಳ ನಿರ್ಮಾಣ ಆಗಬೇಕಾಗಿದೆ" ಎಂದೂ, "ಅದರಲ್ಲಿ ದಿನಕ್ಕೆ 12.45 ದಶಲಕ್ಷ ಗ್ಯಾಲನ್ನಿನಂತೆ 90 ದಿನಗಳಿಗೆ ಅಗತ್ಯವಾದ ನೀರನ್ನು ಸಂಗ್ರಹಿಸಬಹುದಾಗಿದೆ" ಎಂದೂ ತಿಳಿಸಿದೆ. "ನೀರಿ"ಯ ವರದಿಯ ಪ್ರಕಾರವೂ ಕಂಪೆನಿಯ ನೀರಿನ ಮೂಲಗಳು: ಕೊಳಚೆ ನೀರು ಸಂಸ್ಕರಣಾಘಟಕದಿಂದ 18 ಎಂಜಿಡಿ; ನೇತ್ರಾವತಿ ಮತ್ತು ಗುರುಪುರ ನದಿಗಳಿಂದ 15 ಎಂಜಿಡಿ; ಮಳೆನೀರು ಸಂಗ್ರಹಣೆಯಿಂದ 12 ಎಂಜಿಡಿ.
ಹೀಗೆ ನೀರಿನ ಬಳಕೆಯ ಮಿತಿ ಮತ್ತು ನೀರಿನ ಮೂಲಗಳು ಸ್ಪಷ್ಟವಾಗಿದ್ದರೂ 31-08-2012ರಲ್ಲಿ 27 ಎಂಜಿಡಿ ನೀರಿಗಾಗಿ ತನ್ನ ಹೊಸಬೇಡಿಕೆ ಮಂಡಿಸುವಾಗ ಕಂಪೆನಿಯು ತನ್ನ ವರಸೆಯನ್ನು ಬದಲಾಯಿಸಿ ಹೀಗೆ ಹೇಳಿದೆ: "It is kindly requested to approve augmentation of water sourcing from 15 MGD to 27 MGD"......... "The balance requirements will be met from Mangalore City Corporation three sewage treatment plants out of which two plants are under construction".  ಇಲ್ಲಿ ನೇತ್ರಾವತಿ ನದಿಯ ನೀರಿನ ಕುರಿತು ಹೇಳುವಾಗ ಯಾವ್ಯಾವ ಬ್ಯಾರೇಜಿನಿಂದ ಎಷ್ಟೆಷ್ಟು ನೀರು ಎಂದು ನಿರ್ದಿಷ್ಟವಾಗಿ ಹೇಳುವ ಕಂಪೆನಿ, ಎಸ್ ಟಿ ಪಿಗಳಿಂದ ಪಡೆಯುವ ನೀರಿನ ಪ್ರಮಾಣವನ್ನು ಮಾತ್ರ ನಿರ್ದಿಷ್ಟವಾಗಿ ಹೇಳುವುದಿಲ್ಲ. ಇನ್ನೂ ಅಚ್ಚರಿಯ ವಿಷಯವೆಂದರೆ ಅತ್ಯಂತ ಅನುಕೂಲಕರವಾಗಿ ಮಳೆನೀರು ಸಂಗ್ರಹದ ಮೂಲಕ ನೀರೊದಗಿಸಿಕೊಳ್ಳುವ ಐಟಮ್ಮನ್ನು ಮರೆತೇಬಿಟ್ಟಿದೆ!
"ಕಂಪೆನಿಯ ನೀರಿನ ಅಗತ್ಯವು 37 ಎಂಜಿಡಿಯನ್ನು ಮೀರತಕ್ಕದ್ದಲ್ಲ" ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಅನುಮತಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಮೇಲೆ ಹೇಳಿದ ಲೆಕ್ಕಾಚಾರದಂತೆ ಈಗಾಗಲೇ ಇರುವ ಮೂಲಗಳಿಂದ ಕಂಪೆನಿಗೆ 45 ಎಂಜಿಡಿ ನೀರು ಸಿಗುತ್ತಿದೆ. ಎಂದರೆ ಅದರ ಬಳಕೆಯ ಮಿತಿಗಿಂತ 8 ಎಂಜಿಡಿ ನೀರು ಹೆಚ್ಚಾಗಿಯೇ ಸಿಗುತ್ತಿದೆ. ಹಾಗಿದ್ದರೆ ಕಂಪೆನಿ ಮತ್ತೂ 12 ಎಂಜಿಡಿ ನೇತ್ರಾವತಿ ನದಿಯ ನೀರು ಬೇಕೆಂದು ಅರ್ಜಿ ಸಲ್ಲಿಸುತ್ತಿರುವುದರ ಮರ್ಮವೇನು? ಇಷ್ಟು ನೀರೆತ್ತಲು ಮೊದಲೇ ಪೈಪುಗಳನ್ನು ಹಾಕಿ ಅದು ವ್ಯವಸ್ಥೆ ಮಾಡಿಕೊಂಡಿರುವುದು ಏನನ್ನು ಸೂಚಿಸುತ್ತದೆ?

ಕುಡಿಯುವ ನೀರು: ಮಂಗಳೂರು ಎದುರಿಸಬೇಕಾಗಿರುವ ಎರಡು ಮುಖ್ಯ ಸವಾಲುಗಳು:

ನೇತ್ರಾವತಿ ನದಿಯಿಂದ ನೀರೆತ್ತುವ ವಿಷಯದಲ್ಲಿ ಇಲ್ಲಿಯವರೆಗೂ ಮಂಗಳೂರು ಮಹಾನಗರಪಾಲಿಕೆಗೆ ಪ್ರಬಲವಾದ ಯಾವ ಪ್ರತಿಸ್ಪರ್ಧಿಗಳೂ ಇರಲಿಲ್ಲ. ಎಂ ಆರ್ ಪಿ ಎಲ್ ಕಳೆದ ಹಲವು ವರ್ಷಗಳಿಂದ ನೀರೆತ್ತುತ್ತಿದೆಯಾದರೂ ಅದು ಮನಪಾಕ್ಕೆ ದೊಡ್ಡ ಸವಾಲು ಎನ್ನುವಂತಿಲ್ಲ. ಆದರೆ ಎಂ ಎಸ್ ಇ ಜಡ್ ಕಂಪೆನಿ ಮಂಗಳೂರಿನ ಜನತೆಯ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೇ ಸಡ್ಡು ಹೊಡೆಯುವ  ಎಲ್ಲ ಲಕ್ಷಣಗಳೂ ನಿಧಾನವಾಗಿ ತಲೆದೋರುತ್ತಿವೆ.

1. ತುಂಬೆ ಅಣೆಕಟ್ಟಿನ ಸಂಗ್ರಹಣಾಸಾಮರ್ಥ್ಯಕ್ಕೆ ಅಡ್ಡಿ:

ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜನ್ನು ಹೆಚ್ಚಿಸುವ ದೃಷ್ಟಿಯಿಂದ ತುಂಬೆಯಲ್ಲಿ ಅಣೆಕಟ್ಟಿನ ಎತ್ತರವನ್ನು ಏರಿಸುವ ಕಾಮಗಾರಿ ಈಗ ಕೆಲವು ವರ್ಷಗಳಿಂದಲೂ ನಡೆಯುತ್ತಲೇ ಇದೆಯಷ್ಟೆ. ಇತ್ತ ಸರಕಾರವು ಎಂ ಎಸ್ ಇ ಜಡ್ ಕಂಪೆನಿಗೆ ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ ಒಂದು ಅಣೆಕಟ್ಟು ಕಟ್ಟಲು ಅನುಮತಿ ನೀಡಿದೆ. ಈ ಅನುಮತಿಗೆ ಸಂಬಂಧಿಸಿದಂತೆ ಅಂದಿನ ಮನಪಾ ಕಮಿಷನರ್ ಆಗಿದ್ದ  ಹರೀಶ ಕುಮಾರ್  18-04-2012ರಲ್ಲಿ  ಜಿಲ್ಲಾಧಿಕಾರಿಯವರಿಗೆ ಹೀಗೆ ಪತ್ರ ಬರೆದಿದ್ದರು:  "ಉದ್ದೇಶಿತ MSEZನವರ ಜಕ್ರಿಬೆಟ್ಟುವಿನ ಕಿಂಡಿ ಅಣೆಕಟ್ಟು ಮಂಗಳೂರಿನ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಾಣವಾಗುತ್ತಿರುವ ಹೊಸ ಅಣೆಕಟ್ಟಿನ ಶೇಖರಣಾ ಸಾಮರ್ಥ್ಯವನ್ನು ಕಡಿಮೆಗೊಳಿಸುವುದರಿಂದ ಮತ್ತು ಸರಕಾರಿ ಆದೇಶದ ಶರ್ತ 8 ರ ಉಲ್ಲಂಘನೆಯಾಗುವುದರಿಂದ ಶರ್ತ 19ರಂತೆ, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ MSEZನವರಿಗೆ ನೀಡಿರುವ ಅನುಮತಿಯನ್ನು ರದ್ದು ಮಾಡುವಂತೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜನಸಾಮಾನ್ಯರ ಪರವಾಗಿ ಕೋರಿಕೆ ಸಲ್ಲಿಸಿ ವಿನಂತಿಸಬೇಕಾಗಿ ಕೋರಲಾಗಿದೆ".  ಜಿಲ್ಲಾಧಿಕಾರಿಯವರು ಈ ಪತ್ರದ ಮುಖ್ಯಾಂಶಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಒಂದು ಪತ್ರ ಬರೆದು ಸೂಕ್ತಕ್ರಮಕ್ಕಾಗಿ ಕೋರಿದರು. ಈ ಪತ್ರದ ವಿಷಯ ಇನ್ನೂ ಸರಕಾರದ ಎದುರಿಗೆ ತೀರ್ಮಾನಕ್ಕೆ ಬಾಕಿ ಇದೆ.

2. ಪ್ರಬಲ ಎದುರಾಳಿಯೊಂದಿಗೆ ಹೋರಾಟದ ಅನಿವಾರ್ಯತೆ

2012ರ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಲ್ಲಿ  ಕುಡಿಯುವ ನೀರಿನ ತೀವ್ರ ಅಭಾವ ಉಂಟಾಯಿತು. ಮಾರ್ಚ್ 27ರಂದು ಜಿಲ್ಲಾಧಿಕಾರಿಯವರು, ನೇತ್ರಾವತಿಯಿಂದ ದಿನಕ್ಕೆ 60 ಲಕ್ಷ ಗ್ಯಾಲನ್ ನೀರೆತ್ತುತ್ತಿದ್ದ ಎಂ ಆರ್ ಪಿ ಎಲ್ ಕಂಪೆನಿಗೆ "ತುಂಬೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ದಿನಕ್ಕೆ 25 ಲಕ್ಷ ಗ್ಯಾಲನ್ ನೀರು ಮಾತ್ರ ಎತ್ತತಕ್ಕದ್ದು" ಎಂದು ಆದೇಶಿಸಿದರು. ನೀರಿನ ಈ ಸಮಸ್ಯೆಯ ಕುರಿತು 17-04-2012ರಂದು ಎಂ ಆರ್ ಪಿ ಎಲ್ ಕಂಪೆನಿಯು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ".....ಅಂತೆಯೇ ಅಂದಿನಿಂದ ಪ್ರತಿನಿತ್ಯವೂ  25 ಲಕ್ಷ ಗ್ಯಾಲನ್ ನೀರನ್ನು ಮಾತ್ರ ಎತ್ತುತ್ತಿದ್ದೆವು.  ಆದರೆ 11ನೇ ತಾರೀಖಿನ ನಂತರ ಕಂಪೆನಿಯು ಸರಪಾಡಿಯಿಂದ ನೀರೆತ್ತುವುದನ್ನು ಪೂರ್ಣವಾಗಿ ನಿಲ್ಲಿಸಿತು. ನೀರಿಲ್ಲದ ಕಾರಣಕ್ಕೆ ಕಂಪೆನಿಯು ತನ್ನ ಘಟಕಗಳನ್ನು ಬಲವಂತವಾಗಿ ಮುಚ್ಚಬೇಕಾಯಿತು" ಎಂದು ಹೇಳಿತು.
ಏಪ್ರಿಲ್ ಕೊನೆಯಹೊತ್ತಿಗೆ ಮಳೆ ಬಂದು ಈ ಸಮಸ್ಯೆ ಪರಿಹಾರವಾಯಿತೆಂಬುದು ನಿಜ. ಆದರೆ ಅದೇ ವಿಷಯಕ್ಕೆ ಸಂಬಂಧಿಸಿ ಎಂ ಆರ್ ಪಿ ಎಲ್ ಕಂಪೆನಿ ಹೈಕೋರ್ಟಿನಲ್ಲಿ ಒಂದು ದಾವೆ ಹೂಡಿದೆ. ಈ ದಾವೆಗೆ ಸಂಬಂಧಿಸಿ ಹೈಕೋರ್ಟ್ ಮಧ್ಯಂತರ ಆದೇಶವೊಂದನ್ನು ಹೊರಡಿಸಿದೆ, ಆದರೆ ವಿಚಾರಣೆ ಪೂರ್ತಿಯಾಗಿ ಮುಗಿದಿಲ್ಲ. ದ.ಕ. ಜಿಲ್ಲಾಡಳಿತ, ಹಾಸನದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಜಲಮಾಪನ ವಿಭಾಗ ಹಾಗೂ ಬಂಟ್ವಾಳದ ಮೆಸ್ಕಾಂಗಳು  ಹೈಕೋರ್ಟಿಗೆ ಅಲೆಯಬೇಕಾದ ಪರಿಸ್ಥಿತಿ ಹುಟ್ಟಿಕೊಂಡಿದೆ.
ಜೊತೆಗೇ ಪಶ್ಚಿಮಬಂಗಾಳದ ಪಾರ್ಲಿಮೆಂಟ್ ಸದಸ್ಯರೊಬ್ಬರು ಈ ಸಮಸ್ಯೆಯನ್ನು ಪಾರ್ಲಿಮೆಂಟಿನಲ್ಲೂ ಎತ್ತಿದ್ದರಿಂದ  ಕರ್ನಾಟಕ ಸರಕಾರವು ಪಾರ್ಲಿಮೆಂಟಿಗೆ ಈ ಬಗ್ಗೆ ವಿವರಣೆ ಕೊಡಬೇಕಾಗಿ ಬಂತು.
ಎಂ ಆರ್ ಪಿ ಎಲ್  ಎತ್ತುತ್ತಿರುವ ಕೇವಲ 6 ಎಂಜಿಡಿ ನೀರೇ (ಈಗ ಅದು 8.5 ಎಂಜಿಡಿ ನೀರೆತ್ತಲು ಅನುಮತಿ ಪಡೆದಿದೆ)  ಮಂಗಳೂರಿನ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಪೆಟ್ಟು ಕೊಡುವುದಾದರೆ, ನಾಳೆ ಎಂ ಎಸ್ ಇ ಜಡ್ ಕಂಪೆನಿ 15 ಎಂಜಿಡಿ ಅಥವಾ 27 ಎಂಜಿಡಿ ನೀರೆತ್ತಲು ಪ್ರಾರಂಭಿಸಿದರೆ, ಬಂಟ್ವಾಳದವರು,  ಮಂಗಳೂರಿಗರು ಕುಡಿಯುವ ನೀರಿಗಾಗಿ ಚಿಕ್ಕಬಳ್ಳಾಪುರಕ್ಕೋ ಕೋಲಾರಕ್ಕೋ ಹೋಗಬೇಕಾದ ಪರಿಸ್ಥಿತಿ ಬರಲಾರದೆ?


ಆದರೆ ಜಕ್ರಿಬೆಟ್ಟಿನಲ್ಲಿ ಎಂ ಎಸ್ ಇ ಜಡ್ ಕಂಪೆನಿ ಅಣೆಕಟ್ಟು ನಿರ್ಮಾಣದ ಪೂರ್ವಭಾವಿ ಕಾಮಗಾರಿಗಳನ್ನು ನಡೆಸುತ್ತಲೇ ಇದೆ. ಒಂದುವೇಳೆ ಮನಪಾ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಕೋರಿಕೆ ಹಾಗೂ ಮಂಗಳೂರಿನ ಜನತೆಯ ಕುಡಿಯುವ ನೀರಿನ ಹಕ್ಕನ್ನು ಕಡೆಗಣಿಸಿ ಜಕ್ರಿಬೆಟ್ಟಿನಲ್ಲಿ ಇನ್ನೊಂದು ಅಣೆಕಟ್ಟು ನಿರ್ಮಾಣವಾದರೆ ತುಂಬೆ ಅಣೆಕಟ್ಟಿನ ಸಂಗ್ರಹಣಾಸಾಮರ್ಥ್ಯ ಅಂದಾಜು ಶೇ. 30ರಷ್ಟು ಕಡಿಮೆಯಾಗುವ ಎಲ್ಲ ಸಾಧ್ಯತೆಯೂ ಇದೆ. (ಅಲ್ಲದೆ ತುಂಬೆ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಪ್ರದೇಶ ಗಣನೀಯವಾಗಿ ಹೆಚ್ಚುವ ಸಾಧ್ಯತೆಯೂ ಇದೆ.)


ಮಂಗಳವಾರ, ನವೆಂಬರ್ 13, 2012


ವೇದಿಕೆಯ ಪತ್ರಕ್ಕೆ ಸರ್ಕಾರದ ಸ್ಪಂದನ

ಈ ದಿನ ಅಂದರೆ ೧೩-೧೧-೨೦೧೨ರಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರು ನೇತ್ರಾವತಿ ನದಿ ಸಂರಕ್ಷಣಾ ವೇದಿಕೆಗೆ ಕಳಿಸಿರುವ ಪತ್ರ ಹೀಗಿದೆ:

ಇಂದ: 
ಸರ್ಕಾರದ ಕಾರ್ಯದರ್ಶಿಗಳು
ಜಲಸಂಪನ್ಮೂಲ ಇಲಾಖೆ
ಕರ್ನಾಟಕ ಸರ್ಕಾರ,
ಬೆಂಗಳೂರು-೫೬೦೦೦೧

ಇವರಿಗೆ:

೧. ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ವಿಶೇಷ ಆರ್ಥಿಕ ವಲಯ ಸಂಸ್ಥೆ, ನಂ. ೧೬, ಪ್ರಣವಾ ಪಾರ್ಕ್, ೩ನೇ ಮಹಡಿ, ಇನ್ ಫೆಂಟ್ರಿ ರೋಡ್, ಬೆಂಗಳೂರು-೫೬೦೦೦೧
೨. ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು-೫೬೦೦೦೯

ಮಾನ್ಯರೆ
ವಿಷಯ: ಮಂಗಳೂರು ಎಸ್. ಇ. ಜಡ್. ಕಂಪೆನಿಗೆ ನೇತ್ರಾವತಿ ನದಿಯಿಂದ ನೀರೆತ್ತಲು ನೀಡಿರುವ ಅನುಮತಿಯನ್ನು ಹಿಂಪಡೆಯುವ ಬಗ್ಗೆ
ಉಲ್ಲೇಖ: ಶ್ರೀ ಹೆಚ್. ಸುಂದರ ರಾವ್, ಸಂಚಾಲಕ, ನೇತ್ರಾವತಿ ನದಿ ಸಂರಕ್ಷಣಾ ವೇದಿಕೆ, ದಕ್ಷಿಣಕನ್ನಡ ರವರ ಪತ್ರ ದಿನಾಂಕ: ೨೩-೧೦-೨೦೧೨

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದ ಪ್ರತಿಯನ್ನು ಅಡಕದೊಂದಿಗೆ ಲಗತ್ತಿಸಲಾಗಿದೆ. ಸದರಿ ಪತ್ರದಲ್ಲಿನ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ತಮ್ಮ ಅಭಿಪ್ರಾಯ/ವರದಿಯನ್ನು ಸರ್ಕಾರಕ್ಕೆ ಎರಡು ದಿನಗಳಲ್ಲಿ ಒದಗಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿದ್ದೇನೆ.
ತಮ್ಮ ವಿಶ್ವಾಸಿ

--ಸಹಿ--

(ಕೆ.ಎಸ್. ನಾಗರಾಜ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-೪)
ಜಲ ಸಂಪನ್ಮೂಲ ಇಲಾಖೆ

ಪ್ರತಿಯನ್ನು:
ಶ್ರೀ ಹೆಚ್. ಸುಂದರ ರಾವ್, ನೇಸರ, ಕೆರೆಕೋಡಿ, ಅಂ: ಮೊಡಂಕಾಪು-೫೭೪೨೧೯, ಜೋಡುಮಾರ್ಗ, ದ.ಕ.ಜಿಲ್ಲೆ ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.


ಭಾನುವಾರ, ಅಕ್ಟೋಬರ್ 21, 2012


ಬಂಟ್ವಾಳ, ಮಂಗಳೂರುಗಳ ಪಾಲಿಗೆ

ತಿರುಗಲಿದೆ ನೇತ್ರಾವತಿಯ ದಿಕ್ಕು!


ಗೆಳೆಯ ಅನಂತಾಡಿ ಗೋವಿಂದ ಭಟ್ಟರು ಇಮೈಲಿನಲ್ಲಿ ಏನು ಕಳಿಸಿದರೂ ಜೊತೆಗೆ ಈ ಮಾತು ಇದ್ದೇ ಇರುತ್ತದೆ:

ಕೊನೆಯ ಮರವನ್ನು ಕಡಿದುರುಳಿಸಿ ಆದಮೇಲೆ
ಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆ
ಕೊನೆಗುಳಿದ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆ
ಆಗ, ಆಗ ನಿಮಗೆ ತಿಳಿಯುತ್ತದೆ: "ಹಣ ತಿನ್ನಲು ಬರುವುದಿಲ್ಲ"!

ನಾವು ಭಾರತೀಯರು ಗಡ್ಡಕ್ಕೆ ಬೆಂಕಿ ತಾಗಿದಾಗಷ್ಟೇ ಬಾವಿ ತೋಡುವ ಪೈಕಿ. ಆದರೂ ನಾನು ಊದುವ ಶಂಖ ಊದುವುದೇ.

ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ಬರುತ್ತದಂತೆ, ಅದು ಹ್ಯಾಗೆ ನದಿಯನ್ನು ಘಟ್ಟ ಹತ್ತಿಸುತ್ತಾರೆ? ಮಳೆಗಾಲದಲ್ಲಿ ಬೇಕಾದಷ್ಟು ಕೊಂಡೊಯ್ಯಲಿ - ಬೇಸಿಗೆಯಲ್ಲಿ ನಮಗೇ ಕುಡಿಯಲು ಇಲ್ಲಿ ನೀರಿಲ್ಲ  ಇತ್ಯಾದಿ ಮಾತುಗಳು, ಅಲ್ಲಲ್ಲಿ ಈ ಬಗ್ಗೆ ಸಭೆಗಳು, ಚರ್ಚೆಗಳು ಆಗುತ್ತಿರುವಂತೆಯೇ ಬಂಟ್ವಾಳ-ಮಂಗಳೂರುಗಳ ಪಾಲಿಗೆ ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ಬಂದಾಗಿದೆ. ಎಂ. ಎಸ್. ಇ. ಜಡ್. ಕಂಪೆನಿ ಎಂಬ ಖಾಸಗಿ ಸಂಸ್ಥೆ ನೆನೆಸಿದ ಹಾಗೇ ಎಲ್ಲ ನಡೆದರೆ, ಮುಂದಿನ ಬೇಸಗೆಯಲ್ಲೇ ನೇತ್ರಾವತಿ ಶಂಬೂರಿನ ಎ ಎಂ ಆರ್ ಅಣೆಕಟ್ಟಿನಿಂದ ಕಂಪೆನಿಯ ಕೈಗಾರಿಕಾನೆಲೆಯ ಕಡೆಗೆ ದಿಕ್ಕು ಬದಲಿಸುತ್ತದೆ. ಅದಕ್ಕೆ ಬೇಕಾದ ಪೈಪು ಹಾಕಿಕೊಡಲು, ದಾರಿ ಬಿಟ್ಟುಕೊಡಲು ಬಂಟ್ವಾಳ ಪುರಸಭೆಯ ಕಂಬಗಳೇ ಬೆಂಬಲವಾಗಿ ನಿಂತಂತಿದೆ. ಮಂಗಳೂರಿನ ಕಾರ್ಪೋರೇಟರುಗಳು, ತುಂಬೆಯಲ್ಲಿ ಅಣೆಕಟ್ಟಿನ ಎತ್ತರ ಏರಿಸಿ, ಇಲ್ಲದ ನೀರನ್ನು ಮಂಗಳೂರಿಗೆ ಒಯ್ಯುವ ಭ್ರಮೆಯಲ್ಲಿದ್ದಾರೆ. ಎ.ಎಂ.ಆರ್. ಅಣೆಕಟ್ಟಿನ ಸಮೀಪ ನಡೆಯುತ್ತಿರುವ ಕಾಮಗಾರಿಯನ್ನು ಕಾಣಲು ಅವರಿಗೆ ಮನಸೇ ಇಲ್ಲ.

ಏನು ನಡೆಯುತ್ತಿದೆ?


ನೀರು ಸಾಗಿಸಲು ಹಾಕಿರುವ್ ಪೈಪ್ ಲೈನ್ ಕಾಮಗಾರಿಗೆ ಸಂಬಂಧಿಸಿ ಕಂಪೆನಿ ಎಂಬ ಪುಂಡುಹೋರಿ ಸರಕಾರ ವಿಧಿಸಿದ ಹಲವಾರು ನಿಬಂಧನೆಯ ಬೇಲಿಗಳನ್ನು ಮುರಿದೊಗೆದು ಮುನ್ನುಗ್ಗಿದೆ. ಈ ಬೇಲಿಗಳನ್ನು ಕಾಯಲೆಂದೇ ಇರುವ ಸರಕಾರಿ ಅಧಿಕಾರಿಗಳು ಕಂಡರೂ ಕಾಣದಂತೆ "ನಮಗೇಕೆ ದೊಡ್ಡವರ ಸಹವಾಸ" ಎಂದು ಸುಮ್ಮನೆ ಕೂತಿದ್ದಾರೆ. ಕೆಲಸ ಮಾಡಿದರೂ, ಮಾಡದಿದ್ದರೂ, ಹೇಗೆ ಮಾಡಿದರೂ ತಿಂಗಳ ಕೊನೆಗೆ ಸಂಬಳ ಗ್ಯಾರಂಟಿ, ಸೆರ್ವೀಸ್ ಮುಗಿದರೆ ಪೆನ್ಷನ್ ಗ್ಯಾರಂಟಿ ಎಂದಾದರೆ, ನಾನೂ ಹಾಗೆಯೇ ಮಾಡುವುದು ಅನ್ನಿ. ಇನ್ನು ಈ ಸರಕಾರಿ ಅಧಿಕಾರಿಗಳನ್ನು ಎಚ್ಚರದಲ್ಲಿಡಬೇಕಾದ ಪ್ರಜಾಪ್ರಭುಗಳಾದ ನಾವು ಟಿವಿ-ಮೂವಿ ನೋಡಿಕೊಂಡು ಕುರ್ಕುರೆ ಮೆಲ್ಲುತ್ತ ಹಾಯಾಗಿದ್ದೇವೆ. ನಾವು ಸಮಸ್ಯೆಗೆ ಪರಿಹಾರ ಹುಡುಕುವುದು ಪೂರ್ತಿಯಾಗಿ ನೀರು ನಿಂತ ಮೇಲೆಯೇ ಆಗಿರಬಹುದೆ?

ಎರಡು ನಿರ್ದಿಷ್ಟ ಪ್ರಕರಣಗಳು:


ನೇತ್ರಾವತಿಯ ನೀರು ತಿರುಗಿಸಲು ಅನುಮತಿ ಕೊಡುವಾಗ ಸರಕಾರ ಕಂಪೆನಿಗೆ ಹತ್ತೊಂಬತ್ತು ನಿಬಂಧನೆಗಳನ್ನು ವಿಧಿಸಿದೆ. ಅವುಗಳ ಪೈಕಿ ಆರನೆಯ ನಿಬಂಧನೆ ಇದು: "ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು". ಕಳೆದ ಎರಡು-ಎರಡೂವರೆ ವರ್ಷಗಳಿಂದ ಈ ನಿಬಂಧನೆಯನ್ನು ಕಂಪೆನಿ ಪಾಲಿಸಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾನು ಹೆಣಗಿದ್ದೇನೆ. ಇತ್ತೀಚೆಗೆ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ.

1. ಕಂಡರೂ ನೋಡದ ಅರಣ್ಯ ಇಲಾಖೆ


ಎಂ ಎಸ್ ಇ ಜಡ್ ಕಂಪೆನಿ ಪೈಪ್ ಲೈನ್ ಅಳವಡಿಸುವ ಮೊದಲು ನಿಮ್ಮ ಇಲಾಖೆಯ ಅನುಮತಿ ಪಡೆದಿದೆಯೇ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ "ಇಲ್ಲ" ಎಂಬ ಸ್ಪಷ್ಟ ಉತ್ತರವನ್ನೇ ನನಗೆ ನೀಡಿದೆ. 14-10-2010 ರಲ್ಲಿಯೇ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬರೆದ ಪತ್ರದಲ್ಲಿ ಹೀಗೆನ್ನುತ್ತಾರೆ: ".... ಎಂ ಎಸ್ ಇ ಜಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ".
ಎಂದರೆ, ಕಂಪೆನಿಯೇ ಆಗಲಿ, ಯಾರೇ ಆಗಲಿ ಮರ ಕಡಿಯಬೇಕಾದರೆ ಕಾನೂನು ಪ್ರಕಾರ ಏನೇನು ಮಾಡಬೇಕು ಎಂಬುದನ್ನು ಇಲ್ಲಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಕಂಪೆನಿ ಅಂದಾಜು ಮೂವತ್ತೈದು ಕಿ.ಮೀ. ಉದ್ದಕ್ಕೆ ಪೈಪುಗಳನ್ನು ಹಾಕಬೇಕು. ಅಷ್ಟೂ ಉದ್ದಕ್ಕೆ ಯಾವ ಯಾವ ಮರಗಳಿವೆ, ಅದರ ಮಾಲಕರು ಯಾರು, ಅದಕ್ಕೆ ದಾಖಲೆಗಳು ಎಲ್ಲಿವೆ ಇತ್ಯಾದಿಗಳನ್ನೆಲ್ಲ ಹುಡುಕುತ್ತ ಲೆಕ್ಕ ಹಾಕುತ್ತ ಕೂತರೆ ಅದಕ್ಕೇ ಒಂದೆರಡು ವರ್ಷ ಹೋದೀತು. ಇನ್ನು ಅದನ್ನು ಪರಾಂಬರಿಸಿ ಅರಣ್ಯ ಇಲಾಖೆ ಅನುಮತಿ ನೀಡಲು ಮತ್ತೊಂದು ವರ್ಷವಾದರೂ ಬೇಡವೆ? ಹೀಗೆ ಖಾಲಿ ಒಂದು ಅನುಮತಿಗೆ ವರ್ಷಗಟ್ಟಳೆ ಕಾಯುವುದಕ್ಕೆ ಕಂಪೆನಿ ಏನು ಕತ್ತೆಯೆ? ಹಾಗಾದರೆ ಏನು ಮಾಡುವುದು? ಮಾಡುವುದೇನು? ಜೆಸಿಬಿ ತನ್ನಿ, ಎಲ್ಲಿ ಬೇಕೋ ಅಲ್ಲಿ  ನುಗ್ಗಿಸಿ, ಯಾವ ಮರ ಬೇಕೋ ಅದನ್ನು ಬೀಳಿಸಿ, ಕಾಲುವೆ ತೆಗೆಯಿರಿ, ಪೈಪ್ ಹಾಕಿಕೊಂಡು ಹೋಗಿ! ಮತ್ತೆ ಸರಕಾರ, ಆದೇಶ, ನಿಬಂಧನೆ, ಅರಣ್ಯ ಇಲಾಖೆ? ಅವನ್ನೆಲ್ಲ ಮೂಟೆ ಕಟ್ಟಿ ಹೊಳೆಗೆ ಬಿಸಾಡಿ!
ಈಗ ಆಗಿರುವುದು ಇಷ್ಟೇ! ಕಂಪೆನಿ ಪೈಪ್ ಲೈನ್ ಅಳವಡಿಸುವ ತನ್ನ ಕೆಲಸವನ್ನು ಹೆಚ್ಚು ಕಡಿಮೆ ಮುಗಿಸಿ ಆಗಿದೆ. ಹಾಗೆ ಮಾಡುವಾಗ ಅಡ್ಡ ಬಂದ ನೂರಾರು - ಸಾವಿರಾರು ಮರಗಳು ಧರೆಗುರುಳಿವೆ! ದುರದೃಷ್ಟವಶಾತ್ ಹಾಗೆ ಉರುಳಿದ ಮರಗಳ ಪೈಕಿ ಒಂದಾದರೂ, ಪ್ರತಿ ದಿನ ಎಂಬಂತೆ ಅರಣ್ಯದಲ್ಲಿ ಗಸ್ತು ತಿರುಗುವ ಸಿಬ್ಬಂದಿಗಳಿಗಾಗಲೀ, ಅರಣ್ಯ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳಿಗಾಗಲೀ ಕಣ್ಣಿಗೇ ಬಿದ್ದಿಲ್ಲ! ಹಾಗೆ ಕಾಣದಂತೆ ಯಾರು ಅವರ ಕಣ್ಣಿನಲ್ಲಿ ಮಂಕುಬೂದಿ ಎರಚಿದರೋ? ಪ್ರತಿತಿಂಗಳೂ ಸಂಬಳ ಪಡೆದೂ, ಇಂಥದ್ದನ್ನು ಕಾಣದೆ ಇರಲು ಇಲಾಖೆಯ ಅಧಿಕಾರಿಗಳಿಗೆ ಮನಸ್ಸಾದರೋ ಹೇಗೆ ಬಂತೋ?






ಕಂಪೆನಿ ಹೀಗೆ ಕೆಡವಿದ ಮರಗಳ ಪೈಕಿ ಕೆಲವೇ ಕೆಲವು ಮರಗಳು ಕಳೆದ ಫೆಬ್ರವರಿ ಮಾರ್ಚ್ ಸಮಯದಲ್ಲಿ ಶನಿಶನಿ ಅಂತ ನನ್ನ ಕಣ್ಣಿಗೆ ಕಂಡವು. ನಾನು ಬಂಟ್ವಾಳದ ಅರಣ್ಯ ಇಲಾಖೆಗೆ ಅವುಗಳ ಫೋಟೋ ಸಮೇತ ಒಂದು ದೂರು ಸಲ್ಲಿಸಿದೆ. ಅಲ್ಲಿಂದ ಹೀಗೆ ಉತ್ತರ ಬಂತು:"ಬಂಟ್ವಾಳ-ಮೂಡಬಿದ್ರೆ ರಸ್ತೆ ಬದಿಯಲ್ಲಿ ಮಂಗಳೂರಿನ ಎಸ್ ಇ ಜಡ್ ವತಿಯಿಂದ ನೀರು ಸರಬರಾಜು ಮಾಡುವ ಪೈಪ್ ಲೈನ್ ಅಳವಡಿಸುವರೇ ರಸ್ತೆ ಬದಿಯ ಮರಗಳನ್ನು ಅನಧಿಕೃತವಾಗಿ ಕಡಿದಿರುವ ಬಗ್ಗೆ ಸದ್ರಿ ಕಂಪೆನಿಯ ಗುತ್ತಿಗೆದಾರರಾದ ಶ್ರೀ ಕೃಷ್ಣನಂದ ಬಿನ್ ಕೆ.ಪಿ.ಸ್ವಾಮಿ ಕೊಯಾ ಕೊ ಕಂಪೆನಿ ಹೈದರಾಬಾದ್ ಆಂದ್ರಪ್ರದೇಶ ಎಂಬುವರ ವಿರುದ್ಧ ಈ ಕಚೇರಿಯಲ್ಲಿ ಅರಣ್ಯ ತಕ್ಷೀರು 1/2012-13ರಂತೆ ತಕ್ಷೀರು ದಾಖಲಿಸಿಕೊಂಡು ಸೊತ್ತುಗಳನ್ನು ಸರಕಾರದ ಪರ ಅಮಾನತು ಪಡಿಸಿದ್ದು, ಸದ್ರಿ ತಕ್ಷೀರಿಗೆ ಸಂಬಂಧಿಸಿ ಸದ್ರಿಯವರಿಂದ ರೂ. 5000/- ನ್ನು ದಂಡನೆಯಾಗಿ ವಸೂಲು ಮಾಡಿ ಸರಕಾರಕ್ಕೆ ಜಮಾ ಮಾಡಲಾಗಿದೆ. ಇನ್ನು ಮುಂದೆ ಸದ್ರಿ ಪೈಪ್ ಲೈನ್ ಕಾಮಗಾರಿ ಮಾಡುವಾಗ ಯಾವುದೇ ಮರಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಲು ಹಾಗೂ ತೀರಾ ಅಗತ್ಯ ಎಂದು ಕಂಡುಬಂದಲ್ಲಿ ಈ ಬಗ್ಗೆ ಸದ್ರಿ ಮರ ಕಡಿಯಲು ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲು ಸೂಚಿಸಿ, ಎಚ್ಚರಿಕೆ ನೀಡಲಾಗಿದೆ."
ಈ ಪತ್ರದಿಂದ ಒಂದು ಅಂಶವಂತೂ ಸ್ಫಟಿಕ ಸ್ಪಷ್ಟವಾಗುತ್ತದೆ: ಎಂ ಎಸ್ ಇ ಜಡ್ ಕಂಪೆನಿ ಕಾಮಗಾರಿ ಪ್ರಾರಂಭಿಸುವ ಮೊದಲು  ಅರಣ್ಯ ಇಲಾಖೆಯಿಂದ ಅನುಮತಿ ಪಡೆದೇ ಇಲ್ಲ!

2. ಒಂದು ಕೇಳಿದರೆ ಮತ್ತೊಂದು ಕೊಟ್ಟು ನೋಡಿದ ಮಾಲಿನ್ಯ ನಿಯಂತ್ರಣ ಮಂಡಳಿ


ನಿಬಂಧನೆಯ ಪ್ರಕಾರ ಕಂಪೆನಿ ಕಾಮಗಾರಿ ಪ್ರಾರಂಭಿಸುವ ಮೊದಲು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ಪಡೆಯಬೇಕು. ಆದರೆ ಇಲ್ಲೂ ಅದೇ ಕತೆ. ಅನುಮತಿ ಪಡೆಯುವುದೆಂದರೆ ಅದಕ್ಕೆ ನೂರೆಂಟು ವಿಧಾನಗಳನ್ನು ಅನುಸರಿಸಬೇಕು. ಮುಖ್ಯವಾಗಿ ಯೋಜನೆ ಎಲ್ಲೆಲ್ಲಿ ಅನುಷ್ಠಾನಗೊಳ್ಳುತ್ತದೋ ಆ ಗ್ರಾಮಗಳ ಜನರ ಸಾರ್ವಜನಿಕ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಬೇಕು. ಸರಪಾಡಿಯಲ್ಲಿ ಶುರುವಾಗಿ ಮಣಿಹಳ್ಳ, ಜಕ್ರಿಬೆಟ್ಟು, ಲೊರೆಟ್ಟೋಪದವು, ಸೊರ್ನಾಡು, ಕುಪ್ಪೆ ಪದವು, ಎಡಪದವು, ಕೈಕಂಬ, ಬಜ್ಪೆ ಹೀಗೆ ಹಲವು ಗ್ರಾಮಗಳ ಮೂಲಕ ಪೈಪ್ ಲೈನ್ ಹಾದುಹೋಗುತ್ತದೆ. ಈ ಎಲ್ಲ ಗ್ರಾಮಗಳ ಜನರನ್ನು ಒಂದು ಕಡೆ ಸೇರಿಸುವುದು, ಸಭೆ ಮಾಡುವುದು ಇವೆಲ್ಲ ಆಗುವ ಹೋಗುವ  ಕೆಲಸವೆ? ಹಾಗಾದರೆ ಉಪಾಯ? ಉಪಾಯ ಏನಿಲ್ಲ! ಅನುಮತಿಗೆ ಗೋಲಿ ಹೊಡೆಯಿರಿ! ಕೇಳುವ ಮಗ ಯಾರಿದ್ದಾನೆ?


ನಾನು ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಪತ್ರ ವ್ಯವಹಾರ ಶುರು ಮಾಡಿದೆ. ಮಂಡಳಿಯ ಮಂಗಳೂರಿನ ಪ್ರಾದೇಶಿಕ ಕಚೇರಿ ಕಂಪೆನಿಯು 1800 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಿರುವ ಕೈಗಾರಿಕಾ ಸ್ಥಾವರಕ್ಕೆ  ಕೇಂದ್ರ ಕಚೇರಿ ನೀಡಿರುವ ಅನುಮತಿಯನ್ನು ನನಗೆ ತೋರಿಸಿತು. ನಾನು ಬೆಂಗಳೂರಿನ ಕೇಂದ್ರ ಕಚೇರಿಗೇ ಬರೆದೆ. ಅವರೂ ಅದೇ ಅನುಮತಿಯನ್ನು ನನ್ನೆದುರು ಒಡ್ಡಿದರು. ನಾನು ವಿಷಯವನ್ನು ನಿಖರವಾಗಿ ವಿವರಿಸಿ ಅವರಿಗೆ ಪುನಃ ಪತ್ರ ಬರೆದೆ. ಕೇಂದ್ರ ಕಚೇರಿ ನನ್ನ ಅರ್ಜಿಯನ್ನು ಮಂಗಳೂರಿನ ಪ್ರಾದೇಶಿಕ ಕಚೇರಿಗೇ ತಿರುಗಿಸಿತು! ಮಂಗಳೂರು ಪ್ರಾದೇಶಿಕ ಕಚೇರಿಯವರು ನನಗೆ ಹೀಗೆ ಉತ್ತರಿಸಿದರು: "..... ಸರ್ಕಾರದ ಆದೇಶ ಸಂಖ್ಯೆ ಜಸಂಇ 13 ವಿಬ್ಯಾಇ2006 ಬೆಂಗಳೂರು ದಿನಾಂಕ 17-09-2007 ಕ್ಕೆ ಸಂಬಂಧಿಸಿದ ಯೋಜನೆಗೆ... ಮಾಹಿತಿಯನ್ನು ನೀಡುವಂತೆ ಈ ಕಚೇರಿಗೆ ವರ್ಗಾಯಿಸಿದ್ದು ಹಾಗೂ ತಮ್ಮ ಉಲ್ಲೇಖಿತ ಪತ್ರದಲ್ಲಿ ಕೇಳಿರುವ ಮಂಡಳಿಯ ಅನುಮತಿ ಪತ್ರ ಈ ಕಚೇರಿಯಲ್ಲಿ ಲಭ್ಯವಿರುವುದಿಲ್ಲ"
ಅರ್ಥಾತ್ ಕಂಪೆನಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನೂ ಪಡೆದಿಲ್ಲ!
ಈ ನಡುವೆ ಮಂಗಳೂರಿನ ಪ್ರಾದೇಶಿಕ ಕಚೇರಿಗೆ ನನ್ನ ಅರ್ಜಿಯನ್ನು ವರ್ಗಾಯಿಸಿದ ಕೇಂದ್ರ ಕಚೇರಿ ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕೂರಬೇಕಾಗಿತ್ತಷ್ಟೆ? ಆಶ್ಚರ್ಯದ ಮಾತೆಂದರೆ ಅದು ಹಾಗೆ ಮಾಡಲಿಲ್ಲ! 16-10-2012 ರಂದು ನನಗೆ ಬರೆದ ಪತ್ರದಲ್ಲಿ ಅದು ಈ ಮಾಹಿತಿಯನ್ನು ನೀಡಿದೆ: "1. ಮಂಡಳಿಯಲ್ಲಿ ನೀಡಿರುವ ಸಮ್ಮತಿ ಪತ್ರದಲ್ಲಿ ನೀರಿನ ಮೂಲಗಳನ್ನು ಮಾತ್ರ ನಮೂದಿಸಿರುತ್ತದೆ ಎಂದು, ಸರ್ಕಾರಿ ಆಜ್ಞೆ 17-09-2007ರಲ್ಲಿ ಪ್ರಸ್ತಾವಿತವಾದ ನೇತ್ರಾವತಿ ಹಾಗೂ ಗುರುಪುರ ನದಿಯಿಂದ ನೀರನ್ನು ಸಂಗ್ರಹಿಸಿ ಬಳಸುವ ಯೋಜನೆಗೆ ಸಮ್ಮತಿಗಾಗಿ ಮಂಡಳಿಗೆ ಪ್ರತ್ಯಕ ಅರ್ಜಿಯನ್ನು ಸಲ್ಲಿಸಿರುವುದಿಲ್ಲ"
ಕಂಪೆನಿಯು ಅರ್ಜಿಯನ್ನೇ ಸಲ್ಲಿಸಿಲ್ಲವೆಂದ ಮೇಲೆ ಮಂಡಳಿಯು ಅನುಮತಿ ನೀಡುವ ಪ್ರಶ್ನೆಯೇ ಇಲ್ಲವಷ್ಟೆ?

ಬರೆಯಬಹುದು ಅಥವಾ ಕಾಯಬಹುದು!


ಲೇಖನದ ಪ್ರಾರಂಭದಲ್ಲಿ ಹೇಳಿರುವ ಸರಕಾರಿ ಆದೇಶದ 19ನೇ (ಹಾಗೂ ಕೊನೆಯ) ನಿಬಂಧನೆ ಹೀಗಿದೆ: "ಸಂಸ್ಥೆಯು ಮೇಲಿನ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಅನುಮತಿಯನ್ನು ಹಿಂದಕ್ಕೆ ಪಡೆಯಲಾಗುವುದು".
ಕಂಪೆನಿಯು ನಿಬಂಧನೆಗಳನ್ನು ಉಲ್ಲಂಘಿಸಿರುವುದಕ್ಕೆ ದಾಖಲೆಗಳ ಆಧಾರವನ್ನು ಕೊಟ್ಟು "ಅಧೀನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ(ತಾಂತ್ರಿಕ-೪), ವಿಕಾಸ ಸೌಧ, ಬೆಂಗಳೂರು ಇವರಿಗೆ ನಾನು  ಪತ್ರ ಬರೆದಿದ್ದೇನೆ. ಕಂಪೆನಿಗೆ ನೀರು ಸಾಗಿಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿದ್ದೇನೆ. ನನ್ನೊಂದಿಗೆ ಸಹಮತ ಹೊಂದಿದ್ದರೆ ನೀವೂ ಹಾಗೆ ಮಾಡಬಹುದು. ನನ್ನ ಹತ್ತಿರ ಇರುವ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಕೊಡಲು ನಾನು ತಯಾರಿದ್ದೇನೆ. ಅಥವಾ ಕುಡಿಯಲು ನೀರು ಸಿಕ್ಕದ ಹಾಗೆ ಆಗುವವರೆಗೆ ಕಾಯಲೂಬಹುದು.

ಭಾನುವಾರ, ಸೆಪ್ಟೆಂಬರ್ 16, 2012

ಮೌನೀಶರ ಜೋಕುಗಳು


ಮಿತ್ರ ಮೌನೀಶ ಮಲ್ಯರು ಮೌನ ಮೋಹನ ಸಿಂಗರ ಹಾಗಲ್ಲ. ಪಟ ಪಟ ಮಾತಾಡುತ್ತಾರೆ. ಸಾವಯವ ಕೃಷಿ ಅವರ ಒಂದು ಆಸಕ್ತಿ. ಇವತ್ತು ಭಾನುವಾರ ಅವರ ತೋಟಕ್ಕೆ ಹೋಗಿದ್ದೆ. ನನ್ನ ಹಾಗೇ ಈ ಮೊದಲು ಬಂದವರು ಯಾರೋ ಕೇಳಿದರಂತೆ:
"ನೀವು ಅಡಿಕೆಯ ಬುಡಕ್ಕೆ ಕಾಳುಮೆಣಸು ನೆಟ್ಟಿದ್ದೀರಿ. ಅಡಿಕೆಗೆ ಕೊಟ್ಟ ಗೊಬ್ಬರವೆಲ್ಲ ಅದೇ ತಿನ್ನುವುದಿಲ್ಲವೆ?"
ಮೌನೀಶರ ಉತ್ತರ: "ನಾವು ಅಡಿಕೆಗೆ ಗೊಬ್ಬರ ಕೊಡುವುದೇ ಇಲ್ಲವಲ್ಲ!"
***
ಮೌನೀಶರಿಗೆ ಹಲಸೆಂದರೆ ಆಯಿತು. ಎಲ್ಲಿಂದಲೋ ಕೆಲವು ಗಮ್ ಲೆಸ್ (ಮೇಣ ಇಲ್ಲದ್ದು) ಹಲಸಿನ ಸಸಿ ತಂದಿದ್ದರಂತೆ. ಹೀಗೇ ಯಾರಿಗೋ ಕೇಳಿದವರಿಗೆ ಒಂದು ಸಸಿ ಕೊಟ್ಟರು. ಧರ್ಮಕ್ಕಲ್ಲ, ದುಡ್ಡಿಗೆ. ತಗೊಂಡವರಿಗೆ ಅನುಮಾನ.  ಕೇಳಿದರು:
"ಹಣ್ಣಾದಾಗ ಮೇಣ ಇದ್ದರೆ ಏನು ಮಾಡುವುದು?"
"ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರಾಯಿತು" ಮೌನೀಶರ ಸಲಹೆ.
***
ಅವರ ತೋಟದ ಆಚೆ ಈಚೆ ಕೆಲವು  ಹಣ್ಣಿನ ಮರಗಳಿವೆ. ನೇರಳೆ, ಪೇರಳೆ ಇತ್ಯಾದಿ. ಹಣ್ಣಾಗುವ ಕಾಲಕ್ಕೆ ಆಚೀಚೆಯ ತುಂಟ ಹುಡುಗರು ತೋಟಕ್ಕೆ ಧಾಳಿ ಇಡುತ್ತಾರೆ. ವರ್ಷಕ್ಕೆ ಒಬ್ಬರಿಗೋ ಇಬ್ಬರಿಗೋ ಕೈಗೋ ಕಾಲಿಗೋ ಫ್ರಾಕ್ಚರ್ ಆಗಿ ಬ್ಯಾಂಡೇಜ್ ಬೀಳುವುದು ಸಾಮಾನ್ಯ. ಆದರೆ ಅಂಥವರು ಬ್ಯಾಂಡೇಜ್ ಹಾಕಿಕೊಂಡರೂ ತೋಟಕ್ಕೆ ಬರುವುದು ಬಿಡುವುದಿಲ್ಲ.
"ಬಂದೇನು ಮಾಡುತ್ತಾರೆ?" ನಾನು ಕೇಳಿದೆ.
"ಮರ ಹತ್ತಿದವರಿಗೆ ಡೈರೆಕ್ಷನ್ ಕೊಡುತ್ತಾರೆ!"

ಭಾನುವಾರ, ಸೆಪ್ಟೆಂಬರ್ 9, 2012



ಬೇಲಿ ಹಾರುವ ಹೋರಿಯ ಕತ್ತಿಗೆ ನ್ಯಾಯಾಲಯದ  ಕುಂಟೆ

ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ

ಕೇಸು ಕೋರ್ಟಿಗೆ ಒಯ್ದರು

ಕೋರ್ಟು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನು, ತಾಲ್ಲೂಕಾಫೀಸು ಇಂಥ ಕಡೆಗೆಲ್ಲ ಹೋಗಲು ಸಿಕ್ಕದ ಹಾಗೆ ನಡೆಸಿಬಿಡು ಅಂತ ನಂಬದ ದೇವರನ್ನು ನಾನು ಆಗಾಗ ಪ್ರಾರ್ಥಿಸುತ್ತೇನೆ. ಯಾಕೆಂದರೆ ಅವೆಲ್ಲ ನಮ್ಮ ಕೈಯಲ್ಲಿಲ್ಲವಲ್ಲ. ನನ್ನ ಪ್ರಾರ್ಥನೆ ಫಲ ಕೊಡಲಿಲ್ಲ. ಮಾಹಿತಿ ಹಕ್ಕಿನಲ್ಲಿ ಮಂಗಳೂರಿನ ಎಸ್ ಇ ಜಡ್ ಕಂಪೆನಿಗೆ ಒಂದು ಅರ್ಜಿ ಹಾಕಿದ್ದೆ. ನಮ್ಮ ಬಂಟ್ವಾಳದ ಸರಪಾಡಿಯ ಹತ್ತಿರ ಎ ಎಂ ಆರ್ ಎಂಬ ಕಿರು ಜಲವಿದ್ಯುತ್ ತಯಾರಿಸುವ ಕಂಪೆನಿ ನೇತ್ರಾವತಿಗೆ ಒಂದು ಕಟ್ಟ ಹಾಕಿದೆ. ಎಸ್ ಇ ಜಡ್ ಕಂಪೆನಿ ಬಜ್ಪೆ ಸಮೀಪದ ತನ್ನ ಕೈಗಾರಿಕಾ ನೆಲೆಗೆ ಈ ಕಟ್ಟದಿಂದಲೇ ನೀರು ಕೊಂಡೊಯ್ಯುತ್ತದೆ ಎಂದು ನನಗೆ ಗೊತ್ತಾಗಿತ್ತು. ಹಾಗಿದ್ದರೆ ಈ ಎರಡು ಕಂಪೆನಿಗಳ ನಡುವೆ ಏನು ಒಪ್ಪಂದ ಆಗಿದೆ ಎಂದು ತಿಳಿದುಕೊಳ್ಳಬೇಕು ತಾನೆ? (ಯಾಕೆ? ಯಾಕೆ ತಿಳಿದುಕೊಳ್ಳಬೇಕು? ನಿಮಗೆ ಏನು ಸಂಬಂಧ? ಎಂದೆಲ್ಲ ಕಂಪೆನಿ ಕೇಳಿತು. ಆದರೆ ನದಿ ನೀರಿಗೆ ದೊಣೆನಾಯಕನ ಅಪ್ಪಣೆಯೆ?) ಅದಕ್ಕೇ ಮಾಹಿತಿ ಹಕ್ಕಿನ ಅನ್ವಯ  ಅರ್ಜಿ  ಹಾಕಿದೆ. ಇದಕ್ಕಿಂತ ಮುಂಚೆ ಕೇಳಿದ ಮಾಹಿತಿಯನ್ನು ಕೊಡುತ್ತಿದ್ದ ಕಂಪೆನಿ ಈಗ ಯಾಕೋ ವರಸೆ ಬದಲಿಸಿತು.ಮಾಹಿತಿ ಕೊಡಲಿಲ್ಲ. ಉಲ್ಟಾ ಮಾತಾಡಿತು. ನಾನೂ ಬಿಡಲಿಲ್ಲ, ಮಾಹಿತಿ ಆಯೋಗಕ್ಕೆ ದೂರು ಕೊಟ್ಟೆ. ವಿಚಾರಣೆ ನಡೆಯಿತು. ಮಾಹಿತಿ ಆಯೋಗ ನಾನು ಕೇಳಿದ ಮಾಹಿತಿ ಕೊಡುವಂತೆ ಕಂಪೆನಿಗೆ ನಿರ್ದೇಶನ ಕೊಟ್ಟಿತು. ಆದರೆ ಕಂಪೆನಿ ನನಗೆ ಮಾಹಿತಿ ಕೊಡಲಿಲ್ಲ, ಬದಲಿಗೆ ಹೈಕೋರ್ಟಿನಲ್ಲಿ ಒಂದು ಪಿಟಿಷನ್ ಜಡಿಯಿತು. ಎದುರು ಪಾರ್ಟಿಯಾಗಿ ಒಂದನೇ ಮಾಹಿತಿ ಆಯೋಗ, ಎರಡನೇ ನಾನು! ಹೀಗೆ ನಾನು ಹೋಗದಿದ್ದರೂ, ನನ್ನ ಹೆಸರು ಹೈಕೋರ್ಟಿಗೆ ಹೋದ ಕತೆ.

ದಾಖಲೆ ಓಕೆ ವಕೀಲರು ಯಾಕೆ?

ಆಯಿತು ಕೇಸು ಕೋರ್ಟಿಗೆ ಹೋದಮೇಲೆ ನನ್ನ ಪರವಾಗಿ ವಾದ ಮಾಡಲು ಯಾರಾದರೊಬ್ಬ ವಕೀಲರನ್ನು ನೇಮಿಸಬೇಕಲ್ಲ? ನಾನು ಶಸ್ತ್ರ ಕೆಳಗಿಟ್ಟೆ. ಬೇಕಾದ್ದಾಗಲಿ, ನಾನಂತೂ ವಕೀಲರನ್ನು ಇಡುವುದಿಲ್ಲ. ಎಷ್ಟು ಮಾಡಲು ನನ್ನಿಂದ ಸಾಧ್ಯವೋ ಅಷ್ಟು ಮಾಡಿದ್ದೇನೆ, ಇನ್ನು ಬೇಕಾದ್ದಾಗಲಿ, ಕೇಸು ಗುಣ ಆಗಲಿ, ಪಡ್ಚ ಆಗಲಿ, ವಕೀಲರನ್ನಿಟ್ಟು ಅವರಿಗೆ ದುಡ್ಡು ಸುರಿಯುವುದು, ಅವರು ಕೇಳಿದ ದಾಖಲೆ ಒಟ್ಟು ಮಾಡಲು ಓಡಾಡುವುದು ಇವೆಲ್ಲ ನನ್ನಿಂದ ಸಾಧ್ಯವೇ ಇಲ್ಲ ಅಂತ ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡೆ. ಈ ನಡುವೆ ಒಂದು ದಿನ ವಿದ್ಯಾ ದಿನಕರ್ ನನ್ನ ಹತ್ತಿರ ಜಗಳಕ್ಕೇ ಬಂದರು. ನೀವು ವಕೀಲರನ್ನು ಇಡುವುದಿಲ್ಲ ಎಂದಾದರೆ, ಇಲ್ಲಿಯವರೆಗೆ ತಂದದ್ದು ಯಾಕೆ, ಲಂಗು ಲೊಟ್ಟೆ ಅಂತೆಲ್ಲ ರೋಪು ಹಾಕಿದರು. ನಾನು ಹಂದಾಡಲಿಲ್ಲ ನನ್ನಿಂದ ಕೂಡಿದಷ್ಟು ನಾನು ಮಾಡುವುದು, ಅದರಿಂದ ಹೆಚ್ಚಿಂದು ನಾನು ಮಾಡಲಾರೆ ಅಂತ ಗಟ್ಟಿ ಕೂತುಬಿಟ್ಟೆ. ಕಡೆಗೆ ಅವರೇ ಬೆಂಗಳೂರಿನಲ್ಲಿ ಯಾರನ್ನೋ ಹಿಡಿದು, ಒಬ್ಬ ವಕೀಲಮ್ಮನನ್ನು ಗೊತ್ತು ಮಾಡಿದರು. ಆದರೆ ಅದು ಪ್ರಯೋಜನವಾಗಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ, ಆ ವಕೀಲಮ್ಮ ಕೇಸಿನಿಂದ ಹಿಂದೆ ಸರಿದರು.
ಹೀಗೆ, ಕೋರ್ಟಿನಲ್ಲಿ ನಮ್ಮ ಪರವಾಗಿ ವಾದ ಮಾಡಲು ಆಯೋಗದ ವಕೀಲರು ಮಾತ್ರ ಉಳಿದರು.

ಕ್ಷುದ್ರವಲ್ಲದ್ದು ಗಣನೀಯ!

ಆದರೆ ನನಗೆ ಒಂದು ಧೈರ್ಯ ಇತ್ತು. ಆಯೋಗ ವಿಚಾರಣೆ ಮಾಡಿದಾಗಲೇ ಬೇಕಾದ ದಾಖಲೆಗಳೆಲ್ಲ ಸಂಗ್ರಹವಾಗಿತ್ತು. ಆಯೋಗದವರೇ ಕಂಪೆನಿಗೆ ನೋಟೀಸು ಕೊಟ್ಟು ಅದರ ಮೂರು ವರ್ಷದ ಬ್ಯಾಲೆನ್ಸ್ ಷೀಟ್ ತರಿಸಿದ್ದರು. ನಾನೂ ಕೆಲವು ದಾಖಲೆಗಳನ್ನು ಒದಗಿಸಿದ್ದೆ. (ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ಮತ್ತೊಂದು ತೀರ್ಪನ್ನು ವಿದ್ಯಾ ಮೇಡಂ ವಕೀಲಮ್ಮನ ಗಮನಕ್ಕೆ ತಂದಿದ್ದರಂತೆ. ಅದು ನನಗೆ ಮೊನ್ನೆಯಷ್ಟೆ ಗೊತ್ತಾಗಿದ್ದು) ಹೀಗೆ ದಾಖಲೆ ಲೆಕ್ಕದಲ್ಲಿ ನಮ್ಮ ಪಕ್ಷ ಬಲವಾಗಿಯೇ ಇತ್ತು. ಮತ್ತು ಇದೇನು ದೊಡ್ಡ ಕುಂಬಳಕಾಯಿ ಕೇಸಲ್ಲ. ಕಂಪೆನಿಯ ವಾದ ಮಾಹಿತಿ ಹಕ್ಕು ೨೦೦೫ ತನಗೆ ಅನ್ವಯವಾಗುವುದಿಲ್ಲ, ಆದ್ದರಿಂದ ತನ್ನನ್ನು ಮಾಹಿತಿಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು. ನಮ್ಮ ವಾದ ಕಂಪೆನಿ ಮಾಹಿತಿಹಕ್ಕಿನ ವ್ಯಾಪ್ತಿಯ ಒಳಗಿದೆ ಎಂದು. ಮಾಹಿತಿ ಹಕ್ಕು ಕಾನೂನಿನ ವಿವರಣೆಯಂತೆ ಯಾವುದಾದರೊಂದು ಸಂಸ್ಥೆ/ಕಂಪೆನಿಯಲ್ಲಿ ಸರಕಾರ ನೇರವಾಗಿ ಅಥವಾ ಪರೋಕ್ಷವಾಗಿ  ಗಣನೀಯ ಪ್ರಮಾಣದ ಹಣ ತೊಡಗಿಸಿದ್ದರೆ, ಅಂಥ ಕಂಪೆನಿ/ಸಂಸ್ಥೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಹಾಗಾದರೆ ಗಣನೀಯ ಎಂದರೆ ಏನು? ಇಂಗ್ಲಿಷಿನಲ್ಲಿ ಸಬ್ ಸ್ಟ್ಯಾನ್ಷಿಯಲ್  ಎಂಬ ಶಬ್ದ ಹಾಕಿದ್ದಾರೆ. ಸಬ್ ಸ್ಟ್ಯಾನ್ಷಿಯಲ್   ಎಂದರೆ? ಶೇ. ೧೦ ಎಂದೋ, ಶೇ. ೫೦ ಎಂದೋ ಹೇಳಿದರೆ ನಿರ್ದಿಷ್ಟವಾಗಿ ಹೇಳಿದಂತಾಗುತ್ತಿತ್ತು, ಆಗ ಸಮಸ್ಯೆ ಇರಲಿಲ್ಲ. ಇಲ್ಲಿ ಹಾಗಲ್ಲ, ಸಬ್ ಸ್ಟ್ಯಾನ್ಷಿಯಲ್   ಎಂದುಬಿಟ್ಟಿದೆ ಕಾನೂನು! ಅದಕ್ಕೆ ವಿವರಣೆ ಹೀಗಂತೆ: ಯಾವುದು ಕ್ಷುದ್ರವಲ್ಲವೋ ಅದು ಗಣನೀಯ! ಟ್ರಿವಿಯಲ್ ಅಲ್ಲದ್ದು ಸಬ್ ಸ್ಟ್ಯಾನ್ಷಿಯಲ್! ಇದು ತೀರ್ಪಿನಲ್ಲೇ ಇದೆ.

ನಮಗೇ ಗುಣವಾಯಿತು!

ನಮ್ಮ ಈ ಕಂಪೆನಿಯಲ್ಲಿ ಕರ್ನಾಟಕ ಸರಕಾರದ್ದು ಶೇ. 23 ಮತ್ತು ಕೇಂದ್ರದ್ದು ಶೇ. 26 ಬಂಡವಾಳ ಇದೆ ಎನ್ನುವುದಕ್ಕೆ ದಾಖಲೆಗಳಿದ್ದವು. ಹಾಗಾಗಿ ವಕೀಲರುಗಳಿಗೆ ತಲೆ ತಲೆ ಕುಟ್ಟಲು (ತರ್ಕವೆಂಬುದು ತಗರ ಹೋರಟೆ-ಅಲ್ಲಮ ಪ್ರಭು) ಇಲ್ಲಿ ಹೆಚ್ಚು ಅವಕಾಶ ಇರಲಿಲ್ಲ. ಕೇಸು ಖಂಡಿತ ನಮಗೆ ಗುಣವಾಗುತ್ತದೆ ಅಂತ ನನಗೆ ವಿಶ್ವಾಸ ಇತ್ತು. ಆದರೆ ಪ್ರಶ್ನೆ ಇದ್ದದ್ದು ಸಮಯದ್ದು. ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಲು  ನಮ್ಮದೇನು ಯಡಿಯೂರಪ್ಪನವರ ನಿರೀಕ್ಷಣಾ ಜಾಮೀನು ಪ್ರಕರಣವೆ? ವರ್ಷಗಟ್ಟಲೆ ಕೋರ್ಟಿನಲ್ಲಿ ಧೂಳು ಪೇರಿಸಿಕೊಳ್ಳುತ್ತಾ ಬಿದ್ದು ಬಿಟ್ಟರೆ ಏನು ಗತಿ?
ಹಾಳು ಬಡಿದು ಹೋಗಲಿ ಅಂತ ಅದರ ಆಲೋಚನೆ ಬಿಟ್ಟೆ. ಅಂತರ್ಜಾಲದಲ್ಲಿ ಆಗಾಗ ತೆಗೆದು ನೋಡುವುದು, ನೋಡಿದಾಗೆಲ್ಲ ಕೇಸ್ ಪೆಂಡಿಂಗ್ ಅಂತ ಇರುವುದನ್ನು ಕಂಡು ಸುಮ್ಮನಾಗುವುದು ಹೀಗೇ ನಡೆಯುತ್ತಿತ್ತು ಕಳೆದ ಸುಮಾರು ಒಂದೂವರೆ ವರ್ಷದಿಂದ.  ಮೊನ್ನೆ ಒಂದು ದಿನ ನೋಡುತ್ತೇನೆ ಒಂದು ಶಬ್ದ ಬದಲಾಗಿಬಿಟ್ಟಿದೆ: ಕೇಸ್ ಪೆಂಡಿಂಗ್ ಹೋಗಿ ಕೇಸ್ ಡಿಸ್ಪೋಸ್ಡ್ ಆಗಿದೆ! ಶಭಾಷ್!  ಮತ್ತೊಂದು ಚೌಕದಲ್ಲಿ ಕೇಸು ಡಿಸ್ಮಿಸ್ ಆಗಿದೆ ಎಂತಲೂ ಇತ್ತು. ಹಾಗಿದ್ದರೆ ನಮಗೇ ಗುಣ ಅಂತ ಗೊತ್ತಾದರೂ ಸಾಯಂಕಾಲದವರೆಗೂ ಕಾದು ಗೆಳೆಯರೂ ವಕೀಲರೂ ಆದ ಕಜೆ ರಾಮಚಂದ್ರ ಭಟ್ಟರಿಗೆ ಫೋನಿಸಿದೆ. ಅವರ ತಮ್ಮ ನರಸಿಂಹ ಭಟ್ಟರು (ಅವರೂ ವಕೀಲರೇ) ಸಿಕ್ಕಿದರು. ಅಪೀಲು ಮಾಡಿದ್ದು ಯಾರು? ಅಂದರು. ಕಂಪೆನಿ. ಹಾಗಿದ್ದರೆ ಅಪೀಲು ವಜಾ ಆಯಿತು, ನೀವೇ ಗೆದ್ದ ಹಾಗೆ ಎಂದರು. ನ್ಯಾಯಾಧೀಶರು ಬೇಲಿ ಹಾರುವ ಹೋರಿಯ ಕುತ್ತಿಗೆಗೆ ಕುಂಟೆ ಕಟ್ಟಿದ್ದರು. ಮಹಾತ್ಮಾ ಗಾಂಧೀಕೀ ಜೈ!
ಇಷ್ಟಾದರೂ ತೀರ್ಪಿನ ಪ್ರತಿ ಇಲ್ಲದೆ ಏನೂ ಮಾಡುವಂತಿಲ್ಲ. ಅಂತರ್ಜಾಲದಲ್ಲಿ ಹುಡುಕಿದೆ. ಎಷ್ಟು ಪರಡಿದರೂ ಪ್ರಯೋಜನ ಆಗಲಿಲ್ಲ. ಬೆಂಗಳೂರಲ್ಲಿ ನನ್ನ ಬಂಧು ಒಬ್ಬರು ಹೈಕೋರ್ಟ್ ವಕೀಲರಿದ್ದಾರೆ. ಅವರಿಗೆ ಫೋನ್ ಮಾಡಿದೆ. ಅವರು ಎಲ್ಲ ವಿವರಿಸಿ ಹೇಳಿದರು. ಕೇಸಿನ ನಂಬರು ತೆಗೆದುಕೊಂಡು ಅವರೇ ನೋಡಿ ಹೇಳಿದರು. "ತೀರ್ಪಿನ ದೃಢೀಕೃತ ಪ್ರತಿಗೆ ಎರಡೂ ಕಡೆಯ ವಕೀಲರು ಅರ್ಜಿ ಹಾಕಿರುತ್ತಾರೆ. ಅವರು ಅಲ್ಲಿ ಪೂರ್ತಿ ದುಡ್ಡು ಕಟ್ಟಿದ ಮೇಲೆ ತೀರ್ಪು ಇಂಟರ್ನೆಟ್ಟಿನಲ್ಲಿ ಬೀಳುತ್ತದೆ. ಮತ್ತೆ ನೀವು ಓದಬಹುದು" ಮತ್ತೆರಡು ದಿನ ಹೋಯಿತು. ವಿಷಯ ತಿಳಿಸಿ ವಿದ್ಯಾ ಮೇಡಂಗೆ ಮೊದಲೇ ಫೋನ್ ಮಾಡಿದ್ದೆ. ಅವರೂ ವಿಚಾರಿಸಿದ್ದರು. ಇಷ್ಟರಲ್ಲಿ ಆಯೋಗದ ಕಡೆಯ ವಕೀಲರು ದುಡ್ಡು ಕಟ್ಟಿ ತೀರ್ಪಿನ ಪ್ರತಿ ಪಡೆದರು. ಹಾಗಾಗಿ ತೀರ್ಪು ಇಂಟರ್ನೆಟ್ಟಿಗೆ ಬಿತ್ತು. ಸಾರ್ವಜನಿಕ ಆಸ್ತಿಯಾಯಿತು. ನಾನೂ ನೋಡಿದೆ. ನನಗೆ ಗೊತ್ತಿದ್ದ ಒಂದೆರಡು ಪತ್ರಿಕೆಗೆ ಕಳಿಸಿದೆ. ವಿದ್ಯಾ ಮೇಡಂ ಎಲ್ಲಾ ಪತ್ರಿಕೆಗಳಿಗೂ ತೀರ್ಪು ಕಳಿಸಿಕೊಟ್ಟರು. ಮತ್ತೆರಡು ದಿನದಲ್ಲಿ ಪತ್ರಿಕೆಗಳಲ್ಲಿ  ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ ಎಂಬ ಸುದ್ದಿ ಪ್ರಕಟವಾಗತೊಡಗಿತು. ಎಲ್ಲಾ ಮುಖ್ಯ  ಇಂಗ್ಲಿಷ್ ದೈನಿಕಗಳೂ ಸುದ್ದಿಯನ್ನು ಪ್ರಕಟಿಸಿದವು. ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಮಾತ್ರ ಕಡಿಮೆ. ಪ್ರಜಾವಾಣಿ  ವರದಿ ಮಾಡಿತು. ಕರಾವಳಿ ಅಲೆಯಲ್ಲೂ ಪ್ರಕಟವಾಗಿದೆ ಎಂದು ಮಿತ್ರ ವಿಶ್ವನಾಥರು ಹೇಳಿದರು.

ತೀರ್ಪಿನ ಮುಖ್ಯಾಂಶಗಳು

ತೀರ್ಪಿನ ಕೆಲವು ಅಂಶಗಳು ಮಾಹಿತಿ ಹಕ್ಕು ಕಾನೂನಿನ ಕೆಲವು ಅಸ್ಪಷ್ಟ ಅಂಶಗಳನ್ನು ಹೆಚ್ಚು ಸ್ಪಷ್ಟಪಡಿಸಿರುವುದು ಪ್ರಜೆಗಳಿಗೆ ಆಗಿರುವ ದೊಡ್ಡ ಲಾಭ. ಗಣನೀಯ (ಸಬ್ ಸ್ಟ್ಯಾನ್ಷಿಯಲ್) ಎಂಬುದಕ್ಕೆ  ನ್ಯಾಯಾಧೀಶರು ಕೊಟ್ಟಿರುವ ವಿವರಣೆಯನ್ನು ಮೇಲೆ ಹೇಳಿದ್ದೇನೆ. ಇದರೊಂದಿಗೆ ಇನ್ನೊಂದು ಅಂಶವೂ ಇದೆ: ಗಣನೀಯ ಎಂದರೇನು ಎಂಬುದನ್ನು ವಿವರಿಸಿದ ಮುಂದಿನ ಸಾಲಿನಲ್ಲಿಯೇ ನ್ಯಾಯಾಧೀಶರು ಹೀಗೆ ಹೇಳಿದ್ದಾರೆ: "It need not necessarily be by a cash flow but also by any other kind". ಎಂದರೆ ಸರಕಾರ ಯಾವುದೇ ಸಂಸ್ಥೆಯಲ್ಲಿ ಹಣದ ರೂಪದಲ್ಲಿಯೇ ತನ್ನನ್ನು ತೊಡಗಿಸಿಕೊಂಡ ಪ್ರಕರಣದಲ್ಲಿ ಮಾತ್ರ ಅಲ್ಲ, ವಸ್ತುವಿನ ರೂಪದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ ಎಂದಾಯಿತು. ಅಂದರೆ ಈಗ ಸಾಮಾನ್ಯವಾಗಿ ಯಾವ ಕಂಪೆನಿಗಳು ಮಾಹಿತಿ ಹಕ್ಕಿನಲ್ಲಿ ಬರುವುದಿಲ್ಲ ಎಂದು ಭಾವಿಸಲಾಗಿದೆಯೋ ಆ ಕಂಪೆನಿಗಳಿಗೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ! ಉದಾಹರಣೆಗೆ ಒಂದು ಕಿರು ಜಲವಿದ್ಯುತ್ ತಯಾರಿಕಾ ಕಂಪೆನಿಯನ್ನು ತೆಗೆದುಕೊಂಡರೆ, ಆ ಕಂಪೆನಿ ಸರಕಾರಕ್ಕೆ ಸೇರಿದ ನದಿಗೆ ಅಣೆಕಟ್ಟು ಹಾಕಿರುತ್ತದೆ. ನದಿ ಮತ್ತು ಅಣೆಕಟ್ಟು ಇರುವ ಸ್ಥಳ ಸರಕಾರದ್ದಾದ್ದರಿಂದ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಅರ್ಥ ಮಾಡುವುದು ಸಾಧ್ಯವಿದೆ. (ಕಿರು ಜಲ ವಿದ್ಯುತ್ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಸರಕಾರದ ಸಬ್ಸಿಡಿಯನ್ನು ತೆಗೆದುಕೊಳ್ಳುವುದರಿಂದ, ಆ ಕಾರಣಕ್ಕೂ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುವುದು ಸಾಧ್ಯವಿದೆ). ಸರಕಾರದ ಮೂಲಕ ಭೂಮಿಯನ್ನೂ, ತೆರಿಗೆ ರಿಯಾಯತಿಯನ್ನೂ ಪಡೆದುಕೊಂಡ ಇನ್ಫೋಸಿಸ್ ಮುಂತಾದ ಖಾಸಗಿ ಕಂಪೆನಿಗಳೂ ಇದೇ ಕಾರಣಕ್ಕೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತವೆಯೇ ಎಂಬುದನ್ನೂ ಈ ತೀರ್ಪಿನ ಹಿನ್ನೆಲೆಯಲ್ಲಿ ಪರಿಶೀಲಿಸಬಹುದಾಗಿದೆ.

ಭಾನುವಾರ, ಏಪ್ರಿಲ್ 15, 2012

ರಾಜರೆಂಬರುಮೊಳರೆ?

(ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಶಿವಕೋಟ್ಯಾಚಾರ್ಯ ಎಂಬುವವನು ವಡ್ಡಾರಾಧನೆ ಎಂಬ ಕೃತಿ ರಚಿಸಿದ್ದಾನೆ. ಅದರಲ್ಲಿ ಹಲವಾರು ಕಥೆಗಳಿವೆ. ಸುಕುಮಾರಸ್ವಾಮಿಯ ಕಥೆ ಅವುಗಳಲ್ಲಿ ಒಂದು. ಸುಕುಮಾರ ಸ್ವಾಮಿ ದೊಡ್ಡ ಶ್ರೀಮಂತ. ಒಂದು ದಿನ ಅವನು ಎಂದಿನಂತೆ ತನ್ನ ಮನೆಯ ಮಹಡಿಯಲ್ಲಿ ವಿಶ್ರಮಿಸಿದ್ದ. ಆಗ ದೂತನೊಬ್ಬ ಬಂದು ಅವನಿಗೆ ಹೇಳಿದ. "ಸ್ವಾಮೀ ನಿಮ್ಮನ್ನು ನೋಡಲು ಮಹಾರಾಜರು ಬಂದಿದ್ದಾರೆ. ಅವರನ್ನು ನೋಡಲು ನೀವು ಕೆಳಗೆ ಬರಬೇಕು" ಸುಕುಮಾರಸ್ವಾಮಿ ಆಶ್ಚರ್ಯದಿಂದ ಕೇಳಿದನಂತೆ: ರಾಜರು ಅಂತ ಇರುತ್ತಾರೆಯೆ? (ರಾಜರೆಂಬರುಮೊಳರೆ?)
ಎಂ. ಎಸ್. ಇ. ಜಡ್ ನಂತಹ ದೊಡ್ಡ ದೊಡ್ಡ ಕಂಪೆನಿಗಳೂ ಇಂದು ಸುಕುಮಾರಸ್ವಾಮಿಯ ಹಾಗೆ "ಸರ್ಕಾರ ಅಂತ ಇರುತ್ತದೆಯೆ" ಎಂದು ಕೇಳಿದರೆ ಆಶ್ಚರ್ಯವಿಲ್ಲ ಅಲ್ಲವೆ?)
ಖಾಸಗಿ ಮಾಲಿಕತ್ವದ ಎಂ. ಎಸ್. ಇ. ಜಡ್. ಕಂಪೆನಿಗೆ ನೇತ್ರಾವತಿಯಿಂದ ನೀರೆತ್ತಲು ಅನುಮತಿ ನೀಡುವಾಗ ಸರಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಆ ಪೈಕಿ ಒಂದು ಷರತ್ತಿನ ಪ್ರಕಾರ ನೀರೆತ್ತುವ ಕಾಮಗಾರಿ (ಪೈಪ್ ಲೈನ್ ಅಳವಡಿಕೆ ಇತ್ಯಾದಿ ಕಾಮಗಾರಿಗಳು) ಪ್ರಾರಂಭಿಸುವ ಮೊದಲು ಕಂಪೆನಿ ಸಣ್ಣ ನೀರಾವರಿ ಇಲಾಖೆಯ ಸಂಬಂಧಪಟ್ಟ ಕಾರ್ಯಕಾರಿ ಎಂಜಿನಿಯರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಕಂಪೆನಿ ನೀರೆತ್ತುವ ಕಾಮಗಾರಿ ಪ್ರಾರಂಭಿಸಿ ಏಳೆಂಟು ತಿಂಗಳುಗಳೇ ಕಳೆದುಹೋಗಿವೆ. ೧೫ ಎಂಜಿಡಿ ನೀರೆತ್ತಲು ೩೦ ಎಂಜಿಡಿ ನೀರೆತ್ತುವ ಸಾಮರ್ಥ್ಯದ ಪೈಪುಗಳನ್ನು ಕಿಲೋಮೀಟರುಗಟ್ಟಳೆ ಅಳವಡಿಸಿಯೂ ಆಗಿದೆ. ಸರಪಾಡಿಯ ಹತ್ತಿರ ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕಾಮಗಾರಿಯನ್ನೂ ಪ್ರಾರಂಭಿಸಿ ಆಗಿದೆ. ಆದರೆ ಅದು ಸಣ್ಣ ನೀರಾವರಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆಯೆ?
ಷರತ್ತಿನಲ್ಲಿ ಹೇಳಲಾದ "ಸಂಬಂಧಪಟ್ಟ" ಕಾರ್ಯಕಾರಿ ಎಂಜಿನಿಯರ್ ಎಂದರೆ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರೇ ಎಂದು ನನ್ನಷ್ಟಕ್ಕೆ ನಾನು ಭಾವಿಸಿಕೊಂಡೆ. ಅದಕ್ಕೆ ಕಾರಣ ಇತ್ತು. ಹಿಂದೆ ಎಂ ಆರ್ ಪಿ ಎಲ್ ಸಂಸ್ಥೆಗೆ ನೀರು ನೀಡುವ ಬಗ್ಗೆ ಆದ ಒಪ್ಪಂದಕ್ಕೆ ಮಂಗಳೂರಿನ ಕಾರ್ಯಕಾರಿ ಎಂಜಿನಿಯರರೇ ಸರಕಾರದ ಪರವಾಗಿ ಸಹಿ ಮಾಡಿದ್ದರು. ಹಾಗಾಗಿ ನಾನು ಅವರಿಗೆ "ಸರಕಾರಿ ಆದೇಶದಂತೆ, ಮಾಡಿಕೊಂಡಿರುವ ಒಪ್ಪಂದದ ಪ್ರತಿ ಕೊಡುವಂತೆ" ಮಾಹಿತಿ ಹಕ್ಕಿನ ಅನ್ವಯ ಅರ್ಜಿ ಕೊಟ್ಟೆ. "ನಮ್ಮ ವಿಭಾಗಕ್ಕೆ ಈ ವಿಷಯ ಸಂಬಂಧಪಡುವುದಿಲ್ಲವಾದ್ದರಿಂದ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ" ಎಂದು ಅವರು ಉತ್ತರಿಸಿದರು. ಇಷ್ಟಕ್ಕೆ ಒಂದು ತಿಂಗಳು ಕಳೆಯಿತು. "ಸ್ವಾಮೀ, ನೀವಲ್ಲದಿದ್ದರೆ, ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ನನ್ನ ಅರ್ಜಿ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಅಂತ ಅವರನ್ನು ಎಜುಕೇಟ್ ಮಾಡಬೇಕಾಯಿತು. ಮಾಡಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ಕಳಿಸಿ, "ನೇತ್ರಾವತಿ ನದಿಯ ಉಸ್ತುವಾರಿ ನಿಮಗೆ ಇರುವುದರಿಂದ ಅರ್ಜಿಯನ್ನು ನಿಮಗೆ ಕಳಿಸಿಕೊಡಲಾಗಿದೆ; ಅರ್ಜಿದಾರರಿಗೆ ಮಾಹಿತಿ ನೀಡಿರಿ" ಎಂದರು. ಆಗಲಪ್ಪ! ಒಂದು ಹೊಸ ವಿಷಯ ಗೊತ್ತಾಯಿತು! ನಮ್ಮ ನೇತ್ರಾವತಿ ನದಿಗೂ ಒಬ್ಬ "ಉಸ್ತುವಾರಿ" ಇದ್ದಾರೆ! ತುಂಬ ಸಂತೋಷವಾಯಿತು. ಅವರು ಕೆಲವು ದಿನ ಕಳೆದು ಉತ್ತರಿಸಿದರು: "ಈ ವಿಭಾಗದಿಂದ ಎಂ. ಎಸ್. ಇ. ಜಡ್. ಕಂಪೆನಿಯೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ". ಆಫೀಸಿಗೆ ಸಂಬಂಧಿಸಿದ ಕಾನೂನುಗಳನ್ನು ತಿಳಿದುಕೊಳ್ಳುವ ಅಭ್ಯಾಸವನ್ನು ಎಂದೋ ಗುಡ್ಡಕ್ಕೆ ಹೊಡೆದಿರುವ ಇಂಥವರನ್ನು ಎಜುಕೇಟ್ ಮಾಡಲು ಯತ್ನಿಸುವ ನಾನೊಬ್ಬ ದಡ್ಡ ಎಂದು ನನ್ನನ್ನು ನಾನೇ ಬೈದುಕೊಂಡು, ಮಾಹಿತಿ ಹಕ್ಕು ಆಯೋಗಕ್ಕೆ ಒಂದು ದೂರು ಸಲ್ಲಿಸಿದೆ. ಸುಮಾರು ಆರು ತಿಂಗಳ ನಂತರ ಕಳೆದ ಐದನೇ ತಾರೀಖು (೫-೪-೨೦೧೨) ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಆಯೋಗದ ಎದುರು ಪ್ರಕರಣ ವಿಚಾರಣೆಗೆ ಬಂತು. ನನ್ನ ಫಿರ್ಯಾದಿಯಲ್ಲಿ ಎದುರು ಪಕ್ಷವಾಗಿ ಮಂಗಳೂರು ಹಾಗೂ ಹಾಸನ ಎರಡೂ ಕಾರ್ಯಕಾರಿ ಎಂಜಿನಿಯರುಗಳನ್ನು ತೋರಿಸಿದ್ದೆ. ಆದರೆ ಆಯೋಗದವರು ಮಂಗಳೂರಿನವರಿಗೆ ಮಾತ್ರ ನೋಟೀಸು ಕೊಟ್ಟಿದ್ದರು. ಹಾಗಾಗಿ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರು ಮಾತ್ರ ವಿಚಾರಣೆಗೆ ಹಾಜರಾದರು.

ಬೆಂಗಳೂರಿನಲ್ಲಿ ಈಗ ಮಾಹಿತಿ ಆಯೋಗದ ಕಛೇರಿ ಎರಡು ಕಡೆ ಆಗಿದೆ. ಒಂದು ಮೊದಲಿದ್ದಲ್ಲಿಯೇ: ಬಹು ಮಹಡಿ ಕಟ್ಟಡದಲ್ಲಿ. ಮತ್ತೊಂದು ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ ಕಟ್ಟಡದಲ್ಲಿ. ನನಗೆ ಹೋಗಬೇಕಾಗಿದ್ದು ಮಿಥಿಕ್ ಸೊಸೈಟಿಗೆ. ಬೆಳಗ್ಗೆ ಹನ್ನೊಂದು ಗಂಟೆಗೆ ವಿಚಾರಣೆ ಶುರು. ನಾನು ಹತ್ತು ಗಂಟೆಯ ಹೊತ್ತಿಗೇ ಅಲ್ಲಿ ಹಾಜರಾದೆ. ಮಾಹಿತಿ ಹಕ್ಕು ಸಂಸ್ಥೆಗೆ ಬಹುಷಃ ಕೇಂದ್ರ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಕಚೇರಿಯನ್ನು ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಸಾಮಾನ್ಯವಾಗಿ ನಮ್ಮ ಸರಕಾರಿ ಕಚೇರಿಗಳಿಗಿರುವ ಒಂದು ಜೋಬದ್ರ ಕಳೆ ಈ ಕಛೇರಿಗೆ ಇಲ್ಲ. ಹೆಚ್ಚು ಗಲಾಟೆ ಇಲ್ಲ. ಆಸನ ವ್ಯವಸ್ಥೆ, ಟಾಯ್ಲೆಟ್ ಇತ್ಯಾದಿಗಳು ಸಾಕಷ್ಟು ಚೆನ್ನಾಗಿವೆ. ಇಡೀ ವಾತಾವರಣ ಸ್ವಚ್ಛವಾಗಿದೆ.
ನಾನು ಹೋದಾಗ ತರುಣನೊಬ್ಬ ಎದುರು ಕೂತಿದ್ದ. ಹೀಗೇ ಮಾತಾಡಿಸಿದಾಗ ಅವನು ಬಂದಿದ್ದೂ ಬಿ.ಸಿ.ರೋಡಿನಿಂದಲೇ ಎಂದು ಗೊತ್ತಾಯಿತು. ಅಕ್ಷರ ದಾಸೋಹವೋ ಯಾವುದೋ ವಿಷಯದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೋ ಅವರ ಪರವಾಗಿಯೋ ಬಂದಿದ್ದ. "ಈಗೆಲ್ಲ ಮಾಹಿತಿ ಹಕ್ಕು ಮಿಸ್ ಯೂಸ್ ಆಗುವುದೇ ಜಾಸ್ತಿ. ಅಲ್ಲಿಂದ ಇಲ್ಲಿಗೆ ಬರಲಿಕ್ಕೆ ಎಷ್ಟು ಖರ್ಚು! ಎಲ್ಲ ವೇಸ್ಟ್" ಎಂದು ಗುರುಗುಟ್ಟಿದ. ಆಮೇಲೂ ಒಂದಿಬ್ಬರು ಸರಕಾರಿ ಅಧಿಕಾರಿಗಳು ಅದೇ ಅಭಿಪ್ರಾಯ ಕೊಟ್ಟದ್ದರಿಂದ, ಸರಕಾರಿ ವಲಯದಲ್ಲಿ ಮಾಹಿತಿ ಹಕ್ಕಿನ ಕುರಿತು ಏನು ಅಭಿಪ್ರಾಯ ಇದೆ ಎನ್ನುವುದಕ್ಕೆ ಇದನ್ನು ಹೇಳಿದೆ. ಮಾಹಿತಿ ಹಕ್ಕು ಅಧಿಕಾರಿಗಳ ಬಾಲ ತಿರುಚಲು ಜನಸಾಮಾನ್ಯರ ಕೈಗೆ ಸಿಕ್ಕ ಅತ್ಯುತ್ತಮ ಅಸ್ತ್ರವಾಗಿಬಿಟ್ಟಿದೆ. ಹಾಗಾಗಿ ಇಷ್ಟು ವರ್ಷ ಪ್ರಶ್ನೆ ಮಾಡುವವರೇ ಇಲ್ಲದೆ, ದರ್ಬಾರು ಮಾಡಿಕೊಂಡೇ ಕಾಲ ಕಳೆದ ಅನೇಕ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಎಂದರೆ ಮುಖ ಗಂಟಾಗುತ್ತದೆ, ಬಿಪಿ ಏರುತ್ತದೆ. ಜನಸಾಮಾನ್ಯರು ಮಾತ್ರ ಮೀಸೆಯೊಳಗೇ ನಗುತ್ತ, ಈ ಅಸ್ತ್ರವನ್ನು ದುರುಪಯೋಗವೋ ಮತ್ತೊಂದೋ ನೋಡದೆ ಅಧಿಕಾರಿಗಳ ಮೇಲೆ ಪ್ರಯೋಗಿಸುತ್ತಲೇ ಇದ್ದಾರೆ. ( ಬಾಲ ತಿರುಚುವುದು: ಮಲಗಿರುವ ದನ, ಎಮ್ಮೆಗಳನ್ನು ಎಬ್ಬಿಸಲು ಪ್ರಯೋಗಿಸುವ ಸುಲಭ ಉಪಾಯ. ಬಾಲ ಹಿಡಿದು ತಿರುಪಿದರೆ ಅವಕ್ಕೆ ಪಾಪ, ಅಸಾಧ್ಯ ನೋವಾಗುತ್ತದೆ. ಕೂಡಲೇ ಎದ್ದು ನಿಲ್ಲುವುದು ಅನಿವಾರ್ಯವಾಗುತ್ತದೆ.)

ನನ್ನ ಅರ್ಜಿಯ ಕುರಿತಂತೆ ಆಯೋಗದ ಎದುರು ವಿಚಾರಣೆಗೆ ಇದ್ದದ್ದು ಅರ್ಜಿದಾರರಿಗೆ ಕೇಳಿದ ಮಾಹಿತಿ ಕೊಡಲಾಗಿದೆಯೇ ಇಲ್ಲವೇ ಎಂಬ ಪ್ರಶ್ನೆ. ಕಾಮಗಾರಿ ಈಗಾಗಲೇ ಶುರುವಾಗಿದೆ ಎಂಬುದಕ್ಕೆ ನನ್ನ ಹತ್ತಿರ ದಾಖಲೆ ಇತ್ತು. ಆ ದಾಖಲೆಯದೇ ಒಂದು ಕಥೆ. ಚುಟುಕಾಗಿ ಹೇಳಿಬಿಡುತ್ತೇನೆ: ಎಸ್. ಇ. ಜಡ್. ಕಂಪೆನಿಯವರು ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕೆಲಸ ಶುರು ಮಾಡಿದಾಗ ನಾವು ಕೆಲವರು ಅಲ್ಲಿ ಹೋಗಿ ನೋಡಿ ಬಂದಿದ್ದೆವು. ನದಿಯ ದಂಡೆಯ ಈ ಜಾಗದಲ್ಲಿ ಮರ ಕಡಿದಿರುವುದನ್ನೇ ಹಿಡಿದು ನಾನು ಅರಣ್ಯ ಇಲಾಖೆಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಕೊಟ್ಟಿದ್ದೆ. ಅವರ ಉತ್ತರದಲ್ಲಿ "ಅದು ಸರಕಾರಕ್ಕೆ ಸೇರಿದ ಭೂಮಿ" ಎಂದಿತ್ತು. ನಾನು ಅಲ್ಲಿಗೆ ಬಿಡದೆ ಬಂಟವಾಳದ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದೆ. ಅವರೂ ಸಹ ಆ ಭೂಮಿ ಸರಕಾರದ್ದೇ ಎಂದರು. ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಸ್. ಇ. ಜಡ್. ಕಂಪೆನಿ ಹೌದೆಂದೂ ಹೇಳಿದರು. ಕಾಮಗಾರಿ ಶುರುವಾಗಿರುವುದಕ್ಕೆ ಆಧಾರವಾಗಿ ಮಾಹಿತಿ ಹಕ್ಕು ಆಯೋಗದ ಎದುರು ನಾನು ಅದೇ ದಾಖಲೆಯನ್ನಿಟ್ಟಿದ್ದೆ.

ತಹಸೀಲ್ದಾರರಿಗೆ ಕೊಟ್ಟ ಈ ಅರ್ಜಿಯ ಬಗ್ಗೆ ಒಂದು ಹಂತದಲ್ಲಿ ನಾನು ಮಂಗಳೂರಿನ ಅಸಿಸ್ಟೆಂಟ್ ಕಮಿಷನರ್ ರವರಿಗೆ ಮೇಲ್ಮನವಿ ಸಲ್ಲಿಸಿದ್ದೆ. ದೂರು ವಿಚಾರಣೆಗೆ ಬಂದಾಗ, "ತಹಸೀಲ್ದಾರರಿಗೆ ದಂಡ ವಿಧಿಸಬೇಕು" ಎಂದು ನಾನು ಸಹಾಯಕ ಕಮಿಷನರ್ ಹತ್ತಿರ ವಿನಂತಿಸಿದೆ. ಅದಕ್ಕವರು "ದಂಡ ವಿಧಿಸಿದರೆ ತಹಸೀಲ್ದಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಷ್ಟೇ" ಎಂದು ಉತ್ತರಿಸಿದ್ದರು! ಅದಾದ ಕೆಲವೇ ಸಮಯದಲ್ಲಿ ಈ ತಹಸೀಲ್ದಾರರು ಲಂಚ ತೆಗೆದುಕೊಂಡರೆಂಬ ಕಾರಣಕ್ಕೆ ಲೋಕಾಯುಕ್ತ ಪೋಲೀಸರು ಅವರನ್ನು ಬಂಧಿಸಿದರು. ದೇವರು ದೊಡ್ಡವನು. ಈವರೆಗೂ ಯಾವ ದುರದೃಷ್ಟಕರ ಸುದ್ದಿಯೂ ಬಂದಿಲ್ಲ.

ದಾರಿ ತಪ್ಪಿತು, ಕ್ಷಮಿಸಿ. ಮಾಹಿತಿ ಹಕ್ಕು ಆಯುಕ್ತರು ವಿಚಾರಣೆ ನಡೆಸಿ, ನಾನು ಕೇಳಿದ ಮಾಹಿತಿಯನ್ನು ಕೊಡುವಂತೆ ಹಾಸನದ ಜಲಮಾಪನ ವಿಭಾಗಕ್ಕೆ ನಿರ್ದೇಶಿಸುವ ತೀರ್ಪು ಬರೆಸಿದರು.(ಅದರ ಪ್ರತಿ ಇನ್ನೂ ನನ್ನ ಕೈಗೆ ಬಂದಿಲ್ಲ). "ನೀವು ಸರಕಾರಿ ಆಜ್ಞೆಗೆ ಸಹಿ ಹಾಕಿರುವ ಅಧಿಕಾರಿಗೇ ನೇರವಾಗಿ ಅರ್ಜಿ ಸಲ್ಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ" ಎಂದು ಮಾಹಿತಿ ಹಕ್ಕು ಆಯುಕ್ತರು ನನಗೆ ಹೇಳಿದರು. ಅದೂ ಸರಿಯೇ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಅವರಿಗೆ ಈ ವಿಷಯ ಸಂಬಂಧಪಟ್ಟಿದೆ ಎಂದು ನಾನು ನನ್ನಷ್ಟಕ್ಕೆ ತಿಳಿದದ್ದು ತಪ್ಪಾಯಿತು. ವಾಸ್ತವವಾಗಿ ಅದೂ ಪೂರ್ತಿ ತಪ್ಪಲ್ಲ. ಆ ಜವಾಬ್ದಾರಿ ಮೊದಲು ಮಂಗಳೂರಿನವರಿಗೇ ಇತ್ತಂತೆ. ಇತ್ತೀಚೆಗೆ ಆಡಳಿತದ ಕಾರಣಕ್ಕೋ ಮತ್ತಾವುದೋ ಕಾರಣಕ್ಕೋ ಆ ಜವಾಬ್ದಾರಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ವರ್ಗಾಯಿಸಿದ್ದಾರಂತೆ.

ಈ ನಡುವೆ ನನಗೆ ಸಿಕ್ಕಿದ ಒಂದು ಅನಧಿಕೃತ ಮಾಹಿತಿಯ ಪ್ರಕಾರ, ಅಂಥ ಯಾವುದೇ ಒಪ್ಪಂದವೂ ಈವರೆಗೆ ಆಗಿಲ್ಲವಂತೆ! ನೋಡೋಣ, ಪ್ರಕರಣ ಎಲ್ಲಿಗೆ ಮುಟ್ಟುತ್ತದೆ ಎಂದು.