ಭಾನುವಾರ, ಸೆಪ್ಟೆಂಬರ್ 16, 2012

ಮೌನೀಶರ ಜೋಕುಗಳು


ಮಿತ್ರ ಮೌನೀಶ ಮಲ್ಯರು ಮೌನ ಮೋಹನ ಸಿಂಗರ ಹಾಗಲ್ಲ. ಪಟ ಪಟ ಮಾತಾಡುತ್ತಾರೆ. ಸಾವಯವ ಕೃಷಿ ಅವರ ಒಂದು ಆಸಕ್ತಿ. ಇವತ್ತು ಭಾನುವಾರ ಅವರ ತೋಟಕ್ಕೆ ಹೋಗಿದ್ದೆ. ನನ್ನ ಹಾಗೇ ಈ ಮೊದಲು ಬಂದವರು ಯಾರೋ ಕೇಳಿದರಂತೆ:
"ನೀವು ಅಡಿಕೆಯ ಬುಡಕ್ಕೆ ಕಾಳುಮೆಣಸು ನೆಟ್ಟಿದ್ದೀರಿ. ಅಡಿಕೆಗೆ ಕೊಟ್ಟ ಗೊಬ್ಬರವೆಲ್ಲ ಅದೇ ತಿನ್ನುವುದಿಲ್ಲವೆ?"
ಮೌನೀಶರ ಉತ್ತರ: "ನಾವು ಅಡಿಕೆಗೆ ಗೊಬ್ಬರ ಕೊಡುವುದೇ ಇಲ್ಲವಲ್ಲ!"
***
ಮೌನೀಶರಿಗೆ ಹಲಸೆಂದರೆ ಆಯಿತು. ಎಲ್ಲಿಂದಲೋ ಕೆಲವು ಗಮ್ ಲೆಸ್ (ಮೇಣ ಇಲ್ಲದ್ದು) ಹಲಸಿನ ಸಸಿ ತಂದಿದ್ದರಂತೆ. ಹೀಗೇ ಯಾರಿಗೋ ಕೇಳಿದವರಿಗೆ ಒಂದು ಸಸಿ ಕೊಟ್ಟರು. ಧರ್ಮಕ್ಕಲ್ಲ, ದುಡ್ಡಿಗೆ. ತಗೊಂಡವರಿಗೆ ಅನುಮಾನ.  ಕೇಳಿದರು:
"ಹಣ್ಣಾದಾಗ ಮೇಣ ಇದ್ದರೆ ಏನು ಮಾಡುವುದು?"
"ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರಾಯಿತು" ಮೌನೀಶರ ಸಲಹೆ.
***
ಅವರ ತೋಟದ ಆಚೆ ಈಚೆ ಕೆಲವು  ಹಣ್ಣಿನ ಮರಗಳಿವೆ. ನೇರಳೆ, ಪೇರಳೆ ಇತ್ಯಾದಿ. ಹಣ್ಣಾಗುವ ಕಾಲಕ್ಕೆ ಆಚೀಚೆಯ ತುಂಟ ಹುಡುಗರು ತೋಟಕ್ಕೆ ಧಾಳಿ ಇಡುತ್ತಾರೆ. ವರ್ಷಕ್ಕೆ ಒಬ್ಬರಿಗೋ ಇಬ್ಬರಿಗೋ ಕೈಗೋ ಕಾಲಿಗೋ ಫ್ರಾಕ್ಚರ್ ಆಗಿ ಬ್ಯಾಂಡೇಜ್ ಬೀಳುವುದು ಸಾಮಾನ್ಯ. ಆದರೆ ಅಂಥವರು ಬ್ಯಾಂಡೇಜ್ ಹಾಕಿಕೊಂಡರೂ ತೋಟಕ್ಕೆ ಬರುವುದು ಬಿಡುವುದಿಲ್ಲ.
"ಬಂದೇನು ಮಾಡುತ್ತಾರೆ?" ನಾನು ಕೇಳಿದೆ.
"ಮರ ಹತ್ತಿದವರಿಗೆ ಡೈರೆಕ್ಷನ್ ಕೊಡುತ್ತಾರೆ!"

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಮೌನೀಶರು ಹೆಸರಿನ ಹಾಗಲ್ಲ ಎಂದರೆ ಸಾಕಿತ್ತು, ಮನ್ಮೋಹನ ಸಿಂಗ್ ಹೀನೋಪಮೆಯಾಗಲಿಲ್ಲವೇ :-)
-ಅಶೋಕವರ್ಧನ

ಅನಾಮಧೇಯ ಹೇಳಿದರು...

ನಿಮ್ಮೊಂದಿಗೆ ನಾನಿದ್ದೇನೆ
ಜಯಶೇಖರ್ ಮಡಪ್ಪಾಡಿ

Shyams Art World ಹೇಳಿದರು...

haha... gammattuntu...