ಸೋಮವಾರ, ಜುಲೈ 23, 2018

ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪




ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪


ಕಂ|| ಕೂರಿ[ಸೆ] ಗುರುಶುಶ್ರೂಷೆಯೊ |
     ಳಾ ರಾಮನನುಗ್ರ ಪರಶುಪಾಟಿತ ರಿಪು ವಂ ||
     ಶಾರಾಮನನಿಷು ವಿದ್ಯಾ |
     ಪಾರಗನೆನಿಸಿದುದು ಬಲ್ಮೆ ವೈಕರ್ತನನಾ ||೧೦೪||

ತನ್ನ ಉಗ್ರವಾದ ಕೊಡಲಿಯಿಂದ ವೈರಿಗಳ ವಂಶವನ್ನೇ ನಾಶ ಮಾಡಿದ ಪರಶುರಾಮನಿಗೆ ಪ್ರೀತಿ ಹುಟ್ಟುವಂತೆ ಕರ್ಣನು ಆತನ ಸೇವೆ ಮಾಡಿ ಬಿಲ್ವಿದ್ಯೆಯಲ್ಲಿ ಪಾರಂಗತನಾದನು.
(ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನನ್, ಉಗ್ರ ಪರಶುಪಾಟಿತ ರಿಪು ವಂಶಾರಾಮನನ್, ಇಷು ವಿದ್ಯಾ ಪಾರಗನ್ ಎನಿಸಿದುದು ಬಲ್ಮೆ ವೈಕರ್ತನನಾ.)
ವ|| ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮಱೆದೊಱಗಿದಾ ಪ್ರಸ್ತಾವದೊಳಾ ಮುನಿಗೆ ಮುನಿಸಂ ಮಾಡಲೆಂದಿಂದ್ರನುಪಾಯದೊಳಟ್ಟಿದ ವಜ್ರಕೀಟಂಗಳ್ ಕರ್ಣನೆರಡುಂ ತೊಡೆಯುಮನುಳಿಯನೂಱಿ ಕೊಡಂತಿಯೊಳ್ ಬೆಟ್ಟಿದಂತತ್ತಮಿತ್ತಮುರ್ಚಿ ಪೋಗೆಯುಮದನಱಿಯದಂತೆ ಗುರುಗೆ ನಿದ್ರಾಭಿಘಾತಮಕ್ಕುಮೆಂದು ತಲೆಯನುಗುರಿಸುತ್ತುಮಿರೆಯಿರೆ-
(ಅಂತು ಧನುರ್ಧರ ಅಗ್ರಗಣ್ಯನಾಗಿರ್ದು, ಒಂದು ದಿವಸಂ, ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮಱೆದು ಒಱಗಿದಾ ಪ್ರಸ್ತಾವದೊಳ್, ಆ ಮುನಿಗೆ ಮುನಿಸಂ ಮಾಡಲೆಂದು ಇಂದ್ರನ್ ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್, ಕರ್ಣನ ಎರಡುಂ ತೊಡೆಯುಮನ್ ಉಳಿಯನ್ ಊಱಿ ಕೊಡಂತಿಯೊಳ್ ಬೆಟ್ಟಿದಂತೆ ಅತ್ತಂ ಇತ್ತಂ ಉರ್ಚಿ ಪೋಗೆಯುಂ, ಅದನ್ ಅಱಿಯದಂತೆ ಗುರುಗೆ ನಿದ್ರಾಭಿಘಾತಂ ಅಕ್ಕುಂ ಎಂದು, ತಲೆಯನ್ ಉಗುರಿಸುತ್ತುಂ ಇರೆಯಿರೆ,)
ಒಂದು ದಿವಸ ಪರಶುರಾಮನು ಬಿಲ್ವಿದ್ಯೆಯಲ್ಲಿ ಮೊದಲಿಗ ಎನ್ನಿಸಿಕೊಂಡಿದ್ದ ಶಿಷ್ಯ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ನಿದ್ರೆ ಹೋಗಿದ್ದನು. ಇದೇ ಸಮಯವನ್ನು ಕಾಯುತ್ತಿದ್ದ ಇಂದ್ರನು, ಮುನಿಗೆ ಕರ್ಣನ ಮೇಲೆ ಸಿಟ್ಟು ಬರುವಂತೆ ಮಾಡುವ ಉದ್ದೇಶದಿಂದ ವಜ್ರಕೀಟಗಳನ್ನು ಅಲ್ಲಿಗೆ ಕಳಿಸಿಕೊಟ್ಟನು. ಆ ಕೀಟಗಳು, ಉಳಿಯನ್ನು ಊರಿ ಸುತ್ತಿಗೆಯಿಂದ ಹೊಡೆದರೆ ಆಗುವ ಹಾಗೆ, ಕರ್ಣನ ತೊಡೆಯನ್ನು ಕಚ್ಚಿ ಅತ್ತ ಇತ್ತ ಎರಡು ಭಾಗ ಮಾಡಿದವು. ಕರ್ಣನು ಮಾತ್ರ ಆ ನೋವಿನಿಂದ ಸ್ವಲ್ಪವೂ ವಿಚಲಿತನಾಗದೆ, ಗುರುವಿನ ನಿದ್ದೆಗೆ ಭಂಗ ಬಂದೀತೆಂದು, ತಲೆಯನ್ನು ಉಗುರಿನಿಂದ ಕೆರೆದುಕೊಳ್ಳುತ್ತ ಸುಮ್ಮನೆ ಕುಳಿತಿದ್ದನು.
ಕಂ|| ಅತಿ ವಿಶದ ವಿಶಾಲೋರು |
     ಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನಃ ||
     ಕ್ಷತದೊಡನೆೞ್ಚರಿಸಿದುದು |
     ತ್ಥಿತಮಾವಂದಸ್ರ ಮಿಶ್ರ ಗಂಧಂ ಮುನಿಯಂ ||೧೦೫||
(ಅತಿ ವಿಶದ ವಿಶಾಲ ಊರುಕ್ಷತದಿಂದ ಒಱೆದು ಅನಿತು ಜಡೆಯುಮಂ ನಾಂದಿ ಮನಃಕ್ಷತದೊಡನೆ ಎೞ್ಚರಿಸಿದುದು ಉತ್ಥಿತಂ ಆ ವಂದ ಅಸ್ರ ಮಿಶ್ರ ಗಂಧಂ ಮುನಿಯಂ.)
ಕರ್ಣನ ವಿಶಾಲವಾದ ತೊಡೆಯಲ್ಲಿ ಆದ ಆ ಗಾಯದಿಂದ ಸುರಿದ ರಕ್ತವು ಮುನಿಯ ಜಡೆಯನ್ನು ಪೂರ್ತಿಯಾಗಿ ತೋಯಿಸಿತು. ನೆತ್ತರಿನಿಂದ ತೊಯ್ದ ಆ ಜಡೆಯಿಂದ ಹೊರಟ ಮಿಶ್ರ ವಾಸನೆಯು ಹೆಚ್ಚಾದಂತೆ ಪರಶುರಾಮನು ಸಂಕಟಪಟ್ಟು ಎಚ್ಚರಗೊಂಡನು.
ವ|| ಅಂತೆೞ್ಚತ್ತು ನೆತ್ತರ ಪೊನಲೊಳ್ ನಾಂದು ನನೆದ ಮೈಯ್ಯುಮಂ ತೊಯ್ದು ತಳ್ಪೊಯ್ದ ಜಡೆಯುಮಂ ಕಂಡೀ ಧೈರ್ಯಂ ಕ್ಷತ್ರಿಯಂಗಲ್ಲದಾಗದು ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನ ಕಾಲದೊಳ್ ಬೆಸಕೆಯ್ಯದಿರ್ಕೆ ಎಂದು ಶಾಪಮನಿತ್ತನಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಮಿತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ-
(ಅಂತು ಎೞ್ಚತ್ತು, ನೆತ್ತರ ಪೊನಲೊಳ್ ನಾಂದು ನನೆದ ಮೈಯ್ಯುಮಂ, ತೊಯ್ದು ತಳ್ಪೊಯ್ದ ಜಡೆಯುಮಂ ಕಂಡು, ಈ ಧೈರ್ಯಂ ಕ್ಷತ್ರಿಯಂಗಲ್ಲದೆ ಆಗದು, ಪಾರ್ವನೆಂದು ಎನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ, ನಿನಗೆ ಆನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಂ ಅವಸಾನ ಕಾಲದೊಳ್ ಬೆಸಕೆಯ್ಯದಿರ್ಕೆ ಎಂದು ಶಾಪಮನ್ ಇತ್ತನ್. ಅಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳ್ ಇರ್ಪನ್ನೆಗಂ, ಇತ್ತಲ್ ಕುಂತಿಗೆ ಅವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ,)
ಎಚ್ಚರಗೊಂಡು ಮೇಲೆದ್ದ ಪರಶುರಾಮನು ನೆತ್ತರ ಹೊನಲಿನಲ್ಲಿ ಅದ್ದಿ ತೊಯ್ದು ಹೋದ ತನ್ನ ಮೈಯನ್ನೂ, ಜಡೆಯನ್ನೂ ಕಂಡು “ಈ ಧೈರ್ಯವು ಕ್ಷತ್ರಿಯರಿಗಲ್ಲದೆ ಬೇರೆಯವರಿಗೆ ಸಾಧ್ಯವಿಲ್ಲ. ಹಾರುವನೆಂದು ನನ್ನಲ್ಲಿ ಸುಳ್ಳು ಹೇಳಿ, ವಿದ್ಯೆಯನ್ನು ಹೇಳಿಸಿಕೊಂಡದ್ದಕ್ಕೆ ನಿನಗೆ ಬೇರೆ ಶಿಕ್ಷೆ ಇಲ್ಲ. ನಾನು ನಿನಗೆ ಕೊಟ್ಟ ಬ್ರಹ್ಮಾಸ್ತ್ರವೆಂಬ ದಿವ್ಯ ಅಸ್ತ್ರವು ನಿನ್ನ ಕೊನೆಗಾಲದಲ್ಲಿ ಕೆಲಸ ಮಾಡದೆ ಹೋಗಲಿ” ಎಂದು ಶಾಪವನ್ನು ಕೊಟ್ಟನು. ಕರ್ಣನು ಶಾಪವನ್ನುಂಡು, ಅಲ್ಲಿಂದ  ಹಿಂದೆ ಬಂದು ಸೂತನ ಮನೆಯಲ್ಲಿದ್ದನು.
ಇತ್ತ ಕುಂತಿಗೆ ಅವಳ ಮಾವನಾದ ಕುಂತಿಭೋಜನು ಸ್ವಯಂವರವನ್ನು ಏರ್ಪಡಿಸಿದನು-
ಚಂ|| ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚೆ |
     ಲ್ವುಗಳ ವಿಲಾಸದುರ್ಮೆಗಳೊಳಾವೆವಗಾಗಿಪೆವೆಂದು ಬಂದ ಚೆ ||
     ನ್ನಿಗರುಮನಾಸೆಕಾಱರುಮನೊಲ್ಲದೆ ಚೆಲ್ವಿಡಿದಿರ್ದ ರೂಪು ದೃ |
     ಷ್ಟಿಗೆವರೆ ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆ ಸೂಡಿದಳ್ ||
(ಸೊಗಯಿಪ ತಮ್ಮ ಜವ್ವನದ, ತಮ್ಮ ವಿಭೂತಿಯ, ತಮ್ಮ ತಮ್ಮ ಚೆಲ್ವುಗಳ, ವಿಲಾಸದ ಉರ್ಮೆಗಳೊಳ್, ‘ಆವ್ ಎವಗೆ ಆಗಿಪೆವು’ ಎಂದು ಬಂದ ಚೆನ್ನಿಗರುಮನ್, ಆಸೆಕಾಱರುಮನ್ ಒಲ್ಲದೆ ಚೆಲ್ವಿಡಿದಿರ್ದ ರೂಪು ದೃಷ್ಟಿಗೆವರೆ, ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆ ಸೂಡಿದಳ್.)
ಸ್ವಯಂವರಕ್ಕೆ ಅನೇಕ ರಾಜಕುಮಾರರು ಬಂದಿದ್ದರು. ಅವರೆಲ್ಲ ತಮ್ಮ ಯೌವನ, ಚೆಲುವು, ಸಂಪತ್ತು, ವಿಲಾಸಗಳನ್ನು ಮೆರೆಸಿ ‘ಕುಂತಿಯನ್ನು ನಾನು ನನ್ನವಳಾಗಿಸಿಕೊಳ್ಳುತ್ತೇನೆ’ ಎಂದು ಮೇಲಾಟ ನಡೆಸಿದ್ದರು. ಆದರೆ ಅಂಥ ಚೆನ್ನಿಗರನ್ನೂ, ಆಸೆಬುರುಕರನ್ನೂ ಒಲ್ಲದೆ, ಕುಂತಿಯು ಅತ್ಯಂತ ಚೆಲುವನಾದ ಪಾಂಡುರಾಜನಿಗೇ ಮನದುಂಬಿ ಮಾಲೆ ಹಾಕಿದಳು.
ವ|| ಅಂತು ಸ್ವಯಂಬರದೊಳ್ ನೆಱೆದರಸುಮಕ್ಕಳೊಳಪ್ಪುಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನೊಡವುಟ್ಟಿದ ಮಾದ್ರಿಯುಮನೊಂದೆ ಪಸೆಯೊಳಿರಿಸಿ ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ ತಾಂ ಮದುವೆಯಂ ಮಾಡಿ-
(ಅಂತು ಸ್ವಯಂಬರದೊಳ್ ನೆಱೆದ ಅರಸುಮಕ್ಕಳೊಳ್ ಅಪ್ಪುಕೆಯ್ದ ಕುಂತಿಯೊಡನೆ, ಮದ್ರರಾಜನ ಮಗಳ್ ಶಲ್ಯನ ಒಡವುಟ್ಟಿದ ಮಾದ್ರಿಯುಮನ್ ಒಂದೆ ಪಸೆಯೊಳ್ ಇರಿಸಿ, ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ ತಾಂ ಮದುವೆಯಂ ಮಾಡಿ,)
ಹಾಗೆ ಸ್ವಯಂವರದಲ್ಲಿ ನೆರೆದ ಎಲ್ಲ ಅರಸು ಮಕ್ಕಳ ಪೈಕಿ ಪಾಂಡುರಾಜನಿಗೆ ಸೈ ಎಂದ ಕುಂತಿಯನ್ನಲ್ಲದೆ, ಮದ್ರರಾಜನ ಮಗಳೂ, ಶಲ್ಯನ ಒಡಹುಟ್ಟಿದವಳೂ ಆದ ಮಾದ್ರಿಯನ್ನು ಸಹ ಒಂದೇ ಹಸೆಯಲ್ಲಿರಿಸಿ, ಭೀಷ್ಮನು ಬ್ರಹ್ಮನೂ ಮೆಚ್ಚುವಂತೆ ಮದುವೆ ಮಾಡಿಸಿದನು.
ಚಂ|| ತಳಿರ್ಗಳಸಂ ಮುಕುಂದರವಮೆತ್ತಿದ ಮುತ್ತಿನ ಮಂಟಪಂ ಮನಂ |
     ಗೊಳಿಪ ವಿತಾನಪಂಙ್ತಿ ಪಸುರ್ವಂದಲೊಳೊಲ್ದೆಡೆಯಾಡುವೆಯ್ದೆಯರ್ ||
     ಬಳಸಿದ ವೇದಪಾರಗರ ಸಂದಣಿಯೆಂಬಿವಱಿಂ ವಿವಾಹ ಮಂ |
     ಗಳಮದು ಕುಂತಿಮಾದ್ರಿಗಳೊಳಚ್ಚರಿಯಾದುದು ಪಾಂಡುರಾಜನಾ ||೧೦೭||
(ತಳಿರ್ಗಳಸಂ, ಮುಕುಂದರವಂ, ಎತ್ತಿದ ಮುತ್ತಿನ ಮಂಟಪಂ, ಮನಂಗೊಳಿಪ ವಿತಾನಪಂಙ್ತಿ, ಪಸುರ್ವಂದಲೊಳ್ ಒಲ್ದು ಎಡೆಯಾಡುವ ಎಯ್ದೆಯರ್, ಬಳಸಿದ ವೇದಪಾರಗರ ಸಂದಣಿ ಎಂಬಿವಱಿಂ, ವಿವಾಹ ಮಂಗಳಂ ಅದು ಕುಂತಿಮಾದ್ರಿಗಳೊಳ್, ಅಚ್ಚರಿಯಾದುದು ಪಾಂಡುರಾಜನಾ.)
ಮಾವಿನ ಚಿಗುರಿನಿಂದ ಸಿಂಗಾರಗೊಂಡ ಕಲಶ, ತಮಟೆಯ ರವ, ವಿಸ್ತಾರವಾಗಿ ಕಟ್ಟಿದ ಮುತ್ತಿನ ಮಂಟಪ, ಮನಸೆಳೆಯುವ ಮೇಲ್ಕಟ್ಟುಗಳ ಸಾಲು, ಹಸಿರು ಚಪ್ಪರದ ಕೆಳಗೆ ಅತ್ತಿತ್ತ ಪ್ರೀತಿಯಿಂದ ಓಡಾಡುವ ಮುತ್ತೈದೆಯರು, ವೇದ ತಿಳಿದವರ ಗುಂಪು – ಇವುಗಳಿಂದ ಕೂಡಿ,  ಕುಂತಿ-ಮಾದ್ರಿಯರೊಡನೆ  ನಡೆದ ಪಾಂಡುರಾಜನ ಮದುವೆಯು ನೋಡುವವರಿಗೆ ಅಚ್ಚರಿಯನ್ನುಂಟು ಮಾಡುತ್ತಿತ್ತು.
ಚಂ|| ತುಱುಗೆಮೆ ನೀಳ್ದ ಪುರ್ವು ನಿಡುಗಣ್ ಪೊಱೆಯಲ್ಲದೆ ಬಟ್ಟಿತಪ್ಪ ಬಾ |
     ಯ್ದೆರೆ ತನುರೇಖೆಗೊಂಡ ಕೊರಲೊಡ್ಡಿದ ಪೆರ್ಮೊಲೆ ತೆಳ್ವಸಿಱ್ ಕರಂ ||
     ನೆಱೆದ ನಿತಂಬವಿಂಬುವಡೆದೊಳ್ದೊಡೆ ನಕ್ಕರವದ್ದಿ(?) ತಾನೆ ಪೋ |
     ಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್ ||೧೦೮||
(ತುಱುಗೆಮೆ, ನೀಳ್ದ ಪುರ್ವು, ನಿಡುಗಣ್, ಪೊಱೆಯಲ್ಲದೆ ಬಟ್ಟಿತಪ್ಪ ಬಾಯ್ದೆರೆ, ತನುರೇಖೆಗೊಂಡ ಕೊರಲ್, ಒಡ್ಡಿದ ಪೆರ್ಮೊಲೆ, ತೆಳ್ವಸಿಱ್, ಕರಂನೆಱೆದ ನಿತಂಬಂ, ಇಂಬುವಡೆದ ಒಳ್ದೊಡೆ ನಕ್ಕರವದ್ದಿ(?) ತಾನೆ ಪೋ ಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ, ಪೊಗೞ್ವನ್ನರೆ ಕುಂತಿ ಮಾದ್ರಿಗಳ್.)
ದಟ್ಟ ಕೂದಲಿನ ಕಣ್ಣೆವೆಗಳು, ನೀಳವಾದ ಹುಬ್ಬು ಮತ್ತು ಕಣ್ಣುಗಳು, ಹಗುರವಾದ ದುಂಡುತುಟಿಗಳು, ಸಪುರವಾಗಿ ಗೆರೆ ಕೊರೆದಂತಿರುವ ಕೊರಳು, ಚಾಚಿದ ದೊಡ್ಡ ಮೊಲೆಗಳು, ತೆಳುವಾದ ಹೊಟ್ಟೆ, ತುಂಬು ನಿತಂಬ, ವಿಸ್ತಾರವಾದ ಒಳತೊಡೆಗಳು ಎಂದು ಕುಂತಿ ಮಾದ್ರಿಯರ ರೂಪವನ್ನು ಲೋಕವೇ ಹೊಗಳಿತು. ಆ ಹೊಗಳಿಕೆಗೆ ಅವರು ತಕ್ಕವರೇ ಸರಿ.
ವ|| ಅಂತಾಕೆಗಳಿರ್ವರುಮೆರಡುಂ ಕೆಲದೊಳಿರೆ ಕಲ್ಪಲತೆಗಳೆರಡಱ ನಡುವಣ ಕಲ್ಪವೃಕ್ಷಮಿರ್ಪಂತಿರ್ದ ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿ[ಸೆ]-
(ಅಂತು ಆಕೆಗಳ್ ಇರ್ವರುಂ ಎರಡುಂ ಕೆಲದೊಳ್ ಇರೆ, ಕಲ್ಪಲತೆಗಳ್ ಎರಡಱ ನಡುವಣ ಕಲ್ಪವೃಕ್ಷಂ ಇರ್ಪಂತೆ ಇರ್ದ ಪಾಂಡುರಾಜಂಗೆ, ಧೃತರಾಷ್ಟ್ರನ್ ಅಂಗಹೀನನೆಂದು, ವಿವಾಹದ ಒಸಗೆಯೊಡನೆ ಪಟ್ಟಬಂಧದ ಒಸಗೆಯಂ ಮಾಡಿ ನೆಲನನ್ ಆಳಿಸೆ,)
ಹಾಗೆ ಪಾಂಡುರಾಜನ ಎರಡು ಪಕ್ಕಗಳಲ್ಲಿ ಕುಂತಿ, ಮಾದ್ರಿಯರು ಕಲ್ಪವೃಕ್ಷದ ಪಕ್ಕದಲ್ಲಿರುವ ಕಲ್ಪಲತೆಗಳಂತೆ ಶೋಭಿಸುತ್ತಿದ್ದರು. ಮುಂದೆ, ಧೃತರಾಷ್ಟ್ರನು ಅಂಗಹೀನನಾಗಿದ್ದುದರಿಂದ (ಕುರುಡ) ಭೀಷ್ಮನು ಪಾಂಡುರಾಜನಿಗೆ ಪಟ್ಟ ಕಟ್ಟಿ ರಾಜ್ಯವನ್ನು ಆಳಿಸತೊಡಗಿದನು.
ಉ|| ಮೀಱುವೆವೆಂಬ [ಮಾಂ]ಡಳಿಕರೀಯದ[ರೆಂ]ಬದಟರ್ ವಯಲ್ಗೆ ಮೆ |
     ಯ್ದೋಱುವೆವೆಂಬ ಪೂಣಿಗರಡಂಗಿ [ಕು]ನುಂಗಿ ಸಿಡಿಲ್ದು ಜೋಲ್ದು ಕಾ ||
     ಯ್ಪಾ[ಱೆ] ನಭಕ್ಕೆ ಪಾಱಿದುದು ಗಂಡರ ನೆತ್ತಿಯೊಳೊತ್ತಿ ಬಾಳನಿ |
     ನ್ನೂಱುಗುಮೆಂದೊಡೇಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ ||೧೦೯||
(ಮೀಱುವೆವು ಎಂಬ ಮಾಂಡಳಿಕರ್, ಈಯದರ್ ಎಂಬ ಅದಟರ್, ವಯಲ್ಗೆ ಮೆಯ್ದೋಱುವೆವು ಎಂಬ ಪೂಣಿಗರ್, ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ ನಭಕ್ಕೆ ಪಾಱಿದುದು, ಗಂಡರ ನೆತ್ತಿಯೊಳ್ ಒತ್ತಿ ಬಾಳನ್ ಇನ್ ಊಱುಗುಂ ಎಂದೊಡೆ, ಏಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ!)
‘ನಿನ್ನ ಮಾತು ಕೇಳುವುದಿಲ್ಲ, ಏನು ಮಾಡುತ್ತೀಯೋ ನೋಡುತ್ತೇವೆ’ ಎನ್ನುವ ಸಾಮಂತರು, ‘ನಿನಗೆ ಕಪ್ಪ ಕೊಡುವುದಿಲ್ಲ’ ಎನ್ನುವ ಶೂರರು, ‘ಯುದ್ಧಕ್ಕೆ ತಯಾರು’ ಎನ್ನುವ ಪರಾಕ್ರಮಿಗಳು ಇಂಥ ಎಲ್ಲರ ನೆತ್ತಿಯ ಮೇಲೆ ಪಾಂಡುರಾಜ ತನ್ನ ಕತ್ತಿಯನ್ನು ಊರಿದ. ಆಗ ಅವರೆಲ್ಲ ಅಡಗಿ, ಕುಗ್ಗಿ, ಹೊಟ್ಟಿ, ಸೊಕ್ಕಿಳಿದು ಹೋದರು. ಅವರ ಕೋಪ ತಣ್ಣಗಾಗಿ ಗಾಳಿಗೆ ಹೋಯಿತು! ಅಬ್ಬಾ! ಪಾಂಡುರಾಜನ ಶೌರ್ಯದ ಉರಿಯೆ!
ಮ|| ಬೆಸಕೆಯ್ದತ್ತು ಸಮುದ್ರ ಮುದ್ರಿತ ಧರಾಚಕ್ರಂ ಪ್ರತಾಪಕ್ಕಗು |
     ರ್ವಿಸೆ ಗೋಳುಂಡೆಗೊಳುತ್ತುಮಿರ್ದುದು ದಿಶಾಚಕ್ರಂ ಪೊದೞ್ದಾಜ್ಞೆಗಂ ||
     ಪೆಸರ್ಗಂ ಮುನ್ನಮೆ ಗೂಡುಗೊಂಡುದು ವಿಯಚ್ಚಕ್ರಂ ಸಮಂತೆಂಬಿನಂ |
     ಜಸಮಾಪಾಂಡುರಮಾದುದಾ ನೃಪರೊಳಾರಾ ಪಾಂಡುರಾಜಂಬರಂ ||೧೧೦||
(ಬೆಸಕೆಯ್ದತ್ತು ಸಮುದ್ರ ಮುದ್ರಿತ ಧರಾಚಕ್ರಂ, ಪ್ರತಾಪಕ್ಕೆ ಅಗುರ್ವಿಸೆ ಗೋಳ್ ಉಂಡೆಗೊಳುತ್ತುಂ ಇರ್ದುದು ದಿಶಾಚಕ್ರಂ, ಪೊದೞ್ದ ಆಜ್ಞೆಗಂ ಪೆಸರ್ಗಂ ಮುನ್ನಮೆ ಗೂಡುಗೊಂಡುದು ವಿಯಚ್ಚಕ್ರಂ ಸಮಂತು ಎಂಬಿನಂ, ಜಸಂ ಆಪಾಂಡುರಂ ಆದುದು, ಆ ನೃಪರೊಳ್ ಆರ್ ಆ ಪಾಂಡುರಾಜಂಬರಂ?)
ಕಡಲಿನವರೆಗೂ ಇರುವ ಭೂಮಂಡಲವು ಚೆನ್ನಾಗಿ (ಪಾಂಡುರಾಜನ)ಸೇವೆ ಮಾಡಿತು. ಆತನ ಪ್ರತಾಪಕ್ಕೆ ಹೆದರಿ ದಿಕ್ಕುದಿಕ್ಕುಗಳಲ್ಲಿರುವ ರಾಜರು ಗೋಳಿಡುತ್ತಿದ್ದರು. ಆಗಸದಲ್ಲಿಯೂ ಸಹ ಅವನ ಅಪ್ಪಣೆ, ಕೀರ್ತಿಗಳು ನೆಲೆಗೊಂಡಿದ್ದವು. ಹೀಗೆ ಅವನ ಯಶಸ್ಸು ಪೂರ್ತಿ ಬಿಳಿಯಾಗಿತ್ತು. ರಾಜರುಗಳ ಪೈಕಿ ಯಾರು ತಾನೇ ಪಾಂಡುರಾಜನ ಎತ್ತರಕ್ಕೆ ಏರಬಲ್ಲರು?
ವ|| ಅಂತು ಪಾಂಡುರಾಜನಧಿಕ ತೇಜನುಮವನತ ವೈರಿ ಭೂಭೃತ್ಸಮಾಜನುಮಾಗಿ ನೆಗೞುತ್ತಿರ್ದೊಂದು ದಿವಸಂ ತೋಪಿನ ಬೇಂಟೆಯನಾಡಲೞ್ತಿಯಿಂ ಪೋಗಿ
(ಅಂತು ಪಾಂಡುರಾಜನ್ ಅಧಿಕ ತೇಜನುಂ, ಅವನತ ವೈರಿ ಭೂಭೃತ್ಸಮಾಜನುಂ ಆಗಿ ನೆಗೞುತ್ತಿರ್ದು, ಒಂದು  ದಿವಸಂ ತೋಪಿನ ಬೇಂಟೆಯನ್ ಆಡಲು ಅೞ್ತಿಯಿಂ ಪೋಗಿ,)
ಹೀಗೆ ಪಾಂಡುರಾಜನು ಒಳ್ಳೆಯ ತೇಜಸ್ಸಿನಿಂದ ಕೂಡಿ, ವೈರಿರಾಜರನ್ನು ಸೋಲಿಸಿದವನಾಗಿ, ರಾಜ್ಯವನ್ನಾಳುತ್ತಿದ್ದು, ಒಂದು ದಿವಸ ತೋಪಿನ ಬೇಟೆಯಾಡುವ ಆಸಕ್ತಿಯಿಂದ (ಕಾಡಿಗೆ) ಹೋಗಿ-
ಚಂ|| ಇನಿಯಳನೞ್ತಿಯಿಂದೆ ಮೃಗಿ ಮಾಡಿ ಮನೋಜ ಸುಖಕ್ಕೆ ಸೋಲ್ತಲಂ |
     ಪಿನೆ ನೆರೆಯಲ್ಕೆ ದಿವ್ಯಮುನಿಯುಂ ಮೃಗಮಾಗಿ ಮರಲ್ದು ಕೂಡೆ ಮೆ ||
     ಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂ |
     ಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ ||೧೧೧||
(ಇನಿಯಳನ್ ಅೞ್ತಿಯಿಂದೆ ಮೃಗಿ ಮಾಡಿ, ಮನೋಜ ಸುಖಕ್ಕೆ ಸೋಲ್ತು, ಅಲಂಪಿನೆ ನೆರೆಯಲ್ಕೆ ದಿವ್ಯಮುನಿಯುಂ ಮೃಗಮಾಗಿ, ಮರಲ್ದು ಕೂಡೆ, ಮೆಲ್ಲನೆ. “ಮೃಗಂ” ಎಂದು ಸಾರ್ದು, ನೆಱನಂ ನಡೆ ನೋಡಿ ನರೇಂದ್ರನ್, ಎಚ್ಚು ಭೋಂಕನೆ ಮೃಗಚಾರಿಯಂ, ತನಗೆ ಮಾಣದೆ ತಂದನ್ ಅದೊಂದು ಮಾರಿಯಂ.)
(ಆ ಕಾಡಿನಲ್ಲಿ) ದಿವ್ಯಮುನಿಯೊಬ್ಬನು ಕಾಮಸುಖಕ್ಕೆ ಸೋತು ತನ್ನ ನಲ್ಲೆಯನ್ನು ಹೆಣ್ಣುಜಿಂಕೆಯಾಗಿಸಿಕೊಂಡು, ತಾನು ಗಂಡುಜಿಂಕೆಯಾಗಿ, ಪ್ರಣಯಭಾವದಿಂದ ಉಬ್ಬಿ, ಆ ಹೆಣ್ಣುಜಿಂಕೆಯನ್ನು ಕೂಡಿ ವಿಹರಿಸುತ್ತಿದ್ದನು. ಪಾಂಡುರಾಜನು ಈ ದೃಶ್ಯವನ್ನು ಕಂಡು ‘ಜಿಂಕೆ’ ಎಂದುಕೊಳ್ಳುತ್ತಾ ಮೆಲ್ಲನೆ, ಸದ್ದು ಮಾಡದೆ ಅವುಗಳ ಹತ್ತಿರ ಹೋಗಿ, ಸರಿಯಾಗಿ ಗುರಿ ಇಟ್ಟು ಬಾಣಬಿಟ್ಟನು. ಅವನು ಹಾಗೆ ಮಾಡಿದುದು ಮನೆಗೆ ಒಂದು ಮಾರಿಯನ್ನೇ ತಂದುಕೊಂಡಂತಾಯಿತು.
ವ|| ಆಗಳ್ ಪ್ರಳಯದುಳ್ಕಮುಳ್ಕುವಂತೆ ತನ್ನೆಚ್ಚಂಬು ಮುನಿಕುಮಾರನ ಕಣ್ಣೊಳಮೆರ್ದೆಯೊಳಮುಳ್ಕೆ ಪೇೞಿಮೆನ್ನನಾವನೆಚ್ಚನೆಂಬ ಮುನಿಯ ಮುನಿದ ಸರಮಂ ಕೇಳ್ದು ಬಿಲ್ಲನಂಬುಮನೀಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ-
(ಆಗಳ್ ಪ್ರಳಯದ ಉಳ್ಕಂ ಉಳ್ಕುವಂತೆ ತನ್ನ ಎಚ್ಚ ಅಂಬು ಮುನಿಕುಮಾರನ ಕಣ್ಣೊಳಂ, ಎರ್ದೆಯೊಳಂ ಉಳ್ಕೆ, “ಪೇೞಿಂ ಎನ್ನನ್ ಆವನ್ ಎಚ್ಚನ್?” ಎಂಬ ಮುನಿಯ ಮುನಿದ ಸರಮಂ ಕೇಳ್ದು, ಬಿಲ್ಲನ್ ಅಂಬುಮನ್ ಈಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ,)
ಆಗ ಪ್ರಳಯಕಾಲದ ಉಲ್ಕೆಯು ಹೊಳೆಯುವಂತೆ ಅವನು ಬಿಟ್ಟ ಬಾಣವು ಮುನಿಕುಮಾರನ ಕಣ್ಣಿನಲ್ಲೂ, ಎದೆಯಲ್ಲೂ ಹೊಳೆಯಿತು. ಮುನಿಯು ಸಿಟ್ಟಿನಿಂದ “ಹೇಳಿ, ಯಾರವನು ನನಗೆ ಬಾಣ ಬಿಟ್ಟವನು?” ಎಂದು ಕೂಗಿಕೊಂಡನು. ಮುನಿಯ ದನಿಯನ್ನು ಕೇಳಿದ ಪಾಂಡುರಾಜನು, ಗಾಬರಿಯಿಂದ ತನ್ನ ಬಿಲ್ಲು ಬಾಣಗಳನ್ನು ಬಿಸಾಡಿ ಮುನಿಯ ಮುಂದೆ ಬಂದು ನಿಂತುಕೊಂಡನು. ಮುನಿಯು ಆತನನ್ನು ನೋಡಿ
ಉ|| ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತೊಡಗೂಡಿದೆನ್ನನಿಂ |
     ತನ್ನೆಯಮೆಚ್ಚುದರ್ಕೆ ಪೆಱತಿಲ್ಲದು ದಂಡಮೊಱಲ್ದು ನಲ್ಲಳೊಳ್ ||
     ನೀನ್ನಡೆನೋಡಿಯುಂ ಬಯಸಿ ಕೂಡಿಯುಮಾಗಡೆ ಸಾವೆಯಾಗಿ ಪೋ |
     ಗಿನ್ನೆನೆ ರೌದ್ರ ಶಾಪ ಪರಿತಾಪ ವಿಳಾಪದೊಳಾ ಮಹೀಶ್ವರಂ ||೧೧೨||
(“ಸನ್ನತದಿಂ ರತಕ್ಕೆ ಎಳಸಿ, ನಲ್ಲಳೊಳ್ ಓತು ಒಡಗೂಡಿದ ಎನ್ನನ್ ಇಂತು ಅನ್ನೆಯಂ ಎಚ್ಚುದರ್ಕೆ ಪೆಱತು ಇಲ್ಲ ಅದು ದಂಡಂ, ಒಱಲ್ದು ನಲ್ಲಳೊಳ್ ನೀನ್ ನಡೆ ನೋಡಿಯುಂ, ಬಯಸಿ ಕೂಡಿಯುಂ, ಆಗಡೆ ಸಾವೆಯಾಗಿ ಪೋಗು ಇನ್” ಎನೆ ರೌದ್ರ ಶಾಪ ಪರಿತಾಪ ವಿಳಾಪದೊಳ್ ಆ ಮಹೀಶ್ವರಂ,)
“ಭೋಗಸುಖವನ್ನು ಬಯಸಿ, ಮುಂದೆ ಬಾಗಿ, ನಲ್ಲೆಯೊಂದಿಗೆ ಪ್ರೀತಿಯಿಂದ ಸೇರಿದ ನನ್ನ ಮೇಲೆ ನೀನು ಅನ್ಯಾಯವಾಗಿ ಬಾಣ ಬಿಟ್ಟಿದ್ದೀಯೆ! ಆ ತಪ್ಪಿಗೆ ನಿನಗೆ ಶಿಕ್ಷೆ ಬೇರೇನೂ ಇಲ್ಲ! ನಿನ್ನ ನಲ್ಲೆಯನ್ನು ನೀನು ಬಯಸಿ ನೋಡಿದರೆ, ಕಾಮಿಸಿ ಕೂಡಿದರೆ ಆ ಕೂಡಲೇ ನಿನಗೆ ಸಾವು ಬರಲಿ! ಹೊರಟು ಹೋಗು ಇಲ್ಲಿಂದ!” ಎಂದು ಶಪಿಸಿದಾಗ, ಹೆದರಿಕೆ ಹುಟ್ಟಿಸುವ ಆ ಶಾಪದ ಸುಡುಬಿಸಿಗೆ ನೊಂದ ಪಾಂಡುರಾಜನು-
ವ|| ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು-
(ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಂ ಏಂ  ಪಿರಿದು ಅಲ್ತು,)
“ಕಾಮಸುಖಕ್ಕೆ ತಡೆಯೊಡ್ಡಿದ ನನ್ನ ಬೇಕಾಬಿಟ್ಟಿ ನಡತೆಗೆ ಮುನಿಯು ಕೊಟ್ಟ ಶಾಪ ದೊಡ್ಡದೇನಲ್ಲ”
ಕಂ|| ಎತ್ತ ವನಮೆತ್ತ ಮೃಗಯಾ |
     ವೃತ್ತಕಮೀ ತಪಸಿಯೆತ್ತ ಮೃಗಮೆಂದೆಂ[ತಾ] ||
     ನೆತ್ತೆಚ್ಚೆನಾತ್ಮ ಕರ್ಮಾ |
     ಯತ್ತಂ ಪೆಱತಲ್ತಿದೆಲ್ಲಮಘಟಿತಘಟಿತಂ ||೧೧೩||

(ಎತ್ತ ವನಂ? ಎತ್ತ ಮೃಗಯಾವೃತ್ತಕಂ? ಈ  ತಪಸಿಯೆತ್ತ? ಮೃಗಂ ಎಂದು ಎಂತು ಆನ್ ಎತ್ತ ಎಚ್ಚೆನ್? ಆತ್ಮ ಕರ್ಮಾಯತ್ತಂ ಪೆಱತು ಅಲ್ತು, ಇದೆಲ್ಲಂ ಅಘಟಿತಘಟಿತಂ.)
“ಎಲ್ಲಿಯ ಕಾಡು? ಎಲ್ಲಿಯ ಜಿಂಕೆಯಾಟ? ಎಲ್ಲಿಯ ತಪಸಿ? ಜಿಂಕೆ ಎಂದು ತಿಳಿದು ನಾನು ಹೊಡೆದದ್ದಾದರೂ ಹೇಗೆ? ಒಂದಕ್ಕೊಂದಕ್ಕೆ ಸಂಬಂಧವೇ ಕಾಣುತ್ತಿಲ್ಲವಲ್ಲ? ಇದೆಲ್ಲವೂ ನನ್ನ ಕರ್ಮಫಲವೇ ಆಗಿದೆ.  ನಡೆಯಲಾಗದ್ದು ನಡೆದುಹೋಗಿದೆ.”
ವ|| ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು ಸಮಸ್ತ ವಸ್ತುಗಳಂ ದೀನಾನಾಥ ಜನಂಗಳ್ಗೆ ಸೂಱೆಗೊಟ್ಟು ನಿಜ ಪರಿವಾರಮಂ ಬರಿಸಿ-
(ಎಂದು ಚಿಂತಿಸುತ್ತುಂ, ಪೊೞಲ್ಗೆ ಮಗುೞ್ದುವಂದು, ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ ವೃತ್ತಾಂತಂ ಎಲ್ಲಮಂ ಪೇೞ್ದು, ಸಮಸ್ತ ವಸ್ತುಗಳಂ ದೀನ ಅನಾಥ ಜನಂಗಳ್ಗೆ ಸೂಱೆಗೊಟ್ಟು, ನಿಜ ಪರಿವಾರಮಂ ಬರಿಸಿ,)
ಎಂದು ಚಿಂತಿಸುತ್ತ ಊರಿಗೆ ಮರಳಿ ಬಂದು ಗಾಂಗೇಯ, ಧೃತರಾಷ್ಟ್ರ, ವಿದುರರಿಗೆ ನಡೆದ ಎಲ್ಲ ಸಂಗತಿಗಳನ್ನೂ ತಿಳಿಸಿ, ತನ್ನ ಎಲ್ಲ ಸಂಪತ್ತನ್ನೂ ಬಡವರಿಗೆ, ದಿಕ್ಕಿಲ್ಲದವರಿಗೆ ದಾನ ಮಾಡಿ, ತನ್ನ ಕುಟುಂಬದವರನ್ನು ಬರಮಾಡಿಕೊಂಡು-
ಉ|| ಸಾರಮನಂಗ ಜಂಗಮ ಲತಾ ಲಲಿತಾಂಗಿಯರಿಂದಮಲ್ತೆ ಸಂ |
     ಸಾರಮಿದೆಂಬುದಿನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಮಿ ||
     ನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆನೆಂದು ದು |
     ರ್ವಾರ ಪರಾಕ್ರಮಂ ತಳರೆ ಬಾರಿಸಿ ವಾರಿಸಿ ಕುಂತಿ ಮಾದ್ರಿಯರ್ ||೧೧೪||
(ಸಾರಂ ಅನಂಗ ಜಂಗಮ ಲತಾ ಲಲಿತಾಂಗಿಯರಿಂದಂ ಅಲ್ತೆ ಸಂಸಾರಂ ಇದೆಂಬುದು ಇನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಂ, ಇನ್ ಆರುಂ ಇದರ್ಕೆ ವಕ್ರಿಸದಿರಿಂ, ವನವಾಸದೊಳ್ ಇರ್ಪೆನ್, ಎಂದು ದುರ್ವಾರ ಪರಾಕ್ರಮಂ ತಳರೆ, ಬಾರಿಸಿ ವಾರಿಸಿ ಕುಂತಿ ಮಾದ್ರಿಯರ್,)
“ಈ ಸಂಸಾರದ ಸಾರವಿರುವುದು ನಡೆದಾಡುವ ಕಾಮದ ಬಳ್ಳಿಗಳಂತೆ ಅತ್ತಿತ್ತ ಸುಳಿಯುವ   ಹೆಣ್ಣುಗಳಲ್ಲಿಯೇ ಅಲ್ಲವೆ? ಮುನಿಯ ಶಾಪದಿಂದಾಗಿ ಇನ್ನು ಮುಂದೆ ಆ ಸಾರದಿಂದಲೇ ನಾನು ದೂರ ಇರಬೇಕಾಗಿದೆ. ಹಾಗಾಗಿ ನಾನಿನ್ನು ಕಾಡಿಗೆ ಹೋಗಿ ಅಲ್ಲಿಯೇ ಇರುತ್ತೇನೆ. ನೀವ್ಯಾರೂ ಇದಕ್ಕೆ ಅಡ್ಡಿ ಮಾಡಬೇಡಿ” ಎಂದು ಹೇಳಿ ಆ ಮಹಾಶೂರನು ಹೊರಡಲು ಸಿದ್ಧನಾದಾಗ “ಬೇಡ, ಬೇಡ” ಎನ್ನುತ್ತ ಕುಂತಿ ಮಾದ್ರಿಯರು-
ವ|| ಬೆನ್ನ ಬೆನ್ನನೆ ಬರೆ ಬಿನ್ನ ಬಿನ್ನನೆ ಪೋಗಿ-
ಅವನ ಬೆನ್ನ ಹಿಂದೆಯೇ ಬರಲು, ಪಾಂಡುವು ಮುಂದೆ ಮುಂದೆ ಹೋಗಿ-

ಕಾಮೆಂಟ್‌ಗಳಿಲ್ಲ: