ಗುರುವಾರ, ಜನವರಿ 30, 2020






ಆಶ್ವಾಸ ೩ ಪದ್ಯಗಳು ೨೧-೨೭


ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ
     ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ|
     ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ
     ಱ್ದಿರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧||
(ಬರಿಸಿ ಹಿಡಿಂಬೆಯಂ, ಕರೆದು ಸಾರೆ ಘಟೋತ್ಕಚನಂ, ‘ಮನೋಮುದಂ ಬೆರಸು ಒಸೆದು ಇರ್ದೆವು ಇನ್ನೆವರಂ, ಇನ್ನು ಇರಲಾಗದು, ಪೋಪೆವು’ ಎಂದೊಡೆ, ಆದರದೊಳೆ ಕೊಟ್ಟ ವಸ್ತುಗಳನೊಂದುಮನ್ ಒಲ್ಲದೆ, ಕೂರ್ತು ಬುದ್ಧಿ ಪೇೞ್ದು, ಇರಿಸಿ, ಸುಖಪ್ರಯಾಣದೊಳೆ ಪಾಂಡವರ್ ಎಯ್ದಿದರ್ ಏಕಚಕ್ರಮಂ)
(ಪಾಂಡವರು) ಹಿಡಿಂಬೆಯನ್ನು ಕರೆಸಿಕೊಂಡು, ಘಟೋತ್ಕಚನನ್ನು ಹತ್ತಿರ ಕೂರಿಸಿಕೊಂಡು ‘ಸಂತೋಷವಾಗಿ, ಪ್ರೀತಿಯಿಂದ ಇಷ್ಟು ದಿನವೂ ಇಲ್ಲಿದ್ದೆವು; ಇನ್ನು ಇರುವಂತಿಲ್ಲ; ಹೊರಡುತ್ತೇವೆ’ ಎಂದರು. ಅವರು ಕೊಟ್ಟ ವಸ್ತುಗಳೊಂದನ್ನೂ ತೆಗೆದುಕೊಳ್ಳದೆ, ಪ್ರೀತಿಯಿಂದ ಅವರಿಗೆ ಬುದ್ಧಿ ಹೇಳಿ, ಅವರನ್ನು ಅಲ್ಲಿಯೇ ಬಿಟ್ಟು, ಸುಖವಾಗಿ ಏಕಚಕ್ರದ ಕಡೆಗೆ ಪ್ರಯಾಣ ಹೊರಟರು.
ರಗಳೆ
ಅಲ್ಲಿ ಸೊಗಯಿಸುವ ಕೃತಕಗಿರಿಗಳಿಂ|
ಕಲ್ಪತರುಗಳನೆ ಪೋಲ್ವ ಮರಗಳಿಂ||
ಅಲ್ಲಿ ಸುಂದರವಾದ ಕೃತಕಬೆಟ್ಟಗಳಿವೆ; ಕಲ್ಪತರುಗಳನ್ನು ಹೋಲುವ ಮರಗಳಿವೆ.

ನಂದನಂಗಳೊಳ್ ಸುೞಿವ ಬಿರಯಿಯಿಂ|
ಕಂಪು ಕಣ್ಮಲೆಯೆ ಪೂತ ಸುರಯಿಯಿಂ||
ಅಲ್ಲಿನ ಉದ್ಯಾನಗಳಲ್ಲಿ ವಿರಹಿಗಳು ಸುತ್ತಿ ಸುಳಿಯುತ್ತಾರೆ; ಅಲ್ಲಿ ಸುರಗಿಯ ಹೂವಿನ ಪರಿಮಳ ತುಂಬಿ ಮನಸೆಳೆಯುತ್ತದೆ.

ಸುತ್ತಲುಂ ಪರಿವ ಜರಿವೊನಲ್ಗಳಿಂ|
ದೆತ್ತಲುಂ ನಲಿವ ಪೊಸ ನವಿಲ್ಗಳಿಂ||
ಆ ಊರ ಸುತ್ತಲೂ ಝರಿಯ ಹೊನಲುಗಳಿವೆ; ಅಲ್ಲಿ ನವಿಲುಗಳು ಕುಣಿಯುತ್ತವೆ.

ಬೆಳೆದು ಮಗಮಗಿಪ ಗಂಧಶಾಳಿಯಿಂ|
ದಲ್ಲಿ ಸುಱಿವ ಗಿಳಿವಿಂಡಿನೋಳಿಯಿಂ||
ಅಲ್ಲಿ ಗಮಗಮಿಸುವ ಬತ್ತ ಬೆಳೆಯುವ ಗದ್ದೆಗಳಿವೆ; ಆ ಗದ್ದೆಗಳಲ್ಲಿ ಗಿಳಿಗಳು ಹಿಂಡುಹಿಂಡಾಗಿ ಹಾರಾಡುತ್ತವೆ.

ಈಂಟುಜಳಧಿಯೆನಿಪಗೞ ನೀಳ್ಪಿನಿಂ|
ನೆಗೆದು ಸೊಗಯಿಸುವ ಕೋಂಟೆಯೊಳ್ಪಿನಿಂ||
(ಈಂಟು ಜಳಧಿ ಎನಿಪ ಅಗೞ)
ಅಲ್ಲಿ ಕಡಲವಿಸ್ತಾರದ ಕುಡಿನೀರು ತುಂಬಿದ ಕಂದಕಗಳಿವೆ; ಎತ್ತರಕ್ಕೆ ಎದ್ದುನಿಂತ ಚೆಂದದ ಕೋಟೆಗಳಿವೆ.

ವಿವಿಧ ದೇವ ಗೃಹದಾಟಪಾಟದಿಂ|
ಮಱುಗಿ ಬಟ್ಟೆಯರ ನೋೞ್ಪ ನೋಟದಿಂ||
ಅಲ್ಲಿ ಬಗೆಬಗೆಯ ಹಾಡು ಕುಣಿತಗಳ ದೇವಾಲಯಗಳಿವೆ; ದಾರಿಹೋಕರನ್ನು ಕುತೂಹಲದ ಕಣ್ಣುಗಳು ಗಮನಿಸುತ್ತವೆ.

ಪಂಚರತುನದೊಳೆ ನೆರೆದ ಪಸರದಿಂ|
ತೋರಣಂಗಳೊಳೆ ತೊಡರ್ದ ತಿಸರದಿಂ||
ಅಲ್ಲಿ ಪಂಚರತ್ನಗಳನ್ನು ಮಾರುವ ಅಂಗಡಿಗಳಿವೆ; ಆ ಅಂಗಡಿಗಳ ತೋರಣದಲ್ಲಿ ಮೂರೆಳೆಯ ಸರಗಳಿವೆ.

ಧನದರನ್ನರಿವರೆನಿಪ ಪರದರಿಂ|
ದೇವರನ್ನರಿವರೆನಿಪ ಬಿರುದರಿಂ||
(ಧನದರ ಅನ್ನರ್ ಎನಿಪ…. ದೇವರ ಅನ್ನರ್ ಇವರ್ ಎನಿಪ)
ಅಲ್ಲಿ ಕುಬೇರರಂಥ ವ್ಯಾಪಾರಿಗಳಿದ್ದಾರೆ; ದೇವರೇ ಇವರು ಎಂಬಂಥ ಬಿರುದು ಗಳಿಸಿದವರಿದ್ದಾರೆ.

ನೆರೆಯೆ ಸೊಗಯಿಪಾ ಯೇಕಚಕ್ರಮಂ|
ಮೆಚ್ಚಿದಂ ಹರಿಗನಮಿತ ವಿಕ್ರಮಂ|| ೨೨||
ಹೀಗೆ ಸುಂದರವಾಗಿ ಸೊಗಯಿಸುವ ಏಕಚಕ್ರ ನಗರವನ್ನು ಅರ್ಜುನನು – ಅರಿಗನು - ಬಹುವಾಗಿ ಮೆಚ್ಚಿಕೊಂಡನು.
ವ||ಅಂತು ಮೆಚ್ಚಿ ತಮ್ಮುತಯ್ವರುಮಿನ್ನವು ಪೊೞಲ್ಗಳಿಲ್ಲೀ ಪೊೞಲ್ಗೆ ನಾಲ್ಕು ಯುಗದೊಳಂ ವಸುಮತಿ ಪದ್ಮನಗರಮೇಕಚಕ್ರಂ ಬಹುಧಾನ್ಯಮೆಂಬ ನಾಲ್ಕು ಪೆಸರಾದುದೆಂದು ಮನಂಗೊಂಡು ನೋಡುತ್ತುಂ ಬಂದು ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಶಾಲೆಯೊಳ್ ಬೀಡಂ ಬಿಟ್ಟು ಧರಾಮರ ವೇಷದೊಳೊಂದು ವರುಷಮಿರ್ಪನ್ನೆಗಮೊಂದುದಿವಸಂ-
(ಅಂತು ಮೆಚ್ಚಿ ತಮ್ಮುತಯ್ವರುಂ ‘ಇನ್ನವು ಪೊೞಲ್ಗಳ್ ಇಲ್ಲ. ಈ  ಪೊೞಲ್ಗೆ ನಾಲ್ಕು ಯುಗದೊಳಂ ವಸುಮತಿ,  ಪದ್ಮನಗರಂ, ಏಕಚಕ್ರಂ, ಬಹುಧಾನ್ಯಂ ಎಂಬ ನಾಲ್ಕು ಪೆಸರಾದುದು’ ಎಂದು ಮನಂಗೊಂಡು ನೋಡುತ್ತುಂ ಬಂದು, ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಶಾಲೆಯೊಳ್ ಬೀಡಂ ಬಿಟ್ಟು, ಧರಾಮರ ವೇಷದೊಳ್ ಒಂದು ವರುಷಂ ಇರ್ಪನ್ನೆಗಂ ಒಂದು ದಿವಸಂ)
ಕಂ|| ತುಂಬಿದ ರಕ್ತತೆಯಿಂ ನಿಜ
     ಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆ|
     ಟ್ಟಂಬೋಲ್ ತೇಜಂ ಮಸುಳ್ವಿನ
     ಮಂಬರಮಂ ಬಿಸುಟನಾಗಳಂಬುಜಮಿತ್ರಂ|| ೨೩||
(ತುಂಬಿದ ರಕ್ತತೆಯಿಂ ನಿಜಬಿಂಬಂ ವಾರುಣಿಯನ್ ಒಸೆದು ಸೇವಿಸೆ ನಾಣ್ಗೆಟ್ಟಂಬೋಲ್ ತೇಜಂ ಮಸುಳ್ವಿನಂ ಅಂಬರಮಂ ಬಿಸುಟನ್ ಆಗಳ್ ಅಂಬುಜಮಿತ್ರಂ)
ಈ ಪದ್ಯದಲ್ಲಿ ಶ್ಲೇಷಾಲಂಕಾರವಿದೆ.
ಅರ್ಥ ೧:
ಸಂಜೆಯ ಹೊತ್ತಿನಲ್ಲಿ ಕೆಂಪಾದ ಸೂರ್ಯನು ಆಕಾಶವನ್ನು ತೊರೆದು ಪಡುಗಡಲಿನಲ್ಲಿ ಮುಳುಗಿ ತನ್ನ ತೇಜಸ್ಸನ್ನು ಕಳೆದುಕೊಂಡನು.
ಅರ್ಥ ೨:
(ಕುಡುಕನೊಬ್ಬ) ಅತಿಯಾಗಿ ಹೆಂಡ ಕುಡಿದು, ನಾಚಿಕೆಗೆಟ್ಟು ತನ್ನ ಬಟ್ಟೆಗಳನ್ನು ಕಳಚಿ ಬಿಸಾಡಿದನು. (ಹೀಗೆ ಮಾಡಿ) ಅವನು ತನ್ನ ಮರ್ಯಾದೆಯನ್ನು ಕಳೆದುಕೊಂಡನು.

ಸಂಜೆಯ ಹೊತ್ತಿನಲ್ಲಿ ಕೆಂಪಾದ ಸೂರ್ಯನು ಆಕಾಶವನ್ನು ತೊರೆದು ಪಡುಗಡಲಿನಲ್ಲಿ ಮುಳುಗಿ ತನ್ನ ತೇಜಸ್ಸನ್ನು ಕಳೆದುಕೊಂಡನು.
(ಟಿಪ್ಪಣಿ: ಈ ಪದ್ಯಕ್ಕೆ ವಿಶೇಷ ಮಹತ್ವವೇನೂ ಕಾಣುವುದಿಲ್ಲ. ಸೂರ್ಯನನ್ನೂ ಕುಡುಕನನ್ನೂ ಶ್ಲೇಷಾಲಂಕಾರದ ಮೂಲಕ ಒಟ್ಟುಮಾಡಿರುವುದರ ಔಚಿತ್ಯವೂ ತಿಳಿಯುವುದಿಲ್ಲ.
‘ಅಂಬುಜಮಿತ್ರ’ ಎಂದರೆ ಸಾಮಾನ್ಯವಾದ ಅರ್ಥ ‘ಸೂರ್ಯ’ ಎಂದೇ. ಆ ಶಬ್ದಕ್ಕೆ ‘ಕುಡುಕ’ ಎಂದೂ ಅರ್ಥ ಮಾಡದಿದ್ದರೆ ಪದ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತೇವೆ. ಆದರೆ ‘ಅಂಬುಜಮಿತ್ರ’ ಶಬ್ದಕ್ಕೆ ‘ಕುಡುಕ’ ಎಂದು ಅರ್ಥ ಮಾಡುವುದು ಹೇಗೆ? ಕವಿ ಬದುಕಿದ್ದ ಕಾಲದಲ್ಲಿ ‘ಕುಡುಕ’ ಎಂಬ ಅರ್ಥದಲ್ಲಿ ‘ಅಂಬುಜಮಿತ್ರ’ವು ಪ್ರಯೋಗದಲ್ಲಿದ್ದಿರಬಹುದೆ? ಮದ್ಯವನ್ನು ಹುಳಿ ಬರಿಸುವುದಕ್ಕಾಗಿಯೋ, ಮತ್ತಾವುದೋ ಉದ್ದೇಶಕ್ಕಾಗಿಯೋ, ಕೆಸರು ಮಣ್ಣಿನಲ್ಲಿ ಹೂತಿಡುವ ವಿಧಾನವು ಕೆಲವು ಕಡೆಗಳಲ್ಲಿ ಬಳಕೆಯಲ್ಲಿದೆಯಂತೆ. ಅದು ಹೌದಾದರೆ, ಆಗ ‘ಅಂಬುಜಮಿತ್ರ’ ಎಂದರೆ ‘ಕುಡುಕ’ ಎಂದು ಅರ್ಥ ಮಾಡಬಹುದು. ‘ಅಂಬುಜ’ ಎಂದರೆ ಕೆಸರಿನಲ್ಲಿ ಹುಟ್ಟಿದ್ದು ಎಂದು ಅರ್ಥವಷ್ಟೆ?)
ವ|| ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರಾರ್ಜುನ ನಕುಲ ಸಹದೇವರ್ ಪೋದರನ್ನೆಗಮಿತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಪಾಂತದೊಳ್-
(ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರ, ಅರ್ಜುನ, ನಕುಲ-ಸಹದೇವರ್ ಪೋದರ್. ಅನ್ನೆಗಂ ಇತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಪಾಂತದೊಳ್)
ಆಗ ಸಂಧ್ಯಾವಂದನೆಗಾಗಿ ಧರ್ಮರಾಜ ಅರ್ಜುನ ನಕುಲ ಸಹದೇವರು ಹೋದರು. ಅಷ್ಟರಲ್ಲಿ ಇತ್ತ ಬೀಡಿನಲ್ಲಿದ್ದ ಕುಂತಿ ಮತ್ತು ಭೀಮನ ಕಿವಿಗೆ-

ಕಂ|| ಸಾರೆಯೊಳೞ್ವ ಮಹಾ ದ್ವಿಜ
     ನಾರಿಯ ಮಮತಾವಿಪೂರಿತೋರ್ಜಿತ ರವದಿಂ|
     ಕಾರುಣ್ಯಾಕ್ರಂದನಮನಿ
     ವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್|| ೨೪||
(ಸಾರೆಯೊಳ್ ಅೞ್ವ ಮಹಾ ದ್ವಿಜನಾರಿಯ ಮಮತಾವಿಪೂರಿತ ಊರ್ಜಿತ ರವದಿಂ     ಕಾರುಣ್ಯ ಆಕ್ರಂದನಂ, ಅನಿವಾರಿತಂ, ಒರ್ಮೊದಲೆ ಬಂದು ತೀಡಿತ್ತಾಗಳ್)
ಹತ್ತಿರದಲ್ಲಿಯೇ (ಇದ್ದ ಮನೆಯಿಂದ) ಬ್ರಾಹ್ಮಣ ಹೆಂಗಸೊಬ್ಬಳು ಕರುಣೆ ಹುಟ್ಟುವ ಹಾಗೆ ಜೋರಾಗಿ, ಬಿಡದೆ, ಅಳುತ್ತಿರುವ ಶಬ್ದವು ಕೇಳಿಬಂದಿತು.
ವ|| ಅದಂ ಕೇಳ್ದೇನಾನುಮೊಂದು ಕಾರಣಮಾಗಲೆವೇೞ್ಕುಮೀ ಪುಯ್ಯಲನಾರಯ್ದು ಬರ್ಪೆನೆಂದು ಭೀಮನನಿರಿಸಿ ಕೊಂತಿ ತಾನೆ ಪೋಗಿ-
(ಅದಂ ಕೇಳ್ದು, ‘ಏನಾನುಂ ಒಂದು ಕಾರಣಂ ಆಗಲೆವೇೞ್ಕುಂ, ಈ ಪುಯ್ಯಲನ್ ಆರಯ್ದು ಬರ್ಪೆನ್’ ಎಂದು ಭೀಮನನ್ ಇರಿಸಿ ಕೊಂತಿ ತಾನೆ ಪೋಗಿ,)
ಅದನ್ನು ಕೇಳಿ, ‘ಇದಕ್ಕೆ ಏನಾದರೂ ಒಂದು ಕಾರಣವಿರಲೇಬೇಕು. ಯಾಕೆ ಈ ಗೋಳಾಟವೆಂದು ವಿಚಾರಿಸಿಕೊಂಡು ಬರುತ್ತೇನೆ’ ಎಂದು ಭೀಮನನ್ನು ಅಲ್ಲಿಯೇ ಬಿಟ್ಟು ಕುಂತಿಯು ತಾನೇ ಹೋಗಿ-
ಚಂ|| ಅೞೆ ಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾ
     ಯೞಿದು ಕೊರಲ್ಗೆ ಪಾಯ್ದು ಪರಿದಾಡುವ ಬಾಲಕನಾದ ಶೋಕದಿಂ|
     ಗೞಗೞ ಕಣ್ಣನೀರ್ ಸುರಿಯೆ ಚಿಂತಿಪ ಪಾರ್ವನ ಶೋಕದೊಂದು ಪೊಂ
     ಪುೞಿಯನೆ ನೋಡಿ ನಾಡೆ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ|| ೨೫||
(ಅೞೆ ಕುಡಲಾದ ಕೂಸು, ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾಯೞಿದು, ಕೊರಲ್ಗೆ ಪಾಯ್ದು ಪರಿದಾಡುವ ಬಾಲಕನ್ ಆದ ಶೋಕದಿಂ ಗೞಗೞ ಕಣ್ಣನೀರ್ ಸುರಿಯೆ, ಚಿಂತಿಪ ಪಾರ್ವನ ಶೋಕದೊಂದು ಪೊಂಪುೞಿಯನೆ ನೋಡಿ, ನಾಡೆ ಕರುಣಂ ತನಗಾಗಿರೆ, ಕೊಂತಿ ಚಿಂತೆಯಿಂ)
(ಅಲ್ಲಿ ಮದುವೆಯಾಗದ, ಆದರೆ ಮದುವೆಯ ವಯಸ್ಸಿಗೆ ಬಂದ) ಹುಡುಗಿಯೊಬ್ಬಳು ಅಳುತ್ತಿದ್ದಳು; ಹಾರುವನ ಹೆಂಡತಿಯು ನೆಲದಲ್ಲಿ ಹೊರಳುತ್ತಾ, ಬಾಯಿಬಡಿದುಕೊಂಡು ಚೀರಾಡುತ್ತಿದ್ದಳು; ಆಚೀಚೆ ಓಡಾಡುತ್ತಿದ್ದ ತಂದೆಯ ಕೊರಳಿಗೆ ಜೋತುಬಿದ್ದ ಬಾಲಕನು ಕಣ್ಣೀರು ಸುರಿಸುತ್ತಿದ್ದನು; ಬ್ರಾಹ್ಮಣನು ತೀವ್ರವಾಗಿ ದುಃಖಿಸುತ್ತಾ ಚಿಂತಾಕ್ರಾಂತನಾಗಿದ್ದನು. (ಇದೆಲ್ಲವನ್ನೂ ಕಂಡು) ಕುಂತಿಯ ಮನಸ್ಸಿನಲ್ಲಿ ಕರುಣೆಯು ಉಕ್ಕಿ ಬಂತು. ಅವಳು ಚಿಂತೆಯಿಂದ
ವ|| ನಿನಗಿಂತೀ ಪಿರಿದು ಶೋಕಮೆಂತಾದುದೆಂಬುದುಮಾ ಪಾರ್ವಂ ಕೊಂತಿಗಿಂತೆಂದಂ ಬಕನೆಂಬನೊರ್ವಸುರನೀ ಪೊೞಲ ತೆಂಕಣ ಬೆಟ್ಟದೊಳಿರ್ಪನಾತಂಗೆ ನಿಚ್ಚಮೊಂದು ಮನೆಯೊಳೆರಡೆಮ್ಮೆವೋಱಿಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂೞುಮನದರ್ಕೆ ತಕ್ಕ ಪರಿಕರಮುಮನೊರ್ವ ಮಾನಸಂ ಕೊಂಡು ಪೋಪನಂತಾತಂಬೆರಸದೆಲ್ಲಮಂ ತಿಂದು ತಣಿಯದೆ ಪಲ್ಲಂ ತಿಂಬನದೊಂದು ದಿವಸ ತಪ್ಪಿದೊಡೀ ಪೊೞಲನಿತುಮಂ ತಿಂಬಂ ನಾಳಿನ ಬಾರಿಯೆಮ್ಮ ಮೇಲೆ ಬಂದುದೆಮ್ಮ ಮನೆಯೊಳಾನುಮೆಮ್ಮ ಧರ್ಮಪತ್ನಿಯುಂ ಮಗನುಂ ಮಗಳುಮಿಂತೀ ನಾಲ್ವರೆ ಮಾನಸರೆಮ್ಮ ಪೆಂಡತಿಯನೀವೆನೆಪ್ಪೊಡಾಕೆಯಿಂ ಬೞಿಯಿಮೀ ಕೂಸುಗಳಂ ನಡಪುವರಿಲ್ಲ ಮಗಳನೀವೆನಪ್ಪೊಡೆ ಕೊಡಗೂಸೆಂಬುದು ಪೆಱರೊಡವೆ ಮಗನನೀವೆನಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಮಕ್ಕುಮದಱಿಂದೆನ್ನನೆ ಕುಡಲ್ವೇೞ್ಕುಮೆಂಬುದುಂ ಕೊಂತಿಯಿಂತೆಂದಳ್-
 (‘ನಿನಗೆ ಇಂತು ಈ ಪಿರಿದು ಶೋಕಂ ಎಂತಾದುದು?’ ಎಂಬುದುಂ ಆ ಪಾರ್ವಂ ಕೊಂತಿಗೆ ಇಂತೆಂದಂ: ‘ಬಕನೆಂಬನ್ ಒರ್ವ ಅಸುರನ್ ಈ ಪೊೞಲ ತೆಂಕಣ ಬೆಟ್ಟದೊಳ್ ಇರ್ಪನ್. ಆತಂಗೆ ನಿಚ್ಚಂ ಒಂದು ಮನೆಯೊಳ್ ಎರಡು ಎಮ್ಮೆವೋಱಿಯೊಳ್ ಪೂಡಿದ ಪನ್ನಿರ್ಕಂಡುಗದ ಅಕ್ಕಿಯ ಕೂೞುಮನ್ ಅದರ್ಕೆ ತಕ್ಕ ಪರಿಕರಮುಮನ್ ಒರ್ವ ಮಾನಸಂ ಕೊಂಡು ಪೋಪನ್. ಅಂತು ಆತಂ ಬೆರಸು ಅದೆಲ್ಲಮಂ ತಿಂದು ತಣಿಯದೆ ಪಲ್ಲಂ ತಿಂಬನ್. ಅದು ಒಂದು ದಿವಸಂ ತಪ್ಪಿದೊಡೆ ಈ ಪೊೞಲ್ ಅನಿತುಮಂ ತಿಂಬಂ. ನಾಳಿನ ಬಾರಿ ಎಮ್ಮ ಮೇಲೆ ಬಂದುದು. ಎಮ್ಮ ಮನೆಯೊಳ್ ಆನುಂ, ಎಮ್ಮ ಧರ್ಮಪತ್ನಿಯುಂ, ಮಗನುಂ, ಮಗಳುಂ ಇಂತೀ ನಾಲ್ವರೆ ಮಾನಸರ್. ಎಮ್ಮ ಪೆಂಡತಿಯನ್ ಈವೆನ್ ಅಪ್ಪೊಡೆ ಆಕೆಯಿಂ ಬೞಿಯಿಂ ಈ ಕೂಸುಗಳಂ ನಡಪುವರಿಲ್ಲ.  ಮಗಳನ್ ಈವೆನ್ ಅಪ್ಪೊಡೆ ಕೊಡಗೂಸು ಎಂಬುದು ಪೆಱರ ಒಡವೆ. ಮಗನನ್ ಈವೆನ್ ಅಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಂ ಅಕ್ಕುಂ. ಅದಱಿಂ ಎನ್ನನೆ ಕುಡಲ್ವೇೞ್ಕುಂ’ ಎಂಬುದುಂ ಕೊಂತಿ ಇಂತೆಂದಳ್)
‘ನಿನಗೆ ಇಂತಹ ಹಿರಿದಾದ ದುಃಖವು ಹೇಗೆ ಉಂಟಾಯಿತು?’ ಎಂದಾಗ ಆ ಹಾರುವನು ಕುಂತಿಗೆ ಹೀಗೆಂದನು: ‘ಈ ಊರಿನ ದಕ್ಷಿಣಕ್ಕಿರುವ ಬೆಟ್ಟದಲ್ಲಿ ಬಕನೆಂಬ ಒಬ್ಬ ರಾಕ್ಷಸನಿದ್ದಾನೆ. ಅವನಿಗೆ ನಿತ್ಯವೂ ಒಂದು ಮನೆಯಿಂದ ಎರಡು ಕೋಣಗಳನ್ನು ಹೂಡಿದ (ಗಾಡಿಯಲ್ಲಿ) ಹನ್ನೆರಡು ಖಂಡುಗ ಅಕ್ಕಿಯ ಅನ್ನವನ್ನೂ ಅದಕ್ಕೆ ತಕ್ಕ ಮೇಲೋಗರಗಳನ್ನೂ ಒಬ್ಬ ಮನುಷ್ಯನು ತೆಗೆದುಕೊಂಡು ಹೋಗುತ್ತಾನೆ. ರಾಕ್ಷಸನು ಆ ಮನುಷ್ಯನೂ ಸೇರಿದಂತೆ ಅದೆಲ್ಲವನ್ನೂ ತಿಂದು, ಸಾಕಾಗದೆ, ಹಲ್ಲು ಕಡಿಯುತ್ತಾನೆ! ಇದು ಒಂದು ದಿವಸ ತಪ್ಪಿದರೂ ಅವನು ಇಡೀ ಊರನ್ನೇ ನುಂಗಿಬಿಡುತ್ತಾನೆ. ನಾಳೆಯ ಸರದಿ ನಮ್ಮ ಮೇಲೆ ಬಂದಿದೆ. ನಮ್ಮ ಮನೆಯಲ್ಲಿ ನಾನು, ನನ್ನ ಧರ್ಮಪತ್ನಿ, ಮಗ, ಮಗಳು ಹೀಗೆ ನಾಲ್ಕೇ ಜನ ಇರುವುದು. ನನ್ನ ಹೆಂಡತಿಯನ್ನು ಕೊಡುವೆನೆಂದರೆ, ಆಕೆ ಹೋದ ಮೇಲೆ ಈ ಮಕ್ಕಳನ್ನು ಸಾಕುವವರಿಲ್ಲ. ಮಗಳನ್ನು ಕೊಡುವೆನೆಂದರೆ ಎಳೆಯ ಹೆಣ್ಣು ಬೇರೊಬ್ಬರ ವಸ್ತು. (ಎಂದರೆ ಮದುವೆಯಾಗಿ ಬೇರೊಬ್ಬರ ಮನೆಗೆ ಹೋಗಬೇಕಾದವಳು.) ಮಗನನ್ನು ಕೊಡುವೆನೆಂದರೆ ನನ್ನ ಸಂತತಿ ತುಂಡಾಗುತ್ತದೆ, ನನಗೆ ಪಿಂಡ ಹಾಕುವವರು ಇಲ್ಲವಾಗುತ್ತದೆ. ಹಾಗಾಗಿ ನಾನೇ ಹೋಗಬೇಕಾಗಿದೆ’ ಎಂದಾಗ ಕುಂತಿಯು ಹೀಗೆಂದಳು:
ಕಂ|| ನಿಮ್ಮೀ ನಾಲ್ವರೊಳೊರ್ವರು
     ಮಿಮ್ಮಿಡುಕಲ್ವೇಡ ಮಕ್ಕಳೊಳರೆನಗಯ್ವರ್|
     ತಮ್ಮೊಳಗೆಸೆವಯ್ವರೊಳಂ
     ನಾಮ್ಮಾಣದೆ ಬಕನ ಬಾರಿಗೊರ್ವನನೀವೆಂ|| ೨೬||
(‘ನಿಮ್ಮೀ ನಾಲ್ವರೊಳ್ ಒರ್ವರುಂ ಇಂ ಮಿಡುಕಲ್ ಬೇಡ, ಮಕ್ಕಳ್ ಒಳರ್ ಎನಗೆ ಅಯ್ವರ್;    ತಮ್ಮೊಳಗೆ ಎಸೆವ ಅಯ್ವರೊಳಂ ನಾಂ ಮಾಣದೆ ಬಕನ ಬಾರಿಗೆ ಒರ್ವನನ್ ಈವೆಂ’)
‘ನೀವು ನಾಲ್ವರಲ್ಲಿ ಯಾರೊಬ್ಬರೂ ಇನ್ನು ಹೆದರದಿರಿ! ನನಗೆ ಐವರು ಮಕ್ಕಳಿದ್ದಾರೆ! ಧೀರರಾದ ಅವರ ಪೈಕಿ ಒಬ್ಬನನ್ನು ನಾನು ಬಕನ ಬಳಿಗೆ ಕಳಿಸಿಕೊಡುತ್ತೇನೆ!’ ಎಂದಳು.
ವ||ಎಂಬುದುಂ ಪಾರ್ವನಿಂತೆನಲ್ವೇಡ ಮಕ್ಕಳೊಳಾದ ಮೋಹಮೆಲ್ಲಾ ಜೀವಕ್ಕಂ ಸಮಾನಮೆಂಬುದುಂ ನೀಮಱೆಯಿರುಸಿರದಿರಿಮದರ್ಕೆ ತಕ್ಕ ಸವಕಟ್ಟಂ ಮಾಡಿಮೆಂದು ಬಂದು ತದ್ವೃತ್ತಾಂತಮೆಲ್ಲಮಂ ಭೀಮಸೇನಂಗಱಿಪಿದೊಡೆ ನಾಳಿನುಣಿಸನೆನಗೆ ದೊರೆಕೊಳಿಸಿ ಬಂದುದು ಕರಮೊಳ್ಳಿತಾಯ್ತೆಂದು ನಗುತಿರ್ಪನ್ನೆಗಂ ಮತ್ತಿನ ನಾಲ್ವರುಂ ಬಂದು ತದ್ವೃತ್ತಾಂತಮೆಲ್ಲಮಂ ಕೇಳ್ದು ನಮಗೀ ಪೊೞಲೊಳೊಂದು ಪರೋಪಕಾರಾರ್ಥಂ ಸಯ್ಪಿನಿಂ ದೊರೆಕೊಂಡುದೆಂದಿರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂ-
ಎಂಬುದುಂ, ಪಾರ್ವನ್ ‘ಇಂತು ಎನಲ್ವೇಡ! ಮಕ್ಕಳೊಳ್ ಆದ ಮೋಹಂ ಎಲ್ಲಾ ಜೀವಕ್ಕಂ ಸಮಾನಂ’ ಎಂಬುದುಂ, ‘ನೀಮಱೆಯಿರಿ! ಉಸಿರದಿರಿಂ. ಅದರ್ಕೆ ತಕ್ಕ ಸವಕಟ್ಟಂ ಮಾಡಿಂ’ ಎಂದು ಬಂದು ತದ್ವೃತ್ತಾಂತಮೆಲ್ಲಮಂ ಭೀಮಸೇನಂಗೆ ಅಱಿಪಿದೊಡೆ ‘ನಾಳಿನ ಉಣಿಸನ್ ಎನಗೆ ದೊರೆಕೊಳಿಸಿ ಬಂದುದು ಕರಂ ಒಳ್ಳಿತಾಯ್ತು’ ಎಂದು ನಗುತಿರ್ಪನ್ನೆಗಂ, ಮತ್ತಿನ ನಾಲ್ವರುಂ ಬಂದು ತದ್ವೃತ್ತಾಂತಮೆಲ್ಲಮಂ ಕೇಳ್ದು ‘ನಮಗೆ ಈ ಪೊೞಲೊಳ್ ಒಂದು ಪರೋಪಕಾರಾರ್ಥಂ ಸಯ್ಪಿನಿಂ ದೊರೆಕೊಂಡುದು’ ಎಂದು ಇರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂ-)
ಎಂದಾಗ ಹಾರುವನು ‘ಹೀಗೆನ್ನಬೇಡ! ಮಕ್ಕಳ ಮೋಹವು ಎಲ್ಲ ಜೀವಿಗಳಿಗೂ ಸಮಾನವಾದುದು’ ಎಂದನು. ಕುಂತಿಯು ‘ನಿಮಗೆ ಗೊತ್ತಿಲ್ಲ॒! ಸುಮ್ಮನಿರಿ! (ನೀವು) ನಾಳೆಗೆ ಬೇಕಾದ ಏರ್ಪಾಟುಗಳನ್ನು ಮಾಡಿ’ ಎಂದು ಹೇಳಿ, (ತನ್ನ ಮನೆಗೆ) ಬಂದು ಆ ಸಂಗತಿ ಎಲ್ಲವನ್ನೂ ಭೀಮಸೇನನಿಗೆ ತಿಳಿಸಿದಾಗ ಅವನು ‘ನಾಳಿನ ಊಟವನ್ನು ನನಗೆ ಸಿಗುವಂತೆ ಮಾಡಿಬಂದುದು ತುಂಬಾ ಒಳ್ಳೆಯದಾಯಿತು!’ ಎಂದು ನಗುತ್ತಿದ್ದನು. ಆಗ ಉಳಿದ ನಾಲ್ವರೂ ಬಂದು, ಎಲ್ಲ ಸಂಗತಿಯನ್ನೂ ಕೇಳಿ, ‘ನಮಗೆ ಈ ಊರಿನಲ್ಲಿ ಒಂದು ಪರೋಪಕಾರ ಮಾಡುವ ಅವಕಾಶವು ಪುಣ್ಯದಿಂದ ಸಿಕ್ಕಿತು’ ಎಂದು ರಾತ್ರಿಯೆಲ್ಲವೂ ಬಕನ ಸಮಾಚಾರವನ್ನೇ ಮಾತಾಡುತ್ತಿದ್ದಾಗ-
ಕಂ|| ಓಡೆ ತಮೋಬಳಮಗಿದ
     ಳ್ಳಾಡೆ ನಿಶಾಚರಬಲಂ ರಥಾಂಗಯುಗಂಗಳ್|
     ಕೂಡೆ ಬಗೆ ಕೂಡೆ ನೇಸಱ್
     ಮೂಡಿದುದು ಬಕಂಗೆ ಮಿೞ್ತು ಮೂಡುವ ತೆಱದಿಂ|| ೨೭||
(ಓಡೆ ತಮೋಬಳಂ, ಅಗಿದು ಅಳ್ಳಾಡೆ ನಿಶಾಚರಬಲಂ, ರಥಾಂಗಯುಗಂಗಳ್ ಕೂಡೆ ಬಗೆ ಕೂಡೆ, ನೇಸಱ್ ಮೂಡಿದುದು ಬಕಂಗೆ ಮಿೞ್ತು ಮೂಡುವ ತೆಱದಿಂ)
ಕತ್ತಲೆಯು ಓಡಿ ಹೋಯಿತು. ನಿಶಾಚರರು ಹೆದರಿ ಓಡಿದರು. ಚಕ್ರವಾಕ ಪಕ್ಷಿಗಳು ಜೊತೆಗೂಡುವ ಒಲವು ತೋರಿದವು. ಮೂಡು ದಿಕ್ಕಿನಲ್ಲಿ, ಬಕನಿಗೆ ಸಾವು ಹುಟ್ಟುವ ಹಾಗೆ ಸೂರ್ಯನು ಮೂಡಿದನು.
ವ|| ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೋಱಲೆಂದು ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂೞಂ ಕೆಯ್ಕೊಂಡು ನಿಲ್ವುದುಂ ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ ಪೊೞಲಿಂ ಬಂಡಿಯನಟ್ಟಿಕೊಂಡು ರಕ್ಕಸನಿರ್ದೆಡೆಗೆಯ್ತಂದು-
(ಆಗಳ್ ಸಾಹಸಭೀಮಂ, ತನ್ನ ಸಾಹಸಮಂ ತೋಱಲೆಂದು, ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂೞಂ ಕೆಯ್ಕೊಂಡು ನಿಲ್ವುದುಂ, ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ, ಪೊೞಲಿಂ ಬಂಡಿಯನ್ ಅಟ್ಟಿಕೊಂಡು ರಕ್ಕಸನ್ ಇರ್ದ ಎಡೆಗೆ ಎಯ್ತಂದು)
ಆಗ ಸಾಹಸಭೀಮನು ತನ್ನ ಸಾಹಸವನ್ನು ತೋರಿಸಲೆಂದು, ಹಾರುವನ ಮನೆಯ ಮುಂದೆ ಸಜ್ಜಾಗಿ ನಿಂತಿದ್ದ ಗಾಡಿಯ ಹತ್ತಿರ ಬಂದು ನಿಂತನು. ಹಾರುವನೂ ಅವನ ಮಡದಿಯೂ ಭೀಮನನ್ನು ಹರಸಿ ಮಂತ್ರಾಕ್ಷತೆ ಹಾಕಿ ಕಳಿಸಿಕೊಟ್ಟರು. ಭೀಮನು ಊರಿನಿಂದ ಬಂಡಿಯನ್ನು ಅಟ್ಟಿಕೊಂಡು ರಾಕ್ಷಸನಿದ್ದಲ್ಲಿಗೆ ಬಂದು-


ಕಾಮೆಂಟ್‌ಗಳಿಲ್ಲ: