ಭಾನುವಾರ, ಜೂನ್ 10, 2018

ಪಂಪಭಾರತ ಆಶ್ವಾಸ ೧

ಪದ್ಯಗಳು: ೫೯ರಿಂದ ೭೪





ಕಂ|| ಜಳರುಹನಾಭನ ನಾಭಿಯ |
     ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋ ||
     ಲ್ಲುಳಿತಾಳಿ ಜಲ[ಜ]ಮಾಯ್ತಾ |
     ಜಳ[ಜ]ದೊಳೊಗೆದಂ ಹಿರಣ್ಯಗರ್ಭ ಬ್ರಹ್ಮಂ ||೫೯||
(ಜಳರುಹನಾಭನ ನಾಭಿಯ ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋಲ್ಲುಳಿತಾಳಿ ಜಲಜಮಾಯ್ತು, ಆ  ಜಳಜದೊಳ್ ಒಗೆದಂ ಹಿರಣ್ಯಗರ್ಭ ಬ್ರಹ್ಮಂ.)
ಹೊಕ್ಕುಳುಗಮಲನ (ವಿಷ್ಣುವಿನ) ಹೊಕ್ಕುಳಿನಲ್ಲಿದ್ದ ನೀರಿನ ಗುಳ್ಳೆಯಲ್ಲಿ ಸುರಭಿಯ ಪರಿಮಳದಿಂದ ಕೂಡಿದ, ದುಂಬಿಗಳು ಮುತ್ತಿ ಅಲುಗುತ್ತಿರುವ ಕಮಲವು ಉಂಟಾಯಿತು. ಆ ಕಮಲದಲ್ಲಿ ಹಿರಣ್ಯಗರ್ಭ ಬ್ರಹ್ಮನು ಹುಟ್ಟಿದನು.
ಕಂ|| ಕಮಲೋದ್ಭವನಮಳಿನ ಹೃ |
     ತ್ಕಮಲದೊಳೊಗೆದರ್  ಸುರೇಂದ್ರ ಧಾರಕರಾವಾ ||
     [ಗಮಳರ್] ನೆಗೞ್ದಿರ್ದರ್ ಪುಲ |
     ಹ ಮರೀಚ್ಯತ್ರ್ಯಂಗಿರಃ ಪುಳಸ್ತ್ಯ ಕ್ರತುಗಳ್ ||೬೦||
(ಕಮಲೋದ್ಭವನ ಅಮಳಿನ ಹೃತ್ಕಮಲದೊಳ್ ಒಗೆದರ್  ಸುರೇಂದ್ರ ಧಾರಕರಾವಾಗಮಳರ್ ನೆಗೞ್ದು  ಇರ್ದರ್ ಪುಲಹ, ಮರೀಚಿ, ಅತ್ರಿ, ಅಂಗಿರಃ, ಪುಳಸ್ತ್ಯ, ಕ್ರತುಗಳ್.)
ಕಮಲದಲ್ಲಿ ಹುಟ್ಟಿದವನ ಹೃದಯಕಮಲದಿಂದ, ಶ್ರೇಷ್ಠವಾದ ನೀರಿನ ಕಮಂಡಲವನ್ನು ಹಿಡಿದುಕೊಂಡ ಪುಲಹ, ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ ಮತ್ತು ಕ್ರತು ಎಂಬುವವರು ಹುಟ್ಟಿದರು.
(ಇಲ್ಲಿ ‘ಸುರೇಂದ್ರಧಾರಕರ್’ ಎಂಬುದಕ್ಕೆ ಕೊಟ್ಟಿರುವ ‘ಶ್ರೇಷ್ಠವಾದ ನೀರಿನ ಕಮಂಡಲವನ್ನು ಹಿಡಿದುಕೊಂಡ’ ಎಂಬ ಅರ್ಥ ಸಂಶಯಾಸ್ಪದವೆಂದು ಡಿ ಎಲ್ ಎನ್ ಹೇಳುತ್ತಾರೆ.)
ವ|| ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟಿದಱುವರ್ಮಕ್ಕಳೊಳಗೆ ಮರೀಚಿಯ ಮಗಂ ಕಶ್ಯಪನನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನಾತನ ಮಗನವಾರ್ಯವೀರ್ಯಂ ಸೂರ್ಯನಾತನಿಂದವ್ಯವಚ್ಛಿನ್ನಮಾಗಿ ಬಂದ ವಂಶಂ ಸೂರ್ಯವಂಶಮೆಂಬುದಾಯ್ತು-
(ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟಿದ ಅಱುವರ್ ಮಕ್ಕಳೊಳಗೆ, ಮರೀಚಿಯ ಮಗಂ ಕಶ್ಯಪನ್ ಅನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನ್ ಆದನ್. ಆತನ ಮಗನ್  ಅವಾರ್ಯವೀರ್ಯಂ ಸೂರ್ಯನ್. ಆತನಿಂದ ಅವ್ಯವಚ್ಛಿನ್ನಮಾಗಿ ಬಂದ ವಂಶಂ ಸೂರ್ಯವಂಶಂ ಎಂಬುದಾಯ್ತು.)
ಹಾಗೆ ಹಿರಣ್ಯಗರ್ಭನ ಮನಸ್ಸಿನಿಂದ ಹುಟ್ಟಿದ ಆರು ಮಕ್ಕಳಲ್ಲಿ ಮರೀಚಿಯ ಮಗನಾದ ಕಶ್ಯಪನು ಅನೇಕ ನಾಟಕಗಳಿಗೆ ಸೂತ್ರಧಾರನಾದನು. ಆತನ ಮಗನೇ ಸೂರ್ಯ. ಆ ಸೂರ್ಯನಿಂದ ಎಳೆ ತುಂಡಾಗದೇ ಬಂದ ವಂಶವೇ ಸೂರ್ಯವಂಶ.
ಕಂ|| ಅತ್ರಿಯ ಪಿರಿಯ ಮಗಂ ಭುವ |
     ನತ್ರಯ ಸಂಗೀತ ಕೀರ್ತಿ ಸೋಮಂ ಸಕಲ ||
     ಕ್ಷತ್ರಕುಲ ಪೂಜ್ಯನಮಳ ಚ |
     ರಿತ್ರಂ ಪ್ರೋದ್ದಾಮ ಸೋಮವಂಶಲಲಾಮಂ ||೬೧||
(ಅತ್ರಿಯ ಪಿರಿಯ ಮಗಂ ಭುವನತ್ರಯ ಸಂಗೀತ ಕೀರ್ತಿ ಸೋಮಂ, ಸಕಲ ಕ್ಷತ್ರಕುಲ ಪೂಜ್ಯನ್, ಅಮಳ  ಚರಿತ್ರಂ, ಪ್ರೋದ್ದಾಮ ಸೋಮವಂಶಲಲಾಮಂ.)
ಅತ್ರಿಯ ಹಿರಿಯ ಮಗನಾದ ಸೋಮನ ಕೀರ್ತಿಯನ್ನು ಮೂರುಲೋಕದ ಜನರೂ ಹಾಡಿ ಹೊಗಳುತ್ತಿದ್ದರು. ಅವನ ಕ್ಷತ್ರಿಯ ಕುಲಕ್ಕೆ ಪೂಜ್ಯ. ಅವನ ಚರಿತ್ರೆ ಚೊಕ್ಕಟವಾದದ್ದು. ಅವನು ಸೋಮವಂಶದ ಹಣೆಗೆ ತಿಲಕದಂತೆ ಇದ್ದನು.
ಕಂ|| ಆ ಸೋಮವಂಶಜರ್ ಪಲ |
     ರಾಸುಕರಂ ಬೆರಸು ನೆಗೞ್ದ ಜಸದಿಂ ಜಗಮಂ ||
     ಬಾಸಣಿಸಿ ಪೋದೊಡಧಿಕ ವಿ |
     ಳಾಸಂ ದೌ[ಷ್ಯ]೦ತಿ ಭರತನೆಂಬಂ ನೆಗೞ್ದಂ ||೬೨||
(ಆ ಸೋಮವಂಶಜರ್ ಪಲರ್ ಆಸುಕರಂ ಬೆರಸು ನೆಗೞ್ದ ಜಸದಿಂ ಜಗಮಂ ಬಾಸಣಿಸಿ ಪೋದೊಡೆ ಅಧಿಕ ವಿಳಾಸಂ ದೌಷ್ಯಂತಿ ಭರತನೆಂಬಂ ನೆಗೞ್ದಂ.)
ಆ ಸೋಮವಂಶದಲ್ಲಿ ಹುಟ್ಟಿದ ಹಲವರು ತೀವ್ರವಾಗಿ ಬದುಕಿ, ಯಶಸ್ಸು ಗಳಿಸಿ ಮರೆಯಾಗಿ ಹೋದರು. ಆ ನಂತರ ದುಷ್ಯಂತನ ಮಗನಾದ ಭರತನು ಪ್ರಸಿದ್ಧನಾದನು.
ಕಂ|| ಚಾರು ಚರಿತ್ರಂ ಭರತನ |
     ಪಾರ ಗುಣಂ ತನ್ನ ಪೆಸರೊಳಮರ್ದೆಸೆಯೆ ಯಶೋ ||
     ಭಾರಂ ಕುಲಮುಂ ಕಥೆಯುಂ |
     ಭಾರತಮೆನೆ ನೆಗೞ್ದನಂತು ನೆಗ[ೞ್ವು]ದು ಭೂಪರ್ ||೬೩||
(ಚಾರು ಚರಿತ್ರಂ ಭರತನ್, ಅಪಾರ ಗುಣಂ, ತನ್ನ ಪೆಸರೊಳ್ ಅಮರ್ದು ಎಸೆಯೆ, ಯಶೋಭಾರಂ ಕುಲಮುಂ ಕಥೆಯುಂ ಭಾರತಂ ಎನೆ ನೆಗೞ್ದನ್, ಅಂತು ನೆಗೞ್ವುದು ಭೂಪರ್.)
ಭರತನು ಶುದ್ಧ ಚರಿತ, ಗುಣವಂತ. ಆತನ ಕುಲ, ಕಥೆ ಎರಡೂ ‘ಭಾರತ’ ಎಂದೇ ಪ್ರಸಿದ್ಧವಾದವು. ರಾಜನು ಪ್ರಸಿದ್ಧನಾಗಬೇಕಾದ್ದು ಹಾಗೆಯೇ!
ಕಂ|| ಭರತನನೇಕಾಧ್ವರ ಭರ |
     ನಿರತಂ ಜಸಮುಳಿಯೆ ಕೞಿಯೆ ಭೂಪರ್ ಪಲರಾ ||
     ದರಿಸಿದ ಧರಣೀಭರಮಂ |
     ಧರಿಯಿಸಿದಂ ಪ್ರತಿಮನೆಂಬನಪ್ರತಿಮ ಬಲಂ ||೬೪||
(ಭರತನ್, ಅನೇಕ ಅಧ್ವರ ಭರ ನಿರತಂ, ಜಸಂ ಉಳಿಯೆ ಕೞಿಯೆ, ಭೂಪರ್ ಪಲರ್ ಆದರಿಸಿದ ಧರಣೀಭರಮಂ ಧರಿಯಿಸಿದಂ ಪ್ರತಿಮನ್ ಎಂಬನ್, ಅಪ್ರತಿಮ ಬಲಂ.)
ಅನೇಕ ಯಾಗ ಯಜ್ಞಗಳನ್ನು ಮಾಡಿ ಕೀರ್ತಿವಂತನಾದ ಭರತನು ಮರಣ ಹೊಂದಿದ ನಂತರ, ಹಲವು ರಾಜರು ಮೋಹಿಸಿದ ಈ ಭೂಮಿಗೆ ಪ್ರತಿಮನೆಂಬುವನು ಅರಸನಾದನು.
ಕಂ|| ಅಂತಾ ಪ್ರತಿಮಂಗೆ ಸುತರ್ |
     ಶಂತನು ಬಾಹ್ಲಿಕ ವಿನೂತ ದೇವಾಪಿಗಳೋ ||
     ರಂತೆ ಧರೆ ಪೊಗೞೆ ನೆಗೞ್ದರ |
     ನಂತ ಬಳರ್ ಪರ ಬಳ ಪ್ರಭೇದನ ಶೌರ್ಯರ್ ||೬೫||
(ಅಂತು, ಆ ಪ್ರತಿಮಂಗೆ ಸುತರ್ ಶಂತನು, ಬಾಹ್ಲಿಕ, ವಿನೂತ, ದೇವಾಪಿಗಳ್ ಓರಂತೆ ಧರೆ ಪೊಗೞೆ ನೆಗೞ್ದರ್,  ಅನಂತ ಬಳರ್, ಪರ ಬಳ ಪ್ರಭೇದನ ಶೌರ್ಯರ್.)
ಆ ಪ್ರತಿಮನಿಗೆ ಶಂತನು, ಬಾಹ್ಲಿಕ, ವಿನೂತ, ದೇವಾಪಿಗಳೆಂಬ ನಾಲ್ವರು ಮಕ್ಕಳು. ಬಹು ಬಲಶಾಲಿಗಳಾದ ಅವರು ಶತ್ರು ಸೈನ್ಯವನ್ನು ಸೀಳುವುದರಲ್ಲಿ ನಿಪುಣರು.
ವ|| ಅವರೊಳಗೆ ದೇವಾಪಿ ನವ ಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ ಪ್ರತಿಮನುಂ ಪ್ರತಾಪ ಪ್ರಸರ ಪ್ರಕಟಪಟುವಾಗಿ ಪಲವು ಕಾಲಮರಸುಗೆಯ್ದು ಸಂಸಾ[ರಾ]ಸಾರತೆಗೆ ಪೇಸಿ ತಪೋವನಕ್ಕಭಿಮುಖನಾಗಲ್ಬಗೆದು –
(ಅವರೊಳಗೆ ದೇವಾಪಿ ನವ ಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ. ಪ್ರತಿಮನುಂ ಪ್ರತಾಪ ಪ್ರಸರ ಪ್ರಕಟಪಟುವಾಗಿ ಪಲವು ಕಾಲಂ ಅರಸುಗೆಯ್ದು ಸಂಸಾರ ಅಸಾರತೆಗೆ ಪೇಸಿ ತಪೋವನಕ್ಕೆ ಅಭಿಮುಖನ್ ಆಗಲ್ ಬಗೆದು)
ಅವರ ಪೈಕಿ ದೇವಾಪಿಯು ತಾರುಣ್ಯ ಶುರುವಾಗುವ ಹೊತ್ತಿನಲ್ಲೇ ತಪಸ್ಸಿಗೆ ಹೊರಟುಹೋದನು. ಪ್ರತಿಮನು ಹಲವು ಕಾಲ ರಾಜ್ಯಭಾರ ಮಾಡಿ, ನೀರಸವಾದ ಸಂಸಾರಕ್ಕೆ ಹೇಸಿ, ತಪೋವನಕ್ಕೆ ಹೋಗಲು ಆಲೋಚಿಸಿ -
ಕಂ|| ಕಂತು ಶರ ಭವ[ನ]ನಾಪ್ರಿಯ |
     ಕಾಂತಾ ಭ್ರೂವಿಭ್ರಮ ಗ್ರಹಾಗ್ರಹವಶದಿಂ ||
     ಭ್ರಾಂತಿಸದುಪಶಾಂತ ಮನಂ |
     ಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ ||೬೬||
(ಕಂತು ಶರ ಭವನಂ ಆ ಪ್ರಿಯ ಕಾಂತಾ ಭ್ರೂವಿಭ್ರಮ ಗ್ರಹಾಗ್ರಹವಶದಿಂ ಭ್ರಾಂತಿಸದೆ, ಉಪಶಾಂತ ಮನಂ, ಶಂತನುಗೆ ಇತ್ತಂ ಸಮಸ್ತ ರಾಜ್ಯಶ್ರೀಯಂ.)
ಮನ್ಮಥನ ಬಾಣಗಳನ್ನು ತನ್ನ ದೇಹವೆಂಬ ಬತ್ತಳಿಕೆಯಲ್ಲಿ ಸೇರಿಸಿಕೊಂಡ (ಮನ್ಮಥನ ಬಾಣಗಳನ್ನು ಅರಗಿಸಿಕೊಂಡ) ಶಾಂತಮನಸ್ಕನಾದ ಆ ಪ್ರತಿಮನು, ಕಾಂತೆಯರ ಹುಬ್ಬಿನ ಚಲನೆ ಎಂಬ ಗ್ರಹಕ್ಕೆ ಬಲಿಬೀಳದೆ ರಾಜ್ಯಸಮಸ್ತವನ್ನೂ ಶಂತನುವಿಗೆ ಬಿಟ್ಟುಕೊಟ್ಟನು.
ಕಂ|| ಶಂತನುಗಮಮಳ ಗಂಗಾ |
     ಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪ ||
     ಭ್ರಾಂತಿಯೊಳೆ ಬಂದು ನಿರ್ಜಿತ |
     ಕಂತುವೆನಲ್ಕಂತು ಪುಟ್ಟಿದಂ ಗಾಂಗೇಯಂ ||೬೭||
(ಶಂತನುಗಂ, ಅಮಳ ಗಂಗಾಕಾಂತೆಗಂ, ಎಂಟನೆಯ ವಸು ವಸಿಷ್ಠನ ಶಾಪ ಭ್ರಾಂತಿಯೊಳೆ ಬಂದು, ನಿರ್ಜಿತ ಕಂತು ಎನಲ್ಕೆ, ಅಂತು ಪುಟ್ಟಿದಂ ಗಾಂಗೇಯಂ.)
ಶಂತನು-ಗಂಗೆಯರಿಗೆ ವಸಿಷ್ಠನ ಶಾಪ ಪಡೆದು ಬಂದು ಎಂಟನೆಯ ವಸುವು ರೂಪಸಂಪನ್ನನಾದ ಗಾಂಗೇಯನೆಂಬ ಮಗನಾಗಿ ಹುಟ್ಟಿದನು.
ವ|| ಅಂತು ಭುವನ ಭವನಕ್ಕೆಲ್ಲಮಾಯಮುಮಳವುಮಱಿವುಮಣ್ಮುಂ ಪುಟ್ಟುವಂತೆ ಪುಟ್ಟಿ ನವಯೌವನಂ ನೆಱೆಯೆ ನೆಱೆಯೆ –
(ಅಂತು ಭುವನ ಭವನಕ್ಕೆಲ್ಲಂ ಆಯಮುಂ, ಅಳವುಂ, ಅಱಿವುಂ, ಅಣ್ಮುಂ ಪುಟ್ಟುವಂತೆ ಪುಟ್ಟಿ, ನವಯೌವನಂ ನೆಱೆಯೆ ನೆಱೆಯೆ)
ಹಾಗೆ, ಗಾಂಗೇಯನು ಲೋಕಕ್ಕೆ ಸಂಪತ್ತು, ಶಕ್ತಿ, ಪರಾಕ್ರಮಗಳು ಹುಟ್ಟುವಂತೆ ಹುಟ್ಟಿ, ನವತಾರುಣ್ಯವು ಪ್ರಾಪ್ತವಾಗಲು -
ಶಾ|| ಸಾಲಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯದ್ವೃಷಸ್ಕಂಧನು |
     ನ್ಮೀಲತ್ಪಂಕಜವಕ್ತ್ರನಾಯತ ಸಮಗ್ರೋರಸ್ಥಳಂ ದೀರ್ಘ ಬಾ ||
     ಹಾಲಂಬಂ ಭುಜವೀರ್ಯ ವಿಕ್ರಮಯುತಂ ಗಂಗಾತ್ಮಜನ್ಮಂ ಜಯ |
     ಶ್ರೀಲೋಲಂ ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ ||೬೮||
(ಸಾಲಪ್ರಾಂಶು, ವಿಶಾಲ ಲೋಲನಯನಂ, ಪ್ರೋದ್ಯತ್ ವೃಷಸ್ಕಂಧನ್, ಉನ್ಮೀಲತ್ ಪಂಕಜವಕ್ತ್ರನ್, ಆಯತ ಸಮಗ್ರ ಉರಸ್ಥಳಂ, ದೀರ್ಘ ಬಾಹಾಲಂಬಂ, ಭುಜವೀರ್ಯ ವಿಕ್ರಮಯುತಂ, ಗಂಗಾತ್ಮಜನ್ಮಂ, ಜಯಶ್ರೀಲೋಲಂ, ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ.)
ಸಾಲವೃಕ್ಷದಂತೆ ಎತ್ತರ; ಅತ್ತಿತ್ತ ಚಲಿಸುವ ವಿಶಾಲ ಕಣ್ಣುಗಳು; ಗೂಳಿಯಂತೆ ಉಬ್ಬಿದ ಹೆಗಲು; ಅರಳಿದ ಕಮಲದಂಥ ಮುಖ; ವಿಸ್ತಾರವಾದ, ಅಗಲವಾದ ಎದೆ; ಉದ್ದನೆಯ ತೋಳುಗಳು; ತೋಳುಗಳ ಬಲದಿಂದ ಗಳಿಸಿದ ಗೆಲುವು; ಗೆಲುವೆಂಬ ಸಂಪತ್ತಿನಲ್ಲಿ ಆಸಕ್ತಿ – ಹೀಗಿದ್ದ ಭೀಷ್ಮನು ಪರಶುರಾಮ ಮುನಿಯಲ್ಲಿ ಬಿಲ್ವಿದ್ಯೆಯನ್ನು ಕಲಿತನು.
ವ|| ಅಂತು ಕಲ್ತು ಮುನ್ನಮೆ ಚಾಪವಿದ್ಯೆಯೊಳಾರಿಂದಮೀತನೆ ಭಾರ್ಗವನೆನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜ ಕಂಠಿಕಾ ಪರಿಕಲಿತ ಕಂಠಲುಂಠನುಮಾಗಿ ಪ್ರಮಾಣ ನಿಜಭುಜ ದಂಡಿತಾರಾತಿ ಮಂಡಲನುಮಾಗಿ ಗಾಂಗೇಯಂ ಸುಖದೊಳರಸುಗೆಯ್ಯುತ್ತಿರ್ಪನ್ನೆಗಮಿತ್ತ ಗಂಗಾದೇಶದೊಳುಪರಿಚರವಸುವೆಂಬರಸಂ ಮುಕ್ತಾವತಿಯೆಂಬ ತೊಱೆಯೊಳ್ ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನಾತಂ ಕಂಡು ಕಣ್ಬೇಟಂಗೊಂಡು ಮದುವೆಯಂ ನಿಂದೊಂದು ದಿವಸಮಿಂದ್ರನೋಲಗಕ್ಕೆ ಪೋಗಿ ಋತುಕಾಲಪ್ರಾಪ್ತೆಯಾಗಿದ್ದ ನಲ್ಲಳಲ್ಲಿಗೆ ಬರಲ್ ಪಡೆಯದಾಕೆಯಂ ನೆನೆದಿಂದ್ರಿಯ ಕ್ಷರಣೆಯಾದೊಡದನೊಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳೋಪಳಲ್ಲಿಗಟ್ಟಿದೊಡದಂ ತರ್ಪರಗಿಳಿಯನೊಂದು ಗಿಡುಗನೆಡೆಗೊಂಡು ಜಗುನೆಯಂ ಪಾಯ್ವಾಗಳುಗಿಬಗಿ ಮಾಡಿದಾಗೞದರ ಕೈಯಿಂ ಬರ್ದುಂಕಿ ತೊಱೆಯೊಳಗೆ ಬಿೞ್ದೊಡದನೊಂದು ಬಾಳೆಮೀನ್ನುಂಗಿ ಗರ್ಭಮಂ ತಾಳ್ದಿದೊಡೊಂದು ದಿವಸಮಾ ಮೀನನೊರ್ವ ಜಾಲಗಾಱಂ ಜಾಲದೊಳ್ ಪಿಡಿದಲ್ಲಿಗರಸಪ್ಪ ದಾಶನಲ್ಲಿಗುಯ್ದು ತೋಱಿದೊಡದಂ ವಿದಾರಿಸಿ ನೋೞ್ಪನ್ನೆಗಂ ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡೆತ್ತಿಕೊಂಡು ಮತ್ಸ್ಯಗಂಧಿಯುಂ ಮತ್ಸ್ಯಗಂಧನುಮೆಂದು ಪೆಸರನಿಟ್ಟು ನಡಪಿ ಯಮುನಾನದೀತೀರದೊಳಿರ್ಪನ್ನೆಗಮಲ್ಲಿಗೊರ್ಮೆ ಬ್ರಹ್ಮರ ಮೊಮ್ಮನಪ್ಪ ವೃದ್ಧ ಪರಾಶರಮುನೀಂದ್ರನುತ್ತರಾಪಥಕ್ಕೆ ಪೋಗುತ್ತುಂ ಬಂದು ತೊಱೆಯ ತಡಿಯೊಳೋಡಮಂ ನಡೆಯಿಸುವ ಮತ್ಸ್ಯಗಂಧಿಯಂ ಕಂಡೆಮ್ಮನೀ ತೊಱೆಯಂ ಪಾಯಿಸೆಂಬುದುಂ ಸಾಸಿರ್ವರೇಱಿದೊಡಲ್ಲದೀಯೋಡಂ ನಡೆಯದೆಂಬುದುಮಾಮನಿಬರ ಬಿಣ್ಪುಮಪ್ಪೆಮೇಱಿಸೆಂದೊಡಂತೆ ಗೆಯ್ವೆನೆಂದೋಡಮೇಱಿಸಿ ನಡೆಯಿಸುವಲ್ಲಿ ದಿವ್ಯಕನ್ನೆಯನೞ್ಕರ್ತು ನೋಡಿ –
(ಅಂತು ಕಲ್ತು, ಮುನ್ನಮೆ ಚಾಪವಿದ್ಯೆಯೊಳ್ ಆರಿಂದಂ ಈತನೆ ಭಾರ್ಗವನ್ ಎನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ, ಯುವರಾಜ ಕಂಠಿಕಾ ಪರಿಕಲಿತ ಕಂಠಲುಂಠನುಂ ಆಗಿ, ಪ್ರಮಾಣ ನಿಜಭುಜ ದಂಡಿತ ಅರಾತಿ ಮಂಡಲನುಂ ಆಗಿ, ಗಾಂಗೇಯಂ ಸುಖದೊಳ್ ಅರಸುಗೆಯ್ಯುತ್ತುಂ ಇರ್ಪನ್ನೆಗಂ, ಇತ್ತ ಗಂಗಾದೇಶದೊಳ್, ಉಪರಿಚರವಸು ಎಂಬ ಅರಸಂ ಮುಕ್ತಾವತಿಯೆಂಬ ತೊಱೆಯೊಳ್ ವಿಶ್ರಮಿಸಿರ್ದೊಡೆ, ಕೋಳಾಹಳಂ ಎಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನ್ ಆತಂ ಕಂಡು, ಕಣ್ ಬೇಟಂಗೊಂಡು, ಮದುವೆಯಂ ನಿಂದು, ಒಂದು ದಿವಸಂ ಇಂದ್ರನ ಓಲಗಕ್ಕೆ ಪೋಗಿ ಋತುಕಾಲ ಪ್ರಾಪ್ತೆಯಾಗಿರ್ದ ನಲ್ಲಳಲ್ಲಿಗೆ ಬರಲ್, ಪಡೆಯದೆ, ಆಕೆಯಂ ನೆನೆದು ಇಂದ್ರಿಯ ಕ್ಷರಣೆಯಾದೊಡೆ, ಅದನ್ ಒಂದು ಕದಳೀಪತ್ರದೊಳ್ ಪುದಿದು, ತನ್ನ ನಡಪಿದ ಗಿಳಿಯ ಕೈಯೊಳ್ ಓಪಳಲ್ಲಿಗೆ ಅಟ್ಟಿದೊಡೆ, ಅದಂ ತರ್ಪ ಅರಗಿಳಿಯನ್ ಒಂದು ಗಿಡುಗನ್ ಎಡೆಗೊಂಡು ಜಗುನೆಯಂ ಪಾಯ್ವಾಗಳ್, ಉಗಿಬಗಿ ಮಾಡಿದಾಗಳ್, ಅದರ ಕೈಯಿಂ ಬರ್ದುಂಕಿ ತೊಱೆಯೊಳಗೆ ಬಿೞ್ದೊಡೆ, ಅದನೊಂದು ಬಾಳೆಮೀನ್ ನುಂಗಿ ಗರ್ಭಮಂ ತಾಳ್ದಿದೊಡೆ, ಒಂದು ದಿವಸಂ, ಆ ಮೀನನ್ ಒರ್ವ ಜಾಲಗಾಱಂ ಜಾಲದೊಳ್ ಪಿಡಿದು, ಅಲ್ಲಿಗೆ ಅರಸಪ್ಪ ದಾಶನಲ್ಲಿಗೆ ಒಯ್ದು ತೋಱಿದೊಡೆ, ಅದಂ ವಿದಾರಿಸಿ ನೋೞ್ಪನ್ನೆಗಂ, ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡು, ಎತ್ತಿಕೊಂಡು, ಮತ್ಸ್ಯಗಂಧಿಯುಂ ಮತ್ಸ್ಯಗಂಧನುಂ ಎಂದು ಪೆಸರನಿಟ್ಟು, ನಡಪಿ, ಯಮುನಾನದೀತೀರದೊಳ್ ಇರ್ಪನ್ನೆಗಂ, ಅಲ್ಲಿಗೆ ಒರ್ಮೆ ಬ್ರಹ್ಮರ ಮೊಮ್ಮನಪ್ಪ ವೃದ್ಧ ಪರಾಶರಮುನೀಂದ್ರನ್ ಉತ್ತರಾಪಥಕ್ಕೆ ಪೋಗುತ್ತುಂ ಬಂದು, ತೊಱೆಯ ತಡಿಯೊಳ್ ಓಡಮಂ ನಡೆಯಿಸುವ ಮತ್ಸ್ಯಗಂಧಿಯಂ ಕಂಡು, “ಎಮ್ಮನ್ ಈ ತೊಱೆಯಂ ಪಾಯಿಸು” ಎಂಬುದುಂ, “ಸಾಸಿರ್ವರ್ ಏಱಿದೊಡಲ್ಲದೆ ಈ ಓಡಂ ನಡೆಯದು” ಎಂಬುದುಂ, “ಆಂ ಅನಿಬರ ಬಿಣ್ಪುಂ ಅಪ್ಪೆಂ ಏಱಿಸು” ಎಂದೊಡೆ, “ಅಂತೆ ಗೆಯ್ವೆನ್” ಎಂದು, ಓಡಂ ಏಱಿಸಿ ನಡೆಯಿಸುವಲ್ಲಿ ದಿವ್ಯಕನ್ನೆಯನ್ ಅೞ್ಕರ್ತು ನೋಡಿ-)
ಹಾಗೆ ಕಲಿತು ಈ ಮೊದಲು ಎಲ್ಲರಿಗಿಂತ ಮಿಗಿಲಾದ ಬಿಲ್ಲುಗಾರ ಎನಿಸಿದ್ದ ಭಾರ್ಗವನನ್ನೇ ಮೀರಿಸಿದ ಬಿಲ್ಲುಗಾರನಾದನು. ತನ್ನ ತೋಳುಗಳೆಂಬ ದಂಡದಿಂದ ವೈರಿಗಳ ಗುಂಪನ್ನು ಶಿಕ್ಷಿಸಿದನು. ಹೀಗೆ ಭೀಷ್ಮನು ಸುಖವಾಗಿ ಅರಸುತನ ನಡೆಸುತ್ತಿದ್ದಾಗ ಇತ್ತ –
ಗಂಗಾದೇಶದಲ್ಲಿ ಉಪರಿಚರವಸು ಎಂಬ ಅರಸನು ಮುಕ್ತಾವತಿ ಎಂಬ ಹೊಳೆಯಲ್ಲಿ ವಿಶ್ರಮಿಸುತ್ತಿದ್ದನು. ಆಗ ಆತನು ಕೋಳಾಹಳವೆಂಬ ಬೆಟ್ಟದ ಮಗಳಾದ ಗಿರಿಜೆ ಎಂಬ ಕನ್ನೆಯನ್ನು ಕಂಡನು. ಅವನಿಗೆ ಆಕೆಯಲ್ಲಿ ಪ್ರೇಮ ಉಂಟಾಗಿ ಆಕೆಯನ್ನು ಮದುವೆಯಾದನು. ಒಂದು ದಿವಸ ಆತನು ಇಂದ್ರನ ಓಲಗಕ್ಕೆ ಹೋಗಿ, ಋತುಕಾಲ ಪ್ರಾಪ್ತೆಯಾಗಿದ್ದ ನಲ್ಲೆಯಲ್ಲಿಗೆ ಬಂದನು. ಆದರೆ ಅವನಿಗೆ ಅವಳು ಸಿಗಲಿಲ್ಲ. ನಲ್ಲೆಯನ್ನೇ ನೆನೆಯುತ್ತ ಆತನಿಗೆ ವೀರ್ಯಸ್ಖಲನವಾಯಿತು. ಅವನು ಅದನ್ನು ಒಂದು ಬಾಳೆ ಎಲೆಯಲ್ಲಿ ಮುಚ್ಚಿ ತಾನು ಸಾಕಿದ ಗಿಳಿಯ ಕೈಯಲ್ಲಿ ತನ್ನ ನಲ್ಲೆಯಲ್ಲಿಗೆ ಕಳಿಸಿದನು. ದಾರಿಯಲ್ಲಿ ಆ ಗಿಳಿಯು ಜಮುನಾ ನದಿಯನ್ನು ದಾಟಬೇಕಾಯಿತು. ಆಗ ಒಂದು ಗಿಡುಗವು ಎದುರಿಗೆ ಸಿಕ್ಕಿ ಗಿಳಿಯನ್ನು ಪರಚಿ ಗಾಯಗೊಳಿಸಿತು. ಈ ಗೊಂದಲದಲ್ಲಿ ಗಿಳಿಯ ವಶದಲ್ಲಿದ್ದ ಬಾಳೆ ಎಲೆಯ ಕಟ್ಟು ಯಮುನೆಯಲ್ಲಿ ಬಿದ್ದುಹೋಯಿತು. ಆ ಕಟ್ಟನ್ನು ಒಂದು ಬಾಳೆ ಮೀನು ನುಂಗಿ ಬಸಿರಾಯಿತು. ಒಂದು ದಿವಸ ಆ ಮೀನನ್ನು ಮೀನುಗಾರನೊಬ್ಬನು ಹಿಡಿದು ಅಲ್ಲಿಗೆ ಅರಸನಾಗಿದ್ದ ದಾಶರಾಜನ ಹತ್ತಿರ ತೆಗೆದುಕೊಂಡು ಹೋದನು. ಅದನ್ನು ಸೀಳಿ ನೋಡಿದಾಗ ಅದರ ಹೊಟ್ಟೆಯಲ್ಲಿ ಎರಡು ಮಕ್ಕಳಿದ್ದವು. ಆ ಮಕ್ಕಳನ್ನು ದಾಶರಾಜನು ಎತ್ತಿಕೊಂಡು ಮತ್ಸ್ಯಗಂಧಿ, ಮತ್ಸ್ಯಗಂಧ ಎಂದು ಹೆಸರುಗಳನ್ನಿಟ್ಟು ಸಾಕಿದನು.
ಹೀಗೆ ಅವರೆಲ್ಲ ಯಮುನಾನದಿಯ ತೀರದಲ್ಲಿದ್ದಾಗ ಒಂದು ದಿನ ಅಲ್ಲಿಗೆ ಬ್ರಹ್ಮನ ಮೊಮ್ಮಗನಾದ ಮುದಿ ಪರಾಶರ ಮುನಿಯು ಬಂದು, ದೋಣಿಯಲ್ಲಿ ಜನರನ್ನು ನದಿ ದಾಟಿಸುತ್ತಿದ್ದ ಮತ್ಸ್ಯಗಂಧಿಯನ್ನು ಕಂಡು ‘ನನ್ನನ್ನು ನದಿ ದಾಟಿಸು’ ಎಂದು ಕೇಳಿದನು. ಅವಳು ‘ಈ ದೋಣಿ ನಡೆಯಬೇಕಾದರೆ ಸಾವಿರ ಜನ ಬೇಕು’ ಎಂದಳು. ಮುನಿಯು ‘ನಾನೊಬ್ಬನೇ ಅಷ್ಟು ಜನರ ಭಾರವಾಗುತ್ತೇನೆ, ನಡೆಯಿಸು’ ಎಂದನು. ಅವಳು ಒಪ್ಪಿ ದೋಣಿಯನ್ನು ನಡೆಸತೊಡಗಿದಳು. ಆಗ ಮುನಿಯು ಸುಂದರಿಯಾದ ಆ ಕನ್ಯೆಯನ್ನು ಇಷ್ಟಪಟ್ಟು ನೋಡಿ-
ಮ|| ಮನದೊಳ್ ಸೋಲ್ತು ಮುನೀಂದ್ರನಾಕೆಯೊಡಲೀ ದುರ್ಗಂಧವೋಪಂತೆ ಯೋ |
     ಜನಗಂಧಿತ್ವಮನಿತ್ತು ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂ ||
     ಜನಲಂಪೞ್ಕಱನೀಯೆ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾ ||
     ಮುನಿಪಂ ಪುಟ್ಟಿದನಂತು ದಿವ್ಯಮುನಿಗಳ್ಗೇಗೆಯ್ದೊಡಂ ತೀರದೇ ||೬೯||
(ಮನದೊಳ್ ಸೋಲ್ತು ಮುನೀಂದ್ರನ್, ಆಕೆಯ ಒಡಲ ಈ  ದುರ್ಗಂಧವೋಪಂತೆ ಯೋಜನಗಂಧಿತ್ವಮನ್  ಇತ್ತು, ಕಾಂಡಪಟದಂತೆ ಇರ್ಪನ್ನೆಗಂ ಮಾಡಿ ಮಂಜನ್, ಅಲಂಪು ಅೞ್ಕಱನ್ ಈಯೆ ಕೂಡುವೆಡೆಯೊಳ್, ಜ್ಞಾನಸ್ವರೂಪಂ ಮಹಾಮುನಿಪಂ ಪುಟ್ಟಿದನ್, ಅಂತು ದಿವ್ಯಮುನಿಗಳ್ಗೆ ಏಗೆಯ್ದೊಡಂ ತೀರದೇ?)
ಮುನಿಯು ಮನಸ್ಸಿನಲ್ಲಿಯೇ ಆಕೆಗೆ ಸೋತು, ಅವಳ ಮೈಯ ನಾತ ಹೋಗಿ ಪರಿಮಳ ಬರುವಂತೆ ಯೋಜನಗಂಧಿತ್ವವನ್ನು ಅವಳಿಗೆ ಕೊಟ್ಟನು. ಹಾಗೆ ಕೊಟ್ಟು ಸುತ್ತಲೂ ಮಂಜಿನ ತೆರೆಯನ್ನು ನಿರ್ಮಿಸಿ ಸಂತೋಷದಿಂದ ಆಕೆಯನ್ನು ಕೂಡಿದನು. ಆಗ ಆಕೆಯಲ್ಲಿ ಜ್ಞಾನಸ್ವರೂಪನೇ ಆದ ವ್ಯಾಸ ಮಹಾಮುನಿಯು ಹುಟ್ಟಿದನು. ಲೋಕದಲ್ಲಿ ದೊಡ್ಡ ಋಷಿ ಎನಿಸಿಕೊಂಡವರು ಏನು ಮಾಡಿದರೂ ನಡೆಯುತ್ತದೆ ತಾನೆ!
ವ|| ಅಂತು ನೀಲಾಂಬುದ ಶ್ಯಾಮನುಂ ಕನಕ ಪಿಂಗಳ ಜಟಾಬಂಧಕಳಾಪನುಂ ದಂಡ[ಕಪಾಳ] ಹಸ್ತನುಂ ಕೃಷ್ಣಮೃಗ [ತ್ವಕ್ಪ]ರಿಧಾನನುಮಾಗಿ ವ್ಯಾಸಭಟ್ಟಾರಕಂ ಪುಟ್ಟುವುದುಮಾತನನೊಡಗೊಂಡು ಸತ್ಯವತಿಗೆ ಪುನಃ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನಿತ್ತಲ್-
(ಅಂತು ನೀಲಾಂಬುದ ಶ್ಯಾಮನುಂ, ಕನಕ ಪಿಂಗಳ ಜಟಾಬಂಧಕಳಾಪನುಂ, ದಂಡ[ಕಪಾಳ] ಹಸ್ತನುಂ ಕೃಷ್ಣಮೃಗ ತ್ವಕ್ ಪರಿಧಾನನುಂ ಆಗಿ ವ್ಯಾಸಭಟ್ಟಾರಕಂ ಪುಟ್ಟುವುದುಂ, ಆತನನ್ ಒಡಗೊಂಡು, ಸತ್ಯವತಿಗೆ ಪುನಃ ಕನ್ಯಾಭಾವಮಂ ದಯೆಗೆಯ್ದು, ಪರಾಶರಂ ಪೋದನ್. ಇತ್ತಲ್)
ಹಾಗೆ, ವ್ಯಾಸನು ಹುಟ್ಟಿದಾಗ ಅವನಿಗೆ ಮೋಡದಂಥ ಕಪ್ಪು ಬಣ್ಣ; ಬಂಗಾರಗೆಂಪಿನ ಜಟೆ; ಕೈಯಲ್ಲಿ ದಂಡ ಮತ್ತು ಭಿಕ್ಷಾಪಾತ್ರೆ; ಕೃಷ್ಣಮೃಗದ ಚರ್ಮದ ಉಡುಗೆ. ಪರಾಶರನು ಸತ್ಯವತಿಗೆ ಪುನಃ ಕನ್ಯಾಭಾವವನ್ನು ಕೊಟ್ಟು, ಮಗನಾದ ವ್ಯಾಸನೊಂದಿಗೆ ಅಲ್ಲಿಂದ ಹೊರಟು ಹೋದನು.
ಮ|| ಮೃಗಯಾವ್ಯಾಜದಿನೊರ್ಮೆ ಶಂತನು ತೊೞಲ್ತರ್ಪಂ ಪಳಂಚಲ್ಕೆ ತ |
     ನ್ಮೃಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೊಲ್ ಸೋಲ್ತು ಕಂಡೊಲ್ದು ನ ||
     ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀನ್  ಬಾ ಪೋಪಮೆಂದಂಗೆ ಮೆ |
     ಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ ||೭೦||
(ಮೃಗಯಾವ್ಯಾಜದಿನ್ ಒರ್ಮೆ ಶಂತನು ತೊೞಲ್ತರ್ಪಂ, ಪಳಂಚಲ್ಕೆ ತನ್ಮೃಗಶಾಬಾಕ್ಷಿಯ ಕಂಪು ತಟ್ಟಿ, ಮಧುಪಂಬೊಲ್ ಸೋಲ್ತು, ಕಂಡು, ಒಲ್ದು, ನಲ್ಮೆಗೆ ದಿಬ್ಯಂ ಪಿಡಿವಂತೆವೋಲ್ ಪಿಡಿದು, “ನೀನ್  ಬಾ ಪೋಪಂ” ಎಂದಂಗೆ ಮೆಲ್ಲಗೆ ತತ್ಕನ್ಯಕೆ ನಾಣ್ಚಿ, “ಬೇಡುವೊಡೆ ನೀವ್ ಎಮ್ಮ ಅಯ್ಯನಂ ಬೇಡಿರೇ”)
ಒಂದು ದಿನ ಶಂತನು ಮಹಾರಾಜ ಬೇಟೆಯ ನೆವದಲ್ಲಿ ಕಾಡಿನಲ್ಲಿ ಅಲೆಯುತ್ತಿದ್ದ. ಆಗ ಅವನಿಗೆ ಆ ಜಿಂಕೆಗಣ್ಣಿಯ ಮೈಯ ಪರಿಮಳ ಎಲ್ಲಿಂದಲೋ ಬಂದು ಮೂಗಿಗೆ ತಟ್ಟಿತು. ಹೂವಿನ ಪರಿಮಳಕ್ಕೆ ದುಂಬಿ ಸೋಲುವ ಹಾಗೆ ಅವನು ಆ ಪರಿಮಳಕ್ಕೆ ಸೋತ; ಎಲ್ಲಿಂದ ಈ ಪರಿಮಳ ಎಂದು ಹುಡುಕುತ್ತಾ ಹೋಗಿ ಯೋಜನಗಂಧಿಯನ್ನು ಕಂಡ; ಮೋಹಪರವಶನಾದ; ತನ್ನ ಪ್ರೀತಿಯನ್ನು ಒರೆಗೆ ಹಚ್ಚುವಂತೆ ಆಕೆಯನ್ನು ಹಿಡಿದು ‘ಬಾ ನನ್ನ ಜೊತೆ, ಹೋಗೋಣ’ ಎಂದು ಅವಳನ್ನು ಕರೆದ. ಕನ್ನಿಕೆ ನಾಚಿದಳು. ‘ಬೇಕಾದರೆ ನೀವು ಅಪ್ಪನನ್ನು ಕೇಳಿ’ ಎಂದು ತನ್ನ ಒಪ್ಪಿಗೆಯನ್ನು ಪರೋಕ್ಷವಾಗಿ ಸೂಚಿಸಿದಳು!
ವ|| ಎಂಬುದುಂ ಶಂತನು ಪೊೞಲ್ಗೆ ಮಗುೞ್ದು ವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡೆವೆಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ಪೊಡೆ ಕುಡುವೆಮೆನೆ ತದ್ವೃತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು-
(ಎಂಬುದುಂ, ಶಂತನು ಪೊೞಲ್ಗೆ ಮಗುೞ್ದುವಂದು, ಅವರ ಅಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನ್ ಅಟ್ಟಿದೊಡೆ, “ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಂ ಇರ್ದಂತೆ ಎನ್ನ ಮಗಳಂ ಕುಡೆವು, ಎಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕೆ ಒಡೆಯನುಂ ಪಿರಿಯ ಮಗನುಂ ಕ್ರಮಕ್ಕೆ ಅರ್ಹನುಂ ಅಪ್ಪೊಡೆ ಕುಡುವೆಂ” ಎನೆ ತತ್ ವೃತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು)
ಯೋಜನಗಂಧಿಯ ಮಾತು ಕೇಳಿದ ಶಂತನು ಊರಿಗೆ ಮರಳಿ ಬಂದು, ಹೆಣ್ಣು ಕೇಳಲು ಹೆಗ್ಗಡೆಗಳನ್ನು ದಾಶರಾಜನಲ್ಲಿಗೆ ಕಳಿಸಿಕೊಟ್ಟನು. ಅವರು ಹೋಗಿ ದಾಶರಾಜನ ಎದುರಿಗೆ ಪ್ರಸ್ತಾಪವನ್ನಿಟ್ಟಾಗ ಅವನು ‘ಈಗ ದೊರೆಗೆ ಹಿರಿಯ ಮಗನಾಗಿ ಭೀಷ್ಮನಿದ್ದಾನೆ. ಕ್ರಮ ಪ್ರಕಾರ ಅವನು ರಾಜ್ಯಕ್ಕೆ ಅಧಿಕಾರಿ. ಹಾಗಿರುವಾಗ ನಾನು ನನ್ನ ಮಗಳನ್ನು ರಾಜನಿಗೆ ಕೊಡಲಾರೆ. ನನ್ನ ಮಗಳಿಗೆ ಹುಟ್ಟಿದ ಮಕ್ಕಳು ಹಿರಿಯರಾಗಿ, ಕ್ರಮಕ್ಕೆ ಅರ್ಹರಾಗಿ, ರಾಜ್ಯಕ್ಕೆ ಒಡೆಯರಾಗುವುದಾದರೆ ಮಾತ್ರ ಮಗಳನ್ನು ಕೊಡುತ್ತೇನೆ’ ಎಂದನು. ಹೆಗ್ಗಡೆಗಳು ಹಿಂದೆ ಬಂದು ಎಲ್ಲ ವಿಷಯವನ್ನೂ ಶಂತನುವಿಗೆ ತಿಳಿಸಿದರು.
ಮ|| ಕ್ರಮಮಂ ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನಿರ್ದಂತೆ ನೋ |
     ಡ ಮರುಳ್ ಶಂತನು ತನ್ನದೊಂದು ಸವಿಗಂ ಸೋಲಕ್ಕಮಿತ್ತಂ ನಿಜ ||
     ಕ್ರಮಮಂ ತನ್ನಯ ಬೇಟದಾಕೆಯ ಮಗಂಗೆಂಬೊಂದಪಖ್ಯಾತಿ ಲೋ |
     ಕಮನಾವರ್ತಿಸೆ ಬೞ್ದೊಡೆನ್ನ ಕುಲಮುಂ ತ[ಕ್ಕೂ]ರ್ಮೆಯುಂ ಮಾಸದೇ ||೭೧||
 (“ಕ್ರಮಮಂ ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನ್ ಇರ್ದಂತೆ, ನೋಡ, ಮರುಳ್ ಶಂತನು ತನ್ನದೊಂದು ಸವಿಗಂ ಸೋಲಕ್ಕಂ ಇತ್ತಂ ನಿಜಕ್ರಮಮಂ ತನ್ನಯ ಬೇಟದಾಕೆಯ ಮಗಂಗೆ ಎಂಬ ಒಂದು ಅಪಖ್ಯಾತಿ ಲೋಕಮನ್ ಆವರ್ತಿಸೆ ಬೞ್ದೊಡೆ ಎನ್ನ ಕುಲಮುಂ ತಕ್ಕೂರ್ಮೆಯುಂ ಮಾಸದೇ”?)
‘ಹಿಂದಿನಿಂದ ಬಂದ ಕ್ರಮವನ್ನು –ಸಂಪ್ರದಾಯವನ್ನು- ಮುಂದುವರಿಸಿಕೊಂಡು ಹೋಗಲು ಅತ್ಯಂತ ಸಮರ್ಥನಾದ ಮಗ ಭೀಷ್ಮನಿದ್ದಾನೆ. ಹಾಗಿದ್ದರೂ ಈ ಮಳ್ಳ ಶಂತನು ತನ್ನ ತೆವಲಿಗೆ ಸೋತು, ತಾನು ಕೂಡಿದ ಹೆಣ್ಣಿಗಾಗಿ, ಹಿಂದಿನಿಂದಲೂ ಬಂದ ಕ್ರಮವನ್ನೇ ತಪ್ಪಿದನಲ್ಲ! ಎಂಬ ಅಪವಾದ ತನ್ನ ಮೇಲೆ ಬರುತ್ತದೆ. ಆ ಮಾತು ಇಡೀ ಲೋಕವನ್ನು ಸುತ್ತುತ್ತದೆ. ಹಾಗೆ ಆದರೆ ತನ್ನ ಕುಲವೂ, ಅದರ ಹಿರಿಮೆಯೂ ಮಾಸಿ ಹೋಗುವುದಿಲ್ಲವೆ?’ ಎಂಬ ಚಿಂತೆಗೆ ಶಂತನು ಸಿಕ್ಕಿಕೊಂಡನು.
ವ|| ಎಂದು ತನ್ನ ನಾಣ್ಗಾಪನೆ ಬಗೆದತನು ಪರಿತಾಪಿತಶರೀರನುಮಾಗಿ ಶಂತನು ಕರಂಗೆರ್ದೆಗಿಡೆ ತದ್ವೃತ್ತಾಂತಮೆಲ್ಲಮಂ ಗಾಂಗೇಯನಱಿದು-
(ಎಂದು ತನ್ನ ನಾಣ್ಗಾಪನೆ ಬಗೆದು, ಅತನು ಪರಿತಾಪಿತ ಶರೀರನುಂ ಆಗಿ, ಶಂತನು ಕರಂಗಿ ಎರ್ದೆಗಿಡೆ, ತತ್  ವೃತ್ತಾಂತಮೆಲ್ಲಮಂ ಗಾಂಗೇಯನ್ ಅಱಿದು-)
ವ| ಈ ಕಾರಣದಿಂದ ಶಂತನುವು ತನ್ನ ಆಸೆಯನ್ನು ಹೊರಗೆ ಹೇಳಲು ನಾಚಿಕೊಂಡನು. ಆದರೆ ಯೋಜನಗಂಧಿಯ ಮೋಹ ಅವನನ್ನು ಕೊರೆಯುತ್ತಿತ್ತು. ಶಂತನುವು ಹೀಗೆ ದಿನದಿನವೂ ಕೊರಗುತ್ತಿರುವುದರ ಕಾರಣ ಕ್ರಮೇಣ ಭೀಷ್ಮನಿಗೆ ತಿಳಿಯಿತು. ಅವನು -
ಉ|| ಎನ್ನಯ ದೂಸಱಿಂ ನೃಪತಿ ಬೇಡಿದುದಂ ಕುಡಲೊಲ್ಲದಂಗಜೋ |
     ತ್ಪನ್ನ ವಿಮೋಹದಿಂದಳಿದಪಂ ಪತಿ ಸತ್ತೊಡೆ ಸತ್ತ ಪಾಪಮೆ ||
     ನ್ನನ್ನರಕಂಗಳೊಳ್ ತಡೆಯದೞ್ದುಗುಮೇವುದು ರಾಜ್ಯಲಕ್ಷ್ಮಿ ಪೋ |
     ತನ್ನಯ ತಂದೆಯೆಂದುದನೆ ಕೊಟ್ಟು ವಿವಾಹಮನಿಂದೆ ಮಾಡುವೆಂ ||೭೨||
(“ಎನ್ನಯ ದೂಸಱಿಂ ನೃಪತಿ ಬೇಡಿದುದಂ ಕುಡಲ್ ಒಲ್ಲದೆ ಅಂಗಜ ಉತ್ಪನ್ನ ವಿಮೋಹದಿಂದ ಅಳಿದಪಂ, ಪತಿ ಸತ್ತೊಡೆ ಸತ್ತ ಪಾಪಂ ಎನ್ನನ್ ನರಕಂಗಳೊಳ್ ತಡೆಯದೆ ಅೞ್ದುಗುಂ, ಏವುದು ರಾಜ್ಯಲಕ್ಷ್ಮಿ? ಪೋ! ತನ್ನಯ ತಂದೆ ಎಂದುದನೆ ಕೊಟ್ಟು ವಿವಾಹಮನ್ ಇಂದೆ ಮಾಡುವೆಂ”.)
‘ನನ್ನ ಕಾರಣದಿಂದ ತಂದೆಗೆ ದಾಶರಾಜನ ಷರತ್ತುಗಳನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವನು ಕಾಮದಿಂದ ಉಂಟಾದ ಸಂಕಟವನ್ನು ಅನುಭವಿಸಬೇಕಾಗಿದೆ. ಅದೇ ಸಂಕಟದಿಂದ ಅವನು ತೀರಿಕೊಂಡರೆ, ಅದರ ಪಾಪವು ನನ್ನನ್ನು ನರಕದಲ್ಲಿ ಅದ್ದದೆ ಬಿಡುವುದಿಲ್ಲ. ಈ ರಾಜ್ಯಲಕ್ಷ್ಮಿಯಿಂದ ನನಗೆ ಆಗಬೇಕಾದ್ದಾದರೂ ಏನು? ಅದು ಹೋಗಲಿ! ನನ್ನ ತಂದೆಯ ಆಸೆಯನ್ನು ಇಂದೇ ಪೂರೈಸುತ್ತೇನೆ. ಅವನ ವಿವಾಹವನ್ನು ಇಂದೇ ಮಾಡುತ್ತೇನೆ’
ವ|| ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆ ವಂದಾತನ ಮನದ ತೊಡರ್ಪಂ ಪಿಂಗೆ ನುಡಿದು-
(ಎಂದು ನಿಶ್ಚಯಿಸಿ, ಗಾಂಗೇಯಂ ದಾಶರಾಜನಲ್ಲಿಗೆ ಬಂದು, ಆತನ ಮನದ ತೊಡರ್ಪಂ ಪಿಂಗೆ ನುಡಿದು)
ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿಕೊಂಡು ದಾಶರಾಜನಲ್ಲಿಗೆ ಹೋಗಿ, ಅವನ ಮನಸ್ಸಿನ ತೊಡಕು ದೂರವಾಗುವಂತೆ -
ಉ|| ನೀಡಿರದೀವುದೀ ನಿಜ ತನೂಜೆಯನೀ ವಧುಗಾದ ಪುತ್ರರೊಳ್ |
     ಕೂಡುಗೆ ರಾಜ್ಯಲಕ್ಷ್ಮಿ ಮೊಱೆಯಲ್ತೆನಗಂತದು ಪೆಂಡಿರೆಂಬರೊಳ್ ||
     ಕೂಡುವನಲ್ಲೆನಿಂದು ಮೊದಲಾಗಿರೆ ನಿಕ್ಕುವಮೆಂದು ರಾಗದಿಂ |
     ಕೂಡಿದನುಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ ||೭೩||
(“ನೀಡಿರದೆ ಈವುದು ಈ ನಿಜ ತನೂಜೆಯನ್, ಈ ವಧುಗೆ ಆದ ಪುತ್ರರೊಳ್ ಕೂಡುಗೆ ರಾಜ್ಯಲಕ್ಷ್ಮಿ, ಮೊಱೆಯಲ್ತು ಎನಗೆ ಅಂತು ಅದು, ಪೆಂಡಿರ್ ಎಂಬರೊಳ್ ಕೂಡುವನ್ ಅಲ್ಲೆನ್ ಇಂದು ಮೊದಲಾಗಿರೆ ನಿಕ್ಕುವಂ” ಎಂದು ರಾಗದಿಂ ಕೂಡಿದನ್  ಒಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ)
‘ತಡ ಮಾಡದೆ ನಿನ್ನ ಮಗಳನ್ನು ನನ್ನ ತಂದೆಗೆ ಮದುವೆ ಮಾಡಿ ಕೊಡು. ಅವಳಲ್ಲಿ ಹುಟ್ಟಿದ ಗಂಡುಮಕ್ಕಳಿಗೇ ರಾಜ್ಯವು ದೊರೆಯಲಿ! ಇನ್ನು ಮುಂದೆ ನನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ. ಇಂದಿನಿಂದ ನಾನು ಯಾವ ಹೆಣ್ಣನ್ನೂ ಕೂಡುವವನಲ್ಲ. ಇದು ನಿಶ್ಚಯ’ – ಎಂದು ಹೇಳಿ ಸತ್ಯವತಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಿ ತಂದೆಯೊಂದಿಗೆ ವಿವಾಹ ಮಾಡಿಸಿದನು.
ವ|| ಅಂತು ಶಂತನುವುಂ ಸತ್ಯವತಿಯುಮನ್ಯೋನ್ಯಾಸಕ್ತಚಿತ್ತರಾಗಿ ಕೆಲವು ಕಾಲಮಿರ್ಪನ್ನೆಗಮವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂ ಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚಿ ಕುರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-
(ಅಂತು ಶಂತನುವುಂ ಸತ್ಯವತಿಯುಂ ಅನ್ಯೋನ್ಯ ಆಸಕ್ತ ಚಿತ್ತರಾಗಿ ಕೆಲವು ಕಾಲಂ ಇರ್ಪನ್ನೆಗಂ, ಅವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಂ ಆಗಿ ಬಳೆಯುತ್ತ ಇರ್ಪನ್ನೆಗಂ, ಶಂತನು ಪರಲೋಕ ಪ್ರಾಪ್ತನಾದೊಡೆ, ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ, ಮುನ್ನೆ ತನ್ನ ನುಡಿದ ನುಡಿವಳಿ ಎಂಬ ಪ್ರಾಸಾದಕ್ಕೆ ಅಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ, ರಾಜ್ಯಂ ಗೆಯಿಸುತ್ತುಂ ಇರ್ಪನ್ನೆಗಂ, ಒರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚಿ ಕುರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ, ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-)
ಹೀಗೆ ಶಂತನು-ಸತ್ಯವತಿಯರು ಒಬ್ಬರೊಂದಿಗೆ ಒಬ್ಬರು ಪ್ರೀತಿಯಿಂದ ಕಾಲ ಕಳೆಯುತ್ತಿದ್ದಾಗ ಅವರ ಬೇಟದ ಫಲವಾಗಿ ಚಿತ್ರಾಂಗದ, ವಿಚಿತ್ರವೀರ್ಯರೆಂಬ ಮಕ್ಕಳು ಹುಟ್ಟಿದರು. ಅವರು ಪ್ರಚಂಡರೂ, ವೀರರೂ ಆಗಿ ಬೆಳೆಯುತ್ತಿರುವಂತೆಯೇ ಶಂತನು ತೀರಿಹೋದನು. ಭೀಷ್ಮನು ಆತನಿಗೆ ಉಚಿತವಾದ ಪರಲೋಕಕ್ರಿಯೆಗಳನ್ನು ನಡೆಸಿದ ನಂತರ ಈ ಹಿಂದೆ ತಾನು ಮಾಡಿದ ಪ್ರತಿಜ್ಞೆ ಎಂಬ ನೆಲಗಟ್ಟಿನ ಮೇಲೆ ಮಂದಿರವನ್ನು ಕಟ್ಟುವಂತೆ ಚಿತ್ರಾಂಗದನಿಗೆ ಪಟ್ಟ ಕಟ್ಟಿ ರಾಜ್ಯವನ್ನು ಮುನ್ನಡೆಸುತ್ತಿದ್ದನು. ಆದರೆ ಚಿತ್ರಾಂಗದನು ಕುರುಕ್ಷೇತ್ರವನ್ನು ಕಣವನ್ನಾಗಿಸಿ ಒಬ್ಬ ಗಂಧರ್ವನ ಜೊತೆ ದ್ವಂದ್ವಯುದ್ಧ ಮಾಡಿ ಸತ್ತುಹೋದನು. ಈಗ ಭೀಷ್ಮನು ವಿಚಿತ್ರವೀರ್ಯನಿಗೆ ಪಟ್ಟ ಕಟ್ಟಿ
ಮ|| ಸಕಳ ಕ್ಷತ್ರಿಯ ಮೋಹದಿಂ ನಿಜ ಭುಜ ಪ್ರಾರಂಭದಿಂ ಪೋಗಿ ತಾ |
     ಗಿ ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನಂಕದೊಂದುಗ್ರಸಾ ||
     ಯಕದಿಂ ನಾಯಕರಂ ಪಡಲ್ವಡಿಸುತುಂ ತಾಂ ತಂದನಂದಂಬೆಯಂ |
     ಬಿಕೆಯಂಬಾಲೆಯರೆಂಬ ಬಾಲೆಯ[ರನೇಂ] ಭೀಷ್ಮಂ ಯಶೋಭಾಗಿಯೋ ||೭೪||
(ಸಕಳ ಕ್ಷತ್ರಿಯ ಮೋಹದಿಂ, ನಿಜ ಭುಜ ಪ್ರಾರಂಭದಿಂ ಪೋಗಿ, ತಾಗಿ, ಕೆಲರ್ ನೊಂದೊಡೆ ಕಾದಿ ರಾಜಸುತರೊಳ್, ತನ್ನಂಕದ ,ಒಂದು ಉಗ್ರ ಸಾಯಕದಿಂ ನಾಯಕರಂ ಪಡಲ್ವಡಿಸುತುಂ, ತಾಂ ತಂದನ್  ಅಂದು, ಅಂಬೆ ಅಂಬಿಕೆ ಅಂಬಾಲೆಯರೆಂಬ ಬಾಲೆಯರನ್ ಏಂ ಭೀಷ್ಮಂ ಯಶೋಭಾಗಿಯೋ)
ಕ್ಷತ್ರಿಯರಿಗೆ ಸಹಜವಾದ ಕಾದುವ ಆಸೆಯಿಂದ, ತನ್ನ ತೋಳ್ಬಲವನ್ನು ನಿರೂಪಿಸುವ ಇರಾದೆಯಿಂದ ಭೀಷ್ಮನು ಕಾಶಿರಾಜನ ಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲೆಯರ ಸ್ವಯಂವರಕ್ಕೆ ಹೋದನು. ಅಲ್ಲಿ ಹಲವು ರಾಜಕುಮಾರರೊಂದಿಗೆ ಕಾದಾಡಿ, ನಾಯಕರೆನ್ನಿಸಿಕೊಂಡವರನ್ನು ಚೆಲ್ಲಾಪಿಲ್ಲಿ ಮಾಡಿ, ಆ ಮೂವರು ಕನ್ಯೆಯರನ್ನೂ ಅಪಹರಿಸಿಕೊಂಡು ಬಂದನು. ಭೀಷ್ಮನೆಂದರೆ ಏನು ಸಾಮಾನ್ಯವೀರನೆ?

1 ಕಾಮೆಂಟ್‌:

ಅಶೋಕವರ್ಧನ ಜಿಎನ್ ಹೇಳಿದರು...

ಅಂತೂ ‘ಅತ್ರಿ’ ಎಲ್ಲಿಂದ ಬಂತು ಎಂದು ತಿಳಿದಂತಾಯ್ತು :-)