ಗುರುವಾರ, ಏಪ್ರಿಲ್ 22, 2010

ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!

ಬಂಟ್ವಾಳ ತಾಲೂಕಿನ ಮಂಚಿ ಬಿ.ವಿ. ಕಾರಂತರ ಹುಟ್ಟೂರು. ಈ ತಿಂಗಳ ೯,೧೦,೧೧ರಂದು ಅಲ್ಲಿ ಅವರ ನೆನಪಿಗಾಗಿ ಅವರ ಅಭಿಮಾನಿಗಳೆಲ್ಲ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಲು ಹೊರಟದ್ದಲ್ಲ. ಆ ದಿನ ಶ್ರೀಮತಿ ವೈದೇಹಿಯವರು ವ್ಯಕ್ತಪಡಿಸಿದ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕೆನ್ನಿಸಿದ್ದರಿಂದ ಈ ಬರಹ.
ವೈದೇಹಿಯವರು ಆ ದಿನ ಸಂಜೆಯ ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಒಂದು ಮಾತು ಹೇಳಿದರು: "ಎಂಜಿನಿಯರ್ ಎಂದರೆ ಮರಗಳನ್ನು ಕಡಿದು ರಸ್ತೆ ನಿರ್ಮಿಸುವವನಲ್ಲ. ಆ ಕೆಲಸವನ್ನು ಯಾವ ಕಂಟ್ರಾಕ್ಟರ್ ಕೂಡ ಮಾಡಬಲ್ಲ. ಎಂಜಿನಿಯರ್ ಆದವನು ಮರಗಳನ್ನು ಉಳಿಸಿಕೊಂಡೇ ರಸ್ತೆ ಮಾಡುವ ಜಾಣ್ಮೆ ಹೊಂದಿರಬೇಕು. ಈಗ ಎಲ್ಲೆಂದರಲ್ಲಿ ರಸ್ತೆ ಮಾಡಲೆಂದು ಮರ ಕಡಿಯುತ್ತಾರೆ. ಯಾರು ಇದನ್ನು ತಡೆಯುವವರು? ನಾವು ಹೇಳಲು ಸಾಧ್ಯವೆ? ನಾವು ಹೇಳಿದರೆ ಕೇಳುತ್ತಾರೆಯೆ?". ಮೊನ್ನೆ ಮೊನ್ನೆ ಒಂದು ಊಟದ ಮನೆಯಲ್ಲಿ ಸಿಕ್ಕಿದ ಅಲ್ಲಿನವರೇ ಆದ ಕಂದೂರು ಐತಾಳರೂ ವೈದೇಹಿಯವರ ಈ ಮಾತುಗಳನ್ನು ತುಂಬ ಮೆಚ್ಚಿಕೊಳ್ಳುತ್ತಾ. "ನಾವು ಹೇಳಿದರೆ ಆದೀತ? ನಮಗೆ ಏನು ಶಕ್ತಿ ಇದೆ?" ಎಂದರು. ನಾನು ಸುಮ್ಮನಿದ್ದೆ.
**********
ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲವಂತೆ. ಅದೇ ಅವನ ಸಮಸ್ಯೆ.
**********
ನಾನು ಮಂಗಳೂರಿಗೆ ಹೋಗುವುದು ಅಪರೂಪ. ಕಳೆದ ವರ್ಷದ ಪ್ರಾರಂಭದಲ್ಲಿ ಯಾತಕ್ಕೋ ಹೋಗಿದ್ದೆ. ಕಾರ್ನಾಡು ಸದಾಶಿವರಾವ್ ರಸ್ತೆಯಲ್ಲಿ ನಡೆದು ಹೋಗಬೇಕಾಯಿತು. ನೋಡಿದರೆ ಹಳತೆಲ್ಲ ಪೂರ್ತಿ ಹೋಗಿ, ಹೊಸ ವಿಶಾಲವಾದ ರಸ್ತೆ ಆಗಿದೆ. ಪೂರ್ತಿ ಕಾಂಕ್ರೀಟ್ ರಸ್ತೆ, ಬದಿಯ ಅಂಗಡಿಗಳ ಹೊಸ್ತಿಲವರೆಗೂ ಚಾಚಿಕೊಂಡಿದೆ. ಅರೆ! ಹಿಂದೆ ಹೀಗಿರಲಿಲ್ಲವಲ್ಲ ಎನಿಸಿತು. ನೆನಪು ಮಾಡಿಕೊಂಡೆ. ಹಿಂದೆ ಕಾಲ್ನಡಿಗೆಯಲ್ಲಿ ಹೋಗುವವರಿಗೆ ರಸ್ತೆಯ ಎರಡೂ ಬದಿಗಳಲ್ಲಿ ಅಂದಾಜು ಮೂರಡಿ ಅಗಲದ ಕಾಲುದಾರಿ ಇತ್ತು. ಕೆಲವು ಕಡೆ ಅದರ ಮೇಲೆ ವಾಹನಗಳು ನುಗ್ಗದಂತೆ ಪೈಪಿನ ಬೇಲಿ ಇತ್ತು. ಅದೀಗ ಕಾಣುತ್ತಿಲ್ಲ! ರಸ್ತೆಯ ತೀರ ಬದಿಯಲ್ಲಿ ವಾಹನಗಳು ಒಂದೋ ಪಾರ್ಕಿಂಗ್ ಮಾಡಿವೆ ಇಲ್ಲವೇ ಆಚೆ ಈಚೆ ಓಡುತ್ತಿವೆ. ನಡೆದು ಹೋಗುವವರ ಕತೆ ಕೈಲಾಸ! ಇದ್ದದ್ದರಲ್ಲೇ ದಾರಿ ಮಾಡಿಕೊಂಡು ಹೋಗಬೇಕು!
ಬಿ.ಸಿ.ರೋಡಿಗೆ ಹಿಂದೆ ಬಂದವನೇ ಅಶೋಕವರ್ಧನರಿಗೆ ಫೋನಾಯಿಸಿದೆ: "ಹ್ವಾಯ್! ಕೆ.ಎಸ್. ರಾವ್ ರೋಡಿನಲ್ಲಿ ಮುಂಚೆ ಫುಟ್ ಪಾತ್ ಇರಲಿಲ್ಲವ?" ಅಂತ. ನನ್ನ ನೆನಪನ್ನು ನನಗೆ ಖಚಿತ ಮಾಡಿಕೊಳ್ಳಬೇಕಾಗಿತ್ತು. "ಇತ್ತಲ್ಲ. ಈಗ ಎಲ್ಲ ಹೋಗಿದೆ. ಅದರಿಂದಾಗಿ ಕೆಲವು ಆಕ್ಸಿಡೆಂಟ್ ಗಳೂ ಆಗಿಯಾಯಿತು" ಎಂದರು ಅಶೋಕರು.
ಆಗಲಿ ನೋಡೋಣ ಎಂದುಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒಂದು ಪತ್ರ ಬರೆದೆ: "ಮುಂಚೆ ಈ ರಸ್ತೆಯ ಬದಿಗೆ ಕಾಲುದಾರಿ ಇತ್ತು. ಹೊಸರಸ್ತೆ ಮಾಡುವಾಗ ಕಾಲುದಾರಿ ಇಲ್ಲವಾಗಿದೆ. ಇದು ಪಾದಚಾರಿಗಳಿಗೆ ಅನ್ಯಾಯ. ಕೂಡಲೇ ಕಾಲುದಾರಿ ಮಾಡಿಸಿಕೊಡಬೇಕಾಗಿ ಕೋರುತ್ತೇನೆ"
ನಿರೀಕ್ಷಿಸಿದಂತೆ ಉತ್ತರ ಬರಲಿಲ್ಲ. ಆದರೆ ನನಗೆ ಇದು ಹೊಸತಲ್ಲ. ಮುಂಚೆಯೂ ಪತ್ರಗಳನ್ನು ಬರೆದ ಅನುಭವ ನನಗಿತ್ತು. ಕೆಲವು ದಿನ ಕಾದೆ. ನೆನಪೋಲೆ ಬರೆದೆ. ಉತ್ತರವಿಲ್ಲ. ಮೂರನೆಯ ಪತ್ರ ಬರೆದು "ಈಗಲೂ ನೀವು ಉತ್ತರ ಬರೆಯದಿದ್ದರೆ/ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುತ್ತೇನೆ" ಎಂದೆ. ಆಗಲೂ ಉತ್ತರವಿಲ್ಲ. ಉಸ್ತುವಾರಿ ಸಚಿವರಿಗೆ (ಶ್ರೀ ಕೃಷ್ಣ ಪಾಲೆಮಾರ್) ಆಯುಕ್ತರಿಗೆ ಬರೆದ ಎಲ್ಲಾ ಪತ್ರಗಳ ಪ್ರತಿಗಳನ್ನಿಟ್ಟು ಒಂದು ದೂರು ಕೊಟ್ಟೆ. ಆಗ ನನ್ನ ಹತ್ತಿರ ಅವರ ವಿಳಾಸ ಇರಲಿಲ್ಲ. ಅದಕ್ಕೇನು? "ಶ್ರೀ ಕೃಷ್ಣ ಪಾಲೆಮಾರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು" ಎಂದು ವಿಳಾಸ ಬರೆದು ಅಂಚೆಗೆ ಹಾಕಿದೆ. ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಒಂದು ಪತ್ರ ಬಂತು. ಆಯುಕ್ತರಿಗೆ ಒಂದು ಪತ್ರ ಬರೆದು ಅದರ ಪ್ರತಿ ನನಗೆ ಕಳಿಸಿದ್ದರು.".... ಸದ್ರಿಯವರ ಮನವಿಯನ್ನು ಪರಿಶೀಲಿಸಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲು ಕೋರಲಾಗಿದೆ". ಸಚಿವರ ಪತ್ರದ ತಾರೀಕು ೧೩-೦೩-೦೯. ಅಂದಾಜು ೨೫-೦೩-೦೯ರ ಹೊತ್ತಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ಒಂದು "ಹಿಂಬರಹ"ವನ್ನು ನನಗೆ ಕಳಿಸಿಕೊಟ್ಟರು. ಈ ಹಿಂಬರಹದ ತಾರೀಕು ೧೨-೦೩-೦೯. ಎಂದರೆ ಸಚಿವರು ಸೂಚನೆ ಕೊಡುವ ಒಂದು ದಿನದ ಮೊದಲೇ ಹಿಂಬರಹ ತಯಾರಾಗಿತ್ತು! ಕೆಳಗಡೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಹಿಯ ಕೆಳಗೆ ಮಾತ್ರ ೨೩-೩-೦೯ ಎಂದಿತ್ತು! ಇರಲಿ ಬಿಡಿ. ಅಂತೂ ಉತ್ತರ ಬಂದಿತ್ತು.
ಅವರ ಹಿಂಬರಹದ ಈ ವಾಕ್ಯಗಳನ್ನು ನೋಡಿ: "......ಹಂಪನಕಟ್ಟದಿಂದ ಪ್ರಾರಂಭವಾಗಿ ನವಭಾರತ ವೃತ್ತದವರೆಗಿನ ಕೆ.ಎಸ್.ರಾವ್ ರಸ್ತೆಗಳಿಗೆ ೫೦೦ ಮೀ. ಉದ್ದಕ್ಕೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚತುಷ್ಪಥ ಕಾಂಕ್ರೀಟೀಕರಣ ರಸ್ತೆಯಾಗಿ ೧೪.೫೦ ಮೀ. ಅಗಲದಲ್ಲಿ ನಿರ್ಮಿಸಲಾಗಿದೆ.
ಆದರೆ ಈ ರಸ್ತೆಯ ಅಕ್ಕಪಕ್ಕದಲ್ಲಿ ವಾಣಿಜ್ಯಸಂಸ್ಥೆಗಳ ವ್ಯಾಪಾರೋದ್ಯಮ ಮಳಿಗೆಗಳು ರಸ್ತೆ ಉದ್ದಕ್ಕೆ ಇರುತ್ತವೆ. ಈಗ ಮಾಡಿರುವ ರಸ್ತೆಯ ಎರಡು ಬದಿಗಳಲ್ಲಿ ೧.೦೦ಮೀಟರ್ ಅಗಲದಲ್ಲಿ ಚರಂಡಿ ಸಮೇತ ಫುಟ್ ಪಾತ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಜಾಗದ ಅಡಚಣೆ ಇದ್ದು ಅದನ್ನು ಸರಿಪಡಿಸಿ ..........ಕೈಗೊಳ್ಳಲಾಗುವುದು. ಅಂದಾಜುಪಟ್ಟಿಯು ಅನುಮೋದನೆಗೊಂಡ ನಂತರ ಹಾಗೂ ಸ್ಥಳದ ಆ ಭಾಗ ಇತ್ಯರ್ಥಗೊಂಡ ನಂತರ ಎರಡು ಬದಿ ಫುಟ್ ಪಾತ್ ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಪ್ರತ್ಯೇಕ ಪಥ ನಿರ್ಮಿಸಲಾಗುವುದೆಂದು ತಿಳಿಸಿದೆ"
ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ. ಒಂದು, ರಸ್ತೆ ನಿರ್ಮಿಸುವಾಗ ಖಾಸಗಿಯವರ ಸಹಭಾಗಿತ್ವ ಇದೆ. ಎಂದರೆ ಅಷ್ಟರಮಟ್ಟಿಗೆ ಪಾಲಿಕೆಯ ಬಾಯಿ ಕಟ್ಟಿದೆ.
ಎರಡು, ರಸ್ತೆ ಸಂಪೂರ್ಣ ರಚನೆ ಆದಮೇಲೆ, ಚರಂಡಿ ಮತ್ತು ಫುಟ್ ಪಾತ್ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ! ಇದು ಎಂಜಿನಿಯರ್ ಆದವರು ಮಾಡುವ ಕೆಲಸವೆ? ಯಾವುದೇ ರಸ್ತೆ ರಚನೆಯಾಗುವುದಿದ್ದರೆ, ಬದಿಯಲ್ಲಿ ಚರಂಡಿ, ಕಾಲುದಾರಿ ಇದನ್ನೆಲ್ಲ ಸೇರಿಸದೆ ಯಾರಾದರೂ ಪ್ಲಾನ್ ತಯಾರಿಸುತ್ತಾರೆಯೆ? ಹಾಗಾದರೆ, ಫುಟ್ ಪಾತ್ ಹೋಗಲಿ ಚರಂಡಿ ಇಲ್ಲದ ರಸ್ತೆ ಇವರು ಮಾಡಿದ್ದು ಹೇಗೆ? ಇದು ಖಾಸಗಿ ಸಹಭಾಗಿತ್ವದ ಫಲ ಇರಬಹುದೆ?
ಇದೆಲ್ಲ ನಡೆದು ಸ್ವಲ್ಪ ದಿನದ ನಂತರ ನಾನು ಆ ಕಡೆ ಹೋದಾಗ ಚರಂಡಿ ಮಾಡಲು ರಸ್ತೆ ಬದಿ ಅಗೆಯುತ್ತಿದ್ದುದನ್ನು ನೋಡಿದ್ದೆ. ಈಗ ಹೋಗದೆ ಸುಮಾರು ಸಮಯ ಆಯಿತು. ಫುಟ್ ಪಾತಿನ ಕಥೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಾದರೂ ಆ ಕಡೆಯವರು ತಿಳಿಸಿದರೆ ಕೃತಜ್ಞ. ಒಂದು ವೇಳೆ ಫುಟ್ ಪಾತ್ ಆಗದಿದ್ದರೆ, ಮೇಲಿನ ಪತ್ರದ ಆಧಾರದಲ್ಲಿ ಅದಕ್ಕಾಗಿ ಪುನಃ ಪ್ರಯತ್ನಿಸುವುದು ಸಾಧ್ಯ. ಅಂಥ ಪ್ರಯತ್ನವನ್ನು ಯಾರು ಬೇಕಾದರೂ ಮಾಡಬಹುದು.
ಇಲ್ಲಿ ಒಂದು ಮಾತು ನಾನು ಸೇರಿಸಬೇಕು. ನಾನು ಯಾವ ರಾಜಕೀಯ ಪಕ್ಷದ ಕಾರ್ಯಕರ್ತನೂ ಅಲ್ಲ. ಶ್ರೀ ಕೃಷ್ಣ ಪಾಲೆಮಾರ್ ಅವರು ನನ್ನ ಪರಿಚಯದವರೂ ಅಲ್ಲ. (ಇನ್ನೂ ಒಂದು ಪ್ರಕರಣದಲ್ಲಿ ಅವರು ನನ್ನ ಪತ್ರಕ್ಕೆ ಸ್ಪಂದಿಸಿದ್ದಾರೆ). ಪ್ರಕರಣವನ್ನು ನಾನು ಯಾವ ಮಾಧ್ಯಮಕ್ಕೂ ಕೊಂಡುಹೋಗಲಿಲ್ಲ. ಜನ ಸೇರಿಸಿ ಚಳುವಳಿ ಮಾಡುವ ಮಾತಂತೂ ದೂರವೇ ಉಳಿಯಿತಷ್ಟೆ. ಅಂಚೆಗಾಗಿ ಸ್ವಲ್ಪ ಹಣ ಖರ್ಚಾಗಿದೆ ಅಷ್ಟೆ.
ನಮ್ಮ ದೇಶದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೆ ಖಂಡಿತ ಬೆಲೆ ಇದೆ. ನಾವು ಸರಿಯಾದ ರೀತಿಯಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಗತ್ಯ.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ರಾಯರೇ
ಹನುಮಂತನ ತಾಕತ್ತು ಜ್ಞಾಪಿಸಲು ಜಾಂಬವನ ಕೆಲಸವೇನೋ ಚೆನ್ನಾಗಿಯೇ ಮಾದಿದ್ದೀರಿ. ಆದರೆ ಕಷ್ಟವಿರುವುದು ಎಷ್ಟೋ ಜನ ಕೇವಲ ಕಪಿಸೈನ್ಯದ ಸದಸ್ಯರು ಮಾತ್ರ!
ಅಶೋಕವರ್ಧನ

ಪಂಡಿತಾರಾಧ್ಯ ಹೇಳಿದರು...

ಪ್ರೀಯರೆ,
ಇದು ಮಂಗಳೂರು ಮಾತ್ರವಲ್ಲ.ಎಲ್ಲ ಊರುಗಳ ರಸ್ತೆಗಳ ಕರುಣಾಜನಕ ಸ್ಥಿತಿ.
ರಸ್ತೆಯ ವಾಹನ ನೇರವಾಗಿ ಅಂಗಡಿಗೆ, ಮನೆಗೆ ನುಗ್ಗುವುದು ಅನಿವಾರ್ಯ ಎಂಬಂತೆ ರಸ್ತೆ ವಿಸ್ತರಣೆ ನಡೆಯುತ್ತಿದೆ.
ಪಾದಚಾರಿಗಳು ಹನುಮಂತನಂತೆ ಆಕಾಶಗಾಮಿಗಳಾಗುವದು ಅನಿವಾರ್ಯ.
ಪಂಡಿತಾರಾಧ್ಯ ಮೈಸೂರು

ಏ ಜೆ ಜಾವೀದ್ ಹೇಳಿದರು...

ಶ್ರೀಯುತರೆ,
ನಾವು ಸಾರ್ವಜನಿಕ ಸಮಸ್ಯೆಗಳನ್ನು ನಮ್ಮದಲ್ಲ, ಅದರ ಉಸಾಬರಿ ನಮಗೇಕೆ ಎನ್ನುವ ಮನಸ್ಥಿತಿಯವರು. ನಮ್ಮದು ಪ್ರಜಾಪ್ರಭುತ್ವ ಎಂಬ ಸಂಗತಿ ನಮಗೆ ನೆನಪಾಗುವುದು ಚುನಾವಣೆ ದಿನ ಮಾತ್ರ.

ನಮ್ಮೂರಿನಲ್ಲಿ (ಹಾಸನ) ರಸ್ತೆ ಬದಿಯ ಚರಂಡಿ ಒಂದರ ಮೇಲಿನ ಸ್ಲ್ಯಾಬ್ ಗಳು ಲಾರಿಯೊಂದು ಮುರಿದುಹಾಕಿ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿತ್ತು. ಆ ಜಾಗದ ಪಕ್ಕದಲ್ಲಿ ಬಸ್‍ ಸ್ಟಾಪ್. ರಾತ್ರಿವೇಳೆಯಲ್ಲಿ ಅಲ್ಲಿಯ ಗುಂಡಿ ಕಾಣುತಿರಲಿಲ್ಲ. ಬಸ್ಸಿನಿಂದ ಇಳಿಯುವ ಪ್ರಯಾಣಿಕರು ನೇರವಾಗಿ ಚರಂಡಿಯೊಳಗೆ ಇಳಿಯುವ ಅಪಾಯ ಇತ್ತು. ಸುಮಾರು ೨-೩ ತಿಂಗಳು ಹೀಗೆ ಇತ್ತು. ನಂತರ ಮಳೆಗಾಲ ಪ್ರಾರಂಭವಾಗಿ ಅಲ್ಲಿ ಬೀಳುವವರು ಕೊಚ್ಚಿ ಹೋಗುವ ಸಂಭವ ಇದ್ದುದರಿಂದ ಅಪಾಯದ ತೀವ್ರತೆ ಹೆಚ್ಚಾಯಿತು. ಇದರ ಬಗ್ಗೆ ನಾನು ಸ್ಥಳೀಯ ಪತ್ರಿಕೆಯ ವಾಚಕರ ವಿಭಾಗಕ್ಕೆ ಬರೆದೆ. ಪತ್ರ ಪ್ರಕಟವಾಯಿತು. ಮರುದಿನವೇ ನಗರಸಭೆಯವರು ಮುರಿದುಹೋಗಿದ್ದ ಸ್ಲ್ಯಾಬ್ ಸರಿಪಡಿಸಿದರು!