ಶುಕ್ರವಾರ, ಏಪ್ರಿಲ್ 9, 2010

ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ......

ತಾ. ೧೬-೩-೧೦ರ ನನ್ನ ಪತ್ರಕ್ಕೆ ಮಂಗಳೂರು ಉ.ಅ.ಸಂ.ಯವರು ನನಗೆ ಉತ್ತರಿಸದಿದ್ದರೂ, ತಾ. ೨೦-೩-೧೦ರಂದೇ ಅದನ್ನು ಸುಬ್ರಹ್ಮಣ್ಯ ಉಪವಿಭಾಗದ ಸ.ಅ.ಸಂ.ಯವರಿಗೆ ಕಳಿಸಿಕೊಟ್ಟಿದ್ದಾರೆ. ಎಂದರೆ ನನ್ನ ಪತ್ರ ಅವರಿಗೆ ಮುಟ್ಟಿದ ಒಂದೆರಡು ದಿನಗಳಲ್ಲಿಯೇ ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.
ನನ್ನ ನೆನಪೋಲೆ ಹೋದಮೇಲೆ ಅವರು ಸುಳ್ಯದ ಉ.ಸ.ಅ.ಸಂ.ಯವರಿಗೆ ಮತ್ತೊಂದು ಅರೆಸರಕಾರಿ ಪತ್ರ ಬರೆದು ನನಗೆ ಅದರ ಯಥಾಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ಆ ಪತ್ರ ಹೀಗಿದೆ:
........."ಮೇಲಿನ ವಿಷಯಕ್ಕೆ ಸಂಬಂಧಿಸಿ ಉಲ್ಲೇಖ(೧)ರ ಈ ಕಾರ್ಯಾಲಯದ ಪತ್ರದ ಕಡೆಗೆ ನಿಮ್ಮ ಗಮನ ಸೆಳೆಯಲಾಗಿದೆ. ಸದ್ರಿ ಪತ್ರದಲ್ಲಿ ಉಲ್ಲೇಖ(೧)ರ ಅರ್ಜಿಯ ಕುರಿತು ಕೂಡಲೇ ತನಿಖೆ ನಡೆಸಿ ತನಿಖಾವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.ಆದರೆ, ಸುಮಾರು ೧೫ ದಿನ ಕಳೆದರೂ, ನಿಮ್ಮಿಂದ ವರದಿ ಬಾರದೇ ಇರುವುದು ವಿಷಾದನೀಯ ಸಂಗತಿಯಾಗಿರುತ್ತದೆ. ಈ ಬಗ್ಗೆ ಅರ್ಜಿದಾರರು....ಉತ್ತರಕ್ಕೆ ಇನ್ನೂ ಹತ್ತು ದಿನ ಕಾಯಲು ಸಿದ್ಧನಿರುವುದಾಗಿ ತಿಳಿಸಿರುತ್ತಾರೆ.....ಪತ್ರದ ಕಡೆಗೆ ನಿಮ್ಮ ವೈಯಕ್ತಿಕ ಗಮನ ಹರಿಸಿ ತನಿಖಾವರದಿಯನ್ನು ಮರುಟಪ್ಪಾಲಿನಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ಇನ್ನು ಮುಂದೆ ಪತ್ರವ್ಯವಹಾರಕ್ಕೆ ಆಸ್ಪದ ಕೊಡಬಾರದಾಗಿ ತಿಳಿಸಲಾಗಿದೆ"
ಕ್ರಮದ ವಿಶ್ಲೇಷಣೆ:
ನನ್ನ ಪತ್ರವನ್ನು ಸುಬ್ರಹ್ಮಣ್ಯದ ಪ್ರಕರಣದ ಕುರಿತ ದೂರು ಎಂದು ಪರಿಗಣಿಸುವ ಮೂಲಕ ಮಂಗಳೂರಿನ ಉ.ಅ.ಸಂ.ಯವರು ಸಮಸ್ಯೆಯನ್ನು ತಮ್ಮ ಪಾಲಿಗೆ ಸುಲಭ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾದ ರೀತಿಯಲ್ಲಿ ಹೊಣೆಯನ್ನು ಕೆಳ ಅಧಿಕಾರಿಗೆ ವರ್ಗಾಯಿಸಿದ್ದಾರೆ. ಆ ಅಧಿಕಾರಿಗಿಂತ ಕೆಳಗೆ ವಲಯ ಅರಣ್ಯಾಧಿಕಾರಿ ಮತ್ತು ವನಪಾಲಕರು ಇರುವುದರಿಂದ ಜವಾಬ್ದಾರಿ ಅವರಿಗೆ ವರ್ಗಾವಣೆಯಾದರೆ ಆಶ್ಚರ್ಯವಿಲ್ಲ!
ಇಷ್ಟು ನೇರವಾಗಿ, ಸ್ಪಷ್ಟವಾಗಿ ಬರೆದದ್ದು ಸಹ ಉ.ಅ.ಸಂ.ಯವರಿಗೆ ಅರ್ಥವಾಗಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅನಿವಾರ್ಯವಾಗಿ ಇದನ್ನು ಪುನಃ ಸ್ಪಷ್ಟ ಪಡಿಸಿ ಅವರಿಗೆ ಹೀಗೆ ಪತ್ರ ಬರೆದಿದ್ದೇನೆ.
"..........ನಿಮ್ಮ ಪತ್ರದ ಯಥಾಪ್ರತಿಯನ್ನು ನನಗೆ ಕಳಿಸಿದ್ದೀರಿ. ಧನ್ಯವಾದಗಳು.
ನಿಮ್ಮ ಪತ್ರಕ್ಕೆ ಸಂಬಂಧಿಸಿ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ಕೋರುತ್ತೇನೆ.
೧. ದಿ. ೧೮-೩-೨೦೧೦ರ ನನ್ನ ಪತ್ರದ ವಿಷಯ - ದ. ಕ. ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ - ಎಂಬುದಾಗಿತ್ತು. ಆದರೆ ನೀವು ಕೈಗೊಂಡ ಕ್ರಮ ಅದಕ್ಕೆ ಸಂಬಂಧಪಟ್ಟಿರುವುದಿಲ್ಲ.
೨. ಮರಗಳ ರಕ್ಷಣೆಯ ಕಾನೂನು ಉಲ್ಲಂಘನೆಯಾಗುತ್ತಿರುವುದಕ್ಕೆ ನಿದರ್ಶನವಾಗಿ ಮಾತ್ರ ನಾನು ಸುಬ್ರಹ್ಮಣ್ಯದ ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಮರಗಳು ಸಂಪೂರ್ಣ ನಾಶವಾದ ಮೇಲೆ ಅದರ ಬಗ್ಗೆ ತನಿಖೆ ಮಾಡುವುದು, ಕಾನೂನು ಕ್ರಮ ತೆಗೆದುಕೊಳ್ಳುವುದು ಇತ್ಯಾದಿಗಳಲ್ಲಿ ನನಗೆ ಆಸಕ್ತಿ ಇಲ್ಲ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದೂ, ಬಿಡುವುದೂ ಇಲಾಖೆಗೆ ಬಿಟ್ಟ ವಿಷಯ. ನನ್ನ ಆಸಕ್ತಿ ಇರುವುದು ಇನ್ನು ಮುಂದಾದರೂ, ಇರುವ ಮರಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರ.
೩. ಸುಬ್ರಹ್ಮಣ್ಯದ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸುವುದು ನನ್ನ ಉದ್ದೇಶವಾಗಿದ್ದರೆ, ನಾನು ಅಲ್ಲಿನ ಸ.ಅ.ಸಂ.ಯವರಿಗೆ ಪತ್ರ ಬರೆಯುತ್ತಿದ್ದೆ. ಅವರು ಕ್ರಮ ಕೈಗೊಳ್ಳದಿದ್ದರೆ ಮಾತ್ರ ನಿಮಗೆ ದೂರು ಸಲ್ಲಿಸುತ್ತಿದ್ದೆ.
೪. ನೀವು ಜಿಲ್ಲಾಮಟ್ಟದ ಅಧಿಕಾರಿಯಾಗಿರುವುದರಿಂದ ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ನನ್ನ ಪತ್ರದಲ್ಲಿ ನಿಮ್ಮನ್ನು ಕೋರಿದ್ದೆ.
೫. ಈ ನಿಟ್ಟಿನಲ್ಲಿ, ಮರಗಳ ಸಂರಕ್ಷಣೆಯ ಕಾನೂನು ಇದೆ ಎಂಬ ಅರಿವೇ ಇಲ್ಲದ ಹಾಗೆ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಗಳ ನಾಶವನ್ನು ತಡೆಗಟ್ಟಲು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕಾಗಿಯೂ, ಹಾಗೆ ತೆಗೆದುಕೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿಯೂ ಮತ್ತೊಮ್ಮೆ ನಿಮ್ಮನ್ನು ಕೋರುತ್ತೇನೆ."

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಲೋಕರೂಢಿಯ ಮಾತು - ನಾಯಿಗೆ ಹೇಳಿದರೆ, ನಾಯಿ ಬಾಲಕ್ಕೆ ಹೇಳಿತಂತೆ.
ನಮ್ಮ ಹಿರಿಯರು ಅಮೃತ ಬರಲು ಹಂಚಿ ಕುದಿಯುತ್ತಿದ್ದರು, ಗರಳ ಒದಗಲು ಕೊರಳ ನೀಡುತ್ತಿದ್ದರು. ಮೌಲ್ಯಗಳು ಹಿಂದೆ ಮುಂದಾದ್ದಕ್ಕೆ ಕಾಲವನ್ನು ದೂಷಿಸಿ ನಮ್ಮ ಕಾಲಮೇಲೆ ಕಾಲು ಹಾಕಿ ಕೂರೋಣ ಬನ್ನಿರೋ ಕೂರೋಣ!
ಅಶೋಕವರ್ಧನ