ಸೋಮವಾರ, ಮೇ 17, 2010

ಮರಗಳ ಸಂರಕ್ಷಣೆಯ ಕಾನೂನು ಜಾರಿಗೆ ಕೊಡುವ ಪರಿ.......


ಎಪ್ರಿಲ್ ೮ರಂದು "ಅರಣ್ಯ ಇಲಾಖೆ ಅಧಿಕಾರಿಗಳ ಉತ್ತರ ಬಂತು, ಆದರೆ....." ಎಂಬ ಲೇಖನ ಬರೆದಿದ್ದೆ. ಇದು ಪ್ರಕರಣ ಮುಂದುವರಿದ ಬಗೆ:
.
ನನ್ನ ಪತ್ರಕ್ಕೆ ಮಂಗಳೂರಿನ ಉ.ಅ.ಸಂ. ಯವರು ಉತ್ತರ ಬರೆಯಲಿಲ್ಲ. ನೆನಪೋಲೆ ಬರೆದೆ. ಪ್ರಯೋಜನವಾಗಲಿಲ್ಲ. "ಉತ್ತರ ಬರೆಯದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ" ಎಂಬ ಎಚ್ಚರಿಕೆ ರವಾನಿಸಿದೆ. ಆದರೂ ಉತ್ತರ ಬರಲಿಲ್ಲ. ಮಂಗಳೂರಿನ ಮಹಾನಗರಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಕಛೇರಿ ಇರುವ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಲ್ಲಾ ದಾಖಲೆಗಳ ಸಮೇತ ಒಂದು ದೂರು ನೀಡಿ ಯಥಾಪ್ರತಿಯನ್ನು ಉ.ಅ.ಸಂ.ಯವರಿಗೆ ಕಳಿಸಿದೆ. ಇಷ್ಟು ಹಟ ಮಾಡಿದ ಮೇಲೆ ಮೊನ್ನೆ ೧೩-೫-೨೦೧೦ರಂದು ಉ.ಅ.ಸಂ. ಒಂದು ಉತ್ತರ ಬರೆದಿದ್ದಾರೆ. ನಾನು ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಬರೆದ ಪತ್ರದ ಪರಿಣಾಮ ಈ ಪತ್ರವೋ ಎಂದು ತಿಳಿಯುವಂತಿಲ್ಲ. ಹೇಗಾದರೂ ಇರಲಿ, ಅವರ ಉತ್ತರ ಓದಿ ನೋಡಿ:
"...... -ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ- ಎಂಬ ಕುರಿತು ಮೊದಲನೆಯದಾಗಿ ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ತಾವು ಇಟ್ಟುಕೊಂಡಿರುವ ತಮ್ಮ ಕಾಳಜಿಗೆ ಅಭಿನಂದನೆಗಳು. ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
೧. ಮರಗಳ ರಕ್ಷಣೆಯ ಬಗ್ಗೆ "ಕಾಡು ಉಳಿಸಿ ನಾಡು ಬೆಳೆಸಿ" ಎಂಬ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
೨. ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ.
೩. "ವೃಕ್ಷಲಕ್ಷ" ಕಾರ್ಯಕ್ರಮದಡಿಯಲ್ಲಿ ಹಲವು ಕಡೆಗಳಲ್ಲಿ ಕಾರ್ಯಾಗಾರ, ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
೪. ಮರಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಜನರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ.
೫. ಈ ವಿಭಾಗದಲ್ಲಿ ಕಾರ್ಯಕಾರಿ ಸಿಬ್ಬಂದಿ ಕೊರತೆ ಇದ್ದರೂ, ಅರಣ್ಯ ಅಪರಾಧಗಳನ್ನು ತಡೆಗಟ್ಟುವರೇ ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ.
ಈ ಮೇಲಿನಂತಹ ಹಲವಾರು "ಜಾಗೃತಿ" ಕ್ರಮಗಳನ್ನು ಜನರಲ್ಲಿ ಮೂಡಿಸಿದ್ದರೂ, ಆಗಾಗ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದು ಸಾಗಿಸುವುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗೂ ತಮ್ಮ ಪತ್ರದಲ್ಲಿ ತಿಳಿಸಿದಂತೆ ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಇನ್ನು ಮುಂದೆ ಮರಗಳ ರಕ್ಷಣೆಯ ಬಗ್ಗೆ ಇರುವ ಕಾಯ್ದೆ, ಕಾನೂನುಗಳನ್ನು ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಕಾರ್ಯಗಾರಗಳನ್ನು ಏರ್ಪಡಿಸಿದಾಗ ಸದ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನು ತಮಗೂ ಕೂಡ ಮಾಡಲಾಗುವುದು ಎಂಬ ವಿಷಯವನ್ನು ತಮ್ಮ ಮಾಹಿತಿಗೆ ನೀಡಲಾಗಿದೆ"
ಪತ್ರಕ್ಕೆ ಕೂಡಲೇ ಹೀಗೆ ಉತ್ತರಿಸಿದ್ದೇನೆ:
ಮರಗಳ ರಕ್ಷಣೆಯ ಕಾನೂನನ್ನು ಜಾರಿಗೆ ಕೊಡುವ ಬಗ್ಗೆ ನೀವು ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ತಿಳಿದು ತುಂಬಾ ಸಂತೋಷವಾಯಿತು. ಅರಣ್ಯ ಸಂರಕ್ಷಣೆಗೆ ನೀವು ನೀಡುತ್ತಿರುವ ಮಹತ್ವವು ಅಭಿನಂದನಾರ್ಹವಾಗಿದೆ.
೧. "ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ" ಎಂದು ನಿಮ್ಮ ಪತ್ರದಲ್ಲಿ ಹೇಳಿದ್ದೀರಿ. ೨೦೦೫-೨೦೦೬ರಲ್ಲಿ ಬಂಟ್ವಾಳ ಅರಣ್ಯವಲಯಕ್ಕೆ ಸಂಬಂಧಪಟ್ಟ ಬಿ. ಮೂಡ ಗ್ರಾಮದಲ್ಲಿ ನೀವು ಹೇಳುವ ಯಾವುದಾದರೂ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಡಲಾಗಿತ್ತೆ? ಎಲ್ಲಿ, ಎಷ್ಟು ಸಸಿಗಳನ್ನು ನೆಡಲಾಗಿತ್ತು, ಯಾವ ಜಾತಿಗೆ ಸೇರಿದ ಸಸಿಗಳು ಎಂಬುದರ ಪೂರ್ಣ ವಿವರವನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
೨. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಸಮಿತಿಯು ಅಸ್ತಿತ್ವದಲ್ಲಿದೆಯೆ? ಇದ್ದರೆ ಅದರ ವಿಳಾಸ, ಸದಸ್ಯರ ಹೆಸರು ಇತ್ಯಾದಿ ವಿವರಗಳನ್ನೂ, ಒಂದು ವೇಳೆ ಇಲ್ಲದಿದ್ದರೆ, ಬಿ.ಮೂಡ ಗ್ರಾಮವು ಯಾವ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೂ ಅದರ ವಿಳಾಸ ಇತ್ಯಾದಿ ವಿವರಗಳನ್ನೂ ನನಗೆ ನೀಡಬೇಕಾಗಿ ಕೋರುತ್ತೇನೆ.
೩. " ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ." ಎಂದು ನೀವು ಹೇಳಿದ್ದೀರಿ. ದಿನಾಂಕ ೧೬-೩-೨೦೧೦ರ ನನ್ನ ಪತ್ರದಲ್ಲಿ ನಾನು ಪ್ರಸ್ತಾವಿಸಿರುವ ಮರಗಳ ನಾಶವನ್ನು ಕಂಡುಕೊಳ್ಳಲು ಹಗಲು ರಾತ್ರಿ ಗಸ್ತು ತಿರುಗುವ ಅವಶ್ಯಕತೆಯೇ ಇಲ್ಲ. ಈ ರೀತಿಯಲ್ಲಿ ಆಗುತ್ತಿರುವ ಮರಗಳ ನಾಶವು ಹಾಡುಹಗಲೇ, ಎಲ್ಲರ ಎದುರಿನಲ್ಲೇ, ಸಾಕಷ್ಟು ದೂರಕ್ಕೆ ಕೇಳುವಂತೆ ಶಬ್ದ ಮಾಡುವ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿ ತಿರುಗಿದರೂ ನೀವು ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ಕಾಣಬಹುದು. ಜಿಲ್ಲೆಯ ನಗರ ಪ್ರದೇಶಗಳೂ ಸೇರಿದಂತೆ ಎಲ್ಲ ಕಡೆಯೂ ಸಹ, ಈ ರೀತಿಯಲ್ಲಿ ಮರಗಳನ್ನು ಬುಡಸಮೇತ ಉರುಳಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ಇದನ್ನು ಕಂಡುಕೊಳ್ಳಲು ನೀವು ನಿಮ್ಮ ವಾಹನದಿಂದ ಕೆಳಗೆ ಇಳಿಯಬೇಕಾಗಿಯೂ ಇಲ್ಲ. ನೀವು ಕುಳಿತಲ್ಲಿಗೇ ಕಾಣುವಷ್ಟು ಸ್ಪಷ್ಟವಾಗಿ ಈ ನಾಶಕ್ರಿಯೆ ನಡೆಯುತ್ತಿದೆ. ಯಾವುದಾದರೊಂದು ಗುಡ್ಡದ ನೆತ್ತಿಗೆ ಹೋಗಿ ನಿಂತು ನೋಡಿದರೆ, ಭೂಭಾಗವು ಅಲ್ಲಲ್ಲಿ ಕೆಂಪಾಗಿರುವುದನ್ನು ನೀವು ಕಾಣಬಹುದು. ಹತ್ತಿರ ಹೋಗಿ ನೋಡಿದರೆ, ಉರುಳಿಸಿದ ಮರಗಳು ಅಥವಾ ಅವುಗಳ ಅವಶೇಷಗಳು ಅಲ್ಲಿಯೇ ಬಿದ್ದಿರುವುದನ್ನೂ ಕಾಣುವ ಸಾಧ್ಯತೆ ಇದೆ.
ಆದ್ದರಿಂದ ಯಂತ್ರಗಳನ್ನು ಬಳಸಿ ಆಗುತ್ತಿರುವ ಮರಗಳ ನಾಶವನ್ನು ತಡೆಹಿಡಿಯುವ ನಿಟ್ಟಿನಲ್ಲಿ ನೀವು ಮರಗಳ ರಕ್ಷಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡಬೇಕಾಗಿ ನಿಮ್ಮನ್ನು ಮತ್ತೊಮ್ಮೆ ಕೋರುತ್ತೇನೆ.
"ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ" ಎಂದು ನೀವು ಹೇಳಿದ್ದೀರಿ. ಆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿಕೊಡಬೇಕಾಗಿ ಕೋರುತ್ತೇನೆ.
ಈ ಪತ್ರಕ್ಕೆ ಇನ್ನು ಹದಿನೈದು ದಿನಗಳಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ."
ಈ ಪ್ರಕರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ಬ್ಲಾಗಿನಲ್ಲಿ ಪ್ರತಿಕ್ರಿಯೆ ಪ್ರಕಟಿಸುವುದು ಬೇಡ ಎಂದಿದ್ದರೆ, ಇ-ಮೇಲ್ ವಿಳಾಸಕ್ಕೆ ಪ್ರತಿಕ್ರಿಯೆ ಕಳಿಸಿ. (nesara.mudrana@gmail.com) ನನ್ನನ್ನು ಟೀಕಿಸಲು ಯಾವ ಮುಲಾಜೂ, ದಾಕ್ಷಿಣ್ಯವೂ ಬೇಡ.

ಗುರುವಾರ, ಏಪ್ರಿಲ್ 22, 2010

ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!

ಬಂಟ್ವಾಳ ತಾಲೂಕಿನ ಮಂಚಿ ಬಿ.ವಿ. ಕಾರಂತರ ಹುಟ್ಟೂರು. ಈ ತಿಂಗಳ ೯,೧೦,೧೧ರಂದು ಅಲ್ಲಿ ಅವರ ನೆನಪಿಗಾಗಿ ಅವರ ಅಭಿಮಾನಿಗಳೆಲ್ಲ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಲು ಹೊರಟದ್ದಲ್ಲ. ಆ ದಿನ ಶ್ರೀಮತಿ ವೈದೇಹಿಯವರು ವ್ಯಕ್ತಪಡಿಸಿದ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕೆನ್ನಿಸಿದ್ದರಿಂದ ಈ ಬರಹ.
ವೈದೇಹಿಯವರು ಆ ದಿನ ಸಂಜೆಯ ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಒಂದು ಮಾತು ಹೇಳಿದರು: "ಎಂಜಿನಿಯರ್ ಎಂದರೆ ಮರಗಳನ್ನು ಕಡಿದು ರಸ್ತೆ ನಿರ್ಮಿಸುವವನಲ್ಲ. ಆ ಕೆಲಸವನ್ನು ಯಾವ ಕಂಟ್ರಾಕ್ಟರ್ ಕೂಡ ಮಾಡಬಲ್ಲ. ಎಂಜಿನಿಯರ್ ಆದವನು ಮರಗಳನ್ನು ಉಳಿಸಿಕೊಂಡೇ ರಸ್ತೆ ಮಾಡುವ ಜಾಣ್ಮೆ ಹೊಂದಿರಬೇಕು. ಈಗ ಎಲ್ಲೆಂದರಲ್ಲಿ ರಸ್ತೆ ಮಾಡಲೆಂದು ಮರ ಕಡಿಯುತ್ತಾರೆ. ಯಾರು ಇದನ್ನು ತಡೆಯುವವರು? ನಾವು ಹೇಳಲು ಸಾಧ್ಯವೆ? ನಾವು ಹೇಳಿದರೆ ಕೇಳುತ್ತಾರೆಯೆ?". ಮೊನ್ನೆ ಮೊನ್ನೆ ಒಂದು ಊಟದ ಮನೆಯಲ್ಲಿ ಸಿಕ್ಕಿದ ಅಲ್ಲಿನವರೇ ಆದ ಕಂದೂರು ಐತಾಳರೂ ವೈದೇಹಿಯವರ ಈ ಮಾತುಗಳನ್ನು ತುಂಬ ಮೆಚ್ಚಿಕೊಳ್ಳುತ್ತಾ. "ನಾವು ಹೇಳಿದರೆ ಆದೀತ? ನಮಗೆ ಏನು ಶಕ್ತಿ ಇದೆ?" ಎಂದರು. ನಾನು ಸುಮ್ಮನಿದ್ದೆ.
**********
ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲವಂತೆ. ಅದೇ ಅವನ ಸಮಸ್ಯೆ.
**********
ನಾನು ಮಂಗಳೂರಿಗೆ ಹೋಗುವುದು ಅಪರೂಪ. ಕಳೆದ ವರ್ಷದ ಪ್ರಾರಂಭದಲ್ಲಿ ಯಾತಕ್ಕೋ ಹೋಗಿದ್ದೆ. ಕಾರ್ನಾಡು ಸದಾಶಿವರಾವ್ ರಸ್ತೆಯಲ್ಲಿ ನಡೆದು ಹೋಗಬೇಕಾಯಿತು. ನೋಡಿದರೆ ಹಳತೆಲ್ಲ ಪೂರ್ತಿ ಹೋಗಿ, ಹೊಸ ವಿಶಾಲವಾದ ರಸ್ತೆ ಆಗಿದೆ. ಪೂರ್ತಿ ಕಾಂಕ್ರೀಟ್ ರಸ್ತೆ, ಬದಿಯ ಅಂಗಡಿಗಳ ಹೊಸ್ತಿಲವರೆಗೂ ಚಾಚಿಕೊಂಡಿದೆ. ಅರೆ! ಹಿಂದೆ ಹೀಗಿರಲಿಲ್ಲವಲ್ಲ ಎನಿಸಿತು. ನೆನಪು ಮಾಡಿಕೊಂಡೆ. ಹಿಂದೆ ಕಾಲ್ನಡಿಗೆಯಲ್ಲಿ ಹೋಗುವವರಿಗೆ ರಸ್ತೆಯ ಎರಡೂ ಬದಿಗಳಲ್ಲಿ ಅಂದಾಜು ಮೂರಡಿ ಅಗಲದ ಕಾಲುದಾರಿ ಇತ್ತು. ಕೆಲವು ಕಡೆ ಅದರ ಮೇಲೆ ವಾಹನಗಳು ನುಗ್ಗದಂತೆ ಪೈಪಿನ ಬೇಲಿ ಇತ್ತು. ಅದೀಗ ಕಾಣುತ್ತಿಲ್ಲ! ರಸ್ತೆಯ ತೀರ ಬದಿಯಲ್ಲಿ ವಾಹನಗಳು ಒಂದೋ ಪಾರ್ಕಿಂಗ್ ಮಾಡಿವೆ ಇಲ್ಲವೇ ಆಚೆ ಈಚೆ ಓಡುತ್ತಿವೆ. ನಡೆದು ಹೋಗುವವರ ಕತೆ ಕೈಲಾಸ! ಇದ್ದದ್ದರಲ್ಲೇ ದಾರಿ ಮಾಡಿಕೊಂಡು ಹೋಗಬೇಕು!
ಬಿ.ಸಿ.ರೋಡಿಗೆ ಹಿಂದೆ ಬಂದವನೇ ಅಶೋಕವರ್ಧನರಿಗೆ ಫೋನಾಯಿಸಿದೆ: "ಹ್ವಾಯ್! ಕೆ.ಎಸ್. ರಾವ್ ರೋಡಿನಲ್ಲಿ ಮುಂಚೆ ಫುಟ್ ಪಾತ್ ಇರಲಿಲ್ಲವ?" ಅಂತ. ನನ್ನ ನೆನಪನ್ನು ನನಗೆ ಖಚಿತ ಮಾಡಿಕೊಳ್ಳಬೇಕಾಗಿತ್ತು. "ಇತ್ತಲ್ಲ. ಈಗ ಎಲ್ಲ ಹೋಗಿದೆ. ಅದರಿಂದಾಗಿ ಕೆಲವು ಆಕ್ಸಿಡೆಂಟ್ ಗಳೂ ಆಗಿಯಾಯಿತು" ಎಂದರು ಅಶೋಕರು.
ಆಗಲಿ ನೋಡೋಣ ಎಂದುಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒಂದು ಪತ್ರ ಬರೆದೆ: "ಮುಂಚೆ ಈ ರಸ್ತೆಯ ಬದಿಗೆ ಕಾಲುದಾರಿ ಇತ್ತು. ಹೊಸರಸ್ತೆ ಮಾಡುವಾಗ ಕಾಲುದಾರಿ ಇಲ್ಲವಾಗಿದೆ. ಇದು ಪಾದಚಾರಿಗಳಿಗೆ ಅನ್ಯಾಯ. ಕೂಡಲೇ ಕಾಲುದಾರಿ ಮಾಡಿಸಿಕೊಡಬೇಕಾಗಿ ಕೋರುತ್ತೇನೆ"
ನಿರೀಕ್ಷಿಸಿದಂತೆ ಉತ್ತರ ಬರಲಿಲ್ಲ. ಆದರೆ ನನಗೆ ಇದು ಹೊಸತಲ್ಲ. ಮುಂಚೆಯೂ ಪತ್ರಗಳನ್ನು ಬರೆದ ಅನುಭವ ನನಗಿತ್ತು. ಕೆಲವು ದಿನ ಕಾದೆ. ನೆನಪೋಲೆ ಬರೆದೆ. ಉತ್ತರವಿಲ್ಲ. ಮೂರನೆಯ ಪತ್ರ ಬರೆದು "ಈಗಲೂ ನೀವು ಉತ್ತರ ಬರೆಯದಿದ್ದರೆ/ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುತ್ತೇನೆ" ಎಂದೆ. ಆಗಲೂ ಉತ್ತರವಿಲ್ಲ. ಉಸ್ತುವಾರಿ ಸಚಿವರಿಗೆ (ಶ್ರೀ ಕೃಷ್ಣ ಪಾಲೆಮಾರ್) ಆಯುಕ್ತರಿಗೆ ಬರೆದ ಎಲ್ಲಾ ಪತ್ರಗಳ ಪ್ರತಿಗಳನ್ನಿಟ್ಟು ಒಂದು ದೂರು ಕೊಟ್ಟೆ. ಆಗ ನನ್ನ ಹತ್ತಿರ ಅವರ ವಿಳಾಸ ಇರಲಿಲ್ಲ. ಅದಕ್ಕೇನು? "ಶ್ರೀ ಕೃಷ್ಣ ಪಾಲೆಮಾರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು" ಎಂದು ವಿಳಾಸ ಬರೆದು ಅಂಚೆಗೆ ಹಾಕಿದೆ. ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಒಂದು ಪತ್ರ ಬಂತು. ಆಯುಕ್ತರಿಗೆ ಒಂದು ಪತ್ರ ಬರೆದು ಅದರ ಪ್ರತಿ ನನಗೆ ಕಳಿಸಿದ್ದರು.".... ಸದ್ರಿಯವರ ಮನವಿಯನ್ನು ಪರಿಶೀಲಿಸಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲು ಕೋರಲಾಗಿದೆ". ಸಚಿವರ ಪತ್ರದ ತಾರೀಕು ೧೩-೦೩-೦೯. ಅಂದಾಜು ೨೫-೦೩-೦೯ರ ಹೊತ್ತಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ಒಂದು "ಹಿಂಬರಹ"ವನ್ನು ನನಗೆ ಕಳಿಸಿಕೊಟ್ಟರು. ಈ ಹಿಂಬರಹದ ತಾರೀಕು ೧೨-೦೩-೦೯. ಎಂದರೆ ಸಚಿವರು ಸೂಚನೆ ಕೊಡುವ ಒಂದು ದಿನದ ಮೊದಲೇ ಹಿಂಬರಹ ತಯಾರಾಗಿತ್ತು! ಕೆಳಗಡೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಹಿಯ ಕೆಳಗೆ ಮಾತ್ರ ೨೩-೩-೦೯ ಎಂದಿತ್ತು! ಇರಲಿ ಬಿಡಿ. ಅಂತೂ ಉತ್ತರ ಬಂದಿತ್ತು.
ಅವರ ಹಿಂಬರಹದ ಈ ವಾಕ್ಯಗಳನ್ನು ನೋಡಿ: "......ಹಂಪನಕಟ್ಟದಿಂದ ಪ್ರಾರಂಭವಾಗಿ ನವಭಾರತ ವೃತ್ತದವರೆಗಿನ ಕೆ.ಎಸ್.ರಾವ್ ರಸ್ತೆಗಳಿಗೆ ೫೦೦ ಮೀ. ಉದ್ದಕ್ಕೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚತುಷ್ಪಥ ಕಾಂಕ್ರೀಟೀಕರಣ ರಸ್ತೆಯಾಗಿ ೧೪.೫೦ ಮೀ. ಅಗಲದಲ್ಲಿ ನಿರ್ಮಿಸಲಾಗಿದೆ.
ಆದರೆ ಈ ರಸ್ತೆಯ ಅಕ್ಕಪಕ್ಕದಲ್ಲಿ ವಾಣಿಜ್ಯಸಂಸ್ಥೆಗಳ ವ್ಯಾಪಾರೋದ್ಯಮ ಮಳಿಗೆಗಳು ರಸ್ತೆ ಉದ್ದಕ್ಕೆ ಇರುತ್ತವೆ. ಈಗ ಮಾಡಿರುವ ರಸ್ತೆಯ ಎರಡು ಬದಿಗಳಲ್ಲಿ ೧.೦೦ಮೀಟರ್ ಅಗಲದಲ್ಲಿ ಚರಂಡಿ ಸಮೇತ ಫುಟ್ ಪಾತ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಜಾಗದ ಅಡಚಣೆ ಇದ್ದು ಅದನ್ನು ಸರಿಪಡಿಸಿ ..........ಕೈಗೊಳ್ಳಲಾಗುವುದು. ಅಂದಾಜುಪಟ್ಟಿಯು ಅನುಮೋದನೆಗೊಂಡ ನಂತರ ಹಾಗೂ ಸ್ಥಳದ ಆ ಭಾಗ ಇತ್ಯರ್ಥಗೊಂಡ ನಂತರ ಎರಡು ಬದಿ ಫುಟ್ ಪಾತ್ ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಪ್ರತ್ಯೇಕ ಪಥ ನಿರ್ಮಿಸಲಾಗುವುದೆಂದು ತಿಳಿಸಿದೆ"
ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ. ಒಂದು, ರಸ್ತೆ ನಿರ್ಮಿಸುವಾಗ ಖಾಸಗಿಯವರ ಸಹಭಾಗಿತ್ವ ಇದೆ. ಎಂದರೆ ಅಷ್ಟರಮಟ್ಟಿಗೆ ಪಾಲಿಕೆಯ ಬಾಯಿ ಕಟ್ಟಿದೆ.
ಎರಡು, ರಸ್ತೆ ಸಂಪೂರ್ಣ ರಚನೆ ಆದಮೇಲೆ, ಚರಂಡಿ ಮತ್ತು ಫುಟ್ ಪಾತ್ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ! ಇದು ಎಂಜಿನಿಯರ್ ಆದವರು ಮಾಡುವ ಕೆಲಸವೆ? ಯಾವುದೇ ರಸ್ತೆ ರಚನೆಯಾಗುವುದಿದ್ದರೆ, ಬದಿಯಲ್ಲಿ ಚರಂಡಿ, ಕಾಲುದಾರಿ ಇದನ್ನೆಲ್ಲ ಸೇರಿಸದೆ ಯಾರಾದರೂ ಪ್ಲಾನ್ ತಯಾರಿಸುತ್ತಾರೆಯೆ? ಹಾಗಾದರೆ, ಫುಟ್ ಪಾತ್ ಹೋಗಲಿ ಚರಂಡಿ ಇಲ್ಲದ ರಸ್ತೆ ಇವರು ಮಾಡಿದ್ದು ಹೇಗೆ? ಇದು ಖಾಸಗಿ ಸಹಭಾಗಿತ್ವದ ಫಲ ಇರಬಹುದೆ?
ಇದೆಲ್ಲ ನಡೆದು ಸ್ವಲ್ಪ ದಿನದ ನಂತರ ನಾನು ಆ ಕಡೆ ಹೋದಾಗ ಚರಂಡಿ ಮಾಡಲು ರಸ್ತೆ ಬದಿ ಅಗೆಯುತ್ತಿದ್ದುದನ್ನು ನೋಡಿದ್ದೆ. ಈಗ ಹೋಗದೆ ಸುಮಾರು ಸಮಯ ಆಯಿತು. ಫುಟ್ ಪಾತಿನ ಕಥೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಾದರೂ ಆ ಕಡೆಯವರು ತಿಳಿಸಿದರೆ ಕೃತಜ್ಞ. ಒಂದು ವೇಳೆ ಫುಟ್ ಪಾತ್ ಆಗದಿದ್ದರೆ, ಮೇಲಿನ ಪತ್ರದ ಆಧಾರದಲ್ಲಿ ಅದಕ್ಕಾಗಿ ಪುನಃ ಪ್ರಯತ್ನಿಸುವುದು ಸಾಧ್ಯ. ಅಂಥ ಪ್ರಯತ್ನವನ್ನು ಯಾರು ಬೇಕಾದರೂ ಮಾಡಬಹುದು.
ಇಲ್ಲಿ ಒಂದು ಮಾತು ನಾನು ಸೇರಿಸಬೇಕು. ನಾನು ಯಾವ ರಾಜಕೀಯ ಪಕ್ಷದ ಕಾರ್ಯಕರ್ತನೂ ಅಲ್ಲ. ಶ್ರೀ ಕೃಷ್ಣ ಪಾಲೆಮಾರ್ ಅವರು ನನ್ನ ಪರಿಚಯದವರೂ ಅಲ್ಲ. (ಇನ್ನೂ ಒಂದು ಪ್ರಕರಣದಲ್ಲಿ ಅವರು ನನ್ನ ಪತ್ರಕ್ಕೆ ಸ್ಪಂದಿಸಿದ್ದಾರೆ). ಪ್ರಕರಣವನ್ನು ನಾನು ಯಾವ ಮಾಧ್ಯಮಕ್ಕೂ ಕೊಂಡುಹೋಗಲಿಲ್ಲ. ಜನ ಸೇರಿಸಿ ಚಳುವಳಿ ಮಾಡುವ ಮಾತಂತೂ ದೂರವೇ ಉಳಿಯಿತಷ್ಟೆ. ಅಂಚೆಗಾಗಿ ಸ್ವಲ್ಪ ಹಣ ಖರ್ಚಾಗಿದೆ ಅಷ್ಟೆ.
ನಮ್ಮ ದೇಶದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೆ ಖಂಡಿತ ಬೆಲೆ ಇದೆ. ನಾವು ಸರಿಯಾದ ರೀತಿಯಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಗತ್ಯ.

ಶುಕ್ರವಾರ, ಏಪ್ರಿಲ್ 9, 2010

ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ......

ತಾ. ೧೬-೩-೧೦ರ ನನ್ನ ಪತ್ರಕ್ಕೆ ಮಂಗಳೂರು ಉ.ಅ.ಸಂ.ಯವರು ನನಗೆ ಉತ್ತರಿಸದಿದ್ದರೂ, ತಾ. ೨೦-೩-೧೦ರಂದೇ ಅದನ್ನು ಸುಬ್ರಹ್ಮಣ್ಯ ಉಪವಿಭಾಗದ ಸ.ಅ.ಸಂ.ಯವರಿಗೆ ಕಳಿಸಿಕೊಟ್ಟಿದ್ದಾರೆ. ಎಂದರೆ ನನ್ನ ಪತ್ರ ಅವರಿಗೆ ಮುಟ್ಟಿದ ಒಂದೆರಡು ದಿನಗಳಲ್ಲಿಯೇ ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.
ನನ್ನ ನೆನಪೋಲೆ ಹೋದಮೇಲೆ ಅವರು ಸುಳ್ಯದ ಉ.ಸ.ಅ.ಸಂ.ಯವರಿಗೆ ಮತ್ತೊಂದು ಅರೆಸರಕಾರಿ ಪತ್ರ ಬರೆದು ನನಗೆ ಅದರ ಯಥಾಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ಆ ಪತ್ರ ಹೀಗಿದೆ:
........."ಮೇಲಿನ ವಿಷಯಕ್ಕೆ ಸಂಬಂಧಿಸಿ ಉಲ್ಲೇಖ(೧)ರ ಈ ಕಾರ್ಯಾಲಯದ ಪತ್ರದ ಕಡೆಗೆ ನಿಮ್ಮ ಗಮನ ಸೆಳೆಯಲಾಗಿದೆ. ಸದ್ರಿ ಪತ್ರದಲ್ಲಿ ಉಲ್ಲೇಖ(೧)ರ ಅರ್ಜಿಯ ಕುರಿತು ಕೂಡಲೇ ತನಿಖೆ ನಡೆಸಿ ತನಿಖಾವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.ಆದರೆ, ಸುಮಾರು ೧೫ ದಿನ ಕಳೆದರೂ, ನಿಮ್ಮಿಂದ ವರದಿ ಬಾರದೇ ಇರುವುದು ವಿಷಾದನೀಯ ಸಂಗತಿಯಾಗಿರುತ್ತದೆ. ಈ ಬಗ್ಗೆ ಅರ್ಜಿದಾರರು....ಉತ್ತರಕ್ಕೆ ಇನ್ನೂ ಹತ್ತು ದಿನ ಕಾಯಲು ಸಿದ್ಧನಿರುವುದಾಗಿ ತಿಳಿಸಿರುತ್ತಾರೆ.....ಪತ್ರದ ಕಡೆಗೆ ನಿಮ್ಮ ವೈಯಕ್ತಿಕ ಗಮನ ಹರಿಸಿ ತನಿಖಾವರದಿಯನ್ನು ಮರುಟಪ್ಪಾಲಿನಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ಇನ್ನು ಮುಂದೆ ಪತ್ರವ್ಯವಹಾರಕ್ಕೆ ಆಸ್ಪದ ಕೊಡಬಾರದಾಗಿ ತಿಳಿಸಲಾಗಿದೆ"
ಕ್ರಮದ ವಿಶ್ಲೇಷಣೆ:
ನನ್ನ ಪತ್ರವನ್ನು ಸುಬ್ರಹ್ಮಣ್ಯದ ಪ್ರಕರಣದ ಕುರಿತ ದೂರು ಎಂದು ಪರಿಗಣಿಸುವ ಮೂಲಕ ಮಂಗಳೂರಿನ ಉ.ಅ.ಸಂ.ಯವರು ಸಮಸ್ಯೆಯನ್ನು ತಮ್ಮ ಪಾಲಿಗೆ ಸುಲಭ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾದ ರೀತಿಯಲ್ಲಿ ಹೊಣೆಯನ್ನು ಕೆಳ ಅಧಿಕಾರಿಗೆ ವರ್ಗಾಯಿಸಿದ್ದಾರೆ. ಆ ಅಧಿಕಾರಿಗಿಂತ ಕೆಳಗೆ ವಲಯ ಅರಣ್ಯಾಧಿಕಾರಿ ಮತ್ತು ವನಪಾಲಕರು ಇರುವುದರಿಂದ ಜವಾಬ್ದಾರಿ ಅವರಿಗೆ ವರ್ಗಾವಣೆಯಾದರೆ ಆಶ್ಚರ್ಯವಿಲ್ಲ!
ಇಷ್ಟು ನೇರವಾಗಿ, ಸ್ಪಷ್ಟವಾಗಿ ಬರೆದದ್ದು ಸಹ ಉ.ಅ.ಸಂ.ಯವರಿಗೆ ಅರ್ಥವಾಗಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅನಿವಾರ್ಯವಾಗಿ ಇದನ್ನು ಪುನಃ ಸ್ಪಷ್ಟ ಪಡಿಸಿ ಅವರಿಗೆ ಹೀಗೆ ಪತ್ರ ಬರೆದಿದ್ದೇನೆ.
"..........ನಿಮ್ಮ ಪತ್ರದ ಯಥಾಪ್ರತಿಯನ್ನು ನನಗೆ ಕಳಿಸಿದ್ದೀರಿ. ಧನ್ಯವಾದಗಳು.
ನಿಮ್ಮ ಪತ್ರಕ್ಕೆ ಸಂಬಂಧಿಸಿ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ಕೋರುತ್ತೇನೆ.
೧. ದಿ. ೧೮-೩-೨೦೧೦ರ ನನ್ನ ಪತ್ರದ ವಿಷಯ - ದ. ಕ. ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ - ಎಂಬುದಾಗಿತ್ತು. ಆದರೆ ನೀವು ಕೈಗೊಂಡ ಕ್ರಮ ಅದಕ್ಕೆ ಸಂಬಂಧಪಟ್ಟಿರುವುದಿಲ್ಲ.
೨. ಮರಗಳ ರಕ್ಷಣೆಯ ಕಾನೂನು ಉಲ್ಲಂಘನೆಯಾಗುತ್ತಿರುವುದಕ್ಕೆ ನಿದರ್ಶನವಾಗಿ ಮಾತ್ರ ನಾನು ಸುಬ್ರಹ್ಮಣ್ಯದ ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಮರಗಳು ಸಂಪೂರ್ಣ ನಾಶವಾದ ಮೇಲೆ ಅದರ ಬಗ್ಗೆ ತನಿಖೆ ಮಾಡುವುದು, ಕಾನೂನು ಕ್ರಮ ತೆಗೆದುಕೊಳ್ಳುವುದು ಇತ್ಯಾದಿಗಳಲ್ಲಿ ನನಗೆ ಆಸಕ್ತಿ ಇಲ್ಲ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದೂ, ಬಿಡುವುದೂ ಇಲಾಖೆಗೆ ಬಿಟ್ಟ ವಿಷಯ. ನನ್ನ ಆಸಕ್ತಿ ಇರುವುದು ಇನ್ನು ಮುಂದಾದರೂ, ಇರುವ ಮರಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರ.
೩. ಸುಬ್ರಹ್ಮಣ್ಯದ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸುವುದು ನನ್ನ ಉದ್ದೇಶವಾಗಿದ್ದರೆ, ನಾನು ಅಲ್ಲಿನ ಸ.ಅ.ಸಂ.ಯವರಿಗೆ ಪತ್ರ ಬರೆಯುತ್ತಿದ್ದೆ. ಅವರು ಕ್ರಮ ಕೈಗೊಳ್ಳದಿದ್ದರೆ ಮಾತ್ರ ನಿಮಗೆ ದೂರು ಸಲ್ಲಿಸುತ್ತಿದ್ದೆ.
೪. ನೀವು ಜಿಲ್ಲಾಮಟ್ಟದ ಅಧಿಕಾರಿಯಾಗಿರುವುದರಿಂದ ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ನನ್ನ ಪತ್ರದಲ್ಲಿ ನಿಮ್ಮನ್ನು ಕೋರಿದ್ದೆ.
೫. ಈ ನಿಟ್ಟಿನಲ್ಲಿ, ಮರಗಳ ಸಂರಕ್ಷಣೆಯ ಕಾನೂನು ಇದೆ ಎಂಬ ಅರಿವೇ ಇಲ್ಲದ ಹಾಗೆ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಗಳ ನಾಶವನ್ನು ತಡೆಗಟ್ಟಲು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕಾಗಿಯೂ, ಹಾಗೆ ತೆಗೆದುಕೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿಯೂ ಮತ್ತೊಮ್ಮೆ ನಿಮ್ಮನ್ನು ಕೋರುತ್ತೇನೆ."

ಶುಕ್ರವಾರ, ಏಪ್ರಿಲ್ 2, 2010

ತಾ. ೨-೪-೧೦
ಇವೊತ್ತಿನ ಉದಯವಾಣಿಯ ವಾರ್ತೆ:
ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ: ಸುಬ್ರಹ್ಮಣ್ಯ ಶ್ರೀ
ಪ್ರಕೃತಿಯಲ್ಲಿ ಭಗವಂತನ ಶಕ್ತಿ ಅಡಗಿದೆ. ಆದುದರಿಂದಾಗಿ ನಮ್ಮ ಹಿರಿಯರು ಪ್ರಕೃತಿಯನ್ನು ಆರಾಧನೆ ಮಾಡುವುದರೊಂದಿಗೆ ಪ್ರಕೃತಿಯ ಸೊಬಗಿನ ನಡುವೆ ಆರಾಧನಾಲಯಗಳನ್ನು ನಿರ್ಮಿಸಿದರು. ನಮ್ಮದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. (ವಾರ್ತೆಯಲ್ಲಿ ಅವರ ಇನ್ನೂ ಕೆಲವು ಅಭಿಪ್ರಾಯಗಳಿವೆ)
ಇದೇ ವಾರ್ತೆ ಹೀಗೆ ಮುಂದುವರಿದಿದೆ:
.....ವಾಸ್ತು ತಜ್ಞ ಶ್ರೀಕೃಷ್ಣ ಮಹಾಲಿಂಗ ಪ್ರಸಾದ್ ಮುನಿಯಂಗಳ ಮಾತನಾಡಿ ನಮ್ಮ ಪ್ರದೇಶದಲ್ಲಿನ ಬಹುತೇಕ ಶ್ರದ್ಧಾಕೇಂದ್ರಗಳು ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಜೀರ್ಣೋದ್ಧಾರದಂತಹ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗುತ್ತಿರುವುದು ಎಲ್ಲ ಕಡೆ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
*********
ನಾನು ಬರೆದ ಪತ್ರಕ್ಕೆ ಉತ್ತರಿಸಲು ದ.ಕ. ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ ಎಂಬುದು ವಿಷಾದದ ಸಂಗತಿ. ಮೊನ್ನೆ ಅಂದರೆ ೩೧-೩-೧೦ಕ್ಕೆ ಒಂದು ನೆನಪೋಲೆ ಅವರಿಗೆ ಬರೆದಿದ್ದೇನೆ.
*********
ಅನೇಕ ಸ್ನೇಹಿತರು ಬ್ಲಾಗನ್ನು ಓದಿರುವುದಾಗಿ ಹೇಳಿದ್ದಾರೆ. ಆದರೆ ಪ್ರತಿಕ್ರಿಯೆಗಳು ಇಲ್ಲವಾಗಿದೆ. ಅಶೋಕರ ಹತ್ತಿರ ಇದನ್ನು ಹೇಳಿದ್ದಕ್ಕೆ, "ಜನ ಜಡ. ಚುಚ್ತಾ ಇರಬೇಕು" ಎಂದರು. ಇದೊಂದು ಸಣ್ಣ ಮಟ್ಟದ ಚಳುವಳಿ: ಪ್ರಜಾಪ್ರಭುತ್ವದ ಅನುಸಂಧಾನದ ಒಂದು ಸಣ್ಣ ಪ್ರಯತ್ನ. ನೀವೂ ಇದರಲ್ಲಿ ಸೇರಿಕೊಳ್ಳಿ ಎಂದು ನಾನು ಬಾಯಿಬಿಟ್ಟು ಹೇಳುವುದು ಸಭ್ಯತೆಯಲ್ಲ. ಇದು ನಮ್ಮೆಲ್ಲರ ದೇಶ.
ನಾನು ಬರೆಯುತ್ತಿರುವುದು ಓದುಗರಿಗೆ ಮನರಂಜನೆ ನೀಡುವ ಉದ್ದೇಶದಿಂದ ಖಂಡಿತಾ ಅಲ್ಲ.
ಅಶೋಕವರ್ಧನರ ಪ್ರತಿಕ್ರಿಯೆ:
ಇಂದು ಆರಾಧನಾ ಸ್ಥಳಗಳ ವಿಪುಲತೆಯಲ್ಲಿ ಸ್ವಾಮಿಗಳು ಚರಿತ್ರೆಯನ್ನಷ್ಟೇ ಹೇಳಬಲ್ಲರು. ವರ್ತಮಾನದಲ್ಲಿ ಅದನ್ನು ರೂಢಿಸುವ ಧೈರ್ಯವಿದ್ದಿದ್ದರೆ, ತಳ ಇಲ್ಲದ ಮಾನದಲ್ಲಿ (ಸೇರಿನಲ್ಲಿ) ಭವಿಷ್ಯವನ್ನು ಅಳೆಯುವ ಶಾಸ್ತ್ರಕ್ಕೆ ಸುಮಾರು ಆರು ಎಕ್ರೆ ವ್ಯಾಪ್ತಿಯ ಪ್ರಾಕೃತಿಕ ಹಾನಿಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ.
ನನ್ನ ತಿಳುವಳಿಕೆಯಂತೆ ಇಂದು ಆರಾಧನೀಯವಾಗಿರುವ ‘ವಾಸ್ತು’ ಸಂದ ಕಾಲದ ವಿಜ್ಞಾನ, ಸಿವಿಲ್ ಇಂಜಿನಿಯರಿಂಗ್. ಆದರೆ ನಾಗರಿಕತೆಯ ಬೆಳೆವಣಿಗೆಯಲ್ಲಿ ನಮ್ಮ ಪ್ರಾಕೃತಿಕ ತಿಳುವಳಿಕೆಗಳು ಮತ್ತದಕ್ಕೆ ಸಂವಾದಿಯಾಗಿ ಉತ್ಪನ್ನಗಳು ಸಾಕಷ್ಟು ಮುಂದುವರಿದ ಕಾಲದಲ್ಲಿ ವಾಸ್ತುತಜ್ಞರ ಅನುಸರಣೆ ಗಡಿರಕ್ಷಣೆಗೆ ಬಿಲ್ಲು ಭಾಲೆಗಳನ್ನು ಹಿಡಿದು ಹೊರಟಷ್ಟೇ ಅದ್ಭುತ!

ಶನಿವಾರ, ಮಾರ್ಚ್ 20, 2010

ಜಾಗೆದು ಗುರ್ತೇ ಸಿಕ್ತಿಲ್ಲೆ - ಭಾಗ-೨



ಹಿಂದಿನ ಲೇಖನದಲ್ಲಿ ಮಾಹಿತಿ ಬಂದ ಕೂಡಲೇ ತಿಳಿಸುವುದಾಗಿ ಬರೆದಿದ್ದೆ. ದಿನಾಂಕ ೧೭-೩-೨೦೧೦ರಂದು ಸುಬ್ರಹ್ಮಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ನನಗೆ ಮಾಹಿತಿ ನೀಡಿದ್ದಾರೆ.
ನಾನು ಕೇಳಿದ ಮಾಹಿತಿ ೧: ಗುಡ್ಡವನ್ನು ಸಮತಟ್ಟು ಮಾಡುವಾಗ ಅಲ್ಲಿದ್ದ ಹಲವಾರು ಮರಗಳು ನಾಶವಾಗಿರುವ ಸಾಧ್ಯತೆ ಇದೆ. ಹೀಗೆ ಮರಗಳನ್ನು ನಾಶ ಮಾಡಲು ನಿಮ್ಮ ಇಲಾಖೆ ಅನುಮತಿ ನೀಡಿದೆಯೆ?
ಉತ್ತರ:ಸದ್ರಿ ಸ್ಥಳದಲ್ಲಿರುವ ಮರಮಟ್ಟುಗಳನ್ನು ಕಡಿಯಲು ಇಲಾಖಾವತಿಯಿಂದ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ.
ನಾನು ಕೇಳಿದ ಮಾಹಿತಿ ೨: ನೀಡಿದ್ದರೆ ಅನುಮತಿಯ ಯಥಾಪ್ರತಿಯನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
ಉತ್ತರ: ಅನುಮತಿ ನೀಡದೇ ಇರುವುದರಿಂದ ಯಥಾಪ್ರತಿ ಇರುವುದಿಲ್ಲ.
ಈ ಮಾಹಿತಿಯಲ್ಲದೆ ಸ.ಅ.ಸಂರಕ್ಷಣಾಧಿಕಾರಿಯವರು ಪ್ರಕರಣಕ್ಕೆ ಸಂಬಂಧಿಸಿ ಉಪಯುಕ್ತವಾದ ಇತರ ಕೆಲವು ಮಾಹಿತಿಗಳನ್ನೂ ನೀಡಿದ್ದಾರೆ:
೧. ಸದ್ರಿ ಸ್ಥಳದಲ್ಲಿರುವ ಅಕೇಶಿಯಾ ಜಾತಿಯ ಗಿಡಗಳನ್ನು ಕಡಿಯುವರೇ ಅವಕಾಶ ಕೋರಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಲಿಖಿತ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯ ಯಥಾಪ್ರತಿ ಲಗತ್ತಿಸಿದೆ.
೨.ಸದ್ರಿ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳದ ಹಾಗೂ ಸ್ಥಳದಲ್ಲಿರುವ ಮರಮಟ್ಟುಗಳ ಒಡೆತನ ದೃಢಪತ್ರ ಹಾಗೂ ಸ್ಥಳದ ಮೋಜಣಿ ನಕಾಶೆಯನ್ನು ಸಲ್ಲಿಸಿದಲ್ಲಿ ಅರ್ಜಿಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅರ್ಜಿ ಬರಕೊಂಡ ಸ್ವಾಮೀಜಿಯವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರು ಪತ್ರ ಸಂ...........................ರಂತೆ ತಿಳಿಸಿರುತ್ತಾರೆ. ಹಾಗೂ ನಂತರ ಇಲಾಖಾ ಅನುಮತಿ ಪಡೆದು ಮರಗಳನ್ನು ಕಡಿಯುವರೇ ಪತ್ರದಲ್ಲಿ ತಿಳಿಸಲಾಗಿದೆ.ಪತ್ರದ ಪ್ರತಿ ಲಗತ್ತಿಸಲಾಗಿದೆ.ಆದರೆ ಸದ್ರಿಯವರು ಯಾವುದೇ ದಾಖಲಾತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರಿಗೆ ಸಲ್ಲಿಸಿರುವುದಿಲ್ಲ.
**************
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಸಲ್ಲಿಸಿರುವ ಲಿಖಿತ ಅರ್ಜಿ (ಅರ್ಜಿ ಶ್ರೀ ಮಠದ ಲೆಟರ್ ಹೆಡ್ ನಲ್ಲಿದೆ):
ನಮ್ಮ ಸಂಸ್ಥಾನದ ಮುಖ್ಯಾಭಿಮಾನಿಗಳಾದ ವಲಯ ಅರಣ್ಯಾಧಿಕಾರಿಗಳಿಗೆ ಸಪ್ರೇಮ ನಾರಾಯಣ ಸ್ಮರಣೆಗಳು.
ವಿಷಯ: ವನದುರ್ಗಾದ ಎದುರು ಗುಡ್ಡೆಯಲ್ಲಿರುವ ಅಕೇಶಿಯಾ ಗಿಡಗಳನ್ನು (ಅರ್ಜಿಯಲ್ಲಿ ಒಟ್ಟು ಮೂರು ಕಡೆ "ಮರ" ಎಂದು ಬರೆದಿರುವುದನ್ನು ಹೊಡೆದು "ಗಿಡ" ಎಂದು ತಿದ್ದಲಾಗಿದೆ - ಎಚ್. ಸುಂದರರಾವ್). ಕಡಿಯಲು ಅವಕಾಶ ನೀಡುವ ಕುರಿತು.
ಆತ್ಮೀಯರೇ, April 9-10-11 2010ರ ದಿನಗಳಲ್ಲಿ ವಿಶ್ವಜ್ಯೋತಿಷ್ಯ ಸಮ್ಮೇಳನ ವನದುರ್ಗಾದ ಎದುರಿರುವ ಗುಡ್ಡದಲ್ಲಿ ನಡೆಯಲಿದೆ. ರಾಷ್ಟ್ರದ ಗಣ್ಯಾತಿಗಣ್ಯ ವ್ಯಕ್ತಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಭದ್ರತೆಯ ದೃಷ್ಟಿಯಿಂದ ಗಿಡಗಳನ್ನು ತೆಗೆಯಬೇಕೆಂದು ಸರ್ಕಾರದ ಉನ್ನತಾಧಿಕಾರಿಗಳು ಸಲಹೆ ನೀಡಿದ್ದಾರೆ. ಅಲ್ಲದೆ ಅಕೇಶಿಯಾ ಗಿಡ ಪರಿಸರಕ್ಕೂ ಮಾರಕವಾಗಿದೆ. ಈ ಎಲ್ಲ ಕಾರಣಗಳಿಂದ ಆ ಅಕೇಶಿಯಾ ಗಿಡಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕಾಗಿ ಅಪೇಕ್ಷಿಸುತ್ತೇವೆ.
ನಿರಂತರ ಅಭಿಮಾನವಿರಲಿ
ಇತಿ ನಾರಾಯಣ ಸ್ಮರಣಪೂರ್ವಕ
(ಸಹಿ)
**************
ಇಲ್ಲಿ ಗಮನಿಸಬೇಕಾದ್ದು: ಸ್ವಾಮೀಜಿಯವರು ಅರ್ಜಿ ಸಲ್ಲಿಸಿರುವುದು ೭-೨-೨೦೧೦ರಂದು.
ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಯವರು ಉತ್ತರಿಸಿರುವುದು ತಾ. ೧೫-೨-೨೦೧೦ರಂದು
ಸುಬ್ರಮಣ್ಯದಲ್ಲಿ ಜ್ಯೋತಿಷ್ಯ ಸಮ್ಮೇಳನಕ್ಕಾಗಿ ಗುಡ್ದ ಅಗೆದು ಸಮತಟ್ಟು ಮಾಡುತ್ತಿರುವ ಫೋಟೋಸಹಿತ ವರದಿ ಉದಯವಾಣಿಯಲ್ಲಿ ಪ್ರಕಟವಾಗಿರುವುದು ೧೬-೨-೨೦೧೦ರಂದು.
**************
ಈ ದಾಖಲೆಗಳನ್ನು ನಾನು ದ,ಕ.ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಕಳಿಸಿಕೊಟ್ಟು ಹೀಗೆ ಪತ್ರ ಬರೆದಿದ್ದೇನೆ:
"..... ಈ ಪ್ರಕರಣವನ್ನು ಗಮನಿಸಿದಾಗ ಮರಗಳ ಸಂರಕ್ಷಣೆಗಾಗಿ ಇರುವ ಕಾನೂನು ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಒಂದು ಆತಂಕಕಾರಿ ಬೆಳವಣಿಗೆ.
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೀಗೆ ಮರಗಳನ್ನು ನಾಶ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಪ್ರತಿದಿನವೂ ಸಾವಿರಾರು ಮರಗಳು ಬೇರು ಸಮೇತ ನೆಲಕ್ಕುರುಳುತ್ತಿವೆ. ಇದನ್ನು ತಡೆಗಟ್ಟಲು ಸಂಬಂಧಪಟ್ಟ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡುವುದು ಅಗತ್ಯ.
ಇನ್ನು ಮುಂದೆ ಮರಗಳ ಸಂರಕ್ಷಣೆಯ ಕಾನೂನನ್ನು ಯಾರೂ ಉಲ್ಲಂಘಿಸದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ನಿಮ್ಮನ್ನು ಕೋರುತ್ತೇನೆ.
ಇನ್ನು ಹತ್ತು ದಿನಗಳ ಒಳಗೆ ನೀವು ಕೈಗೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿ ಕೋರುತ್ತೇನೆ..."
ಪತ್ರ ಅವರಿಗೆ ತಲುಪಿದೆ. ಉತ್ತರ ಬಂದನಂತರ ಮತ್ತೆ ಬರೆಯುತ್ತೇನೆ........

ಶುಕ್ರವಾರ, ಮಾರ್ಚ್ 12, 2010

ಜಾಗೆದು ಗುರ್ತೇ ಸಿಕ್ತಿಲ್ಲೆ!

ಕಳೆದ ವರ್ಷ ಪ್ರೇಮಕ್ಕ ಮಂಗಳೂರಿನಿಂದ ನಮ್ಮಲ್ಲಿಗೆ ಬಂದಾಗ ಇವಳ ಹತ್ತಿರ "ರಾತ್ರೆ ಬೆಳ್ಗಾತ ಹೊತ್ತಿಗೆ ಗುಡ್ಡೆನೇ ಇಲ್ಲ ಮಾಡಿಬಿಡ್ತ್ರ್ಯ. ಬೆಳ್ಗಾತ ಕಂಡ್ರೆ ಜಾಗೆದು ಗುರ್ತೇ ಸಿಕ್ತಿಲ್ಲೆ, ಹಂಗಾಗಿರ್ತ್" ಅಂದಿದ್ದರು. ಜೆಸಿಬಿಗೆ ಗುಡ್ಡ, ಕಣಿವೆಗಳನ್ನು ಕಂಡರಾಗುವುದಿಲ್ಲ. ಸಾವಿರಾರು ಜೆಸಿಬಿಗಳು ದಕ್ಷಿಣ ಕನ್ನಡವನ್ನು ಬಯಲು ಸೀಮೆ ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿವೆ. ಗುಡ್ಡೆ ತಟ್ಟು ಮಾಡುವುದು ಸೈಟು ಮಾಡಿ ಮಾರುವುದು, ಸೈಟು ಕೊಂಡವರು ನೀರಿಗೆಂದು ಬೋರು ಹಾಕುವುದು.
ದಕ್ಷಿಣ ಕನ್ನಡದ ಜೀವ ಇರುವುದೇ ಇಲ್ಲಿನ ಗುಡ್ಡಬೆಟ್ಟಗಳಲ್ಲಿ, ಸುಂದರವಾದ ಕಣಿವೆಗಳಲ್ಲಿ, ಇದನ್ನು ಯಾವ ವಿವೇಚನೆಯೂ ಇಲ್ಲದೆ ತಟ್ಟು ಮಾಡುತ್ತಾ ಹೋಗುತ್ತಿದ್ದೇವೆ ನಾವು.
ನಮ್ಮ ಬಿ.ಸಿ.ರೋಡಿನ ಸುತ್ತಮುತ್ತ ಗುಡ್ಡ ಬೆಟ್ಟಗಳು ಧಾರಾಳ. ನಮ್ಮ ಮನೆಯ ಹಿಂದೆಯೇ ಇರುವ ಬೆದ್ರಗುಡ್ಡೆ ನಮ್ಮಿಬ್ಬರ ಸಂಜೆ ತಿರುಗಾಟದ ಅತ್ಯಂತ ನೆಚ್ಚಿನ ಸ್ಥಳ. ಕೇಪಳ ಮಾತ್ರ ಅಲ್ಲ, ನೇರಳೆ, ಕಾಡುಮಾವು, ಅಬ್ಬಳಕ, ಜೀರ್ಕ ಹೀಗೆ ಹಲವು ಹಣ್ಣುಗಳು. ಉಪ್ಪಿನ ಕಾಯಿಗೆ ಕರಂಡೆ. ಅರಮಾರಲು. ಕೊಡಿಕಟ್ಟಕ್ಕೆ ಇಪ್ಪತ್ತೆಂಟು ಬಗೆಯ ಚಿಗುರು. ಯಾವುದೂ ಬೇಡವೆಂದರೆ ಉಸಿರಾಡಲು ವಾಸನೆ ಗೀಸನೆ ಇಲ್ಲದ ಧಾರಾಳ ಶುದ್ಧ ಗಾಳಿ. ಈಗ ನಾಲ್ಕೈದು ವರ್ಷದ ಹಿಂದಿನವರೆಗೂ ಗುಡ್ಡೆಯ ಕೆಳಭಾಗದಲ್ಲಿ ಅದರ ಪಕ್ಕದಲ್ಲೇ ಒಂದು ಕಾಲುದಾರಿ ಇತ್ತು. ಈಗೀಗ ಅದರ ಗುರುತು ಮಸಕಾಗುತ್ತಿದೆ. ಜನ ಕಾಲ್ನಡಿಗೆಯಲ್ಲಿ ಓಡಾಡುವುದು ಕಡಿಮೆಯಾಗುತ್ತಿದೆ. ನನಗೆ ಇನ್ನೂ ಆಶ್ಚರ್ಯವೆಂದರೆ ಮಳೆಗಾಲ ಕಳೆದಾಗ ಈ ಗುಡ್ಡೆಯಲ್ಲಿ ಧಾರಾಳವಾಗಿ ಬೆಳೆದು ನಿಲ್ಲುವ ಹಸಿರು ಹುಲ್ಲು. ಡಿಸೆಂಬರ್ ಜನವರಿ ಹೊತ್ತಿಗೆ ಒಣಗಿ ನಿಂತ ಈ ಹುಲ್ಲಿಗೆ ಬೆಂಕಿ ಹೊತ್ತಿ ಉರಿಯುತ್ತದೆ. ಯಾರು ಯಾಕೆ ಕೊಡುತ್ತಾರೋ?
ನನ್ನ ಮೂಲ ಊರು ಕೊಪ್ಪವೂ ಗುಡ್ಡ ಬೆಟ್ಟಗಳ ಊರೇ. ಆದರೆ ಅಲ್ಲಿನ ಗುಡ್ಡಗಳಲ್ಲಿ ಮೊಣಕಾಲೆತ್ತರಕ್ಕೆ ಹಸಿ ಹುಲ್ಲು ಬೆಳೆಯುವುದಿಲ್ಲ. ನೆಲದಿಂದ ಹುಲ್ಲು ತಲೆ ಎತ್ತಲು ಪುರುಸೊತ್ತಿಲ್ಲ, ಯಾವುದೋ ದನವೋ ಎಮ್ಮೆಯೋ ಬಂದು ಅದನ್ನು ಮೆಂದಾಯಿತು. ಈಗ ದನಗಳನ್ನು ಗುಡ್ಡೆಗೆ ಎಬ್ಬುವ ಪದ್ಧತಿಯೂ ಕಡಿಮೆಯಾಗುತ್ತಿದೆ. ಏನಿದ್ದರೂ ಮನೆಯಲ್ಲಿ ಕಟ್ಟಿ, ಹಿಂಡಿ ಗಿಂಡಿ ಹಾಕಿ ಸಾಕುವುದು. ಅವುಗಳ ಸೆಗಣಿಗೆ ಹೇಲಿನ ವಾಸನೆ.
ಬೆದ್ರಗುಡ್ಡೆಯ ನವಿಲುಗಳ ಸಂಗೀತ ದಿನನಿತ್ಯ ನಮ್ಮ ಮನೆಗೆ ಕೇಳುತ್ತದೆ. ತಿರುಗಾಡಲು ಸಂಜೆ ಹೋದರೆ ನವಿಲುಗಳು ನೋಡಲು ಸಿಗುತ್ತವೆ. ಒಂದಿಷ್ಟು ಗರಿ ಆರಿಸಿ ತಂದು ಮನೆಯಲ್ಲೂ ಇಟ್ಟುಕೊಂಡಿದ್ದೆವು. ಬೆಳಗ್ಗೆ ನಮ್ಮ ಮನೆಯ ಸ್ಲಾಬಿನ ಮೇಲೆ ಹೋಗಿ ನಿಂತು ದುರ್ಬೀನಿನಲ್ಲಿ ನೋಡಿದರೆ ಗುಡ್ಡದ ಚಿಕ್ಕ ಒಂದು ಮರದಲ್ಲಿ ಒಂದು ನವಿಲು ಊದ್ದಕ್ಕೆ ಗರಿ ಇಳಿಬಿಟ್ಟುಕೊಂಡು ಕೂತಿರುವುದು ಚಿತ್ರ ಬರೆದಂತೆ ಕಾಣುತ್ತಿತ್ತು. ಅದು ಆ ನವಿಲಿನ ಮೆಚ್ಚಿನ ಜಾಗ ಇರಬೇಕು. ನನಗೆ ನಿತ್ಯವೂ ಅದನ್ನು ನೋಡುವುದೇ ಒಂದು ಕೆಲಸವಾಗಿತ್ತು. ಮೊನ್ನೆ ಮೊನ್ನೆ ಹೋದಾಗ ಕಾಡುಕೋಳಿಯೊಂದು ತನ್ನ ಎರಡು ಮರಿಗಳೊಂದಿಗೆ ಮೇಯುತ್ತಿದ್ದುದನ್ನು ಕಂಡೆ. ಕಳೆದ ವರ್ಷ ಪೊದೆಯಿಂದ ಒಂದು ಮೊಲ ಓಡಿದ್ದನ್ನು ನೋಡಿದ ನೆನಪಿದೆ.
ಇನ್ನೂ ಒಂದು ಆಶ್ಚರ್ಯವೆಂದರೆ ಇಷ್ಟು ಚೆಂದದ ಈ ಗುಡ್ಡೆ ಊರಿಗೆ ಇಷ್ಟು ಹತ್ತಿರವೇ ಇದ್ದರೂ ಅಲ್ಲಿಗೆ ತಿರುಗಾಡಲು ಬರುವವರು ಯಾರೂ ಇಲ್ಲ. ಗುಡ್ಡದ ಬೆನ್ನು ಮಲಗಿದ ಬಸವನ ಬೆನ್ನಿನಂತಿದೆ. ಅದರ ಬಾಲದ ಬದಿಯ ತುದಿಯಲ್ಲಿ ಬಂಡೆಗಳಿವೆ. ಆ ಬಂಡೆಯ ಮೇಲೆ ಆದಿತ್ಯವಾರದಂದು ಯಾರಾದರೂ ಹುಡುಗರು ಬಂದು ಕೂರುವುದಿದೆ. ಅವರು ಬಾಟ್ಲಿ ತಂದು ಅಲ್ಲಿ ಕೂರುವುದು ಎಂದು ಇವಳಿಗೆ ಅನುಮಾನ. ಅಲ್ಲಿಂದ ಮುಂದೆ ಅಡ್ಡ ಸಿಗುವ ಒಂದು ಮಣ್ಣಿನ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದರೆ ಸಣ್ಣ ಸಣ್ಣ ಮರಗಳ ಒಂದು ಗಂಧರ್ವವನವೇ ಇದೆ. ಈ ಸ್ಥಳ ಲಕ್ಷ್ಮೀನಾರಾಯಣ ಆಳ್ವರಿಗೆ ಸೇರಿದ್ದಂತೆ. ಅದಂತೂ ನನ್ನ ಪಾಲಿಗೆ ಯಾವ ಲಾಲ್ ಬಾಗಿಗೂ ಕಡಿಮೆಯಲ್ಲ.
ಈ ಸ್ಥಳದ ಸಮೀಪ ಎರಡು ವರ್ಷದಿಂದ ಕಪ್ಪುಕಲ್ಲು ತೆಗೆಯುತ್ತಿದ್ದಾರೆ. ಯಾರೋ ಹೇಳಿದರು ಹತ್ತು ವರ್ಷಕ್ಕೆ ಗುತ್ತಿಗೆ ಆಗಿದೆ ಅಂತ......
.
ಕಳೆದ ವರ್ಷ ನಮ್ಮ ಈ ಬೆದ್ರಗುಡ್ಡೆಯಲ್ಲಿ ಎ ಎಂ ಆರ್ ಕಂಪೆನಿ ಟವರ್ ಗಳನ್ನು ನಿರ್ಮಿಸಿ ಪವರ್ ಲೈನ್ ಎಳೆದಿದೆ. ಅಡ್ಡ ಬಂದ ಮರಗಳು ನೆಲಕ್ಕುರುಳಿವೆ. ಈಗ ನಮ್ಮ ಮನೆಯ ಸ್ಲಾಬಿನ ಮೇಲೆ ನಿಂತರೆ ಗುಡ್ಡಕ್ಕಿಂತ ಪ್ರಮುಖವಾಗಿ ಎರಡು ಟವರ್ ಗಳೇ ಕಾಣುತ್ತವೆ. ಅಥವಾ ನೋಡುವ ನನ್ನ ದೃಷ್ಟಿಯಲ್ಲೇ ಏನಾದರೂ ಐಬು ಇದೆಯೋ?.
ಬೆದ್ರಗುಡ್ಡೆಯಲ್ಲೂ ಕಪ್ಪು ಕಲ್ಲು ಇದೆ. ಇಡೀ ಗುಡ್ಡ ಖಾಸಗಿ ಒಡೆತನದ್ದು. ಊರಿಗೆ ಹತ್ತಿರದಲ್ಲಿದೆ. ಜೆಸಿಬಿಗಳು ಅಲ್ಲೇ ಸುತ್ತ ಓಡಾಡುತ್ತಿವೆ..ವಾಹನಗಳು ಓಡಾಡುವ ಪೊಳಲಿ ರಸ್ತೆಯ ಬದಿಯಲ್ಲಿ ಜೆಸಿಬಿ ಬೋಣಿ ಮಾಡಿಯಾಗಿದೆ....
ಕೋಟಿ ಕೋಟಿ ವರ್ಷಗಳಿಂದ ಇಲ್ಲಿ ನಿಂತಿರಬಹುದಾದ ಈ ಗುಡ್ಡದ ಆಯಸ್ಸು ಇನ್ನೆಷ್ಟು ತಿಂಗಳು ಅಥವಾ ಇನ್ನೆಷ್ಟು ವರ್ಷ?
*******
ಅಯ್ಯೋ ದೇವರೆ, ನಾನು ಹೇಳಲು ಹೊರಟ ವಿಷಯವೇ ಒಂದು, ಹೇಳಿದ್ದೇ ಒಂದು ಆಗಿಹೋಯಿತು. ಜೆಸಿಬಿಯ ಈ ರಾಪಾಟಿಕೆಯನ್ನು ಬಹಳ ದಿನದಿಂದಲೂ ವಿಷಾದದಿಂದ ನೋಡುತ್ತಲೇ ಇದ್ದೇನೆ. ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯೇ ಇಲ್ಲವೋ ಎಂಬ ರೀತಿಯಲ್ಲಿ ಜೆಸಿಬಿಯಿಂದ ಗುದ್ದಿಸಿ ಮರಗಳನ್ನು ಉರುಳಿಸುವುದು; ಹಾಗೆ ಬಿದ್ದ ಮರಗಳನ್ನು ಎಷ್ಟು ದಿನ ಬೇಕಾದರೂ ಯಾರ ಹೆದರಿಕೆಯೂ ಇಲ್ಲದೆ ಅಲ್ಲಿಯೇ ಬಿಟ್ಟುಬಿಡುವುದು ಕಂಡು ನನಗೆ ಭಾರೀ ಆಶ್ಚರ್ಯ. ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನೊಬ್ಬರು ಆತ್ಮೀಯರನ್ನು ವಿಚಾರಿಸಿದರೆ "ಕರ್ನಾಟಕದಲ್ಲಿ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ. ಕಾನೂನು ತುಂಬಾ ಬಿಗಿಯಾಗಿದೆ" ಎನ್ನುತ್ತಾರೆ. ಇಲ್ಲಿ ನೋಡಿದರೆ ಪ್ರತಿನಿತ್ಯವೂ ಜೆಸಿಬಿ ಮರಗಳನ್ನು ಯಾವ ಎಗ್ಗೂ ಇಲ್ಲದೆ ದೂಡಿ ಬೀಳಿಸಿ ಮುಂದುವರಿಯುತ್ತಿದೆ! (ಕಳಲೆ (ಕಣಿಲೆ)ಯ ವಿಷಯವೂ ಹೀಗೆಯೇ. ನನಗೆ ತಿಳಿದ ಮಟ್ಟಿಗೆ ಕಳಲೆ/ಬಿದಿರು ಕಡಿಯುವುದು ದೊಡ್ಡ ಅಪರಾಧ. ಬಿದಿರು ಕಡಿದರೆಂಬ ಕಾರಣಕ್ಕೆ ಜೈಲಿಗೆ ಹೋದವರನ್ನೂ ನಾನು ಕಂಡಿದ್ದೇನೆ. ಆದರೆ ನಮ್ಮ ಬಿ.ಸಿ.ರೋಡಿನಲ್ಲಿ ನೋಡಿದರೆ ಜೂನ್ ಜುಲೈ ತಿಂಗಳುಗಳಲ್ಲಿ ಕಳಲೆಯನ್ನು ಹಾಡು ಹಗಲೇ ಅಂಗಡಿಗಳಲ್ಲಿ ಮಾರುತ್ತಿರುತ್ತಾರೆ!) ಬಹುಶಃ ಹೀಗಿರಬೇಕು: ಕಾನೂನು ಮರಗಳನ್ನು "ಕಡಿಯುವುದನ್ನು" ನಿಷೇಧಿಸುತ್ತದೆ ಆದರೆ ಜೆಸಿಬಿ ಮರಗಳನ್ನು ಬುಡ ಸಮೇತ ಉರುಳಿಸುವುದು ತಾನೆ, ಹಾಗಾಗಿ ಕಾನೂನು ಅದಕ್ಕೆ ಅನ್ವಯವಾಗುವುದಿಲ್ಲ.
ನನ್ನ ಮಿತಿಯಲ್ಲೇ ಆದರೂ, ಏನು ಮದ್ದು ಮಾಡುವುದು ಇದಕ್ಕೆ? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಸಾಮಾನ್ಯವಾಗಿ ಹೀಗೆ ಗುಡ್ಡ ಮಟ್ಟ ಮಾಡಿಸುವವರು ಖಾಸಗಿಯವರು. ಅಲ್ಲಿ ಮಧ್ಯೆ ಮೂಗು ತೂರಿಸುವಂತಿಲ್ಲ. ಯಾಕೆಂದರೆ ಇವರ ಪೈಕಿ ಒಬ್ಬ ನನ್ನ ಅಜ್ಜ, ಮತ್ತೊಬ್ಬ ವಿದ್ಯಾಗುರು, ಇನ್ನೊಬ್ಬ ಸೋದರಮಾವ, ಮತ್ತೊಬ್ಬ ಭಾವ. ನನ್ನ ಉದ್ದೇಶ ಎಷ್ಟೇ ಉದಾತ್ತವಾದರೂ, ಹೋರಾಟಕ್ಕಿಳಿಯುವುದು ವ್ಯಾವಹಾರಿಕ ಅಲ್ಲ.
ಓ ಮೊನ್ನೆಯೊಂದು ದಿನ ನೋಡುತ್ತೇನೆ, ಉದಯವಾಣಿಯ ಪುರವಣಿಯೊಂದರಲ್ಲಿ ಸುಬ್ರಮಣ್ಯದಲ್ಲಿ ಜ್ಯೋತಿಷ ಸಮ್ಮೇಳನ ನಡೆಯಲಿದೆಯೆಂದೂ ಅದಕ್ಕಾಗಿ ಆರು ಎಕ್ರೆ ವಿಸ್ತಾರದ ಗುಡ್ಡೆಯನ್ನು ಸಪಾಟು ಮಾಡುವ ಕೆಲಸವನ್ನು ಅದೆಷ್ಟೋ ಸಂಖ್ಯೆಯ ಜೆಸಿಬಿಗಳು ಹಗಲಿರುಳೂ ಮಾಡುತ್ತಿವೆಯೆಂದೂ ವರದಿಯಾಗಿತ್ತು. ಈ ವರದಿಯ ಜೊತೆಗೆ ಜೆಸಿಬಿಯೊಂದು ತನ್ನ ಸೊಂಡಿಲಿನಿಂದ ಮರಗಳನ್ನು ದೂಡಿ ನೆಲಕ್ಕುರುಳಿಸುತ್ತಿರುವ ಫೋಟೋ ಮತ್ತು ಇತರ ಫೋಟೋಗಳೂ ಇದ್ದವು.
ಕೂಡಲೇ ಸುಬ್ರಮಣ್ಯದ ಅರಣ್ಯ ವಲಯಾಧಿಕಾರಿಗಳಿಗೆ -ಮಾಹಿತಿ ಹಕ್ಕಿನ ಆಡಿಯಲ್ಲಿ- ಪತ್ರಿಕೆಯಲ್ಲಿ ಪ್ರಕಟವಾದ ಫೋಟೋಗಳ ಜೆರಾಕ್ಸ್ ಪ್ರತಿಗಳನ್ನೂ ಇಟ್ಟು, "ದೊಡ್ಡ ಸಂಖ್ಯೆಯಲ್ಲಿ ಮರಗಳು ನಾಶವಾದಂತೆ ಕಾಣುತ್ತಿದೆ. ಈ ಬಗ್ಗೆ ನೀವು ಅನುಮತಿ ಕೊಟ್ಟಿದ್ದೀರಾ, ಕೊಟ್ಟಿದ್ದರೆ ಅದರ ಒಂದು ಪ್ರತಿಯನ್ನು ಕಳಿಸಿಕೊಡಿ" ಎಂದು ಬರೆದೆ. ಅಧಿಕಾರಿ ಕೂಡಲೇ, ನಾನು ಕಳಿಸಿದ್ದ ಪೋಸ್ಟಲ್ ಆರ್ಡರನ್ನು ಹಿಂದೆ ಕಳಿಸಿ, ಉತ್ತರಿಸಿದರು: "ನೀವು ಈ ಮಾಹಿತಿಯನ್ನು ಸುಳ್ಯದಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು". ನಾನು ಮರು ಟಪಾಲು ಪುನಃ ನೋಂದಾಯಿತ ಅಂಚೆಯಲ್ಲಿಯೇ ಕಳಿಸಿ ಕಾನೂನು ಏನಿದೆಯೆಂದು ತಿಳಿಸಿದೆ. ಆ ಅಧಿಕಾರಿ ನೊಂದಾಯಿತ ಅಂಚೆಯಲ್ಲಿ ನಾನು ಕಳಿಸಿದ ಪತ್ರವನ್ನು ಸ್ವೀಕರಿಸಿದೆ ತಿರಸ್ಕರಿಸಿಬಿಟ್ಟರು!
ನಾನು ಕೂಡಲೇ ಎಲ್ಲಾ ದಾಖಲೆಗಳನ್ನೂ ಇಟ್ಟು, ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಈ ದೂರಿನಲ್ಲಿ, ನನಗೆ ಖರ್ಚಾಗಿರುವ ಹಣವನ್ನು ಸದ್ರಿ ಅಧಿಕಾರಿಯಿಂದ ಕೊಡಿಸಿಕೊಡಬೇಕೆಂದು ಮನವಿ ಮಾಡಿದ್ದೇನೆ. ಜೊತೆಗೆ ಕಾನೂನನ್ನು ಕಲಿಸಿಕೊಟ್ಟಿರುವುದಕ್ಕಾಗಿ ನನಗೆ ಸೂಕ್ತ ಶುಲ್ಕವನ್ನೂ ಈ ಅಧಿಕಾರಿಯಿಂದ ಕೊಡಿಸಬೇಕೆಂದು ಕೇಳಿಕೊಂಡಿದ್ದೇನೆ. ನೋಡೋಣ ಪ್ರಕರಣ ಏನಾಗುತ್ತದೆ ಎಂದು.
ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿದ ನನ್ನ ಅಹವಾಲು ಮತ್ತು ದಾಖಲೆಗಳ ಯಥಾಪ್ರತಿಗಳನ್ನು ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಗೆ ಸಾಮಾನ್ಯ ಅಂಚೆಯಲ್ಲಿ ಕಳಿಸಿಕೊಟ್ಟಿದ್ದೆ. ಕೂಡಲೇ ಪ್ರತಿಕ್ರಿಯೆ ಬಂದಿದೆ: ಮಾಹಿತಿ ಕೇಳಿ ನಾನು ಸಲ್ಲಿಸಿದ ಅರ್ಜಿಯನ್ನು ಅವರೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕಳಿಸಿಕೊಟ್ಟಿದ್ದಾರಂತೆ. ಪೋಸ್ಟಲ್ ಆರ್ಡರ್ ಗೆ ಏನು ವ್ಯವಸ್ಥೆ ಮಾಡಿದರೋ ತಿಳಿಯಲಿಲ್ಲ.
ಅರಣ್ಯ ಇಲಾಖೆ ಮರಗಳನ್ನು ಉರುಳಿಸಲು ಅನುಮತಿ ಕೊಟ್ಟಿದೆಯೆ ಎಂಬುದು ಈ ಪ್ರಕರಣದ ಜೀವಾಳವಷ್ಟೆ. ಹಾಗಾಗಿ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ಪತ್ರ ಅವರಿಗೆ ಮುಟ್ಟಿದೆ. ಉತ್ತರ ಬಂದ ಕೂಡಲೇ ತಿಳಿಸುತ್ತೇನೆ.

ಅಶೋಕವರ್ಧನರ ಪ್ರತಿಕ್ರಿಯೆ:

ನಿಮ್ಮ ಹಿತ್ತಿಲ ಮದ್ದನ್ನು ಮುದ್ದಾಗಿ ತೋರುತ್ತಾ ಸುಬ್ರಹ್ಮಣ್ಯದಲ್ಲಿ ಜೋಯಿಸರುಗಳು ಪರಿಸರ ಭವಿಷ್ಯವನ್ನು ಹಾಳುಗೆಡಹುವ ಸಮಸ್ಯೆಯ ಸುಳಿಯೊಳಗೆ ಓದುಗರನ್ನು ಅನೌಪಚಾರಿಕವಾಗಿಯೇ ಆದರೆ ಖಚಿತವಾಗಿ ಸಿಕ್ಕಿಸಿದ್ದೀರಿ. ರಾಕ್ಷಸ ಸಾಮರ್ಥ್ಯಕ್ಕೂ ರಕ್ಕಸ ಕ್ರಿಯೆಗೂ ಮಧ್ಯೆ ಕಳೆದುಹೋದ ವಿವೇಚನೆಯನ್ನು ಭೂತಗನ್ನಡಿ ಇಟ್ಟು ತೋರಿದ್ದೀರಿ. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದ ಅನಾಮಧೇಯ ದೂರವಾಣಿ ಕರೆಯೊಂದು ಇದೇ ಸಮಸ್ಯೆಯ ಕುರಿತು ನನ್ನಲ್ಲಿನ ಪರಿಸರ ಪ್ರೇಮಿಯನ್ನು ಕ್ರಿಯಾಶೀಲವಾಗಿಸಲು ಪ್ರಯತ್ನಿಸಿತ್ತು. ನನಗಾ ಸ್ಥಳೀಯ ಬೇಜವಾಬ್ದಾರೀ ಶ್ರೀಸಾಮಾನ್ಯನ ಮಟ್ಟದಲ್ಲಿ ನಿಂತದ್ದಕ್ಕೆ ಅಸಮಾಧಾನವಿತ್ತು, ಊರಿನೆಲ್ಲಾ ದುಃಖಕ್ಕೆ ಪರಿಹಾರ ಹುಡುಕುವ ತಾಕತ್ತಿನವ ನಾನಲ್ಲ ಎನ್ನುವ ಬಗ್ಗೆ ಅರಿವೂ ಬೇಸರವೂ ಇತ್ತು. ನಿಮ್ಮ ಬರಹಕ್ಕೆ ಭೇಷ್, ಭಲೇ ಎನ್ನುವುದರೊಡನೆ ನಿಮ್ಮ ಕ್ರಿಯೆಯ ಭವಿಷ್ಯವೇನು ಎಂಬ ಕುತೂಹಲದಲ್ಲಿರುತ್ತೇನೆ.ಅಶೋಕವರ್ಧನ

ಶನಿವಾರ, ಮಾರ್ಚ್ 6, 2010

ಕಸ ವಿಲೇವಾರಿಯ ಕಗ್ಗಂಟು

"ಆಧುನಿಕ"ವೆಂದು ಕರೆಸಿಕೊಳ್ಳುವ ಯಾವುದೇ ದೊಡ್ಡ ಊರಿಗೆ ನೀವು ಹೋಗಿ, ಇಡೀ ಊರಿನ ಗಾಳಿಯಲ್ಲಿ ಒಂದು ವಿಶಿಷ್ಟ ದುರ್ನಾತ ಹಾಸುಹೊಕ್ಕಾಗಿ ತುಂಬಿ ತುಳುಕುತ್ತಿರುತ್ತದೆ. ಈ ದುರ್ನಾತದ ಕಾಯಿಲೆ ಇತ್ತೀಚೆಗೆ ನಮ್ಮ ಬಿ.ಸಿ.ರೋಡಿನಂಥ ಸಣ್ಣ ಊರುಗಳಿಗೂ ಹಬ್ಬುತ್ತಿದೆ. ಮೊನ್ನೆ ಮೊನ್ನೆ ತಮಿಳುನಾಡಿನ ತಿರುಚ್ಚಿಗೆ ಹೋಗುವ ಪ್ರಸಂಗ ಬಂದಿತ್ತು. ಊರು ಶುರುವಾದಕೂಡಲೇ, ಇಡೀ ಊರಿನ ಎಲ್ಲರ ಮನೆಗಳಲ್ಲೂ ಏಕಕಾಲದಲ್ಲಿ ಮೂಲಂಗಿ ಹುಳಿ ಮಾಡುತ್ತಿದ್ದಾರೇನೋ ಎಂಬಂಥ ಉಸಿರು ಕಟ್ಟಿಸುವ ದುರ್ನಾತ. ಆದರೆ ಆ ಊರೊಳಗಿನ ಯಾರಿಗೂ ಈ ನಾತದ ಅರಿವೇ ಇದ್ದಂತೆ ಕಾಣಲಿಲ್ಲ! ಕಾಲೇಜುಗಳ ಕೆಮಿಸ್ಟ್ರಿ ಲ್ಯಾಬಿನಲ್ಲಿ ದಿನನಿತ್ಯ ಹೈಡ್ರೋಜನ್ ಸಲ್ಫೈಡಿನ ಹೊಲಸು ವಾಸನೆ ತಿಂದೂ ತಿಂದೂ, ಮೂಗು ಆ ವಾಸನೆಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿಬಿಟ್ಟಿರುತ್ತದೆ ಅದರೊಳಗೆ ಇರುವವರಿಗೆ. ಬಹುಶಃ ಇದೂ ಹಾಗೆಯೇ ಇರಬೇಕು. ಅಥವಾ ಆ ರೀತಿಯ ವಾಸನೆ ಇಲ್ಲದೆ ಹೋದರೆ ಅದು ತಮ್ಮ ಊರೇ ಅಲ್ಲ ಅನ್ನಿಸಿಬಿಡಬಹುದು ಅದು ಅಭ್ಯಾಸವಾದವರಿಗೆ.
ನಮ್ಮ ಬಿ.ಸಿ.ರೋಡಿನ ಕೈಕಂಬವು ದುರ್ನಾತದ ಕೇಂದ್ರವಾಗಿದೆ ಎಂದೂ, ಅದಕ್ಕೆ ಏನಾದರೂ ಮಾಡಬೇಕೆಂದೂ ನನ್ನ ಹೈಕಮಾಂಡ್ ರಮಾದೇವಿ. ಪುರಾತನ ಕಾಲದಿಂದಲೂ ನನಗೆ ಹೇಳುತ್ತಲೇ ಇದ್ದಳು. "ಏನಾದರೂ ಮಾಡಬೇಕು" ಎಂದರೆ ನಾನು ಮುನಿಸಿಪಾಲಿಟಿಗೆ ದೂರು ಕೊಡಬೇಕು ಎಂಬುದು ಅವಳ ಪರೋಕ್ಷ ಸೂಚನೆ. ನಾನು ಮಾತ್ರ,
"ನನಗೆ ಯಾವಾಗಲೂ ಶೀತ ಜಾಸ್ತಿ. ಹಾಗಾಗಿ ವಾಸನೆ ಬರುವುದು ಕಡಿಮೆ" ಎನ್ನುತ್ತಾ ಕಾಲಹರಣ ಮಾಡುತ್ತಲೇ ಇದ್ದೆ.
"ಮೂಗಿಗೆ ಶೀತ ಆದರೇನು? ಕೊಳಕಿನ ರಾಶಿ ಕಣ್ಣಿಗೆ ಕಾಣುವುದಿಲ್ಲವೇ?"
"ನಾನು ಸ್ಕೂಟರ್ ರೈಡ್ ಮಾಡುವಾಗ ಹಾಗೆಲ್ಲ ಆಚೆ ಈಚೆ ನೋಡುವುದಿಲ್ಲ, ರಸ್ತೆ ಮಾತ್ರ ನೋಡುವುದು!"
ಇತ್ತೀಚೆಗೆ ಒಂದು ದಿನ ಅವಳಿಗೆ, ವಾಕಿಂಗ್ ಹೋದಲ್ಲಿ, ಅದೇ ಕೈಕಂಬದಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಡಾ. ಪ್ರತಿಭಾ ರೈ ಸಿಕ್ಕಿದ್ದರಂತೆ. ಈ ದುರ್ನಾತದ ಬಗ್ಗೆ ಅವರೂ ಸಾರ್ವಜನಿಕರ ಸಹಿ ಸಂಗ್ರಹಿಸಿ ಪುರಸಭೆಗೆ ದೂರು ಕೊಟ್ಟು ಹತಾಶರಾಗಿದ್ದರು. ಅವರ ಹತ್ತಿರವೂ ಈ ಬಗ್ಗೆ ವಿಚಾರ ವಿನಿಮಯವಾಯಿತು.
ಅಂತೂ ಯಾವುದೋ ಒಂದು ಸುಮುಹೂರ್ತದಲ್ಲಿ ನನ್ನ ಹೆಂಡತಿ ಒಂದು ದೂರನ್ನು ಕಂಪ್ಯೂಟರಿನಲ್ಲಿ ಟೈಪಿಸಿಯೇ ಬಿಟ್ಟಳು. ಅದಕ್ಕೆ ವಿಳಾಸ ಬರೆದು ಪೋಸ್ಟಿಸುವ ಕೆಲಸವನ್ನು ಯಥಾಪ್ರಕಾರ ನನಗೆ ಅಂಟಿಸಿದಳು. "ಆಗಲಿ ಒಂದು ಹೆಜ್ಜೆಯಾದರೂ ಮುಂದೆ ಹೋಯಿತಲ್ಲ" ಎನ್ನುವ ಸಮಾಧಾನದಿಂದ ನಾನು ಕಾಗದವನ್ನು ಪೋಸ್ಟಿಗೆ ಹಾಕಿದೆ. ಕಾಗದ ಹೋಗಿ ಇಪ್ಪತ್ತು ದಿನವಾದರೂ ಉತ್ತರ ಬರಲಿಲ್ಲ. ವಾಸನೆಯೂ ಕಡಿಮೆಯಾಗಲಿಲ್ಲ.
"ಈಗೇನು ಮಾಡುವುದು?" ಉತ್ತರ ಗೊತ್ತಿದ್ದ ಪ್ರಶ್ನೆ ಬಂತು.
"ಇನ್ನೊಂದು ಪತ್ರ ಬರಿ". ಎರಡನೆಯ ಪತ್ರ ಹೋಯಿತು. ಆ ಪತ್ರಕ್ಕೂ ಅದೇ ಗತಿ! ಪುನಃ ಪ್ರಶ್ನೆ:
"ಈಗೇನು ಮಾಡುವುದು?"
"ಇನ್ನೂ ಒಂದು ಪತ್ರ ಬರಿ". ಮತ್ತೊಂದು ಪತ್ರ ಹೋಯಿತು. ಉತ್ತರದ ಸುದ್ದಿ ಇಲ್ಲ.
"ಈಗೇನು ಮಾಡುವುದು?"
"ಮೂರಕ್ಕೆ ಮುಕ್ತಾಯ. ಈವರೆಗೆ ಬರೆದ ಎಲ್ಲಾ ಪತ್ರಗಳ ಕಾಪಿ ಇಟ್ಟು ಡಿಸಿಗೆ ದೂರು ಕೊಡು. ಹಾಗೆ ದೂರು ಕೊಟ್ಟದ್ದನ್ನು ಪುರಸಭೆಗೆ ತಿಳಿಸು"
ಅದೂ ಆಯಿತು. ಪತ್ರ ಹೋಗಿ ಒಂದೇ ವಾರದಲ್ಲಿ ರಿಜಿಸ್ಟರ್ ಅಂಚೆಯಲ್ಲಿ ಬಂಟ್ವಾಳ ಪುರಸಭೆಯ ಉತ್ತರ ಬಂತು: ಈ ಉತ್ತರ ಆಧುನಿಕ ಭಾರತದ ಕಸವಿಲೇವಾರಿಯ ಕಗ್ಗಂಟನ್ನು ಅತ್ಯಂತ ಸೊಗಸಾಗಿ ಮುಂದಿಟ್ಟಿದೆ ಎಂದು ನನಗನಿಸುತ್ತದೆ. ನೀವೂ ಒಂದು ಸಲ ಅದನ್ನು ಓದಿ ನೋಡಿ:
"ಉಲ್ಲೇಖದಲ್ಲಿ ನಮೂದಿಸಿದ ಪತ್ರದ ಪ್ರಕಾರ ಬಿ. ಮೂಡ ಗ್ರಾಮದ ಕೈಕಂಬ ಪೊಳಲಿ ಕ್ರಾಸ್ ಬಸ್ ನಿಲ್ದಾಣದ ಬಳಿ ಕಸ ಸಂಗ್ರಹಿಸುವ ತೊಟ್ಟಿ ಇರುತ್ತದೆ. ಸದ್ರಿ ತೊಟ್ಟಿಗೆ ಸತ್ತ ಬೆಕ್ಕು ಅಪರೂಪಕ್ಕೆ ಸಾರ್ವಜನಿಕರು ಹಾಕುತ್ತಾರೆ. ಅಲ್ಲದೇ ಹಸಿ ಕೋಳಿಯ ತ್ಯಾಜ್ಯ ವಸ್ತುವನ್ನು ಸಹಾ ಹಾಕುತ್ತಿದ್ದು, ತೊಟ್ಟಿಯಿಂದ ಕಸವನ್ನು ಮತ್ತು ತ್ಯಾಜ್ಯವನ್ನು ವಿಲೇ ಮಾಡಲಾಗುತ್ತಿದೆ. ಫೆಬ್ರವರಿ ತಿಂಗಳಿಂದ ಡೋರ್ ಟು ಡೋರ್ ಕಸ ಸಂಗ್ರಹಿಸಲು ಆರಂಭಿಸಿದ್ದು, ಆರಂಭಿಕ ಹಂತದಲ್ಲಿದ್ದು ಜನರಿಗೆ ಮನವರಿಕೆ ಮಾಡಲಾಗಿದೆ. ಈ ಕಾರ್ಯ ಯಶಸ್ವಿಯಾದಲ್ಲಿ ತಕ್ಷಣ ಶೀಘ್ರದಲ್ಲಿ ಅಲ್ಲಿಯ ತೊಟ್ಟಿಯನ್ನು ತೆಗೆದು ಹಾಕಲಾಗುವುದು.
ಘನತ್ಯಾಜ್ಯ ವಸ್ತು ವಿಲೇವಾರಿಗಾಗಿ ಪುರಸಭೆಗೆ ನಿವೇಶನವನ್ನು ಸಜಿಪನಡು ಗ್ರಾಮದಲ್ಲಿ ಗುರುತಿಸಿ, ಸಂಬಂಧಪಟ್ಟ ಇಲಾಖೆಯವರಿಂದ ಎನ್.ಓ.ಸಿ. ಪಡೆದು ಸ್ವಾಧೀನಪಡಿಸಲಾಗಿದೆ. ಸದ್ರಿ ನಿವೇಶನಕ್ಕೆ ಆವರಣ ಗೋಡೆ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳ ತಕರಾರು ಇಲ್ಲದಿದ್ದಲ್ಲಿ ಆ ನಿವೇಶನದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಮಾಡಲಾಗುವುದು. ಈ ಹಿಂದೆ ಬಿ. ಮೂಡ ಗ್ರಾಮದಲ್ಲಿ ಗುರುತಿಸಿದ ಸ್ಥಳದಲ್ಲಿ ಕಸ ವಿಲೇ ಮಾಡಲು ಸಾರ್ವಜನಿಕರು ಅಡ್ಡಿಪಡಿಸಿರುತ್ತಾರೆ. ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ. ಘನತ್ಯಾಜ್ಯ ವಸ್ತುವಿಲೇವಾರಿ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗಿದೆ. ಘನತ್ಯಾಜ್ಯ ವಸ್ತು ಸುಡುವುದರಿಂದ ಬಿಸಾಡುವುದರಿಂದ ಆಗುವ ತೊಂದರೆ ಬಗ್ಗೆ ಸಹಾ ತಿಳುವಳಿಕೆ ನೀಡಲಾಗಿದೆ. ಈ ಬಗ್ಗೆ ತಮ್ಮ ವತಿಯಿಂದ ಸಹಾ ಜನರಿಗೆ ಅರಿವು ಮೂಡಿಸಿದಲ್ಲಿ ಪುರಸಭೆಗೆ ತುಂಬಾ ಸಹಾಯವಾಗುತ್ತದೆ. ಪುರಸಭೆ ನಿರ್ಮಲ ಪರಿಸರದ ಬಗ್ಗೆ ಕಾಳಜಿ ಹೊಂದಿದೆ ಎಂದು ಈ ಮೂಲಕ ತಿಳಿಸಲಾಗಿದೆ"
ಈ ಪತ್ರ ಎತ್ತಿರುವ ಬಹು ಮುಖ್ಯ ಸಮಸ್ಯೆ ತ್ಯಾಜ್ಯದ ವಿಲೇವಾರಿಗಾಗಿ ಸ್ಥಳ ಹುಡುಕಿಕೊಳ್ಳುವುದು. ನಮ್ಮ ಮನೆಯ ಎದುರಿಗೆ ಪುರಸಭೆ ಒಂದು ಕಸದ ತೊಟ್ಟಿ ತಂದಿಟ್ಟರೆ ನಾವು ತಕರಾರು ಮಾಡದೆ ಇರುತ್ತೇವೆಯೇ? ಮಾಡದೆ ಇರಲು ಸಾಧ್ಯವೆ? ನಮ್ಮ ಮನೆಗೆ ಸಮೀಪದ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಿದರೆ ನಾವು ಸುಮ್ಮನಿರುತ್ತೇವೆಯೇ? ನಾವೆಲ್ಲ ಕಸವನ್ನು ಎಷ್ಟು ಬೇಕಾದರೂ ಉತ್ಪತ್ತಿ ಮಾಡಿ ರಾಶಿ ಹಾಕುತ್ತೇವೆ. (ಅತ್ರಿ ಬುಕ್ ಸೆಂಟರ್ ಬಿಟ್ಟರೆ) ಎಲ್ಲಾ ಅಂಗಡಿಯವರೂ ಪೈಪೋಟಿಯಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸಾಮಾನು ತುಂಬಿಸಿಕೊಡುತ್ತಾರೆ. ಈ ತೊಟ್ಟೆಗಳು ತಮ್ಮ ಕೆಲಸ ಮುಗಿದ ಕೂಡಲೇ ಊರು ತುಂಬ ಹಾರಾಡತೊಡಗುತ್ತವೆ ಹೀಗೆ ಇಡೀ ನಮ್ಮ ಭಾರತ ದೇಶವನ್ನು ಒಂದು ಪ್ಲಾಸ್ಟಿಕ್ ತಿಪ್ಪೆ ಮಾಡಿಟ್ಟುಕೊಂಡಿದ್ದೇವೆ ನಾವು. ಈ ಸಮಸ್ಯೆಯನ್ನು ಪರಿಹಾರ ಮಾಡುವವರು ಯಾರು? ಹೇಗೆ?
ಬಿ.ಮೂಡ ಗ್ರಾಮದಲ್ಲಿ ಬಂಟ್ವಾಳ ಪುರಸಭೆ ತ್ಯಾಜ್ಯವಿಲೇವಾರಿ ಘಟಕಕ್ಕಾಗಿ ಸ್ಥಳದ ವ್ಯವಸ್ಥೆಗೆ ಮುಂದಾದಾಗ ಸಹಜವಾಗಿ ಸ್ಥಳೀಯ ನಾಗರಿಕರು ವಿರೋಧಿಸಿದರು. ಆಗ ಕೆಲವರು ಬಳಕೆದಾರರ ವೇದಿಕೆಯನ್ನೂ ಸಂಪರ್ಕಿಸಿದ್ದರು. ವೇದಿಕೆಯ ನಾವು ಶಾನುಭಾಗರ ಹತ್ತಿರ ಸಲಹೆ ಕೇಳಿದೆವು. ಶಾನುಭಾಗರು "ನಾವು ಯಾರನ್ನೂ ಬೆಂಬಲಿಸುವುದು ಸಾಧ್ಯವಿಲ್ಲ. ತಜ್ಞರಿಗೆ ಸಮಸ್ಯೆಯನ್ನು ಬಿಡುವುದೇ ಇದಕ್ಕೆ ಪರಿಹಾರ" ಎಂದಿದ್ದರು.
ಸಮಸ್ಯೆ ಹೀಗೆ ಬಿಡಿಸಲಾಗದ ಕಗ್ಗಂಟಾಗಿರುವುದನ್ನು ಈ ಅಧಿಕಾರಿ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಯಾವುದೇ ಮುಲಾಜಿಲ್ಲದೆ "ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ" ಎಂದಿದ್ದಾರೆ. ಈಗ ಬಂಟ್ವಾಳದ ನಾಗರಿಕರ ಮುಂದೆ ಎರಡು ದಾರಿಗಳಿವೆ: ಒಂದೋ ಅವರು ತಮಗೂ ಹಂದಿಗಳಿಗೂ ವ್ಯತ್ಯಾಸವೇ ಇಲ್ಲದಂತೆ ಕಸದ ರಾಶಿಯ ನಡುವೆ, ಸತ್ತ ಬೆಕ್ಕು, ಹಸಿ ಕೋಳಿಯ ತ್ಯಾಜ್ಯದ ವಾಸನೆ ಇವುಗಳನ್ನು ಸಹಿಸಿಕೊಳ್ಳುತ್ತಾ ಬದುಕಬೇಕು; ಅಥವಾ ಕಾನೂನುಬಾಹಿರವಾಗಿ ಕಸ ಸಾಗಿಸುವುದನ್ನು ಒಪ್ಪಿಕೊಳ್ಳಬೇಕು. ಕಸ ಸಾಗಿಸುವ ಕಾನೂನುಬಾಹಿರ ಕಾರ್ಯವನ್ನು ಒಪ್ಪಿಕೊಂಡರೆ, ನಾಳೆ ಇದೇ ಅಧಿಕಾರಿ "ಲಂಚ ಕೊಡದೆ ಪುರಸಭೆಯಲ್ಲಿ ಕೆಲಸ ಮಾಡಿಕೊಡುವುದು ಸಾಧ್ಯವೇ ಇಲ್ಲ" ಎಂಬ ವಾದವನ್ನೂ ಇಷ್ಟೇ ತರ್ಕಬದ್ಧವಾಗಿ ನಿಮ್ಮೆದುರಿಗೆ ಮಂಡಿಸಿ, ಅದಕ್ಕೆ ಕಸ ಸಾಗಿಸುವ ಕಾನೂನುಬಾಹಿರ ಕಾರ್ಯದ ಉದಾಹರಣೆಯ ಬೆಂಬಲ ಕೊಟ್ಟು, ನ್ಯಾಯದ ಮಾತಾಡುವ ನಿಮ್ಮನ್ನು ಹಾಸ್ಯಾಸ್ಪದ ಮಾಡಿಬಿಡಬಹುದು. ಯಾವುದನ್ನು ಒಪ್ಪುವುದು? ಯಾವುದನ್ನು ಬಿಡುವುದು?
ನಾವಂತೂ ಜಿಲ್ಲಾಧಿಕಾರಿಗಳಿಗೆ ಬರೆದು ಈ ಸಮಸ್ಯೆಗೆ ಕಾನೂನಿನ ಮಿತಿಯಲ್ಲೇ ಒಂದು ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಲಿದ್ದೇವೆ. ಆದರೆ ಎಲ್ಲಾ ಊರುಗಳಲ್ಲೂ "ಕಸವನ್ನು ಹಾಕಲು ಜಾಗ ಎಲ್ಲಿ?" ಎಂಬ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಾ ಹೋಗುವುದು ಖಂಡಿತ.
ಕಸದ ತೊಟ್ಟಿಗೆ ಏನು ಹಾಕಬಹುದು, ಏನು ಹಾಕಬಾರದು ಎಂಬ ವಿವೇಚನೆಯೇ ಇಲ್ಲದೆ, ತಮಗೆ ಬೇಡದ್ದನ್ನೆಲ್ಲ ತಂದು ಹಾಕುವ ನಾಗರಿಕರ ಸಮಸ್ಯೆಯನ್ನೂ ಈ ಅಧಿಕಾರಿ ಪ್ರಸ್ತಾಪಿಸಿದ್ದಾರೆ. ಶಿಕ್ಷಣ ಹೆಚ್ಚಾದಂತೆ ಈ ಸಮಸ್ಯೆ ಕಡಿಮೆ ಆದೀತೆಂದು ಆಶಿಸಬಹುದು ಅಷ್ಟೇ.